Total Pageviews
Monday 25 May 2020
ಭೃಂಗದ ಬೆನ್ನೇರಿ...
ಭೃಂಗದ ಬೆನ್ನೇರಿ...
ಒಂದು ಶುಭೋದಯದಲ್ಲಿ ಮನೆಯಂಗಳದಲ್ಲಿ ಬೆಳೆದು ನಿಂತ ಬೇವು, ಮಾವು, ಬದಾಮಿ, ಕಣಗಿಲೆ, ಜಾಜಿ, ಮಲ್ಲಿಗೆ, ಹಲಸಿನ ಸಸಿಗಳೊಂದಿಗೆ ಕುಶಲೋಪರಿಗಿಳಿದು ಮಾತನಾಡುತ್ತಿದ್ದೆ. ಬೇಸಿಗೆಯಾದ್ದರಿಂದ ಹಿಂದಿನ ದಿನವೆಲ್ಲಾ ನೆತ್ತಿ ಸುಡುವ ಉರಿಬಿಸಿಲಿನಲ್ಲಿ ತಲೆಯಾದಿಯಾಗಿ ಅಂಗಾಂಗಳನ್ನೆಲ್ಲಾ ಕಾಯಿಸಿಕೊಂಡು ಸುಸ್ತಾದಂತಿದ್ದ ಸಸ್ಯಗಳ ಕೈಹಿಡಿದು ಸವರಿ, ಸಂತೈಸುತ್ತಾ, ರಾತ್ರಿಯೆಲ್ಲಾ ತಂಗಾಳಿಯಲ್ಲಿ ನೆನೆದು ತಂಪಾದ ಬೆಳದಿಂಗಳ ಅನುಭವಗಳನ್ನು ಹೆಕ್ಕಿ ತೆಗೆದು ತರುಲತೆಗಳ ಮನಸ್ಸನ್ನು ಮುದಗೊಳಿಸಬೇಕೆನ್ನಿಸಿ, ಒಂದೊಂದರ ಹತ್ತಿರವೂ ನಿಂತು, ರಂಬೆ, ಕೊಂಬೆ, ಎಲೆ, ಚಿಗುರು, ಹೂಗಳ ಮೈದಡವಿ ನೇವರಿಸುತ್ತಾ, ತಣಿರಸದಂತಿದ್ದ ತಂಪು ನೀರನ್ನೆರೆದು ಸಲ್ಲಾಪಕ್ಕಿಳಿದೆ. ಸಾವರಿಸಿಕೊಂಡು ಬಾಗಿ ಅಪ್ಪಿಕೊಳ್ಳುತ್ತಿರುವಂತೆ, ಬೀಸುತ್ತಿರುವ ಮರುಳ ಸುಳಿಗಾಳಿಗೆ ತಮ್ಮ ಅಂಗಾಂಗಳನ್ನೆಲ್ಲಾ ಮುಂದೆ ಚಾಚಿ ಧನ್ಯವಾದಗಳನ್ನು ಹೇಳುತ್ತಿರುವಂತೆ ಭಾಸವಾಗಿ, ಧನ್ಯತೆಯಿಂದ ಕಣ್ತುಂಬಿಕೊಂಡೆ. ಇಬ್ಬನಿಯಿಲ್ಲದೇ ಶುಷ್ಕವಾದಂತಿದ್ದ ವಾತಾವರಣಕ್ಕೀಗ, ಕರುಳಕುಡಿಯಂತಿದ್ದ ಸಸ್ಯಗಳ ಈ ಪ್ರೀತಿಯ ರೀತಿ ಕಂಡಾಗ, ಗೊತ್ತಿಲ್ಲದೇ ನನ್ನೊಳಗೆ ಹುಟ್ಟಿದ ಆನಂದಭಾಷ್ಪಗಳು ಸೇರಿಕೊಂಡು ಸನ್ನಿವೇಶವನ್ನು ಆರ್ದ್ರವಾಗಿಸಿತು. ಕ್ಷಣ ಹೊತ್ತು ಭಾವುಕನಾದೆ. ಆ ಬಗೆ ಬಗೆಯ ಫಲ-ಪುಷ್ಪ ಸಸಿಗಳ ಬೇರಿಗೆರೆದ ಜಲಾಮೃತ ನಿಧಾನವಾಗಿ ಇಂಗಿ ಹೋಗುವಂತೆ, ಕ್ರಮೇಣ ಕಣ್ಣಹನಿಗಳೂ ಎದೆಯೊಳಗಿಳಿದು ಹಾಗೇ ಬತ್ತಿಹೋದವು. ಮತ್ತೆ ಶುಭೋದಯದ ಅಂಗಣಕ್ಕಿಳಿದೆ. ನೇಸರನ ಕಿರಣಗಳ ರಂಗೋಲಿ, ಅಂಗಳದಲ್ಲಿನ ಸಸ್ಯಸಂಕುಲ, ಕುಸುಮಗಳ ಸುತ್ತವೇ ನೆರೆದು ಮಧುವನ್ನರಸಿ ಹೊರಟ ದುಂಬಿಗಳ ಬಳಗ, ರಂಗುರಂಗಿನ ಚಾಮರದಂತಿದ್ದ ಚಿಟ್ಟೆಯ ರೆಕ್ಕೆಗಳ ಬೀಸುವಿಕೆ, ಗಿಳಿ, ಕೋಗಿಲೆ, ಗುಬ್ಬಿಗಳ ಉದಯಗಾನ, ಹೀಗೆ ಎಲ್ಲವೂ, ಎಲ್ಲರನ್ನೂ ಆಮಂತ್ರಿಸಿ, ಕರೆದು ಮೇಳೈಸಿದಂತಿತ್ತು ಆ ಶುಭೋದಯದ ದಿಬ್ಬಣಕ್ಕೆ. ಬಹುಶಃ ನಾವೆಲ್ಲರೂ ಆಚರಿಸುವ ಯೋಜಿತ ಹಬ್ಬ, ಉತ್ಸವಗಳಲ್ಲಿಯೂ ಈ ಮಟ್ಟದ ಪ್ರಕೃತಿ ಸಹಜ ಮೇಳೈಸುವಿಕೆ ಅಸಾಧ್ಯವೇನೋ ? ಅಂತೂ, ಪ್ರಕೃತಿಯ ಮೆರವಣಿಗೆಯ ಸಂಭ್ರಮ ಮನೆ ಮಾಡಿತು. ಆಕಸ್ಮಾತ್ ಆಗಿ ಅಂದು ಸರಿಯಾದ ಸಮಯಕ್ಕೆ ದಾಂಗುಡಿಯಿಟ್ಟ ಮಂಗಗಳಿಂದಾಗಿ, ಅದು ಮಂಗಣ್ಞನ ಮದುವೆಯ ದಿಬ್ಬಣವಾಗಿ ಪರಿವರ್ತನೆಯೂ ಆಗಿಹೋಯಿತು. ಮಂಗಗಳ ಚೆಲ್ಲಾಟದ ಮದುವೆಯೆಂದರೆ ಕೇಳಬೇಕೆ ? ಎಲೆ, ಹೂ, ಹಣ್ಣು, ಕಾಯಿ, ತಾಂಬೂಲಗಳನ್ನು ಸಂಗ್ರಹಿಸುವುದೇ ಬೇಡ. ಆಗಸದಲ್ಲಿ ನಿಂತು ಆಶೀರ್ವದಿಸುತ್ತಿರುವ ದೇವತೆಗಳ ಕೈಯ್ಯಿಂದ ಉದುರುತ್ತಿರುವಂತೆ, ಸಕಲ ಮಂಗಳ ಪರಿಕರಗಳೆಲ್ಲವೂ ಧರೆಗೆ ಇಳಿಯಹತ್ತಿದವು. ಕೆಲವೊಮ್ಮೆ ಏಕಕಾಲಕ್ಕೆ, ಮತ್ತೊಮ್ಮೆ ಒಂದಾದ ನಂತರವೊಂದರಂತೆ. ಆಂಜನೇಯನ ಕಾಟದಿಂದ ಬೇಸತ್ತು ಹೀಗೆ ಒಲ್ಲದ ಮನಸ್ಸಿನಿಂದ, ಕಿರುಕುಳದ ಮುನಿಸಿನಿಂದ, ಒತ್ತಾಯಪೂರ್ವಕವಾಗಿ, ತಮ್ಮಲ್ಲಿರುವ ಪರ್ಣಫಲಪುಷ್ಪಗಳ ಚೀಲ ಬರಿದಾಗುವವರೆಗೂ ಮಂತ್ರಾಕ್ಷತೆಯನ್ನು ಸಲ್ಲಿಸಿ ಸಂಭ್ರಮಪಟ್ಟಂತೆ ಶುಭಾಶಯ ಹೇಳಿ ಸುಮ್ಮನಾಗಿಬಿಟ್ಟವು ಗಿಡಮರ, ಕೀಟ, ಪಕ್ಷಿ ಸಂಕುಲಗಳು.
Subscribe to:
Post Comments (Atom)
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಅರ್ಧಾಂಗಿ ಪುರಾಣ! ನಾನು ಎಂದಿನಂತೆ ನಿತ್ಯಕರ್ಮಗಳ ಮುಗಿಸಿ ಕರ್ತವ್ಯಕ್ಕಾಗಿ ಸಿದ್ಧವಾಗುತ್ತಿರುವಾಗ ಕೇಳಿದಳು ಸಾಕಿಯೊಮ್ಮೆ - " ಈ ಹಳೆಯ ಅಂಗಿಯನ್ನ ಹಾಕ್ಕೋ...
-
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ ಮಜ್ಜೆಗಳು ಜಾ...
No comments:
Post a Comment