Total Pageviews
Sunday 18 March 2018
Friday 16 March 2018
ಸ್ಟೀಫನ್ ಹಾಕಿಂಗ್ ಗೊಂದು ಕಾವ್ಯನಮನ
ಸ್ಟೀಫನ್ ಹಾಕಿಂಗ್ ಗೊಂದು
ವಿಜ್ಞಾನ ಲೋಕದ ಮಾನವ
ದಿಗ್ಗಜ
ರೋಗದಿ ನರಳಿಯೂ
ಸಾಧಿಸಿದಗ್ರಜ
ಬ್ರಹ್ಮಾಂಡವನೇ ಬಗೆದ
ಮಾನವ ಬ್ರಹ್ಮ
ಸೃಷ್ಟಿರಹಸ್ಯವ ಭೇದಿಸಹೊರಟ
ಸಾರ್ಥಕ ಜನ್ಮ
ಕಪ್ಪುರಂಧ್ರದ ವಿಕಿರಣ
ಶೋಧಕ
ಗಾಲಿಯ ಕುರ್ಚಿಯೇ
ಇವಗೆ ಗಣಕ
ನಕ್ಷತ್ರದ ಗುಟ್ಟನು ಭೇದಿಸಿದ
ಭೂ ಧೃವತಾರೆ
ನಿಶ್ಚಲ ದೇಹದಿ ಚಿರಂತನ
ಚಿಂತಕ
ಬಾಹ್ಯಾಂತರಾಳವೇ ನಿನ್ನಯ
ಭೌತಿಕ ಶಾಸ್ತ್ರವೇ ನಿನ್ನಯ
ತವಕ
ಮರಣವ ಗೆದ್ದ ಬೋನಸ್
ಸಾಧಕ
ತಿಳಿಯದು ಲೋಕ
ನಿನ್ನರಿವಿನ ಪಯಣ
ಕಾಲಕೆ ಅಚ್ಚರಿ ನಿನ್ನೊಂದಿಗೆ
ಸೆಣಸು
ದೇವರ ಪ್ರಶ್ನಿಸಿದ ನಾಸ್ತಿಕ
ಜಡದಲೂ ಅನ್ಯಗ್ರಹಕೆ
ಕನಸು
ನಿನಗೇತಕೆ ಬೇಕು
ಹಂಗಿನ ವಯಸು
ಶತಮಾನದ ವಿಸ್ಮಯ ನಿನ್ನಯ
ಅಸ್ಮಿತೆ
ಜಗಕೆ ಮಾದರಿ ನಿನ್ನಾ
ಬದುಕಿನ ರೀತಿ ತೋರಿದ
ನಿನಗಿದೊ ನಮನ
ನೀನೇ ನಮಗೆ ಸ್ಪೂರ್ತಿಯ ಚೇತನ
Thursday 8 March 2018
ಜಗನ್ಮಾತೆ
ಜಗನ್ಮಾತೆ
ಓ ತಾಯೆ ಜಗನ್ಮಾತೆ
ಈ ಜಗದ ಜನ್ಮದಾತೆ
ಸೃಷ್ಠಿಗೆ ನೀ ಜೀವದಾತೆ
ಸಾಗರದಾಳ ಜೀವನಪ್ರೀತಿ
ಆಗಸವೇ ಬದುಕ ಬಯಕೆ
ಮಿತಿಯಿಲ್ಲದ ವಾತ್ಸಲ್ಯದಾಗರ
ಸಾಟಿಯಿಲ್ಲದ ಭಾವಬಂಧುರ
ಉಕ್ಕುವಂಥ ಕಡಲ ಪ್ರೀತಿ
ಮಿಕ್ಕುವಂಥ ಶ್ರಮದ ರೀತಿ
ಸುಟ್ಟು ಬೆಳಗೊ ಮಹಾಜ್ಯೋತಿ
ಸಹನೆ ಭೂಮಿ ತೂಕವಂತೆ
ಕ್ಷಮಯಾಧರಿತ್ರಿ ದೇವಮಾತೆ
ಕರುಳು ಕುಡಿಯೇ ಸಿರಿಯಂತೆ
ಹೆತ್ತು ಬದುಕ ನೊಗವ ಹೊತ್ತು
ಸಂಸಾರಕೆ ನೀನೆ ತಾನೆ ಗಾಣದೆತ್ತು
ಬದುಕಲಾರೆ ನಿನಗಾಗಿ ಒಂದರೆಗಳಿಗೆ ಹೊತ್ತು
ಹೇಗೆ ತಾನೆ ತೀರಿಸಲಿ
ಉಪ್ಪಿಗಿಂತ ರುಚಿಯೂ ಇಲ್ಲ
ನಿನ್ನ ಸಮಕೆ ಬಂಧುವಿಲ್ಲ
ನೀನೇ ಮೂಲ ಸೃಷ್ಠಿಗೆಲ್ಲ
ರಂಗು ನೀನು ಭಾವಕೆಲ್ಲ
Sunday 4 March 2018
ಜಾನ್ ಕೀಟ್ಸ್ ನ ಮೌನರಾಗ.....(ಭಾಗ 2)
ಜಾನ್ ಕೀಟ್ಸ್ ನ ಮೌನರಾಗ.....(ಭಾಗ 2)
JOHN KEATS
JOHN KEATS
ಕೀಟ್ಸ್ ನಲ್ಲಿ ಕಾವ್ಯ ಪವಿತ್ರವಾಗಿತ್ತು,ದಿವ್ಯ ಬೆಳಕಾಗಿತ್ತು, ಮೌನದ ಮಹಾನದಿಯಾಗಿತ್ತು. ಚೈತನ್ಯದ ಚಿಲುಮೆಯಾಗಿತ್ತು.
''ಕೀಟ್ಸ್ ಅಲೆಮಾರಿಯಾಗಿದ್ದ ಕಾವ್ಯಕ್ಕಾಗಿ.
ಕೀಟ್ಸ್ ಖಿನ್ನನಾಗಿದ್ದ
ಕಾವ್ಯಕ್ಕಾಗಿ,
ಕೀಟ್ಸ್ ನಿಷ್ಠುರನಾಗಿದ್ದ ಕಾವ್ಯಕ್ಕಾಗಿ.
ಕೀಟ್ಸ್ ತಾಳ್ಮೆ ಕಳೆದುಕೊಂಡಿದ್ದ ಕಾವ್ಯಕ್ಕಾಗಿ.
ಕೀಟ್ಸ್ ಧ್ಯಾನಿಯಾಗಿದ್ದ ,
ಯೋಗಿಯಾಗಿದ್ದ,
ಪ್ರೇಮಿಯಾಗಿದ್ದ, ಮೌನಿಯಾಗಿದ್ದ, ಬಂಧುವಾಗಿದ್ದ,
ಜೀವದ ಗೆಳೆಯನಾಗಿದ್ದ,
ಹಂಬಲದ ಮಹಾ ಕೀಟವಾಗಿದ್ದ
ಕಾವ್ಯಕ್ಕಾಗಿ ''
''ಕೀಟ್ಸ್ ನ ಮತ್ತೊಂದು ಕಾವ್ಯ
ನನ್ನ ಆಕಾಶದ ಬಟ್ಟಲೊಳಗೆ
ಈ ವಸಂತವೆಲ್ಲ ಹೀರಿದರೂ
ಖಾಲಿಯಾಗದ ಶೆರೆ
ಮರೆಯಲಾಗದ್ದನ್ನು ಮರುಕಳಿಸಿಕೊಂಡು
ಕುಡಿಯುತ್ತಲೇ ಇದ್ದೇನೆ ಕಣ್ಣುಗಳಿಂದ
ಒಂಟಿಯಾಗಿದ್ದೇನೆ ಬಾ ಗೆಳೆಯ''
ಎಂದು ಸ್ನೇಹಕ್ಕೂ ಕಾವ್ಯದ ಸೇತುವೆಯನ್ನು ಕಟ್ಟುತ್ತಾನೆ.
I was never afraid of failure, for I would sooner fail than not be among the greatest. . ಎಂದು ತನ್ನ ಕವಿ ಸಾಧನೆಯ ಜೀವನವೇ ವಿಫಲವೆಂದು ಬಗೆದು, ಬಾಗಿದ, ಮಾಗಿದ ಮಹಾನುಭಾವ ಜಾನ್ ಕೀಟ್ಸ್.
ತನ್ನಲ್ಲಿ ಕಾವ್ಯವೊಂದು ಸೃಜಿಸದಿದ್ದಲ್ಲಿ ಹುಚ್ಚನಂತೆ ಚಡಪಡಿಸುತ್ತಿದ್ದ ಕೀಟ್ಸ್ ಮಗುವಾಗಿ ಹಠಕ್ಕೆ ಬೀಳುತ್ತಿದ್ದ. ಕಾವ್ಯದೊಂದಿಗೆ ಜಗಳವಾಡುತ್ತಿದ್ದ .ಮುನಿಸಿಗೆ ಇಳಿದ ಕಾವ್ಯ ಹೇಗೆ ತಾನೆ ಒಲಿದೀತು? ಸೋಲುತ್ತಿದ್ದ, ಪರಿತಪಿಸುತ್ತಿದ್ದ ಸಂಕಟ ಪಡುತ್ತಿದ್ದ. ಮತ್ತೊಮ್ಮೆ ಕಾವ್ಯ ಘಟಿಸುವ ಸಂಭ್ರಮದ ಮಳೆಗಾಗಿ, ಆ ಅಮೃತ ಘಳಿಗೆಗಾಗಿ, ಕಾಯುತ್ತಿದ್ದ. ಪ್ರಕೃತಿಯ ಮಡಿಲಲ್ಲಿ ಮಗುವಾಗಿ ವೀಣಾಪಾಣಿಯನ್ನು ಕಾವ್ಯಾರ್ಥಿಯಾಗಿ ಬೇಡುತ್ತಿದ್ದ. ಅಷ್ಟಾಗಿಯೂ ಒಲಿಯದಿದ್ದಾಗ, ಶೇಕ್ಸಪಿಯರ್ ನಂತಹ ಸಾಧಕರು ನಡೆದಾಡಿದ ತಾಣದಲ್ಲಿ ಕುಳಿತು ಧ್ಯಾನಿಸುತ್ತಿದ್ದ .ಕಾವ್ಯದೇವಿಯನ್ನು ಆಹ್ವಾನಿಸುತ್ತಿದ್ದ. ಬಹುಶಃ ಈ ಶ್ರಧ್ಧೆಯೇ ಅವನಲ್ಲಿ ಶ್ರೇಷ್ಠ ಕಾವ್ಯ ವಾಣಿಯಾಗಿ ಜನ್ಮ ತಳೆಯಿತು.ಅವನ ತನು ಮನ ನರ ನಾಡಿಯ ಕಣ ಕಣದಲ್ಲೂ ರುಧಿರದ ಬದಲಾಗಿ ಕಾವ್ಯವೇ ಜೀವಧಾರೆಯಾಗಿ,ಪ್ರಾಣ ವಾಯುವಾಗಿ ಪ್ರವಹಿಸುತ್ತಿತ್ತು .
RAGAM
RAGAM
ಇಂತಹ ಕೀಟ್ಸ್ ನ ಉಸಿರಾದ ಕಾವ್ಯ ಬದುಕನ್ನು ಡಾ.ರಾಜಶೇಖರ ಮಠಪತಿಯವರು "ಜಾನ್ ಕೀಟ್ಸ್ - ನೀರ ಮೇಲೆ ನೆನಪು ಬರೆದು" ಸಾಹಿತ್ಯದ ಸಲಿಲ ದರ್ಪಣದಲ್ಲಿ ಕೀಟ್ಸ್ ನ ಬದುಕನ್ನು ದೃಶ್ಯಕಾವ್ಯವಾಗಿಸಿದ್ದಾರೆ. ನಮ್ಮನ್ನು ಕೈಹಿಡಿದು ಮತ್ತೆ ಕೀಟ್ಸ್ ನ ರೊಮ್ಯಾಂಟಿಕ್ ಯುಗಕ್ಕೆ ಕರೆದೊಯ್ದು, ಅವನ ಪತ್ರದ ಸಾಲು ಮರಗಳ ತಂಪಾದ ಹೆದ್ದಾರಿಯಲ್ಲಿ ವಿಹಂಗಮವಾಗಿ ವಿಹರಿಸುವಂತೆ ಮಾಡುತ್ತಾರೆ.
ಕೀಟ್ಸ್ ನಮ್ಮೊಂದಿಗೆ ಸಂವಾದಿಸುತ್ತ, ಹತ್ತಿರವಾಗುವುದೇ ಈ ಪತ್ರಗಳ ಓದಿನ ಧ್ಯಾನಕ್ಕಿಳಿದಾಗ.ಗೆಳೆಯರು,ಸಹೋದರರು,ಹಿತೈಷಿಗಳು ಸಂಗ್ರಹಿಸಿದ್ದ ಈ ಅಮೂಲ್ಯ ಐತಿಹಾಸಿಕ ದಾಖಲೆಗಳೇ ಕವಿಯ ಶುದ್ಧ ಅಂತರಂಗವನ್ನು ನಮಗೆ ತೆರೆದಿಡುತ್ತವೆ. ಇಲ್ಲದಿದ್ದರೆ ವಿಮರ್ಶಕರಿಂದ ಮೊದಲೇ ನಿರ್ಲಕ್ಷಿತನಾಗಿದ್ದ ಕೀಟ್ಸ್ ಬಹುಶಃ ಇಂದು ಡಾ.ರಾಜಶೇಖರ ಮಠಪತಿಯವರ ಕೃತಿಯ ಮೂಲಕ. ನಮಗೆ ಹೀಗೆ ದಕ್ಕುತ್ತಿರಲಿಲ್ಲ. ಅನಾಮಿಕನಾಗಿಬಿಡುತ್ತಿದ್ದ.
ನಾವು ರಾಗಂ ರವರ ಈ ಕೃತಿಯ ಅಂತರಂಗದ ಒಳಹೊಕ್ಕಾಗ, ೨೩ ರ ಕಿರಿಯ ವಯಸ್ಸಿನಲ್ಲಿಯೇ , ಸಮಕಾಲೀನರು ಹಾಗೂ ಹಿರಿಯರೆಲ್ಲಾ ಬೆರಗಾಗುವಂತೆ ಕಾವ್ಯಗಂಗೆಯನ್ನು ಪ್ರವಾಹವಾಗಿ ಧುಮ್ಮಿಕ್ಕುವಂತೆ ಮಾಡಿದ ಅಸಾಮಾನ್ಯ ಕವಿಯ ಅದಮ್ಯ ಉತ್ಸಾಹ, ಎಂದೂ ಬತ್ತದ ಜೀವನ ಪ್ರೀತಿಯನ್ನೇ ನೆಲವಾಗಿಸಿ, ಮೇಲೆ ರಮ್ಯ ಕಾವ್ಯವನ್ನು ಹುಲುಸಾಗಿ ಎಡೆಬಿಡದೆ ಕೃಷಿಗೈದ ಕಾವ್ಯಯೋಗಿಯೊಬ್ಙನ ಶ್ರಧ್ದೆ, ಪರಿಶ್ರಮ, ವಿಲಕ್ಷಣ ಹಂಬಲ, ಪ್ರಾಮಾಣಿಕತೆ, ಜೀವನ ಚೈತನ್ಯ, ಸ್ವಾಭಿಮಾನ, ಗಳು ನಮ್ಮನ್ನು ಬಹುವಾಗಿ ಕಾಡುತ್ತವೆ. ಇಂದು ಆಧುನಿಕ ಮನುಷ್ಯ ಯಂತ್ರನಾಗರಿಕತೆಯಿಂದಾಗಿ ಆಲಸ್ಯ,ದಾರಿದ್ರ್ಯ ದೇವತೆಯ ವಿಷಯಾಸಕ್ತಿಗಳ ತೆಕ್ಕೆಯಲ್ಲಿ ಮೈಮರೆತು, ಅಮೂಲ್ಯ ಜೀವನ ಕ್ಷಣಗಳನ್ನು ಕಳೆದುಕೊಳ್ಳುತ್ತಿರುವಾಗ, ಜಾನ್ ಕೀಟ್ಸ್ ಎಂಬ, ಅರ್ಧಕ್ಕಿಂತಲೂ ಕಡಿಮೆ ಆಯುಷ್ಯದಲ್ಲಿಯೇ ಅಗಾಧವಾದ ಕ್ರಿಯಾಶೀಲತೆ,ಸೃಜನಶೀಲತೆ,ಪ್ರಾಮಾಣಿಕತೆ ಗಳನ್ನು ಮೈಗೂಡಿಸಿಕೊಂಡಿದ್ದ , ರಮ್ಯ ಯುಗದ ಕಾವ್ಯ ತಪಸ್ವಿ ಯೊಬ್ಬನ ಬದುಕು ನಮ್ಮನ್ನು "ಜಡ ದಿಂದ ಜಂಗಮದೆಡೆಗೆ " ಕರೆದೊಯ್ಯುವ ಆದರ್ಶವಾಗಬೇಕಾಗಿದೆ.
ಹಾಗಾದಾಗಲೇ ಸಾಹಿತ್ಯದ ಸುದೀರ್ಘ ಮ್ಯಾರಾಥಾನ್ ನಲ್ಲಿ ೬೩ ನೇಯ ಕೃತಿಯ ಮೂಲಕ ಜಾನ್ ಕೀಟ್ಸ್ ಕವಿಯ ನೀರ ಮೇಲೆ ಬರೆದ ನೆನಪುಗಳನ್ನು ಜನಮನದಲ್ಲಿ ಶಾಶ್ವತವಾಗಿಸುವ ಹೆಬ್ಬಯಕೆಯ ಲೇಖಕರಾದ ಡಾ.ರಾಜಶೇಖರ ಮಠಪತಿ ಯವರ ನಿರಂತರ ಬರಹ ಧ್ಯಾನ ಸಾರ್ಥಕವಾಗುತ್ತದೆ.
Thursday 1 March 2018
ಜಾನ್ ಕೀಟ್ಸ್ ನ ಮೌನರಾಗ.....
ಜಾನ್ ಕೀಟ್ಸ್ ನ ಮೌನರಾಗ.....
ಭಾಗ ೧
ಜಾನ್ ಕೀಟ್ಸ್ ಕಾವ್ಯದ ಮಹಾವ್ಯಸನಿ.ಆತ ಕಂಡಿದ್ದು,ಉಂಡಿದ್ದು, ಅಲೆದಾಡಿದ್ದು,ಮಲಗಿದ್ದು, ಕುಡಿದದ್ದು,ಜಗಳವಾಡಿದ್ದು,ಪ್ರೀತಿಸಿದ್ದು,ಕುಣಿದದ್ದು,ನಡೆದದ್ದು ನುಡಿದದ್ದು , ಅನುಭವಿಸಿದ್ದು,ಜೀವಿಸಿದ್ದು, ಉಸಿರಾಡಿದ್ದೆಲ್ಲವೂ ಕಾವ್ಯವೇ.
ಬದುಕಿದ ಅಲ್ಪಾಯುಷ್ಯದಲ್ಲಿಯೇ ಶತಮಾನಗಳಿಡೀ ಫಲ ಕೊಡುವಷ್ಟು ಕಾವ್ಯದ ಬೀಜಗಳನ್ನು ಬಿತ್ತಿ ಹೋಗಿದ್ದಾನೆ.ಹೀಗೆ ಬಿತ್ತಿದ್ದರಿಂದಲೋ ಏನೋ , ಪ್ರಥಮ ದರ್ಜೆ ಕಾವ್ಯಗಳಾಗಿದ್ದರೂ ,ಇವನ ಕಾವ್ಯಬೀಜಗಳು ವಿಮರ್ಶಕರ ದೃಷ್ಟಿಗೆ ಸ್ಪಷ್ಟವಾಗಿ ಗೋಚರವಾಗಲಿಲ್ಲ.ಗೋಚರಿಸಿದರೂ ಆ ಕಾಲದ ಮೌಲಿಕ ಕಾವ್ಯಗಳಾಗಿಲ್ಲ ವೆಂದು,ನಿರ್ಲಕ್ಷ್ಯಕ್ಕೊಳಗಾದ ದುರಂತ ಕವಿ ಜಾನ್ ಕೀಟ್ಸ್.
ಡಾ.ರಾಜಶೇಖರ ಮಠಪತಿಯವರು "ಜಾನ್ಕೀಟ್ಸ್ - ನೀರ ಮೇಲೆ ನೆನಪು ಬರದು.."ಎಂಬ ಕೃತಿಯ ಮೂಲಕ. ಇಂತಿಪ್ಪ ಜಾನ್ ಕೀಟ್ಸ್ ಜೀವನದ ಮೇಲೆ ಬೆಳಕು ಚೆಲ್ಲಿದ್ದಾರೆ. ತನ್ನ ಬದುಕಿನ ಸುಖ, ದು:ಖ , ಸ್ನೇಹ, ಪ್ರೀತಿ,ವಾತ್ಸಲ್ಯ, ಕೋಪ,ಕರುಣೆ,ಪ್ರವಾಸ, ಸಂಬಂಧ ,ನಿರ್ಲಕ್ಷ್ಯ,ಆಸಕ್ತಿ,ಮೃತ್ಯು, ಕಾಯಕ, ತವಕ, ತಲ್ಲಣಗಳಿಗೂ , ಕಾವ್ಯದಲ್ಲಿಯೇ ಮುಕ್ತಿಯನ್ನು ಕಂಡುಕೊಂಡು ಆದರ್ಶ ಕವಿ ಗಳ ಸಾಲಿನಲ್ಲಿ ನಿಲ್ಲಬೇಕಾದ ,ಅವನಿಗೆ ದಕ್ಕಬೇಕಾದ ಸ್ಥಾನವನ್ನು ತಪ್ಪಿಸಿ, ಅಂದಿನ ಮಹಾಮಹಿಮ ವಿಮರ್ಶಕರು ಕವಿತೆಯ ಸಾವಿನ ಮೇಲೆ ಷರಾ ಬರೆದ ಹಾಗೆ,
"ಕೀಟ್ಸ್ ನಿಗೆ ಕಾವ್ಯ ಬರೆಯುವ, ಕಾವ್ಯಕೃಷಿಯಲ್ಲಿ ಮುಂದುವರಿಯುವ ಅರ್ಹತೆಗಳಿಲ್ಲ "
ಎಂದು ಮರಣ ಶಾಸನ ಬರೆದು ಆತನ ನಿಸ್ವಾರ್ಥ, ನಿಶಾಂತ ,ನಿರ್ಮಲ, ಕಾವ್ಯ ಕನ್ನಿಕೆಯ ಸಹಜ ಸೌಂದರ್ಯವನ್ನು ಅಲ್ಲಗಳೆದರು. ಅಲ್ಲಿಗೆ, ಸಹಜವಾಗಿ ಅರಳಬಹುದಾಗಿದ್ದ ಕವಿ ಕಮಲವೊಂದು ಒತ್ತಾಸೆಯ ಜಲಧಾರೆಯಿಲ್ಲದೆ ಸೊರಗಬೇಕಾಯಿತು.
"ನಿಂದಕರಿರಬೇಕು,ಜಗದಲಿ ನಿಂದಕರಿರಬೇಕು."ಎಂಬ ದಾಸವಾಣಿಯಂತೆ, "ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದೆಡೆ ಸಮಾಧಾನಿಯಾಗಿರಬೇಕು " ಎಂಬ ಅಕ್ಕಮಹಾದೇವಿಯ ವಚನದಂತೆ ಆತ ಎಲ್ಲವನ್ನು ಸಹಿಸಿಕೊಂಡು ತನ್ನ ಜೀವನಾಡಿಯಾಗಿದ್ದ ಕಾವ್ಯಸರಸ್ವತಿಯನ್ನು ಕೊರಗಲು ಬಿಡಲಿಲ್ಲ.ಇಂಥವನ ಬದುಕನ್ನು ಕುರಿತು ರಾಗಂ ರವರ ವ್ಯಾಖ್ಯಾನ
" ಗಾಢ ಸ್ನೇಹ,ಹುಚ್ಚು ಪ್ರೀತಿ ಮತ್ತು ಸಕಾಲಿಕ ಮೃತ್ಯುಗಳ ಒಟ್ಟು ಮೊತ್ತವೇ ಜಾನ್ ಕೀಟ್ಸ್ ನ ಬದುಕು."
ಕೀಟ್ಸ್ ಇಂಗ್ಲೆಂಡಿನ ಲಂಡನ್ ನಲ್ಲಿ ಥಾಮಸ್ ಹಾಗೂ ಫ್ರಾನ್ಸಸ್ ಜಿನ್ನಿಂಗ್ಸ್ ರ ಮಗನಾಗಿ ೧೭೯೫ ರಲ್ಲಿ ಜನಿಸಿದ.೧೮೧೦ ರಲ್ಲಿ ತಾಯಿಯನ್ನು ಕಳೆದುಕೊಂಡು ಸಿಡಿಮಿಡಿಗೊಂಡಿದ್ದ.
ಹೈಡನ್ ಗೆ ಬರೆದ ಪತ್ರದಲ್ಲಿ
"ಬಾಳಿನುದ್ದಕ್ಕೂ ನಾವು ಹೆಣಗಾಡಿ ಸಾಧಿಸುವ ಪ್ರಸಿದ್ಧಿ
ನಮ್ಮ ಸಮಾಧಿಗಳ ಮೇಲೆ ಸುವರ್ಣಾಕ್ಷರಗಳಲ್ಲಿ ಸ್ಥಾಪನೆಯಾಗಲಿ ಸಾವಾಗಿ ಹರಸಲಿ ಅಲ್ಲಿಂದಲೇ ನಮ್ಮ ಹೆಣಗಳನ್ನು "
FANNY BRAWNE |
ಎಂದು ಪ್ರಸಿದ್ಧಿಯನ್ನು ಕುರಿತು ಆಡಿದ ವ್ಯಂಗ್ಯ ನಮಗೂ ಅನ್ವಯಿಸುವಂತಿದೆ. ಈತನ ಪತ್ರಕ್ಕೆ ಕೈಗಳಾದವರು ಸಮಕಾಲೀನ ಗೆಳೆಯರಾದ ರೇನಾಲ್ಡ್ಸ,ಹೈಡನ್,ಲೀ ಹಂಟ್ ,ಸಹೋದರ ಜಾರ್ಜ,ಬೈಲಿ, ರೈಸ್. ಇವರೆಲ್ಲ ಕೀಟ್ಸ್ ನ ಕಾವ್ಯಕ್ಕೆ ಕಣ್ಣಾದವರು, ಕಿವಿಯಾದವರು. ಜಾನ್ ಕೀಟ್ಸ್ ತನ್ನ ಸ್ನೇಹಿತರು, ಸಹೋದರರು, ಹಿತೈಷಿಗಳು ಹಾಗೂ ಹಿರಿಯ ವಿದ್ವಾಂಸರಿಗೆ ಬರೆದ ಪತ್ರ ಬರಹಗಳು ಆತನ ಕಾವ್ಯಮಯವಾಗಿದ್ದ, ಅಷ್ಟೇ ಮಧುರ ಯಾತನಾಮಯವಾಗಿದ್ದ ಅವನ ಬದುಕನ್ನು ಸಾಧಾರವಾಗಿ ಕಟ್ಟಿಕೊಡುತ್ತವೆ.
ಕೀಟ್ಸ್ ನ ಕಾವ್ಯಕ್ಕೊಂದು ಉದಾಹರಣೆ
" ಬೆಳಕಿನ ಮುಗ್ಧ ಮಹಾನದಿಯದು ಕಾವ್ಯ
ಪರಮಶಕ್ತಿ,ಪರಾಶಕ್ತಿ,ದಿವ್ಯ ಮುಕ್ತಿ
ತನ್ನ ಬಲಗೈ ರಟ್ಟೆಯ ಮೇಲೆ
ತಾನೇ ಗಾಢ ನಿದ್ರೆಗೆರಗುವ,
ಹೊದ್ದು ಮರುಗುವ
ದಗ್ಧ ಶಕ್ತಿಯದು ಕಾವ್ಯ
ಒಳಗಿಳಿದುದೆಲ್ಲವೂ ದಿವ್ಯ"
Subscribe to:
Posts (Atom)
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಅರ್ಧಾಂಗಿ ಪುರಾಣ! ನಾನು ಎಂದಿನಂತೆ ನಿತ್ಯಕರ್ಮಗಳ ಮುಗಿಸಿ ಕರ್ತವ್ಯಕ್ಕಾಗಿ ಸಿದ್ಧವಾಗುತ್ತಿರುವಾಗ ಕೇಳಿದಳು ಸಾಕಿಯೊಮ್ಮೆ - " ಈ ಹಳೆಯ ಅಂಗಿಯನ್ನ ಹಾಕ್ಕೋ...
-
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ ಮಜ್ಜೆಗಳು ಜಾ...