Total Pageviews

Wednesday 31 October 2018

ಕನ್ನಡದ "ಆಮುಕ್ತಮಾಲ್ಯದ"- ಡಾ.ನಿರುಪಮಾ
ನಮ್ಮ ನಾಡು ೬೩ ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂಭ್ರಮದ ಹೊತ್ತಿನಲ್ಲಿ ನನ್ನ ಕೈಗೊಂದು ಮಹತ್ವದ ಕೃತಿ ದಕ್ಕಿದ್ದು, ಅನುಪಮ ಕ್ಷಣಗಳನ್ನು ಮನದುಂಬಿಕೊಳ್ಳಲು ಕಾರಣವಾಯಿತು.ನಮ್ಮ ನಾಡು ಕಂಡ ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಅನ್ವರ್ಥವಾಗಿದ್ದಂತಹ, ನಮ್ಮ ಶ್ರೀಮಂತ ನಾಡು ನುಡಿ ಸಂಸೃತಿಯ ಪರಂಪರೆಗೆ ಹೆಸರಾಗಿದ್ದ, 'ಪೇಯಸ್' ರಂತಹ ವಿದೇಶಿ ಯಾತ್ರಿಕರಿಂದ 'ಸುವರ್ಣಯುಗದ' ಸಾಮ್ರಾಜ್ಯವೆಂದು ಬಣ್ಣಿಸಲ್ಪಟ್ಟು ಧೀಮಂತವಾಗಿ ಬೆಳಗಿದ 'ವಿಜಯನಗರ ಸಾಮ್ರಾಜ್ಯ' ದ ಗತವೈಭವವನ್ನು ಸಾರುವ ಕೃತಿ ಶ್ರೀ ಕೃಷ್ಣದೇವರಾಯ ವಿರಚಿತ "ಆಮುಕ್ತಮಾಲ್ಯದ ".ಯಾವ ರಾಜ್ಯದಲ್ಲಿ ಸುಭದ್ರ ಆಡಳಿತವಿರುತ್ತದೋ ಅಲ್ಲೊಂದು ಸಮೃದ್ಧ ಸಂಸ್ಕೃತಿ ಮೈದಳೆಯುತ್ತದೆ ಎಂಬುದಕ್ಕೆ ನಮ್ಮ ನಾಡನ್ನಾಳಿದ ಕದಂಬರು,ಚಾಲುಕ್ಯರು,ಹೊಯ್ಸಳರು,ರಾಷ್ಟ್ರಕೂಟರು ಹಾಗೂ ವಿಜಯನಗರ ಸಾಮ್ರಾಜ್ಯಗಳೇ ಅತ್ಯುತ್ತಮ  ನಿದರ್ಶನಗಳಾಗಿವೆ. ಅಂತಹ ಒಂದು ಅಭೂತಪೂರ್ವ ಸಂಸ್ಕೃತಿಯ ತವರಾಗಿದ್ದ ವಿಜಯನಗರ ಸಾಮ್ರಾಜ್ಯ ಹೆಸರಿಗೆ ತಕ್ಕಂತೆ ಅನೇಕ  ವಿಜಯಗಳ ಸರಮಾಲೆಗಳನ್ನೇ ಕೊರಳಿಗೆ ಧರಿಸಿಕೊಂಡು, ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬಹುದಾದ ಶಿಲ್ಪ ಕಲೆ,ಸಾಹಿತ್ಯ, ಸಂಗೀತ, ನೃತ್ಯ,ವಾಸ್ತುಶಿಲ್ಪ ದಂತಹ ಲಲಿತಕಲಾಕ್ಷೇತ್ರಗಳೆಂಬ ಗರಿಗಳಿಂದ ಅಲಂಕೃತಗೊಂಡು ಅದರ ಕೀರ್ತಿಕಿರೀಟವು ಕಂಗೊಳಿಸಿ ಮೆರೆದಿದೆ.ಇಂತಹ ಒಂದು ಮಹೋನ್ನತ ಸಾಮ್ರಾಜ್ಯ ಮೈದಾಳಿದ ಪುಣ್ಯಭೂಮಿಯಲ್ಲಿ ನಾವಿದ್ದೇವೆ ಎಂಬುದೇ ಎಲ್ಲ ಕನ್ನಡಿಗರಿಗೆ ಧನ್ಯತೆಯೊಂದಿಗೆ ಸಾರ್ಥಕತೆ ಮತ್ತು ಅಭಿಮಾನವನ್ನು ಮೂಡಿಸುವ ಸಂಗತಿಯಾಗಿದೆ.
ಬಾಲ್ಯದಲ್ಲಿಯೇ ತನ್ನ ಸಹೋದರ ವೀರನರಸಿಂಹನ ದುಷ್ಟತನದಿಂದಾಗಿ ತನ್ನ ಕಣ್ಣುಗಳನ್ನು ಕೀಳಿಸಿಕೊಂಡು ಅನಾಮಿಕನಂತೆ,ಅನಾಥನಂತೆ  ಪ್ರಾಣ ಕಳೆದುಕೊಳ್ಳಬೇಕಾಗಿದ್ದ ತುಳುವ ವಂಶದ ಶ್ರೀ ಕೃಷ್ಣದೇವರಾಯನು, ನಿಷ್ಠಾವಂತ ಮಂತ್ರಿ ಸಾಳ್ವ ತಿಮ್ಮರಸನ ಚಾಣಾಕ್ಷತೆಯಿಂದಾಗಿ ೧೫೦೯ ಆಗಸ್ಟ್ ೭ ರಂದು ಪಟ್ಟವೇರಿ ನಾಡಪ್ರಭುವಾಗಿ ಮೆರೆಯುತ್ತಾನೆ.ಕವಿರಾಜಮಾರ್ಗಕಾರನು
         "ಸುಭಟರ್ಕಳ್ ಕವಿಗಳ್ ಸು
          ಪ್ರಭುಗಳ್ ಚೆಲ್ವರ್ಕಳಭಿಜನರ್ಕಳ್ ಗುಣಿಗಳ್
          ಅಭಿಮಾನಿಗಳತ್ಯುಗ್ರರ್
          ಗಂಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್"
  ಎಂದು ಹೇಳುವ ಈ ಪದ್ಯದಲ್ಲಿನ ಸರ್ವಗುಣಸಂಪನ್ನತೆಗೆ ಅತ್ಯುತ್ತಮ ಉದಾಹರಣೆ ಶ್ರೀಕೃಷ್ಣದೇವರಾಯ ಎಂದರೆ ಅತಿಶಯೋಕ್ತಿಯಾಗಲಾರದು. ಬಾಲ್ಯದಲ್ಲಿಯೇ ಸಂಗೀತ ಸಾಹಿತ್ಯ ಕಲೆ ಸಾಹಸ ಗಳನ್ನು ಶ್ರದ್ಧೆಯಿಂದ ಆರಾಧಿಸಿ, "ಆಂಧ್ರಕವಿತಾ ಪಿತಾಮಹ"ನೆಂದು ಬಿರುದಾಂಕಿತನಾದ ಅಲ್ಲಸಾನಿ ಪೆದ್ದಣ ಮತ್ತು ನಂದಿ ತಿಮ್ಮಣ್ಣರೊಂದಿಗೆ ಒಡನಾಟವನ್ನಿಟ್ಟುಕೊಂಡು ಬೆಳೆದು, ಕವಿಯೂ ಕಲಿಯೂ ಆಗಿ ಇತಿಹಾಸದಾಗಸದಲ್ಲಿ ತನ್ನ ಕೀರ್ತಿಚಂದ್ರನನ್ನು ಶಾಶ್ವತವಾಗಿ ನೆಲೆಗೊಳಿಸಿದವನು ಶ್ರೀಕೃಷ್ಣದೇವರಾಯ.
ತೆಲುಗು ಭಾಷೆಯ ಮಹಾಕಾವ್ಯಗಳಾದ ಅಲ್ಲಸಾನಿ ಪೆದ್ದನ ನ 'ಮನುಚರಿತ್ರೆ',ತೆನಾಲಿ ರಾಮಕೃಷ್ಣನ 'ಪಾಂಡುರಂಗ ಮಹಾತ್ಮೆ',ನಂದಿ ತಿಮ್ಮಣ್ಣನ 'ಪಾರಿಜಾತಾಪಹರಣ',ಧೂರ್ಜಟ ಕವಿಯ 'ಕಾಳಹಸ್ತಿ ಮಹಾತ್ಮೆ',ಪಿಂಗಳಿಸೂರನ 'ಕಳಾ ಪೂರ್ಣೋದಯ ' ಗಳಲ್ಲಿ  ಬಹುಪಾಲು ರಚನೆಯಾಗಿದ್ದು ಕೃಷ್ಣದೇವರಾಯನ ಸಾಹಿತ್ಯ ಮತ್ತು ಸಂಸ್ಕೃತಿಯ ಸುವರ್ಣಯುಗದಲ್ಲಿಯೇ.ಈ ಸಾಲಿಗೆ ಸೇರ್ಪಡೆಯಾದ ಮತ್ತೊಂದು ವಿದ್ವತ್ಪೂರ್ಣ ಮಹಾಕಾವ್ಯವೆಂದರೆ, ಸರಸ್ವತಿ ಕೊರಳ ಮಣಿಹಾರವಾಗಿದ್ದ ಶ್ರೀಕೃಷ್ಣದೇವರಾಯನ "ಆಮುಕ್ತಮಾಲ್ಯದ".
ತೆಲುಗು ಭಾಷೆಯ ಕೃತಿಯಾಗಿದ್ದರೂ ಮೂಲಕ್ಕೆ ಭಂಗ ಬರದಂತೆ ಸ್ವತಂತ್ರ ಕೃತಿಯೆಂಬಂತೆ ಕನ್ನಡೀಕರಿಸಿದವರು  'ಭುವನ ವಿಜಯ' ದಂತಹ ಪ್ರಮುಖ ಕಾದಂಬರಿಗಳನ್ನು ಕೊಡುಗೆಯಾಗಿ ಕೊಟ್ಟ ಕಾದಂಬರಿಗಾರ್ತಿ,ಕಥೆಗಾರ್ತಿ,ಬಹುಭಾಷಾ ವಿಶಾರದೆ,ಸಂಶೋಧಕಿಯರೂ, ಡಾ.ನಿರುಪಮಾ ಎಂದೇ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಖ್ಯಾತರಾದ ಪದ್ಮಾ ಆರ್ ರಾವ್ ರವರು. ಲೇಖಕಿಯೆರೇ ಈ ಕೃತಿಯ ಬಗ್ಗೆ ಪ್ರಸ್ತಾಪಿಸುತ್ತಾ "ಆಮುಕ್ತಮಾಲ್ಯದ "ಕೃತಿಯನ್ನು ನಿರ್ಮಲವಾದ ಮನಸ್ಸಿನಿಂದ ತಪಗೈಯ್ಯುವಂತೆ ಧ್ಯಾನಾಸಕ್ತರಾಗಿ ಓದಿದಾಗ ಮಾತ್ರ ಅದು ತನ್ನ ನಿಗೂಢ ರಹಸ್ಯಗಳನ್ನು ತೆರೆದಿಡಬಲ್ಲದು ಎಂದು ಹೇಳುತ್ತಾರೆ.ಕನ್ನಡದ ಈ ಕೃತಿಯನ್ನು ಓದುವಾಗಲೂ ನಮಗೆ ಅದೇ ಅನುಭವವಾಗುತ್ತದೆ.
ಶ್ರೀಕೃಷ್ಣದೇವರಾಯನು 'ಮದಾಲಸ ಚರಿತ್ರೆ', ಸತ್ಯಾವಧು ಪ್ರೀಣನಂ, ' ಸಕಲ ಕಥಾ ಸಾರಸಂಗ್ರಹ', 'ಜ್ಞಾನಚಿಂತಾಮಣಿ ', 'ರಸಮಂಜರಿ'  ಪ್ರೌಢಕಾವ್ಯಗಳನ್ನು ಸಂಸ್ಕೃತದಲ್ಲಿ ರಚಿಸಿದ್ದು ಇವು ಉಪಲಬ್ಧವಿಲ್ಲ. ಲಭ್ಯವಿರುವ ರಾಯನ ಏಕೈಕ ಕೃತಿ "ಆಮುಕ್ತಮಾಲ್ಯದ" ಆಗಿದೆ ."ಆಮುಕ್ತ " ಎಂದರೆ ಅಲಂಕರಿಸಿಕೊಂಡ," ಮಾಲ್ಯ" ಎಂದರೆ ಹೂ ಮಾಲೆ, "ದ "ಎಂದರೆ ಕೊಟ್ಟವಳು ಎಂದಾಗಿ ಪೂರ್ಣವಾದ ಅರ್ಥ "ಅಲಂಕರಿಸಿಕೊಂಡ ಹೂ ಮಾಲೆಯನ್ನು ಕೊಟ್ಟವಳು " ಎಂದರ್ಥವಾಗುತ್ತದೆ. ತಮಿಳಿನ ಆಳ್ವಾರರ ಕಥೆಯೊಂದು ತೆಲುಗು ಭಾಷೆಯಲ್ಲಿ ಕನ್ನಡದ ರಾಜದುರಂಧರನೂ,ಬಹುಭಾಷಾ ವಿದ್ವಾಂಸನೂ,ರಾಜನೀತಿಶಾಸ್ತ್ರಜ್ಞನೂ ಆದ ಶ್ರೀಕೃಷ್ಣದೇವರಾಯನಿಂದ ಜನ್ಮತಳೆದಿರುವುದು, ತ್ರಿಭಾಷಾ ಸೂತ್ರದಲ್ಲಿ ಪೋಣಿಸಿದ ಮಣಿಹಾರದಂತೆ ಪ್ರಕರ್ಷಿತವಾಗಿದೆ.  ಇಲ್ಲಿಯ  ಕಥೆ ಚಿಕ್ಜದಾಗಿದ್ದರೂ ಚಕ್ಕೆ,ಚೂರ್ಣ, ಮಸಾಲೆಗಳಂತಹ ಪೂರಕ ಘಟನೆಗಳೇ ಬಳಿಸಾರಿ ವಿಜೃಂಭಿಸಿವೆ. ಈ ಕಾವ್ಯದಲ್ಲಿ ಮೂರು ಕಥೆಗಳು ಪ್ರಮುಖವಾಗಿವೆ.
೧.)ಯಮುನಾಚಾರ್ಯರ ಚರಿತ್ರೆ,
೨) ಖಾಂಡಿಕ್ಯ ಕೇಶಿಧ್ವಜರ ಕಥೆ
೩) ಮಾಲದಾಸರಿ ಕಥೆ
ತಮಿಳು ದೇಶದ ವಿಲ್ಲಿಪುತ್ತೂರಿನ ವೈಷ್ಣವ ಭಕ್ತ ವಿಷ್ಣುಚಿತ್ತನ ಸಾಕುಮಗಳು "ಆಂಡಾಳಮ್ಮ "(ತಾಯಿ) ಇವಳು ತಂದೆ ಕಟ್ಟಿದ ಹೂಮಾಲೆಯನ್ನು ವ್ಯಾಮೋಹದಿಂದ ‌  ತಾನೊಂದು ಗಳಿಗೆ ಮುಡಿದ ನಂತರವೇ ದೇವರಿಗೆ ಸಮರ್ಪಿಸುತ್ತಿದ್ದಳು.ಮಗಳ ಈ ಹುಚ್ಚಾಟ  ಗೊತ್ತಾಗಿ ತಂದೆ ವಿಷ್ಣುದೇವರಿಗೆ ಮಗಳು ಮುಡಿಯದ ಹೊಸ ಮಾಲೆಯನ್ನು ತಂದು ಅರ್ಪಿಸುತ್ತಾನೆ.
ಇದರಿಂದ ತೃಪ್ತನಾಗದ ದೇವರು ಕನ್ಯೆ ಮುಡಿದ ಹೂಮಾಲೆಯೇ ಸುಮಧುರವಾದ ಪರಿಮಳಭರಿತವಾಗಿರುತ್ತದೆಂದು ಕನ್ಯೆಯು(ವಿಷ್ಣುಚಿತ್ತನ ಸಾಕುಮಗಳು) ಮುಡಿದ ಪುಷ್ಪಮಾಲೆಯನ್ನೇ ಬಯಸುತ್ತಾನೆ.ಇದರಿಂದ ಆನಂದಿತುಂದಿಲನಾಗಿ ದೇವರ ಕೃಪೆಗೆ ಪಾತ್ರಳಾದ "ಎನ್ನೈ ಆಂಡಾಳ್"(ನನ್ನ ತಾಯಿ) ಎಂದು ಮಗಳನ್ನು ಕೊಂಡಾಡುತ್ತಾನೆ.ದೇವರೇ ತನ್ನನ್ನು ಬಯಸಿರುವಾಗ ತಾನೂ ಕೂಡ ನಮ್ಮ ಚೆನ್ನಮಲ್ಲಿಕಾರ್ಜುನನೊಲಿದ ವಚನಗಾರ್ತಿ ಅಕ್ಕನಂತೆ  ಆ ದೇವರನ್ನೇ ಮದುವೆಯಾಗುತ್ತೇನೆಂದು  ವೃತವಿಡಿದು ಭಕ್ತಿಯನ್ನಾಚರಿಸಿ ಶ್ರೀರಂಗನಾಥನನ್ನೊಲಿಸಿಕೊಂಡು ಮದುವೆಯೂ! ಆಗುತ್ತಾಳೆ. ಇವಳು ದೈವಾರಾಧನೆಗೆ ಹಾಡಿದ ಗೀತೆಗಳೇ ತಮಿಳಿನಲ್ಲಿ "ತಿರುಪ್ಪಾವೈ" ಎಂದು ಪ್ರಖ್ಯಾತವಾಗಿವೆ.ತಮಿಳಿನ ಹನ್ನೆರಡು ಆಳ್ವಾರರಲ್ಲಿ ಈ ವಿಷ್ಣುಚಿತ್ತನೂ,ಆಂಡಾಳಮ್ಮನೂ ಮಹಾವ್ಯಕ್ತಿತ್ವಗಳಾಗಿ ಸ್ಥಾನ ಪಡೆದಿದ್ದಾರೆ.ರಾಯನು ಈ ಚಿಕ್ಜ ಕಥೆಯ ಎಳೆಯನ್ನಿಟ್ಟುಕೊಂಡು, ಸಮುಚಿತ ಘಟನೆಗಳ ರಕ್ತಮಾಂಸವನ್ಬು ತುಂಬಿ,ಜೀವಂತ ದೃಶ್ಯ ಕಾವ್ಯವೊಂದನ್ನು ರಚಿಸಿದ್ದಾನೆ.
ಉತ್ಪ್ರೇಕ್ಷೆ, ಉಪಮಾ ಅಲಂಕಾರಗಳು ಕಾವ್ಯಕ್ಕೆ ಕಳೆಯನ್ನು ತಂದಿವೆ.ಹೀಗೆ ವಿಷ್ಣುಚಿತ್ತ ಹಾಗೂ ಆಂಡಾಳಮ್ಮ ಇವರಿಬ್ಬರ ಚರಿತ್ರೆಯನ್ನು ೭ ಆಶ್ವಾಸಗಳಲ್ಲಿ ಪ್ರೌಢ ಮಹಾಕಾವ್ಯವಾಗಿ ಬರೆಯಲು ಪ್ರೇರೇಪಿಸಿದ್ದೇ ಕನಸಿನಲ್ಲಿ ದರ್ಶನಗೈದು ಆಶೀರ್ವದಿಸಿದ ತನ್ನ ಆರಾಧ್ಯ ದೈವ ಭಗವಾನ್ ವಿಷ್ಣು ಎಂದು ಭಕ್ತಿಯಿಂದ ಸ್ಮರಿಸಿಕೊಳ್ಳುತ್ತಾನೆ. "ವೀರನಾರಾಯಣನೇ ಕವಿ, ಲಿಪಿಕಾರ ಶ್ರೀಕೃಷ್ಣದೇವರಾಯ "ಎಂದು ಕುಮಾರವ್ಯಾಸನಂತೆ ವಿನಮ್ರತೆಯನ್ನೂ ಮೆರೆಯುತ್ತಾನೆ.

                                                      (ಮುಂದುವರೆಯುವುದು...)

Saturday 13 October 2018

"ಶೀಲಾಗ್ನಿ"

"ಶೀಲಾಗ್ನಿ"

ಬೆತ್ತಲಾದವು ದೊಡ್ಡವರ
ಹೆಬ್ಬಯಕೆಗಳು!
ಕಳಚಿದವು ಧೀಮಂತರ
ಮುಖವಾಡಗಳು!
ಕ್ರಾಂತಿಯನೆಬ್ಬಿಸಿದೆ 
ಜಗದಲಿ ಮೀ ಟೂ
ಹೊರಬೀಳುತಿವೆ
ಎಲ್ಲೆಲ್ಲೋ ನಡೆದ ಮೀಟು
ಬೀಳುತಿವೆ ಖ್ಯಾತರಿಗೆ 
ಏಟಿನ ಮೇಲೇಟು
ಕೇಳಲೆಷ್ಟು ಘೋರವದು
'ಕಲೆಗಾಗಿ ಪಲ್ಲಂಗ'
ಮಾಡದಿರು ಓ ಮನುಜ
ಸೀಮೋಲ್ಲಂಘನ
ಜಾರುತಿವೆ ನಾರುತಿವೆ
ಲಯ ತಪ್ಪಿದ ಹೆಜ್ಜೆಗಳು
ಹಿಂಸಿಸುತಿವೆ ಗತಕಾಲದ 
ದೌರ್ಜನ್ಯದ ಬಾಹುಗಳು
ಇರಿಯುತಿವೆ ಅವಿತು ಹೂತು
ಹೋದ  ಮಾನಭಂಗಗಳು
ಸಾಕೆನಿಸಿದೆ ಕಾಲಗರ್ಭಕೆ
ಹೊತ್ತು ಹೆತ್ತು ಮುಚ್ಚಿ ಸಾಕಿ
ಎದ್ದಿದೆ ಧೂಳು ಕೊಡವಿ
ಅಕ್ಷೋಹಿಣಿ ಮಹಾಸೈನ್ಯ
ಕಾಯುತಿದೆ ಆಕ್ರೋಶದಿ
ಯಾರದಿದೆಯೊ ಬಲಿ ಸರದಿ
ರಣರಂಗದಿ ಬೆಂಕಿಯುಗುಳಿ
ಉರಿಯುತಿದೆ ಧಗಧಗಿಸಿ
ಮನದೊಳಗಣ ಆರದ ಬೆಂಕಿ!
ಕುಣಿಯುತಿದೆ ಶಸ್ತ್ರ ಹಿಡಿದು
ಚಂಡಿಯಂತೆ ಬಲೆ ಬೀಸಿ
ಚಾಮುಂಡಿಯಂತೆ ನೆತ್ತರು
ಶೀಲ ತ್ರಿಶೂಲ ಹಿಡಿದು
ಇನ್ನಾದರೂ ಸಿಗಲಿ ಮುಕ್ತಿ 
ನೊಂದು ಬೆಂದ ನೋವುಗಳಿಗೆ
ಮುದುಡಿಹೋದ ಆಕ್ರಂದನಗಳಿಗೆ
ಎಷ್ಟೋ ಅಹಲ್ಯೆಯರ
ಬೇಯುತಿರುವ ಹೃದಯಗಳಿಗೆ...


Wednesday 3 October 2018

"೧೫೦ ರ ಗಾಂಧಿ ಜೀವನ ಸಂದೇಶವಾಗಿ...."

"೧೫೦ ರ ಗಾಂಧಿ ಜೀವನ ಸಂದೇಶವಾಗಿ...."
        ಗಾಂಧಿ ಎಂಬ 'ಸತ್ಯ'ವನ್ನು ,ಬಾಪು ಎಂಬ 'ಅಹಿಂಸೆ'ಯನ್ನು, 'ಮಹಾತ್ಮಾ 'ಎಂಬ 'ಶಾಂತಿ'ಯನ್ನು ನಾವು ಅನುಸರಿಸಲಾಗುತ್ತಿಲ್ಲವೆಂಬುದಕ್ಕೆ ಭಾರತ ಮಾತೆಯ ಕಿರೀಟ 'ಜಮ್ಮು ಕಾಶ್ಮೀರ'ದಲ್ಲಿ ಸದಾ ಕೇಳಿಬರುತ್ತಿರುವ ಗುಂಡಿನ ಮೊರೆತ, ಬಾಂಗ್ಲಾದ ಗಡಿಯಲ್ಲಾಗುತ್ತಿರುವ ತಗಾದೆಗಳು, ದಲೈಲಾಮಾರಂಥವರ ಹತ್ಯೆಗೆ ನಡೆಯುತ್ತಿರುವ ಸಂಚುಗಳು, ರೈತರ ಆತ್ಮಹತ್ಯೆಗಳು, ನೇಗಿಲಯೋಗಿಯ ಪ್ರತಿಭಟನೆಗಳು, ನಮ್ಮ ನೆರೆಹೊರೆಯಲ್ಲಾಗುತ್ತಿರುವ ಮರ್ಯಾದಾ ಹತ್ಯೆಗಳು,ಅತ್ಯಾಚಾರಗಳು,ನಕ್ಸಲ್ ದಾಳಿಗಳು  ಜ್ವಲಂತ ನಿದರ್ಶನಗಳಾಗಿವೆ. ಅದಕ್ಕಾಗಿಯೇ ಜಗತ್ತಿನ ಪ್ರಸಿದ್ಧ ವಿಜ್ಞಾನಿ 'ಐನ್ ಸ್ಟೀನ್' ರಕ್ತ ಮಾಂಸಗಳಿಂದ ತುಂಬಿದ ಇಂತಹ ಮಾನವತಾವಾದಿಯೊಬ್ಬ ಈ ಭೂಮಿಯ ಮೇಲೆ ನಡೆದಾಡಿದ್ದ ಎಂಬುದನ್ನು ಮುಂದಿನ ಪೀಳಿಗೆ ನಂಬಲಿಕ್ಕಿಲ್ಲ " ಎಂದು ಭವಿಷ್ಯವನ್ನು ಕಣ್ಣೆದುರಿಗೆ ಕಂಡಂತೆ ಬಣ್ಣಿಸಿದ್ದರು; ಗಾಂಧಿಯವರನ್ನು ಈ ಜಗದ ವಿಸ್ಮಯವೆಂದು ಗುರುತಿಸಿದ್ದರು. ಹೌದು, ನಾವು ಅದ್ಬುತವೆಂದು ಕೊಂಡಾಡುವ ಗಾಂಧೀಜಿಯನ್ನು ನಮ್ಮದೇ ಮನೆಯ ಹಿರಿಯಜ್ಜನೆಂದು  ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
 ಗಾಂಧೀಜಿಯನ್ನು ನಾವು ದೇವಾಲಯದ ಗರ್ಭಗುಡಿಯಲ್ಲಿಟ್ಟು ಆರಾಧಿಸುತ್ತಿದ್ದೇವೆ.ನಗರದ   ವೃತ್ತಗಳಲ್ಲಿ,  ಗಲ್ಲಿಗಳಲ್ಲಿ ಕಂಚಿನ ಅಥವಾ ಶಿಲೆಯ ಮೂರ್ತಿಯನ್ನಾಗಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದೇವೆ.ವರುಷಕ್ಕೊಮ್ಮೆ  ಜಯಂತಿಯಂದು ಅವನ ಮುಂದೆ ತಲೆಬಾಗಿ ಪುಷ್ಪಮಾಲೆ ಸಮರ್ಪಿಸಿ,  "ರಘುಪತಿ ರಾಘವ ರಾಜಾರಾಮ್......ಎಂದು ಭಜಿಸಿ ನಮಿಸುತ್ತಿದ್ದೇವೆ. ಇದನ್ನು ಹೊರತುಪಡಿಸಿ ಗಾಂಧೀಜಿಯನ್ನು ಪ್ರತಿನಿತ್ಯ ನಾವು ಬದುಕಲಾಗುತ್ತಿಲ್ಲ. ಬಾಪು, ತಾತ ಎಂದು ಪುಟ್ಟ ಮಕ್ಕಳ  ಎದೆಯೊಳಗೆ ಗಾಂಧಿಯನ್ನು ಇಳಿಸಲು ಪ್ರಯತ್ನಿಸುವ ನಾವು ನಮ್ಮದೇ ಹೃದಯದೊಳಗೆ ಈ ತಾತನನ್ನು ಅರಿವನ್ನಾಗಿ ಬಿಟ್ಟುಕೊಳ್ಳಲು ಮರೆಯುತ್ತೇವೆ.ಈ ವೈರುಧ್ಯವೇ ಗಾಂಧಿಯನ್ನು ನಮ್ಮಿಂದ ದೂರವಾಗಿಸುತ್ತಿದೆ. ನಮ್ಮ ದೇಶದ ಜನಸಂಖ್ಯೆಯಷ್ಟೇ ಅವರವರ ಭಾವಕ್ಕೆ ತಕ್ಕಂತೆ ಕೋಟಿಗಟ್ಟಲೇ ಗಾಂಧಿಯರನ್ನು ನಾವು ನಮ್ಮಮನಮನೆ ಗಳಲ್ಲಿ ಸೃಷ್ಟಿಸಿಕೊಂಡಿದ್ದೇವೆ. ಆದರೂ ಗಾಂಧೀಜಿ ನಮ್ಮ ಬದುಕನ್ನು ಆವರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ದೇಶದಲ್ಲಿ ಗಾಂಧಿಯವರಷ್ಟು ಚರ್ಚೆಗೊಳಗಾದ, ಚರ್ಚೆಗೊಳಗಾಗುತ್ತಿರುವ ವ್ಯಕ್ತಿತ್ವ ಬೇರೊಂದಿಲ್ಲವೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.
ಗಾಂಧೀಜಿಯವರು ಯಾವುದನ್ನು ತಮಗೆ ನೋವು ಕೊಡುವ ಸಂಗತಿ ಎಂದು  ವಿರೋಧಿಸಿದ್ದರೊ, ನಾವು ಅದನ್ನೇ ಇಂದು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಮಹಾತ್ಮಾ,ಪರಮಾತ್ಮ, ದೇವರು ಎಂದು  ಗಾಂಧಿಯವರನ್ನು ಬಗೆ ಬಗೆಯ    ತೃಪ್ತಿಕರ ಹೆಸರುಗಳಿಂದ  ಆರಾಧಿಸಿ, ಮಾಡಬೇಕಾದ ಕರ್ತವ್ಯಗಳಿಂದ,ಕೈಗೊಳ್ಳಬೇಕಾದ ಕಾರ್ಯಗಳಿಂದ ವಿಮುಖರಾಗುತ್ತಿದ್ದೇವೆ.
ಗಾಂಧಿಯೇ ಬೇರೆ ಈ ನಮ್ಮ ಕಾಲದ ಜೀವನವೇ ಬೇರೆ ಎಂದುಕೊಂಡು ಕಾಲನ ಕುದುರೆಯೇರಿ ಹೊರಟಿದ್ದೇವೆ.ಇವೆರಡರ ಮಧ್ಯದ ಅಂತರ ಕಡಿಮೆಯಾಗದ ಹೊರತು  ನಮ್ಮ ಜೀವನದ ಎಷ್ಟೋ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲಾರದು.ಅಂದರೆ ಈಗಲೂ ಗಾಂಧಿ ನಮಗೆಷ್ಟು ಪ್ರಸ್ತುತವಾಗಿದ್ದಾರೆ ಎಂಬುದನ್ನು ಅಂತರಾವಲೋಕನದ ಮೂಲಕ ಕಂಡುಕೊಳ್ಳಬೇಕಾಗಿದೆ. ನಾವು ನಿಜದಲ್ಲಿ ಗಾಂಧಿಯವರನ್ನಾಚರಿಸಬೇಕಾಗಿದೆ;
ಗಾಂಧಿಯವರ ಸರಳತೆಯನ್ನು ಬದುಕಬೇಕಾಗಿದೆ;ಅವರ ಉದಾತ್ತ ಚಿಂತನೆಯನ್ನು ಜೀವಿಸಬೇಕಾಗಿದೆ;
ನಾವು ಇತ್ತೀಚೆಗೆ  ಎಲ್ಲ ಮಹಾಪುರುಷರ ಹಬ್ಬಗಳನ್ನು ಅವರ ಹುಟ್ಟಿಗನುಗುಣವಾಗಿ ಆಯಾ ಜಾತಿ ಮತ ಪಂಗಡಗಳಿಗೆ ಮಾತ್ರ ಜನನಾಯಕರನ್ನಾಗಿ ಸೀಮಿತಗೊಳಿಸಿ  ವೈಭವೋಪೇತವಾಗಿ ಅವರ ಭಾವಚಿತ್ರಗಳನ್ನು  ಮೆರೆಸುವುದರ ಮೂಲಕ ನಮ್ಮ ಬಾಹ್ಯ ರಾಜಕಾರಣಕ್ಕೆ ತೃಪ್ತಿಯಾಗುವ  ಹಾಗೆ ಆಚರಿಸಿ,ಕುಣಿದು ಕುಪ್ಪಳಿಸುವ ಹೊಸ ಪರಂಪರೆಗೆ ನಾಂದಿ ಹಾಡಿದ್ದೇವೆ! ಕೆಲವು ಹಿರಿಯರಿಗಂತೂ ಈಗೀಗ ತಮ್ಮ ಜಾತಿಯಲ್ಲಿ ಆಗಿಹೋದ ಸಾಧಕರ ಬಗ್ಗೆ ತಿಳಿದುಕೊಳ್ಳುವಂತಾಗಿದೆ  ಅಥವಾ ಈ ಮಹಾಪುರುಷರು ತಮ್ಮ ಜಾತಿಯವರೆ ?  ಎಂದು ಆಶ್ಚರ್ಯ ಪಡುವಂತಾಗಿದೆ!ಆದರೆ ಇಲ್ಲಿಯವರೆಗೆ ಜಾತ್ಯಾತೀತ ಗಾಂಧಿಯವರಿಗೆ ಮಾತ್ರ ಈ ಸ್ವಜಾತಿ ಪೆಡಂಭೂತ ಮೆತ್ತಿಕೊಂಡಿಲ್ಲವೆಂಬುದೇ ಸಮಾಧಾನದ ಸಂಗತಿ.
ಹಾಗಾದರೆ ಗಾಂಧಿ ನಮಗೆಷ್ಟು ಪ್ರಸ್ತುತ ಎಂಬುದನ್ನು ನಿಕಷಕ್ಕೊಳಪಡಿಸುವುದಾದರೆ,ಗಾಂಧಿ ನಮ್ಮ ಜೀವನ ಪಥವಾಗಬೇಕು; ನಮ್ಮ ಕ್ಷಣ ಕ್ಷಣದ ಕರ್ಮಕಾರಣಗಳಲ್ಲಿ ಒಂದಾಗಬೇಕು. ನಾವು ನಡೆಯುವ ಪ್ರತಿ ಹೆಜ್ಜೆಯಲ್ಲಿಯೂ ಗಾಂಧಿ ನಡೆದ ದಾರಿಯ ನೆನಪುಗಳಿರಬೇಕು.  ಪ್ಲೇಟೋ, ಸಾಕ್ರಟೀಸ್,ಅರಿಸ್ಟಾಟಲ್ ರಂಥವರು  ವೈಚಾರಿಕತೆಯನ್ನು ವೈಜ್ಞಾನಿಕತೆಯನ್ನು ಬರೆದು ತತ್ವಜ್ಞಾನಿಗಳಾದರೆ, ಗಾಂಧಿ ವೈಚಾರಿಕತೆಯ ಮೂಲ ಸತ್ವಗಳಾದ  ಸತ್ಯ ,ಶಾಂತಿ, ಅಹಿಂಸೆಗಳನ್ನೇ  ಬದುಕಿ ತೋರಿಸಿದ ದಾರ್ಶನಿಕರಾಗಿದ್ದಾರೆ.ನನ್ನ ಬಾಲ್ಯದ ದಿನಗಳಲ್ಲಿ ನನ್ನದೇ ಮನೆಯ ಅಜ್ಜನಂತೆ ಕೇಳಿದ್ದ ಗಾಂಧಿಯಲ್ಲಿ ಇಂದು ಬದುಕಿನ ತತ್ವಜ್ಞಾನಿಯನ್ನು ಕಾಣುತ್ತಿದ್ದೇನೆ.
ಪಿ .ಲಂಕೇಶ್ ರವರು ತಮ್ಮ  "ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ "ಎಂಬ ಲೇಖನದಲ್ಲಿ "ಬುದ್ಧನ ನುಡಿಮುತ್ತುಗಳನ್ನು ಹೀಗೆ ಉಲ್ಲೇಖಿಸುತ್ತಾರೆ -" ಜಗತ್ತಿಗೆ ನಾನೇ ಕೊನೆಯ ಬುದ್ಧನಲ್ಲ.ನನ್ನ ಸರಳ ತತ್ವ ಪರಿಪಾಲನೆಯಿಂದ ಯಾರು ಬೇಕಾದರೂ ಬುದ್ಧನಾಗಬಹುದು" ಎಂದು ಸರಳ ಸತ್ಯವನ್ನು ಜಗತ್ತಿಗೆ ಅರುಹಿದನು.ಹೀಗೆಂದು  ಬುದ್ಧ ಮಾರ್ಗದೋರಿದರೂ,ನಾವು ಮಾತ್ರ ಬುದ್ಧನನ್ನು ಪರಮದೈವ ವೆಂದು ಆರಾಧಿಸಿ ನಮ್ಮಿಂದ ದೂರವಾದ  ದೈವಪೀಠದಲ್ಲಿ ಶಿಲಾಮೂರ್ತಿಯಾಗಿಯೋ ಅಥವಾ ಲೋಹಮೂರ್ತಿಯಾಗಿಯೋ ಪ್ರತಿಷ್ಠಾಪಿಸುವಲ್ಲಿ ಮಾತ್ರ ನಮ್ಮ ಕರ್ತವ್ಯ ಮುಗಿಯಿತೆಂದು ನಿರಾಳರಾಗಿದ್ದೇವೆ. ಯಾರು ಮೂರ್ತಿ ಆರಾಧನೆಯನ್ನು ಅರ್ಥಹೀನವೆಂದು ವಿರೋಧಿಸಿದ್ದರೋ ಅವರನ್ನೇ  ಕಲಾಮೂರ್ತಿಗಳನ್ನಾಗಿ  ಗಲ್ಲಿ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿ ವರುಷಕ್ಕೊಮ್ಮೆ ಆರಾಧಿಸಿ ಆ ಮಹನೀಯರು ಬದುಕಿದ ತತ್ವಾಚರಣೆಯನ್ನು ಮರೆಯುತ್ತಿದ್ದೇವೆ. ಡಾ.ರಾಜಶೇಖರ ಮಠಪತಿಯವರು ತಮ್ಮ 'ಗಾಂಧಿ' ಕೃತಿಯಲ್ಲಿ "ಗಾಂಧೀಜಿಯವರನ್ನು ಮಹಾತ್ಮ ನೆಂದು ನಮ್ಮಿಂದ ದೂರ ಮಾಡಿಕೊಳ್ಳುವುದಕ್ಕಿಂತ ನಮ್ಮಂತೆಯೇ ರಕ್ತ ಮಾಂಸ, ನೋವು, ನಲಿವು,ಹಠ, ದ್ವಂದ್ವ, ಮೌನ, ಕೋಪ, ಆನಂದಗಳನ್ನೊಂಡ  ಸರಳ ಮನುಷ್ಯನೆಂದು ಸ್ವೀಕರಿಸಿ , ನಮ್ಮ ಬದುಕುಗಳಲ್ಲಿ ನಿತ್ಯಸತ್ಯನನ್ನಾಗಿ ಆಚರಿಸಿ, ಹತ್ತಿರವಾಗಿಸಿಕೊಳ್ಳಬೇಕಾಗಿದೆ" ಎನ್ನುತ್ತಾರೆ.
         ಅಕ್ಕನ ಸಾಲುಗಳಲ್ಲಿನ  ನೆಲದ ಮರೆಯ ನಿಧಾನದಂತೆ, ನಮ್ಮ ಭಾರತೀಯರ ಭಾವದ ಮರೆಯ ಬ್ರಹ್ಮನಾದವರು ಗಾಂಧೀಜಿ. ಗಾಂಧಿಯವರ ಪ್ರಕಾರ ಯಾವುದು ದೇಸಿ ಸಂಸ್ಕೃತಿಯ ಪರಮೋಚ್ಚ ಸಂಕೇತವಾಗಿತ್ತೊ,ಯಾವುದು ಸ್ವಾವಲಂಬಿ ಬದುಕಿನ ಆಧಾರ ಸ್ತಂಭವಾಗಿತ್ತೊ ,ಯಾವುದು ಭಾರತೀಯರ ಎದೆಗಳಲ್ಲಿ ಬೆಚ್ಚಗಿನ ಭಾವವನ್ನು ಮೂಡಿಸಿ ,ಬ್ರಿಟಿಷ್ ಸಂಸ್ಕೃತಿಯ ವಿರುದ್ಧದ ಹೋರಾಟಕ್ಕೊಂದು ಕಿಡಿಯನ್ನು ಹೊತ್ತಿಸಿತ್ತೊ, ಖಾದಿಯನ್ನು ಉತ್ಪಾದಿಸಿ  ಅಂದಿನ  ಕೈಗಾರಿಕೆಗಳಿಗೆಲ್ಲ ಸೂರ್ಯನಂತಿರಬೇಕಾಗಿತ್ತೊ, ಅದೇ "ಚರಕ"ವಿಂದು ನಮ್ಮದೇ ಮನೆಯ ಮೂಲೆಯೊಂದರಲ್ಲಿ   ತನ್ನ ದೇಹದ ಮೂಳೆಗಳನ್ನೆಲ್ಲ ಮುರಿದುಕೊಂಡು ,ಉಸಿರಿಲ್ಲದೆ ಕ್ಷಯರೋಗದಿಂದ ಕ್ಷೀಣಿಸಿ, ಜೇಡಗಳಿಗೆ ಆಶ್ರಯಾದಾತನಾಗಿ, ಪಾಳುಬಿದ್ದಿರುವ ಎದೆಗೂಡಿನಂತೆ ಅವಸಾನದ ಅಂಚಿನಲ್ಲಿರುವ ಪಳೆಯುಳಿಕೆಯಾಗಿದೆ.  ಹೀಗೆ ಕೆಲವು ಮನೆಗಳ ನಿರುಪಯುಕ್ತ ಸರಕು ಕೋಣೆಯಲ್ಲಿ ಮೈಮುರಿದುಕೊಂಡು ಅನಾಥವಾಗಿ ಬಿದ್ದಿರುವ ಚರಕ ಮತ್ತು ಅದರ ತಾಯಿಯಾದ ಕೈಮಗ್ಗದ ಅವಶೇಷಗಳು ವೈಭೋಗದ ಇಂದಿನ  ಆಧುನಿಕ ಜೀವನದಲ್ಲಿ ಗಾಂಧಿಯವರ ದೇಸಿ ಸಂಸ್ಕೃತಿ, ಮೂಲಶಿಕ್ಷಣ ಹಾಗೂ ಗುಡಿಕೈಗಾರಿಕೆಗಳು  ಅನುಭವಿಸುತ್ತಿರುವ ದುಸ್ಥಿತಿಯ ಪ್ರತೀಕವಾಗಿವೆ.
ಒಂದು ಕಾಲದಲ್ಲಿ ನನ್ನವ್ವನ ಕೈಯ್ಯಲ್ಲಿ ತಿರುಗುತ್ತಾ ನೂಲನ್ನು ಸುತ್ತುತ್ತಿದ್ದ  ಗಾಂಧಿ ಚರಕ ತನ್ನ ಪೂರ್ವದ ಜೀವಕಳೆಯನ್ನು ಕಳೆದುಕೊಂಡು ಬೇಡವಾದ ಕೊರಡಾಗಿದೆ.  ಇಂದು ಕೈಮಗ್ಗದ ಸ್ಥಾನವನ್ನು ವಿದ್ಯುತ್ ಮಗ್ಗಗಳು ಆವರಿಸಿಕೊಂಡಿದ್ದರೂ  ಅವುಗಳ ಸ್ಥಿತಿಯೇನೂ ಭಿನ್ನವಾಗಿಲ್ಲ. ನೇಯ್ಗೆಯ ಕುಪ್ಪಸದ  ಖಣಗಳಿಗೆ ಕರ್ನಾಟಕದಲ್ಲಿ ಅಷ್ಟೇ ಏಕೆ ಮಹಾರಾಷ್ಟ್ರದಂತಹ ಹೊರರಾಜ್ಯಗಳಲ್ಲಿಯೂ ಹೆಸರುವಾಸಿಯಾಗಿರುವ ನನ್ನೂರು  ಗುಳೇದಗುಡ್ಡ ಸೇರಿದಂತೆ ಕೆರೂರು, ಅಮೀನಗಡ, ಇಲಕಲ್, ಬನಹಟ್ಟಿ, ಮಹಾಲಿಂಗಪುರ,ಗಜೇಂದ್ರಗಡ ಮುಂತಾದ ಪಟ್ಟಣಗಳು ನೇಕಾರಿಕೆಯ ಗುಡಿ ಸಂಸ್ಕೃತಿಯನ್ನುಳಿಸಿಕೊಳ್ಳಲು ಹೆಣಗಾಡುತ್ತಿವೆ. ನಾಡಿನ ಖ್ಯಾತ ರಂಗಕರ್ಮಿ ಪ್ರಸನ್ನ ರವರು ಚರಕ ಸಂಸ್ಕೃತಿಯ ರಕ್ಷಣೆಗಾಗಿ ಪಣತೊಟ್ಟು, ಸತ್ಯಾಗ್ರಹ ಗಳ ಮೂಲಕ ಸರಕಾರವನ್ನೆಚ್ಚರಿಸುತ್ತಾ ಗಾಂಧಿ ಮಾರ್ಗ
ದಲ್ಲಿ ಅಚಲವಾಗಿ ನಂಬಿಕೆಯಿಟ್ಟು ಮುನ್ನಡೆಯುತ್ತಿದ್ದಾರೆ.  ಖಾದಿಯನ್ನು ಉತ್ಪಾದಿಸುತ್ತಾ ದೇಸಿ ಸಂಸ್ಕೃತಿಯ ಉಳಿವಿಗಾಗಿ ನಾಡಿನಾದ್ಯಂತ  ಸಾಮಾಜಿಕ  ಮೌನಕ್ರಾಂತಿಯನ್ನು ಹುಟ್ಟುಹಾಕುವುದರ ಮೂಲಕ ಸಂಚಲನವನ್ನುಂಟುಮಾಡಿದ್ದಾರೆ. ಜನರಿಂದ ತುಂಬಿ ತುಳುಕಬೇಕಾಗಿದ್ದ, ಗಾಂಧೀಜಿಯವರ ಸ್ವಾವಲಂಬಿ ಬದುಕಿನ ಮಾರ್ಗವಾಗಿದ್ದ ಖಾದಿ ಗ್ರಾಮೋದ್ಯೋಗ ಕೇಂದ್ರಗಳು ಸೊರಗುತ್ತಿವೆ. ಈ ಕೇಂದ್ರಗಳನ್ನು ಬದಲಾದ ಕಾಲಘಟ್ಟಕ್ಕನುಗುಣವಾಗಿ ಪುನಶ್ಚೇತನಗೊಳಿಸಬೇಕಾದ ಅಗತ್ಯವಿದೆ.


 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...