Total Pageviews

Wednesday 31 October 2018

ಕನ್ನಡದ "ಆಮುಕ್ತಮಾಲ್ಯದ"- ಡಾ.ನಿರುಪಮಾ
ನಮ್ಮ ನಾಡು ೬೩ ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂಭ್ರಮದ ಹೊತ್ತಿನಲ್ಲಿ ನನ್ನ ಕೈಗೊಂದು ಮಹತ್ವದ ಕೃತಿ ದಕ್ಕಿದ್ದು, ಅನುಪಮ ಕ್ಷಣಗಳನ್ನು ಮನದುಂಬಿಕೊಳ್ಳಲು ಕಾರಣವಾಯಿತು.ನಮ್ಮ ನಾಡು ಕಂಡ ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಅನ್ವರ್ಥವಾಗಿದ್ದಂತಹ, ನಮ್ಮ ಶ್ರೀಮಂತ ನಾಡು ನುಡಿ ಸಂಸೃತಿಯ ಪರಂಪರೆಗೆ ಹೆಸರಾಗಿದ್ದ, 'ಪೇಯಸ್' ರಂತಹ ವಿದೇಶಿ ಯಾತ್ರಿಕರಿಂದ 'ಸುವರ್ಣಯುಗದ' ಸಾಮ್ರಾಜ್ಯವೆಂದು ಬಣ್ಣಿಸಲ್ಪಟ್ಟು ಧೀಮಂತವಾಗಿ ಬೆಳಗಿದ 'ವಿಜಯನಗರ ಸಾಮ್ರಾಜ್ಯ' ದ ಗತವೈಭವವನ್ನು ಸಾರುವ ಕೃತಿ ಶ್ರೀ ಕೃಷ್ಣದೇವರಾಯ ವಿರಚಿತ "ಆಮುಕ್ತಮಾಲ್ಯದ ".ಯಾವ ರಾಜ್ಯದಲ್ಲಿ ಸುಭದ್ರ ಆಡಳಿತವಿರುತ್ತದೋ ಅಲ್ಲೊಂದು ಸಮೃದ್ಧ ಸಂಸ್ಕೃತಿ ಮೈದಳೆಯುತ್ತದೆ ಎಂಬುದಕ್ಕೆ ನಮ್ಮ ನಾಡನ್ನಾಳಿದ ಕದಂಬರು,ಚಾಲುಕ್ಯರು,ಹೊಯ್ಸಳರು,ರಾಷ್ಟ್ರಕೂಟರು ಹಾಗೂ ವಿಜಯನಗರ ಸಾಮ್ರಾಜ್ಯಗಳೇ ಅತ್ಯುತ್ತಮ  ನಿದರ್ಶನಗಳಾಗಿವೆ. ಅಂತಹ ಒಂದು ಅಭೂತಪೂರ್ವ ಸಂಸ್ಕೃತಿಯ ತವರಾಗಿದ್ದ ವಿಜಯನಗರ ಸಾಮ್ರಾಜ್ಯ ಹೆಸರಿಗೆ ತಕ್ಕಂತೆ ಅನೇಕ  ವಿಜಯಗಳ ಸರಮಾಲೆಗಳನ್ನೇ ಕೊರಳಿಗೆ ಧರಿಸಿಕೊಂಡು, ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬಹುದಾದ ಶಿಲ್ಪ ಕಲೆ,ಸಾಹಿತ್ಯ, ಸಂಗೀತ, ನೃತ್ಯ,ವಾಸ್ತುಶಿಲ್ಪ ದಂತಹ ಲಲಿತಕಲಾಕ್ಷೇತ್ರಗಳೆಂಬ ಗರಿಗಳಿಂದ ಅಲಂಕೃತಗೊಂಡು ಅದರ ಕೀರ್ತಿಕಿರೀಟವು ಕಂಗೊಳಿಸಿ ಮೆರೆದಿದೆ.ಇಂತಹ ಒಂದು ಮಹೋನ್ನತ ಸಾಮ್ರಾಜ್ಯ ಮೈದಾಳಿದ ಪುಣ್ಯಭೂಮಿಯಲ್ಲಿ ನಾವಿದ್ದೇವೆ ಎಂಬುದೇ ಎಲ್ಲ ಕನ್ನಡಿಗರಿಗೆ ಧನ್ಯತೆಯೊಂದಿಗೆ ಸಾರ್ಥಕತೆ ಮತ್ತು ಅಭಿಮಾನವನ್ನು ಮೂಡಿಸುವ ಸಂಗತಿಯಾಗಿದೆ.
ಬಾಲ್ಯದಲ್ಲಿಯೇ ತನ್ನ ಸಹೋದರ ವೀರನರಸಿಂಹನ ದುಷ್ಟತನದಿಂದಾಗಿ ತನ್ನ ಕಣ್ಣುಗಳನ್ನು ಕೀಳಿಸಿಕೊಂಡು ಅನಾಮಿಕನಂತೆ,ಅನಾಥನಂತೆ  ಪ್ರಾಣ ಕಳೆದುಕೊಳ್ಳಬೇಕಾಗಿದ್ದ ತುಳುವ ವಂಶದ ಶ್ರೀ ಕೃಷ್ಣದೇವರಾಯನು, ನಿಷ್ಠಾವಂತ ಮಂತ್ರಿ ಸಾಳ್ವ ತಿಮ್ಮರಸನ ಚಾಣಾಕ್ಷತೆಯಿಂದಾಗಿ ೧೫೦೯ ಆಗಸ್ಟ್ ೭ ರಂದು ಪಟ್ಟವೇರಿ ನಾಡಪ್ರಭುವಾಗಿ ಮೆರೆಯುತ್ತಾನೆ.ಕವಿರಾಜಮಾರ್ಗಕಾರನು
         "ಸುಭಟರ್ಕಳ್ ಕವಿಗಳ್ ಸು
          ಪ್ರಭುಗಳ್ ಚೆಲ್ವರ್ಕಳಭಿಜನರ್ಕಳ್ ಗುಣಿಗಳ್
          ಅಭಿಮಾನಿಗಳತ್ಯುಗ್ರರ್
          ಗಂಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್"
  ಎಂದು ಹೇಳುವ ಈ ಪದ್ಯದಲ್ಲಿನ ಸರ್ವಗುಣಸಂಪನ್ನತೆಗೆ ಅತ್ಯುತ್ತಮ ಉದಾಹರಣೆ ಶ್ರೀಕೃಷ್ಣದೇವರಾಯ ಎಂದರೆ ಅತಿಶಯೋಕ್ತಿಯಾಗಲಾರದು. ಬಾಲ್ಯದಲ್ಲಿಯೇ ಸಂಗೀತ ಸಾಹಿತ್ಯ ಕಲೆ ಸಾಹಸ ಗಳನ್ನು ಶ್ರದ್ಧೆಯಿಂದ ಆರಾಧಿಸಿ, "ಆಂಧ್ರಕವಿತಾ ಪಿತಾಮಹ"ನೆಂದು ಬಿರುದಾಂಕಿತನಾದ ಅಲ್ಲಸಾನಿ ಪೆದ್ದಣ ಮತ್ತು ನಂದಿ ತಿಮ್ಮಣ್ಣರೊಂದಿಗೆ ಒಡನಾಟವನ್ನಿಟ್ಟುಕೊಂಡು ಬೆಳೆದು, ಕವಿಯೂ ಕಲಿಯೂ ಆಗಿ ಇತಿಹಾಸದಾಗಸದಲ್ಲಿ ತನ್ನ ಕೀರ್ತಿಚಂದ್ರನನ್ನು ಶಾಶ್ವತವಾಗಿ ನೆಲೆಗೊಳಿಸಿದವನು ಶ್ರೀಕೃಷ್ಣದೇವರಾಯ.
ತೆಲುಗು ಭಾಷೆಯ ಮಹಾಕಾವ್ಯಗಳಾದ ಅಲ್ಲಸಾನಿ ಪೆದ್ದನ ನ 'ಮನುಚರಿತ್ರೆ',ತೆನಾಲಿ ರಾಮಕೃಷ್ಣನ 'ಪಾಂಡುರಂಗ ಮಹಾತ್ಮೆ',ನಂದಿ ತಿಮ್ಮಣ್ಣನ 'ಪಾರಿಜಾತಾಪಹರಣ',ಧೂರ್ಜಟ ಕವಿಯ 'ಕಾಳಹಸ್ತಿ ಮಹಾತ್ಮೆ',ಪಿಂಗಳಿಸೂರನ 'ಕಳಾ ಪೂರ್ಣೋದಯ ' ಗಳಲ್ಲಿ  ಬಹುಪಾಲು ರಚನೆಯಾಗಿದ್ದು ಕೃಷ್ಣದೇವರಾಯನ ಸಾಹಿತ್ಯ ಮತ್ತು ಸಂಸ್ಕೃತಿಯ ಸುವರ್ಣಯುಗದಲ್ಲಿಯೇ.ಈ ಸಾಲಿಗೆ ಸೇರ್ಪಡೆಯಾದ ಮತ್ತೊಂದು ವಿದ್ವತ್ಪೂರ್ಣ ಮಹಾಕಾವ್ಯವೆಂದರೆ, ಸರಸ್ವತಿ ಕೊರಳ ಮಣಿಹಾರವಾಗಿದ್ದ ಶ್ರೀಕೃಷ್ಣದೇವರಾಯನ "ಆಮುಕ್ತಮಾಲ್ಯದ".
ತೆಲುಗು ಭಾಷೆಯ ಕೃತಿಯಾಗಿದ್ದರೂ ಮೂಲಕ್ಕೆ ಭಂಗ ಬರದಂತೆ ಸ್ವತಂತ್ರ ಕೃತಿಯೆಂಬಂತೆ ಕನ್ನಡೀಕರಿಸಿದವರು  'ಭುವನ ವಿಜಯ' ದಂತಹ ಪ್ರಮುಖ ಕಾದಂಬರಿಗಳನ್ನು ಕೊಡುಗೆಯಾಗಿ ಕೊಟ್ಟ ಕಾದಂಬರಿಗಾರ್ತಿ,ಕಥೆಗಾರ್ತಿ,ಬಹುಭಾಷಾ ವಿಶಾರದೆ,ಸಂಶೋಧಕಿಯರೂ, ಡಾ.ನಿರುಪಮಾ ಎಂದೇ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಖ್ಯಾತರಾದ ಪದ್ಮಾ ಆರ್ ರಾವ್ ರವರು. ಲೇಖಕಿಯೆರೇ ಈ ಕೃತಿಯ ಬಗ್ಗೆ ಪ್ರಸ್ತಾಪಿಸುತ್ತಾ "ಆಮುಕ್ತಮಾಲ್ಯದ "ಕೃತಿಯನ್ನು ನಿರ್ಮಲವಾದ ಮನಸ್ಸಿನಿಂದ ತಪಗೈಯ್ಯುವಂತೆ ಧ್ಯಾನಾಸಕ್ತರಾಗಿ ಓದಿದಾಗ ಮಾತ್ರ ಅದು ತನ್ನ ನಿಗೂಢ ರಹಸ್ಯಗಳನ್ನು ತೆರೆದಿಡಬಲ್ಲದು ಎಂದು ಹೇಳುತ್ತಾರೆ.ಕನ್ನಡದ ಈ ಕೃತಿಯನ್ನು ಓದುವಾಗಲೂ ನಮಗೆ ಅದೇ ಅನುಭವವಾಗುತ್ತದೆ.
ಶ್ರೀಕೃಷ್ಣದೇವರಾಯನು 'ಮದಾಲಸ ಚರಿತ್ರೆ', ಸತ್ಯಾವಧು ಪ್ರೀಣನಂ, ' ಸಕಲ ಕಥಾ ಸಾರಸಂಗ್ರಹ', 'ಜ್ಞಾನಚಿಂತಾಮಣಿ ', 'ರಸಮಂಜರಿ'  ಪ್ರೌಢಕಾವ್ಯಗಳನ್ನು ಸಂಸ್ಕೃತದಲ್ಲಿ ರಚಿಸಿದ್ದು ಇವು ಉಪಲಬ್ಧವಿಲ್ಲ. ಲಭ್ಯವಿರುವ ರಾಯನ ಏಕೈಕ ಕೃತಿ "ಆಮುಕ್ತಮಾಲ್ಯದ" ಆಗಿದೆ ."ಆಮುಕ್ತ " ಎಂದರೆ ಅಲಂಕರಿಸಿಕೊಂಡ," ಮಾಲ್ಯ" ಎಂದರೆ ಹೂ ಮಾಲೆ, "ದ "ಎಂದರೆ ಕೊಟ್ಟವಳು ಎಂದಾಗಿ ಪೂರ್ಣವಾದ ಅರ್ಥ "ಅಲಂಕರಿಸಿಕೊಂಡ ಹೂ ಮಾಲೆಯನ್ನು ಕೊಟ್ಟವಳು " ಎಂದರ್ಥವಾಗುತ್ತದೆ. ತಮಿಳಿನ ಆಳ್ವಾರರ ಕಥೆಯೊಂದು ತೆಲುಗು ಭಾಷೆಯಲ್ಲಿ ಕನ್ನಡದ ರಾಜದುರಂಧರನೂ,ಬಹುಭಾಷಾ ವಿದ್ವಾಂಸನೂ,ರಾಜನೀತಿಶಾಸ್ತ್ರಜ್ಞನೂ ಆದ ಶ್ರೀಕೃಷ್ಣದೇವರಾಯನಿಂದ ಜನ್ಮತಳೆದಿರುವುದು, ತ್ರಿಭಾಷಾ ಸೂತ್ರದಲ್ಲಿ ಪೋಣಿಸಿದ ಮಣಿಹಾರದಂತೆ ಪ್ರಕರ್ಷಿತವಾಗಿದೆ.  ಇಲ್ಲಿಯ  ಕಥೆ ಚಿಕ್ಜದಾಗಿದ್ದರೂ ಚಕ್ಕೆ,ಚೂರ್ಣ, ಮಸಾಲೆಗಳಂತಹ ಪೂರಕ ಘಟನೆಗಳೇ ಬಳಿಸಾರಿ ವಿಜೃಂಭಿಸಿವೆ. ಈ ಕಾವ್ಯದಲ್ಲಿ ಮೂರು ಕಥೆಗಳು ಪ್ರಮುಖವಾಗಿವೆ.
೧.)ಯಮುನಾಚಾರ್ಯರ ಚರಿತ್ರೆ,
೨) ಖಾಂಡಿಕ್ಯ ಕೇಶಿಧ್ವಜರ ಕಥೆ
೩) ಮಾಲದಾಸರಿ ಕಥೆ
ತಮಿಳು ದೇಶದ ವಿಲ್ಲಿಪುತ್ತೂರಿನ ವೈಷ್ಣವ ಭಕ್ತ ವಿಷ್ಣುಚಿತ್ತನ ಸಾಕುಮಗಳು "ಆಂಡಾಳಮ್ಮ "(ತಾಯಿ) ಇವಳು ತಂದೆ ಕಟ್ಟಿದ ಹೂಮಾಲೆಯನ್ನು ವ್ಯಾಮೋಹದಿಂದ ‌  ತಾನೊಂದು ಗಳಿಗೆ ಮುಡಿದ ನಂತರವೇ ದೇವರಿಗೆ ಸಮರ್ಪಿಸುತ್ತಿದ್ದಳು.ಮಗಳ ಈ ಹುಚ್ಚಾಟ  ಗೊತ್ತಾಗಿ ತಂದೆ ವಿಷ್ಣುದೇವರಿಗೆ ಮಗಳು ಮುಡಿಯದ ಹೊಸ ಮಾಲೆಯನ್ನು ತಂದು ಅರ್ಪಿಸುತ್ತಾನೆ.
ಇದರಿಂದ ತೃಪ್ತನಾಗದ ದೇವರು ಕನ್ಯೆ ಮುಡಿದ ಹೂಮಾಲೆಯೇ ಸುಮಧುರವಾದ ಪರಿಮಳಭರಿತವಾಗಿರುತ್ತದೆಂದು ಕನ್ಯೆಯು(ವಿಷ್ಣುಚಿತ್ತನ ಸಾಕುಮಗಳು) ಮುಡಿದ ಪುಷ್ಪಮಾಲೆಯನ್ನೇ ಬಯಸುತ್ತಾನೆ.ಇದರಿಂದ ಆನಂದಿತುಂದಿಲನಾಗಿ ದೇವರ ಕೃಪೆಗೆ ಪಾತ್ರಳಾದ "ಎನ್ನೈ ಆಂಡಾಳ್"(ನನ್ನ ತಾಯಿ) ಎಂದು ಮಗಳನ್ನು ಕೊಂಡಾಡುತ್ತಾನೆ.ದೇವರೇ ತನ್ನನ್ನು ಬಯಸಿರುವಾಗ ತಾನೂ ಕೂಡ ನಮ್ಮ ಚೆನ್ನಮಲ್ಲಿಕಾರ್ಜುನನೊಲಿದ ವಚನಗಾರ್ತಿ ಅಕ್ಕನಂತೆ  ಆ ದೇವರನ್ನೇ ಮದುವೆಯಾಗುತ್ತೇನೆಂದು  ವೃತವಿಡಿದು ಭಕ್ತಿಯನ್ನಾಚರಿಸಿ ಶ್ರೀರಂಗನಾಥನನ್ನೊಲಿಸಿಕೊಂಡು ಮದುವೆಯೂ! ಆಗುತ್ತಾಳೆ. ಇವಳು ದೈವಾರಾಧನೆಗೆ ಹಾಡಿದ ಗೀತೆಗಳೇ ತಮಿಳಿನಲ್ಲಿ "ತಿರುಪ್ಪಾವೈ" ಎಂದು ಪ್ರಖ್ಯಾತವಾಗಿವೆ.ತಮಿಳಿನ ಹನ್ನೆರಡು ಆಳ್ವಾರರಲ್ಲಿ ಈ ವಿಷ್ಣುಚಿತ್ತನೂ,ಆಂಡಾಳಮ್ಮನೂ ಮಹಾವ್ಯಕ್ತಿತ್ವಗಳಾಗಿ ಸ್ಥಾನ ಪಡೆದಿದ್ದಾರೆ.ರಾಯನು ಈ ಚಿಕ್ಜ ಕಥೆಯ ಎಳೆಯನ್ನಿಟ್ಟುಕೊಂಡು, ಸಮುಚಿತ ಘಟನೆಗಳ ರಕ್ತಮಾಂಸವನ್ಬು ತುಂಬಿ,ಜೀವಂತ ದೃಶ್ಯ ಕಾವ್ಯವೊಂದನ್ನು ರಚಿಸಿದ್ದಾನೆ.
ಉತ್ಪ್ರೇಕ್ಷೆ, ಉಪಮಾ ಅಲಂಕಾರಗಳು ಕಾವ್ಯಕ್ಕೆ ಕಳೆಯನ್ನು ತಂದಿವೆ.ಹೀಗೆ ವಿಷ್ಣುಚಿತ್ತ ಹಾಗೂ ಆಂಡಾಳಮ್ಮ ಇವರಿಬ್ಬರ ಚರಿತ್ರೆಯನ್ನು ೭ ಆಶ್ವಾಸಗಳಲ್ಲಿ ಪ್ರೌಢ ಮಹಾಕಾವ್ಯವಾಗಿ ಬರೆಯಲು ಪ್ರೇರೇಪಿಸಿದ್ದೇ ಕನಸಿನಲ್ಲಿ ದರ್ಶನಗೈದು ಆಶೀರ್ವದಿಸಿದ ತನ್ನ ಆರಾಧ್ಯ ದೈವ ಭಗವಾನ್ ವಿಷ್ಣು ಎಂದು ಭಕ್ತಿಯಿಂದ ಸ್ಮರಿಸಿಕೊಳ್ಳುತ್ತಾನೆ. "ವೀರನಾರಾಯಣನೇ ಕವಿ, ಲಿಪಿಕಾರ ಶ್ರೀಕೃಷ್ಣದೇವರಾಯ "ಎಂದು ಕುಮಾರವ್ಯಾಸನಂತೆ ವಿನಮ್ರತೆಯನ್ನೂ ಮೆರೆಯುತ್ತಾನೆ.

                                                      (ಮುಂದುವರೆಯುವುದು...)

4 comments:

  1. ಲೇಖನ ತುಂಬಾ ಚನ್ನಾಗಿ ಮೂಡಿಬಂದಿದೆ. ವಿಷಯ ಸಂಗ್ರಹಣೆ ಅದ್ಭುತ. ಧನ್ಯವಾದಗಳು

    ReplyDelete
  2. ಸರ್ ಗದ್ಯದ ಗಟ್ಟಿತನ ಈ ಲೇಖನದಲ್ಲಿ ಸುಂದರವಾಗಿ ಮೂಡಿಬಂದಿದೆ.

    ReplyDelete
  3. ಇತಿಹಾಸದ ಸುವರ್ಣ ಪುಟಗಳ ಪ್ರತಿಬಿಂಬ ನಿಮ್ಮ ಲೇಖನ

    ReplyDelete

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...