ಜನರ ಜಂಗಮ.. ಸಾಟಿಯಿಲ್ಲ ಓ ಸದ್ಗರು ನಿನಗೆ ಜಗವೇ ನಡೆದಿದೆ ನಿನ್ನಯ ಕಡೆಗೆ ಹೊರಟೆಯಾ ನೀನು ನಿಜ ಮನೆಯೆಡೆಗೆ ಮನುಕುಲಕಾರು ದಿಕ್ಕು ಕೊನೆಗೆ
ತ್ರಿವಿಧ ದಾಸೋಹಿ ಕನ್ನಡ ರತುನ ಕಾದೆಯಾ ನೀ ಯುಗವೊಂದನು ಜತುನ ಮುಗಿಯಿತೆ ಕಾಲದೊಂದಿಗೆ ಮಂಥನ ನಡೆದಾಡುವ ದೇವನೆ ಮುಗಿಯದು ಕಥನ
ವಸುಧೈವಕೆ ಮಾನವ ಧರ್ಮ ದರ್ಶನ ಕಾಯಕ ಯೋಗಿ ನೀನೇ ಸುದರ್ಶನ ಜನರ ಜಂಗಮ ದೀನರ ಸಂಗಮ ಜಗದಂಧಕಾರವ ಕಳೆದ ಅಲ್ಲಮ
ಜಾತಿ ಧರ್ಮ ಮತ ಪಂಗಡ ಭೂತ ಹಿಡಿದು ಕರಗಿಸಿದ ಸಮತೆಯ ಸಂತ ವಿಶ್ವಮಾನವತೆ ಹರಡಿದ ದೇವ. ಅರಿವೇ ಗುರು ನೀ ಯುಗದಾ ಬಸವ
ಮೌಢ್ಯದ ಕತ್ತಲೆ ಕಳೆದ ಚಂದಿರ ಜಗವ ಬೆಳಗಿದ ಭಕ್ತಿಯ ನೇಸರ ಅನಂತಕೂ ಮಿಗಿಲು ಕ್ಷಿತಿಜಕೂ ದಿಗಿಲು ಎಲ್ಲಿಯ ಜ್ಯೊತಿ ಎಲ್ಲಿಗೆ ಬೆಳಕು
ನಿರ್ಗುಣ ನಿರಹಂಕಾರದ ಮೂರುತಿ ಹಸಿವು ಹಿಂಗಿಸಿದ ಮಹಾ ಅನುಭೂತಿ ಜ್ಞಾನ,ಭಕ್ತಿ ಕರ್ಮಗಳ ಯೋಗಿ ಉದ್ಧರಿಸಿದೆ ಬಡವ ಬಲ್ಲಿದರೆನ್ನದೆ ತೂಗಿ
ಚಂದ್ರಶೇಖರ ಹೆಗಡೆ