Total Pageviews

Sunday 29 April 2018

ನದಿಯಾದವರು...ಕಾಡುಮಲ್ಲಿಗೆಯಾದವರು...

ನದಿಯಾದವರು...ಕಾಡುಮಲ್ಲಿಗೆಯಾದವರು...
                           ನೆಲ ಮೂಲ ಸಂಸ್ಕೃತಿಗೆ ಅಂಟಿಕೊಂಡು ಬರೆದ ನಮ್ಮ ನೆಲದ ಲೇಖಕಿಯರಲ್ಲಿ ಶ್ರೀಮತಿ ಕಸ್ತೂರಿಬಾಯಿ ಶಂಕರ ಬಾಯೆರಿ ಯವರು ಸ್ತ್ರೀ ಸಂವೇದನೆಗಳ ಸಶಕ್ತ ಲೇಖಕಿಯಾಗಿ ,ತಾವು ಬದುಕುತ್ತಿರುವ "ನೆಲದ ಮರೆಯ ನಿದಾನ"ದಂತೆ ಸಾಹಿತ್ಯ ದೇವಿಯ ಸೇವೆಯಲ್ಲಿ ತಮ್ಮನ್ನು ಸಮೃದ್ಧವಾಗಿ ತೊಡಗಿಸಿಕೊಂಡವರು. ತಾವು ಬರವಣಿಗೆ ಪ್ರಾರಂಭಿಸಿದ ೫೨ ನೇ ವಯಸ್ಸಿನಿಂದ ಎಂದರೆ ೨೦೦೮ ರಿಂದ ಇಲ್ಲಿಯವರೆಗಿನ ಒಂದೇ ದಶಕದ ಅಲ್ಪಾವಧಿಯಲ್ಲಿಯೇ ಸುಮಾರು ೨೬ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಶಬ್ದ ತಪಸ್ವಿ ಬಾಯೆರಿಯವರು. ಸಾಹಿತ್ಯ ಸರಸ್ವತಿಯೊಲಿದ ನಮ್ಮ ಬಯಲುಸೀಮೆಯ ಅದರಲ್ಲೂ ಚಾಲುಕ್ಯರಾಳಿದ ಉದಾತ್ತ ಸಂಸ್ಕೃತಿಯ ಪುಣ್ಯಭೂಮಿ "ವಾತಾಪಿ"(ಬದಾಮಿ)ಯ ಸತ್ವಶಾಲಿ,ವಿರಳ,ಅಪರೂಪದ ಕಥೆಗಾರ್ತಿ,ಕವಯಿತ್ರಿ,ಅಂಕಣಗಾರ್ತಿ,ಅನುವಾದಕರು ಶ್ರೀಮತಿ ಕಸ್ತೂರಿ ಶಂಕರ ಬಾಯೆರಿ ಯವರಿಗೆ ೨೦೧೬ -೧೭ ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ.
 
                  ಈ ಸಂಭ್ರಮವೇ ನಮ್ಮನ್ನು ಬಾಯೆರಿಯವರ ಕಸ್ತೂರಿ ನಿವಾಸ "ಕಾತ್ಯಾಯಿನಿ"ಗೆ ಭೇಟಿ ನೀಡುವಂತೆ ಮಾಡಿತ್ತು.ದಿನಾಂಕ ೨೯/೪/೨೦೧೮ ಭಾನುವಾರ ಸೃಜನಶೀಲ ಸಾಹಿತ್ಯ ಬಳಗ ಗುಳೇದಗುಡ್ಡ ತಾಲೂಕಾ ಘಟಕ ದ ವತಿಯಿಂದ ಶ್ರೀಮತಿ ಕಸ್ತೂರಿಬಾಯಿ ಬಾಯೆರಿ ಯವರಿಗೆ ಪುಟ್ಟ ಗೌರವ ಸಮರ್ಪಣೆಯ ಸುಸಂದರ್ಭ. ಕಾಡುತ್ತಿರುವ ಕಾಯಿಲೆಯಿಂದಾಗಿ ಸಾಕಷ್ಟು ಬಳಲಿದಂತೆ ಕಂಡರೂ,ಸ್ವತಃ ಬಾಗಿಲಿಗೆ ಬಂದು  ನಮ್ಮನ್ನು  ಸ್ವಾಗತಿಸಿದ ಬಾಯೆರಿಯವರ ಪುಟಿಯುವ ಜೀವನೋತ್ಸಾಹ ಅದಮ್ಯವಾದದ್ದು.ಬಳಗದ ಸಲಹಾ ಸಮಿತಿಯ ಸದಸ್ಯರಲ್ಲೊಬ್ಬರಾದ ನಾಡಿನ ಪ್ರಸಿದ್ಧ ಕವಿ ದಿ .ಎಸ್ ಎಸ್ ಬಸುಪಟ್ಟದ ರವರ ಸುಪುತ್ರರಾದ  ಡಾ .ರಾಜಶೇಖರ ಬಸುಪಟ್ಟದ ರವರಿಂದ ಬಾಯೆರಿಯವರಿಗೆ ಗೌರವ ಸಮರ್ಪಣೆ.ನಂತರ ನಡೆದಿದ್ದು ಸಾಂಸ್ಕೃತಿಕ  ನದಿಯೊಂದು ನಿಶಾಂತವಾಗಿ ಪ್ರವಹಿಸಿದ,ವೈಶಾಖದ ಧಗೆಯಲ್ಲೂ ಕಾವ್ಯ ತಂಪನು ಸಿಂಚನಗರೆದ ಸಾಹಿತ್ಯ,ಕಲೆ,ಕಲಾವಿದ,ನೆಲ,ಜಲ,ಗಾಳಿ,ಬೇವು,ವೈಶಾಖ,ವಿಶಾಖ, ಕವಿತೆ,ಕತೆ,ವಿಮರ್ಶೆಯ ಸ್ಥಿತಿಗತಿ,ಜಾತಿನಿರಸನ,ಓದು,ನೀಲಾಂಬಿಕೆ, ಗಂಗಾಂಬಿಕೆ,ಬಸವಣ್ಣ, ಕಲ್ಯಾಣ ಕ್ರಾಂತಿ,ಪ್ರಶಸ್ತಿ ,ಕಾವ್ಯಧಾರೆ,ಕುರಿತು ನಿರರ್ಗಳ  ಅನುಭವದ ಅನುಭಾವ.
                ಕಸ್ತೂರಿಬಾಯಿ ಬಾಯೆರಿ ಯವರು ೧೯೫೬ ಎಪ್ರಿಲ್ ೨೭ ರಂದು ಉಡುಪಿ ಜಿಲ್ಲೆಯ ಶಾಸ್ತಾನದ  ಕರಾವಳಿ ಸಂಸ್ಕೃತಿಯಲ್ಲಿ ,ಕರ್ನಾಟಕ ಏಕೀಕರಣ ಚಳುವಳಿ ಮುಗಿದು ಕನ್ನಡ ನಾಡು ಉದಯವಾಗುತ್ತಿದ್ದ ಅರುಣೋದಯದ ಶುಭಗಳಿಗೆಯ ಹೊಸ್ತಿಲಲ್ಲಿ, ಜನ್ಮತಾಳಿ, ಅಲ್ಲಿಂದ ಬಯಲುಸೀಮೆಗೆ ಪ್ರವಹಿಸಿ,ಇಲ್ಲಿಯ ನೆಲಮೂಲ ಸಂಸ್ಕೃತಿಯ ಸೊಗಡನ್ನು ತನ್ನಲ್ಲಿ ಕರಗತಗೊಳಿಸಿಕೊಂಡು, ನಾಡಿನ ಸಹೃದಯರಿಗೆಲ್ಲ ಅದರ ಸವಿಯನ್ನು ಕತೆ,ಕಾವ್ಯ, ಪ್ರಬಂಧ,ಭಾಷಾಂತರ ,ಅಂಕಣ ಸಾಹಿತ್ಯದ ಮೂಲಕ ಉಣಬಡಿಸುತ್ತಾ ಸ್ವತಃ "ನದಿಯಾದವರು".( 'ನದಿಯಾದವಳು '  -ಕವನ ಸಂಕಲನ ). ತಂದೆ ಶಂಕರ, ತಾಯಿ ಕಾತ್ಯಾಯಿಣಿಯ ಮಗಳಾಗಿ "ಬೆಳೆಯುವ ಸಿರಿ ಮೊಳಕೆಯಲ್ಲಿಯೇ ನೋಡು" ಎನ್ನುವಂತೆ ಚಿಕ್ಕಂದಿನಲ್ಲಿಯೇ ತಮ್ಮ ಅಜ್ಜಯ್ಯನಿಗೆ ಎಲೆಗಳ ಮೇಲೆ ಚಿತ್ತಾರ ಬಿಡಿಸಿ ಇದೇ  ಕವಿತೆ ಎಂದು ತೋರಿಸಿ ಆಗಲೇ ಕಾವ್ಯದೇವಿಯನ್ನು ಆಹ್ವಾನಿಸಿದ್ದವರು   ಬಾಯೆರಿಯವರು.
               'ನದಿಯಾದವಳು','ಗಂಧವತಿ','ನೀ ತೆರೆದ ಆಕಾಶ','ನೀಲಿ ಆಕಾಶಕ್ಕೆ ರೆಕ್ಕೆಗಳ ಬಿಚ್ಚಿ','ಕಾತ್ಯಾಯಿನಿ','ಇನಕ್ರೆಡಿಬಲ್ ವೈಸಸ್' ಮುಂತಾದ ಹತ್ತು ಕವನ ಸಂಕಲನಗಳು ಹಾಗೂ 'ಥೈರಾಯಿಡ್​ ಮತ್ತು ಪಾಂಚಾಲಿ' ','ಹಲವು ಮಕ್ಕಳ ತಾಯಿಬೇರು','ಒಂದೇ ಕಾಂಡದ ಖುರ್ಚಿ','ದಿಂಡಿ','ಕಲ್ಲಾದಳು ಅಹಲ್ಯೆ','ಎರಡು ರೆಕ್ಕೆಗಳು' ಮುಂತಾದ ಹತ್ತು ಕಥಾ ಸಂಕಲನಗಳು,ಅನುವಾದ,ಅಂಕಣ, ಪ್ರಬಂಧ ರಚಿಸಿದ ನಮ್ಮ ಭಾಗದ " ಸಾಹಿತ್ಯ ರತ್ನ" ಶ್ರೀಮತಿ ಕಸ್ತೂರಿಬಾಯಿ ಬಾಯೆರಿವರು.               ಬದುಕಿನಲ್ಲಿ ಎಷ್ಟೋ ನೋವು ಸಂಕಟಗಳಿದ್ದರೂ              "ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ.            ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ.             ಆನಂದಮಯ ಈ ಜಗ ಹೃದಯ..."  ಎಂಬ ಕುವೆಂಪುರವರ ಕವಿತೆಯ ಆಶಯದಂತೆ ಬದುಕು ನೀಡುವ ಸುಖ ,ಸೌಂದರ್ಯ ಅನುಪಮವಾದದ್ದು ಎಂಬ ಬದುಕಿನ  ಸೌಂದರ್ಯ ಮೀಮಾಂಸೆ ಬಾಯರಿಯವರದ್ದು.
                    "ಈ ಬದುಕು ಒಂದು ಮೆರವಣಿಗೆ                     ಹೆಜ್ಜೆ ಹಾಕಲಾಗದವರು                  ಮೆಲ್ಲಕೆ, ಕಳ್ಳ ಹೆಜ್ಜೆಗಳಿರಿಸಿ ಹಿಂದೆ ಸರಿವರು                  ಪಕ್ಷಕ್ಕೆ ಚಲಿಸುವ ಸೂರ್ಯಕಾಂತಿಯ ಹಾಗೆ"                                               (ಸಮುದ್ರಗೀತೆ)     ಎಂದು  ಹಿಂದೆ ಸರಿದವರನ್ನೂ  ಬಳಿ ಕರೆದು  ಬಳಗ ಕಟ್ಟಿದವರು ಬಾಯೆರಿಯವರು ಎನ್ನತ್ತಾರೆ ಡಾ. ರಾಜಶೇಖರ ಮಠಪತಿಯವರು.(ರಾಗಂ)                ಬದುಕು ಪ್ರೀತಿ - ದ್ವೇಷ,ಪ್ರಶ್ನೆ-ಉತ್ತರ,ಎಂಬ ವೈರುಧ್ಯ ಕ್ಷಣಗಳ  ಸುಂದರ ಸಂಗಮ. ಬರುವುದನ್ನೆಲ್ಲಾ ನಿರ್ಮಲ ಭಾವದಿಂದ ಆನಂದಿಸಿ ಸ್ವೀಕರಿಸಬೇಕು  ಎನ್ನುವುದು ಕಸ್ತೂರಿಬಾಯಿ ಬಾಯೆರಿಯವರ  ಜೀವನ ಕುರಿತಾದ ತತ್ವಜ್ಞಾನ. ಬಾಯೆರಿಯವರು "ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ" ಎಂಬ ಬಸವಣ್ಣನವರ ಹಾಗೂ "ಕುಲ ಕುಲ ಕುಲವೆಂದು ಬಡಿದಾಡದಿರಿ        ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ"    ಎಂಬ ಕನಕದಾಸರ ಮತದಂತೆ ಕವಿಯಾದವನು ಜಾತಿ,  ಧರ್ಮ, ಮತ ,ಲಿಂಗ,ಪಂಗಡ ಭೇದಗಳಿಗೆ ಆತೀತನಾಗಿರಬೇಕು ಎಂದು ಪ್ರತಿಪಾದಿಸುತ್ತಾರೆ.
"ನವೋದಯ ನವ್ಯ ಬಂಡಾಯಗಳ ಎಳೆಎಳೆಗಳನ್ನೂ ತೆಗೆದುಕೊಂಡು ಸೊಗಸಾದ ಕಾವ್ಯ ಕಸೂತಿ ಹೆಣೆದ ಬಾಯೆರಿಯವರು ಈ ಮಿಶ್ರಣದಿಂದಾಗಿ ಭಿನ್ನವಾಗುತ್ತಾರೆ."ಎಂದು ಬಾಯೆರಿಯವರ ಕಾವ್ಯ ಕಲೆಯನ್ನು ಡಾ.ರಾಜಶೇಖರ ಮಠಪತಿಯವರು ಬಣ್ಣಿಸುತ್ತಾರೆ.                        "ಅಮ್ಮ ಹೇಳುತ್ತಿದ್ದಳು,                    ಹರಿಯುವ ನದಿಯಾಗು ಮಗಳೇ                   ಹಾಕಿದ ಪಾತ್ರೆಯ ಅಳತೆಯಾಗು,ಮತ್ತೆ                     ಚೆಲ್ಲಿದರೆ ಸೋರಿ ಆವಿಯಾಗು                   ಮೋಡ ತೇಲಿ ಭೋರೆಂದು ಸುರಿದು                         ಹಗುರಾದ ನದಿಯಾಗು                   ಮೆಚ್ಚಿದ ಮಲ್ಲನ ಎದೆಯ ಮಲ್ಲಿಗೆಯಾಗು "                          ('ನದಿಯಾದವಳು' ಕವನ ಸಂಕಲನದಿಂದ)ಎಂದು   ಬಾಯೆರಿಯವರು  ತಾವು ನೆಲೆನಿಂತ ನೆಲದ ಸಂಸ್ಕೃತಿಯ ,ಸಾಹಿತ್ಯಗಂಗೆಯಾಗಿ ಹರವು ಪಡೆಯುತ್ತಾರೆ.                 ದೈಹಿಕವಾಗಿ ಬಳಲುತ್ತಿದ್ದರೂ,ಅವರ ಚೈತನ್ಯಶೀಲ  ಮನಸ್ಸು ಸದಾ ಸಾಹಿತ್ಯ ಸೃಷ್ಟಿಗಾಗಿ ತುಡಿಯುತ್ತಿರುತ್ತದೆ ಎನ್ನುವುದಕ್ಕೆ ಅವರು ಬರೆಯ ಹೊರಟಿರುವ  ಕಲ್ಯಾಣದ ಕ್ರಾಂತಿ ಪುರುಷ ಬಸವಣ್ಣನವರ ಎರಡು ಕಣ್ಣುಗಳಂತಿದ್ದ ಗಂಗಾಂಬಿಕೆ ಮತ್ತು ನೀಲಾಂಬಿಕೆಯರ ಅಂತಃಶಕ್ತಿ ಕುರಿತಾದ ಹೊಸ ನಾಟಕ "ನೀಲಗಂಗಾ"ಕೃತಿ ಸಾಕ್ಷಿಯಾಗಿದೆ. ಬಾಯೆರಿಯವರಿಗೆ ಮುಂಬೈ ಕರ್ನಾಟಕ ಲೇಖಕಿಯರ ಸಂಘ,ಕರ್ನಾಟಕ ಲೇಖಕಿಯರ ಸಂಘ,ಹಾಸನ ಲೇಖಕಿಯರ ಸಂಘ ದ ಪ್ರಶಸ್ತಿಗಳು,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ವರ್ಧಮಾನ ಪ್ರಶಸ್ತಿ,ಸುವರ್ಣ ನ್ಯೂಸ್ ಕನ್ನಡಪ್ರಭ ಜಂಟಿ ಮಹಿಳಾ ಸಾಧಕಿ ಪ್ತಶಸ್ತಿ,ಬದಾಮಿ ತಾಲೂಕಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವಗಳು ಇವರ ಸಾಧನೆಗೆ ಒಲಿದು ಬಂದಿವೆ .ಇವರ ಸಾಹಿತ್ಯ ಕುರಿತು ಈಗಾಗಲೇ  ಆರು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ನಡೆಯುತ್ತಿವೆ.  ಕರ್ನಾಟಕ ವಾರ್ತಾ ಇಲಾಖೆ ಬಾಯೆರಿಯವರನ್ನು ಕುರಿತು 'ಸಾಕ್ಷ್ಯ ಚಿತ್ರ'  ನಿರ್ಮಾಣದ ಗೌರವ ನೀಡಿದೆ. 
                ಭಗವಂತ ಶ್ರೀಮತಿ ಕಸ್ತೂರಿಬಾಯಿ ಬಾಯೆರಿಯವರಿಗೆ ಆಯುರಾರೋಗ್ಯ ಐಶ್ವರ್ಯವನ್ನು ದಯಪಾಲಿಸಲಿ. ಅವರ ಕೃತಿಗಳಿಂದ ಕನ್ನಡ ಸಾರಸ್ವತ ಲೋಕ ಮತ್ತಷ್ಟು ಶ್ರೀಮಂತವಾಗಲಿ.


Wednesday 25 April 2018

ಪುಸ್ತಕದಪುಂಜದ ಬೆಳಕಿನಲ್ಲಿ..

'ಪುಸ್ತಕಪುಂಜ'ದ ಬೆಳಕಿನಲ್ಲಿ.....

           ಪುಸ್ತಕಗಳು ನಾಗರಿಕ ಸಂಸ್ಕೃತಿಯ ಮಹತ್ವದ ದಾಖಲೆಗಳಾಗಿವೆ.ಅವು ಜನ ಸಂಸ್ಕೃತಿಯ ದರ್ಶನದ ಪ್ರತಿಬಿಂಬಗಳಾಗಿವೆ.ಒಂದು ದೇಶದ ಸಾಂಸ್ಕೃತಿಕ  ಸುಭಿಕ್ಷೆಯನ್ನು ಅಲ್ಲಿಯ ಶಿಕ್ಷಣ ಹಾಗೂ ಗ್ರಂಥಭಂಡಾರಗಳಿಂದ   ನಿರ್ಣಯಿಸುವ ಪದ್ಧತಿ ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ.ಜಗತ್ತಿನ ಪ್ರಾಚೀನ ವಿಶ್ವವಿದ್ಯಾಲಯಗಳಾದ ತಕ್ಷಶಿಲೆ, ಹಾಗೂ ನಳಂದಾ  ವಿದ್ಯಾಕೇಂದ್ರಗಳು  ತಮ್ಮ  ಕಾಲವನ್ನು ಸಾಂಸ್ಕೃತಿಕವಾಗಿ ಸುವರ್ಣಯುಗವನ್ನಾಗಿ ರೂಪಿಸಿದ್ದವು. ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸಿ ಅದಕ್ಕೊಂದು ಕಲಾಕೃತಿಯ ಸೌಂದರ್ಯವನ್ನು ನೀಡಬಹುದಾದ ಶಕ್ತಿ ಇರುವುದು ಪುಸ್ತಕಗಳಿಗೆ ಮಾತ್ರ. ಪುಸ್ತಕಗಳು  ಮನುಷ್ಯನ ವ್ಯಕ್ತಿತ್ವಕ್ಕೆ   ಸೂರ್ಯನ ಬೆಳಕಿನಷ್ಟೇ ಪ್ರಖರವಾದ ಪ್ರಜ್ವಲಿಸುವ ಮೆರಗನ್ನು ನೀಡುತ್ತವೆ. ಮಸ್ತಕಕ್ಕೆ ಜೀವದ್ರವ್ಯವನ್ನು ಪ್ರವಹಿಸಿ ಚೈತನ್ಯಶೀಲತೆ, ಕ್ರಿಯಾಶೀಲತೆಯನ್ನು ಪ್ರದಾನಿಸುತ್ತವೆ.
                    ಪುಸ್ತಕಗಳಲ್ಲಿ ಪ್ಲೇಟೋ ,ಅರಿಸ್ಟಾಟಲ್,ಸಾಕ್ರಟೀಸ್  ರಂತಹ ವಿದ್ವಾಂಸರ ತತ್ವಜ್ಞಾನವಿದೆ.ಕೀಟ್ಸ್ , ಶೆಲ್ಲಿ,ಬೈರನ್  ರಂತಹ ಕವಿ ಕಾವ್ಯಗಳ ರಮ್ಯತೆಯಿದೆ . ಅರಬಿಂದೊ,ರವೀಂದ್ರನಾಥ ಟ್ಯಾಗೋರ್ ರಾಮಕೃಷ್ಣ ಪರಮಹಂಸ ರಂತಹ ಪರಮಜ್ಞಾನಿಗಳ ದಾರ್ಶನಿಕತೆಯಿದೆ.ಗುಪ್ತರು,ಮೌರ್ಯರ,ಕದಂಬ,ಚಾಲುಕ್ಯ ರಾಷ್ಟ್ರಕೂಟ ಸಾಮ್ರಾಜ್ಯಗಳ ವೈಭವದ ರೋಚಕ  ಇತಿಹಾಸವಿದೆ. ಪಂಪ, ರನ್ನ, ಬಸವಣ್ಣ, ಹರಿಹರ, ಗೋವಿಂದ ಪೈ, ಬಿ ಎಂ ಶ್ರೀ,ಕುವೆಂಪು ಬೇಂದ್ರೆ ಯವರಂತಹ ಕವಿಪುಂಗವರು ಸಾರಿದ ಮಹೋನ್ನತ ಸಂಸ್ಕೃತಿಯ ಮೌಲ್ಯಗಳಿವೆ. ವಿಜ್ಞಾನ, ವೈದ್ಯಕೀಯ ಕ್ಷೇತ್ರಗಳಲ್ಲಾದ ಆವಿಷ್ಕಾರಗಳ ಮೈಲುಗಲ್ಲುಗಳಿವೆ.   ಹೀಗೆ ಪುಸ್ತಕಗಳಲ್ಲಿ ಸರ್ವಾಂತರ್ಯಾಮಿ ಜ್ಞಾನವಿದೆ.
               
ನನ್ನನ್ನು  ಅತಿಯಾಗಿ  ಕಾಡಿದ ಪುಸ್ತಕಗಳಲ್ಲಿ ಶಿವರಾಮ ಕಾರಂತರ.ಆತ್ಮಕತೆ "ಹುಚ್ಚುಮನಸ್ಸಿನ ಹತ್ತುಮುಖಗಳು" ಪುಸ್ತಕವೂ ಒಂದು.ಶಿವರಾಮ ಕಾರಂತರ ಸಾಹಿತ್ಯ,ಕಲೆ, ವಿಜ್ಞಾನ,ಶಿಕ್ಷಣ,ಚಲನಚಿತ್ರನಿರ್ದೇಶನ,  ನಟನೆ ಪರಿಸರ ಪ್ರೇಮ, ಯಕ್ಷಗಾನ ಕಲೆಗಳ  ಕಡೆಗಿನ ಅವರ ಶತಮುಖಿ ಪ್ರತಿಭೆ, ಕಂಡಿದ್ದೆಲ್ಲವನ್ನೂ ಪ್ರಯೋಗಶೀಲ ಮನಸ್ಸಿನಿಂದ ಪರಿಶೀಲಿಸುವ ಚಿಕಿತ್ಸಕ ಗುಣ, ಅದಮ್ಯ ಜೀವನ ಪ್ರೀತಿ,ಬದುಕಿನ ಪ್ರತಿ ಕ್ಷಣವನ್ನೂ ಸಂಭ್ರಮಿಸಿ ಸಾರ್ಥಕ ಮಾಡಿಕೊಳ್ಳುವ ಅನನ್ಯ ಬಯಕೆಗಳ ಕಾರಂತಜ್ಜರಿಗೆ ಜಗತ್ತೇ ಪ್ರಯೋಗಶಾಲೆ. ಜೀವನಾನುಭವಗಳೇ ಅವರ ಚಿರಂತನ ಶಕ್ತಿಯಾಗಿದ್ದವು. ಕಾಣುವ ಬೆಟ್ಟ ಗುಡ್ಡ ಬಯಲುಗಳನ್ನೆಲ್ಲಾ ಸುತ್ತುವ ಯಾತ್ರಿಕ ಶಕ್ತಿ,ನಮ್ಮೂರಾದ ಗುಳೇದಗುಡ್ಡ ಕ್ಕೂ ಭೇಟಿ ನೀಡಿ ತಮ್ಮ ಕೃತಿಯಲ್ಲಿ ದಾಖಲಿಸುವಷ್ಟರ ಮಟ್ಟಿನ ಸವಿ ನೆನಪುಗಳನ್ನು ನೀಡಿದ ಅವರ ಅಲೆಮಾರಿತನ,ಗಳೆಲ್ಲವನ್ನೂ ಸಮೃದ್ಧವಾಗಿ ಬರಹಕ್ಕಿಳಿಸಿ, ಸಹೃದಯರ ಅಂತರಂಗದ ಚೈತನ್ಯಕ್ಕೆ ಉತ್ಸಾಹವನ್ನು ತುಂಬಿ, ಬದುಕಿದ ಒಂದೇ ಜನ್ಮದಲ್ಲಿ ನೂರು ಬದುಕಿಗಾಗುವಷ್ಟು ಅನುಭವಗಳನ್ನು ಎದೆಯಾಳದಲ್ಲಿ ತುಂಬಿಕೊಂಡು,ಸಾಹಿತ್ಯ ಸವಿಯನ್ನೆಲ್ಲ  ತನ್ನ ನಾಡಿಗೆ ಹಂಚುತ್ತ ಹೋದ" "ನಡೆದಾಡುವ ವಿಶ್ವಕೋಶವೇ "ಆಗಿದ್ದ  "ಜ್ಞಾನಜಂಗಮ"  ರು ಡಾ.ಶಿವರಾಮ ಕಾರಂತರು. ತಮ್ಮ "ಹುಚ್ಚು ಮನಸ್ಸಿನ ಹತ್ತು ಮುಖಗಳ"ನ್ನೆಲ್ಲ ಅವುಗಳ ವೈವಿಧ್ಯಮಯವಾದ ಅನುಭವದ ಬಣ್ಣಗಳೊಂದಿಗೆ ಚಿತ್ರಿಸಿರುವ ಚಿತ್ರ ಕಲಾಕೃತಿ ಓದುಗರ ಮನಸ್ಸನ್ನು ತನ್ನ ಪ್ರಭಾವಲಯದೊಳಕ್ಕೆ ಅರಿವಿಗೆ ಬಾರದಂತೆ ಸೆಳೆಯುತ್ತದೆ.
               ವಿಲಿಯಮ್ ಸ್ಟೈರನ್  "A great book should leave you with many experiences, and slightly exhausted at the end. You live several lives while reading."ಎಂದು ಹೇಳುವ ಹಾಗೆ ಜೀವನಕ್ಕೆ ಬಹುಮುಖಿ ನೆಲೆಗಳನ್ನು ಸೃಷ್ಟಿಸುವ ಶಕ್ತಿ ಇರುವುದು ಪುಸ್ತಕಗಳಿಗೆ.
             ಈ ಎಲ್ಲ ವೃತ್ತಾಂತಕ್ಕೆ ಕಾರಣವಾಗಿದ್ದು  ನಾನು ಭಾಗವಹಿಸಿದ ಎಪ್ರಿಲ್ ೨೩ ರಂದು ಸೃಜನಶೀಲ ಸಾಹಿತ್ಯ ಬಳಗ ಗುಳೇದಗುಡ್ಡ ತಾಲೂಕಾ ಘಟಕದ ವತಿಯಿಂದ ಶ್ರೀ ಶಿವಕೃಪಾ ರಂಗಮಂದಿರ ಗುಳೇದಗುಡ್ಡ ದಲ್ಲಿ ಹಮ್ಮಿಕೊಂಡ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮ.

             ೧೯೬೦ ರ ದಶಕದಿಂದಲೇ ಕಾವ್ಯದೇವಿಯ ಸೇವೆಯಲ್ಲಿ ತೊಡಗಿ ಇಲ್ಲಿಯವರೆಗೆ ಸುಮಾರು ೧೮ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಹಾಗೂ ಅಖಂಡ ವಿಜಯಪುರ ಜಿಲ್ಲೆಯಲ್ಲಿಯೇ ಪ್ರಥಮ ಪಿ ಹೆಚ್ ಡಿ ಗೌರವಕ್ಕೆ ಪಾತ್ರರಾದ  ಡಾ.ಎಸ್ ಎಸ್ ಬಸುಪಟ್ಟದ ರವರ ಸಾಹಿತ್ಯಗರಡಿಯಲ್ಲಿ  ಪಳಗಿದ  ಗುಳೇದಗುಡ್ಡದವರಾದ ಸಾಹಿತಿ  ಶ್ರೀ ಮಲ್ಲಿಕಾರ್ಜುನ ಬನ್ನಿ ಯವರು ಮಾತನಾಡಿ  ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಸಾಹಿತಿ ಚಿಂತಕ  ಬುದ್ದಣ್ಣ ಹಿಂಗಮಿರೆ, ಚೆನ್ನವೀರ ಕಣವಿ ಯವರಂತಹ ಹಿರಿಯ ಹೆಮ್ಮರಗಳ ಆಶ್ರಯದ ನೆರಳಲ್ಲಿ ಕಟ್ಟಿದ ಗೆಳೆಯರ ಬಳಗದಲ್ಲಿ ಭಾಗವಹಿಸಿ ಸಾಹಿತ್ಯದ ಮೊದಲ ಪಾಠಗಳನ್ನು ಕಲಿತ ಹೆಮ್ಮೆಯನ್ನು ಹಂಚಿಕೊಂಡದ್ದು ಔಚಿತ್ಯಪೂರ್ಣವಾಗಿತ್ತು ಹಾಗೂ ಅರ್ಥಪೂರ್ಣವಾಗಿತ್ತು.

              ನನ್ನನ್ನು ಕಾಡಿದ ಮತ್ತೊಂದು ಪುಸ್ತಕವೆಂದರೆ "ಓ ಮನಸೇ .."
ರವಿ ಬೆಳಗೆರೆ ಯವರ ಮಾಸಿಕ ಪತ್ರಿಕೆ ಯುವ ಮನಸ್ಸುಗಳನ್ನು ಸೂಜಿಗಲ್ಲಿನಂತೆ ಸೆರೆಹಿಡಿದು,ಅಬಾಲವೃಧ್ಧರಾದಿಯಾಗಿ ಎಲ್ಲರೂ  ತುದಿಗಾಲಿನಲ್ಲಿ ನಿಂತು ಕಾಯುವಂತೆ ಮಾಡಿ, ನಾಡಿನಾಚೆಯೂ  ದಂಡಯಾತ್ರೆ ಕೈಗೊಂಡ ಪುಸ್ತಕ ಓ ಮನಸೇ.....ನಮ್ಮ
ಮನಸುಗಳೊಂದಿಗೆ ಪಿಸು ಮಾತನಾಡುತ್ತಾ, ಹೃದಯದ ಭಾವನೆಗಳ ಭಿತ್ತಿಯಲ್ಲಿ ಸಂಚಲನ ಮೂಡಿಸುವ,ಸಂವೇದನೆಗಳ ಹಸಿವನ್ನು ಹಿಂಗಿಸುವ  ಮಹತ್ವದ ಪತ್ರಿಕೆಯಾಗಿ ಜನಮಾನಸದಲ್ಲಿ ನೆಲೆನಿಂತಿದೆ.

             ಇತ್ತೀಚೆಗೆ ನನ್ನನ್ನು ಬಹುವಾಗಿ ಸೆಳೆದ ಕೃತಿ ಡಾ.ರಾಜಶೇಖರ ಮಠಪತಿ (ರಾಗಂ) ರವರ   "ಜಾನ್ ಕೀಟ್ಸ್ ನೀರ ಮೇಲೆ ನೆನಪ ಬರೆದು......" ಕೃತಿ ನಮ್ಮನ್ನು ಕೀಟ್ಸ್ ನ ಕಾವ್ಯಲೋಕದ ಅಪ್ರತಿಮ ಹಂಬಲದೆಡೆಗೆ ನಿತ್ಯಧ್ಯಾನವನ್ನು ಮಾಡಿಸುತ್ತದೆ.ಕಾವ್ಯವ್ಯಸನಿ ಕೀಟ್ಸ್ ನ ಅಲ್ಪಾಯುಷ್ಯದ  ಬದುಕು ನೂರಾರು ವರ್ಷಗಳ  ದೀರ್ಘ ಕಾಲದ ನಂತರ ಬೆಳಕಿಗೆ ಬಂದು ಪಟ್ಟಭದ್ರ ವಿಮರ್ಶಕರ ಕೈಯ್ಯಲ್ಲಿ ನಲುಗಿದ ಮುಗ್ಧ ಜೀವವೊಂದರ ಕಾವ್ಯ ಮುಖದ ಅನಾವರಣ ಸಹೃದಯರನ್ನು  ಮರಳಿ ರೊಮ್ಯಾಂಟಿಕ್ ಯುಗಕ್ಕೆ ಕೊಂಡೊಯ್ಯುತ್ತದೆ.
   ಇಂಥಹ ಪುಸ್ತಕಗಳು ನಮ್ಮ ಬದುಕಿಗೆ ಜ್ಞಾನದ  ದಶದೀವಿಗೆಗಳನ್ನು ಬೆಳಗಿಸಿ ಅಂತರಂಗದ ಅಂಧಕಾರವನ್ನು ಕಳೆಯುವುದರಲ್ಲಿ ಸಂದೇಹವಿಲ್ಲ.

Tuesday 17 April 2018

ಅಹಲ್ಯೆ

                                              ಅಹಲ್ಯೆ
'ಕಡಲಾಚೆಗಿನ ಮಾಯಾಲೋಕ
ತೋರಿತೊಂದು ಬೆಳ್ಳಿಬೆಳಕ
ದೂತೆಯೊಬ್ಬಳು ಪ್ರತ್ಯಕ್ಷ
ಕೇಳಿದೆ
"ಎಲ್ಲಿರುವಳು, ಹೇಗಿರುವಳು 
ನನ್ನ ದೇವತೆ ?
ಕಾದಿರುವಳೇ ನನಗಾಗಿ
ಹಂಬಲಿಸಿರುವೆ ನೆನೆ ನೆನೆದು 
ಎದೆಯ ನೆನಪುಗಳ 
ಚಿತ್ರ ಚಿತ್ತಾರ
ಕಾಣುವ ತವಕ ಅವಳ
ಮೊಲ್ಲೆ ಮೊಗದ ಮಂದಹಾಸ
ಕಾಡುತಿವೆ ಒಲುಮೆ ತೇರ 
ರಂಗು ರಂಗಿನ ಕಲಾಕೃತಿ
ತೇರನೆಳೆಯುವ ಬಯಕೆ
ಒಂದಾಗಿ ಕುಣಿ ಕುಣಿದು
ಸಂಭ್ರಮಿಸಿ ಕಳೆದು ಹೋಗುವ ಹವಣಿಕೆ
ಬರಹೇಳಿದಳೆ ನನ್ನನ್ನು ?"
ಪರಿತಪಿಸಿದರೆ, 
 ಧೂತೆಯೆಂದಳು
"ಆಕೆಯೀಗ ಶಿಲೆಯಾದ ಅಹಲ್ಯೆ
ಬೆಂದಿರುವಳು ದ್ವೇಷ ಅಸಹನೆ 
ತರತಮಗಳ ಬಿಸಿಲ ಬೇಗೆಗೆ ಸಿಲುಕಿ
ನಡುಗಿರುವಳು ಮರಗಟ್ಟುವ 
ಮಾತುಗಳ ಚಳಿಗೆ ನಲುಗಿ
ಮುಕ್ತಿ ಅಂದು ,
ಎಂದು ನಿನ್ನ ಪ್ರೇಮ ಸ್ಪರ್ಶ"
"ಅಯ್ಯೋ ಘೋರವೆ
ನಡೆ ಬೇಗ
ಆದರೆ... ನಾನು ರಾಮನಲ್ಲ"
ಅಂದರೂ ಏರಿತು ಪುಷ್ಪಕ ವಿಮಾನ
ಹುಡುಕುತ
"ಅಹಲ್ಯೆ  ಅಹಲ್ಯೆ
ಹ್ಞಾ ! ಇದೆಂತಹ ಕೋಟೆ
ಜಾತಿ ವರ್ಣ ದ್ವೇಷದ 
ಕಬಂಧ ಬಾಹು ಚಾಚಿವೆಯಲ್ಲ
ಶಿಲೆಯಂತೆ 
ಮುಕ್ತಗೊಳಿಸುವುದೆಂತು ನನ್ನ 
ಪ್ರೇಮ ದೇವತೆಯನ್ನು ಈ ಶಿಲಾಬಂಧನದಿಂದ .....?
ಓ ಪ್ರೇಮವೇ  
ನೀ ಮಂತ್ರದಂಡವಾಗು
 ದಾರಿದೀಪವಾಗು ಬಾಳ ಜ್ಯೋತಿಯಾಗು
ಮುಕ್ತಿ ನೀಡು ಬಾ 
ನಾನು ಬೈಚಿಟ್ಟ ಬಯಕೆಗಳಿಗೆ 
ಸ್ಪರ್ಶಿಸು ,ಛಿದ್ರವಾಗಲಿ  ಭದ್ರಕೋಟೆ
ಅಹಲ್ಯೆ! ಅಹಲ್ಯೆ! ನನ್ನ ದೇವತೆ
ನಾವಿನ್ನು ಮುಕ್ತ ,ಬಂಧಮುಕ್ತ 
 
ಆಹಾ !ನೀನೆಂತಹ ಮಾಯಾವಿ 
ಕರುಣಾಳು ,ಶಿಲೆಯನ್ನೇ ಕರಗಿಸಿ
ಅಹಲ್ಯೆಯನ್ನಾಗಿಸಿದೆ
ಕಟ್ಟಿದೆ ಹೃದಯಗಳ 
ಶುಧ್ಧ ಪ್ರೇಮದ ಸೇತುವೆ"
     
                                  








Friday 6 April 2018

ಅಗ್ನಿಗಾನದ ಬೆನ್ನು ಹತ್ತಿ.....(ಭಾಗ-1)

ಅಗ್ನಿಗಾನದ ಬೆನ್ನು ಹತ್ತಿ.....(ಭಾಗ-1)

           ದಿನಾಂಕ ೩೦-೩-೨೦೧೮ ರಜೆಯ ನಿಮಿತ್ತ ಬಿಸಿಲ ನಾಡು ಚಡಚಣದಲ್ಲಿರುವ ಸಾಹಿತಿಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರೂ ಆಗಿರುವ ಡಾ.ರಾಜಶೇಖರ ಮಠಪತಿ (ರಾಗಂ) ರವರ ಸಾಂಸ್ಕೃತಿಕ ಮನೆ 'ಜೋಳಿಗೆ'ಗೆ ವಿರಾಮವಾಗಿ ಭೇಟಿಯಿತ್ತಾಗ, ಕನಕದಾಸರ 'ಮೋಹನ ತರಂಗಿಣಿ'  ಕಾವ್ಯವನ್ನಾಧರಿಸಿದ ತಮ್ಮ ಹೊಸ ನಾಟಕ 'ಅಂತಪುರದ ಹಾಡು' ರಚಿಸಲು ಅಲ್ಲಿಗೆ ಆಗಮಿಸಿದ್ದ ಕರ್ನಾಟಕ  ನಾಟಕ ಅಕಾಡೆಮಿ ಸದಸ್ಯರು ,ಪ್ರಾಧ್ಯಾಪಕರು ಹಾಗೂ ಖ್ಯಾತ ನಾಟಕಕಾರರೂ ಆಗಿರುವ ಶ್ರೀ ಬೇಲೂರು ರಘುನಂದನ್ ರವರ ಸಂದರ್ಶನ ಮಾಡುವ ಭಾಗ್ಯ ನನ್ನದಾಯಿತು. ರಾಗಂ ರವರೊಂದಿಗಿನ ನನ್ನ ಚರ್ಚೆಯಲ್ಲಿ  ಆಗಾಗ ಶ್ರೀ ರಘುನಂದನ್ ರವರ ಪ್ರಸ್ತಾಪವಾಗುತ್ತಿದ್ದುದರಿಂದ ಮಾನಸಿಕವಾಗಿ ಆಗಲೇ ಹತ್ತಿರವಾಗಿದ್ದ ಶ್ರೀ  ಬೇಲೂರು ರಘುನಂದನ್ ರವರನ್ನು  ಗುರುತಿಸಿ ಹತ್ತಿರದಿಂದ ಮಾತನಾಡಿಸಿದೆ. ಕನಕದಾಸರ ಮೋಹನ ತರಂಗಿಣಿ  ಸಾಂಗತ್ಯ ಕಾವ್ಯವನ್ನು ಆಸ್ವಾದಿಸುತ್ತ ನಾಟಕದ ದೃಶ್ಯಗಳನ್ನಾಗಿ ಸೃಷ್ಟಿಸುವ ತಲ್ಲೀನತೆಯಲ್ಲಿದ್ದುದರಿಂದ ಮುಗುಳ್ನಗುತ್ತಾ  ಪರಿಚಯಿಸಿಕೊಂಡು ಸುಮ್ಮನಾದರು. ಜೋಳಿಗೆಯಲ್ಲಿ ಆ ಸಾಂಸ್ಕೃತಿಕ ಜಂಗಮರೊಂದಿಗಿನ ಸಂವಾದಗಳು ನನ್ನ ಅರಿವಿನ ನದಿಯ ಹರವನ್ನು ವಿಸ್ತರಿಸಿದವು. ಜಿ.ಎಸ್.ಎಸ್ ರವರು ಗೀತಿಸುವಂತೆ "ನನ್ನನ್ನು ನಾನರಿಯದ ಲೊಕದತ್ತ,
ಕಾಣದ ಕಡಲಿನತ್ತ ಹಂಬಲಿಸುವಂತೆ ಮಾಡಿದವು."

             ನಾಟಕ ರಚನೆಯ ಮಧ್ಯ ಬಿಡುವಿನಲ್ಲಿದ್ದ ಶ್ರೀ ಬೇಲೂರು ರಘುನಂದನ್ ರವರನ್ನು ಸಂದರ್ಶನ ಮಾಡಲು ವಿನಂತಿಸಿಕೊಂಡು, ಪೂರ್ವಸಿದ್ಧತೆಯೊಂದಿಗೆ ನೇಸರನು ಪಡುವಣ ಮನೆಯ ಕಡೆ ಹೊರಳಲು ಉದ್ಯುಕ್ತನಾಗುತ್ತಿದ್ದ  ಸಂಜೆ ೪ ಗಂಟೆಯ ಸಮಯದಲ್ಲಿ ಸಂದರ್ಶನವನ್ನು ಪ್ರಾರಂಭಿಸಿದೆ.
ಪ್ರಶ್ನೆ : ಕರ್ನಾಟಕ ನಾಟಕ ಅಕಾಡೆಮಿಯ  ಸದಸ್ಯರಾಗಿ ಆಯ್ಕೆಯಾಗಿರುವ ತಮಗೆ ಅಭಿನಂದನೆಗಳು ಸರ್
ರಘುಜಿ  : Thank u
ಪ್ರಶ್ನೆ :  ವಿಶ್ವ ರಂಗಭೂಮಿ ದಿನ ವನ್ನು ಆಚರಿಸಿರುವ ಈ ಸಂದರ್ಭದಲ್ಲಿ ಕನ್ನಡ ರಂಗಭೂಮಿ ಎದುರಿಸುತ್ತಿರುವ ಸವಾಲುಗಳೇನು?
ರಘುಜಿ : ರಂಗಭೂಮಿ ತನ್ನದೇ ಆದ ಪರಂಪರೆಯನ್ನು ಹೊಂದಿದೆ.ನಾಟಕ ಅಕಾಡೆಮಿಯು ಕನ್ನಡ ರಂಗಭೂಮಿಯ ಅಸ್ಮಿತೆಯನ್ನು ಕಾಪಾಡುತ್ತಾ, ಉದಾತ್ತವಾಗಿಸುತ್ತ  ಬಂದಿದೆ.ಶಿಕ್ಷಣದಲ್ಲಿ ರಂಗತರಬೇತಿ ಹಾಗೂ ರಂಗಶಿಕ್ಷಣವನ್ನು ಅಳವಡಿಸಬೇಕು ಎನ್ನುವುದು ನನ್ನ ಅಪೇಕ್ಷೆಯಾಗಿದೆ . ಅದು ಕನ್ನಡ ಮತ್ತು ರಂಗಭೂಮಿಯ  ಅಸ್ಮಿತೆಯನ್ನು ಉಳಿಸಿಕೊಳ್ಳಲು ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ..ವಿದ್ಯಾರ್ಥಿಗಳ ಹೃದಯಾಳದಲ್ಲಿ  ಹುದುಗಿರುವ  ಪ್ರೀತಿ ,ದಯೆ,ಅಂತಃಕರಣ,ಕರುಣೆ ಜನಾನುರಾಗ, ಗಳಿಂದ ಸಂಕಲಿಸಿದ  ಸಂವೇದನಾಶೀಲತೆಯನ್ನು ಜಾಗೃತಗೊಳಿಸಬೇಕಾಗಿದೆ.ಇದಕ್ಕೆ "ರಂಗಶಿಕ್ಷಣ "ದಂತಹ ಪ್ರಬಲ ಮಾಧ್ಯಮ ಬೇರೊಂದಿಲ್ಲ ಎನ್ನುವುದು ನನ್ನ ಬಲವಾದ ನಂಬಿಕೆಯಾಗಿದೆ.
ಪ್ರಶ್ನೆ : ತಾವು ಹೊಸ ನಾಟಕವೊಂದನ್ನು ಬರೆಯುತ್ತಿರುವುದು ತಿಳಿಯಿತು.ಆ ನಾಟಕ ಯಾವುದು. ಅದರ ಬಗ್ಗೆ
      ಹೇಳಿ
ರಘುಜಿ : ಕನಕದಾಸರ ಮೋಹನ ತರಂಗಿಣಿ ಕಾವ್ಯ ಆಧಾರಿತ 'ಅಂತ:ಪುರದ ಹಾಡು' ನಾಟಕವನ್ನು ಬರೀತಾ ಇದೀನಿ.


ಪ್ರಶ್ನೆ : ಈ ನಾಟಕದ ಮೂಲಕ ಯುವಪೀಳಿಗೆಗೆ ತಾವು ಹೇಳಬಯಸುತ್ತಿರುವುದೇನು?
ರಘುಜಿ : ಕನಕದಾಸರು ಮೋಹನ ತರಂಗಿಣಿಯಲ್ಲಿ ಕೃಷ್ಣನ ಮೂಲಕ ತಂದಿರುವ ಪುರುಷ ವ್ಯಾಮೋಹಗಳಿಗಿಂತ ಭಿನ್ನವಾದ. ನೆಲೆಯಲ್ಲಿ ಕಾವ್ಯದಲ್ಲಿ ಬರುವ  ಉಷೆ,  ಚಿತ್ರಲೇಖೆ, ರತಿ,ರುಕ್ಮಿಣಿ ಮುಂತಾದ    ಸ್ತ್ರೀ ಪಾತ್ರಗಳ ಹೆಣ್ತನದ ಹಂಬಲಗಳನ್ನು,ಸಂಕಟಗಳನ್ನು, ನೋವುಗಳನ್ನು ಪ್ರೇಮದ ಸೂತ್ರದಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ.ಇದು ಒಂದು ರೀತಿಯಲ್ಲಿ  ಶೃಂಗಾರ ಮೋಹನನನ್ನು ಆವರಿಸಿಕೊಂಡಿರುವ  ತರಂಗಿಣಿಯರ ಹೆಣ್ತನದ ಪ್ರೇಮ ಕತೆ.
ಪ್ರಶ್ನೆ :ತಮ್ಮ ಹೊಸ ನಾಟಕ ರಚನೆಗೆ ಬಿಸಿಲ ನಾಡಾದ ಚಡಚಣದ ಸಾಂಸ್ಕೃತಿಕ ಮನೆ ಜೋಳಿಗೆಯ ಆಯ್ಕೆಗೆ ಕಾರಣ ತಿಳಿಸಿ
ರಘುಜಿ : ರಾಗಂ  ರವರ ಸ್ನೇಹ, ಪ್ರೀತಿ,ಯ ಮಧುರ ಬಂಧಗಳು ನನ್ನನ್ನು ಈ ಮನೆಗೆ ಕರೆತಂದಿವೆ.ಜೋಳಿಗೆ  ಪ್ರಶಾಂತವಾದ ಪುಣ್ಯಭೂಮಿ.ಇಲ್ಲಿಯ ಸಸ್ಯಸಂಕುಲದ ಪ್ರಸನ್ನತೆ, ನಿಶಾಂತತೆ, ನನ್ನ ನಾಟಕದ ರಚನೆಗೆ ಬಹಳ ಪೂರಕವಾಗಿದ್ದರಿಂದ ೮ ರಿಂದ ೧೦ ಗಂಟೆಗಳ ಕಾಲ ನಿರಂತರವಾಗಿ ಸೃಜನಶೀಲ ಬರವಣಿಗೆಯಲ್ಲಿ  ತೊಡಗಿಸಿಕೊಳ್ಳಲು ಸೂಕ್ತವಾದ ಬಯಲು ಆಲಯವಾಗಿದ್ದರಿಂದ ಈ ಸ್ಥಳವನ್ನು ಆಯ್ಕೆಮಾಡಿಕೊಂಡೆ.

ಪ್ರಶ್ನೆ :  ಕುವೆಂಪುರವರ ಮಲೆನಾಡಿನ ಮಂದಿರ ' ಕವಿಶೈಲ'ಕ್ಕೂ. ಬಿಸಿಲನಾಡಿನಲ್ಲಿರುವ ಈ 'ಜೋಳಿಗೆ'ಗೂ ಇರುವ ಸಾಮ್ಯತೆಗಳೇನು?
ರಘುಜಿ: 'ಮಲೆಗಳಲ್ಲಿ ಮಧುಮಗಳು ','ಕಾನೂರು ಹೆಗ್ಗಡಿತಿ','ಶ್ರೀರಾಮಾಯಣ ದರ್ಶನಂ ', 'ಶೂದ್ರತಪಸ್ವಿ' ,ಪಾಂಚಜನ್ಯ ,'ಕಲಾಸುಂದರಿ','ಪ್ರೇಮ ಕಾಶ್ಮೀರ','ಅಗ್ನಿಹಂಸ','ಅನಿಕೇತನ'ದಂತಹ ಕಾವ್ಯ, ಕಥನ,ಕಾದಂಬರಿ ,ನಾಟಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿ ನಾಡಿಗೆ ಸಾಂಸ್ಕೃತಿಕ ನ್ಯಾಯವನ್ನು ಒದಗಿಸಿದ ಜ್ಞಾನದ ಮಹಾ ಶಿಖರವದು.ಅದನ್ನು ಕುರಿತು 'ಕವಿಶೈಲದ ಕವಿತೆಗಳ'ನ್ನು ರಚಿಸಿದ್ದೇನೆ.'ಜೋಳಿಗೆ' ಬಿಸಿಲ ನಾಡಿನ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಬೆಳೆಯುತ್ತಿದೆ.  ಇವೆರಡರ ಹೋಲಿಕೆಗಿಂತ  ಎರಡಕ್ಕೂ ತಮ್ಮದೇ  ಆದ ಪ್ರಾದೇಶಿಕ ಅನನ್ಯತೆಯಿದೆ.ಮಹತ್ವವಿದೆ.
ಪ್ರಶ್ನೆ : ಉತ್ತರ ಕರ್ನಾಟಕಕ್ಕೆ ತಮ್ಮ ಅಕಾಡೆಮಿಯಿಂದ ರೂಪಿಸಲಾದ ಕಾರ್ಯಕ್ರಮಗಳೇನು?
ರಘುಜಿ : ಉತ್ತರ ,ದಕ್ಷಿಣ ಎಂಬ ಭೇದಭಾವ ಅಕಾಡೆಮಿಗಿಲ್ಲ. ಅಖಂಡ ನಾಡಿನ ತುಂಬ ರಂಗಭೂಮಿ ಕಲರವವನ್ನು ನಿತ್ಯ ನೂತನವಾಗಿಡುವುದು ಅಕಾಡೆಮಿಯ ಉದ್ದೇಶಗಳಲ್ಲೊಂದು.ಉದಾ ಗೆ ಕಲಬುರ್ಗಿಯಲ್ಲಿ   ಒಂದು ತಿಂಗಳ ಕಾಲ ರಂಗಶಿಬಿರ ವನ್ನು  ಹಮ್ಮಿಕೊಂಡು ಸ್ಥಳೀಯ ವಿದ್ಯಾರ್ಥಿಗಳಿಗೆ ಅಭಿನಯ ತರಬೇತಿ ನೀಡಿ ಎರಡು ಮೂರು ನಾಟಕಗಳನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ.ಹೀಗೆ ಚಿತ್ರದುರ್ಗ, ಮೈಸೂರು,ಬೆಂಗಳೂರು, ಶಿವಮೊಗ್ಗ, ಧಾರವಾಡ ಮುಂತಾದ ಜಿಲ್ಲೆಗಳಲ್ಲಿ ೧೦ ಕ್ಕಿಂತಲೂ ಹೆಚ್ಚು ರಂಗ ಶಿಬಿರಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ.ಹೀಗೆ ಪ್ರತಿ ಜಿಲ್ಲೆ, ಪ್ರತಿ ತಾಲೂಕುಗಳಲ್ಲಿ ಅಕಾಡೆಮಿಯ ಚಟುವಟಿಕೆಗಳನ್ನು ವಿಸ್ತರಿಸಲಾಗುತ್ತಿದೆ.ಬಾಗಲಕೋಟೆಯಲ್ಲಿ ಮೊನ್ನೆ ತಾನೆ  ವರ್ಷದ  ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿ ರಂಗಸಾಧಕರನ್ನು ಗೌರವಿಸಲಾಗಿದೆ.

ಪ್ರಶ್ನೆ : ಯುವವಿದ್ಯಾರ್ಥಿಗಳಿಗಾಗಿ ಅಕಾಡೆಮಿ ಯಾವ  ಯೋಜನೆಗಳನ್ನು ಹಾಕಿಕೊಂಡಿದೆ?
ರಘುಜಿ: ಈಗಾಗಲೇ ಹೇಳಿದಂತೆ ರಂಗಶಿಬಿರಗಳು ,ಕಾಲೇಜುಗಳಲ್ಲಿ ನಾಟಕ ಪ್ರಯೋಗ,೪೫ ರಷ್ಟು  ಫೆಲೋಶಿಪ್ ಗಳನ್ನು ಕೊಡುವುದು, ಸಂಶೋಧನಾ ಕಮ್ಮಟಗಳನ್ನೇರ್ಪಡಿಸುವುದು,ನಾಟಕ ರಚನೆ ಸ್ಪರ್ಧೆಗಳಂತಹ ಕಾರ್ಯಕ್ರಮಗಳ ಮೂಲಕ ಯುವ ಮನಸ್ಸುಗಳನ್ನು ನಾಟಕದತ್ತ ಸೆಳೆಯಲಾಗುತ್ತಿದೆ.
ಪ್ರಶ್ನೆ : ನಾನು ಗುಳೇದಗುಡ್ಡ ದವನಾಗಿದ್ದರಿಂದ ಈ ಪ್ರಶ್ನೆ.ಗುಳೇದಗುಡ್ಡ ವು "ಕರ್ನಾಟಕದ ಷೇಕ್ಸಪಿಯರ್ " ಎಂದೇ ಖ್ಯಾತರಾದ  ಕಂದಗಲ್ಲ ಹನಮಂತರಾಯರು, ಪಿ ಬಿ ಧುತ್ತರಗಿ ಯವರಂತಹ ರಂಗಕರ್ಮಿಗಳ ರಂಗಭೂಮಿಯಾಗಿತ್ತು.ಇಂತಹ ಸಾಂಸ್ಕೃತಿಕವಾಗಿ ಶ್ರಿಮಂತವಾದ ಗುಳೇದಗುಡ್ಡದಲ್ಲಿ  ಕಂದಗಲ್ಲ ಹನಮಂತರಾಯರ ಬಯಲು ರಂಗಮಂದಿರ ಕಟ್ಟಡ  ಅಪೂರ್ಣವಾಗಿದ್ದು ದುಸ್ಥಿತಿಯಲ್ಲಿದೆ.ಇಂತಹ ರಂಗಸ್ಥಾವರಗಳ ಪುನಶ್ಚೇತನಕ್ಕೆ  ಅಕಾಡೆಮಿಯಿಂದ ಕೈಗೊಳ್ಳುವ ಕ್ರಮಗಳೇನು?
ರಘುಜಿ: ನಾಟಕ ಅಕಾಡೆಮಿ ನಾಟಕದ  ಅಕಾಡೆಮಿಕ್ ಸಂಗತಿಗಳಿಗೆ ಆದ್ಯತೆ ನೀಡುತ್ತಿದ್ದು, ಸರಕಾರದಿಂದ ದೊರಕುವ  ಮಿತವಾದ ಅನುದಾನದಲ್ಲಿ ಥಿಯೇಟರ್ ಗಳ ನಿರ್ಮಾಣ, ದುರಸ್ತಿ,ಪುನಶ್ಚೇತನಕ್ಕೆ ಅವಕಾಶವಾಗುವುದಿಲ್ಲ.ಆದಾಗ್ಯೂ ಇಂತಹ ರಂಗಸ್ಥಾವರಗಳ ನಿರ್ಮಾಣಕ್ಕೆ  ಪ್ರಸ್ತಾವನೆ ಸಲ್ಲಿಸಿದರೆ ಅಕಾಡೆಮಿ ಮೂಲಕ ಸರಕಾರಕ್ಕೆ ತಲುಪಿಸಿ ಒತ್ತಡ ಹಾಕಲಾಗುವುದು.

ಪ್ರಶ್ನೆ : ನಮ್ಮ ನಾಡಿನ ಹೆಸರಾಂತ ನಾಟಕಕಾರರು ಹಾಗೂ ರಂಗಕರ್ಮಿಗಳ ಕುರಿತು ನಾಟಕ  ಅಕಾಡೆಮಿ ಯಾವ ಕಾರ್ಯಯೋಜನೆ ರೂಪಿಸಿದೆ?
ಉತ್ತರ: "ರಂಗಸಂಪನ್ನರು"ಮಾಲಿಕೆಯಲ್ಲಿ ನಾಡಿನ ಹಿರಿಯ ರಂಗವಿದ್ವಾಂಸರ ಜೀವನ ಮತ್ತು  ಸಾಧನೆಗಳನ್ನು ಯುವಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಅವರ ಕುರಿತು ಪುಸ್ತಕಗಳನ್ನು ಪ್ರಕಟಿಸಿದೆ ರಂಗಕರ್ಮಿಗಳ ಸಾಕ್ಷ್ಯಚಿತ್ರ, ಜಿಲ್ಲಾರಂಗ ಮಾಹಿತಿ ಸಂಪುಟ ಪ್ರಕಟಣೆ  ಯಂತಹ ಮಹತ್ವದ ಯೋಜನೆಗಳನ್ನು ಅಕಾಡೆಮಿ ಹಾಕಿಕೊಂಡಿದೆ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ  ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರವನ್ನು    ಹಮ್ಮಿಕೊಂಡು ಅವರಿಂದ ಪ್ರಸಿದ್ಧ ನಾಟಕಕಾರರ ನಾಟಕಗಳನ್ನು ರಂಗಪ್ರಯೋಗಕ್ಕೆ ಒಳಪಡಿಸಲಾಗುತ್ತಿದೆ.ಇತ್ತೀಚೆಗೆ ಕಲಬುರ್ಗಿಯಲ್ಲಿ ಇಂತಹುದೇ ತರಬೇತಿ ಕಾರ್ಯಾಗಾರದ ಮೂಲಕ. ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಎರಡು ಮೂರು ನಾಟಕಗಳನ್ನು ಯಶಸ್ವಿಯಾಗಿ  ಪ್ರಯೋಗಿಸಲಾಗಿದೆ.
      ಹೀಗೆ  ಹೊಂಬಣ್ಣದ ಸೂರ್ಯ ಮರೆಯಾಗುವುದರೊಂದಿಗೆ  ಸಂದರ್ಶನವೂ ಮುಕ್ತಾಯವಾಯಿತು.

        ಅಂದೇ ರಾತ್ರಿ ಚಡಚಣದ ಜನರು ಜಾತ್ರೆಯ ನಿಮಿತ್ತ ಹಮ್ಮಿಕೊಂಡ "ಇಂದ್ರಜಿತ್ ಕಾಳಗ " ಎಂಬ ಅಪರೂಪದ ಬಯಲಾಟವನ್ನು ಕಣ್ತುಂಬಿಕೊಳ್ಳುವ ಸದಾವಕಾಶ ನನಗೆ ದೊರೆಯಿತು.ಆ ಬಯಲಾಟದ ಉದ್ಘಾಟಕರಾಗಿ ರಾಗಂ ರವರು ಮುಖ್ಯ ಅತಿಥಿಗಳಾಗಿ ಶ್ರೀ ಬೇಲೂರು ರಘುನಂದನ್ ರವರು ಭಾಗವಹಿಸಿದರು .ಬಯಲಾಟಗಳು ತಮ್ಮ ಜನ್ಮಸ್ಥಳದಲ್ಲಿಯೇ  ಇಂದು  ಅಪರೂಪವಾಗುತ್ತಿರುವ ಈ ಸಂದರ್ಭದಲ್ಲಿ  ಇಂತಹ  ಗಡಿನಾಡಿನಾಡಿನಲ್ಲಿಯೂ  ಕನ್ನಡ ಜಾನಪದ ರಂಗಭೂಮಿ ಜೀವಚೈತನ್ಯದಿಂದ  ಕಂಗೊಳಿಸುತ್ತಿದ್ದ ಪರಿ ಅಪೂರ್ವವಾಗಿತ್ತು.ದೊಡ್ಡಾಟದ ಆ ದೃಶ್ಯ ವೈಭವ ಮನ ಮೋಹಕವಾಗಿತ್ತು.ಜ್ಞಾನಿಗಳ ಸಂಗ ದಿಂದ ಜ್ಞಾನದ ಹೆಜ್ಜೇನಿನ ಜೊತೆಗೆ ದೊಡ್ಡಾಟದ ಸವಿಯೂ ದಕ್ಕಿದ್ದು ನನ್ನ ಯೋಗಾಯೋಗ.











 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...