Total Pageviews
Friday 26 June 2020
ನೀನೊಮ್ಮೆ ಒಡಲುಗೊಂಡು ನೋಡಾ..
ನೀನೊಮ್ಮೆ ಒಡಲುಗೊಂಡು ನೋಡಾ..
ಅದು ಬ್ರಾಹ್ಮಿ ಮುಹೂರ್ತಕಾಲ. ಸಾಕಿ ಹೆಣೆದು ಹಾಸಿದ ಕೌದಿಯಿಂದ ಮೈಮನಗಳೆಲ್ಲವೂ ಎಚ್ಚರಗೊಂಡು ಮಂಜುಗಣ್ಣಿನಲ್ಲಿಯೇ ಮನೆಯ ಮುಂದಿನ ಉದ್ಯಾನವನದೊಳಗೆ ಪ್ರವೇಶಿಸಿದೆ. ಹಳದಿಯುಟ್ಟು ನಿಂತ ಅಲಂಕಾರದ ಗಿಡದೆಲೆಗಳ ಮೇಲೆ ಆಗ ತಾನೇ ಭುವಿಗಿಳಿದು ವಿರಮಿಸುತ್ತಿದ್ದ ಇಬ್ಬನಿಯ ಹನಿಗಳನ್ನು ಹುಡುಕಿ ಮೈಸವರಿದೆ. ಕಾಯುತ್ತಿದ್ದವೋ ಏನೋ ಅಂಟಿಕೊಂಡುಬಿಟ್ಟವು ದೂರದಿಂದಲೇ ಕಾಡಬೇಕೆಂದಿದ್ದ ಹಸ್ತಗಳಿಗೆ. ಎತ್ತಿಕೊಂಡೆ ಮುದ್ದಿನ ಕೂಸನ್ನು ತಾಯಿ ಹಿಡಿದೆತ್ತಿಕೊಂಬಂತೆ. ಕಣ್ಣುಗಳಿಗೆ ಸವರಿ ರೆಪ್ಪೆಗಳಿಂದ ತಬ್ಬಿಕೊಂಡೆ. ನೇತ್ರದೊಳಗೆ ಮಡುಗಟ್ಟಿದ ಅಂತರಂಗದಿಂದುದಿಸಿದ ಮಂಜಿನೊಳಗೆ ಬಹಿರಂಗದ ಇಬ್ಬನಿಯೂ ಐಕ್ಯವಾಗಿ ಅದ್ವೈತವಾಗುವುದರಲ್ಲಿರುವ ಅದಮ್ಯ ಸುಖವನ್ನನುಭವಿಸಿದೆ ಕಣ್ಣಾಲೆಗಳನ್ನು ಮೌನದಿಂದ ಮುಚ್ವಿಕೊಂಡು. ಆಗ ಶೂನ್ಯವೇ ಸಂಪಾದನೆ; ಭಾವವೇ ಆಲಾಪನೆ; ಧ್ಯಾನವೇ ಸಂಶೋಧನೆ. ಹಿಂದಿನ ರಾತ್ರಿ ಹನಿದ ಮಳೆಯಿಂದ ಮಜ್ಜನಗೈದ ಗಿಡಮರಗಳು ಹಸಿರಿನ ಹೊಸ ದಿರಿಸನ್ನುಟ್ಟು ಮಧುವಣಗಿತ್ತಿಯಂತೆ ಶುಭೋದಯದ ಸ್ವಾಗತಕ್ಕಾಗಿ ಸಿದ್ಧವಾಗಿ ನಿಂತಿದ್ದವು. ಹೃದಯದಿಂದ ಹೊರಟ ರಾಗರತಿ ಕಣ್ಣುಗಳ ಮೂಲಕ ಮತ್ತೆ ಇಳೆಗಿಳಿಯುತಿತ್ತು ಹನಿ ಹನಿಯ ಬನಿಯಾಗಿ. ಕುವೆಂಪು ಹೇಳುವ "ಆನಂದಮಯ ಈ ಜಗಹೃದಯ" ವೆಂದರೆ ಯಾವುದೆಂದು ಸರಳವಾದ ಪ್ರಯೋಗದ ಮುಖೇನ ತೋರಿದ ಇಬ್ಬನಿಯ ಹನಿ ಗೆಳೆಯರಿಗೆ ಕೈಮುಗಿದೆ. ಉದ್ಯಾನವನದಲ್ಲಿಯೇ ಸುಳಿದಾಡಿದೆ ಮಾರುತನ ಹೆಗಲ ಮೇಲೆ ಕೈಹಾಕಿ. ರಾತ್ರಿಯೆಲ್ಲಾ ಹರಿದಾಡಿ ಆಯಾಸಗೊಂಡು ಮಂದಗಾಮಿನಿಯಾಗಿದ್ದ ಒಡಲಿಲ್ಲದ ನಿರಾಕಾರನ ಕುಶಲೋಪರಿಯನ್ನು ವಿಚಾರಿಸಿದೆ.
Sunday 14 June 2020
ಸಂವೇದನೆಗಳೊಂದಿಗೆ ಸಂವಾದ...
ಸಂವೇದನೆಗಳೊಂದಿಗೆ ಸಂವಾದ...
ಬತ್ತಿಹೋಗಿರುವ ಸಂವೇದನೆಗಳೆ
ಮತ್ತೆ ಚಿಗುರುವಿರೆಂದು ?
ಹೆದ್ದಾರಿಯ ಬದಿಯಲ್ಲಿ ಉರುಳಿ
ಬಿದ್ದ ವೇಗದ ಲಾರಿ
ಹೊರಟಿತ್ತು ಬಯಕೆಗಳನ್ನೇ
ತುಂಬಿ ಚೆಲ್ಲುವಂತೆ ಹೇರಿ
ಮಾನವಧರ್ಮವೆಲ್ಲಿದೆ ?
ಬೆನ್ನುಬಿದ್ದ ಕರ್ಮವೆಲ್ಲಿದೆ ?
ಬಿದ್ದಿದೆಯಲ್ಲ ಕಾಲು ಮುರಿದುಕೊಂಡು
ಅನಾಥವಾಗಿ ಲಾರಿಯ ಕೆಳಗೆ
ಮತ್ತೆಂದೂ ಮೇಲೇಳದಂತೆ ಹಾಸಿದ
ವ್ಯವಹಾರದ ನೆಲಕೆ ಒರಗಿ
ಕಣ್ಣು,ಬಾಹುಗಳನಗಲಿಸಿ ದೊರೆತಷ್ಟು
ಬಾಚಿಕೊಳ್ಳುವುದೊಂದೇ ತವಕ
ಸೋಪು, ಎಣ್ಣೆ, ಡೀಸೆಲ್,ಸಿಮೆಂಟು
ಶಾಂಪೂ ಬಗೆ ಬಗೆಯ ಬಯಕೆಗಳ ರೂಪಕ
ಆಸೆಗಳೊಂದಿಗಿನ ಯುದ್ಧದಲ್ಲಿ
ಎಲ್ಲವೂ ಸರಿ ಸಮಾನ!
ಮಾನವೀಯತೆಯೂ, ಕ್ರೌರ್ಯವೂ.
ಬಯಕೆಗಳಿಗೆ ಅಳಿವಿಲ್ಲ;
ಸಾವು ನೋವುಗಳಿಗೆ ಬೆಲೆಯಿಲ್ಲ
ಮಾರುಕಟ್ಟೆಯ ಚಕ್ರವ್ಯೂಹದೊಳಗೆ
ಅರುಣೋದಯವೂ ಲಾಭವೇ
ಮಾರಾಟಕ್ಕಿಟ್ಟರೆ ತಾಪ, ಬೆಳಕು
ಕೊರಗುತ್ತಿದೆ ಹೀಗೆ ನಲುಗಾಟವೇ
ತುಂಬಿದ ಮಾನವ ಬದುಕು
ಬಂಧನದ ಜಗವೆಲ್ಲಾ ಹಣದ
ಮಾಯೆಯೊಳಗಿನ ಹುಳುಕು
ಲಾರಿಯವನ ಆರ್ತನಾದವೂ ಕ್ಷೀಣ
ಬೆಂಬೆಡಗಿನ ಯುಗದ ಗಿಜಿಗಿಡುವ
ವಾಂಛೆಗಳನಾಳುವ ಬಜಾರಿನ ರಣಭೇರಿಯ ಮುಂದೆ
ಸತ್ತು ಹೋಗಿರುವ ನಿಮಗೆಲ್ಲಿದೆ ಮದ್ದು
ಜಗದ ಮಂದಿಗೆ ಜಾಹೀರಾತುಗಳೇ ಮುದ್ದು
ಆಳಿ ಬಿಡಿ ಭುವನವ
ನಿಮ್ಮ ಕಾಲವಿರುವತನಕ
ಬೆಕ್ಕಿನ ಕೊರಳಿಗೆ ಗೆಜ್ಜೆ ಕಟ್ಟುವ ತನಕ
ವಿಷದ ಚಕ್ರವ್ಯೂಹದೊಳಗೆ
ಮಾನವತೆಯ ಅಭಿಮನ್ಯು
ಒಳಹೊಕ್ಕಿರುವನು ಅರಿವಿದ್ದರೂ ಇಲ್ಲದವನಂತೆ
ಹೊರಬರುವುದೆಂತೋ ಕ್ಷಮಿಸಿಬಿಡಿ
ಒಮ್ಮೆ ಅಪ್ಪಿ ಅರ್ಜುನನಂತೆ.
Subscribe to:
Posts (Atom)
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಅರ್ಧಾಂಗಿ ಪುರಾಣ! ನಾನು ಎಂದಿನಂತೆ ನಿತ್ಯಕರ್ಮಗಳ ಮುಗಿಸಿ ಕರ್ತವ್ಯಕ್ಕಾಗಿ ಸಿದ್ಧವಾಗುತ್ತಿರುವಾಗ ಕೇಳಿದಳು ಸಾಕಿಯೊಮ್ಮೆ - " ಈ ಹಳೆಯ ಅಂಗಿಯನ್ನ ಹಾಕ್ಕೋ...
-
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ ಮಜ್ಜೆಗಳು ಜಾ...