Total Pageviews

Friday 17 April 2020

ಒಂದು ನಕ್ಷತ್ರದ ಕಥೆ

ಒಂದು ನಕ್ಷತ್ರದ ಕಥೆ
    ಕೈಯ್ಯಲ್ಲೊಂದು ಬೊಂಬೆ ಹಿಡಿದೋ, ಮನೆಯಂಗಳದಲ್ಲಿ ಗೆಳತಿಯರೊಂದಿಗೆ ಆಟವಾಡಿಯೋ ತೊದಲುನುಡಿಗಳನ್ನಾಡುತ್ತಾ ಮುಗ್ಧತೆಯ ಬದ್ದತೆಯಲ್ಲಿ ಬಾಲ್ಯವನ್ನು ಕಳೆಯಬೇಕಾಗಿದ್ದ ನರ್ಗೀಸ್ ಎಂಬ ‘ಸುಂದರ ಹೂವು’ ( ಪರ್ಷಿಯನ್ ಭಾಷೆಯಲ್ಲಿ ನರ್ಗೀಸ್ ಎಂದರೆ ಸುಂದರ ಹೂ ಎಂದರ್ಥ) ಸ್ವಚ್ಛಂದವಾಗಿ ಅರಳಬೇಕಾಗಿದ್ದ ವಯಸ್ಸಿನಲ್ಲಿಯೇ ಬಣ್ಣದ ಬದುಕಿಗೆ ತನ್ನನ್ನು ಅರ್ಪಿಸಿಕೊಂಡುಬಿಟ್ಟಿತ್ತು. ಹೀಗೆ ವಯಸ್ಸಲ್ಲದ ವಯಸ್ಸಿನಲ್ಲಿ ಬಾಲನಟಿಯಾಗಿ ಪರದೆಯ ಮೇಲೆ ಕಾಣಿಸಿಕೊಂಡ ಆಕೆಯ ಮೊದಲ ಚಿತ್ರ 'ತಲಾಶ್ ಎ ಹಕ್'. ಆಗ ಆಕೆಯ ವಯಸ್ಸು ಕೇವಲ ಆರು ವರ್ಷ. ನಾಯಕಿಯಾಗಿ ನಟಿಸಿದ ಮೊದಲ ಚಿತ್ರ "ತಮನ್ನಾ" ತೆರೆ ಕಂಡಾಗ ಈಕೆಗಿನ್ನೂ ಹದಿನಾಲ್ಕು ವರ್ಷ ವಯಸ್ಸು. ಹೀಗೆ ಬಾಲ್ಯದ ಬಣ್ಣ ಬಣ್ಣದ ಕನಸುಗಳಲ್ಲಿ ಮುಳುಗಿಹೋಗಬೇಕಾಗಿದ್ದ ನರ್ಗೀಸ್, ಹೊತ್ತಲ್ಲದ ಹೊತ್ತಿನಲ್ಲಿ ಕಲಾವಿದೆಯಾಗಿ ತನ್ನ ಬದುಕನ್ನು ರೂಪಿಸಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಳು. ಇಲ್ಲಿಂದ ಈಕೆ ಹೊರಳಿ ನೋಡಿದ್ದೇ ಇಲ್ಲ.  1949ರಲ್ಲಿ ‘ಬರ್ಸಾತ್’ ಮತ್ತು ‘ಅಂದಾಜ್’; 1951ರ ‘ಆವಾರಾ’ ಮತ್ತು ‘ದೀದಾರ್’; 1955ರ ‘ಶ್ರೀ 420’ ಮತ್ತು 1956ರ ‘ಚೋರಿ ಚೋರಿ’ ಸಿನೇಮಾಗಳು ಈಕೆಯನ್ನು ಚಿತ್ರರಂಗದ ಧೃವತಾರೆಯಾಗಿ ಕಂಗೊಳಿಸುವಂತೆ ಮಾಡಿಬಿಟ್ಟವು. ಈ ಯಶಸ್ಸಿನ ಹಿಂದೆ ರಾಜ್ ಕಪೂರ ನ ಪರಿಶ್ರಮದ ಪಾತ್ರವೂ ಮಹತ್ವದ್ದಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. 1929 ರ ಜೂನ್ 1 ರಲ್ಲಿ ತಂದೆ ಅಬ್ದುಲ್ ರಶೀದ್, ತಾಯಿ ಜದ್ದಾನ್ ಬಾಯಿ ಯ ಮಗಳಾಗಿ ಜನಿಸಿದ ಈಕೆಯ ಪೂರ್ವಾಶ್ರಮದ ಹೆಸರು ಫಾತೀಮಾ ರಶೀದ್. ಅದಾಗಲೇ ಸಂಗೀತಗಾರ್ತಿಯಾಗಿ ಹೆಸರು ಮಾಡಿದ್ದ ತಾಯಿ ಜದ್ದಾನ್ ಬಾಯಿಯ ಗರಡಿಯಲ್ಲಿ ಬೆಳೆದು ಬಂದ ನರ್ಗೀಸ್ ಳಿಗೆ ಬಾಲ್ಯದಲ್ಲಿಯೇ ಚಿತ್ರರಂಗದ ಮಹಾಮಹಿಮರ ಒಡನಾಟ ದಕ್ಕಿದ್ದು ಆಕೆ ಚಲನಚಿತ್ರರಂಗದಲ್ಲಿ ಖ್ಯಾತ ಅಭಿನೇತ್ರಿಯಾಗಿ ಬೆಳಗಲು ಕಾರಣವಾಯಿತು. ಮುಂಬೈನ ಮರೀನ್ ಡ್ರೈವ್‍ನಲ್ಲಿದ್ದ ಜದ್ದಾನ್ ಬಾಯಿಯ  ಮನೆ "ಚಾತ್ಯೂ ಮರೀನ್" ತನ್ನ ಸಾಯಂಕಾಲದ "ಮೆಹಫಿಲ್"ಗಳಿಗೆ ಪ್ರಸಿದ್ಧಿ ಪಡೆದಿತ್ತು. ಇಲ್ಲಿ ಬಾಲಿವುಡ್ ನ ಖ್ಯಾತನಾಮರಾದ ದಿಲೀಪ್ ಕುಮಾರ್, ಮೆಹಬೂಬ್ ಮತ್ತು ಕಮಲ್ ಅಮ್ರೋಹಿ ಅವರು ಖಾಯಂ ಸಂದರ್ಶಕರಾಗಿದ್ದರೆಂದ ಮೇಲೆ ನರ್ಗೀಸ್ ಅದೆಂತಹ ಭಾಗ್ಯಶಾಲಿಯಾಗಿದ್ದಳೆಂಬುದನ್ನು ಊಹಿಸಿಕೊಳ್ಳಿ. ಅವಳ ಚಿತ್ರರಂಗದ ಪಯಣಕ್ಕೆ ಬೇಕಾದ ಪೂರ್ವಸಿದ್ಧತೆ, ತರಬೇತಿ, ಸ್ಪೂರ್ತಿಗಳೆಲ್ಲವೂ ಆಕೆಗೆ ದಕ್ಕಿದ್ದು ಇದೇ ಚಿಂತಕರ ಚಾವಡಿಯಲ್ಲಿಯೇ. 
ಅದೊಂದು ಪತ್ರ ಅವಳ ಪ್ರೀತಿಯನ್ನು ಹರಿದುಹಾಕಿತ್ತು. ರಾಜ್ ಕಪೂರ್  ಪ್ರಕಾರ ಆ ಪತ್ರದಲ್ಲಿ ನರ್ಗೀಸ್ ನಿರ್ಮಾಪಕರೊಬ್ಬರನ್ನು ಮದುವೆಯಾಗುವ ಕುರಿತು ವಿವರಗಳಿದ್ದವು.  ಆ ಪತ್ರದ ಹಿನ್ನೆಲೆಯ ಸತ್ಯಸಂಗತಿಯನ್ನು ಮಾತ್ರ ನರ್ಗೀಸ್, ಮಲಗಿರುವ ತನ್ನ  ಸಮಾಧಿಯಿಂದ ಎದ್ದು ಬಂದು ಹೇಳಬೇಕಷ್ಟೇ.
'ಜಾನೇ ನ ನಜರ್ ಪೆಹಚಾನೇ ಜಿಗರ್ 
ಯೇ ಕೌನ್ ಜೋ ದಿಲ್ ಪಾರ್ ಚಾಯಾ
ಮೇರಾ ಅಂಗ್ ಅಂಗ್ ಮುಸ್ಕಾಯಾ"
(ಕಣ್ಣರಿಯದಿದ್ದರೂ ಹೃದಯವರಿಯುತ್ತಿರುವ ಆ ಚಿತ್ತಚೋರನಿಗಾಗಿ ನನ್ನ ಪ್ರತಿ ಅಂಗಾಂಗವೂ ತುಡಿಯುತ್ತಿದೆ)
ಎಂದು ಹಾಡುತ್ತಲೇ ರಾಜ್ ನನ್ನು ಪ್ರೀತಿಸುತ್ತಿದ್ದ ನರ್ಗೀಸ್ ಳ ಬಾಳಿನಲ್ಲಿ ಆ ಒಂದು  ಪತ್ರ ಬಿರುಗಾಳಿಯನ್ನೇ ಎಬ್ಬಿಸಿತು. ಈ ಕಾರಣದಿಂದ ರಾಜ್ ಕಪೂರ್ ನ ಪ್ರೇಮದ ನದಿಯಲ್ಲಿ ಜೊತೆಯಾಗಿ ಈಜುವ ಅದೃಷ್ಟ ದಕ್ಕದೇ ಹೋದಾಗ ಒಂಟಿಯಾದಳು ನರ್ಗೀಸ್. ಇದರ ಯಕಃಶ್ಚಿತ ಕಲ್ಪನೆಯ ಸುಳಿವೂ ಕೂಡ ಇಲ್ಲದವಳಿಗೆ ರಾಜ್ ಕಪೂರ್ ನ ಆ ವರ್ತನೆ ಆಘಾತ ತಂದಿತ್ತು.  ಹಾಗೆಂದು ಮೀನಾಕುಮಾರಿಯಂತೆ  ಧೃತಿಗೆಟ್ಟು ನಶೆಯೇರಿಸಿಕೊಳ್ಳಲಿಲ್ಲ;  ಮಧುಬಾಲಾಳಂತೆ ಮೋಹಪಾಶದಲ್ಲಿ ಬಿದ್ದು ಒದ್ದಾಡಲಿಲ್ಲ; ಮಿನುಗು ತಾರೆ ಕಲ್ಪನಾಳಂತೆ ಬಂಗಲೆಯಲ್ಲಿ ವಜ್ರದ ವಿಷದೊಳಗೆ ಲೀನವಾಗಲಿಲ್ಲ ಬದಲಾಗಿ ಆಕೆ ಕಂಡುಕೊಂಡದ್ದು ಜಗತ್ತಿನ ಪ್ರೇಮಿಗಳಿಗೊಂದು ಆದರ್ಶವಾಗಬಹುದಾದ ವಾಸ್ತವದ ಮಾದರಿ ಹಾದಿಯನ್ನೆಂದರೆ ನೀವು ನಂಬಲೇಬೇಕು. ಅದುವರೆಗೂ ಕುಸುಮಗಳಿಂದ ತುಂಬಿದ, ದುಂಬಿಗಳಿಂದ ನಾದಮಯವಾಗಿರುವ, ಸ್ವರ್ಗದ ದಾರಿಯಲ್ಲಿ ಕನಸುಗಳ ಅಂಬಾರಿಯನ್ನೇರಿ ಹೊರಟಿದ್ದ ನರ್ಗೀಸ್ ಳಿಗೆ ಈಗ ಇದ್ದಕ್ಕಿದ್ದಂತೆ ರಾಜ್ ನ  ಪ್ರೇಮದ ಪಲ್ಲಕ್ಕಿಯಿಂದ ಇಳಿಯುವ ಸಮಯವಾಗಿತ್ತು.
ನಿನ್ನ ದಾರಿ ಬೇರೆ ಇಳಿದುಬಿಡು ಎಂದು  ರಾಜ್ ಮೊರೆದನೋ ಅಥವಾ ತಾನೇ ಪ್ರತಿಷ್ಠೆಗೆ ಬಿದ್ದು ಇನ್ನು ಸಾಧ್ಯವಿಲ್ಲ ಎಂದು ತಾನೇ ಇಳಿದು ಹೋದಳೋ ಇಲ್ಲವೇ, ಇಲ್ಲದ ಗಾಸಿಪ್ ಗಳಿಂದ ಹುಟ್ಟಿಕೊಂಡ ಸಂದೇಹಗಳೇ ಬೇರೆ ಮಾಡಿದವೋ ಗೊತ್ತಿಲ್ಲ. ಅಂತೂ ರಾಜ್ ನ ಪ್ರೇಮದ ಪುಷ್ಪಕ ವಿಮಾನದಿಂದ ಇಳಿದೇ ಬಿಟ್ಟಿದ್ದಳು. ಹೋಗುವಾಗ ಮಾತ್ರ ನರ್ಗೀಸ್ 
"ರಸಿಕ್ ಬಲಮಾ ಯೇ ದಿಲ್ ಕ್ಯೂಂ ಲಗಾಯಾ 
ತುಝೆ ದಿಲ್ ಕ್ಯೂಂ ಲಗಾಯಾ".............
ಡೂಂಢೇ ಓ ಪಾಗಲ್ ನಯನಾ 
ಪಾಯೇ ನಾ ಏಕ್ ಪಲ್ ಚೈನಾ
(ಓ ಪ್ರೇಮವೇ ನಿನಗೇಕೆ ನನ್ನ ಹೃದಯವನ್ನು ಕೊಟ್ಟೆ......ಹುಡುಕುತ್ತಿವೆ ಹುಚ್ಚು ಕಣ್ಣುಗಳು ಕ್ಷಣವೂ ವಿರಮಿಸದಂತೆ ನಿನ್ನ) ಎಂದು ವಿರಹದ, ಪಶ್ಚಾತ್ತಾಪದ ಕಣ್ಣೀರನ್ನು  ಹರಿಸಿಯೇ ವಿದಾಯ ಹೇಳಿದಳು. ಹಾಗೆ ಹೃದಯತುಂಬಿ  ಹಾಡಿದ್ದಳೆಂಬುದಕ್ಕೆ ಸಾಕ್ಷಿಯೆಂದರೆ ಈ ಹಾಡಿನ ದೃಶ್ಯೀಕರಣದಲ್ಲಿ ಗ್ಲಿಸರಿನ್ ನ್ನೇ ಬಳಸಿರಲಿಲ್ಲ ನರ್ಗೀಸ್. ಆದರೂ ಕಣ್ಣೀರು ಮಾತ್ರ ಕೋಡಿಯಾಗಿ ಹರಿದಿತ್ತು. ಸುಳಿವೇ ಇಲ್ಲದ ಪ್ರೇಮಿಗಳ ಬದುಕಿನಲ್ಲಿ ಸಂದೇಹದ ಕಿಡಿಯೊಂದು ಬಿದ್ದು ಹೊತ್ತಿ ಉರಿಯಲಾರಂಭಿಸಿದಾಗ ಬದುಕು ಛಿದ್ರವಾಗಿರುತ್ತದೆ. ರಾಜ್ ಹಾಗೂ ನರ್ಗೀಸ್ ಳ ಪ್ರಣಯದ ಬಾಳಿನಲ್ಲಿ ಸಂಭವಿಸಿದ್ದು ಇದೇ. 
     ಹಾಗೆ ರಾಜ್ ನ ಹೃದಯ ಪಲ್ಲಕ್ಕಿಯಿಂದ ಇಳಿದು ಹೋದ ಮೇಲೆ  ಮುಂದೇನು ಎಂದು ಒಬ್ಬಂಟಿಯಾಗಿ ಅಲೆಯುತ್ತಿರುವಾಗಲೇ ಭಯಾನಕ ತೀರ್ಮಾನವನ್ನು ಕೈಗೊಂಡು ಆತ್ಮಹತ್ಯೆಯ ಬಾಗಿಲಿಗೂ ಹೋಗಿಬಂದಳು. ಈ ಸಂಕಟಗಳ ಮಧ್ಯೆ ಅವಳನ್ನು ಕರೆದು ಕೈಹಿಡಿದದ್ದು "ಮದರ್ ಇಂಡಿಯಾ" ಸಿನೇಮಾ. ಅದುವರೆಗೂ ರಾಜ್ ನನ್ನು ಕೇಳಿಯೇ ಪ್ರತಿಯೊಂದು ಹೆಜ್ಜೆ ಇಡುತ್ತಿದ್ದ ನರ್ಗೀಸ್ ಳಿಗೆ ಈಗ ಕೇಳದೇ ಮುನ್ನಡೆಯುವ ಅನಿವಾರ್ಯತೆ ಎದುರಾಗಿಬಿಟ್ಟಿತ್ತು. ಅದೇನೂ ಅರಿಯದ ಬಲಿಪಶುವಾದೆನೆಂಬ ಮುಗ್ಧತೆಯೋ ಅಥವಾ ರಾಜ್ ಮೇಲಿನ ಒಣ ಪ್ರತಿಷ್ಠೆ, ಸ್ವಾಭಿಮಾನದ ಪ್ರಲಾಪಕ್ಕೊ ಇಲ್ಲವೇ, ಕಾರಣವಿಲ್ಲದ ಮುನಿಸಿನ ಅಟ್ಟಹಾಸಕ್ಕೋ, ಅವಳಂತೂ ರಾಜ್ ನಿಂದ ಬೇರೆಯಾಗಿ ಮದರ್ ಇಂಡಿಯಾ ಸಿನೇಮಾದಲ್ಲಿ ನಟಿಸುವ ತೀರ್ಮಾನವನ್ನು ತೆಗೆದುಕೊಂಡೇ ಬಿಟ್ಟಿದ್ದಳು. ರಾಜ್ ಕಪೂರ್ ಪ್ರಕಾರ "ನರ್ಗೀಸ್ ಆ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಾಗ, ಆಕೆಗೆ ಹೆಸರೊಂದನ್ನು ಬಿಟ್ಟರೆ, ಆ ಸಿನೇಮಾದ ಉಳಿದ ಯಾವ ಸಂಗತಿಗಳ ಬಗ್ಗೆಯೂ ಅರಿವಿರಲಿಲ್ಲ" ಹೌದು. ಇದರಿಂದ ಪ್ರತಿಯೊಂದು ಚಿತ್ರವನ್ನೂ ರಾಜ್ ಹಾಗೂ ನರ್ಗೀಸ್ ಇಬ್ಬರೂ ಸೇರಿ ಅಳೆದು ತೂಗಿ ಒಪ್ಪಿಕೊಳ್ಳುವ ತಾತ್ವಿಕತೆಯನ್ನಿಟ್ಟುಕೊಂಡಿದ್ದರೆಂದು  ತಿಳಿಯುತ್ತದೆ.
ಆ ಪ್ರೇಮವೆಂಬ ಮಾಯೆಯೇ ಹಾಗೆ. ಕೆಲವೊಮ್ಮೆ ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡಿದರೆ, ಮಗದೊಮ್ಮೆ ಅಸಾಧ್ಯವಾದುದನ್ನೂ ಸಾಧಿಸಿಬಿಡುವಂತೆ ಮಾಡಿಬಿಡುತ್ತದೆ ಎಂಬುದಕ್ಕೆ ನರ್ಗೀಸ್ ಅತ್ಯುತ್ತಮ ನಿದರ್ಶನ. 
"ಲಗನ್ ಮೋರೆ ಮನ್ ಕಿ 
ಬಲಮ್ ನಹೀ ಜಾನೆ
ಸಜನ್ ನಹೀ ಜಾನೇ" 
(ಮನದ ಕಳವಳ ಹಾಗೂ ಹೃದಯದೊಲುಮೆಯನ್ನು ಅರಿಯಲೇ ಇಲ್ಲ ಪ್ರಿಯಕರ) 
ಎಂದು ನರ್ಗೀಸ್ ಹಾಡುವುದನ್ನು ಕೊನೆಯವರೆಗೂ ಕೇಳಿಸಿಕೊಳ್ಳಲೇ ಇಲ್ಲ ರಾಜ್. ಕುಪಿತಳಾಗದೇ ಆಕೆ ಆತ್ಮಸ್ಥೈರ್ಯದ ಬೆಳದಿಂಗಳಿನಲ್ಲಿ ಸಾಗಿ ಬೆಳಗಾಗುವುದರೊಳಗಾಗಿ ದಂತಕಥೆಯಾಗಿ ತನ್ನ ಹೆಸರನ್ನು ಜಗತ್ತಿನ ಇತಿಹಾಸದಲ್ಲಿ ದಾಖಲು ಮಾಡಿಬಿಟ್ಟಿದ್ದಳು.
      ಅರಿವಿತ್ತೋ ಅರಿವಿರಲಿಲ್ಲವೋ  'ಮದರ್ ಇಂಡಿಯಾ' ಎಂಬ ಅಭುತಪೂರ್ವ ಸಿನೇಮಾವೊಂದರಿಂದಲೇ ಆಕೆಯ ಜೀವನದ ದಿಕ್ಕುದೆಸೆಗಳೇ ಬದಲಾಗಿಬಿಟ್ಟವು.  ಹೌದು. ಆಕೆ ಅಂದುಕೊಂಡದ್ದನ್ನು ತನ್ನ ಮೊದಲ ಸ್ವತಂತ್ರ ಆಯ್ಕೆಯ ಸಿನೇಮಾವೊಂದರಿಂದಲೇ ಸಾಧಿಸಿಬಿಟ್ಟಳು. ಆಕೆ ಈ ತೀರ್ಮಾನದ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಿದ್ದಳೆಂದರೆ ಅಂದು  ಜಗತ್ತು ನಂಬಲಿಲ್ಲ. ರಾಜ್ ಇನ್ನೆಂದೂ ತನ್ನ ಸಮೀಪ ಸುಳಿಯಬಾರದೆಂದು ದೂರವಿಡುವುದು ಆಕೆ ಹೊಡೆದ ಮೊದಲ ಹಕ್ಕಿಯಾದರೆ, ಮತ್ತೊಂದು ತನ್ನ ಮೊದಲ ಪ್ರೀತಿಯನ್ನು ಬಲಿಕೊಟ್ಟು,  ಸುನೀಲ್ ದತ್ತನಿಂದ ಜೀವ ಪಡೆಯುವುದಾಗಿತ್ತು. 
    ಮದರ್ ಇಂಡಿಯಾದಲ್ಲಿನ ಅದೊಂದು ಹೃದಯವಿದ್ರಾವಕ ದೃಶ್ಯ ನರ್ಗೀಸ್ ಹಾಗೂ ಸುನೀಲ್ ದತ್ತ ರ ಸುನೀಲ ಸಂಬಂಧಕ್ಕೆ ಮುನ್ನುಡಿ ಬರೆದುಬಿಟ್ಟಿತ್ತು. ಮದರ್ ಇಂಡಿಯಾ  ಕಥೆಯಲ್ಲಿ ತಾಯಿ ರಾಧಾ( ನರ್ಗೀಸ್)ಳು ಡಕಾಯಿತನಾಗಿ ಬದಲಾಗಿದ್ದ ತನ್ನ ಕರುಳ ಕುಡಿ ಬ್ರಿಜು ( ಸುನೀಲ್ ದತ್ತ) ನನ್ನು ಹುಲ್ಲಿನ ಬಣವೆಯಲ್ಲಿ ಬಚ್ಚಿಟ್ಟು ಉಳಿಸಿಕೊಳ್ಳುವ ಸನ್ನಿವೇಶದ ಚಿತ್ರೀಕರಣದಲ್ಲಿ ಅವಘಡವೊಂದು ಸಂಭವಿಸಿಬಿಟ್ಟಿತ್ತು. 1957 ರ ಸಮಯದಲ್ಲಿ ಒಣ ಹುಲ್ಲಿನ ಬಣವೆಗಳಿಗೆ ಬೆಂಕಿಯಿಟ್ಟು ಚಿತ್ರೀಕರಣ ಮಾಡುವಾಗ ಬೀಸಿದ ಗಾಳಿಯಿಂದಾಗಿ ಹೊತ್ತಿಕೊಂಡ ಬೆಂಕಿ ನಿಯಂತ್ರಣಕ್ಕೆ ಬಾರದೇ ನರ್ಗೀಸ್ ಅಗ್ನಿಯ ಮಧ್ಯೆ ಸಿಲುಕಿಕೊಂಡಳು. ತಕ್ಷಣ ಎಚ್ಚೆತ್ತುಕೊಂಡು ಮಧ್ಯೆ ಧುಮುಕಿದ  ಸುನೀಲ್ ದತ್ತ ಅವಳ ಮೇಲೆ ಹೊದಿಕೆ ಹೊದಿಸಿ ಹೊತ್ತು ತಂದು ಉರಿಯುವ ಬೆಂಕಿಯಿಂದ ಅವಳನ್ನು ಪಾರು ಮಾಡಿದ್ದ. ಇದು ಆಕೆಯ ಎದೆಯಲ್ಲಿದ್ದ ರಾಜ್ ಪ್ರೇಮದಿಂದಾದ ಮೋಸದ ಉರಿಯನ್ನು ನಂದಿಸಿ, ಜೀವ ಉಳಿಸಿದ ಸುನೀಲ್ ದತ್ತ ನೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಿತ್ತು. ಮುರಿದು ಬಿದ್ದ ಪ್ರೀತಿಯ ಮಹಲನ್ನು ಕಟ್ಟಬೇಕೆಂದು ಹೆಣಗಾಡಿದ ರಾಜ್ ಕಪೂರ್ ಒಮ್ಮೆ ಆಕಸ್ಮಾತ್ ಆಗಿ ನರ್ಗೀಸ್ ಳನ್ನು ಭೇಟಿಯಾಗುತ್ತಾನೆ.  ಮಾತುಗಳೇ ಹೊರಡದೇ ಮೌನದ ಕಡಲಿನಲ್ಲಿ ತೇಲಿದ ಆದ್ರ್ರ ಸಮಯದಲ್ಲಿ ನರ್ಗೀಸ್ ಳ ಕೈಹಿಡಿದು "ಮರಳಿ ಬರುವೆಯಾ ಎನ್ನ ಹೃದಯದರಮನೆಗೆ” ಎಂದು ಕೇಳಿದ. ಅದಾಗಲೇ ಆತನೊಂದಿಗೆ ಕಂಡ ಕನಸುಗಳನ್ನೆಲ್ಲಾ ಹೆಡೆಮುರಿ ಕಟ್ಟಿ ಸಮಾಧಿಮಾಡಿದ್ದ ನರ್ಗೀಸ್ ಳ ಹೃದಯದೊಳಗಿನ ಪ್ರೀತಿಯ ಚಿಲುಮೆ ಬತ್ತಿಹೋಗಿತ್ತು. ಕಾಲ ಮಿಂಚಿ ಹೋಗಿತ್ತು. ತಲೆಯೆತ್ತಿ ಉತ್ತರಿಸಿದ ನರ್ಗೀಸ್ ಳ "ನಿನ್ನ ಹೆಂಡತಿ ಮಕ್ಕಳೊಂದಿಗೆ ಸುಖವಾಗಿರು" ಎಂಬ ಮಾತುಗಳನ್ನು ರಾಜ್ ಕಪೂರ ಜೀವವಿರುವವರೆಗೂ ಮರೆಯಲಾಗಲಿಲ್ಲ. ರಾಜ್ ನನ್ನು ಬಿಟ್ಟು ಏಕಾಂಗಿತನದೊಂದಿಗೆ ಗೆಳೆತನ ಮಾಡಿದ್ದ ನರ್ಗೀಸ್ ತನ್ನ ದಾರಿಯಲ್ಲಿ ಬಹು ದೂರ ಬಂದಾಗಿತ್ತು. ಈ ಮರಳುಗಾಡಿನ ಏಕಾಂತದ ಪಯಣದ ಮಧ್ಯದಲ್ಲಿ ಸುನೀಲ ದತ್ತ ನ ಒಲುಮೆಯ ಓಯಾಸಿಸ್ ದಕ್ಕಿಬಿಟ್ಟಿತ್ತು. ಅಲ್ಲಿಂದ ಪ್ರಾರಂಭವಾದ ಅವರಿಬ್ಬರ ಪ್ರೇಮಕಥನ ದಾಖಲಾದ ಪುಸ್ತಕದ ಹೆಸರು ‘ಡಾರ್ಲಿಂಗ್ ಜಿ’. ಈ ಕೃತಿಯಲ್ಲಿ ಲೇಖಕರಾದ ಕಿಶ್ವರ್ ದೇಸಾಯಿಯವರು ಅಕ್ಷರಿಸಿದಂತೆ ನರ್ಗೀಸ್ ಳ ಮಾತುಗಳಿವು - -  “If it were not for him, perhaps I would have ended my life before the 8th of March. For I alone know the turmoil that was going through me. ‘I want you to live,’ he said and I felt I had to live. Begin all over again.” ಒಬ್ಬರನ್ನೊಬ್ಬರು ‘ಡಾರ್ಲಿಂಗ್ ಜಿ’ ಎಂದೇ ಸಂಬೋಧಿಸಿಕೊಳ್ಳುತ್ತಿದ್ದ ಈ ದಂಪತಿಗಳು ಸಿನೇಮಾ ಬಿಟ್ಟರೆ ತಮ್ಮನ್ನು ತೊಡಗಿಸಿಕೊಂಡಿದ್ದು, ವಿಕಲಚೇತನ ಮಕ್ಕಳ ಕಲ್ಯಾಣದ ಸಾಮಾಜಿಕ ಸೇವೆಯಲ್ಲಿ. ಇದೆಲ್ಲವನ್ನು ಗಮನಿಸಿಯೇ ಆಕೆಗೆ ಜಗತ್ತು, ‘ಶತಮಾನ ಕಂಡ ಶ್ರೇಷ್ಠ ನಟಿ’ಯೆಂದು ಗೌರವವನ್ನು ಸಲ್ಲಿಸಿತು. ಭುವನವೇ ಭಾರತೀಯ ಚಿತ್ರರಂಗದತ್ತ ಹೊರಳಿನೋಡುವಂತೆ ಮಾಡಿದ ಈಕೆಯ ‘ಮದರ್ ಇಂಡಿಯಾ’ ಭಾರತೀಯ ಅಮೋಘ ಪರಂಪರೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದ ಕೀರ್ತಿಯನ್ನು ಹೊಂದಿದೆ.
ರಾಜ್ ನ ಪ್ರೀತಿಯ ಮೋಸವನ್ನು ನುಂಗಿಕೊಂಡ ದುಃಖದಲ್ಲಿ ಒಪ್ಪಿಕೊಂಡ ‘ಮದರ್ ಇಂಡಿಯಾ’ ಸಿನೇಮಾ ಆಕೆಗೆ ಇನ್ನಿಲ್ಲದ ಹೆಸರನ್ನು ಜೊತೆಗೆ ಫಿಲ್ಮಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು. ಈ ಅಪೂರ್ವವಾದ ಸಿನೇಮಾ ಕುರಿತು ನ್ಯೂಯಾರ್ಕ ಟೈಮ್ಸ ಪತ್ರಿಕೆ ಬಣ್ಣಿಸಿರುವುದು ಹೀಗೆ -
"A defining film in the history of Bollywood, the Hindi film industry based in Bombay, Mehboob Khan's ''Mother India'' (1957) is often said to have helped set the pattern for the nearly 50 years of Indian film that has followed it."  
ಮದರ್ ಇಂಡಿಯಾ ಸಿನೇಮಾ ಭಾರತೀಯ ಚಲನಚಿತ್ರರಂಗದಲ್ಲಿ ಹುಟ್ಟುಹಾಕಿದ ಸೆನ್ಸೇಷನ್ ಎಂತಹುದೆಂಬುದಕ್ಕೆ ಮೇಲಿನ ಮಾತುಗಳು ನಿದರ್ಶನವನ್ನೊದಗಿಸುತ್ತವೆ. ಜಗತ್ತಿನ ಅಕಾಡೆಮಿ ಪ್ರಶಸ್ತಿಯ ವಿದೇಶಿ ಭಾಷೆಯ ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ನಾಮಾಂಕಿತವಾದ ಭಾರತದ ಪ್ರಪ್ರಥಮ ಚಲನಚಿತ್ರ ಎಂಬ ಹೆಗ್ಗಳಿಕೆ ಈ 'ಮದರ್ ಇಂಡಿಯಾ' ಚಲನಚಿತ್ರದ್ದು. 2011ರಲ್ಲಿ ರೀಡಿಫ್.ಕಾಂ ಸಂಸ್ಥೆಯಂತೂ ನರ್ಗಿಸ್ ಅವರನ್ನು ‘ಸಾರ್ವಕಾಲಿಕವಾದ ಶ್ರೇಷ್ಠ ನಟಿ’ ಎಂದು ಹೆಸರಿಸುತ್ತಾ “ವೈವಿಧ್ಯತೆ, ಅಭಿವ್ಯಕ್ತಿ, ಪ್ರಸನ್ನತೆ ಮತ್ತು ಅಪ್ಯಾಯಮಾನತೆಗಳ ಸಂಗಮವನ್ನು ಬಿಂಬಿಸುವ ಸಂಭ್ರಮದ ನಟಿ ನರ್ಗಿಸ್ ದತ್’’ ಎಂದು ವರ್ಣಿಸಿದಾಗ, ಜಗತ್ತು ಇದು ಅವಳ ಸಾಧನೆಗೆ ಸಂದ ಅತ್ಯುತ್ತಮ ನುಡಿನಮನವೆಂದು ಬೀಗಿತ್ತು.
     ಹೀಗೆ ಸುನೀಲ ದತ್ತನೊಂದಿಗೆ ಸುಂದರವಾದ ಬದುಕನ್ನು ಕಟ್ಟಿಕೊಂಡ ನರ್ಗೀಸ್ ಳಿಗೆ ಹಾದಿ ತಪ್ಪುತ್ತಿದ್ದ ಮಕ್ಕಳ ಚಿಂತೆ ಕಾಡಲಾರಂಭಿಸಿತು. ಈ ಹೊತ್ತಿನಲ್ಲೇ ಅವಳೊಡಲಿಗೆ ಬಂದಡರಿದ ಕ್ಯಾನ್ಸರ್ ಮಹಾಮಾರಿ ಕೊನೆಯವರೆಗೂ ಅವಳನ್ನು ಕೈಬಿಡಲೇ ಇಲ್ಲ. ಅಂತಿಮವಾಗಿ 1981 ರಲ್ಲಿ ಆಕೆ  ಕೊನೆಯುಸಿರೆಳೆದಾಗ " ಕಾ ಸೇ ಕಹಾ ಮೈ ಬಹಾನಾ" (ಯಾರಿಗೆ ಹೇಳಲಿ ನನ್ನ ದುರಂತ ಕಥೆಯನ್ನು) ಎಂದು ಪರದೆಯ ಮೇಲೆ ಹಾಡಿದ್ದ ಹಾಡನ್ನು ಹೃದಯದೊಳಗೆ ಮತ್ತೊಮ್ಮೆ ಹಾಡಿಕೊಂಡಿರಬೇಕು. ಅಂದು ಅಂತಿಮ ದರ್ಶನಕ್ಕೆ ಬಂದ ರಾಜ್ ಕಪೂರ್ ನ ಕಪ್ಪುಕನ್ನಡಕದೊಳಗೆ ಹೊಳೆಯುವ ಕಣ್ಣೀರು ಮಡುಗಟ್ಟಿ ನಿಂತಿದ್ದು ಮಾತ್ರ ಯಾರಿಗೂ ಕಾಣಲೇ ಇಲ್ಲ. ರಾಜ್ ಕಪೂರ್ ನ ಆ ದುಸ್ಥಿತಿಯನ್ನು ನೋಡಿ ನರ್ಗೀಸ್ ಹಾಡಿದ ಸಾಲನ್ನು ನಾವು ಹೀಗೆ ಹಾಡಬೇಕಷ್ಟೇ.
"ಏಕ್ ಬಾರ್ ಕಹೋ ಓ ಜಾದೂಗಾರ್ 
ಯೇ ಕೌನಸಾ ಖೇಲ್ ರಚಾಯಾ" 

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...