Total Pageviews

Thursday 21 October 2021

ಬೆಳದಿಂಗಳ ಕಾವ್ಯ

ಬೆಳದಿಂಗಳ ಕಾವ್ಯ
ಗಾಲಿಬ್ ಹಾಡುತ್ತಾನೆ ಹೀಗೆ -
"ಮಸೀದಿಯಲ್ಲಿ ಕುಳಿತು ಮದಿರೆಯನ್ನು ಕುಡಿಯಲು ಬಿಡು ಗಾಲಿಬ್
ಇಲ್ಲವಾದರೆ ದೇವರಿಲ್ಲದ ಸ್ಥಳವನ್ನಾದರೂ ಹುಡುಕಿಕೊಡು ಕುಡಿಯಲು ಶರಾಬು"
ಎಂದು ದೇವರಿಲ್ಲದ ಸ್ಥಳವನ್ನು ಶೋಧಿಸುವ ಮಾರ್ಗವಾಗಿ ಕವಿತೆ ಗಾಲೀಬನನ್ನು ಕಾಡಿದರೆ, ಸಂತ ಶಿಶುನಾಳ ಶರೀಫರ ಬದುಕಿನುದ್ದಕ್ಕೂ ಇದೇ ಪ್ರಶ್ನೆ ನಾದವಾಗಿ ಹರಿದಿರುವುದನ್ನು ಅಲ್ಲಗಳೆಯಲಾಗದು. ಕನಕದಾಸರಲ್ಲಿ ಈ ಅಂತರಂಗದ ಶೋಧನೆ ಬಾಳೆಹಣ್ಣಿನ ಪ್ರಸಂಗದ ಮೂಲಕ ಸಾಕಾರವಾಗಿರುವುದನ್ನು ಗಮನಿಸಬೇಕು. ಇದನ್ನೇ ಬಸವಣ್ಣನವರು ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಎಂದು ಕೂಡಲಸಂಗಮದೇವನನ್ನೊಲಿಸಿಕೊAಡು ಪರಿಶೋಧಿಸುವ ಮಾರ್ಗವನ್ನಾಗಿ ವ್ಯಾಖ್ಯಾನಿಸುತ್ತಾರೆ. ಜಿ.ಎಸ್. ಶಿವರುದ್ರಪ್ಪನವರಿಗೆ ಕಾವ್ಯ ಕೆಲವು ಉತ್ತರಿಸಲಾಗದ ಪ್ರಶ್ಜೆಗಳ ಸ್ವರೂಪದಲ್ಲಿ ದಕ್ಕಿದರೆ, ಅಡಿಗರಿಗೆ ಹುತ್ತಗಟ್ಟಿದ ಚಿತ್ತದ ಸುಳಿಯಾಗಿ ಆವರಿಸಿದ್ದಿದೆ. ಟಿ. ಎಸ್. ಇಲಿಯಟ್‌ನಿಗೆ ಕಾವ್ಯ ಅವನ ಬದುಕಿನಂತೆ ನೀರ ಮೇಲಿನ ನೆನಪುಗಳಾಗಿ ಹರಡಿಕೊಂಡಿರುವುದು ಅಷ್ಟೇ ವಿಸ್ಮಯವನ್ನುಂಟು ಮಾಡುತ್ತದೆ. ಕಾವ್ಯವೆಂದರೆ ಏನೂ ಅಲ್ಲ ಅದೊಂದು ಬಯಲು  ಎಂದವನು ಅಲ್ಲಮ. ‘ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು ಬಯಲು ಬಯಲಾಗಿ ಬಯಲಾಯಿತ್ತಯ್ಯ " ಎಂದು ಹಾಡುತ್ತಲೇ ಕಾವ್ಯದಂತೆ ಬಯಲಾಗಿ ಹೋದ. ಕಾವ್ಯ ಕೇವಲ ರಸಾನಂದಕ್ಕಾಗಿ ಮಾತ್ರವಲ್ಲ. 

“ಕಾವ್ಯಂ ಯಶಸ್ಸೇರ್ಥಕೃತೇ ವ್ಯವಹಾರವಿದೆ
ಶಿವೇತರಕ್ಷತಯೇ ಕಾಂತಾ ಸಮ್ಮಿತತಯೋಪದೇಶಯುಜೆ”
ಎಂದು ಮಮ್ಮಟ ಹೇಳುವ  ಕಾವ್ಯ ಕೀರ್ತಿಗಾಗಿ, ವ್ಯವಹಾರ ಜ್ಞಾನಕ್ಕಾಗಿ, ಧನಾರ್ಜನೆಗಾಗಿ, ಪರಮಾನಂದಕ್ಕಾಗಿ, ಅಮಂಗಳ ನಿವಾರಣೆಗಾಗಿ, ಕಾಂತೆಯAತೆ ಉಪದೇಶಿಸುವುದಕ್ಕಾಗಿ ಸಹಾಯ ಮಾಡಬಲ್ಲದು. ಈ ಕಾವ್ಯ ಪ್ರಯೋಜನಗಳು ಪ್ರಾಚೀನ ಕಾವ್ಯವನ್ನು ಅನುಲಕ್ಷಿಸಿ ಹೇಳಲಾಗಿದೆ. 

ನಡುಗನ್ನಡದ ಕಾವ್ಯದ ಪರಿಣಾಮಗಳು ಇದಕ್ಕಿಂತ ಭಿನ್ನವಾಗಿವೆ. ಪರಂಪರೆಯ ಕಟ್ಟಳೆಯೊಳಗೆ ಬಂಧಿಯಾದ ಅರಮನೆಯ ಹಾಗೂ ಪಂಡಿತರ ಕಾವ್ಯವನ್ನು ಮರಿದು ಕಟ್ಟಿದ ವಚನಕಾರರು ವ್ಯವಹಾರ ಜ್ಞಾನ ಉಪದೇಶಗಳಿಗೆ ಸೀಮಿತವಾಗಿದ್ದ ಕಾವ್ಯಪ್ರಯೋಜನಗಳನ್ನು ಅದೆಷ್ಡರ ಮಟ್ಟಿಗೆ ವಿಸ್ತರಿಸಿದರೆಂದರೆ ವಚನವೆಂದರೆ ಬದುಕು; ಬದುಕೆಂದರೆ ವಚನವೆನ್ನುವಂತಾಯಿತು. 
“ಅಪ್ಪನು ನಮ್ಮ ಮಾದಾರ ಚೆನ್ನಯ್ಯ
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ
ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ
ಎನ್ನನೇತಕ್ಕರಿಯರಿ ಕೂಡಲಸಂಗಯ್ಯಾ
ಎನ್ನುವ ಕಾವ್ಯಕ್ಕೆ ಬಿಜ್ಜಳ ಉರುಳಾಗಿ ಪರಿಣಮಿಸಿದ. ಲಕ್ಷದ ತೊಂಭತ್ತಾರು ಸಾವಿರ ಶರಣರ ಮಾರಣಹೋಮವಾದರೂ ಬದುಕಾಗಿದ್ದ ಕಾವ್ಯವನ್ನು ಮಾತ್ರ ತ್ಯಜಿಸಲಿಲ್ಲ ಶರಣರು. ಶ್ರೀಶೈಲ, ಉಳವಿ, ಕೂಡಲಸಂಗಮ ಹೀಗೆ ಬದುಕು ಹರಿದಲ್ಲೆಲ್ಲಾ ಹರಿದರು ನದಿಯಾಗಿ. ಅಂದರೆ ಕಾವ್ಯವೆಂದರೆ ಅದೊಂದು ಸಂಭ್ರಮದ ಕಡಲು ಮಾತ್ರವಲ್ಲ; ಸಂಕಟದ ಹೆರಿಗೆಯೂ ಹೌದು. ಇದನ್ನೇ ರಾಗಂರವರು ಕಾವ್ಯವೆನ್ನುವುದು ಪದರುಡಿಯ ಕೆಂಡವೆನ್ನುತ್ತಾರೆ. ಝಳಪಿಸಿದರೆ ಖಡ್ಗವಾಗಬಲ್ಲ, ಅಪ್ಪಿಕೊಂಡರೆ ಮುಗ್ಧತೆಯ ಮಗುವಾಗಬಲ್ಲ, ಕೆರಳಿದರೆ ಕೆಂಡವಾಗಬಲ್ಲ, ಅರಳಿದರೆ ಕುಸುಮವಾಗಬಲ್ಲ, ಹರಿದರೆ ನದಿಯಾಗಬಲ್ಲ ಜಗತ್ತಿನ ಏಕೈಕ ದಿವ್ಯವೆಂದರೆ ಅದು ಕಾವ್ಯ ಮಾತ್ರ. ಕುವೆಂಪು, ಬೇಂದ್ರೆ, ಪುತಿನರಂತಹ ದಾರ್ಶನಿಕರು ಪ್ರಕೃತಿ, ರಮ್ಯತೆ, ಆದರ್ಶ, ದೇಶಭಕ್ತಿಗಾಗಿ ನವೋದಯವನ್ನು ಹಾಡಿದರೆ, ಗೋಪಾಲಕೃಷ್ಣ ಅಡಿಗರಂತಹ ಮಹನೀಯರು ಸಂಕೀರ್ಣ ಹಾಗೂ ವೈಯಕ್ತಿಕ ಸಂಘರ್ಷಗಳ ನವ್ಯ ಗೀತೆಗಳನ್ನು ಆಲಾಪಿಸಿದರು. ಸಿದ್ಧಲಿಂಗಯ್ಯ, ದೇವನೂರರು ಕ್ರಾಂತಿಯನ್ನೇ ಕಾವ್ಯವಾಗಿಸಿಕೊಂಡರು.

 ಹೀಗೆ ಎಲ್ಲವೂ, ಏನೆಲ್ಲವೂ ಆದ ಕಾವ್ಯವನ್ನು ಆರಾಧಿಸುವುದೆಂದರೆ ಎಲ್ಲಿಲ್ಲದ ಮಹದಾನಂದ. ಬೆಳದಿಂಗಳು, ಕಾವ್ಯ, ಮಗು, ಗುರು, ಇತಿಹಾಸ, ಕುಶಲೋಪರಿ, ತಹತಹಿಕೆಗಳ ಸಮ್ಮಿಲನ, ಹೀಗೆ ಬದುಕಿನ ರಸಾಯನಗಳೆಲ್ಲವೂ ಮೇಳೈಸಿ ಸಂಭವಿಸಿದ ಸಮ್ಮೇಳನವೇ ಈ ಬೆಳದಿಂಗಳ ಕಾವ್ಯಗೋಷ್ಠಿ. ಮಹರ್ಷಿ ವಾಲ್ಮೀಕಿ, ಕೆ.ಎಸ್. ನಿಸಾರ್ ಆಹಮ್ಮದ್, ಗ್ರಾಹಕರ ತಲ್ಲಣಗಳು, ಗಜಲ್, ಭಾವಗೀತೆ, ವಿರಹ, ಪ್ರೇಮ, ಪ್ರಶ್ನೆಗಳು ಹೀಗೆ ವೈವಿಧ್ಯಮಯ ವಸ್ತುಗಳೆಲ್ಲವೂ ಚಂದಿರನ ಮಡಿಲಲ್ಲಿ ಬೆಳದಿಂಗಳ ಕಾವ್ಯಗಳಾಗಿ ಧ್ಯಾನಿಸಿದ ಬಗೆಯನ್ನು ಮೆಲುಕು ಹಾಕುತ್ತಲೇ ಇರಬೇಕೆನಿಸುತ್ತಿದೆ. ಸಹೃದಯರೆಲ್ಲರೂ ಚಕೋರರಾಗಿ ಬೆಳದಿಂಗಳ ಕವಿತೆಯ ಸಾಲುಗಳನ್ನು ಹೀರಿ ತಣಿಯುತ್ತಿದ್ದರೆನ್ನುವುದಕ್ಕೆ ತಲೆದೂಗುತ್ತಿದ್ದ ಪರಿಯೇ ಸಾಕ್ಷಿಯನ್ನೊದಗಿಸಿತ್ತು.  
 

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...