Total Pageviews

Monday 30 December 2019

ಪ್ರೇಮದೀಕ್ಷೆ


ತಾಜಮಹಲಿನೊಳಗಿನ ಪ್ರೇಮ

ಸುಗಂಧ ಹರಡಿ ಕರೆದು ತಬ್ಬುತಿದೆಕೊಸರಿ ಬಿಡಿಸಿಕೊಂಡಷ್ಟೂ ಬಿಗಿದಪ್ಪಿ ಹಬ್ಬುತಿದೆ


ಮೈಸವರಿ ಹೃದಯದೊಳಗಿಳಿದುಸಂತೈಸಿ ಅಮಲು ಹರಿಸಿಬತ್ತಿಹೋದ ಬೆಚ್ಚಗಿನ ಭಾವಬಿಂದು ಬಂಧುಗಳಹೆಕ್ಕಿ ಹೆಕ್ಕಿ ತೆಗೆಯುತಿದೆ


ಭಾಷೆ ಕಲಿಸಿ, ಮೌನ ನಿಲಿಸಿಧ್ಯಾನದೊಳಗೆ ಮೆರೆದುಬಯಕೆಗಳಿಗೆ ಸ್ಪೂರ್ತಿ ತುಂಬಿಪ್ರೇಮಮೂರ್ತಿಯ ಕಡೆದುಇನ್ನು ಮಹಲು ತನ್ನದೆಂದುಬೀಗುತಿದೆ


ಅಮೃತಶಿಲೆಯ ಬಿಳುಪು ಅಲ್ಲಿಪ್ರೇಮ ನಿತ್ಯ ನಲಿವ ಹೊಳಪುಬಲೆ ಬೀಸಿದಂತೆ ಸೆಳೆದು ಸಮಾಧಿಯಾದ ನೆನಪು ತೆಗೆದುಘಮಲು ಹರಿಸಿ ಉಸಿರುತಿದೆ


ನಿರ್ಮಲತೆಯ ಗಂಧ ತೀಡಿತಂಗಾಳಿಯ ಹೆಜ್ಜೆ ಬಳಸಿಕಲಾದೇವಿಯ ನಾಟ್ಯವಿದೆಂದುಶಹಜಾನನ ಪ್ರೇಮದೆದೆಯ ತೋರಿಆರ್ದ್ರ ಭಾವ ಹಣಿಸುತಿದೆ


ಎದೆಯೊಳಗೆ ಇಳಿದ ಮಹಲುನೂರ್ ಳಂತೆ ಆಳಿ ಒಡಲುಹಂಬಲದ ದಾರಿ ತೋರಿಪ್ರೀತಿ ಅಮೃತತ್ವ ಉಣಿಸಿಹೊರಗೆದ್ದು ಕುಣಿಯತಿದೆ


ಒಳಗೆ ಪಿಸುಮಾತುಗಳ ಸದ್ದುಜಹಾನರ ಸಲ್ಲಾಪದ ಮುದ್ದುಸಮಾಧಿಯ ಮೇಲೆ ಚಾಚಿಕೊಂಡ ಗುಲಾಬಿಯೆಸಳುಗಳ ಮೋಹಜಾಲಆವರಿಸಿ ಎಡೆಬಿಡದೆ ಅನುರಣಿಸಿಮತ್ತೆ ಮತ್ತೆ ಸೆಳೆಯುತಿದೆ


ನಿಜದೊಲುಮೆ ಗೂಡು ತಮ್ಮದೆಂದುಪ್ರೇಮದ ಮಹಾ ರೂಪಕವೆಂದುಕಂಬಗಳ ಮೇಲೆ ಮೈಚಾಚಿದ ಕುಸುರಿ ಚಿತ್ತಾರದ ವ್ಯೂಹವೂ ಬಂಧಿಸಿ ಕರೆದೊಯ್ಯುತಿದೆ


ಉದ್ಯಾನವನದ ಹುಲ್ಲುಮೊರಡಿಕೈಬೀಸಿ ಬಾಚಿ ಕರೆದುಚಂದಿರನ  ತಂಬೆಳದಿಂಗಳ ಮಜ್ಜನದ ನರುಗಂಪನೆರೆದುಪ್ರೇಮ‌ದೀಕ್ಷೆ ನೀಡುತಿದೆ

Wednesday 4 December 2019

ವಿಜ್ಞಾನದ ಹಬ್ಬ
ಬಂದಿದೆ ಬಂದಿದೆ ವಿಜ್ಞಾನದ ಹಬ್ಬ
ನಮಗೆಂದೇ ತಂದಿದೆ ಬೆಳಕಿನ ಹಬ್ಬ
ಏಳು ಬಣ್ಣಗಳ ತಿಳಿಯುವ ಹಬ್ಬ
ಹಲವು ವಿಷಯಗಳ ಕಲಿಯುವ ಹಬ್ಬ

ಪರಿಸರ ಗಣಿತ ಸಮಾಜದ ಹಬ್ಬ
ಹಾಡು ನಾಟಕ ಕುಣಿಯುವ ಹಬ್ಬ
ಮಾಡುತ ನಲಿಯುತ ಕಲಿಯುವ ಹಬ್ಬ
ಹರ್ಷದಿ ಆಡಿ ತಿಳಿಯುವ ಹಬ್ಬ

ಬದುಕಿನ ಪಾಠವ ಕಲಿಸುವ ಹಬ್ಬ
ಜ್ಞಾನದ ದೀವಿಗೆ ಹಿಡಿಯುವ ಹಬ್ಬ
ಚಟುವಟಿಕೆ ಪ್ರಯೋಗ ದರ್ಶನ ಹಬ್ಬ
ನೆಚ್ಚಿನ ಕೌಶಲ ಗಳಿಸುವ ಹಬ್ಬ

ನಾವ್ ಇಂದೇ ಜ್ಞಾನಿಗಳಾಗುವ ಹಬ್ಬ
ಗೆಳೆಯರೊಂದಿಗೆ ಕಲಿಯುವ  ಹಬ್ಬ
ವಿಶ್ಲೇಷಣೆ, ತರ್ಕ, ಕಾರಣ  ಹಬ್ಬ
ಪರಿಸರವನ್ನು ಅರಿಯುವ ಹಬ್ಬ

ತಿರುಗುವ ಭೂಮಿಯ ಹಿಡಿಯುವ ಹಬ್ಬ
ನ್ಯೂಟನ್ ಬೋಸ್ ನೆನಪಿನ ಹಬ್ಬ
ಕೂಡಿ ಕಳೆದು ಭಾಗಿಸುವ ಹಬ್ಬ
ಸಂಧಿ ವಚನ ವ್ಯಾಕರಣದ ಹಬ್ಬ

ರೈಮ್ಸ ಗೇಮ್ಸ ಟಿ ಪಿ ಆರ್ ಹಬ್ಬ
ಭೂಗೋಳವ ಸುತ್ತಿ ಬರೆಯುವ ಹಬ್ಬ
ಗೀತ ಸಂಗೀತ ಒಗಟಿನ ಹಬ್ಬ
ನಾಟಕ ನಾಟ್ಯವನಾಡುವ ಹಬ್ಬ

ನಾವೆಲ್ಲರೂ ಹಕ್ಕಿಗಳಾಗುವ ಹಬ್ಬ
ಹಾರಿ ಚಂದಿರ ಹಿಡಿಯುವ ಹಬ್ಬ
ಮರ ಗಿಡಗಳು ನಾವು ಆಗುವ ಹಬ್ಬ
ಉಸಿರಿನ ಹಸಿರು ತುಂಬುವ ಹಬ್ಬ

ನಮ್ಮೊಡನೆ ತಾರೆಗಳಿಳಿಯುವ ಹಬ್ಬ
ಸೌರಮಂಡಲಕೆ ನೆಗೆಯುವ ಹಬ್ಬ
ಬುಧ ಗುರು ಶುಕ್ರವ ಮುಟ್ಟುವ ಹಬ್ಬ
ಶನಿಯ ಉಂಗುರ ಧರಿಸುವ ಹಬ್ಬ

ಹುಣಸೆ ಬೀಜ ಗೋಲಿಗಳ ಹಬ್ಬ
ಎಣಿಸಿ ಲೆಕ್ಕವ ಮಾಡುವ ಹಬ್ಬ
ಗುಣಿಸಿ ಸಂತಸ ಹಂಚುವ ಹಬ್ಬ
ಭಾಗಿಸಿ ಕಷ್ಟವ ಕಳೆಯುವ ಹಬ್ಬ

ಬಣ್ಣದ ಚಿತ್ರವ ಬಿಡಿಸುವ ಹಬ್ಬ
ಬರಹದ ಕಲೆಯ ಅರಳಿಸೊ ಹಬ್ಬ
ರೇಖೆಯ ಮೇಲೆ ಪಯಣದ ಹಬ್ಬ
ಚಿತ್ತಾರದ ಮಾಯಾಲೋಕದ ಹಬ್ಬ

ಮೈಟೋಕಾಂಡ್ರಿಯ ಮೀರಿಸೋ ಹಬ್ಬ
ಹೃದಯದ ಮಾತು ಕೇಳುವ ಹಬ್ಬ
ಮೆದುಳಿನ ಚಿಂತನೆ ಅರಿಯುವ ಹಬ್ಬ
ಕರುಳಿನ ಕೂಗು ಆಲಿಸೋ ಹಬ್ಬ

ಭೂಪಟ ನಕಾಶೆ ರಚಿಸುವ ಹಬ್ಬ
ಏಳು ಖಂಡಗಳ ಜಿಗಿಯುವ ಹಬ್ಬ
ಸಾಗರದೊಳಗೆ ಮುಳುಗುವ ಹಬ್ಬ
ಜಲಚರಗಳೊಂದಿಗೆ ಆಡುವ ಹಬ್ಬ

ಜೀವಿಯ ನಿಜ ಜಾತಿ ತಿಳಿಯುವ ಹಬ್ಬ
ತಾರತಮ್ಯವ ತೊಲಗಿಸೋ ಹಬ್ಬ
ಕಲಿಕೆಯ ಅಂಬರವೇರುವ ಹಬ್ಬ
ಪಂಚತಂತ್ರಗಳ ಬಳಸುವ ಹಬ್ಬ

ಜೀವನ ಕಲೆಯ ತೋರಿಸೊ ಹಬ್ಬ
ಅಜ್ಞಾನದ ಬಲೆಯ ಬಿಡಿಸುವ ಹಬ್ಬ
ಪ್ರೀತಿ ಸಂತಸದಿ ಕುಣಿಯುವ ಹಬ್ಬ
ಜ್ಞಾನಸಾಗರದಿ ಈಜುವ ಹಬ್ಬ

ನೆಲ ಜಲ ಗಾಳಿಯಲಾಡುವ ಹಬ್ಬ
ಸೀಳಿ ರಚನೆಯ ತಿಳಿಯುವ ಹಬ್ಬ
ಕಾಡು ಪರ್ವತ ಏರುವ ಹಬ್ಬ
ಮಂಗಳನಂಗಳ ಕಾಣುವ ಹಬ್ಬ


Wednesday 13 November 2019

ಕರಿಕೆ ಸಂಹಾರ

ಕರಿಕೆ ಸಂಹಾರ

ಮಣ್ಣಿನ ಮಾಳಿಗೆಯನೇರಿ  ಸಾಕಿ ಹೊರಟಳೆಂದರೆ ಅಲ್ಲಿ ಮೈಯ್ಯುಬ್ಬಿ ಬೆಳೆದ ಕರಕಿಯೊಂದಿಗೆ  ಜಗಳವಾಡಲೇಬೇಕು. ಪ್ರತಿ ಮಳೆಗಾಲಕ್ಕೂ ಚಿಗುರಿ ತನ್ನ ಪರಿವಾರದೊಂದಿಗೆ ಹಬ್ಬುವ ಅದರ ಮೊಂಡುತನಕ್ಕೆ ಬೇಸತ್ತು ಹಳಿದು ಕದನಕ್ಕಿಳಿಯಲೇಬೇಕು.  ಅಲ್ಲಿ ಮಲ್ಲಯುದ್ಧ ದೃಷ್ಟಿಯುದ್ದ ಸಂಭವಿಸಲೇಬೇಕು. ಗೊಣಗುಟ್ಟುವ ಸದ್ದು ವಠಾರವನ್ನು ಆವರಿಸಿ ಅನುರಣಿಸಲೇಬೇಕು. ಹೌದು ಮನೆಯ ಮುಂದೆ ಹಸಿರು ಹಸಿರಾಗಿ ಮೆತ್ತನೆಯ ಕುಸುರಾಗಿ ಚಾಚಿಕೊಳ್ಳಬೇಕಾದ ಕರಕಿ ಮನೆಯ ತಲೆಯ ಮೇಲೆ ಹಬ್ಬಿಕೊಂಡರೆ ಅದಕ್ಕೆ ಸಿಗುವ ಸಮ್ಮಾನವಾದರೂ ಎಂತಹುದು ಎಂಬುದಕ್ಕೆ ನನ್ನವ್ವನ ಮಾತುಗಳನ್ನು ಕೇಳಬೇಕು. ಕರಕಿಯದ್ದೇ ಮಹಾಪರಾಧ. ಅದಕ್ಕಾಗಿ ಶಿಕ್ಷೆ ಕಟ್ಟಿಟ್ಟಬುತ್ತಿ. ಏನು ಕಾದಿದೆಯೋ ಇಂದು ಮಾಳಿಗೆಯ ಕರಕಿಗೆ ? ಎಂದು ಅಂಗಳದಲ್ಲಿನ ಮರ ಗಿಡ ಪ್ರಾಣಿಪಕ್ಷಿಗಳಿಗೆಲ್ಲ ಚಿಂತೆ. ನನ್ನ ಸಾಕಿ   ಹದಬೆರೆತ ಹಸಿ ನೆಲದ ಬಲೆ ಹಾಕಿ ಮತ್ತೆಂದೂ ಮೇಲೇಳದಂತೆ ಕರಕಿಯನ್ನು ಅದರ ಮಕ್ಕಳೊಂದಿಗೆ ಬಾಚಿ  ಸೆರೆಹಿಡಿಯುವ ಪರಿಯೇ ನನ್ನನ್ನು ಬೆರಗಾಗಿಸಿದೆ. ಒಮ್ಮೆ ಕರಕಿಯ ಮೂಗು ಹಿಡಿದು ಮಗದೊಮ್ಮೆ ಅದರ ಬೆಳೆದ ಜುಟ್ಟು ಎಳೆದು ಉಸಿರಾಡಲು ಬಿಡದಂತೆ, ನೆಲದ ಮರೆಯ ನಿಧಾನದಂತೆ ಅಡಗಿರುವ ಅದರ ಬೇರು ಸಹಿತ ಮೇಲೆತ್ತಿ ಹೆಡೆಮುರಿಕಟ್ಟಿ ಮುರಿದು ಕಸದ ಬುಟ್ಟಿಯೊಳಗೆ ಹಾಕಿದಳೆಂದರೆ ಮುಗಿಯಿತು ಕರಕಿಯೊಂದಿಗಿನ ಮಳೆಗಾಲದ ಸಹವಾಸ! ಆ ಕಳೆಯನ್ನು ಹೀಗೆ ಬುಡಸಮೇತ  ಕೀಳುವುದರಲ್ಲಿಯೂ ಒಂದು ಮಹಾತಂತ್ರವಿದೆ. ಅದು ಭವಿಷ್ಯದ ದೂರದೃಷ್ಟಿ.  ಬದುಕಿನಲ್ಲಿ ಅರಿತು ಆಚರಿಸಬೇಕಾದ ಮಹಾತತ್ವಶಾಸ್ತ್ರ. ಮನೆಯ ಹಣೆಯನ್ನೇರಿ ಕುಳಿತಿರುವ ಕಳೆಯನ್ನು ಅದರ ಬೀಜದ ಒಂದಂಶವೂ ನೆಲ ಮುಟ್ಟದಂತೆ ಹುಷಾರಾಗಿ ಮುಷ್ಟಿಯಲ್ಲಿ ಹಿಡಿದು ಕೀಳಬೇಕು. ರಕ್ತಬೀಜಾಸುರನಂತೆ ಈ ಮಾಳಿಗೆಯ ಕರಕಿ. ಬಿಟ್ಟಿರುವ ಬೀಜದ ಗೊನೆಯಿಂದ ಒಂದಂಶ ಬಿದ್ದರೂ ಸಾಕು ಮುಕ್ತಿ ಸಿಕ್ಕಿತೆಂದು ಕಾದು ಶುಭಕಾಲದಲ್ಲಿ ಒಮ್ಮೆಲೇ ಚಿಗುರೊಡೆಯುತ್ತವೆ ಸಾವಿರಾರು ಸಸಿಗಳು, ರಕ್ತಬೀಜಾಸುರನ ಹನಿ ರಕ್ತದಿಂದ ಪುಟಿದೇಳುವ ಲಕ್ಷಾಂತರ ರಾಕ್ಷಸರಂತೆ. ಅದರ ಪೌರಾಣಿಕ ಸೂತ್ರವನ್ನು ಚೆನ್ನಾಗಿಯೇ ಬಲ್ಲ ನನ್ನವ್ವಳ ಕೈಯ್ಯಿಂದ ಈ ಕರಕಿಯ ಒಂದೇ ಒಂದು ಬೀಜದ ಉಸಿರೂ ನೆಲಕಿಳಿಯದಂತೆ ಎಚ್ಚರದಿಂದ ಸಂಹಾರ ಮಾಡುವ ಆಕೆಯ ಯುದ್ಧೋತ್ಸಾಹದ ಕಲೆಯೇ ಅನುಕರಣೀಯ. ಅಷ್ಟೇ ಶಿಸ್ತುಬದ್ದ.  ಈ ಕಳೆ ಸಂಹಾರ ಕಲೆಯಲ್ಲೇನು  ಬದುಕಿನ ತತ್ವಶಾಸ್ತವಿದೆ ಎನ್ನುತ್ತಿರುವಿರೇನು ? ಸಮುದ್ರದ ನೆಲ್ಲಿ ಕಡಲ ಉಪ್ಪುಗಳಿಗಿರುವ ಸಂಬಂಧವೇ ಈ ಸಾಕಿ  ತೆಗೆಯುವ ಕಳೆ  ಮತ್ತು ಬದುಕುವ ಕಲೆಗಳ ಮಧ್ಯವಿರುವುದು. ಕಳೆಯನ್ನು ಬುಡಸಮೇತ ಕೀಳಬೇಕೆಂದು ನನ್ನವ್ವ ಹೇಳಿಕೊಟ್ಟ ಪಾಠ ಬದುಕಿನಲ್ಲಿಯ ಕೊಳೆಯನ್ನೂ ಬೇರುಸಹಿತ  ತೊಳೆಯಬೇಕೆಂಬುದನ್ನು ಕಲಿಸಿಕೊಟ್ಟಿದೆ ಅದರ ಬೀಜಸಹಿತ.
  ಅಂತರಂಗದ ಮಲಿನತೆಯನ್ನು ಕತ್ತಲೆಯನ್ನೂ ಕಳೆದುಕೊಳ್ಳುವ ತತ್ವಜ್ಞಾನದ ಈ ಕಳೆ ತೆಗೆಯುವ ಕಲೆಯ ದೃಷ್ಟಾಂತ ಬೋಧನೆ ಯಾವ ವಿಶ್ವವಿದ್ಯಾಲಯದಲ್ಲಿಯೂ ಹೀಗೆ ಸರಳ ಸುಲಾಲಿತ್ಯವಾಗಿ ದಕ್ಕಲಾರದು.
ಹಾಲುಂಡ ತವರೀಗಿ ಏನೆಂದು ಹರಸಲಿ
ಹೊಳೆದಂಡಿಲಿರುವ ಕರಕೀಯ ಕುಡಿಹಾಂಗ
ಹಬ್ಬಲಿ ಅವರ ರಸಬಳ್ಳಿ||
ಎಂಬ ತ್ರಿಪದಿಯ ಆಶಯದಲ್ಲಿ ( ಗರಿಕೆ) ಮನೆಯ ಮುಂದೆ ಇಲ್ಲವೇ ಹೊಳೆಯ ದಂಡೆಯ ಮೇಲೆ ಸುಂದರವಾಗಿ ಹಸಿರು ಹಾಸಿಗೆಯಂತೆ ಹಬ್ಬುವ ಕರಕಿಯ ಕುರಿತಾದದ್ದೇ ವಿನಹ ಮನೆಯ ನೆತ್ತಿಯನ್ನೇರಿ ಹಠಮಾಡಿ ಕುಳಿತಿರುವ ಹುಲ್ಲನ್ನು ಕುರಿತಾದದ್ದಲ್ಲ! ಇದು ನನ್ನವ್ವನಿಗೆ ತಿಳಿದಿರುವ ಸಂಗತಿಯೆಂದೇ ಆಕೆ ಅಟ್ಟವನ್ನೇರಿ ಅಟ್ಟಹಾಸಗೈಯ್ಯುತ್ತಿರುವ ಕರಕಿಯೊಂದಿಗೆ ಕದನಕ್ಕಿಳಿಯುವುದು.  ವಿಜಯದಶಮಿಯ ಆಚರಣೆಗೆ ಮುಂಚೆ ಒಂಭತ್ತು ದಿನಗಳ ನವರಾತ್ರಿಗೆ ಪೂರ್ವಸಿದ್ದತೆ ಮಾಡಿಕೊಳ್ಳುವಂತೆ, ಮಳೆ ತರುವ ಮೋಡಗಳಿಗಾಗಿ ಹಲವು ದಿನಗಳ ಕಾಲ ಕಾದು ಹೊಂಚುಹಾಕಿ ಕುಳಿತಿರುತ್ತಾಳೆ ಈ ಸಾಕಿ. ಹಸಿಯಾಗಿ ನೆಲ ಹದ ಮಾಡುವ ಚಿಟಪಟ ಸದ್ದಿನ ಜಡಿಮಳೆ ಬಿದ್ದೊಡನೆಯೇ ಜಾಗೃತವಾಗುತ್ತದೆ ಆಕೆಯ ಯುದ್ಧೋನ್ಮಾದ. ಅರಸನೊಬ್ಬ ಯುದ್ಧಸನ್ನದ್ಧತೆಗೆ ಬೇಕಾದ ಅಶ್ವದಳ, ಪದಾತಿ ದಳ, ಗಜಪಡೆ, ಭರ್ಚಿ,ಖಡ್ಗ, ಭಲ್ಲೆ, ಗುರಾಣಿಗಳೊಂದಿಗೆ ಹರಿತಗೊಂಡು ಸಂಹಾರಕ್ಕಾಗಿ ಕಾಯುವ ಸಕಲ ಶಸ್ತ್ರಾಸ್ತ್ರಗಳ ಪೂರ್ವತಯಾರಿಗಳನ್ನು ಮಾಡಿಟ್ಟುಕೊಳ್ಳುವಂತೆ, ಮಳೆಯಾಗುವುದಕ್ಕಿಂತ ಮೊದಲೇ ಕರಕಿಯ ಸಂಹಾರಕ್ಕೆ ಬೇಕಾದ ಕುರುಪಿ, ಕಳೆ ತುಂಬಲೆಂದೇ ಜತನದಿಂದ ಕಾದಿಟ್ಟ ಪ್ಲಾಸ್ಟಿಕ್ ಚೀಲಗಳು, ಯುದ್ಧದ ಮಧ್ಯದಲ್ಲಿ ಆಯಾಸವಾದರೆ ಪರಿಹರಿಸಲು ಬೇಕಾಗುವಷ್ಟು ಒಂದೆರಡು ತಂಬಿಗೆ ನೀರು, ಕದನಕ್ಕಿಳಿದಾಗ ಕಾಡುವ ಅಸ್ತಮಾದ ಉಬ್ಬಸವನ್ನು ನಿಯಂತ್ರಿಸಿ ಮತ್ತೆ ಮುನ್ನುಗ್ಗಲು ಬೇಕಾದ ವೈದ್ಯರು ಕೊಟ್ಟ Iಟಿhಚಿಟeಡಿ (ಉಸಿರಿನೊಂದಿಗೆ ಮಾತ್ರೆ ಎಳೆದುಕೊಳ್ಳುವ ಸಾಧನ)-  ಇವೆಲ್ಲವುಗಳನ್ನು ಯಾರಿಗೂ ಹೇಳದಂತೆಯೇ ಸಿದ್ಧತೆಯಲ್ಲಿಟ್ಟುಕೊಂಡಿರುತ್ತಾಳೆ. ನಿತಾಂತವಾಗಿ ನೆಲದ ಅಂತರಂಗಕಿಳಿಯುವ ಜಡಿಮಳೆಯಾದೊಡನೆಯೇ ಹೊರಡಲು ಅಣಿಯಾಗುತ್ತಾಳೆ. ಮನೆಯಲ್ಲಿರುವ ಯಾರಿಗೂ ಇದರ ಪರಿವೆಯಿಲ್ಲದಂತೆ ಏಕ ಮಾತ್ರ ಯೋಧನಂತೆ ಹೋರಾಟಕ್ಕಿಳಿಯಲು ಅನುವಾಗುತ್ತಾಳೆ. ವರ್ಷಧಾರೆ ನೆಲವನಪ್ಪಿದ ಮಾರನೇ ದಿನ ತನ್ನ ಕಿರಣಗಳ ಅಶ್ವವನ್ನೇರಿ ಬರುವ ನೇಸರನ ಬೆಳಗು, ಹಿಂದಿನ ರಾತ್ರಿ ಧರೆಗಿಳಿದ ಮೇಘರಾಜ, ಮಣ್ಣಿನ ಕಣಗಳೊಳಗೆ ಕರಗಿದಾಗ ಹೊರಟ ಸುಮಧುರ ಸುಗಂಧ, ವರುಣ ಬಂದನೆಂದು ಮುಖವೆತ್ತಿ ಎದೆಯೊಳಗೆ ಮುತ್ತುಗಳ ಹನಿಗಳನ್ನಿಟ್ಟುಕೊಂಡು ನಸುನಗುತ್ತಿರುವ ಮನೆಯಂಗಳದಲ್ಲಿನ ಮಲ್ಲಿಗೆ, ದಾಸವಾಳ, ಪೇರು, ಸೇವಂತಿಗೆ ಕುಸುಮಗಳ ತೂಗಾಟ,   ಇನಿಯ ಬಂದನೆಂಬ ಖುಷಿಗೆ ಮೈಹರಡಿಕೊಂಡು ಆರ್ದ್ರಹೃದಯದಿಂದ ಬಾಚಿ ತಬ್ಬಿಕೊಂಡ ಬಯಕೆಯಿಂದ ಸಂತೃಪ್ತಿಯನ್ನನುಭವಿಸುತ್ತಿರುವ ಹಸಿ ನೆಲ, ವರುಣನಿಂದಾಗಿ ಪ್ರಪುಲ್ಲವಾಗಿ ಕುಡಿಯೊಡೆದಿರುವ ಚಿಗುರನ್ನುಂಡು, ಆನಂದದ ರಾಗವನ್ನು ಹಾಡುತ್ತಿರುವ ಗುಬ್ಬಿ ಕೋಗಿಲೆ ಗಿಳಿಗಳ ಕಲರವ- ಮನೆಯಂಗಳದ ಮಹಾಹಬ್ಬವೆಂಬಂತೆ ಸಂಭ್ರಮವನ್ನು ತಂದ ಪ್ರಕೃತಿಗೆ ನಮಿಸುತ್ತಲೇ ಉಪವಾಸದ ವ್ರತವನ್ನಾಚರಿಸುತ್ತಾ ತನ್ನೆಲ್ಲಾ ಸಕಲ ಅಸ್ತ್ರಗಳೊಂದಿಗೆ ಮಾಳಿಗೆಯನ್ನೇರಿ ಹೊರಡುವ ಸಾಕಿಯ ಜೀವನೋತ್ಸಾಹವನ್ನು ಹೇಗೆಂದು ಬಣ್ಣಿಸುವುದು.
ಅಂದೇ ವಿಜಯದಶಮಿ ಅವಳಿಗೆ ರಾವಣನಂತೆ ದಶಾವತಾರವನ್ನು ಎತ್ತಿ ಮಾಳಿಗೆಯ ಮೇಲೆ ವಿರಾಟ್ ರೂಪ ಮೆರೆಯುತ್ತಿರುವ ಕರಕಿಯ ಸಂಹಾರಕ್ಕೆ.  ಸಾಕಿಯ ಈ ಯುದ್ಧಸಂಭ್ರಮವನ್ನು  ಮಗುವಿನಂತೆ ಕಣ್ಣು ತುಂಬಿಕೊಂಡು ನೋಡುವ ಮುಗ್ಧತೆಯೊಂದೇ ನನಗುಳಿದ ದಾರಿಯಾಯಿತು. ಆದರೂ ಮಾಳಿಗೆಯನ್ನೇರಿ ಹೇಗೆ ಯುದ್ಧ ಮಾಡುತ್ತಾಳೆಂದು ಕಣ್ತುಂಬಿಕೊಂಡು ಬಿಡಲೇಬೇಕು ಎಂದು ಕಷ್ಟಪಟ್ಟು ಅವಳನ್ನು ಹಿಂಬಾಲಿಸಿದೆ. ನನ್ನ ಎರಡು ಕರುಳ ಕುಡಿಗಳಿರಲಿಲ್ಲ ಆ ಸಮಯದಲ್ಲಿ.  ಅವರಿದ್ದರೆ ಒಟ್ಟಿಗೇ ಮೂರು ತಲೆಮಾರುಗಳು ಸೇರಿ ಕರಕಿಯೊಂದಿಗಿನ ಯುದ್ಧ ಮಾಡಿದ ಶ್ರೇಯಸ್ಸಾದರೂ ಸಿಗಬಹುದಿತ್ತೇನೋ ? ಅಂದು ಆ ಬಾಗ್ಯವಿರಲಿಲ್ಲ.  ಸರಿ. ಕೊನೆಗೆ ಎರಡು ತಲೆಮಾರುಗಳಾದರೂ  ಕಳೆ ಸಂಹಾರದ ಕಲೆಯಲ್ಲಿ  ಪರವಶವಾದವಲ್ಲ ಎಂಬ ಹೆಮ್ಮೆಯಂತೂ ಹೆಗಲೇರಿತು. ಮೇಲೇರಿದೆ. ರಾತ್ರಿಯಿಡೀ ಶೃಂಗಾರಸಮಯದಲ್ಲಿ ಹೊರಳಾಡಿದ ನೆಲದ ಹಸಿ ನಿಧಾನವಾಗಿ ಆರುತ್ತಿತ್ತು.  ಎದುರಿಗಿರುವ ನೇಸರನೂ ನೆಲದಾಕೆಯ ಸಂಭ್ರಮಕ್ಕೆ ಕಳೆಯನ್ನು ತಂದಿದ್ದ. ಮಾಳಿಗೆಯಾಕೆಯ ಮುಖ ಮಂದಹಾಸದಿಂದ ಅರಳಿ ಕೆಂಬಣ್ಣವೇರಿತ್ತು. ಕೆಂಪು ಮಣ್ಣ ಈ ಹೊಸ ಮೊಗವನ್ನು ಕಂಡು ಸಾಕಿಗೆ ಮಹದಾನಂದವಾಯಿತು. ಆ ಮಣ್ಣ ಮೊಗದ ಮೇಲೆ ಕುರೂಪ ತಂದ ಕರಕಿಯ(ಗರಿಕೆಯ) ಜಟೆಯನ್ನು ಕಂಡು ನನಗೆ ಹಾಗೆಯೇ  ಹಿಡಿದೆಳೆಯಬೇಕೆನ್ನಿಸಿತೆಂದರೆ, ಕರಕಿಯಿಂದ ಸೋರುತಿಹುದು ಮನೆಯ ಮಾಳಿಗೆ ಎಂದು  ಪರಿತಾಪವನ್ನನುಭವಿಸಿದ ನನ್ನ ಸಾಕಿಗಿನ್ನೆಷ್ಟು ಮುನಿಸು ಬಂದಿರಬೇಕು ? ಅಲ್ಲವೇ ! ಸಾಕಿ ಬರುವುದನ್ನು ಕಂಡು ಯುದ್ದಕ್ಕಾಗಿಯೇ ಸಿದ್ಧವಾಗಿ ನಿಂತಂತಿದ್ದ ಕರಕಿಯೂ ತಲೆಯೆತ್ತಿ ಗಾಳಿಗೆ ತಲೆದೂಗುತ್ತಾ ಪಂಥಾಹ್ವಾನ ನೀಡಿ ಸಾಕಿ ಹಾಗೂ ಪಡೆಯನ್ನು  ಕರೆದಂತೆ ಭಾಸವಾಗುತ್ತಿತ್ತು. ಹಾಗೆ ಕರಕಿ ಮೊದಲೇ ಸಿದ್ದವಾಗುತ್ತಿದ್ದುದಕ್ಕೂ ಬಲವಾದ ಕಾರಣವಿದೆ. ಯುದ್ಧಕ್ಕೆ ಹೋಗುವ ಮೊದಲು ಈ ಕರಕಿ ಯುದ್ಧದ ಇತಿಹಾಸದ ಕಥೆಯನ್ನೊಮ್ಮೆ  ಕೇಳಿಬಿಡಿ- ಕುರುಕ್ಷೇತ್ರದಂತಹ ಮಹಾಭಾರತ ಯುದ್ಧವೇ ಕೇವಲ ಹದಿನೆಂಟು ದಿನಗಳಲ್ಲಿ ಮುಗಿದುಹೋಗಿತ್ತು. ಆದರೆ ನಮ್ಮ ಮನೆ ಮಾಳಿಗೆಯ ಮೇಲಿನ ಕರಕಿಯೊಂದಿಗಿನ ನನ್ನವ್ವಳ ಈ ಯುದ್ಧ ಮಾತ್ರ ಎಂದೋ ಪ್ರಾರಂಭವಾಗಿ ಈಗಲೂ ಮುಂದುವರೆಯುತ್ತಲೇ ಇದೆ. ಈ ಯುದ್ಧ ಇಂದು ನಿನ್ನೆಯದಲ್ಲ. ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ನನ್ನ ಗ್ರಹಿಕೆಯಂತೆ  ನನ್ನವ್ವ ನಮ್ಮ ಮನೆಗೆ ಬಂದಂದಿನಿಂದಲೂ ನಡೆಯುತ್ತಲೇ ಇದೆ. ಹಿಂದೆ ನಮ್ಮ ಪೂರ್ವಜರು ಯಾರು ಈ ಯುದ್ಧದಲ್ಲಿ ಪಾಲ್ಗೊಂಡಿದ್ದರೋ ಗೊತ್ತಿಲ್ಲ. ಈ ಯುದ್ಧ ಸಾಗುವ ಪ್ರಕ್ರಿಯೆಯೇ  ಬಲು ವಿಸ್ಮಯ. ಮಹಾಭಾರತದ ಯುದ್ಧಕ್ಕೆ ಷರತ್ತುಗಳಿದ್ದಂತೆ ಈ ಯುದ್ಧದಲ್ಲಿಯೂ ಅಘೋಷಿತ ನಿಯಮಗಳಿವೆ.  ಮೊದಲನೇಯದಾಗಿ ಈ ಕದನ ವರುಷದಲ್ಲೊಮ್ಮೆ ಮಳೆಗಾಲದಲ್ಲಿ ಮಾತ್ರ ನಡೆಯುವಂತಹುದು. ಎರಡನೇಯದಾಗಿ ಇದರ ಕಾಲಾವಧಿ ಮಳೆಗಾಲದ ದಿನಗಳಷ್ಟೇ. ಮೂರನೇಯದಾಗಿ ಮಳೆಗಾಲದ ನಂತರ ಎರಡೂ ಪಕ್ಷದವರು ಕದನವಿರಾಮ ಘೋಷಿಸಬೇಕು. ಅರ್ಥಾತ್ ಮಳೆಗಾಲ ಮುಗಿದ ನಂತರದಿಂದ ಹಿಡಿದು ಮರಳಿ ಮಳೆ ಪ್ರಾರಂಭವಾಗುವ  ಅವಧಿಯವರೆಗಿನ ಸಮಯದಲ್ಲಿ ಕರಕಿ ಕಿರಿಕಿರಿ  ಮಾಡುವ ಹಾಗಿಲ್ಲ, ನನ್ನವ್ವನೂ ಕರಕಿಯನ್ನು ಮರಳಿ ಕೆಣಕುವ ಹಾಗಿಲ್ಲ. ಇದು ಯುದ್ಧದ ಅತ್ಯಂತ ಮಹತ್ವದ ಶಾಂತಿ ಒಪ್ಪಂದ. ಅಂದರೆ ಒಂದು ವಸಂತದ ಮೂರನೇಯ ಒಂದು ಭಾಗ ಮಾತ್ರ ಯುದ್ಧಕಾಲ. ಈ ಮಹತ್ವದ ಷರತ್ತುಗಳನ್ನು ಎರಡೂ ಪಕ್ಷದವರೂ ಉಲ್ಲಂಘಿಸುವ ಹಾಗಿಲ್ಲ.
ಅದೂ ನಡೆದುಹೋಯಿತೊಮ್ಮೆ. ನನ್ನ ಅವ್ವ ಒಮ್ಮೆ ವರ್ಷಾಕಾಲ ಮುಗಿದು ಚಳಿಗಾಲ ಕೊನೆಯಾಗುವ ಮಾರ್ಗಶಿರ ಮಾಸದಲ್ಲೊಂದು ದಿನ ಮಾಳಿಗೆಯನ್ನೇರಿ, ಕರಕಿ  ಒಣಗಿದ್ದನ್ನು ಕಂಡು ಇದೇ ಸರಿಯಾದ  ಸಮಯವೆಂದುಕೊಂಡು ಕದನವಿರಾಮವನ್ನು ಮುರಿದು  ಕುರುಪೆ ಹಿಡಿದು ನಿರ್ಮೂಲನೆಗಿಳಿದುಬಿಟ್ಟಳಂತೆ. ಮೊದಲೇ ಅಶಕ್ತವಾಗಿ ಒಣಗಿದ ಹುಲ್ಲು ಒಲ್ಲದ ಮನಸಿನಿಂದ ಮಣ್ಣಿನಿಂದ ಹೊರಬರದೇ ಹಠವಿಡಿದ ಮಗುವಿನಂತೆ ನೆಲ ತಬ್ಬಿ ಆರ್ತನಾದ ಮಾಡಿತಂತೆ. ಮಣ್ಣಿನಿಂದ ಪೂರ್ಣ ಕೀಳಲಾಗದ ಒಣ ಕರಕಿಯ ಮೊಂಡಾಟದಿಂದ ಅರ್ಧಕ್ಕೆ ಬಿಟ್ಟುಬಂದಳಂತೆ. ನಿಯಮ ಮೀರಿ ಬಲವನ್ನು ಕಳೆದುಕೊಂಡು ಶಸ್ತ್ರಾಸ್ತ್ರ ಕಳಚಿಟ್ಟ ಹೊತ್ತಲ್ಲದ ಹೊತ್ತಿನಲ್ಲಿ  ತನ್ನ ಬುಡವನ್ನೇ ಅಲ್ಲಾಡಿಸಲು ಬಂದ ಸಾಕಿಯ ಸೀಮೋಲ್ಲಂಘನದಿಂದ ರೊಚ್ಚಿಗೆದ್ದ ಕರಕಿ ಈಗಲೂ ಮಾಳಿಗೆ ತೊಲಗಿ ಹೋಗುವ ಬದಲು ರಕ್ತಬೀಜಾಸುರನ ಗುಣ ಬೆಳೆಸಿಕೊಂಡು  ಮೊದಲಿಗಿಂತ ಹುಲುಸಾಗಿ ಮಾಳಿಗೆಯ ತುಂಬೆಲ್ಲಾ ಹರಡಿಕೊಂಡು  ನನ್ನವ್ವನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆಯಂತೆ ಎಂದು ನನ್ನವ್ವನೇ ನನಗೆ ವಿಷಾದದಿಂದ ಹೇಳಿದ ನೆನಪು. ನನಗೂ ಸಾಕಿಯದೇ ತಪ್ಪೆಂದೆನಿಸಿದರೂ ಋತುವಿನಲ್ಲೊಂದರಲ್ಲಿಯೇ ಎಲ್ಲ ಅರಿವಿದ್ದೂ ನೂರೆಂಟು ಸಲ ಕದನವಿರಾಮ ಉಲ್ಲಂಘಿಸುವ ದೇಶಗಳಿಗಿಂತ ಯಾವಾಗಲೋ ಒಂದು ಬಾರಿ ತಿಳಿಯದೇ ಕದನವಿರಾಮ ಮೀರಿದ ನನ್ನವ್ವ ಎಷ್ಟೋ ಪಾಲು ಶ್ರೇಷ್ಠವಲ್ಲವೇ ಎಂದು ಕರಕಿಯ ಮುಂದೆ ಬಾಗುವುದರ ಬದಲಾಗಿ ಬೀಗಿದೆ.  ಹ್ಞಾಂ!  ಈಗ ಯುದ್ಧಕ್ಕೆ ಬರೋಣ- ಇದು ಮುಗಿಯದ ಅಧ್ಯಾಯವೆಂದು  ಕರಕಿಗೂ ಚೆನ್ನಾಗಿ ಗೊತ್ತಿದ್ದುದರಿಂದಲೋ ಏನೋ ತಲೆಯೆತ್ತಿ ಸೆಡ್ಡು ಹೊಡೆಯುತ್ತಿರುವಂತೆ ಚಟಪಟ ಓಲಾಡುತ್ತಿತ್ತು. ಮೊದಲು ಯುದ್ಧ ಪ್ರಾರಂಭವಾಗಲಿ ಆಮೇಲೆ ನೋಡಿಕೊಳ್ಳುತ್ತೇನೆ ನಿನ್ನನ್ನು ಎಂದು ನಾನೂ ಕಾಯುತ್ತಿದ್ದೆ. ರಾಣಿಯೇ ಎಂದಾದರೂ ಮುನ್ನುಗ್ಗಿ ಹೋರಾಡುವ ಯುದ್ಧವನ್ನೆಂದಾದರೂ ಕಂಡಿದ್ದೀರಾ ? ನೀವು ಕಂಡಿರಲಿಕ್ಕಿಲ್ಲ. ಆದರೆ ನಾನಂದು ಕಣ್ಣಾರೆ ಕಂಡೆ.  ಚೀಲದೊಳಗಿದ್ದ ಕುರುಪೆಯನ್ನು ಹೊರಗೆಳೆದವಳೆ  ಜಟಾಜೂಟಳಾಗಿ ಮೆರೆಯುತ್ತಿದ್ದ ಹುಲ್ಲನ್ನು ಕತ್ತರಿಸುತ್ತಾಳೆಂದುಕೊಂಡಿದ್ದೆ. ಆದರೆ ಕರಕಿಯ ವಿಕಟ ವಿಲಾಸವನ್ನು ಬಲ್ಲ ಸಾಕಿ ಮಾತ್ರ ಕುರುಪೆಯನ್ನೇ ಖಡ್ಗದಂತೆ ಬೀಸಿ  ಗುರಿಯಿಟ್ಟು ಹೊಡೆದಿದ್ದು ಮಾತ್ರ ಕರಕಿಯ ಬುಡಕ್ಕೆ ಎಂದರೆ ಮಣ್ಣಿನೊಳಗೆ ಅಡಗಿಕುಳಿತಿರುವ ಬೇರಿಗೆ.  ಸಾಕಿಗೆ ಗೊತ್ತಿತ್ತು ಒಳಗೊಳಗೇ ಎಲ್ಲೆಂದರಲ್ಲಿ ಚಾಚಿ ನಡೆಸುವ ಬೇರಿನ  ಗೆರಿಲ್ಲಾ ಯುದ್ಧ ತಂತ್ರ. ಕುರುಪೆಯಿಂದ ಮಣ್ಣ ಮುಖಕ್ಕೆ ತರಿದು ಕರಕಿಯ ಬೇರಿಗೇ ಕೈ ಹಾಕಿ ಮೇಲೆತ್ತಿ ನಕ್ಕು ಮುಂದುವರಿದಳು.  ಬೇರುಗಡಿತವಾದ ಮೊಂಡು ಕರಕಿ ಅದುರಿ ಅಲ್ಲಾಡಿ ಬೆದರಿ ಬೆಂಡಾಡಿ ಸಾಕಿಯ ಕೈಯ್ಯಲ್ಲಿನ ಕುರುಪೆಯ ಗರಗಸಕ್ಕೆ  ಅಂಗಾಂಗಗಳನ್ನು ಕತ್ತರಿಸಿಕೊಂಡು ಕಂಗಾಲಾಗಿ  ಬಲಿಯಾಗಿ ಹೋಗುತ್ತಿತ್ತು. ಪಾಪ ಕಣ್ಣಮುಂದೆಯೇ ತನ್ನ ಒಡಲ ಕುಡಿಗಳು ಬುಡ ಕತ್ತರಿಸಿಕೊಂಡು ಮಾಡುತ್ತಿದ್ದ ಆರ್ತನಾದ ಕೇಳಿ ಒಂದು ಕ್ಷಣ ಯುದ್ಧದಿಂದ ಹಿಂದೆ ಸರಿಯಬೇಕೆಂದು ವಿಚಲಿತನಾದರೂ, ನನ್ನವ್ವನ ವಿರುದ್ಧ ಶಕುನಿಯಂತೆ ಅಂದಕಾಲತ್ತಿನ ಸೇಡನ್ನಿಟ್ಟುಕೊಂಡು ಮಾಳಿಗೆಯ ತುಂಬೆಲ್ಲಾ ಚಾಚಿಕೊಂಡು ತನ್ನ ಬೇರುಗಳ ಮೂಲಕ ಮನೆಯೊಳಗೆ ನೀರನ್ನು ಇಳಿಬಿಟ್ಟು ಹೊಂಡದಂತೆ ಕೆಸರು ಮಾಡುತ್ತಾ ಕುಟುಂಬಕ್ಕೆ ಕಿರಿಕಿರಿ ಮಾಡುತ್ತಿದ್ದುದನ್ನು ನೆನೆದು, ಸಹೋದರ ಪ್ರೀತಿಯಿಂದ ಕರ್ಣನ ವಿರುದ್ಧ ಬಿಲ್ಲನ್ನು ಮೇಲೆತ್ತದೇ ಕುರುಕ್ಷೇತ್ರದಲ್ಲಿ ಅರ್ಜುನ ತೊಳಲಾಡಿ ಕೊನೆಗೆ ಕೃಷ್ಣನಿಂದ ಯುದ್ದೋತ್ಸಾಹವನ್ನು ಪಡೆದು ಮುನ್ನುಗ್ಗಿದಂತೆ, ನಾನೂ ಚಿಕ್ಕ ಕೈಚೂರಿಯಂತಿದ್ದ ಕುರುಪೆಯನ್ನು ಹಿಡಿದು ಮುನ್ನುಗ್ಗಿದೆ.
ಕೈಗೆ ಸಿಕ್ಕಂತೆ ಜುಟ್ಟು ಹಿಡಿದೆಳೆದು ಬೇರು ಸಹಿತ ಕೀಳಲಾರಂಭಿಸಿದೆ. ಸೇಡಿನ ಕಿಚ್ಚೋ ಏನೋ ಕರಕಿ ಮಾತ್ರ ತನ್ನೊಡನೆ ಬೇರಿನ ಹಿಡಿತಕ್ಕೆ ಸಾಧ್ಯವಾಗುವಷ್ಟು  ಮಣ್ಣನ್ನು ಮೆತ್ತಿಕೊಂಡೇ ಬರಲಾರಂಭಿಸಿತು. ಸುಂದರ ಕೆಂಬಣ್ಣವನ್ನೇರಿಸಿಕೊಂಡ ಮಾಳಿಗೆಯ ಮೊಗ ನಾವು ಕೀಳುವ ಕರಕಿಯಿಂದ ಬಿದ್ದ ಚಿಕ್ಕ ದೊಡ್ಡ ಹೊಂಡಗಳಿಂದಾಗಿ ಮತ್ತಷ್ಟು ಕುರೂಪಗೊಂಡಿತು. ಸಾವಿನಲ್ಲೂ ಸೆಣಸಾಡುವ ಕರಕಿಯ ಈ ಅದಮ್ಯ ಹೋರಾಟದ ವೀರೋತ್ಸಾಹವನ್ನು ಕಂಡು ವಿಸ್ಮಯಗೊಂಡೆ.  ಸಾಕಿ ಎಚ್ಚರಿಸಿದಳು, ಈ ಮೊಂಡ ಕರಕಿಯ ಒಂದೇ ಒಂದು ಬೀಜವನ್ನು ನೆಲ ತಬ್ಬದಂತೆ ಕೀಳು ಎಂದು.  ಹೌದು, ಈ ಕರಕಿ ರಕ್ತಬೀಜಾಸುರನಿದ್ದಂತೆ. ಒಂದೇ ಒಂದು ಬೀಜ ನೆಲಕ್ಕುದುರಿದರೆ ಸಾಕು ಅದು ಮಣ್ಣಿನಲ್ಲಡಗಿಕೊಂಡು  ಮತ್ತೆ ಮುಂದಿನ ಮಳೆಗಾಲದಲ್ಲಿ ಚಿಗುರೊಡೆದು ಹಬ್ಬಿ ಮಾಳಿಗೆಯ ಅಂದಗೆಡಿಸಲು ಕಾತರಿಸುತ್ತಿರುತ್ತದೆ. ಕರಕಿಯ ಈ ಅಮಿತ ಜೀವನ ಪ್ರೀತಿಯೇ ನಮ್ಮನ್ನು ಬೆರಗುಗೊಳಿಸುತ್ತದೆ.  ಈ ಅಡಗಿಕೊಂಡು ಹೋರಾಡುವ ಗೆರಿಲ್ಲಾ ಯುದ್ಧತಂತ್ರದಿಂದಲೇ ಅದು ಇಲ್ಲಿಯವರೆಗೆ ಸುಮಾರು ಐವತ್ತು ವಸಂತಗಳಷ್ಟು  ನಿರಂತರವಾಗಿ ನನ್ನವ್ವಳೊಂದಿಗೆ ಕದನ ಮಾಡುತ್ತಲೇ ಬಂದಿದೆ. ಎಷ್ಟೋ ದೇಶಗಳು ಈ ತಂತ್ರದಿಂದಲೇ ತಾನೇ ಇನ್ನೂ ಜೀವಂತವಾಗಿರುವುದು ! ಏಕಕಾಲಕ್ಕೆ ನೂರಾರು ಬೀಜಗಳನ್ನು ಹೊತ್ತು ಕುಣಿಯುವ ಕರಕಿಯನ್ನು ಮಣಿಸುವುದೇ ಒಂದು ಸವಾಲು. ಇದರ ವಿಜ್ಞಾನವನ್ನು ತಿಳಿದು ಯುದ್ದದಲ್ಲಿ ಭೀಷ್ಮನಂತಾಗಿದ್ದ ಸಾಕಿ ಎಚ್ಚರಿಕೆಯಿಂದಲೇ ಕರಕಿಯ ಸಂಹಾರ ಮಾಡುತ್ತಿದ್ದಳು. ನಾನು ಎಷ್ಟೇ ಎಚ್ಚರವಹಿಸಿದರೂ ಜೀರಿಗೆಯಷ್ಟಿರುವ ಗಾತ್ರದ ನೂರಾರು ಹಸಿರು ಬೀಜಗಳಲ್ಲಿ ಅರ್ಧದಷ್ಟಾದರೂ ನೆಲಕಚ್ಚುತ್ತಿದ್ದವು. ಸಾಕಿ ಅವುಗಳನ್ನು ಹುಡುಕಿ ಹುಡುಕಿ ಹೊಸಕಿಹಾಕುತ್ತಿದ್ದಳು. ಈ ಯುದ್ಧದಲ್ಲಿ ನಮ್ಮದು ಅಭಿಮನ್ಯುವಿನ ಪಾತ್ರವಿದ್ದಂತೆ. ಕರಕಿಯ ಚಕ್ರವ್ಯೂಹದೊಳಗೆ ಪ್ರವೇಶಿಸುವುದು ಮಾತ್ರ ಗೊತ್ತು. ಬಿಡಿಸಿಕೊಂಡು ಹೊರಬರುವ ವಿದ್ಯೆ ನಮಗೆ ದಕ್ಕಲಿಲ್ಲವೆಂದೇ ಹೇಳಬೇಕು.  ಇದುವರೆಗೂ ಈ ಹಠಮಾರಿ ಮಾಳಿಗೆಯ ಕಡುಮೋಹಿ ಕರಕಿಯೂ ಯುದ್ಧ ಸಾಕು ಎಂದು ಸೋತು ಹಿಂದೆಸರಿದಿಲ್ಲ.  ಯಕಃಶ್ಚಿತ  ಎರಡೆಲೆಗಳ ನೀಳ ತೃಣಕ್ಕೆ ಶತಮಾನಗಳ ಕಾಲ ಯುದ್ಧವನ್ನು ಮಾಡುವ ವೀರೋತ್ಸಾಹವಿರಬೇಕಾದರೆ ಇನ್ನು ನನ್ನಂತಹ ಮನೆಯಲ್ಲಿರುವ ಇಪ್ಪತ್ತು ಕರುಳಕುಡಿಗಳನ್ನು ಎತ್ತಿ ಆಡಿಸಿ ಬೆಳೆಸಿರುವ ಸಾಕಿಗೆ ಇನ್ನೆಷ್ಟು ವೀರಾವೇಶದ  ಚೈತನ್ಯವಿರಲಿಕ್ಕಿಲ್ಲ ನೀವೇ ಕಲ್ಪಿಸಿಕೊಳ್ಳಿ. ಸಾಕಪ್ಪ ಈ ಕರಕಿಯ ಸಹವಾಸ ಎಂದು ಸಾಕಿಯೂ ಮಾಳಿಗೆಯ ರಣರಂಗದಿಂದ ಹಿಂದೆಸರಿದವಳಲ್ಲ. ತಾನು ಕಾಯಿಲೆಯಿಂದ ನರಳುತ್ತಿರುವಾಗಲೂ ಈ ಕರಕಿಯೊಂದಿಗಿನ ಹೋರಾಟವನ್ನು ನಿಲ್ಲಿಸಿದವಳಲ್ಲ ಸಾಕಿ ಎಂದ ಮೇಲೆ  ಯುದ್ದ ಮುಂದುವರೆಯಲೇಬೇಕಲ್ಲ. ಸಾಕಿಯೇ ಮುಂದುವರೆಸಿ ಕರಕಿಯನ್ನು ಚೆನ್ನಾಗಿ ತರಿದೊಟ್ಟಿದಳು. ತಂದಿದ್ದ ಪ್ಲಾಸ್ಟಿಕ್ ಚೀಲದಲ್ಲಿ ಹೆಡೆಮುರಿ ಕಟ್ಟಿ ಮುರಿಮುರಿದು ತುಂಬಿದಳು. ನೇಸರ ಸಂಜೆಗಣ್ಣಿನಿಂದ ವೀಕ್ಷಿಸುತ್ತಿದ್ದ. ಬಹುಶಃ ಸಾಕಿಯ ಈ ಬತ್ತದ ಅನುಪಮ ಚೈತನ್ಯಕ್ಕೆ ಆತನೂ ಬೆರಗಾದಂತಿದ್ದ. ಮಾಳಿಗೆ ಮೊದಲಿನ ಕಳೆಯನ್ನು ಪಡೆದುಕೊಂಡು ಸಂಜೆಯ ಕಿರಣಗಳ ಸ್ಪರ್ಶದಿಂದ ಮತ್ತೆ ಮಂದಹಾಸ ಬೀರುತ್ತಿತ್ತು. ಈಗಲೂ ಅದೇ ಕೆಂಬಣ್ಣ ಮಾಳಿಗೆಯ ಮುಖವನ್ನಾವರಿಸಿ ಸಂಜೆಗೊಂದು ಅನನ್ಯ ಸೌಂದರ್ಯ ತಂದಿತ್ತು. ಅಲ್ಲಿಗೆ ಕರಕಿಯೊಂದಿಗಿನ ಈ ಮಳೆಗಾಲದ ಯುದ್ಧ ಮುಗಿದಿತ್ತು ಮತ್ತೆ ಮುಂದಿನ ಮಳೆಗಾಲದವರೆಗೆ ಕದನವಿರಾಮವನ್ನು ಘೋಷಿಸಿಯೇ ಬಿಟ್ಟ ನೇಸರ.  ಚೀಲದೊಳಗೆ ಗಹಗಹಿಸಿ ನಗುತ್ತಿದ್ದ ಎಂದೂ ಸೋಲದ ಕರಕಿಯ ವಿಕಟ ನಗುವಿನ ಧ್ವನಿ ಮಾತ್ರ ಮತ್ತೆ ಮುಂದಿನ ಮಳೆಗಾಲದವರೆಗೆ ಅನುರಣಿಸುತ್ತಲೇ ಇರುತ್ತದೆ.


Monday 28 October 2019


ಬೆಳಕೆ ನೀ ತೊರೆಯದಿರು
ತಮಂಧವನು ಕಳೆದು
ಆವರಿಸು ಮನೆ ಮನಗಳ
ಪಯಣವೆಂದೆಂದೂ ಅನವರತ


ದಯೆ ಕರುಣೆ ಸಹನೆ ತಾಳ್ಮೆ
ಬೆಳಗು ಭಿನ್ನ ಬಗೆ ಬಗೆ
ಅಹಿಂಸೆ ಶಾಂತಿ ನೆಮ್ಮದಿ
ತೊಳಗು ಕಿರಣ ವೈವಿಧ್ಯ


ಕತ್ತಲೆಯ ಕುರುಡು ದಾರಿ
ಭರವಸೆಯ ಬಣ್ಣದೋರಿ
ಹೊರಟು ಬಾ ಹೊಂಬೆಳಕೆ
ಜೊತೆಯಾಗಿರು ನೀ ನಂಬಿಕೆ


ಅಮೂರ್ತ ದಿಗ್ ದಿಗಂತ
ಕಂಡೆ ಎಂಬುದೊಂದು ಹರುಷ
ಕಾರುಣ್ಯದ ಕೈಹಿಡಿದು
ಕರೆದೊಯ್ ಅನಂತದೆಡೆಗೆ


ದಿವ್ಯಾನುಭೂತಿ ಸ್ಪರ್ಶ
ಮಾಯಾಜಾಲದಂತೆ ರೂಪ
ಧನ್ಯತೆಯದೋ ದರ್ಶನ
ಮರೆಯಾಗದಿರು ಹೀಗೊಮ್ಮೆ ಕಂಡು

   
ನೀ ಬಿಡಿಸಿದ ರಂಗವಲ್ಲಿ
ಬದುಕೆಂಬ ಬನದ ಮೊಲ್ಲೆ
ಬಣ್ಣಬಣ್ಣಗಳ ಚೆಲ್ಲಾಟ
ಸುಂದರವದೋ ಹಬ್ಬನೋಟ


ಸರ್ವರಿಗೂ ಬೆಳಕಿನ ಹಬ್ಬದ ಹಾರ್ದಿಕ ಶುಭಾಶಯಗಳು
      ಚಂದ್ರಶೇಖರ ಹೆಗಡೆ




ಬೆಳಕೆ ನೀ ತೊರೆಯದಿರು
ತಮಂಧವನು ಕಳೆದು
ಆವರಿಸು ಮನೆ ಮನಗಳ
ಪಯಣವೆಂದೆಂದೂ ಅನವರತ
ದಯೆ ಕರುಣೆ ಸಹನೆ ತಾಳ್ಮೆ
ಬೆಳಗು ಭಿನ್ನ ಬಗೆ ಬಗೆ
ಅಹಿಂಸೆ ಶಾಂತಿ ನೆಮ್ಮದಿ
ತೊಳಗು ಬೆಳಕೆ ವೈವಿಧ್ಯ
ಕತ್ತಲೆಯ ಕುರುಡು ದಾರಿ
ಭರವಸೆಯ ಬಣ್ಣದೋರಿ
ಹೊರಟು ಬಾ ಹೊಂಬೆಳಕೆ
ಜೊತೆಯಾಗಿರು ನೀ ನಂಬಿಕೆ
ಅಮೂರ್ತ ದಿಗ್ ದಿಗಂತ
ಕಂಡೆ ಎಂಬುದೊಂದು ಹರುಷ
ಕಾರುಣ್ಯದ ಕೈಹಿಡಿದು
ಕರೆದೊಯ್ ಅನಂತದೆಡೆಗೆ
ದಿವ್ಯಾನುಭೂತಿ ಸ್ಪರ್ಶ
ಮಾಯಾಜಾಲದಂತೆ ರೂಪ
ಧನ್ಯತೆಯದೋ ದರ್ಶನ
ಮರೆಯಾಗದಿರು ಹೀಗೊಮ್ಮೆ ಕಂಡು    
ಸರ್ವರಿಗೂ ಬೆಳಕಿನ ಹಬ್ಬದ ಹಾರ್ದಿಕ ಶುಭಾಶಯಗಳು
      ಚಂದ್ರಶೇಖರ ಹೆಗಡೆ
x
x
x

Wednesday 2 October 2019

ಹೊರಟಿದ್ದರು ಗಾಂಧಿ


ಹೊರಟಿದ್ದರು ಗಾಂಧಿ
ಸತ್ಯ ಶಾಂತಿ ಮೈಯ್ಯುಟ್ಟು
ಹೆಜ್ಜೆಗಳೂ ಮರ್ಮರಿಸುತ್ತಿದ್ದವು
ಕನಸುಗಳ ದಾರಿ ಬೆನ್ನು ಹತ್ತಿ
ನೋವ ಮರೆತು ವರ್ಣ ಚಿಂತೆ
ಹೊತ್ತು ಸಮಾನತೆ ನ್ಯಾಯಗಳ
ಶುಭ್ರ ಧೋತಿಯ ಧರಿಸಿ
ಅಲುಗಾಡದೆ ದಿಟ್ಟಿ ನೆಟ್ಟು
ಕನ್ನಡಕದ ಗಾಜಿನೊಳಗೆ
ದಾಸ್ಯ ಹಿಂಸೆ ದಬ್ಬಾಳಿಕೆಗಳ
ಮೇಲೆದ್ದು ಕುಣಿದು ತುಳಿಯುತಿರುವ
ಧೂಳು ಕಣಗಳಿಂದಾವೃತ
ಭರತ ಮಾತೆಯ ಮಡಿಲು
ಹುಡುಕುವ ಧಾವಂತದಲಿ
ಹೊರಟಿದ್ದರು  ಗಾಂಧಿ
ನೂಕಿದರೂ ಮನದ ಆಚೆ
ಮೌನ ಮುರಿಯಲಿಲ್ಲ ಮುಂಚೆ
ನೆಪವಾಯಿತು ರೈಲು
ಹೊರಟಿತವನೆದೆಯಲಿ
ವರ್ಣ ಜಾತಿ ಮತ ಪಂಥ ನೋಡಿ
ನಿಂತು ಯಾರ ನೂಕದೆ
ಬಾಚಿ ತಬ್ಬಿ ಜಗವ ಕರೆದು
ಕೂಗುಟ್ಟುತ ಎಚ್ಚರಿಕೆಯ ಕರೆಗಂಟೆ
ಬೆಚ್ಚಿ ಬಿತ್ತು  ನ್ಯಾಯಾಂಗ
ಅಸ್ಮಿತೆಯ ದನಿಯೊಂದು
ಗಟ್ಟಿಯಾಗಿ ಕಟಕಟೆಯ ಮೀರಿ
ಹೊರಡುವುದ ಕಂಡು
ಅಂತರಂಗಕೆ ಗುರಿಯಿಟ್ಟು
ವರ್ಣಭಾರದಿ ಬೀಗುತಿರುವ
ಬಿಳಿತಲೆಗಳ ಬಾಗಿಸಿ ನೇವರಿಸಿ
ಮತ್ತೆಂದೂ  ಎದ್ದು ಮರಳಿ
ತಿರುಗಿ ತಿವಿಯದಂತೆ ನಿಲಿಸಿ
ಮುನ್ನುಗ್ಗಿ ಹೊರಟಿದ್ದರು
ಜನರ ಜೀವ ಗಾಂಧಿ
ಕೋಟು ಅಂಗಿ ಭಾರವಾಗಿ
ಬೂಟು ಬೆಡಗು ಬೇಡವಾಗಿ
ಬರಿತೊಗಲ ಬಟ್ಟೆ ಹೊದ್ದು
ಭೂಮಿ ತೂಕದ ಮನುಜ
ಭರತಮಾತೆಯ ತನುಜ
ಭಾರತೀಯರ ಕಣ್ಣೀರು ಕುಡಿದು
ಗಹಗಹಿಸಿ ಅಟ್ಟಹಾಸ ಮೆರೆವ
ಬಂದೂಕುಗಳ ನಳಿಕೆ ತುದಿಗೆ
ಶಾಂತಿ ಸಹನೆ ದಯೆ ಕರುಣೆಗಳ
ಧೀಮಂತ ತೆರೆದೆದೆಯನೊಡ್ಡಿ
ರಾಮರಾಜ್ಯದ ಕನವರಿಕೆಯಲ್ಲಿ
ಮುಳುಗೆದ್ದು ಹೊರಟಿದ್ದರು
ಸತ್ಯ ಸತ್ವವನರಸಿ ಗಾಂಧಿ
ಹೋರಾಟದ ಕಿಡಿಗಳ
ಗೆರೆ ಎಳೆದು ಚರಕ ಕಟ್ಟಿ
ಚೈತನ್ಯದ ನೂಲು ಹಿಡಿದು
ಸ್ವಾತಂತ್ರ್ಯದ ಬಟ್ಟೆ ನೇಯ್ದು
ಭಾರತಿಯ ಸಂಕೋಲೆ ಕಳಚಿ
ಎದುರಾಳಿಯ ಮುಕ್ತಿಗೂ
ಪ್ರಾರ್ಥನೆಯ ಭಜನೆಗೈದು
ಉಪ್ಪಿನ ಋಣ ಹೊತ್ತು
ಕಡಲನೂ ಬಾಚಿ ಕರೆದು ನಾಚುವಂತೆ
ವಿಷಮ ಜಗದ ಹೊಣೆ ಹೊತ್ತು
ಹೊರಟಿದ್ದರು ಮುಂದೆ ಗಾಂಧಿ
ಬೇಗುದಿಗಳ ಕೆಂಡ ತುಳಿದು
ಹಿಂಸೆಗಳ ಮುಳ್ಳು ಹಾದಿ ಸವೆಸಿ
ಭಂಡರ ಬಂಡವಾಳ ಬಿಚ್ಚಿ
ಆಳುವವರ ಎದೆ ಬಗೆದು
ಆತ್ಮ ಹೃದಯ ಮನಸು ತೋರಿ
ಮಾನವತೆಯ ಕಂದೀಲು ಹಿಡಿದು
ವಸಾಹತು ಬುನಾದಿ ಕೆಡವಿ
ಕೆಚ್ಚಿನ ಕಿಚ್ಚು ಹೊತ್ತಿಸುತ
ಕತ್ತಲೆಯೊಳಗೆ ತನ್ನ ಬದುಕನುರಿಸಿ
ಬೆಳಕು ಬೀರಿ ಹೊರಟಿದ್ದರು
ದಿವ್ಯ ತಪಸ್ವಿ ಗಾಂಧಿ
ಅಧಿಕಾರದ ಚಳಿ ಬಿಡಿಸಿ
ಪ್ರಭುತ್ವದ ಅರ್ಥ ಬದಲಿಸಿ
ಧೀರತೆಗೆ ಹೆಮ್ಮೆ ಮೂಡಿಸಿ
ಬಲಿದಾನದ ಕೋಟೆಯ ಮೇಲೆ
ಬಾವುಟ ಹಾರುವುದ ಕಂಡು
ಬೆಂದು ಕಂದಿ ನೊಂದವರ ಕಣ್ಣೀರಿಗೆ
ಭವಿತವ್ಯದ ಸೂರ್ಯ ತೋರಿ
ಉಪವಾಸದ ಧಗೆಯಲ್ಲಿ
ಸಾಮ್ರಾಜ್ಯವನೇ ಸುಟ್ಟು
ನೆತ್ತರಿಲ್ಲದ ಕ್ರಾಂತಿ ಹಾದಿ ಕ್ರಮಿಸಿ
ಭವದಲಿದ್ದೂ ಭವಿಯಾಗದೆ
ಅನುಭಾವದ ಕಡಲಾಗಿ
ಹೃದಯವಾಗಿಲು ತೆರೆದಿಟ್ಟು
ಹೊರಟಿದ್ದರು ಯೋಗಿ ಗಾಂಧಿ
ಚಳುವಳಿಯ ಬೆಂಕಿಯಲ್ಲಿ
ಹಸಿವು ನೋವುಗಳ ಬೇಯಿಸಿ
ಮೃಷ್ಟಾನ್ನ ಅಡುಗೆ ಬಡಿಸಿ
ಕಾರ್ಮೋಡವನೆ ಹೊಕ್ಕು
ಜ್ವಾಲಾಮುಖಿಯೊಳಗೆ ಇಳಿದು
ಮೆಟ್ಟಿ ನಿಂತು ಮೆಟ್ಟಿಲಿಳಿದು
ಹೇಳದೇ ಹೇ ರಾಮ್ ಎಂದು
ಹೊರಟಿದ್ದರು ಗಾಂಧಿ
ಕೊರಳು ಬಿಗಿವ ಗುಂಡಿನಪ್ಪುಗೆಯಲಿ
ಭಾರತಿಯ ಕೈ ಬಿಟ್ಟು
ಅಹಿಂಸೆಯ ಒಂಟಿ ಮಾಡಿ
ಸತ್ಯ ಶಾಂತಿಗಳ ಅನಾಥವಾಗಿಸಿ
ಹಿಂಸೆ ರಕ್ಕಸನ ಕಬಂಧ
ಬಾಹುಗಳಲಿ ನರಳಿದ ಕೆನ್ನೆತ್ತರ
ಒಡಲುಗಳ ಮೇಲೆ ಹೂವಿಟ್ಟು
ಭಾರತಿಯ ಮುಡಿಗೆ ಬಾವುಟವನಿಟ್ಟು
ದಿಗ್ದೇಶಗಳ ತೋರಿ ಸ್ವಾತಂತ್ರ್ಯ
ಜ್ಯೋತಿಯ ಬೆಳಗಿಸಿ ತೊಳಗಿ
ಹೊರಟಿದ್ದರು ಗಾಂಧಿ
x

Thursday 12 September 2019

ಜಗದ್ವಂದ್ಯ ಭಾರತ

ಭಾರತ ವೈವಿಧ್ಯಮಯ ಧರ್ಮ ಜಾತಿ ಮತ ಪಂಥಗಳೆಂಬ  ಅನನ್ಯವಾದ ಫಲಪುಷ್ಪಗಳ  ನಂದನವನ. ಅಖಂಡತೆ ಹಾಗೂ ಏಕತೆಯ ಸೌಂದರ್ಯದಲ್ಲಿ ನಳನಳಿಸುತ್ತಿರುವ ಇಲ್ಲಿಯ ಅಭೂತಪೂರ್ವ ವಿಭಿನ್ನ ಸಂಸ್ಕೃತಿಮಣಿಗಳ ಸಮ್ಮಿಲನ ಒಂದು ಮಹಾಬೆರಗು ಹಾಗೂ ಬೆಳಕನ್ನು ಸೃಷ್ಟಿಸಿದೆ." ಅಹಿಂಸೆಯೇ ಪರಮೋಧರ್ಮ" ಎಂದು ಸಾರಿದ ಜೈನ ಧರ್ಮದ ಉದ್ಯಾನವನವಾಗಿ, ಪ್ರೀತಿ,ಅನುಕಂಪ, ದಯೆ,ಮಾನವೀಯತೆ, ಅಂತಃಕರಣ, ಜ್ಞಾನಗಳನ್ನೇ ತನ್ನ ಕೊರಳ ಕುಸುಮಗಳನ್ನಾಗಿ ಧರಿಸಿ ಜಗತ್ತಿನೆಲ್ಲೆಡೆ ಪರಿಮಳವನ್ನೇ ಪಸರಿಸಿದ ಬುದ್ಧನ ಪವಿತ್ರ ನೆಲವಾಗಿ ; ಶೌರ್ಯ, ತ್ಯಾಗ, ಸೇವೆ, ಆಧ್ಯಾತ್ಮದ ದಾರ್ಶನಿಕ  ಗುರುನಾನಕರು ಮೆಟ್ಟಿದ ಧರೆಯಾಗಿ, ಸಮಾನತೆ, ಆಧ್ಯಾತ್ಮ ಸಾಧನೆ,ಸಮಾಜ ಸುಧಾರಣೆಯ ಹೆಮ್ಮರವನ್ನು ಬೆಳೆಸಿ ಎಳೆಹೂಟೆಗೆ ಕೊರಳು ಕೊಟ್ಟ ಸಹಸ್ರಾರು ಶರಣರ ಪುಣ್ಯಭೂಮಿಯಾಗಿ ; ಈ ದೇಶದ ಆತ್ಮವಾಗಿದ್ದು, ಮಹಾತ್ಮನಾದ ಗಾಂಧೀಜಿ ನಡೆದಾಡಿದ ನೆಲವಾಗಿ,  ಮೀರಾಬಾಯಿಯ, ಜಗನ್ನಾಟಕ ಸೂತ್ರಧಾರ ಮಾಧವ ನಲಿದಾಡಿದ ಬೃಂದಾವನವಾಗಿ, ಶಿವನ ತಾಂಡವ ನೃತ್ಯಕ್ಕೆ ಹಿಮಾಲಯವಾಗಿ, ನಿರ್ವಯಲ ನೀಲವನೇ ತೋರಿದ ಸೂಫಿಗಳ ತಾಣವಾಗಿ, ಜೀವಸಂಕುಲಕ್ಕೆಲ್ಲಾ ಹಸಿರುಸಿರನ್ನು ನೀಡಿದ ಯಮುನೆ ಗಂಗೆಯರನ್ನು ತಬ್ಬಿಕೊಂಡ ಮಾತೆಯಾಗಿ, ಭರತಭೂಮಿಯ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಆಧ್ಯಾತ್ಮಿಕ ಹಿರಿಮೆ ಅವರ್ಣನೀಯ ಹಾಗೂ ಅನನ್ಯ. ಜಗತ್ತಿನ ಧರ್ಮಗಳೆಲ್ಲಾ ತಮ್ಮ ತಮ್ಮ ಅಸ್ಮಿತೆಗಾಗಿ ಏಕಾಂಗಿಯಾಗಿ ಹೋರಾಡುತ್ತಿರುವ ಸಮಕಾಲೀನ ಸಂದಿಗ್ಧ ಸಂದರ್ಭದಲ್ಲಿ ಅಗಣಿತ ಜಾತಿ, ಧರ್ಮ, ಮತ, ಪಂಗಡಗಳನ್ನು ಶಿಶುಗಳಂತೆ ತನ್ನೊಡಲಲ್ಲಿಟ್ಟುಕೊಂಡು, ಅತ್ತು ಹಠವಿಡಿದಾಗ ಸಮಾಧಾನದಿಂದ  ತೂಗಿ ಪೋಷಿಸಿ ಭಾವೈಕ್ಯತೆಯ ತಪಸ್ಸನ್ನಾಚರಿಸುತ್ತಿರುವ  ಭಾರತಿ ನಮ್ಮ ಹೆಮ್ಮೆ ಹಾಗೂ ಸ್ವಾಭಿಮಾನದ ದಿವ್ಯ ಪ್ರತಿರೂಪ. ಹಿಂದೂ ಮುಸಲ್ಮಾನರೆನ್ನದೇ ಐಕ್ಯತೆಯ ಸದ್ಭಾವದಲ್ಲಿ ಮಿಂದು ಮೊನ್ನೆ ತಾನೆ ಆಚರಿಸಿದ ಮೊಹರಂ ಹಬ್ಬ ನಮ್ಮ ದೇಶದ ಇಂತಹ ಐಕ್ಯತೆಯ ಸರ್ವಧರ್ಮ ಸಮಭಾವದ ಪರಂಪರೆಯಲ್ಲಿ ಹರಿಯುತ್ತಿರುವ ಒಂದು ಅನುಪಮ ಪರ್ವನದಿ. ಅವರಿವರೆನ್ನದೇ  ಸಕಲರಿಗೂ  ಸಕ್ಕರೆಯ ಸಿಹಿಯನ್ನು ಹಂಚಿ ಲೇಸನೇ ಬಯಸುವ ಜಾತ್ರೆ, ಉರುಸ್, ಮೊಹರಂ, ಗಣೇಶ ಚತುರ್ಥಿಯಂತಹ ಹಬ್ಬಗಳು ನಮ್ಮ ವಸುಧೈವ ಕುಟುಂಬಕಂ ಎಂಬ ಮಹಾಪರಂಪರೆಯ ರೂಪಕಗಳಲ್ಲಿ ಅನನ್ಯವಾದವುಗಳು. ಈ ಎಲ್ಲ ಸಂಗತಿಗಳಿಗೆ ಅಲಂಕಾರ ಸ್ವರೂಪವನ್ನು ನೀಡುವ ಹಾಗೆ ಇತ್ತೀಚೆಗೆ ಬಿಡುಗಡೆಯಾದ ಒಂದು ಕೃತಿ ನನ್ನ ಗಮನವನ್ನು ಅತೀವವಾಗಿ ಸೆಳೆಯಿತು.

ರಾಗಂ ಎಂದೇ ನಾಡಿಗೆ ಚಿರಪರಿಚಿತವಾಗಿರುವ ಡಾ. ರಾಜಶೇಖರ ಮಠಪತಿಯವರ "ಜಗದ್ವಂದ್ಯ ಭಾರತ" ಕಾದಂಬರಿ ಕೃತಿ ಭಾರತಿಯ ಮುಕುಟಕ್ಕೊಂದು ಕನ್ನಡದ ಗರಿಯೆಂಬಂತೆ ಮೈದಾಳಿರರುವುದು ಅರ್ಥಪೂರ್ಣವಾಗಿದೆ.ಮತ್ತೆ ರಾಷ್ಟ್ರೀಯತೆಯ ವ್ಯಾಖ್ಯಾನದ ಚರ್ಚೆ ಮುನ್ನಲೆಗೆ ಬಂದಿರುವ ಈ ಹೊತ್ತಿನಲ್ಲಿ, ಈ ಕಾದಂಬರಿ ಲೋಕಾರ್ಪಣೆಯಾಗಿ ತನ್ಮೂಲಕ ಸ್ವಗತದ ಮಾರ್ಮಿಕ ಉತ್ತರವನ್ನು ನೀಡುತ್ತಿರುವಂತೆ ರಚನೆಯಾಗಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ಇದು ನಮ್ಮ ದೇಶದ ಬಾವುಟ ಏರಿದ ಎತ್ತರ, ಆವರಿಸಿಕೊಂಡ ಆಳದ  ಚರಿತ್ರೆಯನ್ನು ಕಟ್ಟಿಕೊಡುವ ಕಾದಂಬರಿಯಾಗಿರುವಂತೆಯೇ, ನಮ್ಮ ದೇಶದ ಅನನ್ಯ ಸಂಸ್ಕೃತಿ ಪರಂಪರೆಯನ್ನು ಎತ್ತಿಹಿಡಿಯುವ ಮಹತ್ವದ ಕೃತಿಯಾಗಿಯೂ ಗಮನ ಸೆಳೆಯುತ್ತದೆ. ರಾಷ್ಟ್ರಕವಿ ಜಿ. ಎಸ್ ಎಸ್ ರವರ  ಕವಿತೆಯ ಸಾಲುಗಳಂತೆ ನಮ್ಮ ದೇಶದ ಇತಿಹಾಸವೆಂಬ ಸುರಂಗವನ್ನು ಪ್ರವೇಶಿಸಿ ಸ್ವಾಭಿಮಾನದ ಬಾವುಟದ ಮೇಲೆ ಬೆಳಕು ಚೆಲ್ಲುವ ಮಹತ್ವದ ದಾಖಲೆಯಾಗಿ ಈ ಕೃತಿ  ಆಕರದ ಸ್ಥಾನವನ್ನು ಪಡೆದುಕೊಂಡರೂ ಅಚ್ಚರಿಯೇನಲ್ಲ. ಸರಜೂ ಕಾಟ್ಕರ್ ರವರರು ರಾಷ್ಟ್ರ ಧ್ವಜದ ಮಹತ್ವ ಎಂಬ ಪ್ರಬಂಧದಲ್ಲಿ  ನಮ್ಮ ಧ್ವಜದ ಇತಿಹಾಸವನ್ನು ಸಾಂದರ್ಭಿಕವಾಗಿ ಸ್ಮರಿಸಿದ್ದಾರೆ. ಇಂತಹ ಕೆಲವೇ ಕೆಲವು ಬರಹಗಳನ್ನು ಹೊರತುಪಡಿಸಿದರೆ  ಇದುವರೆಗೂ ಕನ್ನಡದಲ್ಲಿ ನಮ್ಮ ದೇಶದ ಬಾವುಟದ ಚರಿತ್ರೆಗೆ ಸಂಬಂಧಿಸಿದ ಕೃತಿಗಳು ರಚನೆಯಾಗಿರುವುದು ವಿರಳಾತಿವಿರಳ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ  ನಮ್ಮ ಭಾರತ ಮಾತೆಯ ನೆತ್ತಿಯ ಮೇಲಿನ ಸೆರಗಿನ ಪ್ರತೀಕದಂತಿರುವ ಧ್ವಜಚರಿತ್ರೆಯನ್ನು ಕಾದಂಬರಿಯ ವಿನೂತನ ಪ್ರಯೋಗದ ಮೂಲಕ ಕಟ್ಡಿಕೊಡುತ್ತಿರುವ ರಾಗಂರವರಿಗೆ ಕೃತಜ್ಞತೆಗಳನ್ನು ಸಲ್ಲಿಸಲೇಬೇಕು. ರಾಗಂರವರಿಗೆ ಜನ್ಮದಿನದ ಶುಭಾಶಯಗಳನ್ನು  ಹೇಳಬೇಕಾದ ಈ ಶುಭಸಂದರ್ಭದಲ್ಲಿ ನೆನೆಯಲೇಬೇಕಾದ ಅವರ ಈ ಬಾವುಟದ ಕತೆಯ ಬೆಳಕು ಭಾರತೀಯರ ಮನೆಮನಗಳನ್ನು ಆವರಿಸಿ ಬೆಳಗಲಿ. ರಾಗಂರವರ ಲೇಖನಿ ಮತ್ತಷ್ಟು ಬೆಳಕಿನ ಬೆಳ್ಳಿರೇಖೆಗಳನ್ನು ಸೃಜಿಸಲಿ ಎಂದು ಹಾರೈಸೋಣ.

Tuesday 10 September 2019

ಭಾವಯಾನ

ಭಾವಯಾನ

'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ'ಎಂದು ಹಾಡುವ ಜನಪದರು ಬೆಳಗಾಗೆದ್ದು ಭೂತಾಯಿಯನ್ನು ಮನದ ದೇವರ ಕೋಣೆಯಲಿಟ್ಟು ಪೂಜಿಸಿ, ಆಲಾಪಿಸಿ ಹೃದಯ ಸಂಗೀತಕ್ಕೆ ತಲೆದೂಗುತ್ತಾರೆ. ಬೆಳಗೆಂದರೆ  ವಸುಂಧರೆಗೆ ಮರುಹುಟ್ಟು. ಈ ಜಗದ ಪ್ರತಿಯೊಂದು ಜೀವಸಂಕುಲಕೂ ಪುನರ್ಜನ್ಮ. ಸಸ್ಯ ಪ್ರತಿದಿನ ತನ್ನಲ್ಲಿ ಹುಟ್ಟುವ ಚಿಗುರಿನಿಂದ, ಮನುಷ್ಯನಿಗೆ ಅಗತ್ಯವಿರುವ ಬೆಳಗಿನ ನವಚೈತನ್ಯವನ್ನು ಕುರಿತು ಪಾಠ ಮಾಡುತ್ತದೆ. ರಾಷ್ಟ್ರಕವಿ  ಜಿ. ಎಸ್.ಎಸ್. ರವರ'ಹಾಡು ಹಳೆಯದಾದರೇನು ಭಾವ ನವನವೀನ' ಎನ್ನುವಂತೆ ದಿನ ಹಳೆಯದಾದರೇನು ಶುಭೋದಯ ಎಂದೆಂದಿಗೂ ನವನವೀನವೇ.  ಪ್ರತಿದಿನ ಹೊಸ ರಂಗನ್ನು ತೊಟ್ಟು ಕಂಗೊಳಿಸುವ ದಿನಪನ ಸಾಮ್ರಾಜ್ಯ ದರ್ಶನವೇ ಒಂದು ಯೋಗಾಯೋಗ. ನೇಸರನ ಹೊಂಬೆಳಕಿನ ಸುಖದ ಸ್ಪರ್ಶದೊಂದಿಗೆ ಉಜ್ಜಿಕೊಳ್ಳುತ್ತಾ ಕಣ್ಣುತೆರೆಯುವ ಈ ಧರೆಯು, ಎಂದೆಂದಿಗೂ ಬತ್ತಲಾರದ ಪುಟಿಯುವ ಚೈತನ್ಯದಿಂದ ಮಹಾಬೆಳಗನ್ನು ಸಂಭ್ರಮಿಸುತ್ತದೆ. ವರಕವಿ ದ.ರಾ ಬೇಂದ್ರೆಯವರನ್ನು ಕಾಡಿದ ಮೂಡಲ ಮನೆಯ ಮುತ್ತಿನ ಹನಿಗಳಿಂದ ಪಡೆಮೂಡುವ ಬೆಳಗು ಕುವೆಂಪುರವರಲ್ಲಿ ಸಕಲರಿಗೂ ಕರುಣೆದೋರುವ  ದೇವರ ದಯೆಯಾಗಿ ಸಂಭವಿಸಿದೆ. ಇಂತಹ ಸಕಲ ಜೀವಚರಾಚರಗಳೂ ಹಂಬಲಿಸುವ ಅದಮ್ಯ ಉತ್ಸಾಹದ ಬೆಳಗಿನೊಂದಿಗೆ'ನರವಿಂದ್ಯೆದೊಳಗೆನ್ನ ಹುಲುಗಿಳಿಯ ಮಾಡಿಸಲಹುತ್ತಾ ಶಿವ ಶಿವ ಎಂದೋದಿಸಯ್ಯ' ಎಂಬ ಶ್ರಾವಣದ ವಚನಗಾಯನದ ರಾಗಾಲಾಪವಿದ್ದರೆ ಮುಗಿಯಿತು, ಸ್ವರ್ಗಕ್ಕೆ ಕಿಚ್ಷುಹಚ್ಚುವುದೊಂದೇ ಬಾಕಿ. ಅದೇನು ವಿಸ್ಮಯವೋ ಗೊತ್ತಿಲ್ಲ, ಇಂತಹ ಬೆಳಗಿನ ಮಂದಸ್ಮಿತ ಮಬ್ಬು ನಸುಕಿನಲ್ಲಿ ನನ್ನ ನಯನಕರಣಗಳನ್ನು ತುಂಬಿ ತುಳುಕಿಸುವ  ಸುಪ್ರಭಾತದ ಭಾವೋನ್ಮಾದ, ಆ ಇಡೀ ದಿನ ನನ್ನ ಹೃದಯದರಮನೆಯಲ್ಲಿ ಸುತ್ತಿ ಸುಳಿದು ಮತ್ತೆ ಮತ್ತೆ ಅನುರಣಿಸುತ್ತಲೇ ಇರುತ್ತದೆ.  ನನ್ನ ಆ ದಿನದ  ದುಡಿಮೆಗೆ ಚೈತನ್ಯದ ಚಿಲುಮೆಯಾಗಿ ಆಗಾಗ ಜೀವಾಮೃತವನ್ನೆರೆಯುತ್ತಲೇ ಇರುತ್ತದೆ.  ಹೀಗೆ ಬೆಳಗಿನ ಅವಿಭಾಜ್ಯ ಭಾಗವಾದ ಹಾಡೊಂದು ಕಾಡುವ ಘಳಿಗೆಗೆ ನಾನು ಲೆಕ್ಕವಿಲ್ಲದಷ್ಟು ಬಾರಿ ಶರಣಾಗಿದ್ದಿದೆ. ಬೆಳಗು ನನಗೆ ಧ್ಯಾನವಾಗಿರುವಂತೆಯೇ, ಆ ಧ್ಯಾನವನ್ನು ನನ್ನೊಳಗಿಳಿಯುವಂತೆ ಮಾಡುವ  ಸುಪ್ರಭಾತದ ಚೆಲುವಿನ ಹಾಡು ನನಗೆ ಧ್ಯಾನಮಂದಿರವಾಗುತ್ತದೆ. ಅದು ಶ್ಲೋಕ, ವಚನ, ತ್ರಿಪದಿ,ಭಾವಗೀತೆ ಯಾವುದೋ ಸ್ವರೂಪದಲ್ಲಿರಬಹುದು.  ಕೆ. ಎಸ್. ನರಸಿಂಹಸ್ವಾಮಿಯವರ 'ದೀಪವೂ ನಿನ್ನದೇ ಗಾಳಿಯೂ ನಿನ್ನದೇಆರದಿರಲಿ ಬೆಳಕು ಹಡಗೂ ನಿನ್ನದೇ ಕಡಲೂ ನಿನ್ನದೇ ಮುಳುಗದಿರಲಿ ಬದುಕು.....ಎಂಬ ಗೀತೆಯು ಸುಪ್ರಭಾತವಾಗಿ ಕರಣ ತುಂಬಿದಾಗ, ನನ್ನ ಹೃದಯದಲ್ಲಿ ವಿನಯಪೂರ್ಣ ಉಲ್ಲಾಸವು ನದಿಯಾಗಿ ಹರಿದಿದ್ದನ್ನು ನಾನು ಮರೆಯಲಾರೆ.
ನನ್ನ ಮನವನ್ನು ಆ ಇಡೀ ದಿನ ಮತ್ತೆ ಮತ್ತೆ ಕಾಡಿದ ಗೀತೆಯಾಗಿ ಪ್ರಭಾವ ಬೀರಿತು. ಸದಾ ಪುಟಿಯುವ ನವೋತ್ಸಾಹದ  ನದಿಯೊಂದು ಅಂತರಂಗದಲ್ಲಿ ಪ್ರವಹಿಸಲು ಬೆಳಗಿನಲ್ಲಿ; ಸಾಧ್ಯವಾಗದಿದ್ದರೆ ಇನ್ನಾವುದೋ ಭೂತ ಕುಣಿಯುವ ಘಳಿಗೆಯಲ್ಲಾದರೂ ಸರಿ, ನನಗೊಂದು ಅಂತಹ ಗೀತೆ ಸಾಕು; ನನ್ನ ಆ ದಿನದ ಬದುಕು ತನ್ನದೇ ಭಾವಲಹರಿಯಲ್ಲಿ ಮತ್ತೆ ಮತ್ತೆ ಪ್ರಜ್ವಲಿಸುವಂತೆ ಮಾಡುತ್ತದೆ. ಬದುಕಿನಲ್ಲಿ ಎದುರಾಗುವ ಸಂಕಷ್ಟಗಳನ್ನೆಲ್ಲಾ ದೈವದ ಮೇಲೆ ಹೊರಿಸಿ ಸುಮ್ಮನಾಗುವ ವಿನಮ್ರತೆಯ ಆಸ್ತಿಕನನ್ನಾಗಿ ಮಾಡುತ್ತದೆ.
ಕಾಡುವ ಹಾಡೊಂದು ತಂದ ಸೌಭಾಗ್ಯವಿದು. ಅದರಲ್ಲಿಯೂ ಪ್ರಾತಃಕಾಲದ ಹಾಡಂತೂ ನನ್ನ ಮನದ ಕ್ಲೇಶ ಕಳೆಯುವ ದಿವ್ಯೌಷಧಿಯನ್ನಾಗಿ ಸೇವಿಸಿದ್ದೇನೆ. ಅಂತರಂಗದ ತುಮುಲಗಳಿಗೆ ಸಾಂತ್ವನದ ಧಾರೆಯೆರೆಯುವ ರಸೌಷಧಿಯನ್ನಾಗಿ ಮಾಡಿಕೊಂಡಿದ್ದೇನೆ. ನನ್ನ ಮನೆಯ ಪಕ್ಕದ ದೇವಾಲಯದ ಧ್ವನಿವರ್ಧಕದ ಇಂತಹ ಗಾಯನಕ್ಕಾಗಿ ಬೆಳಗಾಗೆದ್ದು ಕಾಯುತ್ತೇನೆ. ನನಗೆ ೫ ಗಂಟೆಗೆ ಎಚ್ಚರ ತರುವ ಬೆಳಗು ದೇವಾಲಯದ ಧ್ವನಿವರ್ಧಕಕ್ಕೆ ೬ ಗಂಟೆಗೆ ಜಾಗೃತಿಯನ್ನುಂಟುಮಾಡುತ್ತದೆ.  ಬೆಳಿಗ್ಗೆ ೬ ಗಂಟೆಗೆ ಕೊರಳೆತ್ತಿ ಉಚ್ಛ ಸ್ವರದಲ್ಲಿ ರಾಗ ತೆಗೆಯುವ ಧ್ವನಿವರ್ಧಕವೇ ನಮ್ಮೂರ ಜನರ ಆಧುನಿಕ ಮುಂಗೋಳಿಯೆಂದರೆ ಅತಿಶಯೋಕ್ತಿಯೇನಲ್ಲ. ಇದರಿಂದ ಹೊರಡುವ ಸುಪ್ರಭಾತಕ್ಕಾಗಿ ನಿದ್ದೆಯ ಮಂಪರಿನಲ್ಲಿರುವ ಅದೆಷ್ಟೋ ದೇಹ ಮತ್ತು ಮನಸುಗಳು ಕಾದುಮಲಗಿರುತ್ತವೆ. ಗಜಮುಖನೇ ಗಣಪತಿಯೇ ನಿನಗೆ ವಂದನೆನಂಬಿದವರ ಪಾಲಿನ ಕಲ್ಪತರು ನೀನೆ....ಎಂಬ ಸ್ವರ ಹೊರಟ ಕ್ಷಣವೇ ನಮ್ಮ ಜಗತ್ತು ಆಕಳಿಸಿ ಕಣ್ಣುಜ್ಜಿ ದೈವ ನೆನೆದು ಎಚ್ಚರಗೊಳ್ಳುತ್ತದೆ. ಸರ್ವಜನರ ಬೆಳಗಿನ ಲೋಕವ್ಯಾಪಾರ ಪ್ರಾರಂಭವಾಗುವುದೇ ಈ ಸುಪ್ರಭಾತದ ರಸಗಾನದಲ್ಲಿ ಮೈಮರೆಯುವುದರಿಂದ.ಸಮಷ್ಟಿಯಲ್ಲಿ ಈ ಸುಪ್ರಭಾತದ ಗಂತವ್ಯ ಒಂದು ಬಗೆಯಾದರೆ ವ್ಯಷ್ಟಿಯಲ್ಲಿ ನನಗೆ ಕಾಡುವುದು ಮತ್ತೊಂದು ಬಗೆಯದು. ಇಡೀ ದಿನ ಗುಣುಗುಣುಗುಟ್ಟುತ್ತಲೇ ಅಂತರಂಗವನ್ನು ಹಗುರಾಗಿಸುವ ಈ ಹಾಡಿನ ಬಲೆ ಕಲಾತ್ಮಕವಾದದ್ದು. ಅಷ್ಟೇ ಯೋಗಾನಂದದಿಂದ ಕೂಡಿದ್ದು.ನಾದಮಯ ಈ ಲೋಕವೆಲ್ಲಾ ಎಂದು ನನ್ನೊಳಗಿನ ಸಾಕ್ಷಾತ್ಕಾರಕ್ಕೆ ದಾರಿದೀಪವಾಗಬಲ್ಲ ಸ್ವರಗಾನವೆಂದರೆ ಅದು ಸುಪ್ರಭಾತ. ನನ್ನೆದೆಯ ಪಾಡಿಗೆ  ಹಾಡು ಮಹಾಮನೆ. ಬೆಳಗಿನ ಹಾಡು  ರಸದುಂದುಭಿಯ ಸವಿಸಮಯದ ಇಂಬು ನೋಡಿ  ನೇರವಾಗಿ ಎದೆಯೊಳಗಿಳಿದು ಗೂಡುಕಟ್ಟಿ ಮರಿಹಾಕುತ್ತದೆಯೆಂದರೆ ಅದರ ಮಾಂತ್ರಿಕ ಶಕ್ತಿಯ ಮಹಿಮೆ ಇನ್ನೆಂತಹುದೋ ?  ಹುಟ್ಟಿದ ಮರಿಗಳು ಚಿಂವ್ ಗುಟ್ಟುವ ಮಧುರ ಗಾನ ಎನ್ನ ಹೃದಯದ ಭಿತ್ತಿಯನ್ನಾವರಿಸಿ, ಅನುರಣಿಸಿ ಕೊರಳು ತುಂಬಿ ಉಕ್ಕಿ ಹೊರ ಬಂದಾಗಲೇ ಅದಕೆ ಮುಕ್ತಿ. ಎದೆಯೊಳಗಿನ ಸುಪ್ರಭಾತವೆಂಬ ತಾಯಿಹಕ್ಕಿಯ ಹಾಡು ಹೊಮ್ಮಿಸುವ ಸ್ವರಗಾನದ ನಾದಮಾಧುರ್ಯ ಅನುಪಮವಾದದ್ದು. ಚಿಕ್ಕಂದಿನಿಂದಲೂ ನಾನು ಸುಪ್ರಭಾತವೆಂದರೆ ಕೇವಲ ಭಕ್ತಿಗೀತೆಗಳಷ್ಟೇ ಎಂದುಕೊಂಡಿದ್ದ ನನ್ನ ಪೂರ್ವಾಗ್ರಹವನ್ನು ಬದಲಾಯಿಸಿಕೊಳ್ಳುವಂತೆ ಮಾಡಿದ್ದು  ನಮ್ಮ ಮನೆಯ ಪಕ್ಕದ ದೇವಾಲಯದ ಧ್ವನಿವರ್ಧಕ. ಸುಪ್ರಭಾತದ ಗೀತೆಗಳನ್ನಾಗಿ ಸಿರಿಗನ್ನಡದ ಮಹಾಕವಿಗಳ  ಭಾವಗೀತೆಗಳನ್ನೂ, ಜನಪದ ಹಾಡುಗಳನ್ನು, ತ್ರಿಪದಿಗಳ ಗಾಯನವನ್ನು  ಬಳಸಿಕೊಳ್ಳಬಹುದು ಎಂಬುದಕ್ಕೆ ಅತ್ತ್ಯುತ್ತಮ ಉದಾಹರಣೆ ನಮ್ಮ ಮನೆಯ ಪಕ್ಕದ ದೇವಾಲಯದ ಸುಪ್ರಭಾತದ ಸಂಗೀತ.
ದೀಪವೂ ನಿನ್ನದೇ..ಎಂಬ ಕೆ ಎಸ್ ನರಸಿಂಹಸ್ವಾಮಿಯವರ ಗೀತೆಯನ್ನು ಸುಪ್ರಭಾತವಾಗಿ  ಆನಂದಿಸಿದ್ದೇನೆ. ಈ ದೇವಾಲಯದ ಮುಕುಟಮುಖದಿಂದ ಮತ್ತೊಂದು ಮುಂಜಾನೆ ಹೊರಟ  ಜಿ ಎಸ್ ಎಸ್ ರವರ  ಕಾಣದಾ ಕಡಲಿಗೆ ಹಂಬಲಿಸಿದೆ ಮನ....ಎಂಬ ಹಾಡನ್ನು ಕೇಳಿ ಮನಸ್ಸು ಕಾಣದ ಕಡಲಿನತ್ತ ಪಯಣಿಸಿದ್ದನ್ನು ಅನುಭವಿಸಿ, ಸುಪ್ರಭಾತವನ್ನೂ ಹೀಗೂ ಆಸ್ವಾದಿಸಬಹುದೆಂಬುದಕ್ಕೆ  ಮಾರ್ಗ ತೋರಿಸಿತು. ಬೆಳಗಿನ ಮಾಂತ್ರಿಕ ಸ್ಪರ್ಶವೇ ಅಂತಹುದು,ಆ ಶುಭಘಳಿಗೆಯಲ್ಲಿ ಕೇಳಿದ ಯಾವುದೋ ಒಂದು ಮಧುರ ಗೀತೆ ಇಡೀ ದಿನ ಎದೆಯಲ್ಲಿ ಅನುರಣಿಸುತ್ತಲೇ ಇರುತ್ತದೆ. ಶುಭೋದಯದ ಹೊಂಬೆಳಕಿನಲ್ಲಿ ಒಮ್ಮೆ ಕರ್ಣಾನಂದಕ್ಕೆ ಕಾರಣವಾದ
' ಕಲ್ಯಾಣವೆಂಬ ಪ್ರಣತಿಯಲ್ಲಿ ಭಕ್ತಿರಸವೆಂಬ ತೈಲವನೆರೆದು ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ಎಂಬ ವಚನನಾದ ಕೇಳಿದ ಘಳಿಗೆಯಿಂದ ರಾತ್ರಿ ಮಲಗುವವರೆಗೂ ಮನದಾಲಯದಲ್ಲಿ ಮರಮರಳಿ ರಿಂಗಣವಾಗುತ್ತಲೇ ಹೋಗುತ್ತದೆ. ಅದೆಂತಹ ಸಮ್ಮೋಹದ ಬಲೆಯೋ ಏನೋ! ಬೆಳಗಿನ ಆ ಒಂದು ಕ್ಷಣದ ಗೀತೆಯ ಸೆಳೆತ ನನ್ನ ದೇಹ,ಮನಸು,ಆತ್ಮಗಳನ್ನೂ ನುಂಗಿಬಿಡುತ್ತದೆ. ಮಾಯೆ ನಿನ್ನೊಳಗೋ ನೀ ಮಾಯೆಯೊಳಗೋ' ಎಂಬ ಕನಕದಾಸರ ಕೀರ್ತನೆಯಂತೆ ನಾನು ಗೀತೆಯ ಮಾಯೆಯೊಳಗೆ ಅದ್ವೈತಿಯಾಗುತ್ತೇನೆ. ಆಗಂತುಕನಾಗಿ ಬಂದು  ಅಂತರಂಗದೊಡೆಯನಾಗುವ ಗೀತೆಗೆ ದಾಸನಾಗುತ್ತೇನೆ.  ಏಕಾಂತದ ಹಾದಿಯಲ್ಲಿ ನಡೆದ ಬುದ್ಧನನ್ನು ನೆನೆದು,ಮನೋವ್ಯಾಪಾರದ ತಲ್ಲಣಗಳು ದಾಳಿಯಿಡದಂತೆ ರಕ್ಷಣಾಕೋಟೆಯೊಂದನ್ನು ಕಟ್ಟಿಕೊಳ್ಳಲು ನಾನು ಕಂಡುಕೊಂಡ ಸರಳ ಸುಂದರ ಉಪಾಯ ಈ ಗೀತೋಪಾಸನೆ.  ಡಿ ವಿ ಜಿ ಯವರ"ಎರಡು ಕೋಣೆಗಳ ನೀಂ ಮಾಡು ಮನದಾಲಯದಿ| ಹೊರಕೋಣೆಯಲಿ ಲೋಗರಾಟಗಳನಾಡು ವಿರಮಿಸೊಬ್ಬನೆ |ಮೌನದೊಳಮನೆಯ ಶಾಂತಿಯಲಿ ವರಯೋಗಸೂತ್ರವಿದು- ಮಂಕುತಿಮ್ಮ"ಎಂಬ ಕಗ್ಗದಂತೆ ಮೌನದೊಳ ಕೋಣೆಯೊಳಗೆ ವಿಹರಿಸುವ ಅದ್ಭುತ ಅವಕಾಶವನ್ನು ಗೀತ ನನಗೆ ನೀಡುತ್ತಲೇ ಬಂದಿದೆ. ನನ್ನನ್ನು ಸುಪ್ರಭಾತದಂತೆ ಕಾಡಿದ ಮತ್ತೊಂದು ಭಾವಗೀತೆಯೆಂದರೆ ದೀಪಧಾರಿಯ ಕವಿ ಜಿ. ಎಸ್. ಎಸ್. ರವರ 'ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು| ಧಗೆಯಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು....ಎಂದು  ಮೃದುವಾಗುವ ನನ್ನ ಹೃದಯಕ್ಕೆ ಅಭಿಷೇಕವೆಂದರೆ ಆತ್ಮಾನಂದದ ಸುಪ್ರಭಾತ. ಹಾಗೆಂದು ಇದುವರೆಗೂ ನನಗೆ ಭಕ್ತಿಭಾವಗಳ ಸುಪ್ರಭಾತವೇ ವರಪ್ರಸಾದವಾಗಿದೆಯೆಂದೇನಿಲ್ಲ; ನೀರವ ಮಧ್ಯರಾತ್ರಿಯಲ್ಲಿ ಎದ್ದು ಕುಳಿತು ಕೇಳುವ" ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತಿರುವೆ ನಾನು' ಎಂಬ ಭಾವಗೀತೆಯೂ ನನ್ನ ನಿದ್ರೆಯನ್ನು ಪ್ರಶಾಂತದ ಧ್ಯಾನವನ್ನಾಗಿಸಿದೆ. ವಸಂತದ ಬಿರುಬಿಸಿಲ ನಡುಹಗಲಿನಲ್ಲಿಯೂ ಬೇವಿನ ಮರದ ತಂಪು ನೆರಳ ತಲ್ಪದಲ್ಲಿ ಕುಳಿತು ಕೇಳಿದ 'ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣುನನಗೂ ಆಕೆ ಕೃಷ್ಣನ ದೋರುವ ಪ್ರೀತಿಯು ನೀಡಿದ ಕಣ್ಣು"ಎಂಬ ಭಾವಕವಿ ಎಚ್ ಎಸ್ ವೆಂಕಟೇಶ ಮೂರ್ತಿಯವರ ಗೀತೆಯೂ ನನ್ನ ಭಾವದ ಹುಚ್ಚಿಗೆ ಆಗಾಗ ಕಿಚ್ಚು  ಹಚ್ಚಿದ್ದಿದೆ.
ಸಂಗೀತದ ಗಂಧ ಗಾಳಿಯೇ ಹಾಗೆ. ಆಲಿಸುವ ಹೃನ್ಮನಗಳನ್ನು ಸೆಳೆಯದೇ ಬಿಟ್ಟ ಉದಾಹರಣೆಗಳು ಅಪರೂಪ. ನನ್ನ ಮನಸು ಬಯಸುವ ಹಾಡುಗಳ ಇಂಪಾದ ಲಾಲಿತ್ಯಕ್ಕೆ ಮನಸೋತಿದ್ದೇನೆ. ಭಾವಲೋಕದ ಪಯಣದಲ್ಲಿನ ಈ ರಸಾನಂದಕ್ಕೆ ತಲೆದೂಗಿದ್ದೇನೆ.

ಬೃಂದಾವನದ ಮಾಧವನ ಕೊಳಲಗಾನ ಕೇಳುತ್ತಲೇ ಮರುಳಾಗಿ ಮರಳುವ ರಾಧೆಯಂತೆ, ಮನಸು  ಯಾವುದೋ ಮೂಲೆಯಲ್ಲಿ ಕೇಳಿದ ರಸಗಾನಕ್ಕೆ ಸೋತು, ಲೋಕವ್ಯಾಪಾರದ ಜಂಜಡಗಳಿಂದ ಬಿಡುವು ಪಡೆದು ವಿರಮಿಸಿದೆ. ನನ್ನ ಬದುಕಿನ ಸುಖದುಃಖಗಳೆಲ್ಲಾ ಸಂದರ್ಭಾನುಸಾರ ನನ್ನೆದೆಯಲ್ಲಿ ಕವಿಗಳ ಭಾವಗೀತೆಗಳಾಗಿ ಮೇಳೈಸಿ ಮೈಮರೆತು ಮುಕ್ತಿಯ ಮಾರ್ಗ ಕಂಡುಕೊಳ್ಳುವ ಬಗೆಯನ್ನು ಕಂಡು ವಿಸ್ಮಯಗೊಂಡಿದ್ದೇನೆ. ನನ್ನ ಸಕಲ ಹಾವಭಾವಗಳ  ಭಾಷೆಯನ್ನು ಬಲ್ಲ ಈ ಗೀತೆಗಳು ಕೆಲವೊಮ್ಮೆ ಅರಿಸ್ಟಾಟಲ್  ಕೆಥಾರ್ಸಿಸ್ ನ್ನು ಪ್ರಯೋಗಿಸಿ ನನ್ನನ್ನು ಭಾವಶೋಧನೆಗೊಳಗೂ ಮಾಡಿವೆ. ನೇಸರನ ಎಳೆಯ ಪಡಿನೆಳಲಿನಲ್ಲಿ ಆಸ್ವಾದಿಸಿದ ಗೀತೆಯೊಂದು ಇಡೀ ದಿನ ಸಂದರ್ಭ ಒದಗಿದಾಗೆಲ್ಲಾ ನನ್ನ ಮೇಲೆ ಆಗಾಗ ದಾಳಿಯಿಟ್ಟು ಹೃದಯವನ್ನು ಸೂರೆಗೊಳ್ಳುವ ಭಾವಾಲಾಪಕ್ಕೆ ನಾನು ಬೆಕ್ಕಸ ಬೆರಗಾಗಿದ್ದೇನೆ. ಮೋಹದ ಬಲೆಯಲ್ಲಿ ಸಿಲುಕುವುದೆಂದರೆ ಅದು ಗೀತೆಗಳ ಲಯದಲ್ಲಿ ನಾದವಾಗುವುದೆಂದೇ ಅರ್ಥ.

ಶುಭಮುಂಜಾನೆಯ ಸುಖೋಲ್ಲಾಸದ ಸಮಯದಲ್ಲಿ  ಭಕ್ತಿಯ ಮಂಜನ್ನು ಎರಕ ಹೊಯ್ಯುವ " ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನೆವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ..' ಎಂಬ ಹಾಡು ನನಗೆ ದೇವನನ್ನು ಕಾಣಲು ದಾರಿ ತೋರುವ ಬೆಳಕಿಂಡಿಯಾಗಿ ಕಂಡಿದೆ. ನನ್ನ ಪ್ರತಿದಿನವೂ ಇಂತಹ ಮೈಮನ ಸೂರೆಗೊಳ್ಳುವ  ಸುಪ್ರಭಾತದಿಂದಲೋ ಅಥವಾ ಭಾವಗೀತೆಗಳಿಂದಲೋ  ಪ್ರಾರಂಭವಾಗಬೇಕೆಂದು ಬಯಸುತ್ತೇನೆ. ನನ್ನಲ್ಲಿ  ಚೈತನ್ಯವನ್ನು ಸ್ಫುರಿಸುವ  ಈ ಗೀತೆಗಳು ನನ್ನೊಳಗೆ ಹುದುಗಿರುವ ಭಾವಮೊಗ್ಗುಗಳನ್ನು ಮೈಚಾಚಿ ಅರಳುವಂತೆ ಮಾಡುತ್ತವೆ. ಇನ್ನು ಸುಪ್ರಭಾತವೇ ಭಾವಗೀತೆಯಾದರಂತೂ ಮಹದಾನಂದದ ಹೊಳೆಯಲ್ಲಿ ಮನಸು ಕೊಚ್ಚಿಹೋಗುವುದೊಂದೇ ದಾರಿ. ಮುಸ್ಸಂಜೆಯ ಒಂದು ಇಳಿಹೊತ್ತಿನಲ್ಲಿ ಎಲ್ಲಿಂದಲೋ ತೇಲಿ ಬಂದ ' ನೀನಿರದೇ ಬಾಳೊಂದು ಬಾಳೆ ಕೃಷ್ಣಾ....ಎಂಬ ಭಾವರಾಗ ವಿರಹದ ಬೇಗೆಯಲ್ಲಿ ಬೇಯುತ್ತಿರುವ ರಾಧೆಯನ್ನೇ ಕಣ್ಣೆದುರಿಗೆ ಕಡೆದು ನಿಲ್ಲಿಸುತ್ತದೆ. ಮನಸು ಬೃಂದಾವನದ ಅಂಗಳದಲ್ಲಿನ ಕೃಷ್ಣ ರುಕ್ಮಿಣಿಯರ ಸಲ್ಲಾಪದ ಪಿಸುಮಾತುಗಳ ಶೋಧನೆಗಿಳಿಯುವಂತೆ ಮಾಡುತ್ತದೆ. ಭಾವನೆಗಳ ಚಿಟ್ಟೆಯ ಮೇಲೆ ವಿಹರಿಸುವ ಭಾಗ್ಯವನ್ನು ಕಲ್ಪಿಸುವ ಭಾವಗೀತೆಗಳ ಆಸ್ವಾದನೆಯೇ ನನಗೆ ಹೃದಯಂಗಮವೆನಿಸಿದೆ. ಜಿ. ಎಸ್.ಎಸ್. ರವರ ಕಾಣದಾ ಕಡಲಿಗೆ ಹಂಬಲಿಸಿದೆ ಮನ ಕಾಣಬಲ್ಲೆನೆ ಒಂದು ದಿನಾ ಕಡಲನುಕೂಡಬಲ್ಲೆನೆ ಒಂದು ದಿನಾ...ಎಂಬ ಗೀತೆಯನ್ನು ಕೇಳುತ್ತಲೇ ಕಾಣದ ಭಾವಸಾಗರದತ್ತ ತುಡಿದಿದ್ದೇನೆ. ಹಂಬಲಗಳ ಬೆನ್ನು ಹತ್ತಿ ಸಾವಿರ ನದಿಗಳ ಹುಡುಕಾಟಕ್ಕಿಳಿದಿದ್ದೇನೆ. 
ಲೋಕವ್ಯವಹಾರದ ಬಿರುಗಾಳಿಗೆ ಸಿಲುಕಿ ಅಲ್ಲೋಲಕಲ್ಲೋಲವಾಗುವ ಮನಕಡಲನ್ನೇ ಪ್ರಶಾಂತಗೊಳಿಸುವ ಮಾಂತ್ರಿಕ ಶಕ್ತಿಯನ್ನು  ಭಾವಗೀತೆಗಳೊಂದಿಗಿನ ಯಾಣ ನೀಡಬಲ್ಲದೆಂಬುದಕ್ಕೆ ನನ್ನನ್ನು ಆಗಾಗ ಹತ್ತಿರ ಕರೆದು ಕುಶಲೋಪರಿಯನ್ನು ಕೇಳಿದಂತಿರುವ " ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು..
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಎಂಬ ಗೀತೆಯು ಆಗಾಗ ಅಂತರಾಳದಲ್ಲಿ ಮೊರೆದು, ಬಯಕೆಗಳ ಮೋಹಕ ಜಾಲವನ್ನು ಹೆಣೆದು ಕುಣಿದಿದೆ. ಕವಿಪ್ರತಿಭೆ ಯಾವುದೋ ಸಂದರ್ಭದಲ್ಲಿ  ಕವಿಯನ್ನು ಸೆಳೆದು ಬೆಳಗುವ ಹಾಗೆ ಭಾವಗೀತೆಗಳೂ ಸಹೃದಯರಲ್ಲಿ  ಅನಾಮಿಕ ಸಂದರ್ಭದಲ್ಲಿ  ಮಿಂಚಿನ  ಸಂಚಲನವನ್ನುಂಟು ಮಾಡಿ ಪರಕಾಯ ಪ್ರವೇಶದಿಂದ ಕುಣಿದು ತಣಿಯುತ್ತವೆ. ಸಹೃದಯವನ್ನು ಕುಣಿಸಿ ನಲಿಸುತ್ತವೆ. ಹಾಗೆ ಎದೆಯೊಳಗಿಳಿದು ನಲಿಯುವ ಗೀತೆಗಳ ಮಾಧುರ್ಯ ಬಣ್ಣಿಸಲಸದಳವಾದದ್ದು. ಭಾವಾಂತರಂಗವನ್ನು ಮೀಟಿದ ಕುವೆಂಪುರವರ 'ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರ....ಎಂಬ  ಭಾವಗೀತೆ ನನ್ನನ್ನು ಕವಿಯ ಆಶಯದಂತೆ ಸತ್ಯಾವತಾರವನ್ನು ಪ್ರಾರ್ಥಿಸುವಂತೆ ಮಾಡುತ್ತದೆ. ಸುಗಮ ಸಂಗೀತದ ಮೇರು ಧೃವತಾರೆ ಸಿ. ಅಶ್ವತ್ಥ ಅವರ ಶಾರೀರದಲ್ಲಿ ಮೊಳಗಿದ ಇಂತಹ ಭಾವನಾದದ ರಸಪಾಕವನ್ನು ಅನುಭವಿಸಿಯೇ ಸವಿಯಬೇಕು. ಭಾವಗೀತೆಗಳೊಂದಿಗಿನ ಸಾಂಗತ್ಯವೆಂದರೆ ಬೆಳದಿಂಗಳ ಚಂದಿರನೊಂದಿಗೆ ಮಾತಿಗಿಳಿದಂತೆ; ಹಕ್ಕಿಗಳ ಕಲರವದೊಂದಿಗೆ ಸಂವಾದಕ್ಕಿಳಿದಂತೆ; ಮನೆಯ ಮುಂದಿನ ಗಿಡದಲ್ಲರಳಿದ ಮಲ್ಲಿಗೆಯ ಗಂಧದಲ್ಲಿ ಮೈಮರೆತಂತೆ; ನಿತಾಂತವಾಗಿ ಹರಿಯುವ ನದಿಯ  ಜುಳು ಜುಳು ನಿನಾದದೊಂದಿಗೆ ಆಲಾಪಗೈದಂತೆ. ಸುಪ್ರಭಾತ ಇಲ್ಲವೇ ಭಾವಗೀತೆಯೊಂದು ಕೇಳದ ಆ ದಿನದ ನನ್ನ.ಮನಸು  ಒಣಗಿದ ತೆಂಗಿನ ಮರದಂತೆ ಬರಡು ಬರಡಾಗಿ ಒಣಗಿದ ಪುರಲೆಯಂತಾಗುತ್ತದೆ. ಭಾವದುಂಬಿಗಳು ಮುತ್ತಿ ಕರೆದೊಯ್ಯುವ ಮಾಯಾ ಲೋಕದ ದರ್ಶನ ನನಗೆ ಸಾಧ್ಯವಾಗುವುದು ಈ ಭಾವಗೀತೆಗಳಿಂದಲೇ. ಮಣ್ಣಿನ ವಾಸನೆಯ ಜಾಡು ಹಿಡಿದು ಜೀವತಳೆಯುವ ಎರೆಹುಳುವಿನಂತೆ, ಸದವಕಾಶ ಒದಗಿದಾಗಲೆಲ್ಲಾ ಭಾವಗೀತಾಂತರಂಗದ ಬೆನ್ನು ಹತ್ತಿ ಅಂತರ್ಮುಖಿಯಾಗುತ್ತೇನೆ. ದಿನದಲ್ಲಿ ಒಮ್ಮೆಯಾದರೂ ಗೀತಾಲಾಪಕ್ಕೆ  ಹೃದಯ ತೆರೆಯಲೇಬೇಕು. ನನ್ನ ದೇಹ ಮತ್ತು ಮನಸುಗಳು  ಸಲ್ಲಿಸುವ ಸೇವೆ ನನ್ನೊಳಗಿನ ಜೀವಾತ್ಮಕ್ಕೆ ದಕ್ಕಿದ್ದು ಈ ಭಾವಗೀತೆಗಳಿಂದಲೇ. ಎದೆ ತುಂಬಿ ಹಾಡಿದೆನು ಅಂದು ನಾನುಮನವಿಟ್ಟು ಕೇಳಿದಿರಿ ಅಲ್ಲಿ ನೀವು...ಎಂಬ ಜಿ ಎಸ್ ಶಿವರುದ್ರಪ್ಪನವರ ಹಾಡು, ಭಾವಬಿಂದುಗಳೆಲ್ಲ ಪ್ರೇಕ್ಷಕರ ರೂಪ ತಾಳಿ ಕಣ್ಣೆದುರು ಕುಳಿತು ಸಂವಾದಕ್ಕಿಳಿದಂತಿದೆ. ಹೌದು. ಮಾನವನಲ್ಲಿ  ಭಾವಗಳ ಗುಪ್ತಗಾಮಿನಿಯೊಂದು ಪ್ರವಹಿಸುತ್ತಲೇ ಇರುತ್ತದೆ. ಅದರ ನಿನಾದಕ್ಕೆ ಕಿವಿಗೊಟ್ಟಾಗಲೇ ಅಂತರಂಗದ ಶುದ್ಧಿಯನ್ನು ಸಾಧಿಸಿ ಭಾವಸಮಾಧಿಗೇರಲು  ಸಾಧ್ಯವಾಗುತ್ತದೆ. ಚೆನ್ನಮಲ್ಲಿಕಾರ್ಜುನನ ಲೀಲೆಗೆ ಅಕ್ಕ ,ಕೂಡಲಸಂಗಮದೇವನ  ಒಲುಮೆಗೆ ಬಸವಣ್ಣ, ಮಾಯೆಯ ಬಯಲಾಟಕ್ಕೆ ಅಲ್ಲಮ, ಈಸಕ್ಕಿಯಾಸೆಯನ್ನು  ಹುಟ್ಟಿಸುವ ಬಯಕೆಗೆ ಆಯ್ದಕ್ಕಿ ಮಾರಯ್ಯ ಬೆರಗಾದಂತೆ ಭಾವಗೀತೆಗಳ  ಅದಮ್ಯ ಸೆಳೆತಕ್ಕೆ ಎಚ್ಚರದ ಜೀವಗಳು ಬೆರಗಾಗಲೇಬೇಕು.
ಹಾಗೆಂದು ಕೇವಲ ಭಾವಗೀತೆಗಳಷ್ಟೇ ನನ್ನ ಮನಸೂರೆಗೊಂಡಿಲ್ಲ;  ಚಹಾಶಾಲೆಯೊಳಗಿನ ಉಪಹಾರ ಸಮಯದ 'ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ ...ಎಂಬ ದಾಸರ ಕೀರ್ತನೆಗಳೂ ನನ್ನೊಳಗಿನ ದಿವ್ಯಾನಂದದ ತುಡಿತವನ್ನು ಇಮ್ಮಡಿಗೊಳಿಸಿವೆ. ಇಂತಹ ಭಾವಯಾಣಕ್ಕೆ ಭಕ್ತಿಯ ಸುಪ್ರಭಾತ ಹಾಗೂ  ಭಾವಗೀತೆಗಳು ಚೈತನ್ಯಧಾರೆಯನ್ನು ಎರೆದಂತೆ ಆಗಾಗ ಚಲನಚಿತ್ರಗೀತೆಗಳೂ ಬಳಿ ಬಂದು ರಸಮಾಧುರ್ಯವನ್ನು  ಹಣಿಸಿವೆ. ೧೯೭೬ ರಲ್ಲಿ ಮೊಹಮ್ಮದ್ ಝಹೂರ್ ಖಯ್ಯಾಂ ಹಷ್ಮಿ ಸಂಗೀತ ನಿರ್ದೇಶನದ ಕವಿ ಮಜ್ರೂಹ್ ಸುಲ್ತಾನಪುರಿ ಅವರ ಉರ್ದು ಕವನ ಸಂಕಲನ 'ತಲ್ಖಿಯಾನ್' ನ ಕವಿತೆಯಾದ  "ಕಭಿ ಕಭಿ ಮೇರೇ ದಿಲ್ ಮೆ ಖಯಾಲ್ ಆತಾ ಹೈ..."  ಎಂಬ ಗೀತೆಯನ್ನು ಕೇಳಿದ ಮನಸು ಈಗಲೂ ಆನಂದದ ಉಯ್ಯಾಲೆಯಲ್ಲಿ ಕುಳಿತು ಪ್ರೇಮಾಲಾಪಗೈಯ್ಯುತ್ತದೆ. ನಟಸಾರ್ವಭೌಮ ಡಾ.ರಾಜಕುಮಾರರವರ ಧ್ವನಿಯಲ್ಲಿನ ಸುಮಧುರ ಕನ್ನಡ ಗೀತೆಗಳ  ಮಂಜುಳಗಾನವನ್ನು ಮೌನದ ಮಹಲಿನಲ್ಲಿ ನಿಂತೇ ಸವಿಯಬೇಕು. "ಹೂವಿಂದ ಬರೆವ ಕಥೆಯಾ ಮುಳ್ಳಿಂದ ಬರೆದೆ ನಾನು| 
ಉಲ್ಲಾಸ ತರುವ ಮನಕೆ ನೋವನ್ನೇ ತಂದೆ ನಾನು...ಎಂಬ ಸ್ವರ್ಣಸಂಗೀತಮಾಲೆ ಎಂಥವರ ಎದೆಯಲ್ಲಿಯೂ ಮಧುರ ಪ್ರೇಮರಸಾಯನವನ್ನು ಉಕ್ಕಿಸಬಲ್ಲದು. ತ್ರಿಮೂರ್ತಿ  ಚಲನಚಿತ್ರದ ಜಿ.ಕೆ.ವೆಂಕಟೇಶ್ ಸಂಗೀತ ಸಂಯೋಜನೆಯಲ್ಲಿ ಚಿ.ಉದಯಶಂಕರರ ಲೇಖನಿಯಲ್ಲಿ ಡಾ ರಾಜಕುಮಾರರ ಕಂಠಸಿರಿಯಲ್ಲಿ ಮೊಳಗಿದ 'ಮೂಗನ ಕಾಡಿದರೇನು ಸವಿ ಮಾತನು ಆಡುವನೇನು| ಕೋಪಿಸಲು ನಿಂದಿಸಲು ಮೌನವ ಮೀರುವನೇನು... ಗೀತೆಯು ಹೃದಯವನ್ನು ಹಿಂಡುತ್ತದೆ; ಮಾತು ಬಲ್ಲವನನ್ನೂ ಮೂಕನನ್ನಾಗಿಸುತ್ತದೆ. ಡಾ. ರಾಜಣ್ಣನವರೇ ಹಾಡಿದ  'ಬಡವರ ಬಂಧು' ಚಲನಚಿತ್ರದ, ಸಾಹಿತ್ಯ ರತ್ನ ಚಿ.ಉದಯಶಂಕರ್ ವಿರಚಿತ 'ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ | ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ.. ಗೀತೆ ಆಲಿಸಿದಾಗೊಮ್ಮೆ ಹೃದಯದಲ್ಲಿ ಬಿಸಿಯುಸಿರು ಹುಟ್ಟಿಸಿ ಹೃದಯಕಮಲವನ್ನು ಆರ್ದ್ರವಾಗಿಸುತ್ತದೆ. ಇಂತಹ ಮಧುರವಾದ ಗಾನನಿನಾದದ ಪ್ರಭೆಯಲ್ಲಿ ಕಳೆದುಹೋಗುವಾಗ ಸಿಗುವ ಪರಮಸುಖ ಮತ್ತೆಲ್ಲಿ ದೊರೆತೀತು ಹೇಳಿ. ಒತ್ತಡದ ಮನೆಯಿಂದ ಹೊರಬಂದು ನಿಸರ್ಗದ ರಮಣೀಯತೆಯಲ್ಲಿ ಐಕ್ಯವಾಗಲು ಇರುವ ಹೆಬ್ಬಾಗಿಲು ಅದು ಸಂಗೀತ. ಗೀತೆಗಳ ರಸಗಂಗೆಯಲ್ಲಿ ತೇಲಿಹೋಗುವ ಮನದ ಭಾವಪಯಣ ಅನನ್ಯವಾದುದು.ನಿರ್ಮಲವಾದದ್ದು."ಪ್ರೇಮವೆಂಬುದು ಪವಿತ್ರ ಕಾರ್ಯ. ಪ್ರೇಮಿಸುವ ಮಂದಿರಕ್ಕೆ ಹೋಗುವಾಗ ಶುಭ್ರವಾಗಿ ಸ್ನಾನ ಮಾಡಿ,  ನಿಮ್ಮ ಬೂಟುಗಳನ್ನು ಹೊರಗೇ ಬಿಡಿ. ಆ ಬೂಟುಗಳಲ್ಲೇ ನಿಮ್ಮ ಮೆದುಳನ್ನು ಇಟ್ಟು ಒಳಗೆ ಹೋಗಿ. ಪ್ರೇಮಕ್ಕೆ ತೊಡಗುವ ಮುಂಚೆ ಕೆಲವು ನಿಮಿಷ ಧ್ಯಾನ ಮಾಡಿ ನಂತರ ಆ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಿ" ಎಂಬ ಓಶೋ ರ ಮಾತುಗಳು ಭಾವಗೀತೆಗಳ ಆರಾಧನೆಗೂ ಅಷ್ಟೇ ಅನ್ವರ್ಥಕದಂತಿವೆ. ಮನುಷ್ಯ ಭವದ ಕೇಡುಗಳ ಕೆಸರಿನಲ್ಲಿದ್ದು ಕಮಲದಂತೆ ಅರಳಬೇಕಾದರೆ ಇಂತಹ ಗೀತೆಗಳೊಂದಿಗಿನ ಪಯಣ ಅತ್ಯವಶ್ಯಕವೆಂದೆನಿಸುತ್ತದೆ. ಭವಸಾಗರದ ಬಿಡುವಿಲ್ಲದ, ಬಿಡುಗಡೆಯಿಲ್ಲದ ಮುಗಿಯದ ದೀರ್ಘ ಪಯಣದ  ಮಧ್ಯೆ ಇಂತಹ ಗೀತಮಣಿಗಳ ಹುಡುಕಾಟಕ್ಕಿಳಿಯಲೇಬೇಕು. ನಮ್ಮಲ್ಲಿನ ಸಂಕಟಗಳನ್ನು ಮರೆಸುವ, ಆತ್ಮೋನ್ನತಿಯೆಡೆಗಿನ ನಮ್ಮ ದಾರಿಯನ್ನು ಸುಗಮಗೊಳಿಸುವ, ಲೆಕ್ಕಾಚಾರದ ಬದುಕನ್ನು ವ್ಯವಹಾರಕ್ಕೆ ನಿಲುಕದ ಅಮಿತಾನಂದದ ಕಡೆಗೆ ಹೊರಳಿಸುವ, ದೇಹದಿಂದ ಆತ್ಮದೆಡೆಗೆ ಮನಸ್ಸನ್ನು ಸೆಳೆಯುವ, ತುಮುಲಗಳನ್ನು ನಿಯಂತ್ರಿಸಿ ಬದಿಗಿಟ್ಟು  ಆತ್ಮಾನಂದದೊಳಗೆ ನಾವು ಇಳಿಯುವಂತೆ ಮಾಡುವ, ಭಾವಗೀತೆಗಳ ಸಾಂಗತ್ಯವನ್ನು ಹೇಗೆ ಬಣ್ಣಿಸುವುದು? ಮಾಧುರ್ಯದ ರಸಕವಿ ಜಯಂತ ಕಾಯ್ಕಿಣಿಯವರ  "ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...."ಎಂಬ ಭಾವಾಂಜಲಿಯನ್ನು ಆಲಿಸುವುದೇ ತಡ ಮನಸೂರೆಗೊಂಡುಬಿಡುತ್ತದೆ. ಒಲವಿನ ಪೂಜಾರಿಗಳಿಗೆ ಬಿರುಬಿಸಿಲಿದ್ದರೂ ಮುಂಗಾರು ಮಳೆಯ ನೆನಪಾಗುತ್ತದೆ. ಮನದಲ್ಲಿಯೇ ತಂಗಾಳಿ ಸುಳಿದಂತಾಗುತ್ತದೆ. ಮೋಡಗಳ  ಗುಡುಗು ಎದೆಯಲ್ಲಿ ಲಯಗೊಂಡಂತಾಗುತ್ತದೆ. ಮನದ ಮೂಲೆಯಲ್ಲಿ ಒಲವಿನ ಮಂದ ಮಳೆಗಾಳಿ ಸುಳಿಯಾಗಿ ತಿರುಗಲಾರಂಭಿಸುತ್ತದೆ. ಇಂತಹ ಗಾನಮಾಧುರ್ಯ ನೀಡಿದ ಸಂಗೀತ ಕಾರಣಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಲೇಬೇಕು.ಇದೇ ಗೀತೆಯ "ಮುಗಿಲು ಸುರಿದ ಮುತ್ತಿನ ಗುರುತುನನ್ನ ಎದೆಯ ತುಂಬಾ ಅವಳು ಬಂದ ಹೆಜ್ಜೆಯ ಗುರುತುಹೆಜ್ಜೆ ಗೆಜ್ಜೆಯಾ ಸವಿ ಸದ್ದು ..." ಎಂಬ ಸಾಲುಗಳನ್ನು ಕೇಳುವಾಗಲಂತೂ ಒಲವಿರದ ಎದೆಗೂಡಿನಲ್ಲಿಯೂ ಪ್ರೀತಿಯೊಡತಿಯ ಸದ್ದು ಕೇಳಲಾರಂಭಿಸುತ್ತದೆಯೆಂದರೆ ಭಾವಗೀತೆಗಳ ಲೀಲಾ ವಿಲಾಸವೆಂತಹುದು ಎಂಬುದನ್ನರಿಯಬಹುದು.ಭಾವಗೀತೆ ಎಂಬ ಹಕ್ಕಿಗಳ ಕಲರವವೇ ಅಂತಹದ್ದು. ಚಿಲಿಪಿಲಿ ಎಂದೋದುತ್ತಲೇ ತಮ್ಮ ಅಂತರಂಗದ ಸ್ವಚ್ಛಂದ  ನೀಲಾಗಸಕ್ಕೆ ನಮ್ಮನ್ನು ಕೈಹಿಡಿದು ತಾವು ವ್ಯಾಪಿಸಿದ ಭಾವಜಗತ್ತಿಗೆ ಕರೆದೊಯ್ದು ವಿಹರಿಸುವಂತೆ ಮಾಡಿ ಸವಿಜೇನನ್ನು ಉಣಬಡಿಸುತ್ತವೆ.


Sunday 4 August 2019

ಚಹಾಯಣ
ಕಲಿಯುಗದ ಅಮೃತವೆಂದೇ  ಪೆಸರ್ವಡೆದಿರುವ 'ಚಹಾ' ಸೇವನೆಯನ್ನು ನನ್ನ ಜೀವನದುದ್ದಕ್ಕೂ ಸಂಭ್ರಮದ ಸ್ವರ್ಗಸುಖದ ಘಳಿಗೆಗಳೆಂದು ಆಚರಿಸುತ್ತಾ ಬಂದಿರುವುದು ನನ್ನ ವ್ಯಕ್ತಿತ್ವದ ಹೆಗ್ಗಳಿಕೆಗಳಲ್ಲಿ ಒಂದು!!.  ಸೂರ್ಯೋದಯದ ಹೊಂಗಿರಣಗಳು ಭುವಿಯನ್ನು ತಬ್ಬಿ ಮೈಮರೆಯುವುದಕ್ಕಿಂತ ಮೊದಲೇ"ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಳಂ ಕುರು.."ಎಂದು ಮನೆಯ ಹತ್ತಿರದ  ದೇವಸ್ಥಾನದ ಶುಭ ಸುಪ್ರಭಾತದೊಂದಿಗೆ  ಎಚ್ಚರವಾಗುವ ನನಗೆ ಬೆಳಗು  ನಿತ್ಯೋತ್ಸವವಿದ್ದಂತೆ. ಪ್ರತಿ ಶುಭೋದಯವನ್ನೂ ಹಬ್ಬದಂತೆ ಸಂಭ್ರಮಿಸಿ ಹರ್ಷಿಸುತ್ತೇನೆ. ಮನೆಯ ಮುಂದಿನ ಬೇವು, ತೆಂಗು, ಕಣಗಲಿ ಗಿಡಮರಗಳೊಳಗಣ ಗೂಡುಗಳಿಂದ ರೆಕ್ಕೆಬಿಚ್ಚಿ ಮೈಮುರಿಯುತ್ತಾ ಹೊರಬಂದ ಗಿಳಿ, ಗುಬ್ಬಿ , ಪಾರಿವಾಳ, ಕೋಗಿಲೆ ಕಾಕಗಳ ಚಿಲಿಪಿಲಿ ಗಾನ, ಮನೆಯ ಮುಂದಿನ ಕಲ್ಪವೃಕ್ಷದ ಪ್ರತೀಕದಂತಿರುವ ತೆಂಗು ಬೇವು ಸೀತಾಫಲ ಮರಗಳ ಎಲೆಗಳ ಮಧ್ಯೆ ಇಣುಕುತ್ತಾ ತೂರಿಬಂದು ನೆಲದ ಮೇಲೆ ಸ್ವರ್ಣ ಬೆಳಕಿನ ರಂಗೋಲಿ ಬಿಡಿಸಿದ ನೇಸರನ ನವೋಲ್ಲಾಸದ ಹೊನ್ನ ಕಿರಣಗಳ  ಎರಕ, ಮೈದುಂಬಿಕೊಂಡು ದಟ್ಟ ಆಮ್ಲಜನಕದ ತೇವಭರಿತ ಗಂಧ ಸೂಸುತ್ತಿರುವ ಮಂದಹಾಸದ ತಂಗಾಳಿಯ ಹಿತವಾದ ಸ್ಪರ್ಶ, ಇಬ್ಬನಿಯ ಹನಿಗಳಿಂದ ತೊಯ್ದು ಇರುವೆಗಳ ಮುಂಜಾವಿನ ಜಾತ್ರೆಗೆ ಕಾರಣವಾದ ಸವಿನೆಲದ ರಸ ಮಾಧುರ್ಯ, ದಾಸವಾಳ, ಮಲ್ಲಿಗೆ,ಸೇವಂತಿಗೆ ಕುಸುಮಗಳ ಮೇಲೆ ಸವಾರಿ ಹೊರಟು ರೆಕ್ಕೆಬಡಿಯುತ್ತಾ ಹನಿಹನಿಯಾಗಿ ಮಧು ಹೀರುತ್ತಿರುವ ದುಂಬಿಗಳ ನಿನಾದ,  ಚುಮುಚುಮು ಬೆಳಕಿನ ಉದಯರಾಗ, ಕೈಗೆಟುಕುವ ಕಣ್ಣಳತೆಯಲ್ಲಿ ಗೂಡುಕಟ್ಟಿ ಮಧುವಿನ ಸಂಗ್ರಹದಲ್ಲಿ ತೊಡಗಿರುವ ಮರಿದುಂಬಿಗಳ ಸ್ವರಾಂಜಲಿ,ಹೂವಿಂದ ಹೂವಿಗೆ ಹಾರಿ, ರಸರುಚಿಯ ಪರೀಕ್ಷೆಗಿಳಿದು ಸುತ್ತಿ ಸುಳಿಯುತ್ತಿರುವ ಚಿಟ್ಟೆಗಳ ಸರಸ ಸಲ್ಲಾಪ, ರವಿಯ ಹೊಂಗಿರಣಗಳಿಗೆ ಮೈಯ್ಯೊಡ್ಡಿ ಅರಳಿ ನಿಂತು ಸುಗಂಧಸುಧೆಯನ್ನು ಹರಿಸುತ್ತಿರುವ ತುಳಸಿ,ದುಂಡುಮಲ್ಲಿಗೆ,ಚೆಂಡು ಹೂ, ಸೇವಂತಿಗೆ, ಕಣಗಿಲೆ, ಸೂಜಿಮಲ್ಲಿಗೆ,ಮಧ್ಯಾಹ್ನಮಲ್ಲಿಗೆ, ಬೇವಿನ ಹೂ,ಪೇರು ಹೂಗಳ ವೈವಿಧ್ಯಮಯ ಚಿತ್ತಾಕರ್ಷಕ ಬಣ್ಣಗಳ  ಸೌಂದರ್ಯಮೀಮಾಂಸೆ,  ಮಂಜಿನ ರಸಗಂಗೆಯ ಹನಿಗಳ ಮಿಲನದಿಂದಾಗಿ  ಪೆಟ್ರಿಕೋರ್ ವಿದ್ಯಮಾನದುಂದುಂಟಾಗಿ ಚಿಮ್ಮುತಿರುವ  ಆರ್ದ್ರ ಮಣ್ಣಿನ ಹದಭರಿತ ಪರಿಮಳ, ಭಾನುವಿನ ನವಪ್ರಭೆಗಾಗಿ ಕಾತರಿಸುತ್ತಲೇ ಮರೆಯಾಗುತ್ತಿರುವ ಮಂದಬೆಳಕಿನ ಉದಯಗೀತೆ..... ಹೀಗೆ ಸರದಿಯಂತೆ ಬಂದಪ್ಪಳಿಸುವ ಶುಭೋದಯದ ನಾದಬಿಂದುಗಳೊಂದಿಗೆ ಚಹಾಮಾಯಿಯ ಚಪ್ಪರಿಸುವ ಸವಿ ಗುಟುಕಿದ್ದರೆ ಮುಗಿಯಿತು. ಅದು ಧರೆಗಿಳಿದ ನಂದನವನದ ಸಾಕ್ಷಾತ್ಕಾರದ ಪರಮಸುಖ ; ನೆಲದ ಮೇಲಿನ ಬೃಂದಾವನ ದರ್ಶಿಸಿದ ಮಹದಾನಂದ ; ಅಮೃತಧಾರೆಯನ್ನೇ ಹೀರಿದ ದಿವ್ಯಾನುಭವ ; ಇಬ್ಬನಿಯ ಹನಿಗಳೆಲ್ಲಾ ಮುತ್ತಾದ ಸಂಭ್ರಮ; ಮರ್ತ್ಯ ಲೋಕದಿಂದ ಹಾರುತಿರುವ ಹೃದಯಾನಂದದ ಅನುಭವ. ಈ ಅನುಭವಗಳು ಒಮ್ಮೆಲೇ ಬಂದಪ್ಪಳಿಸಿ ಅಂತರಂಗದ ಕಡಲಿಗೆ ಪ್ರಶಾಂತಿಯನ್ನು ನೀಡುವ ದಿವ್ಯಾನುಭವ ನನಗೆ ಶುಭೋದಯದ ಚಹಾರಾಣಿ ನನ್ನೊಳಗಿಳಿದಾಗ ಸಂಭವಿಸಿದೆ. ನನ್ನನ್ನು ಧ್ಯಾನದ ಶೂನ್ಯಕ್ಕೆ ಕರೆದೊಯ್ಯುವ ಹಕ್ಕಿಯಂತೆ ಚಹಾಮಾಯೆ ನನ್ನನ್ನು ಬೆಂಬತ್ತಿದೆ."ಆನಂದಮಯ ಈ ಜಗಹೃದಯ|ಭಯವೇತಕೆ ಮಾಣೊ ಸೂರ್ಯೋದಯ | ಚಂದ್ರೋದಯ ದೇವರ ದಯೆ ಕಾಣೊ" ಎಂಬ ಕುವೆಂಪುರವರ ಉಕ್ತಿಯಂತೆ ಉದಯರವಿಯೊಂದಿಗೆ, ಸಲ್ಲಾಪದಲ್ಲಿ ತೊಡಗಿದರೆ ಸಾಕು ಬರೆಯುತ್ತಿರುವ ಸಂಗತಿಗಳೆಲ್ಲಾ ಕಿರಣಗಳ ಹೊಳಪಿನಲ್ಲಿ ಮಂದವಾಗುತ್ತವೆ.
ಚಹಾದ ಮಗ್ಗಿಗೆ ಬರೋಣ. ಚಹಾವೆಂದರೆ ನನಗಂತೂ ಎಲ್ಲಿಲ್ಲದ ಹಿಗ್ಗು. ಬೆಳಗಿನ ಈ ಸುಖಜೀವನದ ಘಳಿಗೆಗಳೊಂದಿಗಿನ ಸೇವನೆ ನನ್ನ ನಿತ್ಯದ ಬದುಕನ್ನು ರಸಮಯವಾಗಿಸಿದೆ. ಚೈತನ್ಯದ ಚಿಲುಮೆಯ ಒರತೆಯನ್ನಾಗಿಸಿದೆ. ಚಹಾದ ಗುಟುಕಿನಿಂದಲೇ ನನ್ನ ಬೆಳಗಿನ ಅಧಿಕೃತ ಪ್ರಾರಂಭವೆಂದರೆ ತಪ್ಪಾಗಲಾರದು. ಅಂದರೆ ಬೆಳಿಗ್ಗೆ ೬ ಗಂಟೆಗೆ ಎದ್ದರೂ ಅಂದು ತಡವಾಗಿ ೧೦ ಗಂಟೆಗೆ ಚಹಾ ಹೀರಿದರೆ ನನಗೆ ಶುಭೋದಯವಾಗುವುದು ೧೦ ಗಂಟೆಗೆ ಎಂದರೆ ಚಹಾ ನನ್ನನ್ನಾವರರಿಸಿರುವ ಪರಿಯನ್ನೊಮ್ಮೆ ಊಹಿಸಬಹುದು. ಬೆಳಗಿನಲ್ಲಿ ಮಾತ್ರವಲ್ಲ ಹೊತ್ತಲ್ಲದ ಹೊತ್ತಿನಲ್ಲೂ ನನ್ನೊಳಗಿಳಿಯುವ ಆಪತ್ಕಾಲದ ಪಾನರಾಣಿ. ತಲೆ ನೋವಿನ ಹಾವಳಿಯಿರಲಿ, ಸುಖವೆಂದು ಬಗೆದ ಸಂಸಾರದ ಅಸಂಖ್ಯಾತ ತಾಪತ್ರಯಗಳ ದಾಳಿಯಿರಲಿ, ಮೈ ಹಣ್ಣಾಗುವ ಆಯಾಸವಿರಲಿ, ಮೈಗಳ್ಳತನವೆಂಬ ಠಕ್ಕನ ಬಲೆಯಾಗಿರಲಿ,ತರಗತಿಗಳಲ್ಲಿನ ಉಪನ್ಯಾಸದ ಬಳಲಿಕೆಯಿರಲಿ, ಸ್ನೇಹಿತರೊಂದಿಗಿನ ಹರಟೆಯಿರಲಿ ಅಥವಾ ಏನೂ ಇಲ್ಲದೇ ಸುಮ್ಮನೆ ಹೊತ್ತುಗಳೆಯುತಿದ್ದರೂ ಚಹಾ ಎಂಬ ಮನದನ್ನೆ ಮಾತ್ರ ನನ್ನನ್ನು ಆಗಾಗ ಬಂದು ಕ್ಷೇಮಕುಶಲ ತಿಳಿದು ಮನದ ಕ್ಲೇಶ ಕಳೆಯುವ ಜೀವ ಸಂಜೀವಿನಿಯಾಗಲೇಬೇಕು. ಕಾರಣಗಳೇ ಬೇಕೆಂದೇನಿಲ್ಲ  ನಾನು ಆಕೆಯನ್ನು ಬಯಸುವುದಕ್ಕೆ. ನೆಪಗಳಿದ್ದರೆ ಸಾಕು, ಬರಸೆಳೆದು ಬಾಚಿಕೊಳ್ಳುತ್ತೇನೆ ಆಕೆಯನ್ನು ಸಂಧಿಸಲು ದೊರೆತ ಅವಕಾಶಗಳನ್ನು. ನೆಪಗಳಿಲ್ಲದಿದ್ದರೂ ಚಿಂತೆಯಿಲ್ಲ ತಲೆ ಸರಿಯಿಲ್ಲವೆಂದೊ, ಗೆಳೆಯರಾರೊ ಬಹಳ ಮಾತನಾಡಿದರೆಂದೋ, ಪ್ರಾಂಶುಪಾಲರು ಹೊಗಳಿದರೆಂದೋ, ಚಹಾ ಒಲ್ಲದ ಸಹೋದ್ಯೋಗಿಗಳು ಬಯಸಿದರೆಂದೋ, ಗಂಟೆಗಟ್ಟಲೇ ಕಂಪ್ಯೂಟರ್ ಮುಂದೆ ಕುಳಿತೆನೆಂದೊ, ಗೆಳೆಯರ ಜನ್ಮದಿನವೆಂದೊ...   ಹೀಗೆ ತರಹೇವಾರಿ  ನೆಪಗಳನ್ನು ಅವಳಿಗಾಗಿ ಹುಟ್ಟುಹಾಕಿಕೊಳ್ಳುತ್ತೇನೆ. ಕೆಲವೊಮ್ಮೆ ಮಧ್ಯಾಹ್ನದ ಭೋಜನ  ಸವಿಯುವಾಗಲೇ ಆಕೆಗಾಗಿ ಕಾಯುವ ಪ್ರೇಮತಪಸ್ವಿಯಾಗುತ್ತೇನೆ. ಹೌದು ಆಕೆಯೆಂದರೆ ಸಮಯದ ಪರಿವೆಯಿಲ್ಲ ಎನಗೆ. ಆಕೆ ನೆನಪಾದರೆ ಮುಗಿಯಿತು ಹೊರಡಲೇಬೇಕು ಅವಳು ಸಿಗುವಲ್ಲಿಗೆ. ಬಸ್ಸು ನನ್ನನ್ನು ಬಿಟ್ಟು ಹೊರಟರೂ ಪರವಾಗಿಲ್ಲ ಆಕೆಯೊಂದಿಗೆ ಕೆಲಕಾಲ ಮಾತಿಗಿಳಿಯಲೇಬೇಕು. ಆಕೆಯ ಸಂಗದಿಂದ ಕ್ಷಣಹೊತ್ತು ಮೈಮರೆತು ಕುಳಿತ ನಂತರ, ಎಚ್ಚರವಾದಾಗ ಏನನ್ನೋ ಅವಳಿಗಾಗಿ ಕಳೆದುಕೊಂಡಿರುತ್ತೇನೆ. ಮಹತ್ವದ ಸಮಯವನ್ನೊ,ಮನೆ ಸೇರಿಸಬೇಕಾದ ಬಸ್ಸನ್ನೊ, ಮಹತ್ವದ ಕೆಲಸವಾಗಬೇಕಾದ ಯಾರದೋ ಭೇಟಿಯನ್ನೊ,ಹೊರಟಿರುವ ಪ್ರಯಾಣದ ರೈಲನ್ನೊ, ಕಾಯುತ್ತಿರುವ ಗೆಳೆಯನನ್ನೊ ಅಥವಾ ಸಂಬಂಧಿಕರನ್ನೊ  ಇನ್ನೇನೇನೋ ಆ ಕ್ಷಣಕ್ಕೆ ಕಳೆದುಕೊಂಡಿರುತ್ತೇನೆ.  
ಆದರೂ ಚಿಂತೆಯಿಲ್ಲ ನನಗೆ. ಕಳೆದುಕೊಂಡಿದ್ದೇನೆ ಎಂಬ ಕೊರಗಿಲ್ಲ; ದಕ್ಕದೇ ಹೋಯಿತೆಂಬ ಪಶ್ಚಾತ್ತಾಪವಿಲ್ಲ; ತಪ್ಪಿಹೋಯಿತಲ್ಲ ಎಂಬ ಕನವರಿಕೆಯಿಲ್ಲ ; ಜಾರಿದೆನೆಂಬ ಪ್ರಾಯಶ್ಚಿತವಿಲ್ಲ; ಅನಾಹುತವಾಯಿತಲ್ಲ ಎಂಬ ಹೆದರಿಕೆಯಿಲ್ಲ ; ಸಂಭವಿಸಬಾರದಾಗಿತ್ತು ಎಂಬ ಹಳಹಳಿಕೆಯಿಲ್ಲ; ಎಚ್ಚರ ತಪ್ಪಿದೆನೆಂಬ ಹಳವಂಡವಿಲ್ಲ; ಓಹೋ ಕೈಜಾರಿತೆಂಬ ಪರಿತಪಿಸುವಿಕೆಯಂತೂ ನನ್ನಲಿಲ್ಲ ಏಕೆಂದರೆ ನಾನು ಅವಳನ್ನು (ಚಹಾಮಾಯೆ) ಕುಡಿದಿದ್ದೇನೆ. ಅಲ್ಲಮನಿಗೆ ತಾಮಸವು ಮಾಯೆಯಾಗಿ ಕಾಡಿದಂತೆ ನನಗೆ ಚಹಾ ಮಾಯೆಯಾಗಿ ಕಾಡಿದೆ. ಆದರೆ ಅಲ್ಲಮ ಮಾಯೆಯನ್ನು ಗೆದ್ದು ಬೀಗಿ ಬಯಲಾದ. ನಾನು ಸೋತು ಹಿಗ್ಗಿ ಪರವಶನಾದೆ. ಅವಳೊಲವಿನ ಶಾಶ್ವತ ಪ್ರೇಮಭಿಕ್ಷುವಾದೆ. ಆಕೆ ಪ್ರೇಮಮಧುವನ್ನು ಧಾರೆಯೆರೆಯುವ ಗಂಗೆಯಾದಳು. ಆಕೆಯ ರಸಾನುಭವದ ಸಖನಾದೆ. ಆಕೆಯ ಪರಿಮಳದ ಹಬ್ಬದಲ್ಲಿ ಸಂಭ್ರಮಿಸುವ ಮಗುವಾದೆ. ಹದಭರಿತ ಚಹಾಕನ್ನಿಕೆಯ ಸ್ವಾದಕ್ಕಿಂತ ಮಿಗಿಲಾದ ರಸರಾಸಾಯನ ಈ ಭುವಿಯ ಮೇಲೆ ಬೇರೊಂದಿಲ್ಲ. ಉಪ್ಪಿಗಿಂತ ರುಚಿಯಿಲ್ಲ ಎಂಬರು ಬಲ್ಲವರು. ಆದರೆ ನನಗೆ ಈ ಜಗದಲಿ ಚಹಾಗಿಂತ ರುಚಿ ಬೇರೊಂದಿಲ್ಲ.
ಕಾರಣ ಚಹಾಷೋಡಶಿಯ ಬಾಯಿ ಚಪ್ಪರಿಸುವ ಆಸ್ವಾದ; ನನ್ನೊಳಗಿಳಿದು ನಶೆಯೇರಿಸುವ ಅವಳ ಆಮೋದ. ಸಾಮಾನ್ಯವಾಗಿ ಸರ್ವರಿಗೂ ತಿಂಗಳಿಗೊಮ್ಮೆ ಹುಣ್ಣಿಮೆ, ಅಮವಾಸ್ಯೆಗಳ ಹಬ್ಬವಾದರೆ ನನಗೆ ಚಹಾಸಿನಿ ಯ ಸಖ್ಯ ದೊರೆತಾಗಲೆಲ್ಲ ಮಹಾನವಮಿ. ಯಾಕೆಂದರೆ ಚಹಾಮಾಯೆಯನ್ನು ಪಡೆದುಕೊಂಡಿದ್ದೇನೆ. 
"ಬೆಳಗಾಗೆದ್ದ ಕೂಡಲೇ ಯೋಗಿಯಾಗುತ್ತೇನೆ ಧ್ಯಾನನಿರತನಾಗುತ್ತೇನೆ, ನಂತರವಾದರೂ ಚಹಾಮೃತವನ್ನು ಸವಿಯಬಹುದೆನ್ನುವ ಮಹಾ ಹಂಬಲದಿಂದ, ಮಜ್ಜನದಲಿ ತೊಯ್ಯುತ್ತೇನೆ, ತಾಳದ ಚಳಿ ಪಡೆದು ಹೆಚ್ಚು ಚಹಾ ಹೀರಬಹುದೆಂಬ ಮಹದಾಸೆಯಿಂದ, ಉಪಹಾರ ಸೇವಿಸುತ್ತೇನೆ ಜಠರಲದಲ್ಲಿನಿತು ಅವಕಾಶವನಿಟ್ಡು. ಸಾಧ್ಯವಾದಷ್ಟೂಅವಳನ್ನು ಕುಡಿದು ತುಂಬಿಕೊಳ್ಳಬೇಕೆಂಬ ಬಯಕೆಯಿಂದ "ಸದಾ ತುಂಬಿಕೊಂಡೇ ನಶೆಯನ್ನೇರಿಸಿಕೊಳ್ಳುವ ಚಹಾದ ಮಗ್ಗನ್ನು ಕಂಡು ಅಸೂಯೆಪಟ್ಟಿದ್ದೇನೆ. ಸಂಸ್ಕರಿತ ಮಣ್ಣಿನ ಹೊಳೆಯುವ ಶ್ವೇತ ವರ್ಣದ ಪಿಂಗಾಣಿ ಮಗ್ಗಿನಲ್ಲಿಯ ಆಕೆಯ ತುಳುಕುವಿಕೆಯನ್ನು ಕಂಡು ಮೋದಿಸಿದ್ದೇನೆ. ಕೆಂಬಣ್ಣದ ಕೆನ್ನೆಯಂತಿರುವ ಅವಳ ಕೆನೆಯನ್ನು ಸವರಿ ಎತ್ತಿಕೊಂಡು ಚರ್ವಿಸಿದ್ದೇನೆ. ನಾಲಿಗೆ ಚಪ್ಪರಿಸಿ ರಸಾಂಕುರಗಳನ್ನು ಉದ್ದೀಪಿಸಿದ್ದೇನೆ. ಹರಿವಂಶರಾಯ್ ಬಚ್ಚನ್ ರವರು-"ನನ್ನ ಶೆರೆಯಲ್ಲಿ ಒಂದೊಂದುಹನಿ ಒಬ್ಬೊಬ್ಬರಿಗೂ| ನನ್ನ ಪ್ಯಾಲೆಯೊಳಗೆ ಒಂದೊಂದು ಗುಟುಕು ಎಲ್ಲರಿಗೂ| ನನ್ನ ಸಾಕಿಯೊಳಗೇ ಅವರವರ ಸಾಕಿಯರ ಸುಖ ಎಲ್ಲರಿಗೂ|ಯಾರಿಗೆ ಯಾವ ಹಂಬಲವೊ ಹಾಗೇ ಕಂಡಳು ನನ್ನ ಮಧುಶಾಲಾ"ಎಂದು  ಮದಿರೆ ಹಾಗೂ ಮಧುಶಾಲೆಯನ್ನು ಕುರಿತು ಹಾಡಿದ ಕವಿತೆಯ ಸಾಲುಗಳು ನನ್ನ ಚಹಾ ಹಾಗೂ ಚಹಾಶಾಲೆಯನ್ನು ಕುರಿತ ಅನುಭವವನ್ನು ಹೋಲುತ್ತವೆ.  ಚಹಾಶಾಲೆಯಲ್ಲಿ ಕುಳಿತು ಚಹಾವನ್ನು ಮದಿರೆಯಂತೆ ಹೀರಿದ್ದೇನೆ. "ವಾಹ್ ತಾಜ್..." ಎಂಬ ತಬಲಾವಾದಕನ  ಚಹಾ ಹೀರುವ ದೃಶ್ಯದ ತುಣುಕು ನನಗೆ ಜಾಹೀರಾತಾಗಿ ಕಾಣಲೇ ಇಲ್ಲ, ಬದಲಾಗಿ ಚಹಾದ ತಾಜಾ ಸ್ವಾದ ಹಾಗೂ ನವೋಲ್ಲಾಸದ ಹೊಳೆಯ ಅಭಿವ್ಯಕ್ತಿಯಾಗಿ ಕಾಣುತ್ತದೆ. ಮೈಯ್ಯೊಳಗೆ ರುಧಿರದ ಬದಲಾಗಿ ಚಹಾವೇ ಪ್ರವಹಿಸುವಂತಿದ್ದರೆ ದಿನವಿಡೀ ಮನೋಲ್ಲಾಸದ ಮಡುವಿನಲ್ಲಿ ತೇಲಾಡಬಹುದಿತ್ತಲ್ಲ ನಶೆಯ ಗುಂಗಿನಲ್ಲಿಯೇ ಓಲಾಡಬಹುದಿತ್ತಲ್ಲ ಎಂಬ ದುರಾಸೆಯ ಕನಸಿನ ಬೆನ್ನು ಹತ್ತಿ ಕನವರಿಸಿದ್ದೇನೆ. ಊಟ, ಉಪಹಾರವಿಲ್ಲದೇ ಸರಾಗವಾಗಿ ಜೀವನ ನಡೆಸಬಹುದು ಆದರೆ ಚಹಾಕನ್ನಿಕೆಯ ದರ್ಶನವಿಲ್ಲದ ನನ್ನ ಹೃದಯ ಮತ್ತು ಮನಸ್ಸುಗಳು ಕ್ಷಣಕಾಲವೂ ಬದುಕಿರಲಾರವು ಎಂಬುದು ನನ್ನ ಅನುಭವದ ಸಾರ!! ದೇವತೆಗಳು ಭೂಲೋಕದಲ್ಲಿ ಆಕಸ್ಮಾತ್ ಆಗಿ ಮರೆತು ಬಿಟ್ಟು ಹೋದ ಸುಧೆಯ ಮೂಲರಸಾಯನವೇ ಚಹಾ ಇರಬಹುದು ಎಂಬ ನನ್ನ ದೃಢ ಕಪೋಲ  ಕಲ್ಪನೆಗೂ ರೆಕ್ಕೆ ಕಟ್ಟಿ ಹಾರಿಸಿದ್ದೇನೆ. ಶಿವರಾತ್ರಿಯ ಉಪವಾಸ ನನ್ನಿಂದ ಸಾಧ್ಯವಾಗುವುದು ಅಮೂರ್ತ ಶಿವನೆಡೆಗಿನ ಭಕ್ತಿಗಿಂತ ಹೆಚ್ಚಾಗಿ  ಈ ಚಹಾಯಣದ ಅಮೂರ್ತ ಸಾಂಗತ್ಯದ ಆಧ್ಯಾತ್ಮದಿಂದ; ಆಸ್ವಾದದ ಎದೆಯಗಾನದ ಲಹರಿಯಿಂದ ; ಚಹಾಮಾಯಿಯನ್ನು ಅಪ್ಪಿಕೊಳ್ಳುವ  ಸುಖಲೋಲುಪತೆಯಲ್ಲಿ ಕಳೆದುಹೋಗುವುದರಿಂದ; ಚಹಾರಾಣಿಯ ಮಡಿಲಲ್ಲಿ ಮೈಮರೆಯುವ ಅಂತರ್ಧ್ಯಾನದಿಂದ. ಒಂದು ಬಾರಿ ಮಹತ್ವದ ಕಾರ್ಯಕ್ಕಾಗಿ ತಹಶೀಲ್ದಾರರ ಭೇಟಿಗೆ ಅಂದು ತುರ್ತಾಗಿ ಹೋಗಲೇಬೇಕಾಗಿ ಬಂದಾಗ ಮನೆಯಲ್ಲಿ ಉಪಹಾರದ ನಂತರ ಸಮಯವಿಲ್ಲದಿದ್ದರೂ ನಾನು ಹೋಗಿದ್ದು ಯಥಾಪ್ರಕಾರ ಚಹಾದ ಸುಖವನ್ನು ಹೊತ್ತುಕೊಂಡೇ.
ಶಾಲಾ ಕರ್ತವ್ಯ ಮುಗಿಸಿ ಸರ್ವ ಶಿಕ್ಷಕ ಬಳಗವೆಲ್ಲಾ ದಂಡಿಯಾಗಿ ನೆರೆಯುತ್ತಿದ್ದ ಬಸ್ ನಿಲ್ದಾಣದ ಹತ್ತಿರ ನಿಂತು ಬಳಗದವರನ್ನೆಲ್ಲಾ ಕರೆದು, ಒಲ್ಲೆ ಎಂದವರನ್ನೂ ಕೇಳದೇ ಕೈಹಿಡಿದು  ಹತ್ತಿರದ ಚಹಾಶಾಲೆಯಲ್ಲಿ ಚಹಾವನ್ನು ಸ್ವಾದಿಸಿ ಖುಷಿಪಟ್ಟಿದ್ದುಂಟು. ಮತ್ತೆ ಹೊರಬಂದ ನಂತರ ಯಾರಾದರೂ ಹೊಸಬರು ಬಂದರೆ ಅವರನ್ನೂ   ಕರೆದೊಯ್ದು ಚಹಾ ಹೀರಿಸಿ ನಾವೂ ಹೀರಿ ಅತಿಸುಖವನ್ನು ಪಡೆದದ್ದಿದೆ. ಹೀಗೆ ಸರಿಯಾಗಿ ಲೆಕ್ಕ ಹಾಕಿದರೆ ನಾವು ಆ ದಿನಗಳಲ್ಲಿ ಪ್ರತಿದಿನ ಆನಂದಿಸುತ್ತಿದ್ದ ನಮ್ಮ ಚಹಾಪ್ರಣಯ ಪ್ರಸಂಗದ ವಿಲಾಸವನ್ನು ಊಹಿಸಿಕೊಳ್ಳಬೇಕು. ಚಹಾ ಜಗತ್ತಿನ ಅದ್ವಿತೀಯ ರಸಾಯನಗಳಲ್ಲಿ ಒಂದು. ಆಧುನಿಕ ಜಗತ್ತಿನ ಬೆಡಗಿನ ಒಯ್ಯಾರಿಯ ಸೆಳೆತಕ್ಕೆ ಸಿಕ್ಕ  ಚಹಾರಾಣಿ  ಗ್ರೀನ್ ಟೀ  ಎಂಬ ಹೊಸ ದಿರಿಸು ತೊಟ್ಟು ಕುಣಿಯುತ್ತಿದ್ದಾಳೆ. ಶುಂಠಿಯ ಕಷಾಯ, ಹೊನ್ನಂಬರಿ ಹೂಗಳ ಕಷಾಯ, ತುಳಸಿ ಕಷಾಯ, ಬೆಲ್ಲದ ಕಷಾಯ, ದಂತಹ ತರಹೇವಾರಿ ರೂಪಗಳನ್ನು ಹೊಂದಿರುವ ಈಕೆಯ ಬಿನ್ನಾಣಕ್ಕೆ ವೈದ್ಯಕೀಯ ಮಹಾಪರಂಪರೆಯ ಸೊಗಡಿದೆ. ಮನೆಮದ್ದುಗಳಿಗೆಲ್ಲ ರಸರಾಣಿಯಾಗಿರುವ ಇವಳ ಸೌಗಂಧವೇ ಹಲವಾರು ಆಗಾಗ್ಗೆ ಬಂದುಹೋಗುವ  ಅತಿಥಿ ರೋಗಗಳನ್ನು ಗುಣಪಡಿಸಬಲ್ಲ ರಸೌಷಧಿ. ಶೀತವಾದಾಗ ನನ್ನವ್ವನ ಕೈಯ್ಯಲ್ಲಿ ಶುಂಠಿಯ ಕಷಾಯವಾಗುವ ಇವಳ ಘಾಟುತನ, ದೇಹ ಉಷ್ಣದಿಂದ ಬಳಲಿದಾಗ ಬೆಲ್ಲದ ಕಷಾಯವಾಗಿ ರೂಪು ಪಡೆಯುವ ಇವಳ ಮಾಧುರ್ಯ, ತಲೆನೋವೆನಿಸಿದಾಗ ಹೊನ್ನಂಬರಿ ಹೂಗಳ ಕಷಾಯದ ರೂಪದಲ್ಲಿ ನಾಲಿಗೆಯನ್ನಾವರಿಸುವ ಸವಿ, ಅಲರ್ಜಿಯಾದಾಗ ಮಸಾಲೆಯ ಕಷಾಯವಾಗಿ ಬರುವ ಇವಳ ಮಸಾಲೆಯ ಕಂಪುಗಳೀಗಲೂ ನನ್ನ ನಾಲಿಗೆಯ ರಸಗ್ರಹಣಿಗಳ ತುದಿಯ ಮೇಲೆ ಕುಣಿಯುತ್ತಿವೆ.  ಮನದ ಮೂಲೆಯಲ್ಲಿ ಇವುಗಳ ಆಸ್ವಾದನೆಯ ಸುವಾಸನೆ ಹಾಗೂ ರಸರುಚಿ ಸದಾ ಹಚ್ಚ ಹಸಿರಾಗಿ ಕಾಡುತ್ತಲೇ ಇರುತ್ತವೆ.  ಚಹಾ ಸಿಗದ ನಾಡಿಗೊಮ್ಮೆ ಪ್ರವಾಸ ಹೋಗಿದ್ದೆ. ಕೆಲವು ದೂರ ನಡೆದು ಎದುರಾದ ಗೂಡಂಗಡಿಗೆ ಗೆಳೆಯರೊಂದಿಗೆ ತೆರಳಿ " ಚಹಾ ಕೊಡಿ "  ಎಂದರೆ " ಚಹಾ ಮಾಡಲ್ಲ ಸರ್ " ಎಂದುಬಿಡಬೇಕೆ?  ಸುಮಾರು ಊರುಬಿಟ್ಟು ೩೦೦ ಕಿಲೋಮೀಟರ್ ದೂರದೂರು ತಲುಪಿದ ಪ್ರಯಾಣದ ಆಯಾಸವನ್ನು ಕಳೆದುಕೊಳ್ಳಬೇಕೆಂದರೆ ಚಹಾರಾಣಿಯ ಸುಳಿವೇ ನಮಗೆ ದಕ್ಕಲಿಲ್ಲ ಸಪ್ಪೆ ಮೋರೆ ಹಾಕಿಕೊಂಡು ಮತ್ತೆ ಮುಂದೆ ನಡೆದೆವು. ಆ ಊರು ಬಿಟ್ಟು ಬೇರೊಂದು ಊರಿಗೆ ಬಂದಾಗ ಓಯಸಿಸ್ ನಂತೆ ಎದುರಾದ  ಚಹಾಕನ್ನಿಕೆಯ ಆಲಿಂಗನದಿಂದ ಮುದ ಪಡೆದು ಚೈತನ್ಯಶೀಲರಾದೆವು. ನಾನು ಡಿಇಡಿ ವ್ಯಾಸಂಗದ ನಿಮಿತ್ತ ಬೆಂಗಳೂರಿನ ವಿಜಯನಗರದ ವಸತಿನಿಲಯವೊಂದರಲ್ಲಿ ಎರಡು ವರ್ಷಗಳ ಆಶ್ರಯ ಪಡೆದಿದ್ದೆ. ನಿಲಯದಲ್ಲಿ ಚಹಾಸಂಸ್ಕೃತಿಯೇ ಇಲ್ಲದ್ದರಿಂದ  ಎಲ್ಲ ವಿದ್ಯಾರ್ಥಿಗಳು ಮುಗ್ಧತೆಯಿಂದ ಒಗ್ಗಿಕೊಂಡು ನಿರಾಳವಾಗಿದ್ದರೆ, ನಾನು ಮಾತ್ರ ಒಳಗೊಳಗೆ ಚಡಪಡಿಸುತ್ತಿದ್ದೆ. ಉಪಹಾರ ಭೋಜನಗಳಿಲ್ಲದ ಹಾಸ್ಟೆಲ್ ನಲ್ಲಿ ಬೇಕಾದರೆ ಇದ್ದು ಜಯಿಸಬಲ್ಲೆ  ಆದರೆ ಚಹಾ ಕೊಡದ ವಸತಿನಿಲಯದಲ್ಲಿ ಹೇಗಿರುವುದು?  ಎಂದುಕೊಂಡು ಬಹುಕಾಲ ಕಸಿವಿಸಿಪಟ್ಟಿದ್ದೇನೆ. ವಿದ್ಯಾಭ್ಯಾಸದ ಕನಸನ್ನು ನನಸು ಮಾಡಿಕೊಳ್ಳಲಿರುವ ಏಕೈಕ ಆಸರೆಯನ್ನು ಚಹಾಗೋಸ್ಕರ ತಿರಸ್ಕರಿಸುವ ಶಕ್ತಿ ಇಲ್ಲದ್ದರಿಂದ ಅನಿವಾರ್ಯವಾಗಿ ವಸತಿನಿಲಯದ ವಾತಾವರಣಕ್ಕೆ ಹೊಂದಿಕೊಂಡು ಪರ್ಯಾಯ ದಾರಿಯೊಂದನ್ನು ಕಂಡುಕೊಂಡೆ. ಪ್ರತಿದಿನ ಬೆಳಿಗ್ಗೆ   ಹಾಗೂ ಸಂಜೆ ಚಹಾರಾಣಿಯ ಭೇಟಿಗಾಗಿ ಒಂದು ಪ್ರಶಸ್ತವಾದ  ಭಟ್ಟರ ವಿಶೇಷ ಚಹಾಶಾಲೆಯೊಂದನ್ನು ( ಕೆಫೆ) ಗುರ್ತಿಸಿಕೊಂಡೆ. ಪ್ರತಿದಿನ ಕಾಲೇಜು ಮುಗಿದ ನಂತರ ಮುಸ್ಸಂಜೆಯ ಮುಖಮಜ್ಜನದಲ್ಲಿ ಮಿಂದು ನವೋಲ್ಲಾಸದ ಮನಸು ಹೊತ್ತು  ವಾಯುವಿಹಾರಕ್ಜೆ ಹೊರಟೆನೆಂದರೆ ಅದು ಕೊನೆಯಾಗುವುದು ಚಹಾಮಣಿಯ ಲೀಲಾವಿಲಾಸದ ಸಮಾಗಮದೊಂದಿಗೆ ಎಂಬುದು ನಿಶ್ಚಿತವಾಯಿತು. ಹೀಗೆ ಕೆಲವು ದಿನ ಕಳೆದವು. ಪ್ರಾರಂಭದಲ್ಲಿ ಚಹಾಶಾಲೆಯ ಚಹಾ ಮೊದಲಿಗೆ ಸಪ್ಪೆಯೆನಿಸುತ್ತಿತ್ತು. ದಿನಗಳೆದ ನಂತರ ಚಹಾಶಾಲೆಯ ಮಾಣಿಯೊಂದಿಗೆ ಸ್ನೇಹ ಮಧುರವಾಗುತ್ತಾ ಹೋದಂತೆ  ನಮ್ಮ ಚಹಾಷೋಡಶಿಯು ಸಿಹಿಯಾಗುತ್ತಲೇ ಹೋದಳು. ಮಾಣಿಯೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಾ ಪುಸಲಾಯಿಸಿ ಬೇಕಾದಷ್ಟು ಸಕ್ಕರೆಯನ್ನು ಬೆರೆಸುವಂತೆ ಮಾಡಿ ಚಹಾರಾಣಿಯ ನೈಜ  ಸ್ವಾದವನ್ನು ಅನುಭವಿಸತೊಡಗಿದೆ.
ಚಹಾರಾಣಿಯ ದರ್ಶನ ಅಪರೂಪವೆಂಬಂತಿದ್ದ ಕಾಫಿಜಗತ್ತಿನಲ್ಲಿ ಚಹಾಜೇನು ಸವಿದ ಆನಂದ ಪಡೆದು ತೇಲಾಡತೊಡಗಿದೆ.  ಹೀಗೊಂದು ದಿನ ಸಂಜೆ ಯಥಾಪ್ರಕಾರ ಚಹಾಶಾಲೆಯತ್ತ ಹೊರಟಾಗ ಜೇಬಿನಲ್ಲಿ ಬಿಡಿಪೈಸೆಯೂ ಇರಲಿಲ್ಲ. ಗೋಧೂಳಿಯ ಮುಹೂರ್ತ ಮೀರುವ ಮಹತ್ವದ ಘಳಿಗೆಯಲ್ಲಿ ಚಹಾರಾಣಿ ನನಗಾಗಿ ಕಾಯುತ್ತಿದ್ದಾಳೆ. ಮನಸು ಅವಳದೇ ನೆನಪಿನಲ್ಲಿ ಪಿಸುಗುಟ್ಟಿ ತೊಳಲಾಡುತ್ತಿದೆ. ಮನಸ್ಸು ಆಕೆಯನ್ನು ಬಿಟ್ಟು ಕದಲೊಲ್ಲದು. ಅತ್ತ ಊರಿನಿಂದ ಬರಬೇಕಾಗಿದ್ದ ಅವ್ವ ಕಳಿಸಿದ ದುಡ್ಡು ಇನ್ನೂ ತಲುಪಿರಲಿಲ್ಲ. ಏನು ಮಾಡುವುದು ಎಂದು ತೋಚದಾದಾಗ ಗೆಳೆಯನೊಬ್ಬನ ಹತ್ತಿರ 'ಸಾಲ ಮಾಡಿಯಾದರೂ ತುಪ್ಪ ತಿನ್ನು' ಎಂಬಂತೆ ಸಾಲ ಪಡೆದಾದರೂ ಅವಳ ಸಂಗಡ ಈ ಸಂಜೆ ಮಾತಿಗಿಳಿಯಲೇಬೇಕು. ನನ್ನೆದೆಯೊಳಗೆ ಅವಳ ಮಾತಿನ ಸವಿಯನ್ನಿಳಿಸಿಕೊಂಡು  ಕಾಪಿಟ್ಟುಕೊಳ್ಳಲೇಬೇಕಾಗಿತ್ತು. ಹೀಗೆ ಅವಳತ್ತ ವಿಭವದಿಂದ  ಜಾರುವ ಮನದ ನೂರಾರು ಮಾತುಗಳನ್ನು ಅಂತರಾಳದಲ್ಲಿ ಕಟ್ಟಿಕೊಂಡೇ  ನೂರು ರೂಪಾಯಿ ಸಾಲ ಪಡೆದು ನೇರವಾಗಿ ಅವಳಿರುವಲ್ಲಿಗೆ  ಹೋಗಿ ಅವಳೊಂದಿಗೆ ಸಲ್ಲಾಪಕ್ಕಿಳಿದೆ. ಗುಟುಕು ಗುಟುಕಾಗಿ ಅವಳೊಂದಿಗೆ ಹಂಚಿಕೊಂಡ ರಸನಿಮಿಷಗಳನ್ನು  ಅಂತರಂಗದಲ್ಲಿಳಿಸಿಕೊಂಡು ಹರ್ಷಗೊಂಡೆ. ಇಂತಹ ಸವಿಸಮಯವನ್ನು ಕದ್ದೊಯ್ದು ಕಳೆದುಕೊಳ್ಳುವಂತೆ ಮಾಡುತ್ತಿದ್ದ ಆರ್ಥಿಕ  ದುರಾದೃಷ್ಟವನ್ನು ನೆನೆದು  ಶಪಿಸಿಕೊಂಡೆ. ಹೀಗೆ ಸಾಗಿತ್ತು ಚಹಾಸಖಿಯೊಂದಿಗಿನ ನನ್ನ ಪ್ರಣಯಗೀತೆ. ಮತ್ತೊಮ್ಮೆ  ಕೈಯ್ಯಲ್ಲಿ ಹಣವಿಲ್ಲದ ಬಡಪಾಯಿ ಪರಿಸ್ಥಿತಿಯೊದಗಿ ಬಂದಾಗ ನೇರವಾಗಿ ಚಹಾಶಾಲೆಯ ಮಾಲೀಕ ಭಟ್ಟರ ಹತ್ತಿರವೇ ನನ್ನ ಹೆಸರಿನ ಮೌಖಿಕ ಖಾತೆಯೊಂದನ್ನು ತೆರೆದು ಸಾಲ ಕೇಳಿದ್ದೆ. ಅವರ ದೃಷ್ಟಿಯಲ್ಲಿ ಯಕಃಶ್ಚಿತ ಚಹಾದ ಸಾಲವಾಗಿದ್ದರೆ, ನನಗದು ಚಹಾ ರಾಣಿಯೊಂದಿಗೆ ಸಮಯ ಕಳೆಯಲು  ಅಡೆತಡೆಯಿಲ್ಲದೆ ಕನಿಷ್ಠ ಹಣದ ಭಯವಿಲ್ಲದೆಯೂ ಚಹಾಶಾಲೆಯನ್ನು ಮುನ್ನುಗ್ಗಲು ಅಧಿಕೃತ ಲೈಸೆನ್ಸ್ ದೊರೆತಂತಾಗಿತ್ತು. ಯಾರ ಅಪ್ಪಣೆಗೂ ಕಾಯದೇ ಸಂಜೆಯನ್ನು ಸಾರ್ಥಕಗೊಳಿಸಿಕೊಳ್ಳುವ ನನ್ನ ಪ್ರಯತ್ನಕ್ಕೆ ತಾತ್ಕಾಲಿಕ ಯಶಸ್ಸು ದೊರೆತಿತ್ತು. ಕೊನೆ ಕೊನೆಗೆ ಚಹಾರಾಣಿಯೊಂದಿಗಿನ ಬಿಡುವಿಲ್ಲದ ಸಹವಾಸ ಕಂಡ ಭಟ್ಟರು ಚಹಾಶಾಲೆಯ ಖಾಯಂ ಗಿರಾಕಿಯೆಂದುಕೊಂಡು ಸಾಲವನ್ನು ಬರೆದುಕೊಳ್ಳಹತ್ತಿದರು. ಚಹಾಕಿಶೋರಿಯೊಂದಿಗಿನ ನಮ್ಮ ಅವಿನಾಭಾವ ಸಂಬಂಧವನ್ನು ಕಂಡ ಮಾಲೀಕ ನಮಗೆ ಆರ್ಥಿಕ ಸಂಕಷ್ಟ ಎದುರಾದಾಗ ಹಣದ ಸಾಲವನ್ನೂ ನೀಡಿ ಕೈಹಿಡಿದು ಮುನ್ನಡೆಸಿದನೆಂದರೆ, ಚಹಾದ ಸಂಗ ಹೆಜ್ಜೇನು ಸವಿದಂತಾಗಿತ್ತು ನನಗೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಾತ್ರ ಮಲ್ಲಿಗೆಯಿರಲೇಬೇಕೆಂಬಂತಾಗಿತ್ತು ಚಹಾದೆಡೆಗಿನ ನನ್ನ ಪ್ರೀತಿ. ಹೀಗೆ ಎರಡು ವರ್ಷದ ಬೆಂಗಳೂರಿನ ಚಹಾಬೆಡಗಿಯ ಸಾಂಗತ್ಯ ನನಗೆ ಚಹಾಶಾಲೆಯ  ಹೊಸ ಆಪ್ತ ಗೆಳೆಯರನ್ನು ಪರಿಚಯಿಸಿತ್ತು. ಮನೆಯಲ್ಲಿನ ಹಿಂಡು ಮಂದಿಗೆ ಮಾಡುವ ಚಹಾ ನನಗೆ ಅಷ್ಟಾಗಿ ಸೆಳೆಯುತ್ತಿರಲಿಲ್ಲ. ಪರಿಹಾರವಾಗಿ ಮನೆಮಂದಿಗೆಲ್ಲ ಚಹಾ ತಯಾರಿಸುವ ಪಾಠವನ್ನು ಆಗಾಗ ಪ್ರಾತ್ಯಕ್ಷಿಕೆಯ ಮೂಲಕ   ಹೇಳಿಕೊಟ್ಟಿದ್ದಿದೆ. ಹದಬೆರೆತ  ರಸಾಯನವೇ ನನಗಿಷ್ಟವೆಂದು ಅವ್ವ ನನಗಾಗಿ ಮಾಡುವ ಚಹಾ ಗಾಗಿ ಕಾದು ಕುಳಿತಿರುತ್ತಿದ್ದೆ. ಅಂದು ಚಹಾಗೆಳತಿಯ ದರ್ಶನವಾಗದಿದ್ದಾಗ ಚಡಪಡಿಸಿ ಅಡುಗೆಮನೆಗೆ ಹೋಗಿ  ಬೆಳದಿಂಗಳು ಬಣ್ಣದ ಹಾಲಿನಲ್ಲಿ ಕೆಂಬಣ್ಣದ ಚಹಾದೆಲೆಗಳನ್ನುದುರಿಸಿ ಅಗ್ನಿಹಂಸದ ತೂಲಿಕಾತಲ್ಪದಲಿಟ್ಟು ಚೆನ್ನಾಗಿ ಕುದಿಸುತ್ತಾ ತಪದಂತೆ ಕಾದಿದ್ದೇನೆ.ನನ್ನ ಮೇಲಿನ  ಪ್ರೀತಿಯುಕ್ಕಿ ಪಾತ್ರೆಯೊಳಗಿಂದ ಮೇಲೆ ಹಸನ್ಮುಖಿಯಾಗಿ ಬಂದ ನೊರೆಯ ಮುತ್ತುಗಳನ್ನು   ಕಂಡು ಹರ್ಷಗೊಂಡಿದ್ದೇನೆ. ಕೊನೆಗೆ ಹದವಾದ ಸಕ್ಕರೆಯನ್ನು ಬೆರೆಸಿ ಘಮಘಮಿಸುವ ಪರಿಮಳದಲ್ಲಿ ಮೈಮರೆತು ಸಮಾಧಿಗೇರಿದ್ದೇನೆ. ಶೋಧಿಸುವಾಗ ಹೊರಟ ಸುಮಧುರ ಸುವಾಸನೆಯನ್ನು ಹೀರಿ ಸಂಭ್ರಮಿಸಿದ್ದೇನೆ. ಶ್ವೇತಸುಂದರಿಯಂತಿರುವ ಮಗ್ಗಿನೊಳಗೆ ಒಯ್ಯಾರದಿಂದ ನರ್ತಿಸಿತ್ತಿದ್ದ ಹಾಲುಗೆನ್ನೆಯ ಚಹಾಚೆಲುವೆಯನ್ನು ಕಂಡು ಹಿಗ್ಗಿದ್ದೇನೆ.
ಚಹಾ ಎಂಬುದು ನನ್ನ ಪಾಲಿಗೆ ಕೇವಲ ಕರ್ಮೋಪಚಾರಕ್ಕಾಗಿ ಸೇವಿಸುವ ಭೌತಿಕ ದ್ರಾವಣವಲ್ಲ. ಯಾಂತ್ರಿಕವಾಗಿ ಕ್ಷಣಮಾತ್ರ ಭುಜಿಸಿ ಮತ್ತೆ ಅರೆಗಳಿಗೆಯಲ್ಲಿ ಮರೆತುಬಿಡುವ  ಹಾಲು ಸಕ್ಕರೆಗಳ ಮಿಶ್ರಣ ಮಾತ್ರದ ರಸಾಯನವಲ್ಲ. ಕೇವಲ ಆಯಾಸ ಕಳೆಯಲಿಕ್ಕಾಗಿ ಇರುವ ಉಪಚಾರದ ಪಾನೀಯವೂ ಅಲ್ಲ .ಚಹಾ ಎಂದರೆ ನನ್ನೊಳಗೆ ಸದಾ ರಿಂಗಣಿಸುವ ಪ್ರಣಯಗೀತೆ; ಹೃದಯದೊಳಗೆ ಜುಳು ಜುಳು ಎಂದು ಹರಿಯುವ ಝರಿಯ  ನಿನಾದ; ಮನದೊಳಗೆ ಕೋಗಿಲೆಯ ಧ್ವನಿಯಂತೆ ಇಳಿಯುವ ರಸಗಾನ; ಮನಕಡಲಿನ ಮೇಲೆ ಕುಣಿಯುವ ಅಲೆಗಳ ಬಣ್ಣಿಸಲಾಗದ ಮೌನರಾಗದ ಮೊರೆತ; ಗುಟುಕು ಗುಟುಕಾಗಿ  ನಾಲಿಗೆ ಚಪ್ಪರಿಸಿ ಹೀರಿ ಅದರಲ್ಲಿಯೇ ಲೀನವಾಗುವಂತೆ ಸೆಳೆಯುವ ಅಮೃತಧಾರೆಯ ಜೇನಹನಿ; ನೆನಪು ಮಾತ್ರದಿಂದಲೇ ಚಿಮ್ಮಿ ಉತ್ಸಾಹ ಉಕ್ಕಿಸುವ ಚಿಲುಮೆಯೊರತೆ. ಚಹಾ ಎಂದರೆ ಭಾವದೊಳಗಿನ ಬಂಧುರ ಒಲವಿನೊಳಗಿನ ಮಂದಾರ. ಶ್ರಾವಣದ ಇಳೆ ಮಳೆಗಳೊಂದಿಗಿನ ಅನುಸಂಧಾನ ಬೇಂದ್ರೆಯವರಂತಹ ಆರಾಧಕರಲ್ಲಿ ಕಾವ್ಯದ ಮೂಲಕ ಸಾಧ್ಯವಾಗಿದೆ. ಕವಿಸೂರಿಗಳದು ಪ್ರಕೃತಿ ಆರಾಧನೆಯಾದರೆ ನನ್ನದು ಚಹಾರಾಧನೆ. ಆಷಾಢದ ಜಿಟಿ ಜಿಟಿ ಜಡಿ ಮಳೆಯಲ್ಲಿ  ಚಹಾಶಾಲೆಯ ಮುಂದೆ ನಿಂತು ಬಿಸಿ ಬಿಸಿಯಾದ ಚಹಾಮಾಯಿಯ ಹನಿ ಹನಿಯ ಗುಟುಕುಗಳ ಮಾಯೆಗೆ ಕರಗುವುದೆಂದರೆ  ಪ್ರಕೃತಿಯಲ್ಲಿನ ಪಾರಮಾರ್ಥಕ್ಕೆ ಪಯಣ ಹೊರಟಂತೆ. ಚಹಾರಾಣಿಯೊಂದಿಗಿನ ಎನ್ನ ಒಡನಾಟ ಇಂದು ನಿನ್ನೆಯದಲ್ಲ, ನನ್ನೆದೆಯೊಳಗೆ ಇಷ್ಟೊಂದು ಆಳವಾಗಿ ಮೈಚಾಚಿಕೊಂಡು ಹರಡಿ ಮೈಮನಗಳನ್ನು ತುಂಬಿಕೊಂಡಿರುವ ಇದರ ಭಾವಗೀತೆಗಳ ಆಲಾಪವನ್ನು ಬಾಲ್ಯದಿಂದಲೂ ಆಲಿಸಿಕೊಂಡು ಬಂದಿದ್ದೇನೆ. ಇಲ್ಲಿಯವರೆಗೂ ಆಕೆ (ಚಹಾಮಾಯಿ) ಕಟ್ಟಿಕೊಟ್ಟಿರುವ ಸವಿನೆನಪುಗಳನ್ನು ರೆಕ್ಕೆ ಮೂಡುವವರೆಗೂ ನನ್ನದೆಯ ಗೂಡಿನಲ್ಲಿ ಮರಿಹಕ್ಕಿಗಳಂತೆ ಜತನದಿಂದ ಕಾಪಿಟ್ಟುಕೊಂಡು ಬಂದಿದ್ದೇನೆ. ಭಾವಗಳಿಲ್ಲದೇ ಬತ್ತಿ ಕೊರಡಾಗುವ ಘಳಿಗೆ ಎದುರಾದಾಗ, ಈ ನೆನಪುಗಳನ್ನು ಹೆಕ್ಕಿ ತೆಗೆದು ಆನಂದಿಸಿ, ಮತ್ತೆ ಮತ್ತೆ ಚಹಾ ರಾಣಿಯ ಸಾಂಗತ್ಯವನ್ನು   ಸವಿದಿದ್ದೇನೆ. ನನ್ನಲ್ಲಿ ಚಹಾ ಹುಟ್ಟಿಸಿದ ಭಾವಯಾಣ ಅನುಪಮವಾದದ್ದು, ಅನೂಹ್ಯವಾದದ್ದು. ಆರೋಗ್ಯದ ಲಯ ತಪ್ಪಿದಾಗ ಚಹಾ ತ್ಯಜಿಸಬೇಕೆಂದು ಹೇಳಿದ ವೈದ್ಯರನ್ನು 
" ನಿಮಗೇನು ಗೊತ್ತು ಚಹಾದ ಗಮ್ಮತ್ತು ಕುಡಿದರಿಲ್ಲ ಜೀವಕೇನೂ ಆಪತ್ತುಬಿಟ್ಟರೆ ನನಗೆ ಅದೇ ವಿಪತ್ತುಸವಿಯಲು ನನಗಿಲ್ಲ ಹೊತ್ತು ಗೊತ್ತು ಎತ್ತಣ ಮಾಮರ ಎತ್ತಣ ಕೋಗಿಲೆ ?" ಎಂದು ಹೀಗಳೆದಿದ್ದೇನೆ. ಬಹುಶಃ ಚಹಾ ಸೇವನೆಯಲ್ಲಿ ತಪ್ಪಿದ ಲಯವೇ ಆರೋಗ್ಯವನ್ನು ಹದಗೆಡಿಸಿರಬೇಕು ಎಂಬ ಬಲವಾದ ನಂಬಿಕೆ ನನ್ನದು!"ನೀನೆಂದರೆ ಮಧುರಗಾನ |ಸವಿಜೇನಿನ ರಸಪಾನ| ಹಿಗ್ಗುತಿರುವೆ ಮನದುಂಬಿ |ಹೊರಟಿರುವೆ ಭಾವಯಾಣ | ಹಾಲುಗೆನ್ನೆಯ ಚೆಲುವೆ |ಕೆಂಬಣ್ಣದ ಮೈಮನವೆ | ಇಳಿದು ಬಾ ಮಹಾರಾಣಿ |ದೇವಲೋಕದ ಸುರಪಾಣಿ | ಮಹಾದಿವ್ಯದ ಸಂಗತ| ದಿವದೆಡೆಗಿನ ನವನೀತ | ನಿನ್ನೊಲುಮೆಯ ಕೈಸೆರೆ | ನನ್ನನಾಳುವ ಸುಮಧುರೆ | ಮುತ್ತು ರತ್ನ ಹವಳ ನೊರೆ| ಕೇಳುತಿರು ನನ್ನ ಮೊರೆ |ಮಹಾಸಂಗಮ ಆಲಿಂಗನ|ಎದೆಯುಕ್ಕುವ ರಸಚೇತನ| ಮಾಧುರ್ಯದ ರಸಪಾಕ |ಚಹಾಶಾಲೆಯೇ ಸವಿನಾಕ |ಎಂದು ಚಹಾಷೋಡಶಿಯೊಂದಿಗಿನ ಪಿಸುಮಾತು ನನ್ನಲ್ಲಿ ಹರ್ಷೋಲ್ಲಾಸದ ಹೊಳೆಯನ್ನು ಹರಿಸುತ್ತದೆ. ಘಳಿಗೆಗೊಮ್ಮೆಯ ಆಕೆಯ ಭೇಟಿ  ಎನ್ನ  ಹೃದಯವನ್ನು ರಸಾನಂದದ ಕಡಲಾಗಿ ಪರಿವರ್ತಿಸುತ್ತದೆ.
ಚಹಾರಾಣಿಯನ್ನು ನೆನೆದಾಗಲೆಲ್ಲಾ -
"ಹರಿಯಬೇಕು ಆಕೆ ಕರೆದಲ್ಲಿ| ಹೊರಡಬೇಕು ಆಕೆ ಬಯಸಿದಲ್ಲಿ| ನಡೆಯಬೇಕು ಜೊತೆಯಾಗಿ ಕೈಹಿಡಿದು | ಮಾತಾಗಿ ಸಲ್ಲಾಪದ ಸವಿಜೇನು |ಸವಿಯಬೇಕು ಎದೆತುಂಬಿ ಗುಟುಕು ರಸ| ತಣಿಯಬೇಕು ಹೀರಿ ಮತ್ತೆ| ನೆನೆಯಬೇಕು "ಎಂದು ಪದೇ ಪದೇ ಆಕೆಯ ಸುತ್ತ ಸುಳಿದು ಸೇವಿಸಲೇಬೇಕೆನ್ನಿಸುತ್ತದೆ. ನನಗೆ ಚಹಾಸೇವನೆ ಎಂದರೆ ನಿತ್ಯ ವೈಭವದ ಮೆರವಣಿಗೆಯ ಮಹಾನವಮಿ ಹಬ್ಬವಾಚರಿಸಿದಂತೆ. ಬಿದಿಗೆಯ ಚಂದ್ರನ ಬೆಳ್ಳಿಯ ಬೆಳಕು ಅಂತರಾಳಕ್ಕಿಳಿದು ಹೊಳೆದು ಬೆಳಗಿದಂತೆ. ಚೈತನ್ಯದ ಕಡಲುಕ್ಕಿ  ಅಲೆ ಅಲೆಯಾಗಿ ಹರಿದು ನಾದಗೈದು ವಿಜೃಂಭಿಸಿದಂತೆ. "ಮುಗ್ಧ ಮಗುವಿನಂತೆ ಚಹಾವೇಣಿಯ ಮೊಗ್ಗು  ಹಿಡಿದು ಮೇಲೆತ್ತಿ ಬಾಯಿಚಪ್ಪರಿಸಿ ನಾಲಿಗೆ ಸವರಿದಾಗಲೇ ರಸರುಚಿಯ ದರ್ಶನಾನುಭವ ದಕ್ಕುವುದು. ರಸಾಂಕುರಗಳಿಗೆ ನೈಜ ರಸಾನುಭವದ ಸಾಕ್ಷಾತ್ಕಾರವಾಗುವುದು. ಭಾವಗಳ ಮುಗ್ಧತೆ ಹೇಗೆ ಕಾವ್ಯವೊಂದರ ಹುಟ್ಟಿಗೆ ಕಾರಣವಾಗಬಲ್ಲದೋ ಹಾಗೆ ಪೂರ್ವಾಗ್ರಹಗಳಿಲ್ಲದೇ,  ಮುಗ್ಧತೆಯಿಂದ ಹೀರುವ ಚಹಾದ  ಸ್ವಾದಸುಖವೂ ಕಾವ್ಯಾನಂದವನ್ನು ಹುಟ್ಟಿಸಬಲ್ಲದು. ಕಾವ್ಯ ಮತ್ತು ಚಹಾಗಳ ಅದೈತ ಸಂಗಮಸುಖವನ್ನು ಶ್ರಧ್ಧೆಯಿಂದ ಅನುಭವಿಸಿದ್ದೇನೆ ನಾನು. ವೈದೇಹಿಯವರ" ತಿಳಿಸಾರು ಎಂದರೆ ಏನೆಂದುಕೊಂಡಿರಿ? | ಅದಕ್ಕೂ ಬೇಕು ಒಳಗೊಂದು |ಜಲತತ್ವ-ಗಂಧತತ್ವ ಕುದಿದು| ಹದಗೊಂಡ ಸಾರತತ್ವ "ಎಂಬ  ಕಾವ್ಯಾಲಾಪದಂತೆ ಸಕ್ಕರೆ ಹಾಲು, ಚಹಾದೆಲೆಗಳು ಹದವಾಗಿ ಬೆರೆಯಲು ಗಂಧತತ್ವ, ಜಲತತ್ವ ಹಾಗೂ ಸಾರತತ್ವಗಳ ತಿಳುವಳಿಕೆ ಅತ್ಯಗತ್ಯ. ಈ  ತ್ರಿವಿಧ ಸಂಗತಿಗಳ ಹದಭರಿತ ಸಮರಸದ ಸಂಗಮವೇ ಚಹಾರಸಾಯನದ ತಿರುಳು. ನನ್ನೂರು ಗುಳೇದಗುಡ್ಡ  ನೇಕಾರಿಕೆಯ ನೂಲಿನ ಬಳ್ಳಿಯನ್ನೆ  ತಮ್ಮ ಬದುಕಿನ ಸುತ್ತ ಹಬ್ಬಿಸಿಕೊಂಡ ಕರಕುಶಲಿಗರ ನಾಡು. ರಂಗಭೂಮಿ, ಬಯಲಾಟ, ಸಂಗೀತ, ಚಿತ್ರಕಲೆ ಗಳೊಂದಿಗೆ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯ ಚಾಲುಕ್ಯರಾಳಿದ ಬೀಡು.  ಇಂತಹ ಹೊನ್ನಾಡಿನಲ್ಲಿ  ಕುಶಲೋದ್ಯಮದ ಜೊತೆಜೊತೆಗೆ ಚಹಾಸಂಸ್ಕೃತಿಯೊಂದು ಮೈದಾಳಿರುವುದು ಇಲ್ಲಿಯ ವಿಶೇಷ. ಪ್ರತಿ ಒಂದು ಮೀಟರ್ ನೇಯ್ಗೆಗೊಂದು ಕಪ್ ಚಹಾ ಈ ಕರ ಕುಶಲಿಗರ ದೇಹದ ದೇಗುಲಕ್ಕರ್ಪಣೆಯಾಗಲೇಬೇಕು. ಒಂದು ಹೊತ್ತಿನ ಉಪಹಾರ, ಭೋಜನವಿರದಿದ್ದರೂ ನಡೆದೀತು ಆದರೆ ಚಹಾ ಇರದ ಕ್ಷಣಗಳನ್ನು ಈ ಕುಶಲಿಗಳು ಕಳೆಯಲಸಾಧ್ಯವೆನ್ನುವಷ್ಟರ ಮಟ್ಟಿಗೆ ಇಲ್ಲಿಯ ಬದುಕು ಚಹಾಗೊಡ್ಡಿಕೊಂಡಿದೆ. ಪೂರ್ವಾಶ್ರಮದ ನೇಯ್ಗೆಯ ಪ್ರಭಾವವೋ ಏನೋ ಘಳಿಗೆಗೊಮ್ಮೆ  ನನ್ನವ್ವನಿಗೆ ಹಾಗೂ ನನಗೆ ಚಹಾ ಅಮೃತ ಚೈತನ್ಯವನ್ನು ನೀಡಲೇಬೇಕು. ನನ್ನ ಮನೆಯ ಪಕ್ಕದ ಚಹಾಶಾಲೆಯಲ್ಲಿ ಚಹಾದ ದರ ಈಗಲೂ ೨ ರೂಪಾಯಿಗಳೆಂದರೆ ಚಹಾ ಎಷ್ಟೊಂದು ಅಗ್ಗದ ಸಂಗತಿಯಾಗಿ ನನ್ನೂರನ್ನು ಆವರಿಸಿಕೊಂಡಿದೆ  ಎಂಬುದನ್ನು ಅರ್ಥೈಸಿಕೊಳ್ಳಬಹುದು. ಡಾ.ರಾಜಶೇಖರ ಮಠಪತಿ (ರಾಗಂ) ರವರು, ಹದಿನಾರು ವರ್ಷಗಳ ನಂತರವೂ  ಒಂದೇ ಒಂದು ಪೈಸೆಯಷ್ಟು ಬೆಲೆಯನ್ನೂ ಹೆಚ್ಚಿಸಿಕೊಳ್ಳದ ರೂ. ೨ ರ ಒಂದು ಕಪ್  ಚಹಾ ಹಾಗೂ 'ಚಟಕ್ ಪಟಕ್ ' ಎಂದು ಲಯಬದ್ಧವಾಗಿ ನುಡಿಯುತ್ತಿರುವ ಅದೇ ಮಗ್ಗಗಳ ನಿನಾದ ಬದಲಾಗದ್ದನ್ನು ಗಮನಿಸುತ್ತಾ  "ನಾ ಕಂಡಂತೆ ಒಂದೂವರೆ ದಶಕದ ನಂತರವೂ ಕೇವಲ ಚಿಕ್ಕ ಪುಟ್ಟ ಸ್ಥಿತ್ಯಂತರಗಳನ್ನು ಹೊರತುಪಡಿಸಿ ಮೂಲಸ್ವರೂಪವನ್ನು ಬದಲಿಸಿಕೊಳ್ಳದೇ ತನ್ನ ಪರಂಪರೆ ಹಾಗೂ ಸತ್ವವನ್ನು ಉಳಿಸಿಕೊಂಡ ಕರ್ನಾಟಕದ ವಿರಳಾತಿವಿರಳ ಪುರಗಳಲ್ಲಿ ಒಂದು ಗುಳೇದಗುಡ್ಡ " ಎಂದು  ಬಣ್ಣಿಸಲ್ಪಟ್ಟ ಊರಿನಲ್ಲಿ ಇಂದಿಗೂ ಚಹಾದೊಂದಿಗಿನ ಸಂಗತಿಗಳಾವವೂ ಆಧುನಿಕ ಯುಗದ ಯಾವ ಸೆಳೆತಗಳಿಗೂ ಒಳಗಾಗಿಲ್ಲ. ನೇಕಾರಿಕೆ ಹಾಗೂ ಉಪಕಸುಬುಗಳ ಕುಶಲವೃತ್ತಿಗಳ ಜೊತೆ ಜೊತೆಗೆ ಬೆಳೆದು ಬಂದಿರುವ ಈ ಚಹಾ ಸಂಸ್ಕೃತಿ ಆತಿಥ್ಯದ ಹೊಸ ಪರಿಭಾಷೆಯೊಂದನ್ನು ಕಟ್ಟಿ  ಕೊಟ್ಟಿದೆ. ಅಬಾಲವೃದ್ಧರಾದಿಯಾಗಿ  ಮನೆಗೆ ಬರುವ ಸಕಲ ಅತಿಥಿಗಳು ಕನಿಷ್ಠ ಚಹಾತಿಥ್ಯವನ್ನಾದರೂ ಸ್ವೀಕರಿಸಲೇಬೇಕು. ಇದು ಅಘೋಷಿತ ಅತಿಥಿ ಸತ್ಕಾರದ ನಿಯಮ. ಯಾರಾದರೂ ಅತಿಥಿಗಳು ಮನೆಗೆ ಬಂದರೆ ಸಾಕು ಚಹಾದ ಪಾತ್ರೆ ಅಗ್ನಿಹಂಸವನ್ನೇರಲೇಬೇಕು.  ಚಹಾ ನನ್ನೂರಿನ ಕರಕುಶಲಿಗಳ ಕಾಯಕಕ್ಕೆ ಉತ್ಸಾಹದ ಚಿಲುಮೆಯಾಗಿರುವಂತೆ, ಬಂಧುಗಳೆಡೆಗಿನ ಪ್ರೀತಿ ವಾತ್ಸಲ್ಯದ  ದ್ಯೋತಕವೂ ಆಗಿದೆ. ಆತಿಥ್ಯದ ಸಂಕೇತವಾಗಿರುವ 'ಚಹಾ'ವನ್ನು  ಅತಿಥಿಗಳು ನಿರಾಕರಿಸಿದರೆ ಸಾಕು ಬೇಡದ ಮುನಿಸು ತಪ್ಪಿದ್ದಲ್ಲ.
ಅನುಬಂಧದ ಪ್ರತೀಕವಾಗಿರುವ  ಚಹಾವನ್ನು ಸ್ವೀಕರಿಸಲೇಬೇಕು.ಚಹಾತಿಥ್ಯ ಸತ್ಕಾರ ಆತಿಥೇಯರಲ್ಲಿ ಅವರ್ಣನೀಯ ಆನಂದವನ್ನು ತಂದರೆ ಅತಿಥಿಗಳಲ್ಲಿ ವಾತ್ಸಲ್ಯದ ಸುಮವನ್ನು ಅರಳಿಸುತ್ತದೆ.  ಸಂಬಂಧಗಳನ್ನು  ಗಟ್ಟಿಯಾಗಿ ಬೆಸೆಯುವ ಸೇತುವೆಯಾಗಿ ಚಹಾದ ರಾಯಭಾರಿತನ ತಲೆದೂಗುವಂತಹುದು. ಮನೆಯವರಗೆ ಜಗಳವಾಡಲು ಬಂದವರಿಗೂ ಕುಳ್ಳಿರಿಸಿ ಚಹಾದಿಂದ ಸತ್ಕರಿಸುವಂತಹ ಅತಿಥಿ ಔದಾರ್ಯ ಅನಿಕೇತನವಾದದ್ದು. ಚಹಾ ಬಂಧುತ್ವದ ಸೇತುವೆಯಾಗಿರುವಂತೆಯೇ  ಋಣದ ಪ್ರತಿನಿಧಿಯೂ ಆಗಿದೆ. ಬಗೆಹರಿಯಲಾರದ ಎಷ್ಟೋ ವಿವಾದಗಳು ಚಹಾದ ಬಾಂಧವ್ಯ ಮಾತ್ರದಿಂದ ಮಾಯವಾಗಿದ್ದನ್ನು ಕಂಡಿದ್ದೇನೆ. ಪರರ ಮನೆಯ ಚಹಾದ ಋಣ ಬಗೆಯಬೇಕಾದ ದುಷ್ಟರ ದ್ರೋಹಗಳನ್ನು, ಅಪನಂಬಿಕೆಗಳನ್ನು ತಿಳಿಗೊಳಿಸಿ ತಣ್ಣಗಾಗಿಸಿದ್ದನ್ನು ತಿಳಿದಿದ್ದೇನೆ. ಮನುಷ್ಯ- ಮನುಷ್ಯರ ಮಧ್ಯದ ದ್ವೇಷ, ವಿರಸ,ವೈರತ್ವಗಳಿಗೆ ರಾಮಬಾಣದ ಔಷಧಿಯಾಗಬಲ್ಲ ಶ್ರೇಷ್ಠ ಚಿಕಿತ್ಸಾಗುಣ ನಮ್ಮೂರಿನ ಚಹಾದಲ್ಲಿದೆ. ಸಂಜೆಯಾದರೆ ಸಾಕು ನಮ್ಮೂರಿನ ತರಕಾರಿ ಉಪ ಮಾರುಕಟ್ಟೆ ಹರಟೆಯ ಕೇಂದ್ರವಾಗಿ ಬದಲಾಗುತ್ತದೆ. ಹೀಗೆ ಸೂರ್ಯಾಸ್ತವಾಗುತ್ತಲೇ ಸೂಜಿಗಲ್ಲಿನಂತೆ ಹರಟುವವರನ್ನಾಕರ್ಷಿಸಿ ತನ್ನತ್ತ ಸೆಳೆಯುವ  ಮಾಂತ್ರಿಕನೆಂದರೆ  'ಚಹಾಮಣಿ'. ಪ್ರತಿನಿತ್ಯ ಈ ಮುಸ್ಸಂಜೆಯ ಹರಟೆಯನ್ನು  ಜಾತ್ರೆಯೆಂಬಂತೆ ಪರಿಪಾಲಿಸಿಕೊಂಡು ಬಂದಿದ್ದಾರೆ ಇಲ್ಲಿಯ ಜನ. ಇಲ್ಲಿ ಜಾಗತಿಕವಲ್ಲದೇ, ಕೇಂದ್ರದಿಂದ ಹಿಡಿದು ಗ್ರಾಮಮಟ್ಟದವರೆಗಿನ ಸಮಕಾಲೀನ ರಾಜಕೀಯ, ಸಾಮಾಜಿಕ, ಆರ್ಥಿಕ,ಆಧ್ಯಾತ್ಮಿಕವಾದ ಸೂಕ್ಷ್ಮ  ಒಳನೋಟಗಳ ಚರ್ಚೆಯಿದೆ; ಊರಿನಲ್ಲಿ ಜರುಗುತ್ತಿರುವ ಹಾಗೂ ಜರುಗಿದ ಪ್ರಸ್ತುತ ವಿದ್ಯಮಾನಗಳ ಕುರಿತು ಸಂವಾದವಿದೆ; ಅಂದು ಗಮನಸೆಳೆದಿರುವ ಊರಿನ ಪ್ರಮುಖ ಸಂಗತಿಗಳ ಕುರಿತು ಮಾತುಗಳಿವೆ; ಸ್ನೇಹಿತರು, ದಾಯಾದಿ ಸಂಬಂಧಿಗಳ ಮಧ್ಯದ  ವಾದವಿವಾದಗಳ ವಿವೇಚನೆಯಿದೆ;  ಕೌಟುಂಬಿಕ, ಸಾಮಾಜಿಕ,ಆರ್ಥಿಕ,ನೈತಿಕ, ಸಾಂಸ್ಕೃತಿಕ ಅಲ್ಲದೇ ಪಾರಮಾರ್ಥಿಕ ಸಂಗತಿಗಳ ವ್ಯಾಖ್ಯಾನಗಳಿವೆ; ಸಂಬಂಧಿಕರ ಮಧ್ಯದ ವಿವಾದಗಳಿಗೆ ಮುಕ್ತಿ ನೀಡಬಲ್ಲ ನ್ಯಾಯಿಕ ಪರಿಹಾರಗಳ ಸಂಕಥನಗಳಿವೆ; ತಮ್ಮ ಕೈಗೆಟುಕದ ರಾಜಕಾರಣದ ಒಳಸುಳಿಗಳಿಗೂ ಇಲ್ಲಿ ಅನೌಪಚಾರಿಕ ಪರಿಹಾರಗಳಿವೆ; ಗೆಳೆಯರ ಮಧ್ಯದ ತುಂಟಾಟದ ಭಾವಗಳ ಸಲ್ಲಾಪಗಳಿವೆ.  ಮಾನವನ ಸಕಲ ಮನೋವ್ಯಾಪಾರಗಳ ಅಭಿವ್ಯಕ್ತಿಗೊಂದು ದಿವ್ಯಲೋಕ ಈ ಚಹಾಜಾತ್ರೆ. ಮಾನವಶಾಸ್ತ್ರ ಹಾಗೂ ಸಮಾಜಶಾಸ್ತ್ರ ಶಿಸ್ತುಗಳ ಅಧ್ಯಯನಕಾರರಿಗೆ ಒಂದು ಪ್ರಯೋಗಶಾಲೆಯಂತಿದೆ ಈ ಮೇಳ.  ಜಾತಿ ಧರ್ಮ, ಮತ,ವರ್ಣಗಳ ಭೇದವಿಲ್ಲದೇ ಚಹಾಗಾಗಿ  ಒಂದೆಡೆ ನೆರೆಯುವ ಸಂಗತಿಯೇ ವಿಸ್ಮಯ  ಮೂಡಿಸಿದೆ. ಕಲೆ ಹಾಗೂ ಸಾಹಿತ್ಯ ಮೀಮಾಂಸೆಗೂ ಅಲ್ಲಿ ಜಾಗವಿದೆಯೆಂದರೆ ಚಹಾ ಹೇಗೆ ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂಬುದನ್ನರಿಯಬಹುದು. ತೆರೆದುಕೊಳ್ಳುವ ಚಹಾಕಾರಣದ ನಮ್ಮೂರಿನ ಈ ಮಾರುಕಟ್ಟೆಯ ಜಗತ್ತು  ಸರ್ವಜನಾಂಗದವರನ್ನಳಗೊಂಡು ಇತಿಹಾಸ, ಅರ್ಥಶಾಸ್ತ್ರ, ಸಮಾಜವಿಜ್ಞಾನ,ರಾಜ್ಯಶಾಸ್ತ್ರ, ತತ್ವಜ್ಞಾನಾದಿಯಾಗಿ ಔಪಚಾರಿಕ ಹಾಗೂ ಅನೌಪಚಾರಿಕ ಸಂಗತಿಗಳನ್ನೆಲ್ಲಾ ನಿಷ್ಕರ್ಷೆಗೊಳಪಡಿಸಬಲ್ಲ  ಅನುಭವ ಮಂಟಪವಾಗಿದೆ. ಜಾಗತಿಕ ವಿದ್ಯಮಾನಗಳಿಂದ ಹಿಡಿದು ಪಕ್ಕದ ಮನೆಯವರೆಗಿನ ಸುದ್ದಿ ಸಮಾಚಾರಗಳೆಲ್ಲಾ ಈ ಅನುಭವ ಮಂಟಪದಲ್ಲಿ ನಿಕಷಕ್ಕೊಳಗಾಗಲೇಬೇಕು.ನೇಕಾರ ಸಂಗಣ್ಣ, ವಾಲೀಕಾರ ಬಸಪ್ಪ,  ಕಮ್ಮಾರ ಹನುಮಂತ, ಕುಂಬಾರ ಮಲ್ಲಪ್ಪ, ಗೌಡರ ಲಕ್ಷ್ಮಣ್ಣ ಹೀಗೆ ತರತಮಗಳಿಲ್ಲದ ಜಾತ್ಯಾತೀತ ಸಮುದಾಯವೊಂದು ಬೀದಿ ಬದಿಯ ಚಹಾಶಾಲೆಗಳ ಮುಂದೆ ಶ್ರದ್ಧೆಯಿಂದ ನಿತ್ಯ ನೆರೆಯುತ್ತದೆಯೆಂದರೆ ಚಹಾದ ಈ ಮಾಯಾಲೋಕಕ್ಕೆ ಧನ್ಯವಾದಗಳನ್ನರ್ಪಿಸಲೇಬೇಕು.
ಚಹಾದೊಂದಿಗೆ ಚೂಡಾ,  ಮಿರ್ಚಿ ಬಜಿ, ದೊಣ್ಣೆಮೆಣಸಿನಕಾಯಿ ಬಜಿ,  ಬದನೆಕಾಯಿ ಬಜಿ, ವಡಾ ಬಜಿ, ಆಲೂ ಬಜಿ, ಹುರಿದ ಮಸಾಲೆ ಶೇಂಗಾಕಾಳುಗಳು, ಒಗ್ಗರಣೆ ಹಾಕಿದ ಚುರುಮರಿ, ಹೀಗೆ ಬಗೆ ಬಗೆಯ ವೈವಿಧ್ಯಮಯ ಖಾದ್ಯಗಳ ಸಾಂಗತ್ಯ ಹರಟೆಗೆ ನಿತ್ಯೋತ್ಸವದ ಮೆರಗನ್ನು ನೀಡುತ್ತದೆ. ಬಿಸಿಯಾದ ಈ ಕರಿದ ಖಾದ್ಯಗಳನ್ನು ಸವಿಯುತ್ತಲೇ  ನಡೆಯುವ  ಚರ್ಚೆ ಕಾವೇರುವ ಬಗೆಯನ್ನು ನಮ್ಮ ಜನರ ಗ್ರಾಮೀಣ ಸೊಗಡಿನ ಭಾಷೆಯಲ್ಲಿಯೇ  ಕೇಳಬೇಕು. ಕರಿದ ಖಾದ್ಯಗಳ ಸವಿಯನ್ನುಂಡ ನಂತರದ ಸಾಂಗತ್ಯವೇ ಚಹಾಪಾನೀಯದ್ದು. ಅಲ್ಲಿಗೆ ಅಂದಿನ ಹರಟೆ ಅಂತಿಮ ಹಂತಕ್ಕೆ ಬಂದಿದೆಯೆಂದೇ ತಿಳಿಯಬೇಕು. ಒಂದು ಪುಟ್ಟ ಗ್ರಾಮದ  ಜಾತ್ರೆಯಷ್ಟು ಜನರನ್ನು ಸೆಳೆಯುವ ಈ  ಚಹಾಶಾಲೆಗಳೇನೂ ಪಂಚತಾರಾಗೃಹಗಳಲ್ಲ. ಬೀದಿ ಬದಿಯ ಮೂಲೆಯೊಂದರಲ್ಲಿ  ತಳ್ಳುವ ಗಾಡಿಗಳ,ಚತುರ್ಭುಜಗಳಂತಿರುವ  ನಾಲ್ಕು ಚಕ್ರಗಳ ಮೇಲೆ   ಪ್ರತಿಷ್ಠಾಪಿಸಲ್ಪಟ್ಟ ಸಂಚಾರಿಯಂತೆ ಕಾಣುವ ಡಬ್ಬಿಯಂಗಡಿಗಳು.  ಮಲೆನಾಡಿನ ಚಹಾಕುಶಲಿಗಳು ಚೂಡಾದಂಗಡಿಯ ಪಕ್ಕತೆರೆದಿರುವ  ಚಹಾಶಾಲೆ ಒಂದಕ್ಷರದ ವಿದ್ಯೆಯನ್ನು ಧಾರೆಯೆರೆಯದಿದ್ದರೂ ಚಹಾದ ಅನುಭಾವದ ರಸಪಾಕವನ್ನು ರಸಿಕರಿಗೆ ಹಂಚುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ!. ಮುಸ್ಸಂಜೆಯ ವಿಹಾರಿಗಳು ಸೇರುವ ಈ ಜಾಗ ವಿಶಾಲವಾದ ಬಯಲೇನೂ ಅಲ್ಲ, ಸುಮಾರು ೧೦೦ ಮೀಟರ್ ಉದ್ದಳತೆಯ ಚಿಕ್ಕ ಉಪಮಾರುಕಟ್ಟೆಯ ತಾಣವದು. ಅಂದ ಹಾಗೆ ಈ ಹರಟೆಯ ಜಗತ್ತಿನ ನಿತ್ಯದ ಆಯಸ್ಸು ಸಂಜೆ  ೫ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ಮಾತ್ರವೆಂದರೆ ಅಚ್ಚರಿಯೆನಿಸದಿರದು.  ಗೋಧೂಳಿಯ ಮುಹೂರ್ತದಲ್ಲಿ  ಜನಿಸಿ, ವಿವಿಧೆಡೆಗಳಿಂದ  ಹರಿದು ಬಂದ ಜಲ ಸಾಗರವ ಸೇರುವಂತೆ ನಮ್ಮೂರಿನ ಗಲ್ಲಿ ಹಲ್ಲುಗಳಿಂದ ಜನ ನಿತ್ಯದ ಈ ಚಹಾಮೇಳಕ್ಕೆ ಹರಿದುಬರುತ್ತಾರೆ. ಕೆಲವೇ ಗಂಟೆಗಳಲ್ಲಿ  ಬೃಹದಾಕಾರವಾಗಿ ಬೆಳೆದು, ಮತ್ತೆ ಐದಾರು ಗಂಟೆಗಳಲ್ಲಿಯೇ ಕೊನೆಯಾಗುವ ಈ ಚಹಾರಂಜನೆಯ ಜಾತ್ರೆ ಬಲು ವಿಶಿಷ್ಟವಾದುದು.
ಸಾಮಾನ್ಯರಾದಿಯಾಗಿ ಶಿಕ್ಷಕರು, ವಕೀಲರು, ಸುದ್ದಿಮಾಧ್ಯಮದವರು,  ಕಾರ್ಮಿಕರು, ನೌಕರರು, ವಿದ್ಯಾರ್ಥಿಗಳು, ಕರಕುಶಲಿಗಳು, ರೈತರು  ಹೀಗೆ ವರ್ಗಭೇದವಿಲ್ಲದೇ ಸರ್ವರನ್ನೂ ಸೆಳೆದು, ಭ್ರಾತೃತ್ವದ ಮುನ್ನುಡಿಯನ್ನು ಹಾಡುತ್ತಿರುವ ಸೌಹಾರ್ದತೆಯ ಸಂಗೀತವನ್ನು ನುಡಿಸುತ್ತಿರುವ, ಸಮಾನತೆಯ ತತ್ವವನ್ನು ಸಾರುತ್ತಿರುವ,ಜಗತ್ತಿಗೆ ಬಾಂಧವ್ಯದ ಪಾಠ ಮಾಡುತ್ತಿರುವ, ನಮ್ಮೂರಿನ ಚಹಾಜಗತ್ತಿನ ಮಾಂತ್ರಿಕ ಮೋಡಿ ಅದೆಷ್ಟು ಅರ್ಥಪೂರ್ಣ, ಭಾವಪೂರ್ಣ, ಔಚಿತ್ಯಪೂರ್ಣ  ಅಲ್ಲವೆ ?  ದಿನವೆಲ್ಲಾ ದುಡಿದು ಬಳಲಿದ ಮನಸುಗಳನ್ನು ತನ್ನತ್ತ ಕೈ ಬೀಸಿ ಕರೆದು ಉಣಬಡಿಸಿ,  ಸಂಜೆಯ ಚಹಾಮೃತದ ಸವಿಯನ್ನು ನಿಷ್ಪಕ್ಷಪಾತವಾಗಿ ಹಂಚುವ ಈ ನಿರ್ಮಲ ಜಗತ್ತು ನನ್ನನ್ನು ಇನ್ನಿಲ್ಲದಂತೆ ಕಾಡಿದೆ. ಶ್ರಮ ಸಂಸ್ಕೃತಿಯ ಬೇರುಗಳಿಂದ ನವಚಿಗುರನ್ನು ಪಡೆದು ಕಂಗೊಳಿಸುತ್ತಿರುವ ನಮ್ಮೂರಿನ ನಾಗರಿಕತೆಯಲ್ಲಿ, ಕೆಲವು ಕಾಲ ಬಡವರ ಜಠರಾಗ್ನಿಯನ್ನು ತಣಿಸಿ ಹಸಿವನ್ನು ಮುಂದೂಡುವ ಅಥವಾ ಒಂದು ಹೊತ್ತಿನ ಉಪವಾಸಕ್ಕೆ ಸಹಕರಿಸಿ ತಾತ್ಕಾಲಿಕವಾಗಿ ಹೊಟ್ಟೆ ತುಂಬಿಸುವ ಈ ಚಹಾ ಎಂಬ ಮಾಯೆ ತನ್ನ ಸುತ್ತ  ಒಂದು ನವಸಂಸ್ಕೃತಿಯನ್ನೆ ರೂಪಿಸಿಕೊಂಡದ್ದರಲ್ಲಿ ಅಚ್ಚರಿಯೇನಿಲ್ಲ. ಬಡವರ ಕೊನೆಯಿರದ ಹಸಿವಿನ ಔಷಧಿಯಾಗಿರುವ ಈ "ಬಡವರ ಬಂಧು" ಶ್ರಮಿಕರ ಅಮೃತವೂ ಹೌದು; ಶೋಷಿತರ ಬದುಕಿನ ತೀರ್ಥವೂ ಹೌದು.ಲಾಲ್ ಬಹಾದ್ದೂರ ಶಾಸ್ತ್ರಿಯವರು ಕರೆಕೊಟ್ಟ ಸೋಮವಾರದ ಉಪವಾಸ ಯಶಸ್ವಿಯಾಗುವಂತೆ ಮಾಡಿ ದೇಶ ಸೇವೆ ಮಾಡಿದ ಚಹಾಮಾಯಿಯ ದೇಶಭಕ್ತಿಯನ್ನು ಮೆಚ್ಚಲೇಬೇಕು! ಈ ಲೇಖನ ಅಕ್ಷರವಾಗುವ ಹೊತ್ತಿನಲ್ಲಿ ಸಹೋದ್ಯೋಗಿ ಪ್ರಾಧ್ಯಾಪಕ ಗೆಳೆಯ ಮೌನೇಶ ಕಮ್ಮಾರರವರು ಹಾಡಿದ"ಕಪ್ಪ ಬಸಿ ಚಹಾ | ಗೆಳೆಯ ಗೆಳೆಯರು ಕೂಡಿ| ಸಲಿಗೆಯ ಮಾತನಾಡಿ|ಪ್ರೀತಿಗೆ ನಾಂದಿಯಾತು| ಕಪ್ಪ ಬಸಿ ಚಹಾ| ಅದು ಒಂದು ಇಲ್ಲದಿರೆ|ಗೆಳೆತನ ಎಲ್ಲಾ ಮರೆ| ಬದುಕುವುದು ಬಿರಿಯಾತು| ಕಪ್ಪ ಬಸಿ ಚಹಾ|"ಎಂಬ ಜಾನಪದ ಗೀತೆಯಲ್ಲಿ ಅಭಿವ್ಯಕ್ತವಾದ  ಚಹಾಮಾಯಿಯ ಸೊಬಗು ಅವರ್ಣನೀಯ. ಚಹಾ ಜನಪದರ ಜೀವಸೆಲೆಯಾಗಿ ಬದುಕಿಗೆ ಚೈತನ್ಯವನ್ನು ಧಾರೆಯೆರೆಯುತ್ತಲೇ ಬಂದಿದೆ. ನಾಡವರ ಕಾಯಕದಲ್ಲಿನ ಕೈಲಾಸ ತಲುಪಲು ಈ ಚಹಾ ಎಂಬ ಉತ್ಸಾಹದ ಚಿಲುಮೆ  ಪ್ರವಹಿಸಲೇಬೇಕು. "ನೀನೆಂದರೆ  ಕಣ ಕಣದಲೂ ರೋಮಾಂಚನ | ಮನದ ಮೂಲೆಯಲೂ ಭರವಸೆಯ ಹೊಂಗಿರಣ| ಅರಳಿ ನಿಂತ ಎದೆಯಲಿ ನೀನು ಅಮೃತ ಸಿಂಚನ| ಕದಡಿದ ಮನ ತಿಳಿಯ ಬಾನು | ಆಗದೇನು ಇಳಿದಾಗ ಚಹಾ ಹನಿಯ ಜೇನು|"ಎಂಬ ಚಹಾರಾಧನೆ ಮನದ ಮೂಲೆಯಲ್ಲಿ ಸದಾ ಜರುಗುತ್ತಲೇ ಇರುತ್ತದೆ. ಆಧುನಿಕ ಜಗತ್ತಿನ ಆಹಾರ ಸಂಸ್ಕೃತಿಯ ಅತ್ಯಗತ್ಯ ಪಾನೀಯಗಳಲ್ಲಿ ಒಂದಾಗಿರುವ ಚಹಾದೇವಿ, ವರ್ತಮಾನದ ಬೆಡಗಿನ ಲೋಕದ ಸೆಳೆತಕ್ಕೆ ಸಿಕ್ಕು ಕೆಫೆಗಳಲ್ಲಿ ಕಪ್ಪು ಸುಂದರಿಯಾಗಿ, ಬಿಳಿ ಕಿಶೋರಿಯಾಗಿ, ಹಸಿರು ನೀರೆಯಾಗಿ, ಕೆಂಬಣ್ಣದ ಮೋಹಿನಿಯಾಗಿ, ವೈವಿಧ್ಯಮಯ ರೂಪಗಳನ್ನು ಅಲಂಕರಿಸಿದ್ದಾಳೆ. ಪ್ರಾತಃಕಾಲದಲೆದ್ದು ಮುಖ, ಹಲ್ಲುಗಳನುಜ್ಜಿ, ವಿಭೂತಿ ಧರಿಸಿ ಒಂದು ಲೋಟ ಚಹಾ ಹೀರಿದಾಗಲೇ ಅಂದಿನ ಕಾಯಕದ ಅಧಿಕೃತ ಪ್ರಾರಂಭಕ್ಕೆ ಮುನ್ನುಡಿ ಬರೆದ ಹಾಗೆ. ಅಲ್ಲಿಂದ ಮೂರು ಗಂಟೆಗಳಿಗೊಮ್ಮೆ ಚಹಾರಾಣಿಯೊಂದಿಗೆ ಉಲ್ಲಾಸದ ಹಾಡನ್ನು ಹಾಡಲೇಬೇಕು. ಶ್ರಮಿಕ ವರ್ಗದ ಜನರ ಜೀವನದ ಚೈತನ್ಯವಾಗಿರುವ ಕಲಿಯುಗದ ಅಮೃತವಾಗಿರುವ ಚಹಾ ನಮ್ಮೂರಿನ ಭಾವೈಕ್ಯತೆಯ ಪ್ರತೀಕವೂ ಆಗಿದೆಯೆಂದರೆ ಅತೀಶಯೋಕ್ತಿಯೇನಲ್ಲ.




ಚಹಾಯಣ

ಚಹಾಯಣ

ಕಲಿಯುಗದ ಅಮೃತವೆಂದೇ  ಪೆಸರ್ವಡೆದಿರುವ 'ಚಹಾ' ಸೇವನೆಯನ್ನು ನನ್ನ ಜೀವನದುದ್ದಕ್ಕೂ ಸಂಭ್ರಮದ ಸ್ವರ್ಗಸುಖದ ಘಳಿಗೆಗಳೆಂದು ಆಚರಿಸುತ್ತಾ ಬಂದಿರುವುದು ನನ್ನ ವ್ಯಕ್ತಿತ್ವದ ಹೆಗ್ಗಳಿಕೆಗಳಲ್ಲಿ ಒಂದು!!.  ಸೂರ್ಯೋದಯದ ಹೊಂಗಿರಣಗಳು ಭುವಿಯನ್ನು ತಬ್ಬಿ ಮೈಮರೆಯುವುದಕ್ಕಿಂತ ಮೊದಲೇ
ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಳಂ ಕುರು..........
" ಎಂದು ಮನೆಯ ಹತ್ತಿರದ  ದೇವಸ್ಥಾನದ ಶುಭ ಸುಪ್ರಭಾತದೊಂದಿಗೆ  ಎಚ್ಚರವಾಗುವ ನನಗೆ ಬೆಳಗು  ನಿತ್ಯೋತ್ಸವವಿದ್ದಂತೆ. ಪ್ರತಿ ಶುಭೋದಯವನ್ನೂ ಹಬ್ಬದಂತೆ ಸಂಭ್ರಮಿಸಿ ಹರ್ಷಿಸುತ್ತೇನೆ.ಮನೆಯ ಮುಂದಿನ ಬೇವು,ತೆಂಗು,ಕಣಗಲಿ ಗಿಡಮರಗಳೊಳಗಣ ಗೂಡುಗಳಿಂದ ರೆಕ್ಕೆಬಿಚ್ಚಿ ಮೈಮುರಿಯುತ್ತಾ ಹೊರಬಂದ ಗಿಳಿ, ಗುಬ್ಬಿ ,ಪಾರಿವಾಳ,ಕೋಗಿಲೆ ಕಾಕಗಳ ಚಿಲಿಪಿಲಿ ಗಾನ, ಮನೆಯ ಮುಂದಿನ ಕಲ್ಪವೃಕ್ಷದ ಪ್ರತೀಕದಂತಿರುವ ತೆಂಗು, ಬೇವು, ಸೀತಾಫಲ ಮರಗಳ ಎಲೆಗಳ ಮಧ್ಯೆ ಇಣುಕುತ್ತಾ ತೂರಿಬಂದು ನೆಲದ ಮೇಲೆ ಸ್ವರ್ಣ ಬೆಳಕಿನ ರಂಗೋಲಿ ಬಿಡಿಸಿದ ನೇಸರನ ನವೋಲ್ಲಾಸದ ಹೊನ್ನ ಕಿರಣಗಳ  ಎರಕ, ಮೈದುಂಬಿಕೊಂಡು ದಟ್ಟ ಆಮ್ಲಜನಕದ ತೇವಭರಿತ ಗಂಧ ಸೂಸುತ್ತಿರುವ ಮಂದಹಾಸದ ತಂಗಾಳಿಯ ಹಿತವಾದ ಸ್ಪರ್ಶ, ಇಬ್ಬನಿಯ ಹನಿಗಳಿಂದ ತೊಯ್ದು ಇರುವೆಗಳ ಮುಂಜಾವಿನ ಜಾತ್ರೆಗೆ ಕಾರಣವಾದ ಸವಿನೆಲದ ರಸ ಮಾಧುರ್ಯ, ದಾಸವಾಳ, ಮಲ್ಲಿಗೆ,ಸೇವಂತಿಗೆ ಕುಸುಮಗಳ ಮೇಲೆ ಸವಾರಿ ಹೊರಟು ರೆಕ್ಕೆಬಡಿಯುತ್ತಾ ಹನಿಹನಿಯಾಗಿ ಮಧು ಹೀರುತ್ತಿರುವ ದುಂಬಿಗಳ ನಿನಾದ,  ಚುಮುಚುಮು ಬೆಳಕಿನ ಉದಯರಾಗ, ಕೈಗೆಟುಕುವ ಕಣ್ಣಳತೆಯಲ್ಲಿ ಗೂಡುಕಟ್ಟಿ ಮಧುವಿನ ಸಂಗ್ರಹದಲ್ಲಿ ತೊಡಗಿರುವ ಮರಿದುಂಬಿಗಳ ಸ್ವರಾಂಜಲಿ,ಹೂವಿಂದ ಹೂವಿಗೆ ಹಾರಿ, ರಸರುಚಿಯ ಪರೀಕ್ಷೆಗಿಳಿದು ಸುತ್ತಿ ಸುಳಿಯುತ್ತಿರುವ ಚಿಟ್ಟೆಗಳ ಸರಸ ಸಲ್ಲಾಪ, ರವಿಯ ಹೊಂಗಿರಣಗಳಿಗೆ ಮೈಯ್ಯೊಡ್ಡಿ ಅರಳಿ ನಿಂತು ಸುಗಂಧಸುಧೆಯನ್ನು ಹರಿಸುತ್ತಿರುವ ತುಳಸಿ,ದುಂಡುಮಲ್ಲಿಗೆ,ಚೆಂಡು ಹೂ, ಸೇವಂತಿಗೆ, ಕಣಗಿಲೆ, ಸೂಜಿಮಲ್ಲಿಗೆ,ಮಧ್ಯಾಹ್ನಮಲ್ಲಿಗೆ, ಬೇವಿನ ಹೂ,ಪೇರು ಹೂಗಳ ವೈವಿಧ್ಯಮಯ ಚಿತ್ತಾಕರ್ಷಕ ಬಣ್ಣಗಳ  ಸೌಂದರ್ಯಮೀಮಾಂಸೆ,  ಮಂಜಿನ ರಸಗಂಗೆಯ ಹನಿಗಳ ಮಿಲನದಿಂದಾಗಿ  ಪೆಟ್ರಿಕೋರ್ ವಿದ್ಯಮಾನದುಂದುಂಟಾಗಿ ಚಿಮ್ಮುತಿರುವ  ಆರ್ದ್ರ ಮಣ್ಣಿನ ಹದಭರಿತ ಪರಿಮಳ, ಭಾನುವಿನ ನವಪ್ರಭೆಗಾಗಿ ಕಾತರಿಸುತ್ತಲೇ ಮರೆಯಾಗುತ್ತಿರುವ ಮಂದಬೆಳಕಿನ ಉದಯಗೀತೆ..... ಹೀಗೆ ಸರದಿಯಂತೆ ಬಂದಪ್ಪಳಿಸುವ ಶುಭೋದಯದ ನಾದಬಿಂದುಗಳೊಂದಿಗೆ ಚಹಾಮಾಯಿಯ ಚಪ್ಪರಿಸುವ ಸವಿ ಗುಟುಕಿದ್ದರೆ ಮುಗಿಯಿತು. ಅದು ಧರೆಗಿಳಿದ ನಂದನವನದ ಸಾಕ್ಷಾತ್ಕಾರದ ಪರಮಸುಖ ; ನೆಲದ ಮೇಲಿನ ಬೃಂದಾವನ ದರ್ಶಿಸಿದ ಮಹದಾನಂದ ; ಅಮೃತಧಾರೆಯನ್ನೇ ಹೀರಿದ ದಿವ್ಯಾನುಭವ ; ಇಬ್ಬನಿಯ ಹನಿಗಳೆಲ್ಲಾ ಮುತ್ತಾದ ಸಂಭ್ರಮ; ಮರ್ತ್ಯ ಲೋಕದಿಂದ ಹಾರುತಿರುವ ಹೃದಯಾನಂದದ ಅನುಭವ.
ಈ ಅನುಭವಗಳು ಒಮ್ಮೆಲೇ ಬಂದಪ್ಪಳಿಸಿ ಅಂತರಂಗದ ಕಡಲಿಗೆ ಪ್ರಶಾಂತಿಯನ್ನು ನೀಡುವ ದಿವ್ಯಾನುಭವ ನನಗೆ ಶುಭೋದಯದ ಚಹಾರಾಣಿ ನನ್ನೊಳಗಿಳಿದಾಗ ಸಂಭವಿಸಿದೆ. ನನ್ನನ್ನು ಧ್ಯಾನದ ಶೂನ್ಯಕ್ಕೆ ಕರೆದೊಯ್ಯುವ ಹಕ್ಕಿಯಂತೆ ಚಹಾಮಾಯೆ ನನ್ನನ್ನು ಬೆಂಬತ್ತಿದೆ.

" ಆನಂದಮಯ ಈ ಜಗಹೃದಯಭಯವೇತಕೆ ಮಾಣೊ ಸೂರ್ಯೋದಯ ಚಂದ್ರೋದಯದೇವರ ದಯೆ ಕಾಣೊ" ಎಂಬ ಕುವೆಂಪುರವರ ಉಕ್ತಿಯಂತೆ ಉದಯರವಿಯೊಂದಿಗೆ, ಸಲ್ಲಾಪದಲ್ಲಿ ತೊಡಗಿದರೆ ಸಾಕು ಬರೆಯುತ್ತಿರುವ ಸಂಗತಿಗಳೆಲ್ಲಾ ಕಿರಣಗಳ ಹೊಳಪಿನಲ್ಲಿ ಮಂದವಾಗುತ್ತವೆ. ಚಹಾದ ಮಗ್ಗಿಗೆ ಬರೋಣ.ಚಹಾವೆಂದರೆ ನನಗಂತೂ ಎಲ್ಲಿಲ್ಲದ ಹಿಗ್ಗು. ಬೆಳಗಿನ ಈ ಸುಖಜೀವನದ ಘಳಿಗೆಗಳೊಂದಿಗಿನ ಸೇವನೆ ನನ್ನ ನಿತ್ಯದ ಬದುಕನ್ನು ರಸಮಯವಾಗಿಸಿದೆ. ಚೈತನ್ಯದ ಚಿಲುಮೆಯ ಒರತೆಯನ್ನಾಗಿಸಿದೆ. ಚಹಾದ ಗುಟುಕಿನಿಂದಲೇ ನನ್ನ ಬೆಳಗಿನ ಅಧಿಕೃತ ಪ್ರಾರಂಭವೆಂದರೆ ತಪ್ಪಾಗಲಾರದು. ಅಂದರೆ ಬೆಳಿಗ್ಗೆ ೬ ಗಂಟೆಗೆ ಎದ್ದರೂ ಅಂದು ತಡವಾಗಿ ೧೦ ಗಂಟೆಗೆ ಚಹಾ ಹೀರಿದರೆ ನನಗೆ ಶುಭೋದಯವಾಗುವುದು ೧೦ ಗಂಟೆಗೆ ಎಂದರೆ ಚಹಾ ನನ್ನನ್ನಾವರರಿಸಿರುವ ಪರಿಯನ್ನೊಮ್ಮೆ ಊಹಿಸಬಹುದು. ಬೆಳಗಿನಲ್ಲಿ ಮಾತ್ರವಲ್ಲ ಹೊತ್ತಲ್ಲದ ಹೊತ್ತಿನಲ್ಲೂ ನನ್ನೊಳಗಿಳಿಯುವ ಆಪತ್ಕಾಲದ ಪಾನರಾಣಿ. ತಲೆ ನೋವಿನ ಹಾವಳಿಯಿರಲಿ, ಸುಖವೆಂದು ಬಗೆದ ಸಂಸಾರದ ಅಸಂಖ್ಯಾತ ತಾಪತ್ರಯಗಳ ದಾಳಿಯಿರಲಿ, ಮೈ ಹಣ್ಣಾಗುವ ಆಯಾಸವಿರಲಿ, ಮೈಗಳ್ಳತನವೆಂಬ ಠಕ್ಕನ ಬಲೆಯಾಗಿರಲಿ,ತರಗತಿಗಳಲ್ಲಿನ ಉಪನ್ಯಾಸದ ಬಳಲಿಕೆಯಿರಲಿ, ಸ್ನೇಹಿತರೊಂದಿಗಿನ ಹರಟೆಯಿರಲಿ ಅಥವಾ ಏನೂ ಇಲ್ಲದೇ ಸುಮ್ಮನೆ ಹೊತ್ತುಗಳೆಯುತಿದ್ದರೂ ಚಹಾ ಎಂಬ ಮನದನ್ನೆ ಮಾತ್ರ ನನ್ನನ್ನು ಆಗಾಗ ಬಂದು ಕ್ಷೇಮಕುಶಲ ತಿಳಿದು ಮನದ ಕ್ಲೇಶ ಕಳೆಯುವ ಜೀವ ಸಂಜೀವಿನಿಯಾಗಲೇಬೇಕು. ಕಾರಣಗಳೇ ಬೇಕೆಂದೇನಿಲ್ಲ  ನಾನು ಆಕೆಯನ್ನು ಬಯಸುವುದಕ್ಕೆ. ನೆಪಗಳಿದ್ದರೆ ಸಾಕು, ಬರಸೆಳೆದು ಬಾಚಿಕೊಳ್ಳುತ್ತೇನೆ ಆಕೆಯನ್ನು ಸಂಧಿಸಲು ದೊರೆತ ಅವಕಾಶಗಳನ್ನು. ನೆಪಗಳಿಲ್ಲದಿದ್ದರೂ ಚಿಂತೆಯಿಲ್ಲ ತಲೆ ಸರಿಯಿಲ್ಲವೆಂದೊ, ಗೆಳೆಯರಾರೊ ಬಹಳ ಮಾತನಾಡಿದರೆಂದೋ,ಪ್ರಾಂಶುಪಾಲರು ಹೊಗಳಿದರೆಂದೋ, ಚಹಾ ಒಲ್ಲದ ಸಹೋದ್ಯೋಗಿಗಳು ಬಯಸಿದರೆಂದೋ,ಗಂಟೆಗಟ್ಟಲೇ ಕಂಪ್ಯೂಟರ್ ಮುಂದೆ ಕುಳಿತೆನೆಂದೊ, ಗೆಳೆಯರ ಜನ್ಮದಿನವೆಂದೊ...   ಹೀಗೆ ತರಹೇವಾರಿ  ನೆಪಗಳನ್ನು ಅವಳಿಗಾಗಿ ಹುಟ್ಟುಹಾಕಿಕೊಳ್ಳುತ್ತೇನೆ. ಕೆಲವೊಮ್ಮೆ ಮಧ್ಯಾಹ್ನದ ಭೋಜನ  ಸವಿಯುವಾಗಲೇ ಆಕೆಗಾಗಿ ಕಾಯುವ ಪ್ರೇಮತಪಸ್ವಿಯಾಗುತ್ತೇನೆ. ಹೌದು ಆಕೆಯೆಂದರೆ ಸಮಯದ ಪರಿವೆಯಿಲ್ಲ ಎನಗೆ. ಆಕೆ ನೆನಪಾದರೆ ಮುಗಿಯಿತು ಹೊರಡಲೇಬೇಕು ಅವಳು ಸಿಗುವಲ್ಲಿಗೆ. ಬಸ್ಸು ನನ್ನನ್ನು ಬಿಟ್ಟು ಹೊರಟರೂ ಪರವಾಗಿಲ್ಲ ಆಕೆಯೊಂದಿಗೆ ಕೆಲಕಾಲ ಮಾತಿಗಿಳಿಯಲೇಬೇಕು.
ಆಕೆಯ ಸಂಗದಿಂದ ಕ್ಷಣಹೊತ್ತು ಮೈಮರೆತು ಕುಳಿತ ನಂತರ, ಎಚ್ಚರವಾದಾಗ ಏನನ್ನೋ ಅವಳಿಗಾಗಿ ಕಳೆದುಕೊಂಡಿರುತ್ತೇನೆ. ಮಹತ್ವದ ಸಮಯವನ್ನೊ,ಮನೆ ಸೇರಿಸಬೇಕಾದ ಬಸ್ಸನ್ನೊ, ಮಹತ್ವದ ಕೆಲಸವಾಗಬೇಕಾದ ಯಾರದೋ ಭೇಟಿಯನ್ನೊ,ಹೊರಟಿರುವ ಪ್ರಯಾಣದ ರೈಲನ್ನೊ, ಕಾಯುತ್ತಿರುವ ಗೆಳೆಯನನ್ನೊ ಅಥವಾ ಸಂಬಂಧಿಕರನ್ನೊ  ಇನ್ನೇನೇನೋ ಆ ಕ್ಷಣಕ್ಕೆ ಕಳೆದುಕೊಂಡಿರುತ್ತೇನೆ.  ಆದರೂ ಚಿಂತೆಯಿಲ್ಲ ನನಗೆ. ಕಳೆದುಕೊಂಡಿದ್ದೇನೆ ಎಂಬ ಕೊರಗಿಲ್ಲ;
ದಕ್ಕದೇ ಹೋಯಿತೆಂಬ ಪಶ್ಚಾತ್ತಾಪವಿಲ್ಲ; ತಪ್ಪಿಹೋಯಿತಲ್ಲ ಎಂಬ ಕನವರಿಕೆಯಿಲ್ಲ ;
ಜಾರಿದೆನೆಂಬ ಪ್ರಾಯಶ್ಚಿತವಿಲ್ಲ; ಅನಾಹುತವಾಯಿತಲ್ಲ ಎಂಬ ಹೆದರಿಕೆಯಿಲ್ಲ ; ಸಂಭವಿಸಬಾರದಾಗಿತ್ತು ಎಂಬ ಹಳಹಳಿಕೆಯಿಲ್ಲ;
ಎಚ್ಚರ ತಪ್ಪಿದೆನೆಂಬ ಹಳವಂಡವಿಲ್ಲ;ಓಹೋ ಕೈಜಾರಿತೆಂಬ ಪರಿತಪಿಸುವಿಕೆಯಂತೂ ನನ್ನಲಿಲ್ಲಏಕೆಂದರೆ ನಾನು ಅವಳನ್ನು (ಚಹಾಮಾಯೆ) ಕುಡಿದಿದ್ದೇನೆ.
ಅಲ್ಲಮನಿಗೆ ತಾಮಸವು ಮಾಯೆಯಾಗಿ ಕಾಡಿದಂತೆ ನನಗೆ ಚಹಾ ಮಾಯೆಯಾಗಿ ಕಾಡಿದೆ. ಆದರೆ ಅಲ್ಲಮ ಮಾಯೆಯನ್ನು ಗೆದ್ದು ಬೀಗಿ ಬಯಲಾದ. ನಾನು ಸೋತು ಹಿಗ್ಗಿ ಪರವಶನಾದೆ. ಅವಳೊಲವಿನ ಶಾಶ್ವತ ಪ್ರೇಮಭಿಕ್ಷುವಾದೆ. ಆಕೆ ಪ್ರೇಮಮಧುವನ್ನು ಧಾರೆಯೆರೆಯುವ ಗಂಗೆಯಾದಳು.ಆಕೆಯ ರಸಾನುಭವದ ಸಖನಾದೆ. ಆಕೆಯಪರಿಮಳದ ಹಬ್ಬದಲ್ಲಿ ಸಂಭ್ರಮಿಸುವ ಮಗುವಾದೆ.
ಹದಭರಿತ ಚಹಾಕನ್ನಿಕೆಯ ಸ್ವಾದಕ್ಕಿಂತ ಮಿಗಿಲಾದ ರಸರಾಸಾಯನ ಈ ಭುವಿಯ ಮೇಲೆ ಬೇರೊಂದಿಲ್ಲ. ಉಪ್ಪಿಗಿಂತ ರುಚಿಯಿಲ್ಲ ಎಂಬರು ಬಲ್ಲವರು.ಆದರೆ ನನಗೆ ಈ ಜಗದಲಿ ಚಹಾಗಿಂತ ರುಚಿ ಬೇರೊಂದಿಲ್ಲ. "ನಹೀ ಜ್ಞಾನೇನ ಸದೃಶಂ"  ಎನ್ನುವಂತಯೇ ನನಗೆ ನಹೀ ಚಹಾ ಸದೃಶಂ ಎಂದೆನ್ನಿಸಿದೆ. ಇದ ಕಾರಣ ಚಹಾಷೋಡಶಿಯ ಬಾಯಿಚಪ್ಪರಿಸುವ ಆಸ್ವಾದ; ನನ್ನೊಳಗಿಳಿದು ನಶೆಯೇರಿಸುವ ಅವಳ ಆಮೋದ. ಸಾಮಾನ್ಯವಾಗಿ ಸರ್ವರಿಗೂ ತಿಂಗಳಿಗೊಮ್ಮೆ ಹುಣ್ಣಿಮೆ, ಅಮವಾಸ್ಯೆಗಳ ಹಬ್ಬವಾದರೆ ನನಗೆ ಚಹಾಸಿನಿ ಯ ಸಖ್ಯ ದೊರೆತಾಗಲೆಲ್ಲ ಮಹಾನವಮಿ.ಯಾಕೆಂದರೆ ಚಹಾಮಾಯೆಯನ್ನು ಪಡೆದುಕೊಂಡಿದ್ದೇನೆ. ಬೆಳಗಾಗೆದ್ದ ಕೂಡಲೇ ಯೋಗಿಯಾಗುತ್ತೇನೆ ಧ್ಯಾನನಿರತನಾಗುತ್ತೇನೆ, ನಂತರವಾದರೂ ಚಹಾಮೃತವನ್ನು ಸವಿಯಬಹುದೆನ್ನುವ ಮಹಾ ಹಂಬಲದಿಂದ.ಮಜ್ಜನದಲಿ ತೊಯ್ಯುತ್ತೇನೆ.ತಾಳದ ಚಳಿ ಪಡೆದುಹೆಚ್ಚು ಚಹಾ ಹೀರಬಹುದೆಂಬ ಮಹದಾಸೆಯಿಂದಉಪಹಾರ ಸೇವಿಸುತ್ತೇನೆಜಠರಲದಲ್ಲಿನಿತು ಅವಕಾಶವನಿಟ್ಡು. ಸಾಧ್ಯವಾದಷ್ಟೂ ಅವಳನ್ನು ಕುಡಿದು ತುಂಬಿಕೊಳ್ಳಬೇಕೆಂಬ ಬಯಕೆಯಿಂದ.
ಸದಾ ತುಂಬಿಕೊಂಡೇ ನಶೆಯನ್ನೇರಿಸಿಕೊಳ್ಳುವ ಚಹಾದ ಮಗ್ಗನ್ನು ಕಂಡು ಅಸೂಯೆಪಟ್ಟಿದ್ದೇನೆ. ಸಂಸ್ಕರಿತ ಮಣ್ಣಿನ ಹೊಳೆಯುವ ಶ್ವೇತ ವರ್ಣದ ಪಿಂಗಾಣಿ ಮಗ್ಗಿನಲ್ಲಿಯ ಆಕೆಯ ತುಳುಕುವಿಕೆಯನ್ನು ಕಂಡು ಮೋದಿಸಿದ್ದೇನೆ. ಕೆಂಬಣ್ಣದ ಕೆನ್ನೆಯಂತಿರುವ ಅವಳ ಕೆನೆಯನ್ನು ಸವರಿ ಎತ್ತಿಕೊಂಡು ಚರ್ವಿಸಿದ್ದೇನೆ. ನಾಲಿಗೆ ಚಪ್ಪರಿಸಿ ರಸಾಂಕುರಗಳನ್ನು ಉದ್ದೀಪಿಸಿದ್ದೇನೆ.
ಹರಿವಂಶರಾಯ್ ಬಚ್ಚನ್ ರವರು-
"ನನ್ನ ಶೆರೆಯಲ್ಲಿ ಒಂದೊಂದುಹನಿ ಒಬ್ಬೊಬ್ಬರಿಗೂನನ್ನ ಪ್ಯಾಲೆಯೊಳಗೆಒಂದೊಂದು ಗುಟುಕು ಎಲ್ಲರಿಗೂನನ್ನ ಸಾಕಿಯೊಳಗೇಅವರವರ ಸಾಕಿಯರ ಸುಖ ಎಲ್ಲರಿಗೂಯಾರಿಗೆ ಯಾವ ಹಂಬಲವೊಹಾಗೇ ಕಂಡಳು ನನ್ನ ಮಧುಶಾಲಾ"ಎಂದು  ಮದಿರೆ ಹಾಗೂ ಮಧುಶಾಲೆಯನ್ನು ಕುರಿತು ಹಾಡಿದ ಕವಿತೆಯ ಸಾಲುಗಳು ನನ್ನ ಚಹಾ ಹಾಗೂ ಚಹಾಶಾಲೆಯನ್ನು ಕುರಿತ ಅನುಭವವನ್ನು ಹೋಲುತ್ತವೆ.  ಚಹಾಶಾಲೆಯಲ್ಲಿ ಕುಳಿತು ಚಹಾವನ್ನು ಮದಿರೆಯಂತೆ ಹೀರಿದ್ದೇನೆ. "ವಾಹ್ ತಾಜ್..." ಎಂಬ ತಬಲಾವಾದಕನ  ಚಹಾ ಹೀರುವ ದೃಶ್ಯದ ತುಣುಕು ನನಗೆ ಜಾಹೀರಾತಾಗಿ ಕಾಣಲೇ ಇಲ್ಲ, ಬದಲಾಗಿ ಚಹಾದ ತಾಜಾ ಸ್ವಾದ ಹಾಗೂ ನವೋಲ್ಲಾಸದ ಹೊಳೆಯ ಅಭಿವ್ಯಕ್ತಿಯಾಗಿ ಕಾಣುತ್ತದೆ. ಮೈಯ್ಯೊಳಗೆ ರುಧಿರದ ಬದಲಾಗಿ ಚಹಾವೇ ಪ್ರವಹಿಸುವಂತಿದ್ದರೆ ದಿನವಿಡೀ ಮನೋಲ್ಲಾಸದ ಮಡುವಿನಲ್ಲಿ ತೇಲಾಡಬಹುದಿತ್ತಲ್ಲ ನಶೆಯ ಗುಂಗಿನಲ್ಲಿಯೇ ಓಲಾಡಬಹುದಿತ್ತಲ್ಲ ಎಂಬ ದುರಾಸೆಯ ಕನಸಿನ ಬೆನ್ನು ಹತ್ತಿ ಕನವರಿಸಿದ್ದೇನೆ. ಊಟ,ಉಪಹಾರವಿಲ್ಲದೇ ಸರಾಗವಾಗಿ ಜೀವನ ನಡೆಸಬಹುದು ಆದರೆ ಚಹಾಕನ್ನಿಕೆಯ ದರ್ಶನವಿಲ್ಲದ ನನ್ನ ಹೃದಯ ಮತ್ತು ಮನಸ್ಸುಗಳು ಕ್ಷಣಕಾಲವೂ ಬದುಕಿರಲಾರವು ಎಂಬುದು ನನ್ನ ಅನುಭವದ ಸಾರ!! ದೇವತೆಗಳು ಭೂಲೋಕದಲ್ಲಿ ಆಕಸ್ಮಾತ್ ಆಗಿ ಮರೆತು ಬಿಟ್ಟು ಹೋದ ಸುಧೆಯ ಮೂಲರಸಾಯನವೇ ಚಹಾ ಇರಬಹುದು ಎಂಬ ನನ್ನ ದೃಢ ಕಪೋಲ  ಕಲ್ಪನೆಗೂ ರೆಕ್ಕೆ ಕಟ್ಟಿ ಹಾರಿಸಿದ್ದೇನೆ. ಶಿವರಾತ್ರಿಯ ಉಪವಾಸ ನನ್ನಿಂದ ಸಾಧ್ಯವಾಗುವುದು ಅಮೂರ್ತ ಶಿವನೆಡೆಗಿನ ಭಕ್ತಿಗಿಂತ ಹೆಚ್ಚಾಗಿ  ಈ ಚಹಾಯಣದ ಅಮೂರ್ತ ಸಾಂಗತ್ಯದ ಆಧ್ಯಾತ್ಮದಿಂದ; ಆಸ್ವಾದದ ಎದೆಯಗಾನದ ಲಹರಿಯಿಂದ ; ಚಹಾಮಾಯಿಯನ್ನು ಅಪ್ಪಿಕೊಳ್ಳುವ  ಸುಖಲೋಲುಪತೆಯಲ್ಲಿ ಕಳೆದುಹೋಗುವುದರಿಂದ; ಚಹಾರಾಣಿಯ ಮಡಿಲಲ್ಲಿ ಮೈಮರೆಯುವ ಅಂತರ್ಧ್ಯಾನದಿಂದ. ಒಂದು ಬಾರಿ ಮಹತ್ವದ ಕಾರ್ಯಕ್ಕಾಗಿ ತಹಶೀಲ್ದಾರರ ಭೇಟಿಗೆ ಅಂದು ತುರ್ತಾಗಿ ಹೋಗಲೇಬೇಕಾಗಿ ಬಂದಾಗ ಮನೆಯಲ್ಲಿ ಉಪಹಾರದ ನಂತರ ಸಮಯವಿಲ್ಲದಿದ್ದರೂ ನಾನು ಹೋಗಿದ್ದು ಯಥಾಪ್ರಕಾರ ಚಹಾದ ಸುಖವನ್ನು ಹೊತ್ತುಕೊಂಡೇ. ಶಾಲಾ ಕರ್ತವ್ಯ ಮುಗಿಸಿ ಸರ್ವ ಶಿಕ್ಷಕ ಬಳಗವೆಲ್ಲಾ ದಂಡಿಯಾಗಿ ನೆರೆಯುತ್ತಿದ್ದ ಬಸ್ ನಿಲ್ದಾಣದ ಹತ್ತಿರ ನಿಂತು ಬಳಗದವರನ್ನೆಲ್ಲಾ ಕರೆದು, ಒಲ್ಲೆ ಎಂದವರನ್ನೂ ಕೇಳದೇ ಕೈಹಿಡಿದು  ಹತ್ತಿರದ ಚಹಾಶಾಲೆಯಲ್ಲಿ ಚಹಾವನ್ನು ಸ್ವಾದಿಸಿ ಖುಷಿಪಟ್ಟಿದ್ದುಂಟು. ಮತ್ತೆ ಹೊರಬಂದ ನಂತರ ಯಾರಾದರೂ ಹೊಸಬರು ಬಂದರೆ ಅವರನ್ನೂ   ಕರೆದೊಯ್ದು ಚಹಾ ಹೀರಿಸಿ ನಾವೂ ಹೀರಿ ಅತಿಸುಖವನ್ನು ಪಡೆದದ್ದಿದೆ. ಹೀಗೆ ಸರಿಯಾಗಿ ಲೆಕ್ಕ ಹಾಕಿದರೆ ನಾವು ಆ ದಿನಗಳಲ್ಲಿ ಪ್ರತಿದಿನ ಆನಂದಿಸುತ್ತಿದ್ದ  ನಮ್ಮ ಚಹಾಪ್ರಣಯ ಪ್ರಸಂಗದ ವಿಲಾಸವನ್ನು ನೀವು ಊಹಿಸಿಕೊಳ್ಳಬೇಕು.

ಚಹಾ ಜಗತ್ತಿನ ಅದ್ವಿತೀಯ ರಸಾಯನಗಳಲ್ಲಿ ಒಂದು. ಆಧುನಿಕ ಜಗತ್ತಿನ ಬೆಡಗಿನ ಒಯ್ಯಾರಿಯ ಸೆಳೆತಕ್ಕೆ ಸಿಕ್ಕ  ಚಹಾರಾಣಿ  ಗ್ರೀನ್ ಟೀ  ಎಂಬ ಹೊಸ ದಿರಿಸು ತೊಟ್ಟು ಕುಣಿಯುತ್ತಿದ್ದಾಳೆ. ಶುಂಠಿಯ ಕಷಾಯ, ಹೊನ್ನಂಬರಿ ಹೂಗಳ ಕಷಾಯ, ತುಳಸಿ ಕಷಾಯ, ಬೆಲ್ಲದ ಕಷಾಯ, ದಂತಹ ತರಹೇವಾರಿ ರೂಪಗಳನ್ನು ಹೊಂದಿರುವ ಈಕೆಯ ಬಿನ್ನಾಣಕ್ಕೆ ವೈದ್ಯಕೀಯ ಮಹಾಪರಂಪರೆಯ ಸೊಗಡಿದೆ.
ಮನೆಮದ್ದುಗಳಿಗೆಲ್ಲ ರಸರಾಣಿಯಾಗಿರುವ ಇವಳ ಸೌಗಂಧವೇ ಹಲವಾರು ಆಗಾಗ್ಗೆ ಬಂದುಹೋಗುವ  ಅತಿಥಿ ರೋಗಗಳನ್ನು ಗುಣಪಡಿಸಬಲ್ಲ ರಸೌಷಧಿ. ಶೀತವಾದಾಗ ನನ್ನವ್ವನ ಕೈಯ್ಯಲ್ಲಿ ಶುಂಠಿಯ ಕಷಾಯವಾಗುವ ಇವಳ ಘಾಟುತನ, ದೇಹ ಉಷ್ಣದಿಂದ ಬಳಲಿದಾಗ ಬೆಲ್ಲದ ಕಷಾಯವಾಗಿ ರೂಪು ಪಡೆಯುವ ಇವಳ ಮಾಧುರ್ಯ, ತಲೆನೋವೆನಿಸಿದಾಗ ಹೊನ್ನಂಬರಿ ಹೂಗಳ ಕಷಾಯದ ರೂಪದಲ್ಲಿ ನಾಲಿಗೆಯನ್ನಾವರಿಸುವ ಸವಿ, ಅಲರ್ಜಿಯಾದಾಗ ಮಸಾಲೆಯ ಕಷಾಯವಾಗಿ ಬರುವ ಇವಳ ಮಸಾಲೆಯ ಕಂಪುಗಳೀಗಲೂ ನನ್ನ ನಾಲಿಗೆಯ ರಸಗ್ರಹಣಿಗಳ ತುದಿಯ ಮೇಲೆ ಕುಣಿಯುತ್ತಿವೆ.  ಮನದ ಮೂಲೆಯಲ್ಲಿ ಇವುಗಳ ಆಸ್ವಾದನೆಯ ಸುವಾಸನೆ ಹಾಗೂ ರಸರುಚಿ ಸದಾ ಹಚ್ಚ ಹಸಿರಾಗಿ ಕಾಡುತ್ತಲೇ ಇರುತ್ತವೆ.  ಚಹಾ ಸಿಗದ ನಾಡಿಗೊಮ್ಮೆ ಪ್ರವಾಸ ಹೋಗಿದ್ದೆ. ಕೆಲವು ದೂರ ನಡೆದು ಎದುರಾದ ಗೂಡಂಗಡಿಗೆ ಗೆಳೆಯರೊಂದಿಗೆ ತೆರಳಿ " ಚಹಾ ಕೊಡಿ "  ಎಂದರೆ " ಚಹಾ ಮಾಡಲ್ಲ ಸರ್ " ಎಂದುಬಿಡಬೇಕೆ?  ಸುಮಾರು ಊರುಬಿಟ್ಟು ೩೦೦ ಕಿಲೋಮೀಟರ್ ದೂರದೂರು ತಲುಪಿದ ಪ್ರಯಾಣದ ಆಯಾಸವನ್ನು ಕಳೆದುಕೊಳ್ಳಬೇಕೆಂದರೆ ಚಹಾರಾಣಿಯ ಸುಳಿವೇ ನಮಗೆ ದಕ್ಕಲಿಲ್ಲ ಸಪ್ಪೆ ಮೋರೆ ಹಾಕಿಕೊಂಡು ಮತ್ತೆ ಮುಂದೆ ನಡೆದೆವು. ಆ ಊರು ಬಿಟ್ಟು ಬೇರೊಂದು ಊರಿಗೆ ಬಂದಾಗ ಓಯಸಿಸ್ ನಂತೆ ಎದುರಾದ  ಚಹಾಕನ್ನಿಕೆಯ ಆಲಿಂಗನದಿಂದ ಮುದ ಪಡೆದು ಚೈತನ್ಯಶೀಲರಾದೆವು.

ನಾನು ಡಿಇಡಿ ವ್ಯಾಸಂಗದ ನಿಮಿತ್ತ ಬೆಂಗಳೂರಿನ ವಿಜಯನಗರದ ವಸತಿನಿಲಯವೊಂದರಲ್ಲಿ ಎರಡು ವರ್ಷಗಳ ಆಶ್ರಯ ಪಡೆದಿದ್ದೆ. ನಿಲಯದಲ್ಲಿ ಚಹಾಸಂಸ್ಕೃತಿಯೇ ಇಲ್ಲದ್ದರಿಂದ  ಎಲ್ಲ ವಿದ್ಯಾರ್ಥಿಗಳು ಮುಗ್ಧತೆಯಿಂದ ಒಗ್ಗಿಕೊಂಡು ನಿರಾಳವಾಗಿದ್ದರೆ, ನಾನು ಮಾತ್ರ ಒಳಗೊಳಗೆ ಚಡಪಡಿಸುತ್ತಿದ್ದೆ. ಉಪಹಾರ ಭೋಜನಗಳಿಲ್ಲದ ಹಾಸ್ಟೆಲ್ ನಲ್ಲಿ ಬೇಕಾದರೆ ಇದ್ದು ಜಯಿಸಬಲ್ಲೆ  ಆದರೆ ಚಹಾ ಕೊಡದ ವಸತಿನಿಲಯದಲ್ಲಿ ಹೇಗಿರುವುದು?  ಎಂದುಕೊಂಡು ಬಹುಕಾಲ ಕಸಿವಿಸಿಪಟ್ಟಿದ್ದೇನೆ. ವಿದ್ಯಾಭ್ಯಾಸದ ಕನಸನ್ನು ನನಸು ಮಾಡಿಕೊಳ್ಳಲಿರುವ ಏಕೈಕ ಆಸರೆಯನ್ನು ಚಹಾಗೋಸ್ಕರ ತಿರಸ್ಕರಿಸುವ ಶಕ್ತಿ ಇಲ್ಲದ್ದರಿಂದ ಅನಿವಾರ್ಯವಾಗಿ ವಸತಿನಿಲಯದ ವಾತಾವರಣಕ್ಕೆ ಹೊಂದಿಕೊಂಡು ಪರ್ಯಾಯ ದಾರಿಯೊಂದನ್ನು ಕಂಡುಕೊಂಡೆ. ಪ್ರತಿದಿನ ಬೆಳಿಗ್ಗೆ   ಹಾಗೂ ಸಂಜೆ ಚಹಾರಾಣಿಯ ಭೇಟಿಗಾಗಿ ಒಂದು ಪ್ರಶಸ್ತವಾದ  ಭಟ್ಟರ ವಿಶೇಷ ಚಹಾಶಾಲೆಯೊಂದನ್ನು ( ಕೆಫೆ) ಗುರ್ತಿಸಿಕೊಂಡೆ.
ಪ್ರತಿದಿನ ಕಾಲೇಜು ಮುಗಿದ ನಂತರ ಮುಸ್ಸಂಜೆಯ ಮುಖಮಜ್ಜನದಲ್ಲಿ ಮಿಂದು ನವೋಲ್ಲಾಸದ ಮನಸು ಹೊತ್ತು  ವಾಯುವಿಹಾರಕ್ಜೆ ಹೊರಟೆನೆಂದರೆ ಅದು ಕೊನೆಯಾಗುವುದು ಚಹಾಮಣಿಯ ಲೀಲಾವಿಲಾಸದ ಸಮಾಗಮದೊಂದಿಗೆ ಎಂಬುದು ನಿಶ್ಚಿತವಾಯಿತು. ಹೀಗೆ ಕೆಲವು ದಿನ ಕಳೆದವು. ಪ್ರಾರಂಭದಲ್ಲಿ ಚಹಾಶಾಲೆಯ ಚಹಾ ಮೊದಲಿಗೆ ಸಪ್ಪೆಯೆನಿಸುತ್ತಿತ್ತು. ದಿನಗಳೆದ ನಂತರ ಚಹಾಶಾಲೆಯ ಮಾಣಿಯೊಂದಿಗೆ ಸ್ನೇಹ ಮಧುರವಾಗುತ್ತಾ ಹೋದಂತೆ  ನಮ್ಮ ಚಹಾಷೋಡಶಿಯು ಸಿಹಿಯಾಗುತ್ತಲೇ ಹೋದಳು. ಮಾಣಿಯೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಾ ಪುಸಲಾಯಿಸಿ ಬೇಕಾದಷ್ಟು ಸಕ್ಕರೆಯನ್ನು ಬೆರೆಸುವಂತೆ ಮಾಡಿ ಚಹಾರಾಣಿಯ ನೈಜ  ಸ್ವಾದವನ್ನು ಅನುಭವಿಸತೊಡಗಿದೆ. ಚಹಾರಾಣಿಯ ದರ್ಶನ ಅಪರೂಪವೆಂಬಂತಿದ್ದ ಕಾಫಿಜಗತ್ತಿನಲ್ಲಿ ಚಹಾಜೇನು ಸವಿದ ಆನಂದ ಪಡೆದು ತೇಲಾಡತೊಡಗಿದೆ.  ಹೀಗೊಂದು ದಿನ ಸಂಜೆ ಯಥಾಪ್ರಕಾರ ಚಹಾಶಾಲೆಯತ್ತ ಹೊರಟಾಗ ಜೇಬಿನಲ್ಲಿ ಬಿಡಿಪೈಸೆಯೂ ಇರಲಿಲ್ಲ. ಗೋಧೂಳಿಯ ಮುಹೂರ್ತ ಮೀರುವ ಮಹತ್ವದ ಘಳಿಗೆಯಲ್ಲಿ ಚಹಾರಾಣಿ ನನಗಾಗಿ ಕಾಯುತ್ತಿದ್ದಾಳೆ. ಮನಸು ಅವಳದೇ ನೆನಪಿನಲ್ಲಿ ಪಿಸುಗುಟ್ಟಿ ತೊಳಲಾಡುತ್ತಿದೆ. ಮನಸ್ಸು ಆಕೆಯನ್ನು ಬಿಟ್ಟು ಕದಲೊಲ್ಲದು. ಅತ್ತ ಊರಿನಿಂದ ಬರಬೇಕಾಗಿದ್ದ ಅವ್ವ ಕಳಿಸಿದ ದುಡ್ಡು ಇನ್ನೂ ತಲುಪಿರಲಿಲ್ಲ. ಏನು ಮಾಡುವುದು ಎಂದು ತೋಚದಾದಾಗ ಗೆಳೆಯನೊಬ್ಬನ ಹತ್ತಿರ 'ಸಾಲ ಮಾಡಿಯಾದರೂ ತುಪ್ಪ ತಿನ್ನು' ಎಂಬಂತೆ ಸಾಲ ಪಡೆದಾದರೂ ಅವಳ ಸಂಗಡ ಈ ಸಂಜೆ ಮಾತಿಗಿಳಿಯಲೇಬೇಕು. ನನ್ನೆದೆಯೊಳಗೆ ಅವಳ ಮಾತಿನ ಸವಿಯನ್ನಿಳಿಸಿಕೊಂಡು  ಕಾಪಿಟ್ಟುಕೊಳ್ಳಲೇಬೇಕಾಗಿತ್ತು. ಹೀಗೆ ಅವಳತ್ತ ವಿಭವದಿಂದ  ಜಾರುವ ಮನದ ನೂರಾರು ಮಾತುಗಳನ್ನು ಅಂತರಾಳದಲ್ಲಿ ಕಟ್ಟಿಕೊಂಡೇ  ನೂರು ರೂಪಾಯಿ ಸಾಲ ಪಡೆದು ನೇರವಾಗಿ ಅವಳಿರುವಲ್ಲಿಗೆ  ಹೋಗಿ ಅವಳೊಂದಿಗೆ ಸಲ್ಲಾಪಕ್ಕಿಳಿದೆ. ಗುಟುಕು ಗುಟುಕಾಗಿ ಅವಳೊಂದಿಗೆ ಹಂಚಿಕೊಂಡ ರಸನಿಮಿಷಗಳನ್ನು  ಅಂತರಂಗದಲ್ಲಿಳಿಸಿಕೊಂಡು ಹರ್ಷಗೊಂಡೆ. ಇಂತಹ ಸವಿಸಮಯವನ್ನು ಕದ್ದೊಯ್ದು ಕಳೆದುಕೊಳ್ಳುವಂತೆ ಮಾಡುತ್ತಿದ್ದ ಆರ್ಥಿಕ  ದುರಾದೃಷ್ಟವನ್ನು ನೆನೆದು  ಶಪಿಸಿಕೊಂಡೆ. ಹೀಗೆ ಸಾಗಿತ್ತು ಚಹಾಸಖಿಯೊಂದಿಗಿನ ನನ್ನ ಪ್ರಣಯಗೀತೆ. ಮತ್ತೊಮ್ಮೆ  ಕೈಯ್ಯಲ್ಲಿ ಹಣವಿಲ್ಲದ ಬಡಪಾಯಿ ಪರಿಸ್ಥಿತಿಯೊದಗಿ ಬಂದಾಗ ನೇರವಾಗಿ ಚಹಾಶಾಲೆಯ ಮಾಲೀಕ ಭಟ್ಟರ ಹತ್ತಿರವೇ ನನ್ನ ಹೆಸರಿನ ಮೌಖಿಕ ಖಾತೆಯೊಂದನ್ನು ತೆರೆದು ಸಾಲ ಕೇಳಿದ್ದೆ. ಅವರ ದೃಷ್ಟಿಯಲ್ಲಿ ಯಕಃಶ್ಚಿತ ಚಹಾದ ಸಾಲವಾಗಿದ್ದರೆ, ನನಗದು ಚಹಾ ರಾಣಿಯೊಂದಿಗೆ ಸಮಯ ಕಳೆಯಲು  ಅಡೆತಡೆಯಿಲ್ಲದೆ ಕನಿಷ್ಠ ಹಣದ ಭಯವಿಲ್ಲದೆಯೂ ಚಹಾಶಾಲೆಯನ್ನು ಮುನ್ನುಗ್ಗಲು ಅಧಿಕೃತ ಲೈಸೆನ್ಸ್ ದೊರೆತಂತಾಗಿತ್ತು. ಯಾರ ಅಪ್ಪಣೆಗೂ ಕಾಯದೇ ಸಂಜೆಯನ್ನು ಸಾರ್ಥಕಗೊಳಿಸಿಕೊಳ್ಳುವ ನನ್ನ ಪ್ರಯತ್ನಕ್ಕೆ ತಾತ್ಕಾಲಿಕ ಯಶಸ್ಸು ದೊರೆತಿತ್ತು. ಕೊನೆ ಕೊನೆಗೆ ಚಹಾರಾಣಿಯೊಂದಿಗಿನ ಬಿಡುವಿಲ್ಲದ ಸಹವಾಸ ಕಂಡ ಭಟ್ಟರು ಚಹಾಶಾಲೆಯ ಖಾಯಂ ಗಿರಾಕಿಯೆಂದುಕೊಂಡು ಸಾಲವನ್ನು ಬರೆದುಕೊಳ್ಳಹತ್ತಿದರು.
ಚಹಾಕಿಶೋರಿಯೊಂದಿಗಿನ ನಮ್ಮ ಅವಿನಾಭಾವ ಸಂಬಂಧವನ್ನು ಕಂಡ ಮಾಲೀಕ ನಮಗೆ ಆರ್ಥಿಕ ಸಂಕಷ್ಟ ಎದುರಾದಾಗ ಹಣದ ಸಾಲವನ್ನೂ ನೀಡಿ ಕೈಹಿಡಿದು ಮುನ್ನಡೆಸಿದನೆಂದರೆ, ಚಹಾದ ಸಂಗ ಹೆಜ್ಜೇನು ಸವಿದಂತಾಗಿತ್ತು ನನಗೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಾತ್ರ ಮಲ್ಲಿಗೆಯಿರಲೇಬೇಕೆಂಬಂತಾಗಿತ್ತು ಚಹಾದೆಡೆಗಿನ ನನ್ನ ಪ್ರೀತಿ.
ಹೀಗೆ ಎರಡು ವರ್ಷದ ಬೆಂಗಳೂರಿನ ಚಹಾಬೆಡಗಿಯ ಸಾಂಗತ್ಯ ನನಗೆ ಚಹಾಶಾಲೆಯ  ಹೊಸ ಆಪ್ತ ಗೆಳೆಯರನ್ನು ಪರಿಚಯಿಸಿತ್ತು.
ಮನೆಯಲ್ಲಿನ ಹಿಂಡು ಮಂದಿಗೆ ಮಾಡುವ ಚಹಾ ನನಗೆ ಅಷ್ಟಾಗಿ ಸೆಳೆಯುತ್ತಿರಲಿಲ್ಲ. ಪರಿಹಾರವಾಗಿ ಮನೆಮಂದಿಗೆಲ್ಲ ಚಹಾ ತಯಾರಿಸುವ ಪಾಠವನ್ನು ಆಗಾಗ ಪ್ರಾತ್ಯಕ್ಷಿಕೆಯ ಮೂಲಕ   ಹೇಳಿಕೊಟ್ಟಿದ್ದಿದೆ. ಹದಬೆರೆತ  ರಸಾಯನವೇ ನನಗಿಷ್ಟವೆಂದು ಅವ್ವ ನನಗಾಗಿ ಮಾಡುವ ಚಹಾ ಗಾಗಿ ಕಾದು ಕುಳಿತಿರುತ್ತಿದ್ದೆ. ಅಂದು ಚಹಾಗೆಳತಿಯ ದರ್ಶನವಾಗದಿದ್ದಾಗ ಚಡಪಡಿಸಿ ಅಡುಗೆಮನೆಗೆ ಹೋಗಿ  ಬೆಳದಿಂಗಳು ಬಣ್ಣದ ಹಾಲಿನಲ್ಲಿ ಕೆಂಬಣ್ಣದ ಚಹಾದೆಲೆಗಳನ್ನುದುರಿಸಿ ಅಗ್ನಿಹಂಸದ ತೂಲಿಕಾತಲ್ಪದಲಿಟ್ಟು ಚೆನ್ನಾಗಿ ಕುದಿಸುತ್ತಾ ತಪದಂತೆ ಕಾದಿದ್ದೇನೆ.ನನ್ನ ಮೇಲಿನ  ಪ್ರೀತಿಯುಕ್ಕಿ ಪಾತ್ರೆಯೊಳಗಿಂದ ಮೇಲೆ ಹಸನ್ಮುಖಿಯಾಗಿ ಬಂದ ನೊರೆಯ ಮುತ್ತುಗಳನ್ನು   ಕಂಡು ಹರ್ಷಗೊಂಡಿದ್ದೇನೆ. ಕೊನೆಗೆ ಹದವಾದ ಸಕ್ಕರೆಯನ್ನು ಬೆರೆಸಿ ಘಮಘಮಿಸುವ ಪರಿಮಳದಲ್ಲಿ ಮೈಮರೆತು ಸಮಾಧಿಗೇರಿದ್ದೇನೆ. ಶೋಧಿಸುವಾಗ ಹೊರಟ ಸುಮಧುರ ಸುವಾಸನೆಯನ್ನು ಹೀರಿ ಸಂಭ್ರಮಿಸಿದ್ದೇನೆ. ಶ್ವೇತಸುಂದರಿಯಂತಿರುವ ಮಗ್ಗಿನೊಳಗೆ ಒಯ್ಯಾರದಿಂದ ನರ್ತಿಸಿತ್ತಿದ್ದ ಹಾಲುಗೆನ್ನೆಯ ಚಹಾಚೆಲುವೆಯನ್ನು ಕಂಡು ಹಿಗ್ಗಿದ್ದೇನೆ.

ಚಹಾ ಎಂಬುದು ನನ್ನ ಪಾಲಿಗೆ ಕೇವಲ ಕರ್ಮೋಪಚಾರಕ್ಕಾಗಿ ಸೇವಿಸುವ ಭೌತಿಕ ದ್ರಾವಣವಲ್ಲ. ಯಾಂತ್ರಿಕವಾಗಿ ಕ್ಷಣಮಾತ್ರ ಭುಜಿಸಿ ಮತ್ತೆ ಅರೆಗಳಿಗೆಯಲ್ಲಿ ಮರೆತುಬಿಡುವ  ಹಾಲು ಸಕ್ಕರೆಗಳ ಮಿಶ್ರಣ ಮಾತ್ರದ ರಸಾಯನವಲ್ಲ. ಕೇವಲ ಆಯಾಸ ಕಳೆಯಲಿಕ್ಕಾಗಿ ಇರುವ ಉಪಚಾರದ ಪಾನೀಯವೂ ಅಲ್ಲ .ಚಹಾ ಎಂದರೆ ನನ್ನೊಳಗೆ ಸದಾ ರಿಂಗಣಿಸುವ ಪ್ರಣಯಗೀತೆ; ಹೃದಯದೊಳಗೆ ಜುಳು ಜುಳು ಎಂದು ಹರಿಯುವ ಝರಿಯ  ನಿನಾದ; ಮನದೊಳಗೆ ಕೋಗಿಲೆಯ ಧ್ವನಿಯಂತೆ ಇಳಿಯುವ ರಸಗಾನ; ಮನಕಡಲಿನ ಮೇಲೆ ಕುಣಿಯುವ ಅಲೆಗಳ ಬಣ್ಣಿಸಲಾಗದ ಮೌನರಾಗದ ಮೊರೆತ; ಗುಟುಕು ಗುಟುಕಾಗಿ  ನಾಲಿಗೆ ಚಪ್ಪರಿಸಿ ಹೀರಿ ಅದರಲ್ಲಿಯೇ ಲೀನವಾಗುವಂತೆ ಸೆಳೆಯುವ ಅಮೃತಧಾರೆಯ ಜೇನಹನಿ; ನೆನಪು ಮಾತ್ರದಿಂದಲೇ ಚಿಮ್ಮಿ ಉತ್ಸಾಹ ಉಕ್ಕಿಸುವ ಚಿಲುಮೆಯೊರತೆ. ಚಹಾ ಎಂದರೆ ಭಾವದೊಳಗಿನ ಬಂಧುರ ಒಲವಿನೊಳಗಿನ ಮಂದಾರ. ಶ್ರಾವಣದ ಇಳೆ ಮಳೆಗಳೊಂದಿಗಿನ ಅನುಸಂಧಾನ ಬೇಂದ್ರೆಯವರಂತಹ ಆರಾಧಕರಲ್ಲಿ ಕಾವ್ಯದ ಮೂಲಕ ಸಾಧ್ಯವಾಗಿದೆ. ಕವಿಸೂರಿಗಳದು ಪ್ರಕೃತಿ ಆರಾಧನೆಯಾದರೆ ನನ್ನದು ಚಹಾರಾಧನೆ. ಆಷಾಢದ ಜಿಟಿ ಜಿಟಿ ಜಡಿ ಮಳೆಯಲ್ಲಿ  ಚಹಾಶಾಲೆಯ ಮುಂದೆ ನಿಂತು ಬಿಸಿ ಬಿಸಿಯಾದ ಚಹಾಮಾಯಿಯ ಹನಿ ಹನಿಯ ಗುಟುಕುಗಳ ಮಾಯೆಗೆ ಕರಗುವುದೆಂದರೆ  ಪ್ರಕೃತಿಯಲ್ಲಿನ ಪಾರಮಾರ್ಥಕ್ಕೆ ಪಯಣ ಹೊರಟಂತೆ. ಚಹಾರಾಣಿಯೊಂದಿಗಿನ ಎನ್ನ ಒಡನಾಟ ಇಂದು ನಿನ್ನೆಯದಲ್ಲ, ನನ್ನೆದೆಯೊಳಗೆ ಇಷ್ಟೊಂದು ಆಳವಾಗಿ ಮೈಚಾಚಿಕೊಂಡು ಹರಡಿ ಮೈಮನಗಳನ್ನು ತುಂಬಿಕೊಂಡಿರುವ ಇದರ ಭಾವಗೀತೆಗಳ ಆಲಾಪವನ್ನು ಬಾಲ್ಯದಿಂದಲೂ ಆಲಿಸಿಕೊಂಡು ಬಂದಿದ್ದೇನೆ.
ಇಲ್ಲಿಯವರೆಗೂ ಆಕೆ (ಚಹಾಮಾಯಿ) ಕಟ್ಟಿಕೊಟ್ಟಿರುವ ಸವಿನೆನಪುಗಳನ್ನು ರೆಕ್ಕೆ ಮೂಡುವವರೆಗೂ ನನ್ನದೆಯ ಗೂಡಿನಲ್ಲಿ ಮರಿಹಕ್ಕಿಗಳಂತೆ ಜತನದಿಂದ ಕಾಪಿಟ್ಟುಕೊಂಡು ಬಂದಿದ್ದೇನೆ.ಭಾವಗಳಿಲ್ಲದೇ ಬತ್ತಿ ಕೊರಡಾಗುವ ಘಳಿಗೆ ಎದುರಾದಾಗ, ಈ ನೆನಪುಗಳನ್ನು ಹೆಕ್ಕಿ ತೆಗೆದು ಆನಂದಿಸಿ, ಮತ್ತೆ ಮತ್ತೆ ಚಹಾ ರಾಣಿಯ ಸಾಂಗತ್ಯವನ್ನು   ಸವಿದಿದ್ದೇನೆ. ನನ್ನಲ್ಲಿ ಚಹಾ ಹುಟ್ಟಿಸಿದ ಭಾವಯಾಣ ಅನುಪಮವಾದದ್ದು, ಅನೂಹ್ಯವಾದದ್ದು. ಆರೋಗ್ಯದ ಲಯ ತಪ್ಪಿದಾಗ ಚಹಾ ತ್ಯಜಿಸಬೇಕೆಂದು ಹೇಳಿದ
ವೈದ್ಯರನ್ನು " ನಿಮಗೇನು ಗೊತ್ತು ಚಹಾದ ಗಮ್ಮತ್ತು ಕುಡಿದರಿಲ್ಲ ಜೀವಕೇನೂ ಆಪತ್ತುಬಿಟ್ಟರೆ ನನಗೆ ಅದೇ ವಿಪತ್ತುಸವಿಯಲು ನನಗಿಲ್ಲ ಹೊತ್ತು ಗೊತ್ತು ಎತ್ತಣ ಮಾಮರ ಎತ್ತಣ ಕೋಗಿಲೆ ?" ಎಂದು ಹೀಗಳೆದಿದ್ದೇನೆ.  ಬಹುಶಃ ಚಹಾ ಸೇವನೆಯಲ್ಲಿ ತಪ್ಪಿದ ಲಯವೇ ಆರೋಗ್ಯವನ್ನು ಹದಗೆಡಿಸಿರಬೇಕು ಎಂಬ ಬಲವಾದ ನಂಬಿಕೆ ನನ್ನದು!
"ನೀನೆಂದರೆ ಮಧುರಗಾನಸವಿಜೇನಿನ ರಸಪಾನಹಿಗ್ಗುತಿರುವೆ ಮನದುಂಬಿಹೊರಟಿರುವೆ ಭಾವಯಾಣ
ಹಾಲುಗೆನ್ನೆಯ ಚೆಲುವೆಕೆಂಬಣ್ಣದ ಮೈಮನವೆಇಳಿದು ಬಾ ಮಹಾರಾಣಿದೇವಲೋಕದ ಸುರಪಾಣಿ
ಮಹಾದಿವ್ಯದ ಸಂಗತದಿವದೆಡೆಗಿನ ನವನೀತನಿನ್ನೊಲುಮೆಯ ಕೈಸೆರೆನನ್ನನಾಳುವ ಸುಮಧುರೆ
ಮುತ್ತು ರತ್ನ ಹವಳ ನೊರೆಕೇಳುತಿರು ನನ್ನ ಮೊರೆಮಹಾಸಂಗಮ ಆಲಿಂಗನಎದೆಯುಕ್ಕುವ ರಸಚೇತನ
ಮಾಧುರ್ಯದ ರಸಪಾಕಚಹಾಶಾಲೆಯೇ ಸವಿನಾಕ
ಎಂದು ಚಹಾಷೋಡಶಿಯೊಂದಿಗಿನ ಪಿಸುಮಾತು ನನ್ನಲ್ಲಿ ಹರ್ಷೋಲ್ಲಾಸದ ಹೊಳೆಯನ್ನು ಹರಿಸುತ್ತದೆ. ಘಳಿಗೆಗೊಮ್ಮೆಯ ಆಕೆಯ ಭೇಟಿ  ಎನ್ನ  ಹೃದಯವನ್ನು ರಸಾನಂದದ ಕಡಲಾಗಿ ಪರಿವರ್ತಿಸುತ್ತದೆ.ಚಹಾರಾಣಿಯನ್ನು ನೆನೆದಾಗಲೆಲ್ಲಾ -
"ಹರಿಯಬೇಕು ಆಕೆ ಕರೆದಲ್ಲಿಹೊರಡಬೇಕು ಆಕೆ ಬಯಸಿದಲ್ಲಿನಡೆಯಬೇಕು ಜೊತೆಯಾಗಿಕೈಹಿಡಿದು ಮಾತಾಗಿಸಲ್ಲಾಪದ ಸವಿಜೇನುಸವಿಯಬೇಕು ಎದೆತುಂಬಿಗುಟುಕು ರಸ ತಣಿಯಬೇಕುಹೀರಿ ಮತ್ತೆ ನೆನೆಯಬೇಕು
ಎಂದು ಪದೇ ಪದೇ ಆಕೆಯ ಸುತ್ತ ಸುಳಿದು ಸೇವಿಸಲೇಬೇಕೆನ್ನಿಸುತ್ತದೆ. ನನಗೆಚಹಾಸೇವನೆ ಎಂದರೆ ನಿತ್ಯ ವೈಭವದ ಮೆರವಣಿಗೆಯ ಮಹಾನವಮಿ ಹಬ್ಬವಾಚರಿಸಿದಂತೆ. ಬಿದಿಗೆಯ ಚಂದ್ರನ ಬೆಳ್ಳಿಯ ಬೆಳಕು ಅಂತರಾಳಕ್ಕಿಳಿದು ಹೊಳೆದು ಬೆಳಗಿದಂತೆ. ಚೈತನ್ಯದ ಕಡಲುಕ್ಕಿ  ಅಲೆ ಅಲೆಯಾಗಿ ಹರಿದು ನಾದಗೈದು ವಿಜೃಂಭಿಸಿದಂತೆ.
"ಮುಗ್ಧ ಮಗುವಿನಂತೆ ಚಹಾವೇಣಿಯ ಮೊಗ್ಗು  ಹಿಡಿದು ಮೇಲೆತ್ತಿ ಬಾಯಿಚಪ್ಪರಿಸಿ ನಾಲಿಗೆ ಸವರಿದಾಗಲೇ ರಸರುಚಿಯ ದರ್ಶನಾನುಭವ ದಕ್ಕುವುದು. ರಸಾಂಕುರಗಳಿಗೆ ನೈಜ ರಸಾನುಭವದ ಸಾಕ್ಷಾತ್ಕಾರವಾಗುವುದು. ಭಾವಗಳ ಮುಗ್ಧತೆ ಹೇಗೆ ಕಾವ್ಯವೊಂದರ ಹುಟ್ಟಿಗೆ ಕಾರಣವಾಗಬಲ್ಲದೋ ಹಾಗೆ ಪೂರ್ವಾಗ್ರಹಗಳಿಲ್ಲದೇ,  ಮುಗ್ಧತೆಯಿಂದ ಹೀರುವ ಚಹಾದ  ಸ್ವಾದಸುಖವೂ ಕಾವ್ಯಾನಂದವನ್ನು ಹುಟ್ಟಿಸಬಲ್ಲದು. ಕಾವ್ಯ ಮತ್ತು ಚಹಾಗಳ ಅದೈತ ಸಂಗಮಸುಖವನ್ನು ಶ್ರಧ್ಧೆಯಿಂದ ಅನುಭವಿಸಿದ್ದೇನೆ ನಾನು. ವೈದೇಹಿಯವರ
"ತಿಳಿಸಾರು ಎಂದರೆ ಏನೆಂದುಕೊಂಡಿರಿ?ಅದಕ್ಕೂ ಬೇಕು ಒಳಗೊಂದು ಜಲತತ್ವ-ಗಂಧತತ್ವ -ಕುದಿದು ಹದಗೊಂಡ ಸಾರತತ್ವ "
ಎಂಬ  ಕಾವ್ಯಾಲಾಪದಂತೆ ಸಕ್ಕರೆ ಹಾಲು, ಚಹಾದೆಲೆಗಳು ಹದವಾಗಿ ಬೆರೆಯಲು ಗಂಧತತ್ವ ಜಲತತ್ವ ಹಾಗೂ ಸಾರತತ್ವಗಳ ತಿಳುವಳಿಕೆ ಅತ್ಯಗತ್ಯ. ಈ  ತ್ರಿವಿಧ ಸಂಗತಿಗಳ ಹದಭರಿತ ಸಮರಸದ ಸಂಗಮವೇ ಚಹಾರಸಾಯನದ ತಿರುಳು.
ನನ್ನೂರು ಗುಳೇದಗುಡ್ಡ  ನೇಕಾರಿಕೆಯ ನೂಲಿನ ಬಳ್ಳಿಯನ್ನೆ  ತಮ್ಮ ಬದುಕಿನ ಸುತ್ತ ಹಬ್ಬಿಸಿಕೊಂಡ ಕರಕುಶಲಿಗರ ನಾಡು. ರಂಗಭೂಮಿ, ಬಯಲಾಟ, ಸಂಗೀತ,ಚಿತ್ರಕಲೆ ಗಳೊಂದಿಗೆ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯ ಚಾಲುಕ್ಯರಾಳಿದ ಬೀಡು. 
ಇಂತಹ ಹೊನ್ನಾಡಿನಲ್ಲಿ  ಕುಶಲೋದ್ಯಮದ ಜೊತೆಜೊತೆಗೆ ಚಹಾಸಂಸ್ಕೃತಿಯೊಂದು ಮೈದಾಳಿರುವುದು ಇಲ್ಲಿಯ ವಿಶೇಷ. ಪ್ರತಿ ಒಂದು ಮೀಟರ್ ನೇಯ್ಗೆಗೊಂದು ಕಪ್ ಚಹಾ ಈ ಕರ ಕುಶಲಿಗರ ದೇಹದ ದೇಗುಲಕ್ಕರ್ಪಣೆಯಾಗಲೇಬೇಕು. ಒಂದು ಹೊತ್ತಿನ ಉಪಹಾರ, ಭೋಜನವಿರದಿದ್ದರೂ ನಡೆದೀತು ಆದರೆ ಚಹಾ ಇರದ ಕ್ಷಣಗಳನ್ನು ಈ ಕುಶಲಿಗಳು ಕಳೆಯಲಸಾಧ್ಯವೆನ್ನುವಷ್ಟರ ಮಟ್ಟಿಗೆ ಇಲ್ಲಿಯ ಬದುಕು ಚಹಾಗೊಡ್ಡಿಕೊಂಡಿದೆ. ಪೂರ್ವಾಶ್ರಮದ ನೇಯ್ಗೆಯ ಪ್ರಭಾವವೋ ಏನೋ ಘಳಿಗೆಗೊಮ್ಮೆ  ನನ್ನವ್ವನಿಗೆ ಹಾಗೂ ನನಗೆ ಚಹಾ ಅಮೃತ ಚೈತನ್ಯವನ್ನು ನೀಡಲೇಬೇಕು. ನನ್ನ ಮನೆಯ ಪಕ್ಕದ ಚಹಾಶಾಲೆಯಲ್ಲಿ ಚಹಾದ ದರ ಈಗಲೂ ೨ ರೂಪಾಯಿಗಳೆಂದರೆ ಚಹಾ ಎಷ್ಟೊಂದು ಅಗ್ಗದ ಸಂಗತಿಯಾಗಿ ನನ್ನೂರನ್ನು ಆವರಿಸಿಕೊಂಡಿದೆ  ಎಂಬುದನ್ನು ಅರ್ಥೈಸಿಕೊಳ್ಳಬಹುದು. ಡಾ.ರಾಜಶೇಖರ ಮಠಪತಿ (ರಾಗಂ) ರವರು, ಹದಿನಾರು ವರ್ಷಗಳ ನಂತರವೂ  ಒಂದೇ ಒಂದು ಪೈಸೆಯಷ್ಟು ಬೆಲೆಯನ್ನೂ ಹೆಚ್ಚಿಸಿಕೊಳ್ಳದ ರೂ. ೨ ರ ಒಂದು ಕಪ್  ಚಹಾ ಹಾಗೂ 'ಚಟಕ್ ಪಟಕ್ ' ಎಂದು ಲಯಬದ್ಧವಾಗಿ ನುಡಿಯುತ್ತಿರುವ ಅದೇ ಮಗ್ಗಗಳ ನಿನಾದ ಬದಲಾಗದ್ದನ್ನು ಗಮನಿಸುತ್ತಾ  "ನಾ ಕಂಡಂತೆ ಒಂದೂವರೆ ದಶಕದ ನಂತರವೂ ಕೇವಲ ಚಿಕ್ಕ ಪುಟ್ಟ ಸ್ಥಿತ್ಯಂತರಗಳನ್ನು ಹೊರತುಪಡಿಸಿ ಮೂಲಸ್ವರೂಪವನ್ನು ಬದಲಿಸಿಕೊಳ್ಳದೇ ತನ್ನ ಪರಂಪರೆ ಹಾಗೂ ಸತ್ವವನ್ನು ಉಳಿಸಿಕೊಂಡ ಕರ್ನಾಟಕದ ವಿರಳಾತಿವಿರಳ ಪುರಗಳಲ್ಲಿ ಒಂದು ಗುಳೇದಗುಡ್ಡ " ಎಂದು  ಬಣ್ಣಿಸಲ್ಪಟ್ಟ ಊರಿನಲ್ಲಿ ಇಂದಿಗೂ ಚಹಾದೊಂದಿಗಿನ ಸಂಗತಿಗಳಾವವೂ ಆಧುನಿಕ ಯುಗದ ಯಾವ ಸೆಳೆತಗಳಿಗೂ ಒಳಗಾಗಿಲ್ಲ. ನೇಕಾರಿಕೆ ಹಾಗೂ ಉಪಕಸುಬುಗಳ ಕುಶಲವೃತ್ತಿಗಳ ಜೊತೆ ಜೊತೆಗೆ ಬೆಳೆದು ಬಂದಿರುವ ಈ ಚಹಾ ಸಂಸ್ಕೃತಿ ಆತಿಥ್ಯದ ಹೊಸ ಪರಿಭಾಷೆಯೊಂದನ್ನು ಕಟ್ಟಿ  ಕೊಟ್ಟಿದೆ. ಅಬಾಲವೃದ್ಧರಾದಿಯಾಗಿ  ಮನೆಗೆ ಬರುವ ಸಕಲ ಅತಿಥಿಗಳು ಕನಿಷ್ಠ ಚಹಾತಿಥ್ಯವನ್ನಾದರೂ ಸ್ವೀಕರಿಸಲೇಬೇಕು. ಇದು ಅಘೋಷಿತ ಅತಿಥಿ ಸತ್ಕಾರದ ನಿಯಮ. ಯಾರಾದರೂ ಅತಿಥಿಗಳು ಮನೆಗೆ ಬಂದರೆ ಸಾಕು ಚಹಾದ ಪಾತ್ರೆ ಅಗ್ನಿಹಂಸವನ್ನೇರಲೇಬೇಕು.  ಚಹಾ ನನ್ನೂರಿನ ಕರಕುಶಲಿಗಳ ಕಾಯಕಕ್ಕೆ ಉತ್ಸಾಹದ ಚಿಲುಮೆಯಾಗಿರುವಂತೆ, ಬಂಧುಗಳೆಡೆಗಿನ ಪ್ರೀತಿ ವಾತ್ಸಲ್ಯದ  ದ್ಯೋತಕವೂ ಆಗಿದೆ. ಆತಿಥ್ಯದ ಸಂಕೇತವಾಗಿರುವ 'ಚಹಾ'ವನ್ನು  ಅತಿಥಿಗಳು ನಿರಾಕರಿಸಿದರೆ ಸಾಕು ಬೇಡದ ಮುನಿಸು ತಪ್ಪಿದ್ದಲ್ಲ. ಅನುಬಂಧದ ಪ್ರತೀಕವಾಗಿರುವ  ಚಹಾವನ್ನು ಸ್ವೀಕರಿಸಲೇಬೇಕು.ಚಹಾತಿಥ್ಯ ಸತ್ಕಾರ ಆತಿಥೇಯರಲ್ಲಿ ಅವರ್ಣನೀಯ ಆನಂದವನ್ನು ತಂದರೆ ಅತಿಥಿಗಳಲ್ಲಿ ವಾತ್ಸಲ್ಯದ ಸುಮವನ್ನು ಅರಳಿಸುತ್ತದೆ.  ಸಂಬಂಧಗಳನ್ನು  ಗಟ್ಟಿಯಾಗಿ ಬೆಸೆಯುವ ಸೇತುವೆಯಾಗಿ ಚಹಾದ ರಾಯಭಾರಿತನ ತಲೆದೂಗುವಂತಹುದು. ಮನೆಯವರಗೆ ಜಗಳವಾಡಲು ಬಂದವರಿಗೂ ಕುಳ್ಳಿರಿಸಿ ಚಹಾದಿಂದ ಸತ್ಕರಿಸುವಂತಹ ಅತಿಥಿ ಔದಾರ್ಯ ಅನಿಕೇತನವಾದದ್ದು. ಚಹಾ ಬಂಧುತ್ವದ ಸೇತುವೆಯಾಗಿರುವಂತೆಯೇ  ಋಣದ ಪ್ರತಿನಿಧಿಯೂ ಆಗಿದೆ. ಬಗೆಹರಿಯಲಾರದ ಎಷ್ಟೋ ವಿವಾದಗಳು ಚಹಾದ ಬಾಂಧವ್ಯ ಮಾತ್ರದಿಂದ ಮಾಯವಾಗಿದ್ದನ್ನು ಕಂಡಿದ್ದೇನೆ. ಪರರ ಮನೆಯ ಚಹಾದ ಋಣ ಬಗೆಯಬೇಕಾದ ದುಷ್ಟರ ದ್ರೋಹಗಳನ್ನು, ಅಪನಂಬಿಕೆಗಳನ್ನು ತಿಳಿಗೊಳಿಸಿ ತಣ್ಣಗಾಗಿಸಿದ್ದನ್ನು ತಿಳಿದಿದ್ದೇನೆ. ಮನುಷ್ಯ- ಮನುಷ್ಯರ ಮಧ್ಯದ ದ್ವೇಷ, ವಿರಸ,ವೈರತ್ವಗಳಿಗೆ ರಾಮಬಾಣದ ಔಷಧಿಯಾಗಬಲ್ಲ ಶ್ರೇಷ್ಠ ಚಿಕಿತ್ಸಾಗುಣ ನಮ್ಮೂರಿನ ಚಹಾದಲ್ಲಿದೆ. 
ಸಂಜೆಯಾದರೆ ಸಾಕು ನಮ್ಮೂರಿನ ತರಕಾರಿ ಉಪ ಮಾರುಕಟ್ಟೆ ಹರಟೆಯ ಕೇಂದ್ರವಾಗಿ ಬದಲಾಗುತ್ತದೆ. ಹೀಗೆ ಸೂರ್ಯಾಸ್ತವಾಗುತ್ತಲೇ ಸೂಜಿಗಲ್ಲಿನಂತೆ ಹರಟುವವರನ್ನಾಕರ್ಷಿಸಿ ತನ್ನತ್ತ ಸೆಳೆಯುವ  ಮಾಂತ್ರಿಕನೆಂದರೆ  'ಚಹಾಮಣಿ'. ಪ್ರತಿನಿತ್ಯ ಈ ಮುಸ್ಸಂಜೆಯ ಹರಟೆಯನ್ನು  ಜಾತ್ರೆಯೆಂಬಂತೆ ಪರಿಪಾಲಿಸಿಕೊಂಡು ಬಂದಿದ್ದಾರೆ ಇಲ್ಲಿಯ ಜನ. ಇಲ್ಲಿ ಜಾಗತಿಕವಲ್ಲದೇ, ಕೇಂದ್ರದಿಂದ ಹಿಡಿದು ಗ್ರಾಮಮಟ್ಟದವರೆಗಿನ ಸಮಕಾಲೀನ ರಾಜಕೀಯ, ಸಾಮಾಜಿಕ, ಆರ್ಥಿಕ,ಆಧ್ಯಾತ್ಮಿಕವಾದ ಸೂಕ್ಷ್ಮ  ಒಳನೋಟಗಳ ಚರ್ಚೆಯಿದೆ; ಊರಿನಲ್ಲಿ ಜರುಗುತ್ತಿರುವ ಹಾಗೂ ಜರುಗಿದ ಪ್ರಸ್ತುತ ವಿದ್ಯಮಾನಗಳ ಕುರಿತು ಸಂವಾದವಿದೆ; ಅಂದು ಗಮನಸೆಳೆದಿರುವ ಊರಿನ ಪ್ರಮುಖ ಸಂಗತಿಗಳ ಕುರಿತು ಮಾತುಗಳಿವೆ; ಸ್ನೇಹಿತರು, ದಾಯಾದಿ ಸಂಬಂಧಿಗಳ ಮಧ್ಯದ  ವಾದವಿವಾದಗಳ ವಿವೇಚನೆಯಿದೆ;  ಕೌಟುಂಬಿಕ, ಸಾಮಾಜಿಕ,ಆರ್ಥಿಕ,ನೈತಿಕ, ಸಾಂಸ್ಕೃತಿಕ ಅಲ್ಲದೇ ಪಾರಮಾರ್ಥಿಕ ಸಂಗತಿಗಳ ವ್ಯಾಖ್ಯಾನಗಳಿವೆ; ಸಂಬಂಧಿಕರ ಮಧ್ಯದ ವಿವಾದಗಳಿಗೆ ಮುಕ್ತಿ ನೀಡಬಲ್ಲ ನ್ಯಾಯಿಕ ಪರಿಹಾರಗಳ ಸಂಕಥನಗಳಿವೆ; ತಮ್ಮ ಕೈಗೆಟುಕದ ರಾಜಕಾರಣದ ಒಳಸುಳಿಗಳಿಗೂ ಇಲ್ಲಿ ಅನೌಪಚಾರಿಕ ಪರಿಹಾರಗಳಿವೆ; ಗೆಳೆಯರ ಮಧ್ಯದ ತುಂಟಾಟದ ಭಾವಗಳ ಸಲ್ಲಾಪಗಳಿವೆ.  ಮಾನವನ ಸಕಲ ಮನೋವ್ಯಾಪಾರಗಳ ಅಭಿವ್ಯಕ್ತಿಗೊಂದು ದಿವ್ಯಲೋಕ ಈ ಚಹಾಜಾತ್ರೆ. ಮಾನವಶಾಸ್ತ್ರ ಹಾಗೂ ಸಮಾಜಶಾಸ್ತ್ರ ಶಿಸ್ತುಗಳ ಅಧ್ಯಯನಕಾರರಿಗೆ ಒಂದು ಪ್ರಯೋಗಶಾಲೆಯಂತಿದೆ ಈ ಮೇಳ.  ಜಾತಿ ಧರ್ಮ, ಮತ,ವರ್ಣಗಳ ಭೇದವಿಲ್ಲದೇ ಚಹಾಗಾಗಿ  ಒಂದೆಡೆ ನೆರೆಯುವ ಸಂಗತಿಯೇ ವಿಸ್ಮಯ  ಮೂಡಿಸಿದೆ. ಕಲೆ ಹಾಗೂ ಸಾಹಿತ್ಯ ಮೀಮಾಂಸೆಗೂ ಅಲ್ಲಿ ಜಾಗವಿದೆಯೆಂದರೆ ಚಹಾ ಹೇಗೆ ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂಬುದನ್ನರಿಯಬಹುದು. ತೆರೆದುಕೊಳ್ಳುವ ಚಹಾಕಾರಣದ ನಮ್ಮೂರಿನ ಈ ಮಾರುಕಟ್ಟೆಯ ಜಗತ್ತು  ಸರ್ವಜನಾಂಗದವರನ್ನಳಗೊಂಡು ಇತಿಹಾಸ, ಅರ್ಥಶಾಸ್ತ್ರ, ಸಮಾಜವಿಜ್ಞಾನ,ರಾಜ್ಯಶಾಸ್ತ್ರ, ತತ್ವಜ್ಞಾನಾದಿಯಾಗಿ ಔಪಚಾರಿಕ ಹಾಗೂ ಅನೌಪಚಾರಿಕ ಸಂಗತಿಗಳನ್ನೆಲ್ಲಾ ನಿಷ್ಕರ್ಷೆಗೊಳಪಡಿಸಬಲ್ಲ  ಅನುಭವ ಮಂಟಪವಾಗಿದೆ. ಜಾಗತಿಕ ವಿದ್ಯಮಾನಗಳಿಂದ ಹಿಡಿದು ಪಕ್ಕದ ಮನೆಯವರೆಗಿನ ಸುದ್ದಿ ಸಮಾಚಾರಗಳೆಲ್ಲಾ ಈ ಅನುಭವ ಮಂಟಪದಲ್ಲಿ ನಿಕಷಕ್ಕೊಳಗಾಗಲೇಬೇಕು.
ನೇಕಾರ ಸಂಗಣ್ಣ, ವಾಲೀಕಾರ ಬಸಪ್ಪ,  ಕಮ್ಮಾರ ಹನುಮಂತ, ಕುಂಬಾರ ಮಲ್ಲಪ್ಪ, ಗೌಡರ ಲಕ್ಷ್ಮಣ್ಣ ಹೀಗೆ ತರತಮಗಳಿಲ್ಲದ ಜಾತ್ಯಾತೀತ ಸಮುದಾಯವೊಂದು ಬೀದಿ ಬದಿಯ ಚಹಾಶಾಲೆಗಳ ಮುಂದೆ ಶ್ರದ್ಧೆಯಿಂದ ನಿತ್ಯ ನೆರೆಯುತ್ತದೆಯೆಂದರೆ ಚಹಾದ ಈ ಮಾಯಾಲೋಕಕ್ಕೆ ಧನ್ಯವಾದಗಳನ್ನರ್ಪಿಸಲೇಬೇಕು. ಚಹಾದೊಂದಿಗೆ ಚೂಡಾ,  ಮಿರ್ಚಿ ಬಜಿ, ದೊಣ್ಣೆಮೆಣಸಿನಕಾಯಿ ಬಜಿ,  ಬದನೆಕಾಯಿ ಬಜಿ, ವಡಾ ಬಜಿ, ಆಲೂ ಬಜಿ, ಹುರಿದ ಮಸಾಲೆ ಶೇಂಗಾಕಾಳುಗಳು, ಒಗ್ಗರಣೆ ಹಾಕಿದ ಚುರುಮರಿ, ಹೀಗೆ ಬಗೆ ಬಗೆಯ ವೈವಿಧ್ಯಮಯ ಖಾದ್ಯಗಳ ಸಾಂಗತ್ಯ ಹರಟೆಗೆ ನಿತ್ಯೋತ್ಸವದ ಮೆರಗನ್ನು ನೀಡುತ್ತದೆ. ಬಿಸಿಯಾದ ಈ ಕರಿದ ಖಾದ್ಯಗಳನ್ನು ಸವಿಯುತ್ತಲೇ  ನಡೆಯುವ  ಚರ್ಚೆ ಕಾವೇರುವ ಬಗೆಯನ್ನು
ನಮ್ಮ ಜನರ ಗ್ರಾಮೀಣ ಸೊಗಡಿನ ಭಾಷೆಯಲ್ಲಿಯೇ  ಕೇಳಬೇಕು. ಕರಿದ ಖಾದ್ಯಗಳ ಸವಿಯನ್ನುಂಡ ನಂತರದ ಸಾಂಗತ್ಯವೇ ಚಹಾಪಾನೀಯದ್ದು. ಅಲ್ಲಿಗೆ ಅಂದಿನ ಹರಟೆ ಅಂತಿಮ ಹಂತಕ್ಕೆ ಬಂದಿದೆಯೆಂದೇ ತಿಳಿಯಬೇಕು. ಒಂದು ಪುಟ್ಟ ಗ್ರಾಮದ  ಜಾತ್ರೆಯಷ್ಟು ಜನರನ್ನು ಸೆಳೆಯುವ ಈ  ಚಹಾಶಾಲೆಗಳೇನೂ ಪಂಚತಾರಾಗೃಹಗಳಲ್ಲ. ಬೀದಿ ಬದಿಯ ಮೂಲೆಯೊಂದರಲ್ಲಿ  ತಳ್ಳುವ ಗಾಡಿಗಳ,ಚತುರ್ಭುಜಗಳಂತಿರುವ  ನಾಲ್ಕು ಚಕ್ರಗಳ ಮೇಲೆ   ಪ್ರತಿಷ್ಠಾಪಿಸಲ್ಪಟ್ಟ ಸಂಚಾರಿಯಂತೆ ಕಾಣುವ ಡಬ್ಬಿಯಂಗಡಿಗಳು.  ಮಲೆನಾಡಿನ ಚಹಾಕುಶಲಿಗಳು ಚೂಡಾದಂಗಡಿಯ ಪಕ್ಕತೆರೆದಿರುವ  ಚಹಾಶಾಲೆ ಒಂದಕ್ಷರದ ವಿದ್ಯೆಯನ್ನು ಧಾರೆಯೆರೆಯದಿದ್ದರೂ ಚಹಾದ ಅನುಭಾವದ ರಸಪಾಕವನ್ನು ರಸಿಕರಿಗೆ ಹಂಚುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ!. ಮುಸ್ಸಂಜೆಯ ವಿಹಾರಿಗಳು ಸೇರುವ ಈ ಜಾಗ ವಿಶಾಲವಾದ ಬಯಲೇನೂ ಅಲ್ಲ, ಸುಮಾರು ೧೦೦ ಮೀಟರ್ ಉದ್ದಳತೆಯ ಚಿಕ್ಕ ಉಪಮಾರುಕಟ್ಟೆಯ ತಾಣವದು. ಅಂದ ಹಾಗೆ ಈ ಹರಟೆಯ ಜಗತ್ತಿನ ನಿತ್ಯದ ಆಯಸ್ಸು ಸಂಜೆ  ೫ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ಮಾತ್ರವೆಂದರೆ ಅಚ್ಚರಿಯೆನಿಸದಿರದು.  ಗೋಧೂಳಿಯ ಮುಹೂರ್ತದಲ್ಲಿ  ಜನಿಸಿ, ವಿವಿಧೆಡೆಗಳಿಂದ  ಹರಿದು ಬಂದ ಜಲ ಸಾಗರವ ಸೇರುವಂತೆ ನಮ್ಮೂರಿನ ಗಲ್ಲಿ ಹಲ್ಲುಗಳಿಂದ ಜನ ನಿತ್ಯದ ಈ ಚಹಾಮೇಳಕ್ಕೆ ಹರಿದುಬರುತ್ತಾರೆ. ಕೆಲವೇ ಗಂಟೆಗಳಲ್ಲಿ  ಬೃಹದಾಕಾರವಾಗಿ ಬೆಳೆದು, ಮತ್ತೆ ಐದಾರು ಗಂಟೆಗಳಲ್ಲಿಯೇ ಕೊನೆಯಾಗುವ ಈ ಚಹಾರಂಜನೆಯ ಜಾತ್ರೆ ಬಲು ವಿಶಿಷ್ಟವಾದುದು.
ಸಾಮಾನ್ಯರಾದಿಯಾಗಿ ಶಿಕ್ಷಕರು, ವಕೀಲರು, ಸುದ್ದಿಮಾಧ್ಯಮದವರು,  ಕಾರ್ಮಿಕರು, ನೌಕರರು, ವಿದ್ಯಾರ್ಥಿಗಳು, ಕರಕುಶಲಿಗಳು, ರೈತರು  ಹೀಗೆ ವರ್ಗಭೇದವಿಲ್ಲದೇ ಸರ್ವರನ್ನೂ ಸೆಳೆದು, ಭ್ರಾತೃತ್ವದ ಮುನ್ನುಡಿಯನ್ನು ಹಾಡುತ್ತಿರುವ ಸೌಹಾರ್ದತೆಯ ಸಂಗೀತವನ್ನು ನುಡಿಸುತ್ತಿರುವ, ಸಮಾನತೆಯ ತತ್ವವನ್ನು ಸಾರುತ್ತಿರುವ,ಜಗತ್ತಿಗೆ ಬಾಂಧವ್ಯದ ಪಾಠ ಮಾಡುತ್ತಿರುವ, ನಮ್ಮೂರಿನ ಚಹಾಜಗತ್ತಿನ ಮಾಂತ್ರಿಕ ಮೋಡಿ ಅದೆಷ್ಟು ಅರ್ಥಪೂರ್ಣ, ಭಾವಪೂರ್ಣ, ಔಚಿತ್ಯಪೂರ್ಣ  ಅಲ್ಲವೆ ? ದಿನವೆಲ್ಲಾ ದುಡಿದು ಬಳಲಿದ ಮನಸುಗಳನ್ನು ತನ್ನತ್ತ ಕೈ ಬೀಸಿ ಕರೆದು ಉಣಬಡಿಸಿ,  ಸಂಜೆಯ ಚಹಾಮೃತದ ಸವಿಯನ್ನು ನಿಷ್ಪಕ್ಷಪಾತವಾಗಿ ಹಂಚುವ ಈ ನಿರ್ಮಲ ಜಗತ್ತು ನನ್ನನ್ನು ಇನ್ನಿಲ್ಲದಂತೆ ಕಾಡಿದೆ. ಶ್ರಮ ಸಂಸ್ಕೃತಿಯ ಬೇರುಗಳಿಂದ ನವಚಿಗುರನ್ನು ಪಡೆದು ಕಂಗೊಳಿಸುತ್ತಿರುವ ನಮ್ಮೂರಿನ ನಾಗರಿಕತೆಯಲ್ಲಿ, ಕೆಲವು ಕಾಲ ಬಡವರ ಜಠರಾಗ್ನಿಯನ್ನು ತಣಿಸಿ ಹಸಿವನ್ನು ಮುಂದೂಡುವ ಅಥವಾ ಒಂದು ಹೊತ್ತಿನ ಉಪವಾಸಕ್ಕೆ ಸಹಕರಿಸಿ ತಾತ್ಕಾಲಿಕವಾಗಿ ಹೊಟ್ಟೆ ತುಂಬಿಸುವ ಈ ಚಹಾ ಎಂಬ ಮಾಯೆ ತನ್ನ ಸುತ್ತ  ಒಂದು ನವಸಂಸ್ಕೃತಿಯನ್ನೆ ರೂಪಿಸಿಕೊಂಡದ್ದರಲ್ಲಿ ಅಚ್ಚರಿಯೇನಿಲ್ಲ. ಬಡವರ ಕೊನೆಯಿರದ ಹಸಿವಿನ ಔಷಧಿಯಾಗಿರುವ ಈ "ಬಡವರ ಬಂಧು" ಶ್ರಮಿಕರ ಅಮೃತವೂ ಹೌದು; ಶೋಷಿತರ ಬದುಕಿನ ತೀರ್ಥವೂ ಹೌದು.ಲಾಲ್ ಬಹಾದ್ದೂರ ಶಾಸ್ತ್ರಿಯವರು ಕರೆಕೊಟ್ಟ ಸೋಮವಾರದ ಉಪವಾಸ ಯಶಸ್ವಿಯಾಗುವಂತೆ ಮಾಡಿ ದೇಶ ಸೇವೆ ಮಾಡಿದ ಚಹಾಮಾಯಿಯ ದೇಶಭಕ್ತಿಯನ್ನು ಮೆಚ್ಚಲೇಬೇಕು.
ಈ ಲೇಖನ ಅಕ್ಷರವಾಗುವ ಹೊತ್ತಿನಲ್ಲಿ ಸಹೋದ್ಯೋಗಿ ಪ್ರಾಧ್ಯಾಪಕ ಗೆಳೆಯ ಮೌನೇಶ ಕಮ್ಮಾರರವರು ಹಾಡಿದ
"ಕಪ್ಪ ಬಸಿ ಚಹಾಗೆಳೆಯ ಗೆಳೆಯರು ಕೂಡಿಸಲಿಗೆಯ ಮಾತನಾಡಿಪ್ರೀತಿಗೆ ನಾಂದಿಯಾತು
ಕಪ್ಪ ಬಸಿ ಚಹಾಅದು ಒಂದು ಇಲ್ಲದಿರೆಗೆಳೆತನ ಎಲ್ಲಾ ಮರೆಬದುಕುವುದು ಬಿರಿಯಾತುಕಪ್ಪ ಬಸಿ ಚಹಾ........................................................ಎಂಬ ಜಾನಪದ ಗೀತೆಯಲ್ಲಿ ಅಭಿವ್ಯಕ್ತವಾದ  ಚಹಾಮಾಯಿಯ ಸೊಬಗು ಅವರ್ಣನೀಯ. ಚಹಾ ಜನಪದರ ಜೀವಸೆಲೆಯಾಗಿ ಬದುಕಿಗೆ ಚೈತನ್ಯವನ್ನು ಧಾರೆಯೆರೆಯುತ್ತಲೇ ಬಂದಿದೆ. ನಾಡವರ ಕಾಯಕದಲ್ಲಿನ ಕೈಲಾಸ ತಲುಪಲು ಈ ಚಹಾ ಎಂಬ ಉತ್ಸಾಹದ ಚಿಲುಮೆ  ಪ್ರವಹಿಸಲೇಬೇಕು.
ನೀನೆಂದರೆ  ಕಣ ಕಣದಲೂರೋಮಾಂಚನಮನದ ಮೂಲೆಯಲೂಭರವಸೆಯ ಹೊಂಗಿರಣಅರಳಿ ನಿಂತ ಎದೆಯಲಿನೀನು ಅಮೃತ ಸಿಂಚನ
ಕದಡಿದ ಮನ ತಿಳಿಯಬಾನುಆಗದೇನು ಇಳಿದಾಗಚಹಾ ಹನಿಯ ಜೇನು.........ಎಂಬ ಚಹಾರಾಧನೆ ಮನದ ಮೂಲೆಯಲ್ಲಿ ಸದಾ ಜರುಗುತ್ತಲೇ ಇರುತ್ತದೆ. ಆಧುನಿಕ ಜಗತ್ತಿನ ಆಹಾರ ಸಂಸ್ಕೃತಿಯ ಅತ್ಯಗತ್ಯ ಪಾನೀಯಗಳಲ್ಲಿ ಒಂದಾಗಿರುವ ಚಹಾದೇವಿ, ವರ್ತಮಾನದ ಬೆಡಗಿನ ಲೋಕದ ಸೆಳೆತಕ್ಕೆ ಸಿಕ್ಕು ಕೆಫೆಗಳಲ್ಲಿ ಕಪ್ಪು ಸುಂದರಿಯಾಗಿ, ಬಿಳಿ ಕಿಶೋರಿಯಾಗಿ, ಹಸಿರು ನೀರೆಯಾಗಿ, ಕೆಂಬಣ್ಣದ ಮೋಹಿನಿಯಾಗಿ, ವೈವಿಧ್ಯಮಯ ರೂಪಗಳನ್ನು ಅಲಂಕರಿಸಿದ್ದಾಳೆ. ಪ್ರಾತಃಕಾಲದಲೆದ್ದು ಮುಖ, ಹಲ್ಲುಗಳನುಜ್ಜಿ, ವಿಭೂತಿ ಧರಿಸಿ ಒಂದು ಲೋಟ ಚಹಾ ಹೀರಿದಾಗಲೇ ಅಂದಿನ ಕಾಯಕದ ಅಧಿಕೃತ ಪ್ರಾರಂಭಕ್ಕೆ ಮುನ್ನುಡಿ ಬರೆದ ಹಾಗೆ. ಅಲ್ಲಿಂದ ಮೂರು ಗಂಟೆಗಳಿಗೊಮ್ಮೆ ಚಹಾರಾಣಿಯೊಂದಿಗೆ ಉಲ್ಲಾಸದ ಹಾಡನ್ನು ಹಾಡಲೇಬೇಕು. ಶ್ರಮಿಕ ವರ್ಗದ ಜನರ ಜೀವನದ ಚೈತನ್ಯವಾಗಿರುವ ಕಲಿಯುಗದ ಅಮೃತವಾಗಿರುವ ಚಹಾ ನಮ್ಮೂರಿನ ಭಾವೈಕ್ಯತೆಯ ಪ್ರತೀಕವೂ ಆಗಿದೆಯೆಂದರೆ ಅತೀಶಯೋಕ್ತಿಯೇನಲ್ಲ.

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...