Total Pageviews

Sunday 14 June 2020

ಸಂವೇದನೆಗಳೊಂದಿಗೆ ಸಂವಾದ...

ಸಂವೇದನೆಗಳೊಂದಿಗೆ ಸಂವಾದ...
ಬತ್ತಿಹೋಗಿರುವ ಸಂವೇದನೆಗಳೆ
ಮತ್ತೆ ಚಿಗುರುವಿರೆಂದು ?
ಹೆದ್ದಾರಿಯ ಬದಿಯಲ್ಲಿ ಉರುಳಿ
ಬಿದ್ದ ವೇಗದ ಲಾರಿ
ಹೊರಟಿತ್ತು ಬಯಕೆಗಳನ್ನೇ
ತುಂಬಿ ಚೆಲ್ಲುವಂತೆ ಹೇರಿ

ಮಾನವಧರ್ಮವೆಲ್ಲಿದೆ ?
ಬೆನ್ನುಬಿದ್ದ ಕರ್ಮವೆಲ್ಲಿದೆ ?
ಬಿದ್ದಿದೆಯಲ್ಲ ಕಾಲು ಮುರಿದುಕೊಂಡು
ಅನಾಥವಾಗಿ ಲಾರಿಯ ಕೆಳಗೆ
ಮತ್ತೆಂದೂ ಮೇಲೇಳದಂತೆ ಹಾಸಿದ
ವ್ಯವಹಾರದ ನೆಲಕೆ ಒರಗಿ

ಕಣ್ಣು,ಬಾಹುಗಳನಗಲಿಸಿ ದೊರೆತಷ್ಟು
ಬಾಚಿಕೊಳ್ಳುವುದೊಂದೇ ತವಕ
ಸೋಪು, ಎಣ್ಣೆ, ಡೀಸೆಲ್,ಸಿಮೆಂಟು
ಶಾಂಪೂ ಬಗೆ ಬಗೆಯ ಬಯಕೆಗಳ ರೂಪಕ
ಆಸೆಗಳೊಂದಿಗಿನ ಯುದ್ಧದಲ್ಲಿ
ಎಲ್ಲವೂ ಸರಿ ಸಮಾನ!
ಮಾನವೀಯತೆಯೂ, ಕ್ರೌರ್ಯವೂ.

ಬಯಕೆಗಳಿಗೆ ಅಳಿವಿಲ್ಲ;
ಸಾವು ನೋವುಗಳಿಗೆ ಬೆಲೆಯಿಲ್ಲ
ಮಾರುಕಟ್ಟೆಯ ಚಕ್ರವ್ಯೂಹದೊಳಗೆ
ಅರುಣೋದಯವೂ ಲಾಭವೇ
ಮಾರಾಟಕ್ಕಿಟ್ಟರೆ ತಾಪ, ಬೆಳಕು
ಕೊರಗುತ್ತಿದೆ ಹೀಗೆ ನಲುಗಾಟವೇ
ತುಂಬಿದ ಮಾನವ ಬದುಕು
ಬಂಧನದ ಜಗವೆಲ್ಲಾ ಹಣದ
ಮಾಯೆಯೊಳಗಿನ ಹುಳುಕು

ಲಾರಿಯವನ ಆರ್ತನಾದವೂ ಕ್ಷೀಣ
ಬೆಂಬೆಡಗಿನ ಯುಗದ ಗಿಜಿಗಿಡುವ
ವಾಂಛೆಗಳನಾಳುವ ಬಜಾರಿನ ರಣಭೇರಿಯ ಮುಂದೆ
ಸತ್ತು ಹೋಗಿರುವ ನಿಮಗೆಲ್ಲಿದೆ ಮದ್ದು
ಜಗದ ಮಂದಿಗೆ ಜಾಹೀರಾತುಗಳೇ ಮುದ್ದು

ಆಳಿ ಬಿಡಿ ಭುವನವ
ನಿಮ್ಮ ಕಾಲವಿರುವತನಕ
ಬೆಕ್ಕಿನ ಕೊರಳಿಗೆ ಗೆಜ್ಜೆ ಕಟ್ಟುವ ತನಕ
ವಿಷದ ಚಕ್ರವ್ಯೂಹದೊಳಗೆ
ಮಾನವತೆಯ ಅಭಿಮನ್ಯು
ಒಳಹೊಕ್ಕಿರುವನು ಅರಿವಿದ್ದರೂ ಇಲ್ಲದವನಂತೆ
ಹೊರಬರುವುದೆಂತೋ ಕ್ಷಮಿಸಿಬಿಡಿ
ಒಮ್ಮೆ ಅಪ್ಪಿ ಅರ್ಜುನನಂತೆ.

No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...