Total Pageviews

Sunday 24 May 2020

ಸಾವಿನ ದಾರಿ..

ಸಾವಿನ ದಾರಿ
ಸ್ಮಶಾನವಾಗುತಿವೆ ಹೆದ್ದಾರಿ
ತನ್ನೊಳಗೆ ಬರುವುದೆಲ್ಲವನೂ ನುಂಗಿ ತೇಗಿ
ಅಳಿಲು, ಕುರಿ, ಕೋಳಿ, ನಾಯಿ ಬೆಕ್ಕುಗಳ
ಜೀವಗಳಿಗಂತೂ ಬೆಲೆಯೇ ಇಲ್ಲ
ಮನುಷ್ಯನ ಪ್ರಾಣಕೂ ಹಾತೊರೆಯುತಿದೆಯಲ್ಲ
ಕಪ್ಪು ರಾಕ್ಷಸನೇ ಸರಿ
ಹಿರಿದಾರಿಯೆಂದೆನಿಕೊಂಡರೂ
ವಾಹನಗಳೇ ಮೃಷ್ಟಾನ್ನ ಭೋಜನ
ಚಾಚಿದ ಕರಿನಾಲಗೆಗೆ ಹರಿಯುವ
ನೆತ್ತರು ಚಪ್ಪರಿಸುವ ಉಪ್ಪಿನಕಾಯಿ
ಹಸಿಮಾಂಸವೇ ರುಚಿಕಟ್ಟಾದ
ಭೋಗವಾಸನೆಯ ಮುದ್ದೆ
ತಿಂದು ತೇಗುವುದೊಂದೇ
ಹೊರಟ ದಾರಿಯ ನಿತ್ಯಕಾಯಕ
ಉಂಡು ಬೀಗುವುದಕೆ ಯಮಧರ್ಮನೇ ನಾಯಕ

ಯಾವ ಕಿಂದರಿಜೋಗಿ ಕರೆದೊಯ್ಯುವನೋ
ರಸ್ತೆಗಳೆಲ್ಲಾ ಜಾಮ್ ಜಾಮ್......
ಮೈದುಂಬಿಕೊಂಡ ಕಪ್ಪು ವಸ್ತ್ರದ ಮೇಲೆ
ಹರಿಯುವ ವಾಹನಗಳ ಕೋಟಿನ‌ ಬಲೆ
ಕುಣಿಯುತ್ತ ಕಿನ್ನರಿಯನೂದುತ
ಹೊರಟ ಬಂಡಿಗಳು ಲೆಕ್ಕಕೂ ನಿಲುಕಲಾಗದ ಸೆಲೆ
ದಿಕ್ಕುತಪ್ಪಿದರೂ ಮರಳಲೇಬೇಕು
ಹೊರಳಿ ಮತ್ತೆ  ಸಾವಿನ ಹಾದಿಗೆ
ಮರ ಗಿಡ ಬಳ್ಳಿ ತುಂಬಿದ ಕಾಡು
ಕಡಿದು ಕಟ್ಟಿದ ರೆಸಾರ್ಟಿನಲ್ಲಿ
ಕಂಠದವರೆಗೂ ಕುಡಿದು ಕಟ್ಟಿಕೊಂಡ ಮಹಾಪಾಪ
ಬೆನ್ನು ಬಿಡುವುದೆಲ್ಲಿ ಕೊರಗಿ
ಕರಗುತ್ತಿರುವ ಪ್ರಕೃತಿಯ ಮಹಾಶಾಪ 

ಮರಗಿಡಗಳ‌ ಮಾರಣಹೋಮ
ಮಾರ್ಗವೊಂದರ ಪ್ರತಿಷ್ಠಾಪನೆಗೆ
ಬೆಲೆಕಟ್ಟಲಾಗದ ಜನುಮಹಾನಿ
ಉಣ್ಣಲೇಬೇಕಲ್ಲವೇ ಮಾಡಿದಡುಗೆ
ಬೇವು ಬಿತ್ತಿ ಮಾವು ಕೊಂಬುವ
ದುರಾಸೆಗೆ ಬಲಿಯಿನ್ನೆಷ್ಟೋ
ಒರಗಿಹೋದ ಜೀವಗಳ ಕೊರಳಿನ ಆರ್ತನಾದಗಳೆಷ್ಟೋ
ಕುಣಿದು ಕುಪ್ಪಳಿಸುವ ಪ್ರಗತಿಯ
ದಾರಿಯೆಂದು ಬೀಗುವ ಬಾಂಧವರೇ
ಕಣ್ಣರಳಿಸಿ ತುಂಬಿಕೊಳ್ಳಿ ಸಾವಿನ ಮೆರವಣಿಗೆಯನು;
ಕರಗುತ್ತಲೇ ಕುಸಿಯುತ್ತಿರುವ  ಘಟ್ಟಗಳ
ಮೈಮೇಲಿನ ಹಸಿಹಸಿಯಾದ ಗಾಯಗಳನ್ನು
ವ್ರಣಗಳಿಂದುಂಟಾದ ಕುಳಿಗಳಲ್ಲಿ ಮಡುಗಟ್ಟಿರುವ
ರಕ್ತಕಣ್ಣೀರಿನ ಹೊಳೆಯನ್ನೊಮ್ಮೆ ಹರಿಯಬಿಡಿ
ನಿಂತು ಹೋಗಲಿ ಒಮ್ಮೆ ನಿಮ್ಮ
ಮಿಡಿಯಲೊಲ್ಲದ ಪಾಪದ ಜೀವನಾಡಿ

ಹೆದ್ದಾರಿಯ  ಹೆಮ್ಮಾರಿಗೆ ಜೀವಗಳ
ಕರುಳ ಹಾರಗಳಲಂಕಾರ
ಪುಟಿಯುತಿರುವ ಹೊರಬಿದ್ದ ಮೆದುಳು
ಮಿಡಿಯುತಿರುವ ಅನಾಥವಾದ ಹೃದಯದಳು
ನಡೆಸಿದಂತೆ ವಾದ್ಯಗೋಷ್ಠಿ
ಜವರಾಯನ ಆಗಮನಕೆ
ಶೋಕಗೀತೆ ಚೀರಾಟ; ಭಜನೆ ಮೇಳ ಕೂಗಾಟ
ಸಂಗೀತದ ಮಹಾವೈಭವ!!!
ದಾರಿ ತುಂಬಿಕೊಂಡ ಸುಳ್ಳಾದ ಹರಕೆ;
ಆಯುಷ್ಮಾನುಭವ! ಆಯುಷ್ಮಾನುಭವ!


No comments:

Post a Comment

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...