Total Pageviews

Friday 8 May 2020

ಮಧುಮೀಮಾಂಸೆ

ಮಧುಮೀಮಾಂಸೆ
  ಕೈಯ್ಯಲ್ಲಿ ಕೋವಿ ಹಿಡಿದು ಬಾಗಿಲ ಬಳಿ ಬಲಿಗಾಗಿ ಕಾಯುತ್ತಿರುವ ಕೋವಿಡ್ - 19 ಮಹಾಮಾರಿಯ  ಚೆಲ್ಲಾಟದ ಮಧ್ಯೆ ಕವಿಚಿಂತಕ ನಿಸಾರ್ ಅಹಮ್ಮದ್ ರವರನ್ನು  ಕಳೆದುಕೊಂಡ ಪ್ರಾಣಸಂಕಟವನ್ನು ಎದೆಯಲ್ಲಿಯೇ ಅದುಮಿ ಹಿಡಿದುಕೊಂಡು ಮನೆಯ ತಾರಸಿಯ ಮೇಲೆ ನಿಂತು ಗಾಳಿಪಟವನ್ನು ಹಾರಿಸುವ ಹುಚ್ಚು ಸಾಹಸಕ್ಕಿಳಿದಿತ್ತು ಮನಸು.ಕವಿ ನಿಸಾರರೇ ಸಂಕಲಿಸಿದ ಹಾಗೆ ಮನಸೊಂದು ಗಾಂಧಿ ಬಜಾರು. ಕಾರಣವಿದೆ. ಮುದ್ದಿನ ಕರುಳ ಕುಡಿಗಳು ಬೆನ್ನು ಬಿದ್ದು, ಕೊರೊನಾ ಹಿಮ್ಮೆಟ್ಟಿಸಿಯಾದರೂ ಗಾಳಿಪಟಗಳನ್ನು ತಂದುಕೊಡಲೇಬೇಕು ಎಂದು ಹಠವಿಡಿದು, ಕಣ್ಣೀರಿನಿಂದ ತೊಯ್ದ ಅವರ ಕೆನ್ನೆಗಳು ಒಣಗಿದ ಹಾಳೆಯಂತಾಗಿ, ಮೂರು ದಿನಗಳು ಕಳೆದುಹೋಗಿದ್ದವು. ಇಲ್ಲವೆನ್ನಲಾಗಲಿಲ್ಲ ಮುಗ್ಧ ಮುಖಗಳನ್ನು ನೋಡಿ. ಮದ್ಯದಂಗಡಿಯ ಮುಂದೆ ಸಾಮಾಜಿಕ ಅಂತರ ಕಾಪಾಡಿಕೊಂಡು ತಾಳ್ಮೆಯಿಂದ ನಿಂತು ಕಾದಂತೆ, ಗಾಳಿಪಟದ ಅಂಗಡಿಯ ಮುಂದೆಯೂ ತುದಿಗಾಲಲ್ಲಿ ನಿಂತು ಕಾದೆ. ಹಾವಿನ ಬಾಲದಂತೆ ರಸ್ತೆಯುದ್ದಕ್ಕೂ ಚಾಚಿದ ಸಾಲಿನಿಂದ ನನ್ನ ಸರದಿ ಬಂದು ಅಂಗಡಿಯವನು ಗಾಳಿಪಟವನ್ನು  ಕೈಗಿತ್ತಾಗ ಮಧುಪಾತ್ರೆಯನ್ನು ಕೈಚೀಲದೊಳಗಿಟ್ಟುಕೊಂಡಷ್ಟೇ ಖುಷಿಯಾಗಿತ್ತು ನನಗೆ. ಲಂಗುಲಗಾಮಿಲ್ಲದೇ ನಶೆಯೇರಿಸುವ ಮದಿರೆಗೂ, ಸೂತ್ರವಿಡಿದು ಮೇಲೇರುವ ಗಾಳಿಪಟಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ? ಎಂದು ಮೂಗುಮುರಿಯದಿರಿ. ಡಾ. ಗುರುದೇವಿ ಹುಲೆಪ್ಪನವರಮಠ ರವರು ಈ ಮೂಗು ಮುರಿಯುವ ಪ್ರಹಸನವನ್ನು ಕುರಿತೇ ಒಂದು ದೀರ್ಘ ಪ್ರಬಂಧವನ್ನೇ ಬರೆದಿದ್ದಾರೆ. ತರಗತಿಯಲ್ಲೊಮ್ಮೆ ಈ ಪ್ರಬಂಧದ ಚರ್ಚೆ ಮಾಡುವಾಗ, ನಾನು ವಿದ್ಯಾರ್ಥಿಗಳನ್ನು  " ಯಾರು ಯಾರು ಯಾವಾಗ ಮೂಗು ಮುರಿಯುತ್ತಾರೆ ? " ಎಂದು ಕೇಳಿದೆ. ವಿದ್ಯಾರ್ಥಿಯೊಬ್ಬ ಎದ್ದು ನಿಂತವನೇ ತಡವಾದರೆ ಎಲ್ಲಿ ತನ್ನ ಉತ್ತರ ಪಂಚ್ ನ್ನು ಕಳೆದುಕೊಂಡುಬಿಡುತ್ತದೋ ಎಂಬ  ಧಾವಂತದಲ್ಲಿ " ಸರ್, ಹುಡುಗಿಯರೇ ಮೂಗುಮುರಿಯುವವರು. ಅವರಿಗೆ ಕೋಪ ಬಂದಾಗ,  ಮುನಿಸುಂಟಾದಾಗ, ತಿರಸ್ಕಾರದ ಭೂತ ಹೆಗಲೇರಿದಾಗ ಖಂಡಿತವಾಗಿಯೂ ಮೂಗುಮುರಿದೇ ತಮ್ಮ ಸಿಟ್ಟನ್ನು ತೀರಿಸಿಕೊಳ್ಳುತ್ತಾರೆ.."  ಎಂದುಬಿಟ್ಟ. ಗೆಳೆಯನೊಬ್ಬ ಎದ್ದು ಉತ್ತರ ಹೇಳುತ್ತಿದ್ದಾನೆಂದರೆ, ಯಾವುದಾದರೊಂದು ಪಂಚ್ ಸಿಕ್ಕೇ ಸಿಗುತ್ತದೆಂಬ ಖಾತ್ರಿಯಲ್ಲಿ ಬಕ ಪಕ್ಷಿಯಂತೆ ಕಾಯುತ್ತಾ ಕುಳಿತ ಹುಡುಗರೆಲ್ಲಾ ಗೊಳ್  ಎಂದು ನಕ್ಕರೂ ಇವನದೇನು ಮಹಾ ಉತ್ತರ ? ಎಂದು ಒಳಗೊಳಗೆ ಮೂಗುಮುರಿದದ್ದು ಮಾತ್ರ ಯಾರಿಗೂ ಕಾಣಲೇ ಇಲ್ಲ.  ಹುಡುಗರೆಲ್ಲಾ ಮಾನದ ವಿಷಯವೆಂದು ತೋರ್ಪಡಿಸದೇ ಮುಸಿ ಮುಸಿ ನಗುತ್ತಿದ್ದಾಗ,  ಹುಡುಗಿಯರ ಕಡೆಯಿಂದ " ಇಲ್ಲ.. ಇಲ್ಲ....ಅನ್ಯಾಯ...ಸರ್..." ಎಂದು ಯುದ್ಧದ ಪ್ರಾರಂಭಕ್ಕೆ ಮಾಡುವ  ಜೋರಾದ ಕಹಳೆಯ ಸದ್ದಿನಂತೆ ಎಚ್ಚರಿಕೆಯ ಧ್ವನಿವ್ಯೂಹವೊಂದು  ಹೊರಟಿತು." ಸಮಾಧಾನ..... ಸಮಾಧಾನ...." ಎಂದು ಕೈಯ್ಯೆತ್ತಿ ತಡೆದಾಗ ಕೋಪದಿಂದಲೇ ಶಾಂತವಾದ ಹುಡುಗಿಯರ ಪಟಾಲಂ ನಿಂದ ವಿದ್ಯಾರ್ಥಿನಿಯೊಬ್ಬಳು ತಕ್ಷಣ ಎದ್ದು ನಿಂತು " ಮೂಗು ಮುರಿಯುವುದರಲ್ಲಿ ಗಂಡು ಹೆಣ್ಣೆಂಬ ಭೇದ ಭಾವವಿಲ್ಲ ಸರ್ ....ಎಲ್ಲರೂ ಒಂದಿಲ್ಲೊಂದು ಕಾರಣಕ್ಕೆ ಮೂಗುಮುರಿಯುವವರೇ. ಇವರೂ  ಕ್ವಚಿತ್ತಾಗಿಯಾದರೂ ಮೂಗು ಮುರಿದವರೇ....ಎಂದು ಹುಡುಗರತ್ತ ಬೆರಳು ತೋರಿಸಿ ವಾಗ್ವಾದಕ್ಕಿಳಿದು ಮೂಗುಮುರಿದಳು. ಅಷ್ಟರಲ್ಲಿ ಮಧ್ಯಪ್ರವೇಶಿಸಿದ ನಾನು " ಹೌದಮ್ಮ ...ಹೌದು..ಲೇಖಕಿಯರ ಅಭಿಪ್ರಾಯವೂ ಇದೇ ಆಗಿದೆ....ಈ ಬಗ್ಗೆ ಚರ್ಚಿಸೋಣವೇ.." ಎಂದು ಸಮಾಧಾನ ಮಾಡಲು ಪ್ರಯತ್ನಿಸಿದೆ. ಅದಾಗಲೇ ಕೊನೆಯ ಬೆಂಚಿನಿಂದ ಎದ್ದುನಿಂತಿದ್ದ ಹುಡುಗನೊಬ್ಬ " ಅಯ್ಯೋ... ನೀವು  ಸ್ತ್ರೀವಾದಿಗಳೇ ಹೀಗೆ... ನೀವೇ ಕಾರಣ ಎಂದರೆ ನಾವಲ್ಲ ಎನ್ನುತ್ತೀರಿ ನೀವು ಕಾರಣರಲ್ಲ ಎಂದರೆ ಎಲ್ಲವೂ ನಮ್ಮಿಂದಲೇ ಎಂದು ಬೀಗುತ್ತೀರಿ ....." ಎಂದು ಹುಡುಗಿಯರತ್ತ ಕೈ ಬೆರಳು ತೋರಿ ಕಿಡಿ ಹೊತ್ತಿಸಿದ. ಹೋಮಕ್ಕೆ ಅಗ್ನಿಸ್ಪರ್ಶ ಮಾಡಿದ ಮೇಲೆ ಇನ್ನೇನು ಕೆಲಸ ? ಮಂತ್ರ, ಶ್ಲೋಕಗಳು ಪ್ರಾರಂಭವಾಗುವ ಮುನ್ಸೂಚನೆ ದೊರೆಯಿತೆಂದೇ ಅರ್ಥ.
ನನಗೆ ಪ್ರತಿಭಾ ನಂದಕುಮಾರ ರವರ "ಹುಡುಗಿಯರೇ ಹೀಗೆ" ಕವಿತೆ ನೆನಪಾಯಿತು.-
“ಏನೇನೋ ವಟಗುಟ್ಟಿದರೂ 
ಹೇಳಬೇಕಾದ್ದನ್ನು ಹೇಳದೆ 
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ
ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ 
ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ” 
ಈ ಸಾಲುಗಳು ಸುಳ್ಳೆನಿಸಿದವು ನಮ್ಮ ವಿದ್ಯಾರ್ಥಿನಿಯರ ಧೈರ್ಯದ ಮುಂದೆ. ನನ್ನ ಉಲ್ಲೇಖವೆಲ್ಲಿ ಉರಿಯುತ್ತಿರುವ ಅಗ್ನಿಗೆ ತುಪ್ಪ ಸುರಿದಂತಾಗುತ್ತದೋ ಎಂದು ಹೆದರಿದೆ! ಆದರೂ ಎರಡೂ ಬದಿಯಿಂದ ಕೂಗಾಟ ರೇಗಾಟಗಳು ಜೋರಾಗಿಯೇ ನಡೆದವು ಎದುರುಬದುರಾಗಿ ಕುಳಿತು ಸ್ಪರ್ಧೆಗೆ ಬಿದ್ದು ಮಂತ್ರ ಹೇಳುವ ದೇವರ್ಷಿಗಳಂತೆ. ಇರಲಿ ಬಿಡಿ. ಪಾಪ ಮಕ್ಕಳು ಎಷ್ಟು ದಿವಸವಾಗಿತ್ತೋ ಹೀಗೆ ಜಗಳವಾಡದೇ ಎಂದು ತುಸು ಹೊತ್ತು ಸುಮ್ಮನಿದ್ದೆ . ಆಮೇಲೆ ನಾನು ಈ ಕದನ ಹೋಮವನ್ನು ತಡೆಯುವ ವರುಣನ ಪಾತ್ರವನ್ನು ಮಾಡಲೇಬೇಕಾಯಿತು. ತಣ್ಣನೆಯ ಮಾತುಗಳ ಜಡಿಮಳೆಯನ್ನು ಸುರಿಸಿದೆ. ಕದನ ವಿರಾಮ ಘೋಷಣೆಯಾಗಿ ಸ್ವಲ್ಪ ತಣ್ಣಗಾದಂತೆ ಕಂಡರೂ ಒಳಗಿನ್ನೂ ನಿಗಿನಿಗಿ ಕೆಂಡದಿಂದ ಹೊಗೆಯಾಡುತ್ತಲೇ ಇತ್ತು. ಕೊನೆಗೆ ಆಲಿಕಲ್ಲಿನ ವರ್ಷಧಾರೆಯನ್ನೇ ಪಟಪಟನೆ ಹನಿಸಬೇಕಾಗಿ ಬಂತು. ಬಿಸಿರಕ್ತದ ತಲೆಗಳ ಮೇಲೆ ಆಲಿಕಲ್ಲುಗಳನ್ನಿಟ್ಟರೆ   ತಣ್ಣಗಾಗಲಾರವೇ ?  ಆಗ ಎಲ್ಲವೂ ನೀರವ... ನಿಶಾಂತ.... ಸಮಾಧಿಮೌನ...ಲಕ್ಷ್ಮಣನ ಮುಂದೆ  ಹಾರಾಡಿ ಅಬ್ಬರಿಸುತ್ತಿದ್ದ  ಶೂರ್ಪನಖಿಯ ಮೂಗು ಮುರಿದಂತಾಗಿತ್ತು. ಇನ್ನೆಲ್ಲಿ ಮೂಗುಮುರಿಯುವುದು ?  ಈಗ ಮೂಗುಮುರಿದು ಎಲ್ಲರನ್ನೂ ಎಚ್ಚರಿಸುವ ಸರದಿ ನನ್ನದಾಯಿತು. ಓಹೋ, ನನ್ನ ಬರಹ ಹಾದಿ ತಪ್ಪಿ  ಸೀಮೋಲ್ಲಂಘನ ಮಾಡಿತೇ?  ಕ್ಷಮಿಸಿ. ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ? ( ಕಾಲವಶದಿಂದ ಸಾಗರವೂ ಒಮ್ಮೊಮ್ಮೆ ಮೇರೆಯನ್ನು ದಾಟುತ್ತದೆಯಲ್ಲವೇ )  ಎಂದು ಮಹಾಮಹಿಮ ಜೈನಶಲಾಕಾ ಪುರುಷ ಹಾಗೂ ಪ್ರತಿವಾಸುದೇವನಾಗಿದ್ದ ರಾವಣನ ಚಂಚಲತೆಗೆ, ನಾಗಚಂದ್ರನೇ ಸಮರ್ಥನೆಯನ್ನು ಕೊಟ್ಟಿರುವಾಗ ನಮ್ಮಂತಹ ಹುಲುಮಾನವರ ಬರಹಕ್ಕಿನ್ನೆಲ್ಲಿಯ ಸೀಮೆಯಲ್ಲವೇ?. ಸೀತಾಪಹರಣದ ನಂತರವೂ ರಾವಣ ಕ್ಷಮೆ ಕೇಳಲಿಲ್ಲ. ನಾನಿಲ್ಲಿ ಕ್ಷಮಿಸಿ ಎನ್ನುತ್ತಿದ್ದೇನೆ. ಮತ್ತೆ ಗಾಳಿಪಟಕ್ಕೆ ಬರೋಣ. ಗಾಳಿಪಟಕ್ಕೂ ಮದ್ಯಕ್ಕೂ ಅದೆಂತಹ ಸಹಸಂಬಂಧವೆಂದು ಹೀಗಳೆಯದಿರಿ. ಮನಸಿಟ್ಟು ಮಧು ಹೀರಿ ಎದೆ ಹಗುರಾಗಿಸಿಕೊಂಡು ಉಯ್ಯಾಲೆಯಾಡುವ  ಮಧುಪ್ರಿಯರಿಗೂ, ಮನಸು ಬಿಚ್ಚಿ ಮುಗಿಲೆತ್ತರಕೆ ಹಾರುವ ಗಾಳಿಪಟಕ್ಕೂ ಅವಿನಾಭವ ಸಂಬಂಧವೊಂದಿದೆ ಹೇಳುತ್ತೇನೆ ಕೇಳಿಬಿಡಿ. ಅಗಸದಲ್ಲಿ ಹರಿದಾಡುವ ಮೇಘಗಳಿಗೆ ಚುಂಬಿಸುವ ತೆರದಿ ಗಾಳಿಯನ್ನು ಕುಡಿದು ಓಲಾಡುತ್ತಾ  ಹಾರುವ ಗಾಳಿಪಟ ಮನಬಂದಂತೆ ತೇಲಿ ಹಾರಾಡಿ ನಲಿಯುವುದನ್ನು ಕಣ್ಣಾರೆ ಕಂಡಿದ್ದೇವೆ. ಮಧುಪ್ರಿಯರೂ ಅಷ್ಟೇ ಒಡಲೊಳಗಳಿದ ಮಧುವಿನ ಮಹಿಮೆಯಿಂದ ರಸ್ತೆ, ಮನೆ, ಉದ್ಯಾನವನಗಳೆನ್ನದೇ, ತುಂಬೆಲ್ಲಾ ಹರಿದಾಡಿ ಹೊರಳಾಡಿ ನಿಂತಲ್ಲಿಯೇ ಅನಂತದಲ್ಲಿ ತೇಲುವುದಿಲ್ಲವೇ ?. ವ್ಯತ್ಯಾಸವೆಂದರೆ, ಮಧುಪ್ರಿಯರಿಗೆ ಭೌತಿಕವಾಗಿ ಕಾಣುವ ಬಾಲವಿಲ್ಲ. ಆದರೂ  ಸಾಧ್ಯವಿರುವಷ್ಟು ಕಾಣದಂತೆ ಅವಕಾಶವಿರುವೆಡೆಯಲ್ಲೆಲ್ಲಾ ಬಿಚ್ಚುತ್ತಲೇ ಇರುತ್ತಾರೆ.  ಗಾಳಿಪಟಕ್ಕೆ ಜೀವವಿಲ್ಲ. ಆದರೂ ಅಮಲನ್ನೇರಿಸಿಕೊಂಡು ಆಗಸಕ್ಕೆ ಚುಂಬಿಸಬೇಕೆಂದು ಜೀವವೂ ನಾಚುವಂತಹ ಉತ್ಸಾಹ ಪರವಶತೆಯಿಂದ ಹವಣಿಸುತ್ತಲೇ ಇರುತ್ತದೆ. ಅದೃಷ್ಟವಶಾತ್ ಗಾಳಿಪಟವನ್ನು ಸೂತ್ರದಿಂದಲಾದರೂ ಬಂಧಿಸಿ ನಿಗದಿತ ಏರಿಯಾದಲ್ಲಿ ಮಾತ್ರ ಹಾರಾಡುವಂತೆ ಮಾಡಬಹುದು. ಆದರೆ ಮಧುಪ್ರಿಯರ ಚಲನಶೀಲತೆ, ಜವ , ವೇಗಗಳನ್ನೆಲ್ಲಾ ದೇವನೇ ಬಲ್ಲ. ಕೊರೊನಾ ಕಾರಣದಿಂದ ಅಂಗಡಿಯ ಮುಂದೆ ಕೊಳ್ಳಲು ನಿಂತಾಗಲμÉ್ಟೀ ಮೂರಡಿಯ ಅಂತರದ ಸಾಲು. ಕೊಂಡ ನಂತರ ಅಂತರವೆಲ್ಲವೂ ಮಣ್ಣುಪಾಲು. ಇವರನ್ನು ಹೇಗೆ ನಿಯಂತ್ರಿಸಬಹುದು ಎಂಬುದಕ್ಕೆ ಉತ್ತರಗಳಿನ್ನೂ ಸಂಶೋಧನೆಯ ಹಂತದಲ್ಲಿಯೇ ಉಳಿದುಹೋಗಿವೆ. ಗಾಳಿಯನ್ನು ಹೀರುತ್ತಲೇ ನಿಧಾನವಾಗಿ ಮೇಲೇರಿದ ಗಾಳಿಪಟಕ್ಕೆ ಕೆಳಗಿರುವ ಭುವಿಯೇ  ನಗಣ್ಯ. ಮಧುಪ್ರಿಯರ ಒಡಲೊಳಗೆ ಇಳಿದಂತೆ ಒಳಗಿರುವ ನಶೆಯ ಪಟವೂ ನೆತ್ತಿಯನ್ನೇರಿ ದಾಟಿ  ಹೊರಡುವುದಕ್ಕೆ ಅಣಿಯಾಗುತ್ತದೆ. ಆಗ ಇವರಿಗೂ ಭೂಮಿ ಒಂದು ಕಾಲ್ಚೆಂಡು ಅμÉ್ಟೀ. ಒದೆಯಲದೆಷ್ಟು ವ್ಯರ್ಥ ಪ್ರಯತ್ನ ಮಾಡುವರೋ ಎಂಬುದನ್ನು  ಕಣ್ತುಂಬಿಕೊಂಡೇ ಸುಖಪಡಬೇಕು. ಗಾಳಿಯನ್ನೊಮ್ಮೆ ಮನಸಾರೆ ಇಂಗಿಸಿಕೊಂಡ ಮೇಲೆ ಸಾಕಾಗುವವರೆಗೂ ಓಲಾಡಿ ತೇಲುವ ಕಥೆ ಗಾಳಿಪಟದ್ದಾದರೆ, ಮಧುಶಾಲೆಯೊಳಗೆ ಕುಳಿತು ಮನದನಿಯೆ ಸೋಮರಸವನ್ನೊಮ್ಮೆ  ಗುಟುಕು ಗುಟುಕಾಗಿ ಹೀರಿದರೆ  ಸಾಕು. ಅಬ್ಬಾ! ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ ಮಧುಚಂದ್ರರಿಗೆ. ಅಮಲಿನ ರಾಕೆಟ್ ಬಳಸಿ ಅಂತರಿಕ್ಷ ಯಾತ್ರಿಗಳಂತೆ ಮೇಲೇರಿದ್ದೇ ಏರಿದ್ದು. ನವಗ್ರಹಗಳನ್ನೂ ಒಮ್ಮೆ ಸುತ್ತಾಡಿ ಸುಸ್ತಾದ ಮೇಲೆ ಎಚ್ಚರವಾದಾಗಲೇ ಗೊತ್ತಾಗುವುದು ಭುವಿಗೆ ಬಂದಿಳಿದಿರುವುದು.  ಗಾಳಿಪಟವೂ ಹಾಗೆಯೇ ಕುಡಿದ ಗಾಳಿಯ ನಶೆಯಿಳಿದ ಮೇಲೆಯೇ ಅಲ್ಲವೇ ಕೆಳಗಿಳಿದು ಧೊಪ್ಪನೆ ಬಾಲಮುದುರಿಕೊಂಡು ಬೀಳುವುದು.
   ಈ ಮಧುಮೀಮಾಂಸೆಯನ್ನು ಕುರಿತು ಹರಿವಂಶರಾಯ್ ಬಚ್ಚನ್ ರವರ ಕವಿತೆಯನ್ನು ಕೇಳಿ- 
"ಭಾವ ಮಧುವನದ
ಮದಿರೆಯನು ಕಸಿದು ತಂದಿದ್ದೇನೆ
ಯಾರೆಷ್ಟೇ ಕುಡಿದರೂ, ತುಟಿ ಕಚ್ಚಿ ಎಳೆದರೂ
ಖಾಲಿಯಾಗದು ಪ್ಯಾಲೆ ಎಂದು ನಂಬಿದ್ದೇನೆ."
ಮದಿರೆ, ಗಾಳಿಪಟ, ತಂಗಾಳಿ, ಕಾವ್ಯ, ಚಂದಿರ, ಬೆಳದಿಂಗಳು ಇವು ಜಗತ್ತಿನ ಮರೆಯಲಾಗದ ಅತ್ಯದ್ಭುತ ಸಾಂಗತ್ಯಗಳು. ಬದುಕಿನ ವ್ಯಾಖ್ಯಾನವನ್ನೇ ತಮ್ಮೊಳಗಡಗಿಸಿಕೊಂಡಿರುವ ಈ ಭುವಿಯ ವಿಸ್ಮಯಗಳಿವು.  ನಾಗಚಂದ್ರನೂ ಕೂಡ ತನ್ನ  "ರಾಮಚಂದ್ರಚರಿತಪುರಾಣ" ಕಾವ್ಯದಲ್ಲಿ ಹಾರಮರೀಚಿಮಂಜರಿ (ರತ್ನದ ಹಾರಗಳ ಕಿರಣ ಕಾಂತಿ), ಸುಧಾಂಶುಲೇಖೆ (ಬೆಳದಿಂಗಳ ಪುತ್ಥಳಿ), ಸುಧಾರಸಧಾರೆ( ಅಮೃತಧಾರೆ), ಕರ್ಪೂರ ಶಲಾಕೆ ಗಳಷ್ಟು ದೃಷ್ಟಿಗೆ ತಂಪನ್ನೆರೆದು ತಣಿಸಿ ಮೀರಿಸುವ ಬೇರೊಂದು ವಸ್ತು ಭುವನದಲ್ಲಿಯೇ ಇಲ್ಲವೆಂದು ಹೇಳುತ್ತಾ ಸೀತೆಯ ಸೌಂದರ್ಯವನ್ನು ಇವೆಲ್ಲವುಗಳಿಗಿಂತ ಮಿಗಿಲಾದದ್ದು ಎಂದು ಬಣ್ಣಿಸುತ್ತಾನೆ. ಸಂದರ್ಭೋಚಿತವಾಗಿ ಇವುಗಳು ಒಂದರೊಡನೊಂದು ಸೇರಿದಾಗಲಂತೂ ಕ್ಷೀರಸಾಗರದಿಂದ ಉದ್ಭವಿಸಿದ ಅಮೃತವನ್ನೂ ಮೀರಿದ ಮಹಾರಸಾಯನವೇ ಸೃಷ್ಟಿಯಾಗಿಬಿಡುತ್ತದೆ. 
  ಗಾಲಿಬ್  ಪ್ರೀತಿಸಿದ ಸೋಮರಸವೇ ಅವನ ಕಾವ್ಯಗಳಿಗೊಂದು ಘಮಲು ಅಮಲನ್ನು ನೀಡಿತೆಂಬುದಕ್ಕೆ ಆತ ರಚಿಸಿದ ದ್ವಿಪದಿಗಳು ಸಾಕ್ಷಿಯಾಗುತ್ತವೆ. ಮಹಾಕವಿಗಳಾದಿಯಾಗಿ ಭುವನದ ಭಾಗ್ಯವಂತರನ್ನು ಕಾಡಿದ ಮಧುಪಾತ್ರೆ ಜಗತ್ತು ಮೈಮರೆಯುವಂತೆ ಮಾಡಬಲ್ಲ ಕಾವ್ಯ ಸಾಹಿತ್ಯ ಸೃಷ್ಟಿಗೆ ತನ್ನ ಅಮಲನ್ನೆರೆದಿದೆ.  ಸಾಹಿತ್ಯ, ಸಂಗೀತ, ಲಲಿತಕಲೆಗಳ ಲೋಕದಲ್ಲಿ ಮಧುವಿನದ್ದು ಕಡೆಗಣಿಸಲಾಗದ ಲೀಲಾವಿಲಾಸ. ಹಾಗೆ ಒಂದು ಸಂಜೆ ನಾನು ಹಾರಿಸಿದ ಗಾಳಿಪಟಕ್ಕೆ ಬೆರಗಾಗಿ ಚಂದಿರನೂ ಚುಂಬಿಸುತಲಿದ್ದ. ತನಗಿಷ್ಟು ನಶೆಯಿರಲಿ ಎಂದು ಅಮಲನ್ನು ಹೀರುತ್ತಲಿದ್ದ. ಚಂದ್ರಲೋಕಕ್ಕೆ ಏರಿ ಹಾರಿದ್ದ ಗಾಳಿಪಟ ಈಗ ನಶೆಯನ್ನಿಳಿಸಿಕೊಂಡು ಬಾಲವನ್ನು ಅಲ್ಲಾಡಿಸುತ್ತಲೇ ಕೆಳಗಿಳಿದಿತ್ತು. ಆಗ ಕತ್ತಲಾಗಿತ್ತು. ವಿರಹವೇದನೆಯಲ್ಲಿ ನರಳಿದ ಚಂದಿರ ಬೆಳದಿಂಗಳನ್ನೆಲ್ಲಾ ತಾನೇ ಕುಡಿದು ತೇಲಿಬಿಟ್ಟ. ಕಾಯುತ್ತಾ ಕುಳಿತಿದ್ದ ಚಕೋರಿ ಮಾತ್ರ ಬಾಯಾರಿ ಬೆಳದಿಂಗಳ ಅಮಲಿಗಾಗಿ ಕಾದು ಬಿಕ್ಕಳಿಸುತಲಿತ್ತು. ಜಗವು ಮುಕ್ಕಳಿಸುತ್ತಿತ್ತು. ಹರಿವಂಶರಾಯ್ ಬಚ್ವನ್ ರವರ ಕೊನೆಯ ಗುಟುಕು
" ನನ್ನ ಶೆರೆಯಲ್ಲಿ ಒಂದೊಂದು 
ಹನಿ ಒಬ್ಬೊಬ್ಬರಿಗೂ 
ನನ್ನ ಪ್ಯಾಲೆಯೊಳಗೆ 
ಒಂದೊಂದು ಗುಟುಕು ಎಲ್ಲರಿಗೂ 
ನನ್ನ ಸಾಕಿಯೊಳಗೆ 
ಅವರವರ ಸಾಕಿಯರ ಸುಖ ಎಲ್ಲರಿಗೂ 
ಯಾರಿಗೆ ಯಾವ ಹಂಬಲವೋ
ಹಾಗೇ ಕಂಡಳು ನನ್ನ ಮಧುಶಾಲಾ".


2 comments:

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...