7ನೇ ನೆತ್ತರದ ಕತೆ “ಕಾಫರ್ ನ ಕೊನೆಯ ಪತ್ರಗಳು”
ಲೇಖಕರು – ರಾಜಶೇಖರ ಮಠಪತಿ(ರಾಗಂ)
ವಿಮರ್ಶೆ – ಚಂದ್ರಶೇಖರ ಹೆಗಡೆ
ಖ್ವಾಜಾ ಅಹ್ಮದ್ ಅಬ್ಬಾಸ್ ರವರು, ದೇಶ ತೊರೆದು ಹೋದ ಸಾಹಿತಿ ಸಾಹಿರ್ ಲುಧಿ ಯಾನ್ವಿಗೆ ಬರೆದ ಪತ್ರದ ಒಕ್ಕಣೆಯೊಂದಿಗೆ ಪ್ರಾರಂಭವಾಗುವ ಈ ಕಥೆ ಅಬ್ಬಾಸ್ ರವರ ಮಾನವ ಪ್ರೇಮ, ದೇಶ ಪ್ರೇಮ, ಪತ್ರಿಕಾ ಪ್ರೇಮದ ಪೂಜಾರಿತನವನ್ನು ನೇರ ಹಾಗೂ ಸರಳ ನಿರೂಪಣೆಯೊಂದಿಗೆ ಸಮರ್ಥವಾಗಿ ಕಟ್ಟಿಕೊಡುತ್ತದೆ. ಲೌಕಿಕದಲ್ಲಿದ್ದು ಅಲೌಖಿಕವನ್ನುನುಭವಿಸುವ ಫಕೀರನಾಗಿ ಸಂತನಾಗಿ ಸಾಮಾನ್ಯರನ್ನು ಪ್ರೀತಿಸುವ, ಆರ್ಥಿಕವಾಗಿ ಬಡವ, ಸರಳತೆಯಲ್ಲಿ ಶ್ರೀಮಂತನಾದ ಬದುಕಿನ ಪವಿತ್ರ ಪ್ರೇಮಿಯೊಬ್ಬನ ಜೀವನವನ್ನು ವಿಶಿಷ್ಟ ಶೈಲಿಯಲ್ಲಿ ನಮಗೆ ಪರಿಚಯಿಸುತ್ತದೆ.
ಅಮೀರ್ ಖುಸ್ರೋರಂಥವರು ಆಧ್ಯಾತ್ಮಿಕ ಜಗತ್ತಿನ ಅನುಭಾವಿಯಾಗಿ, ಸೂಫಿಯಾಗಿ ಭಾರತ ನೆಲದ ಸಂಸ್ಕತಿಯನ್ನು ಸ್ವರ್ಗ ಸದೃಶವಾಗಿ ಪರಿಭಾವಿಸುವುದನ್ನು ನಾವು ಕಂಡಿದ್ದೇವೆ. ಅಂಥದ್ದೇ ಭಾರತ ನೆಲದಲ್ಲಿ ದೇಶಭಕ್ತ ಭಗತ್ ಸಿಂಗ್ನನ್ನು ಮಿತ್ರನಾಗಿ ಪಡೆದು, ಪತ್ರಿಕೋದ್ಯಮದ ಪ್ರೀತಿಗೆ ಸೋತು, ಕುಂತಲ್ಲಿ ನಿಂತಲ್ಲಿ ಸಾಹಿತ್ಯ ರಚಿಸುವ ಅಬ್ಬಾಸರ ಸಾಹಸಗಳು ನಮಗೆ ಹೇಗೆ ದೀವಿಗೆಗಳಾಗಿವೆ ಎಂಬುದರ ಆತ್ಮ ಚಿಂತನೆಗೆ ನಮ್ಮನ್ನು ತೊಡಗಿಸುವ ರೀತಿಯ ನಿರೂಪಣೆ ಮನಸೆಳೆಯುತ್ತದೆ.
1903 ಜೂನ್ 7ರಂದು ಪಾಣಿಪತ್ನಲ್ಲಿ ಜನಿಸಿದ ಅಬ್ಬಾಸರ ತಂದೆ, ಸರಳ ಜೀವನ ಉದಾತ್ತ ಪ್ರಗತಿಪರ ಚಿಂತನೆಯ ಪ್ರತಿಪಾದಕರು. ವಿದ್ಯಾರ್ಥಿಯಾಗಿದ್ದಾಗ ಅಲೀಘಡ ವಿಶ್ವವಿದ್ಯಾಲಯದ ಕಟ್ಟಡದ ಮೇಲೆ ತ್ರಿವರ್ಣ ಧ್ವಜ ಹಾರಿಸಿದಾಗಲೇ ಅಬ್ಬಾಸರಲ್ಲಿ ರಕ್ತಗತವಾಗಿ ಬಂದಿದ್ದ ದೇಶಭಕ್ತಿ, “ಸನ್ ಆಫ್ ಇಂಡಿಯಾ” ಎಂಬ ದಾಖಲೆಯ ಕೃತಿ ರಚನೆಗೆ ಹೇಗೆ ಪ್ರೇರಣೆಯಾಯಿತು ಎಂಬುದನ್ನು ವಾಸ್ತವವಾದದ ನೆಲೆಯಲ್ಲಿ ನಮಗೆ ದಕ್ಕಿಸಿಕೊಡುತ್ತಾರೆ ಲೇಖಕರು.
ಪತ್ರಕರ್ತ, ಚಿತ್ರನಿರ್ದೇಶಕ, ನಿರ್ಮಾಪಕ, ರಾಜಕೀಯ ಸಲಹೆಗಾರ ಹೀಗೆ ಬಹುಮುಖ ಪ್ರತಿಭಾಶಾಲಿಯಾಗಿ ಅವರು ನೆಲೆ ನಿಂತದ್ದಕ್ಕಿಂತ ಅಲೆದಾಡಿದ್ದೇ ಹೆಚ್ಚು.ಲೇಖಕರ ಮಾತಿನಲ್ಲಿಯೇ ಹೇಳುವುದಾದರೆ “ಅಬ್ಬಾಸರು ಹಲವಾರು ರಂಗಗಳಲ್ಲಿ ತಾವೇ ಮೊದಲ ಪುಟವಾಗಿ ಆರಂಭಿಸಿದರು ಮತ್ತು ತಾವೇ ಕೊನೆಯ ಪುಟವಾಗಿ ಹೋದರು”. ಅಬ್ಬಾಸರ ಮರಣೋತ್ತರದ ಪತ್ರದಲ್ಲಿರುವ “ಪತ್ರಿಕಾ ಜೀವನದ 47ವರ್ಷದ ನನ್ನ ಪ್ರೀತಿಯ ‘ಕೊನೆಯ ಪುಟ’ದ ಎಲ್ಲ ಲೇಖನಗಳೂ ನನ್ನ ಸಮಾಧಿಯೊಳಗಿನ ಹಾಸಿಗೆಯಾಗಿರಲಿ, ನನ್ನ ದೇಹದ ಮೇಲೆ ಹೆಣದ ಬಟ್ಟೆಯಾಗಿರಲಿ” ಎಂಬ ಸಾಲುಗಳು ಅವರ ಚೈತನ್ಯದ ಚೆಲುಮೆಯಾಗಿರುವ ಸಾಹಿತ್ಯ ಪ್ರೀತಿಯನ್ನು ತೀವ್ರವಾಗಿ ಧ್ವನಿಸುತ್ತದೆ. ಈ ಕಥೆಯ ಮೂಲಕ ಲೇಖಕರು, ನಮ್ಮಲ್ಲಿ ಮಲಗಿರುವ ಪ್ರಜ್ಞೆಯನ್ನು ಎಚ್ಚರಗೊಳಿಸಿ ನಮ್ಮನ್ನು ಜಾಗೃತರನ್ನಾಗಿಸುತ್ತಾರೆ. ಮರೆತುಹೋದ ವ್ಯಕ್ತಿಗಳ ಮರೆಯಲಾಗದ ಸಂಗತಿಗಳನ್ನು ನಮಗೆಲ್ಲ ಮಾರ್ಗದರ್ಶನ ರೂಪದಲ್ಲಿ ನಮ್ಮ ಕಣ್ಣೆದುರಿಗೆ ತರುತ್ತಾರೆ. ಆತ್ಮ ವಿಮರ್ಶೆಗೊಳಪಡಿಸುತ್ತಾರೆ.
No comments:
Post a Comment