Total Pageviews
Saturday 27 April 2019
ಕಾವ್ಯೋದ್ಯಾನವನದಲ್ಲೊಂದು ವಿಹಾರ...ಭಾಗ ೧
ಕಾವ್ಯೋದ್ಯಾನವನದಲ್ಲೊಂದು ವಿಹಾರ...ಭಾಗ ೧ "ಜಾಡಮಾಲಿಯ ಜೀವ ಕೇಳುವುದಿಲ್ಲ"ಇದೊಂದು ನಾಡಿನ ದಣಿವರಿಯದ ಬರಹಗಾರರಾದ ಡಾ. ರಾಜಶೇಖರ ಮಠಪತಿ( ರಾಗಂ) ರವರ ಅನುವಾದಿತ ಕೃತಿಯಾದರೂ,
ಖಡ್ಗ ಹಾಗೂ ಕಾವ್ಯದ ಗುರಿಗಳು ವಿಭಿನ್ನವಾಗಿದ್ದರೂ ಅವೆರಡೂ ಸಂಧಿಸಿ ಸೃಜಿಸಿದ ಅಪರೂಪದ ಕಾವ್ಯಾನುವಾದ ಕೃತಿ "ಜಾಡಮಾಲಿಯ ಜೀವ ಕೇಳುವುದಿಲ್ಲ..." .ರಾಗಂರವರಿಗೆ ಕಾಡಿದ ಜಾಡಮಾಲಿ ದುಡಿಯುವ ವರ್ಗದ ಪರಿಶ್ರಮಜೀವಿ. ಆಕೆಯ ಅಂತಃಶಕ್ತಿ ಅನಂತವಾದುದು.ಅಗಣಿತವಾದುದು.ಆ ಜೀವಚೈತನ್ಯವೇ ರಾಗಂರವರ ಈ ಕೃತಿಗೆ ಸ್ಪೂರ್ತಿಯಾಗಿರುವುದು ವಿಶೇಷ. ಕಾವ್ಯಕ್ಕೆ ಹೇಗೆ ಆರಂಭ ಮಧ್ಯೆ ಅಂತ್ಯಗಳಿಲ್ಲವೋ ಈ ಕೃತಿಯಲ್ಲಿರುವ ಕವಿವರ್ಯರಿಗೂ ಆದಿ ಅಂತ್ಯಗಳ ಸೀಮೆಗಳಿಲ್ಲ; ಚೌಕಟ್ಟುಗಳೆಂಬ ಗಡಿಗಳಿಲ್ಲ; ಅಂತಿಮವೆಂಬ ಗೆರೆಗಳಿಲ್ಲ. ಇಲ್ಲಿ ಇರುವುದೊಂದೇ ಅದು ಅನಂತ, ಅತೀತ, ಅಮರ. ಈ ಕೃತಿಯ ಕಾವ್ಯಕತೆಗಳು ನಿರಂತರವಾಗಿ ಧುಮ್ಮಿಕ್ಕುವ ಪ್ರವಾಹ. ಕಾಲ ಸ್ಥಳ ವನ್ನೂ ಮೀರಿದ ಕಾವ್ಯಸಂವಾದ ಈ ಕೃತಿಯ ಪರಮ ಉದ್ದೇಶಗಳಲ್ಲಿ ಒಂದು. ಕಾವ್ಯವೆಂದರೆ ರಾಗಂ ಮಣ್ಣಿಗಿಳಿಯುತ್ತಾರೆ. ಜೋಳಿಗೆಯ ನೆಲದಲ್ಲಿ ಇಳಿಯಬಿಟ್ಟಿರುವ ನೂರು ಮರಗಳ ಬೇರಿಗಿಳಿಯುತ್ತಾರೆ. ಕಾವ್ಯವೆಂದರೆ ರಾಗಂ ಜಾಡಮಾಲಿಯೊಂದಿಗೆ ಉದ್ಯಾನವನದಲ್ಲಿ ದಿನಗಟ್ಟಲೇ ಅಲೆಯುತ್ತಾರೆ. ಅಲ್ಲಿ ತಲೆಯೆತ್ತಿ ಮಂದಹಾಸ ಬೀರುತ್ತಾ ಕೈಬೀಸಿ ಸ್ವಾಗತಿಸುತ್ತಿರುವ ದೇಶವಿದೇಶಗಳ ಸಸಿಗಳೊಂದಿಗೆ ಮಾತಿಗಿಳಿಯುತ್ತಾರೆ. ಕಾವ್ಯದ ಸಂಗಾತ ಬಯಸಿದಾಗೊಮ್ಮೆ ಜೋಳಿಗೆಯಲ್ಲರಳಿದ ಮಲ್ಲಿಗೆಯ ಮೊಗ್ಗಿನ ಚೆಲುವನ್ನು ಕಂಡು ಬೆರಗಾಗಿ ಪಿಸುಮಾತಿಗಿಳಿಯುತ್ತಾರೆ. ಮಣ್ಣಿನಿಂದ ಮರ ಹೀರಿದ ಜೀವಸತ್ವ ಹೂವಾಗಿ ಅರಳಿ ಹಣ್ಣಾಗಿ ರಸದುಂಬುವಂತೆ, ರಾಗಂರವರು ಹೀರಿದ ನೆಲದ ಸೊಗಡು ಮಾಗಿ ಅಲೌಕಿಕತೆಗೇರಿ ಕಾವ್ಯವಾಗಿ ಅದೆಷ್ಟೋ ಜೀವಗಳ ಮನದುಂಬುತ್ತದೆ. ಕಾವ್ಯವೆಂದರೆ ರಾಗಂ ಮಣ್ಣಿನೊಂದಿಗೆ ಸಂವಾದಕ್ಕಿಳಿಯುತ್ತಾರೆ. ಅವರ ಹಳೆಯ ಮನೆಯ ಮೇಲ್ಮುದ್ದಿಯ ಹಾಳು ಮಣ್ಣೂ ಇವರನ್ನು ಬಳಿ ಕರೆದು ಸಂವಾದಿಸುತ್ತದೆಯೆಂದರೆ ರಾಗಂರವರಲ್ಲಿ ನೆಲದ ಸೊಗಡಿನ ನಂಟು ಅದೆಷ್ಟು ಗಾಢವಾಗಿ ಆಳವಾಗಿ ಜೀವದೊಳಗಿಳಿದಿದೆ ಎಂಬುದನ್ನು ಅರಿಯಬೇಕು. ಹಾಗೆ ಅರಿತಾಗಲೇ ಅವರ ಕಾವ್ಯ ತನ್ನ ಮನೆಗೆ ಕರೆದೊಯ್ಯುತ್ತದೆ. ಬಳಿಸಾರಿ ತಲ್ಲಣಗಳನ್ನು ಹೆಕ್ಕಿ ತೋರುವ ಮನಸು ಮಾಡುತ್ತದೆ." ಮಸೀದಿ ಮಂದಿರಗಳ ಕರೆಗೆಓಡುವ ಹುಚ್ಚು ಮನವೆನಿನ್ನೆದೆಯ ದೇಗುಲವನೆಂದಾದರೂ ಹೊಕ್ಕೆಯೇನು? ಇಲ್ಲಿ ಕಾಣದ ದೇವರುನಿನಗೆಂದಾದರೂ ಅಲ್ಲಿ ಕಂಡನೇನು? "ಈ ಕೃತಿಯಲ್ಲಿ ಪದಗಳಾಗಿರುವ ಬುಲ್ಲೇಷಾನ ಕಾವ್ಯದ ಸಾಲುಗಳು ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ "ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆಇಲ್ಲೇ ಇರುವ ಪ್ರೀತಿ ಪ್ರೇಮಗಳ ಗುರುತಿಸದಾದೆನು ನಮ್ಮೊಳಗೆ""ಅನ್ವೇಷಣೆ" ಕವಿತೆಯ ಪಾದಗಳನ್ನು ನೆನಪಿಸುತ್ತವೆ. ದೇಶ, ಕಾಲಗಳು ಭಿನ್ನವಾಗಿದ್ದರೂ ಕಾವ್ಯ ಒಂದೇ, ಕಾವ್ಯದ ಆಶಯವೂ ಕೂಡ ಎಂಬುದಕ್ಕೆ ಮೇಲಿನ ಕವಿತೆ ದೃಷ್ಟಾಂತವಾಗಿದೆ.ರಾಗಂ ರವರ ಅನುವಾದಗಳೂ ಹಾಗೆಯೇ... "ಜಾನ್ ಕೀಟ್ಸ್...... ನೀರ ಮೇಲೆ ನೆನಪ ಬರೆದು " ಕೃತಿ ಜಾನ್ ಕೀಟ್ಸ್ ಬರೆದ ಪತ್ರಗಳ ಅನುವಾದವಾದರೂ ರಾಗಂರವರ ಕಾವ್ಯಭಾಷೆಯಿಂದ ಸ್ವತಂತ್ರ ಕೃತಿಯೆಂಬಂತೆ ಜೀವಂತಿಕೆಯಿಂದ ಕಂಗೊಳಿಸುತ್ತದೆ. ನನ್ನ ಮನೆಯ ಮುಂದೆ ಅರಳಿದ ದುಂಡುಮಲ್ಲಿಗೆಯ ಸುಗಂಧವನ್ನು ಹೀರಿದಾಗೊಮ್ಮೆ ಪಂಪ ರನ್ನ ಜನ್ನ ಕುವೆಂಪು ಬೇಂದ್ರೆ ಸುಳಿಯುವಂತೆ, ಮೊದಲ ಮಳೆಯ ಹನಿಗೆ ಸುಗಂಧಿತವಾದ ಮಣ್ಣು ಪರಿಮಳ ಬೀರಿದೊಡನೆ ನೆನಪಾಗುವುದು ರಾಗಂರವರ ಕಾವ್ಯಾಲಾಪ. ಈ ಜಾಡಮಾಲಿಯ...... ಕೃತಿಯನ್ನು ಕೈಗೆತ್ತಿಕೊಂಡಾಗಲೇ ಅದು ಬೀರುತ್ತಿರುವುದು ಕಾವ್ಯಸುಮದ ಪರಿಮಳವೆಂದು ಮನಸು ಅರಿತುಬಿಡುತ್ತದೆ. "ಖಂಡಾಂತರ ಕಾವ್ಯಕ್ಕೊಂದು ಸಾಕ್ಷಿ" ಎಂಬ ಅಡಿಬರಹದೊಂದಿಗೆ ಸಹೃದಯರ ಕೈಗಿಳಿದ ಈ ಕೃತಿ ಖಂಡಗಳನ್ನೂ ಮೀರಿದ ಕಾವ್ಯಸಂವಾದಕ್ಕೆ ವೇದಿಕೆಯಾಗಿದೆ. ಕಾವ್ಯಕ್ಕೆ ಊರು, ನಗರ, ರಾಜ್ಯ, ದೇಶ, ಖಂಡಗಳೆಂಬ ಸೀಮೆಗಳಿಲ್ಲ. ಕಾವ್ಯ ಸೀಮಾತೀತ; ಕಾಲಾತೀತ; ಭಾವಾತೀತ;ರಂಜನಾತೀತ; ದೇಹಾತೀತ;ಆತ್ಮಾತೀತ. ರಾಗಂರವರೇ ಹೇಳುವಂತೆ ಗಾಳಿಯೊಡನಾಟದ ಗಂಧದಂತೆ ಸೀಮಾತೀತವಾಗುವುದೇ ಜೀವದ ಸಾರ್ಥಕ್ಯ ಹಾಗೂ ಕಾವ್ಯದ ಗುರಿ. ವೈಯಕ್ತಿಕತೆಯನ್ನೂ ಮೀರಿದ್ದು ಕಾವ್ಯವಾಗಬಲ್ಲದು ಎಂಬುದಕ್ಕೆ ಈ ಕೃತಿಯಲ್ಲಿ ಅನಾವರಣಗೊಂಡಿರುವ ವ್ಯಕ್ತಿತ್ವಗಳೇ ನಿದರ್ಶನಗಳಾಗಿವೆ. "ಜೋಳಿಗೆಯಲ್ಲಿ ನೆಟ್ಟ ಮರಗಳಂತೆ, ಕಾವ್ಯದ ಈ ಅನಾಥ ಬೀಜಗಳನ್ನು ಎಲ್ಲೆಲ್ಲಿಂದಲೋ ತಂದೆ. ಯಾವುದೇ ನಿರ್ದಿಷ್ಟ ಗುರಿ, ಉದ್ದೇಶ ಈ ಕ್ರಿಯೆಯ ಹಿಂದಿಲ್ಲ. ದೇಶ ಕಾಲಗಳ ಪರಿವೆಯಿಲ್ಲದೆ ಹೊರಟ ದಾರಿಹೋಕನ ಜೋಳಿಗೆಗೆ ಬಿದ್ದ ಭಾವದ ಜೀವಗಳಿವು.ಸುಮಾರು ಎರಡು ದಶಕಗಳ ಹಾದಿ-ಹುಡಿ-ಮಣ್ಣು ಈ ಜೋಳಿಗೆಯಲ್ಲಿತ್ತು ಎನ್ನಿಸುತ್ತದೆ.ದಾರಿಹೋಕನ ಯಾತ್ರೆ ಅವಿರತ ಅನಂತವಾಗಿತ್ತು.ಮುಂದೆಲ್ಲೋ ಮಳೆಯಾಯಿತು.ನಾನು ನೆನೆದುಹೋದೆ. ಆದರೆ ಈ ಜೋಳಿಗೆಯ ಬೀಜಗಳೆಲ್ಲ ಮೊಳೆತು ಕವಿತೆಯಾದವು." ಎಂಬ ರಾಗಂರವರ ಆರಂಭಿಕ ನುಡಿಗಳು ಈ ಕೃತಿಯ ಹುಟ್ಟು, ಉದ್ದೇಶವನ್ನು ಸಾರುತ್ತವೆ. ಹೌದು. ರಾಗಂರವರು ಕಾವ್ಯವೆಂದರೆ ಹೀಗೆ ಅಲೆಮಾರಿಯಾಗುತ್ತಾರೆ. ಲೋಕದಲ್ಲಿ ಸಿಗುವ ವೈವಿಧ್ಯಮಯ ಕಾವ್ಯಬೀಜಗಳನ್ನು ಆಯ್ದು ತಂದು ಇಲ್ಲಿ ಪ್ರೀತಿಯಿಂದ ನೆಟ್ಟಿದ್ದಾರೆ. ಜತನದಿಂದ ಬೆಳೆಸಿ ಅಕ್ಷರಗಳಾಗಿ ಪೋಣಿಸಿದ್ದಾರೆ.ತಮ್ಮ ಕಾವ್ಯಭಾಷೆಯ ನೀರೆರೆದು ಸುಂದರ ವಾತಾವರಣದಲ್ಲಿ ತಾವೇ ಜಾಡಮಾಲಿಯಾಗಿ ಸಲುಹಿ ಜಗಕೆ ನೆರಳಾಗುವ ಹೆಮ್ಮರಗಳಾಗಿ ಪೋಷಿಸಿದ್ದಾರೆ.
Subscribe to:
Post Comments (Atom)
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಅರ್ಧಾಂಗಿ ಪುರಾಣ! ನಾನು ಎಂದಿನಂತೆ ನಿತ್ಯಕರ್ಮಗಳ ಮುಗಿಸಿ ಕರ್ತವ್ಯಕ್ಕಾಗಿ ಸಿದ್ಧವಾಗುತ್ತಿರುವಾಗ ಕೇಳಿದಳು ಸಾಕಿಯೊಮ್ಮೆ - " ಈ ಹಳೆಯ ಅಂಗಿಯನ್ನ ಹಾಕ್ಕೋ...
-
ಉಳುಕು ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು ಕತ್ತಲೆಯ ಧಿಮಾಕನ್ನೊರೆಯಲು ಸಾಕು ಉಬ್ಬಿದ ಅಸ್ಥಿ ಮಜ್ಜೆಗಳು ಜಾ...
No comments:
Post a Comment