Total Pageviews

Sunday 2 December 2018

ಸ್ತ್ರೀ ಎಂದರೆ ಅಷ್ಟೇ ಸಾಕೆ....(ಭಾಗ-೧)
          'ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಎಂದು ಹೆಣ್ಣು ಪಡೆಯಬೇಕಾದ ಶಿಕ್ಷಣದ ಅವಶ್ಯಕತೆಯ ಬಗ್ಗೆ  ನಾವು ಉದ್ಘೋಷಿಸುವುದಕ್ಕಿಂತ ಅದೆಷ್ಟೋ ಮುಂಚೆಯೇ ಎದೆಯಲ್ಲೊಂದು ಅಕ್ಷರದ ಗಂಧವನ್ನೂ ಸುಳಿಯಗೊಡದ ಆ ಹೆಣ್ಣು ಹಿಮಾಲಯದಂತಹ ಜೀವನಗಳನ್ನು ಮುಗಿಲೆತ್ತರಕ್ಕೆ ಕಟ್ಟಿ ಅಪರಿಮಿತ ಜೀವಗಳಿಗೆ ಬೆಳಕಾಗಿ ಬದುಕಿನ ದಾರಿಗೆ ಚೈತನ್ಯವಾಗಿದ್ದಳು. ಅದೂ ಸಮಾಜದ   ಪಂಡಿತರೆಲ್ಲ ಸೇರಿ ನಿರ್ಮಿಸಿದ ಕಟ್ಟಳೆಗಳ ಸಂಕೋಲೆಯ ಮಧ್ಯೆ ಎಂದರೆ ಹೆಣ್ಣು ಎಂಬ ಜೀವವೊಂದರ ಉಸಿರಾಟವನ್ನು ನಾವಿನ್ನೂ  ಅರಿಯಬೇಕಾಗಿದೆ. "ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ " ಎಂಬ ಉವಾಚವನ್ನು ಮುನಿದ ಹೆಣ್ಣಿನ ಮುಂದೆ ಉಲಿದು ಸಮಾಧಾನ ಪಡಿಸಿ ಮತ್ತೆಂದೂ ತಲೆ ಎತ್ತದಂತೆ ಫಲಭರಿತ ಬಾಳೆಯಂತೆ ಬಾಗಿಸಿ  ನಡೆಸಿಕೊಳ್ಳುವ  ಕಲೆ ಸಮಾಜಕ್ಕೆ ಪಾರಂಪರಿಕವಾಗಿ ಕರಗತವಾಗಿದೆ. ಹೆಣ್ಣೆಂದರೆ ಮೌನ ಹೆಣ್ಣೆಂದರೆ ಸುಮ್ಮಾನ.ಹೆಣ್ಣೆಂದರೆ ಜೀವನದ ಕುಶಲ ಕಲೆಗಾರ್ತಿ, ಹೆಣ್ಣೆಂದರೆ ಬದುಕೆಂಬ ನಾಟಕದ ರಂಗನಾಯಕಿ.ಹೆಣ್ಣೆಂದರೆ ಧೋ ಎಂದು ಸುರಿಯುವ ಬಿರುಮಳೆ;

  ಕೆಲವೊಮ್ಮೆ ಹೆಣ್ಣೆಂ
ದರೆ ಜಿಟಿಜಿಟಿ ಸದ್ದಿನ ಜಡಿಮಳೆ.ಮಗದೊಮ್ಮೆ ಹೆಣ್ಣೆಂದರೆ  ಬದುಕಿನ ಸವಾಲುಗಳ ಕಲ್ಲುಬಂಡೆಗಳ ಮಧ್ಯೆ ನಿಶಾಂತವಾಗಿ ಜಿನುಗುವ ಹಾಲನೊರೆ; ಅವಳೆಂದರೆ ಆಗಸದಲ್ಲಿ ಒಡಮೂಡಿ ಗುಡುಗುವ ಕಾರ್ಮೋಡ.ಅವಳೆಂದರೆ ಕ್ರಮಿಸಲಾಗದ ಬಲು ದೀರ್ಘ ದಾರಿ ಹೀಗೆ ಅವಳು ನಮಗೆ ಎಲ್ಲವೂ ಆಗಿ ಏನೂ ಆಗಿಲ್ಲದಂತೆ ಬದುಕುವ ನಿಸ್ಪೃಹ ಜೀವಿ. ಇತಿಹಾಸದಲ್ಲಿ ಹೆಣ್ಣು ಷಹಜಾನನ ಹೆಂಡತಿಯಾಗಿ ತಾಜಮಹಲಿನ ಗೋರಿಯೊಳಗೆ ಮಲಗಿ ವಿರಮಿಸಿದ ಪ್ರೀತಿಯಾಗಿದ್ದಾಳೆ. ಶ್ರೀಕೃಷ್ಣನ ಹದಿನಾರು ಸಾವಿರ ಮಡದಿಯರಾಗಿ ಶ್ರೀ ಕೃಷ್ಣಮಹಾತ್ಮೆಯ ಝರಿಗಳಾಗಿದ್ದಾರೆ. ಹದಿನಾಲ್ಕು ವರ್ಷಗಳ ಸುದೀರ್ಘ ಕಾಲ ವನವಾಸಗೈದು ರಾವಣನಂತಹವರ ಕೈಯ್ಯಲ್ಲಿ ನರಳಿ ಮತ್ತೆ ಪತಿಯೇ ಪರದೈವವೆಂದು ಶ್ರೀರಾಮನ ಪಾದಕೆರಗಿದ ಸೀತೆಯಾಗಿದ್ದಾಳೆ. ದುಷ್ಯಂತನ ಬಲೆಯಲ್ಲಿ ಸಿಲುಕಿದ ದುಂಬಿಯಂತೆ  ಚಡಪಡಿಸಿ, ಒಡಲೊಳಗೊಂದು ಕರುಳಕುಡಿಯನ್ನಿಟ್ಟುಕೊಂಡು ಬಾಳಭಿಕ್ಷುಕಿಯಾಗಿ ದುಷ್ಯಂತನೆಂಬ ಮಹಾರಾಜನ ಮುಂದೆ ಸೆರಗೊಡ್ಡಿ ನಿಂತ ಶಕುಂತಲೆಯಾಗಿದ್ದಾಳೆ.
   ದ್ರುಪದನೆಂಬ ಮಹತ್ವಾಕಾಂಕ್ಷೆಯ ಚಕ್ರವರ್ತಿಯ ಕೈಯ್ಯಲ್ಲಿನ ಕೈದುವಾಗಿ , ಶಿವಧನಸ್ಸನ್ನು ಹೆದೆಯೇರಿಸಿ ಮುರಿದು ಮೀನಾಕ್ಷಿಗೆ ಗುರಿಯಿಟ್ಟು ಪಾರ್ಥನೊಬ್ಬನೇ ಹೊಡೆದ ಬಾಣವನ್ನು ಕೊರಳ ಮಾಲೆಯಾಗಿ ಧರಿಸಿ, ಪಾಂಡವರೈವರಿಗೂ ಪತ್ನಿಯಾಗಿ, ಸಂತಾನಮಾತೆಯಾಗಿದ್ದೂ ಬಾಲರನ್ನು ಕಳೆದುಕೊಂಡ ಬಂಜೆತನದ ಹುಲ್ಲೆಯಾಗಿ,ಮಹಾ ಸಾಮ್ರಾಜ್ಯದ ಮಹಾಮಹಿಮರಿಂದ ತುಂಬಿದ ಒಡ್ಡೋಲಗದಲ್ಲಿ ಮುಡಿಯನೆಳೆಸಿಕೊಂಡು ಹೆರಳ ನೆರಳಲ್ಲಿ ಮುಖ ಹುದುಗಿಸಿ, ಸೀರೆ ಸೆಳೆವ ಹೆಬ್ಬಾವಿನ  ಕೈಗೆ  ಸಿಕ್ಕ ಮೊಲದಂತೆ ವಿಲವಿಲನೆ ಒದ್ದಾಡಿ, ಅರಚಾಡಿ,ಹೊಟ್ಟೆ ಹೊಸೆದುಕೊಂಡು ಸೋತು ತಲೆಬಾಗಿಸಿದ, ರಾಜಾಧಿರಾಜರ ರಾಣಿಯಾಗಿ ಸಕಲ ಸೌಭಾಗ್ಯಗಳನ್ನು ಪಡೆದಂತಿದ್ದರೂ, ಅನುಭವಿಸದಂತಿದ್ದು ಕೊನೆಗೆ ಧರ್ಮರಾಯನ ಮಾತಿನಂತೆ ಕಾಣದ ಸ್ವರ್ಗದತ್ತ ಹೆಜ್ಜೆ ಹಾಕಿದ ದ್ರೌಪದಿಯಾಗಿದ್ದಾಳೆ. ಕಪಟನಾಟಕ ಸೂತ್ರಧಾರಿಯಾಗಿ ಧರೆಗಿಳಿದ  ಇಂದ್ರನ ತೋಳತೆಕ್ಕೆಯಲ್ಲಿ ಗೊತ್ತಿಲ್ಲದೇ ಮುಖವಿಟ್ಟು ಮಲಗಿ ಕಳೆದ ಸುಖಕ್ಕೆ  ತಾನೇ ಹೊಣೆಯಾಗಿ ತನ್ನದಲ್ಲದ ತಪ್ಪಿಗೆ ದಂಡಿಸಿಕೊಂಡು ಮೂಕ ಶಿಲೆಯಾಗಿ ನಿಂತ ಅಹಲ್ಯೆಯಾಗಿದ್ದಾಳೆ. ಉರಿಯುವ ಜಮದಗ್ನಿಯ ಸತಿಯಾಗಿ ಯಕಃಶ್ಚಿತ ಸಂದೇಹದ ಕಾರಣವಾಗಿ ಕಟುಕನ ಮುಂದೆ ಬಾಗಿದ ಹಸುವಿನಂತೆ, ತಲೆ ತಗ್ಗಿಸಿ ನಿಂತು ಪುತ್ರ ಪರಶುರಾಮನಿಂದ ಕೊರಳಿಗೆ ಕೊಡಲಿಯೇಟು ಹಾಕಿಸಿಕೊಂಡು  ನೆತ್ತರ ಹೊಳೆಯಾಗಿ ಹರಿದ ರೇಣುಕೆಯಾಗಿದ್ದಾಳೆ.
 ಹಿರಣ್ಯಕಶ್ಯಪನ ಪತ್ನಿಯಾಗಿ ಸಹಿಸಲಾರದ ಸಂಕಷ್ಟಗಳನ್ನೆಲ್ಲ ವಿಷದಂತೆ ನುಂಗಿಯೂ ಬದುಕಿದ ಕಯಾದು ಆಗಿದ್ದಾಳೆ ಈ ಹೆಣ್ಣು. ಹೀಗೆ  ಪುರಾಣ ಮತ್ತು ಚರಿತ್ರೆಯ  ಪುಟಗಳನ್ನು  ತಿರುವುತ್ತಾ ಹೋದಂತೆ  ನಮಗೆದುರಾಗುವ  ಸಂಗತಿಗಳೆಲ್ಲ ಹೆಣ್ಣು ಹೇಳುವ ಅರ್ಧ ಸತ್ಯಗಳೇ ಆಗಿವೆ.  ಈ ಸಂಗತಿಗಳೆಲ್ಲ ಮನದ ಮೂಲೆಯಿಂದ ತೂರಿಬರಲು ಕಾರಣವಾಗಿ, ನನ್ನನ್ನು ಇನ್ನಿಲ್ಲದಂತೆ  ಕಾಡಿ ಬಿಡಿಸಲಾಗದ ಯಕ್ಷ ಪ್ರಶ್ನೆಗಳನ್ನು ಹುಟ್ಟುಹಾಕಿದ ಕೃತಿಯೆಂದರೆ ಗುರುಗಳಾದ ಡಾ. ರಾಜಶೇಖರ ಮಠಪತಿ(ರಾಗಂ)ಯವರ  "ಹೆಣ್ಣು ಹೇಳುವ ಅರ್ಧ ಸತ್ಯ".- ಈ ಸಾಕಿಯರ ಕೈ ಸೋಕಿ.....ಇತಿಹಾಸವೆಂಬ ಭೂಗರ್ಭದ ಬೆಂಕಿಯಲ್ಲಿ ಕೊತಕೊತನೆ ಕುದಿಯುತ್ತಿರುವ ರಕ್ತವರ್ಣದ  ಲಾವಾ ರಸವಾಗಿ, ಜಗತ್ತಿನ ಸವ್ಯ ಸಾಕಿಯರು ಅನುಭವಿಸಿದ ತಲ್ಲಣಗಳನ್ನು,ಏರಿಳಿತಗಳನ್ನು,ಸಂಕಟಗಳನ್ನು,ಹಿಂಸೆಗಳನ್ನು, ಸಂವೇದನೆಗಳನ್ನು ಸಹೃದಯರ ಹೃದಯದ ಭಿತ್ತಿಗೇ ಸುನಾಮಿಯ ಆರ್ಭಟದ ಅಲೆಗಳಾಗಿ ಬಂದಪ್ಪಳಿಸಿ  ಕೊಚ್ಚಿಹೋಗುವಂತೆ ಮಾಡುವ ಅನನ್ಯ ಕೃತಿ ಈ "ಹೆಣ್ಣು ಹೇಳುವ ಅರ್ಧ ಸತ್ಯ" .
ಹೆಣ್ಣು ಈ ಜಗದ ಕಣ್ಣು ಎಂದೆಲ್ಲ ಬೊಗಳೆ ಬಿಡುವ ನಾವು ಆ ಕಣ್ಣಿಗೆ ಮಣ್ಣೆರಚಿ ಅವಳಿಗೆ  ಮಾಡಿದ ಅಪಚಾರಗಳು ಒಂದೇ   ಎರಡೇ... ಹೇಗೆಂದು ವರ್ಣಿಸುವುದು ಮನುಕುಲದ ಈ ಒಂಟಿಗಾಲಿನ ನಡಿಗೆಯನ್ನು; ಒಂಟಿ ಎತ್ತಿನ ಬಂಡಿಯ ಈ  ಬಾಳ ಪಯಣವನ್ನು.. ಒಕ್ಕಣ್ಣಿನ ನೋಟದಿಂದ ಮುನ್ನಡೆಯುತ್ತಿರುವ ಜೀವನದ ಅರೆಬೆಳಕಿನ ದಾರಿಯನ್ನು.. ಏನೆಂದು ಬಣ್ಣಿಸುವುದು ಪ್ರಕೃತಿಯಲ್ಲಿ ಮಿಂದು ಪ್ರಕೃತಿಯನ್ನೇ ಬದುಕಿ ಪ್ರಕೃತಿಸ್ವರೂಪಿಯ ಸಾಕಿಯರನ್ನು ಮರೆತು ಜೀವಿಸುವ ಜೀವಸಂಕುಲದ ಭಾವಲಹರಿಯನ್ನು... ಜಗತ್ತು  ಪರಿಪೂರ್ಣವೆಂದು ಎಂದೆನಿಸುತ್ತಿಲ್ಲ  ಎಂಬುದಕ್ಕೆ ಈ ಕೃತಿಯಲ್ಲಿ ಉಲ್ಲೇಖಿಸಿದ ಗಿಬ್ರಾನ್ ನ ಈ ಸಾಲುಗಳನ್ನು  ನೋಡಿ  " ಹೆಣ್ಣು ಮಗಳ ಮುಖ ಜಗತ್ತಿನ ನೆರಳಲ್ಲಿ ಅರ್ಧ ಮುಚ್ಚಿದೆ.ಮತ್ತು ಅರ್ಧ ಮುಖ ಸೂರ್ಯನ ಪ್ರಖರ ಕಿರಣಗಳಿಂದ ಹೊಳೆಯುತ್ತದೆ. ಅಂದ ಮೇಲೆ, ಅದು ಎಲ್ಲಿಂದ ನೋಡಿದರೂ, ಹೇಗೆ ನೋಡಿದರೂ ಅರ್ಧವಾಗಿಯೇ ಕಾಣಿಸುತ್ತದೆಯೊ?  ಅಥವಾ ಅರ್ಧವಾಗಿಯೇ ಇದೆಯೊ? "  
ಹೀಗೆ ಸಾಕಿಯರ ಕುರಿತು ನಮ್ಮಲ್ಲಿ ಶತಾವಧಾನದ ಚಿಂತನೆಗಳನ್ನು, ಭಾವಬಿಂದುಗಳನ್ನು ಸ್ಫುರಿಸುವ ಈ ಕೃತಿಯ  ತಂಗಾಳಿಯ ತಂಪನ್ನೆರೆದೂ, ಎದೆಯೊಳಗೆ ನಿಧಾನವಾಗಿ  ಹೊತ್ತಿಕೊಳ್ಳುವ ಚಳಿಗಾಲದ  ಅಗ್ನಿಯಂತಿರುವ  ಸಾಲುಗಳು ನಮ್ಮ ಬದುಕೆಂಬ ನಾವೆಯ ದಿಕ್ಕನ್ನೇ ಬದಲಿಸುವಂತಿವೆ.
ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರು
"ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ 
ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೇ 
ಸ್ತ್ರೀ ಎಂದರೆ ಅಷ್ಟೇ ಸಾಕೆ
ಮನೆಮನೆಯಲಿ ದೀಪ ಉರಿಸಿ ಹೊತ್ತುಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೇ" 
ಸ್ತ್ರೀ ಎಂದರೆ ಅಷ್ಟೇ ಸಾಕೆ ?"
ಎಂದು ಹಾಡುವಂತೆ  ಶಬ್ದಗಳ ಮಿತಿಗೆ ಸಿಗದ ಬದುಕಿನ
ಶಬ್ದಾತೀತ ತರಂಗಗಳ ಹುಟ್ಟೆನಿಸಿದ ಆಕೆಗೊಂದು
ತಕ್ಕ ಹೆಸರಿಗಾಗಿ ತಡಕಾಡುವಷ್ಟು 'ಅವಳು' ಕಾಡಿದ್ದಾಳೆ. ಹಸಿರನ್ನುಟ್ಟು ಜೀವಿಗಳ ಹಸಿದ ಒಡಲು ತುಂಬಿಸಿದ್ದಾಳೆ.ಜಗತ್ತಿನ ಆಗುಹೋಗುಗಳನ್ನೇ ಅಲ್ಲವೆನಿಸುವ ಅಲ್ಲಮನಿಗೇ ಮಾಯೆಯಾಗಿ ಕಾಡಿದ,  ನಿರ್ಮೋಹಿಗೆ ಮೋಹದ ಪಾಠವನ್ನು ಹೇಳಲು ಹೋಗಿ ಸೋತ 'ತಾಮಸೆ'ಯಾಗಿ ಕ್ರಾಂತಿಯ ಕಾಂತೆಯಾದವಳು ಈ 'ಮಾಯೆ' ಯೆಂಬ ಅವಳು. ಇಂತಹ ಕೊನೆಯಿರದ ನೀಲಾಂಬರ, ಆಳವೇ ಅನಂತವಾದ ಕಡಲು ಎಂಬ ಅರ್ಥಗಳನ್ನು ಹೊರಡಿಸುತ್ತಲೇ ನಿರಂತರವಾಗಿ ಅನುರಣಿಸುವ ಶಬ್ದ, ಅಪರಿಮಿತವನ್ನೇ ಎದೆಯೊಳಿಟ್ಟುಕೊಂಡು ಸೀಮೆಯೇ ಇಲ್ಲದ ಸೀಮಾತೀತ ಜೀವ ಈ 'ಅವಳು' ಆಗಿದ್ದಾಳೆ.
ಸನಾತನ ಕಾಲದಿಂದಲೂ ನಮ್ಮ ಬದುಕಿನಲ್ಲಿ 'ಅವಳು' ನಿರಂತರ ನಿಶಾಂತವಾಗಿ ಹರಿಯುವ ಗಂಗೆಯಾಗಿದ್ದಾಳೆ ;  ನಿರಮ್ಮಳವಾಗಿ ಹರಡುವ  ಕಾವೇರಿಯಾಗಿದ್ದಾಳೆ ;ಧುಮ್ಮಿಕ್ಕಿ ಇಳಿಯುವ ಕವಲೊಡೆದ   ಜಲಪಾತವೆಂಬ ಶರಾವತಿಯಾಗಿದ್ದಾಳೆ; ಭರ ಭರನೇ ಅವಸರಿಸಿ ನೆಲ ತಬ್ಬಿ ಹಸಿರಾಗುವ ಕೃಷ್ಣೆಯಾಗಿದ್ದಾಳೆ; ಅಲ್ಲದೇ ಸಮಯ ಬಂದಾಗ 'ಅವಳು' ಭೋರ್ಗರೆಯುವ ಆರ್ಭಟದ ಕಡಲೂ ಆಗಿದ್ದಾಳೆ.
ಗೋಪಾಲಕೃಷ್ಣ ಅಡಿಗರ 'ಮೊರೆಯದಲೆಗಳ ಮೂಕ ಮರ್ಮರ'ವಾಗಿದ್ದಾಳೆ. "ಮೋಹ"ನ ಮುರಳಿಗೆ ಮನಸೋತು ಕನ್ನಿಕೆಯಾಗಿದ್ದಾಳೆ. ಕುವೆಂಪುರವರಿಗೆ
“ನೀನು ಬಳಿ ಇಲ್ಲದಿದರೆ, ಓನಲ್ಲೆ ಹೇಮಾಕ್ಷಿ, ಜಗವೆಲ್ಲ
ಜಡಬಂಡೆ ಬೇಸರದ ಬೀಡು’ ಎಂದು ಬಾಳು ಬೆಳಗುವ ದೇವತೆಯಾಗಿದ್ದಾಳೆ.
ಹಿಮಾಲಯದೆತ್ತರಕೆ ಬೆಳೆದರೂ ಆಕೆ, ಸುಡುವ ಸೂರ್ಯನಂತೆ ಎದುರಾಗುವ  ಸಂಕಟಗಳ ತಾಪಕ್ಕೆ ಹಿಮದಂತೆ  ಕಣ್ಣೀರಾಗುವುದು ತಪ್ಪಲಿಲ್ಲ. ಜೀವನಪೂರ್ತಿ ನಿರಂತರವಾಗಿ ಬಸಿರಾಗಿ ಹರಿಯುವುದು ಕೊನೆಯಾಗಲಿಲ್ಲ. ಎಂತಹ ಆಮಿಷವದು ! ಬೆಳಕಿನಂತೆ ತಾನು ದಕ್ಕುವುದಿಲ್ಲವೆಂದು ಗೊತ್ತಿದ್ದರೂ ತನ್ನ ಸುತ್ತವೇ ಸುತ್ತುವ ಪತಂಗಗಳನ್ನು ಆಕರ್ಷಿಸಿ ಬಲಿ ಹಾಕುವ ಮಹಾಹದನವದು. ನಿಜಗುಣಶಿವಯೋಗಿಗಳ ಕೈವಲ್ಯಪದ್ಧತಿಯಲ್ಲಿ
" ಗಿರಿಜೆ ಗೀರ್ವಾಣಿಪೂಜಿತೆ,ಗೌರಿ ಗುಹಜನನಿ
ಪರನಾದಬಿಂದುಮಂದಿರೆ,ಮನೋಂಬುಜಹಂಸೆ
ವರದೆ ವೈಭವೆ ನಿತ್ಯಮುಕ್ತೆ ನಿರ್ಮಲೆ..." 
ಇತ್ಯಾದಿ ಆದ ಹೆಣ್ಣು ಷಹಜಾನನ ಸಾಲುಗಳಲ್ಲಿ ' ಎಂದೆಂದಿಗೂ ಈ ಜಗತ್ತು ಆಕೆಯ ಮೊಲೆ ಕುಡಿಯುವ ಹಸುಗೂಸು ' ಎನ್ನುವಲ್ಲಿನ 'ಜಗನ್ಮಾತೆ'ಯಾಗುತ್ತಾ, ರಾಗಂರವರ ಈ ಕೃತಿಯಲ್ಲಿ ಮತ್ತೆ ಮತ್ತೆ ಬಸಿದು ಸಾಯುವ ಜೈನಬಿ,ದಾಸರ ದಾಸಿಯಂತೆ ಬದುಕಿ ಅಬ್ಬಾಸರ ದೇವತೆಯಾದ ಮುಜತಾಬಾಯಿ, ಸೆರೆ ಮತ್ತು ಕಾಮದ ಗುಂಗಿನಲ್ಲಿ ಕೊನೆಯುಸಿರೆಳೆಯುತ್ತಲೇ ತನ್ನೂರಿಗೆ ಗಂಗೆಯನ್ನು ಧರೆಗಿಳಿಸಿದ ಪಕ್ಕದ ಮನೆಯ ಪಾತ್ರ ಗಂಗವ್ವ,ಮಹಾಕವಿ ಆಧ್ಯಾತ್ಮಿಕ ಜೀವಿ ಮಧುರಚನ್ನರಿಗೆ ದಿವ್ಯಜೀವನದ ದಾರಿ ತೋರಿದ 'ವಾಸಂತಿ'ಯಾಗಿದ್ದ 'ಬಸವ್ವ' ಳಾಗಿ ಹೀಗೆ ಹತ್ತು ಹಲವು ರೂಪಾಂತರಗಳನ್ನು ಪಡೆದು ಅವತರಿಸಿದ್ದಾಳೆ.
" ಹುಗಿದ ನೆಲದಲ್ಲೊಂದಿಷ್ಟು ಸುಮ್ಮನಿರಬಹುದು ನನ್ನವ್ವ 
ನಾಯಿ ಬಾಳಿನಿಂದ ಮುಕ್ತಿ ಪಡೆದು
ತಣ್ಣಗಿರಬಹುದು"
ಎಂದು  ನೆಲದಲ್ಲಿ ಮುಖವಿಟ್ಟು ಮಲಗಿದಾಗಲೇ ಹೆಣ್ಣಿಗೆ ಸಿಗುವ ಪರಮಸುಖಕ್ಕಿಂತ ಮಿಗಿಲಾದುದು ಈ ಜಗತ್ತಿನಲ್ಲಿ ಯಾವುದಿದೆ ಹೇಳಿ?  ಆಕೆಯ ಭವಬಂಧನದ ಬಿಡುಗಡೆಯ ಮೋಕ್ಷ  ಎಂದರೆ ಅದು ತಾನು ಕಟ್ಟಿ ಹೆಣೆದ ಕರುಳು ಜಾಲವನ್ನು ಕತ್ತರಿಸಿಕೊಂಡು ಯಾರಿಗೂ ಹೇಳದೇ ಇಲ್ಲಿಂದ ಮತ್ತೆಂದೂ ಬರದಂತೆ ಎದ್ದು  ಹೋಗುವುದು ಎಂದರ್ಥವೆನಿಸುತ್ತದೆ. ಹೀಗೆ ಕಾಡಿದ ತಾಯಿಯನ್ನು ಜೈನಬಿಯ ರೂಪದಲ್ಲಿ ಲೇಖಕರು ಸ್ಮರಿಸಿಕೊಳ್ಳುತ್ತಾರೆ.
" ಈಗ ಊರು ಬದಲಾಗಿದೆ
ತಳದಲ್ಲಿ, ಬುಡದಲ್ಲಿ
ಆದರೂ
ಅವ್ವನ ಘೋರಿಯ ಪಕ್ಕದ
ಹುಣಸೆ ಇನ್ನೂ ಹಸಿರಾಗಿದೆ
ಸಮಾಧಿ ಮೇಲಿನ ಹುಲ್ಲು
ಇನ್ನೂ ಚಿಗುರುತ್ತಿದೆ."
ಹೀಗೆ ಅವ್ವನ ಬಿಸಿಯುಸಿರು ಹುಣಸೆಯಂತೆ ಚಿಗುರುವ ಬದುಕಿಗೆ ಹೇಗೆ ತನ್ನೊಡಲ ಜೀವಜಲವನ್ನು ಬಸಿಯುತ್ತಲೇ  ಭರವಸೆಯಾಗುತ್ತದೆ ಎಂಬುದನ್ನು ರಾಗಂರವರು ಸೋಪಜ್ಞವಾಗಿ ಬಣ್ಣಿಸುತ್ತಾರೆ .ಮಣ್ಣೊಳಗೆ ಮಣ್ಣಾದರೂ ಜಗ ಕಾಯುವ ಅವಳ ಮಮತೆಗೇನೂ ಕೊರತೆಯಾಗಬಾರದೆಂದೇ ಅವಳು ಮಮತಾಮಯಿಯಾದ. ಈ 'ವಸುಂಧರೆ'ಯನ್ನು ಬಿಟ್ಟುಹೋಗಿರುವಳೇನೋ ಎಂದೆನಿಸುತ್ತದೆ ಕೊನೆಗೆ. ಲೇಖಕರು ಉಲ್ಲೇಖಿಸುವ,"In the home is true union; In the home is enjoyment of life ; why should I forsake my home and wander in to forest? " ಎಂಬ ಟ್ಯಾಗೋರರು ಭಾಷಾಂತರಿಸಿದ ಕಬೀರರ ಸಾಲುಗಳು' ಮಹಿಳೆ' ಎಂದರೆ 'ಮನೆ', 'ಮನೆ' ಎಂದರೆ 'ಮಹಿಳೆ 'ಎನ್ನುವ ಪರಮಸತ್ಯವನ್ನು  ಜಗತ್ತಿನ ಮುಂದೆ ತೆರೆದು ತೋರುತ್ತವೆ.ನಾವು ಆ ಮನೆಯೊಳಗಿನ ವಾತ್ಸಲ್ಯದ ಮಡಿಲಲ್ಲಿ ಕರುಗಳಾಗಿರುವುದನ್ನು ಮತ್ತೆ ಮತ್ತೆ ನೆನಪಿಸುತ್ತವೆ. ರಾಗಂರವರು ಹೇಳುತ್ತಿರುವ ಜೀವಂತ ಕತೆಗಳ ಕಥಾನಾಯಕಿಯರೆಲ್ಲ ಹತ್ತರೊಳಗೆ ಹನ್ನೊಂದಾಗಿ ಬದುಕಿ ಹೋದವರಲ್ಲ. ಈ ಭೂಮಿಯ ಮೇಲೆ ಕೇವಲ ಭೌತಿಕವಾದ ಅಸ್ತಿತ್ವವನ್ನು  ನೆಚ್ಚಿಕೊಂಡವರೂ ಅಲ್ಲ; ಜೀವನವನ್ನು 'ಹೊರೆ' ಯೆಂದು ಬಗೆದು ಬದುಕಿದವರಲ್ಲ.
ಹಾಗಾದರೆ ಅವರೇನು ? ಅವರು ಯಾರು?  ಎಂಬುದನ್ನು ಲೇಖಕರ ಮಾತಿನಲ್ಲಿಯೇ ಕೇಳಿ.
"ಸಭ್ಯತೆಯ ಚೌಕಟ್ಟಿನಲ್ಲಿಯೇ ಸುಳಿಯದ, ಯಾವುದೋ ಭ್ರಮೆಗಾಗಿ ತಮ್ಮನ್ನೇ ಸುಟ್ಟುಕೊಂಡವರು. ಸಭ್ಯ ಸಮಾಜದ ಯಾವುದೇ ನ್ಯಾಯಿಕ ವ್ಯವಸ್ಥೆ ಇವರನ್ನು ಆದರ್ಶ ಪ್ರಾಯರೆಂದು ಘೋಷಿಸಲು ಸಾಧ್ಯವಿಲ್ಲ. ಮೋಜಿನ ಸಂಗತಿಯೆಂದರೆ ನಿಮ್ಮ ಘೋಷಣೆಗಳನ್ನು ಈ ಸಾಕಿಯರು ಮನ್ನಿಸಲೂ ಇಲ್ಲ. 'ಸಭ್ಯತೆ' ಎನ್ನುವ ಏರಿನಲ್ಲಿ ನಾವು ಬದುಕಿದರೆ, ಪ್ರಾಮಾಣಿಕತೆ ಎಂಬ ತೇರಿನಲ್ಲಿ ಕುಳಿತು ಸಮಾಜ ಸಂಸಾರ ಗಳ ಹುಸಿ ಹರಕೆಗಳ ಕೇಳಿ,ಇಣುಕಿ ನೋಡಿ ಸಾಗಿಹೋದವರು ಈ ಸಾಕಿಯರು." 
ಜಗವನ್ನೇ ತೊಟ್ಟಿಲಲ್ಲಿಟ್ಟು ತೂಗುವ ತಾಯಿಯಾಗಿ, ,ಮಾತೆಯಂತೆ ವಾತ್ಸಲ್ಯದ ನೆಲೆಯಾದ ಸಹೋದರಿಯಾಗಿ, ತಲೆಮಾರುಗಳಿಗೆಲ್ಲ ಬುದ್ಧಿ ಹೇಳಿ ಕತೆಯಾಗುವ ಅಜ್ಜಿಯಾಗಿ, ಕುಟುಂಬದ ಗೌರವವನ್ನು  ಕಣ್ಣಂಚಿನಲ್ಲಿಟ್ಟು ಕಾಪಾಡುವ   ಮಗಳಾಗಿ, ಮನವೆಂಬ ಕಾಣದ ಕಡಲಿನ ಭಾವದಲೆಗಳಿಗೆ ದಾರಿ ತೋರುವ  'ನವಿಲೂರ ಚೆಲುವೆ'ಯಾಗಿ ನಮ್ಮೊಂದಿಗೆ ಬದುಕಿನುದ್ದಕ್ಕೂ, ಕ್ಷಣ ಕ್ಷಣಕ್ಕೂ ನಮ್ಮನ್ನು ನೆರಳಿನಂತೆ ಹಿಂಬಾಲಿಸಿ ಬಾಳು ಬೆಳಗುವ ನಂದಾದೀಪವಾದ ಹೆಣ್ಣಿನ ಕುರಿತು ವಿಶಿಷ್ಟ  ಕೃತಿಯೊಂದು ರಾಗಂ ರವರಿಂದ ರಚನೆಯಾಗಿರುವುದು ಅಭಿನಂದನಾರ್ಹವಾಗಿದೆ.
" ನಾ ನಿನ್ನ ಕಂಡೆ, ನೀ ನನ್ನ ಕಂಡೆ, ಕಂಡದ್ದು ಯಾರ ಯಾವ
ನೀ ನನ್ನನುಂಡೆ, ನಾ ನಿನ್ನನುಂಡೆ,  ಉಳಿದದ್ದೆ ಆತ್ಮಭಾವ " ಎಂಬ ಅಂಬಿಕಾತನಯದತ್ತರ ಕವಿತೆಯ ಸಾಲುಗಳು  ಮಧುರಚೆನ್ನರು ಹಾಗೂ ಅಶಿಕ್ಷಿತ ಧರ್ಮಪತ್ನಿ ಬಸವ್ವ ಳೆಂಬ 'ಪುಣ್ಯವಂತಿ'ಯ ರ  ದಾಂಪತ್ಯಕ್ಕೆ  ಒಪ್ಪುವಂತಿವೆ. ತನ್ನ ಪತಿಯ ಒಡನಾಡಿಯಾಗಿದ್ದ ಮಧುರಚೆನ್ನರ ಒಲವಿನ ಧಾರೆಯಿದು-
"ನಲ್ಲೆ ವಾಸಂತಿ
ತಾ ಜೀವದ ಜೊತೆಗಾರ್ತಿ" .
ಸಿಂಪಿ ಲಿಂಗಣ್ಣ, ರೇವಪ್ಪ ಕಾಪ್ಸೆ  ಪಿ.ಧೂಲಾಸಾಹೇಬ,ಬೇಂದ್ರೆ ಮುಂತಾದ ಮಹನೀಯರಿಂದ ಜನ್ಮತಾಳಿದ ಹಲಸಂಗಿ ಗೆಳೆಯರ ಬಳಗದ ಮಾತೆಯಾಗಿ, ಬಡತನದ ಬೇಗೆಯಲ್ಲಿ ಬೆಂದು, ಮಧುರಚೆನ್ನರ ಸಂಸಾರದ ನೊಗಹೊತ್ತು  ಬದುಕಿನ ಬಂಡಿಯನ್ನು ಅಂಬಿಕೆಯಂತೆ ಸರಾಗವಾಗಿ ಮುನ್ನಡೆಸಿದವರು ಈ ಬಸವ್ವಳೆಂಬ ಮಧುರಚೆನ್ನರ ಆಧ್ಯಾತ್ಮಿಕ ಸಂಪತ್ತಿನ ಒಡತಿ . ಯಶಸ್ವಿ ಪುರುಷನ ಹಿಂದೆ ಮಹಿಳೆಯ ಕಾಣದ ಕೈಗಳಿರುತ್ತವೆ ಎಂಬುದು ಸತ್ಯವಾದರೂ ಆ ಕೈಗಳು ಯಶಸ್ಸಿನ ಪಕ್ಕದಲ್ಲಿ ಕಾಣುವುದು ವಿರಳಾತಿವಿರಳ. ಆ ಕಾಣದ ಕೈಗಳನ್ನು, ಬದುಕಿನ ಕಷ್ಟಗಳ ಬಂಡೆಗಲ್ಲುಗಳಿಂದಾಗಿ ತಮಗಾದ ಎಂದೂ ಮಾಯದ ಹುಣ್ಣುಗಳೊಂದಿಗೆ, ನಿರ್ದಯಿ ಜೀವನ ಹಾಕಿದ ಕಪ್ಪಿಟ್ಟ ಕಡು ಕೆಂಬಣ್ಣದ ಬರೆಗಳೊಂದಿಗೆ ಜಗತ್ತಿಗೆ  ಕಾಣುವಂತೆ ಮಾಡುವ ಕೃತಿ ಈ ಸಾಕಿಯರ ಕೈ ಸೋಕಿ...
"ಕುಣಿಯುತ್ತಾಳೆ ಆಕೆ 
ನನ್ನೆದೆಯ ಗೂಡಿನೊಳಗೆ
ನಸುನಗುತ್ತಾ ಹೆಜ್ಜೆ ಹಾಕಿ
ತಾನು ನನ್ನುಸಿರ
ಬಿಸಿಯಲ್ಲಿದ್ದೇನೆ ಎಂಬ
ಭ್ರಮೆಯಿಂದ ತಾಳ ಹಾಕಿ
ಗೊತ್ತಿಲ್ಲ ಅವಳಿಗೆ
ನನ್ನೊಲವಿನುಸಿರು
ಯಾರದೆಂದು ?
ಕುಣಿಯಲಿ ಮನ
ತಣಿಯಲಿ
ನನ್ನುಸಿರ ಸಿರಿಯಲಿ
ಬೆಳೆಯಲಿ
ಹೆಸರುಳಿಸುವ ಹಸಿರ
ಬಳ್ಳಿಯಂತೆ  ಮಲ್ಲಿಗೆಯ
ಮುಡಿಯಲಿ..."
ಎಂಬ ನನ್ನದೇ ಕವಿತೆಯ ಸಾಲುಗಳಲ್ಲಿನ ಆಕೆಯ ಉಸಿರು ಮತ್ತೊಬ್ಬರ ಸಂತಸದಲ್ಲಿದೆ. ಎಂಬ ಉದಾರ  ಹೆಬ್ಬಯಕೆ ಆಕೆಯದು. ಬದುಕು ದ.ರಾ. ಬೇಂದ್ರೆಯವರು ಹಾಡುವಂತೆ 
ಬದುಕು ಬೇವು ಬೆಲ್ಲಗಳ ಮಹಾಸಂಗಮ ವೆಂಬುದನ್ನು ರಾಗಂ ರವರ ಕೆಳಗಿನ ಸಾಲುಗಳು ನೆನಪಿಗೆ ತರುತ್ತವೆ.
" ನಿನ್ನ ಚಿತೆ ಸುಡುವಲ್ಲಿ
ನನ್ನ ಕನಸುಗಳಿಲ್ಲ
ಕಳೆದ ಬದುಕೆಲ್ಲವೂ
ಬೇವು ಬೆಲ್ಲ
ನಿನ್ನ ರಾತ್ರಿಯ ಎದೆಗೆ
ನನ್ನ ನೆನಪುಗಳಿಲ್ಲ
ಉಳಿದ ಉಸಿರೆಲ್ಲವೂ
ಉರಿದ ಹುಲ್ಲು "
ಪ್ರಾಣಸಖಿಯೇ ಇಲ್ಲವಾದಾಗ  ಬತ್ತಿಹೋಗುವ ನೆನಪುಗಳ  ಜೀವನವೆಷ್ಟು ಶೂನ್ಯ .ಉಸಿರು ಕೂಡ ಉರಿಯುವ ಹುಲ್ಲಾಗಿ ಕಾಡುವ ಬಗೆಯನ್ನು ಲೇಖಕರು ಮನೋಜ್ಞವಾಗಿ ಬಣ್ಣಿಸುತ್ತಾರೆ.ಕುವೆಂಪುರವರಿಗೂ ಕೂಡ ಈ ಸಾಕಿ
"ರವಿಯುದಯಕೆ, ಶಶಿಯುದಯಕೆ
ಹೂದಿಂಗಳುದಯಕೆ
ಕೃತಿಯ ಮಧುರ ಸಮುದಯಕೆ
ಹೇಮಲತೆಯೇ ಹೃದಯವಂತೆ!
ಕಲೆ, ಕೀರ್ತಿ ಸಿರಿಯೆಲ್ಲವೂ ಹೇಮಲತೆ ಇಲ್ಲದಿಲ್ಲ,
ಹೇಮಲತೆಯೇ ಎಲ್ಲ"
ಚೈತನ್ಯಶಕ್ತಿಯಾಗಿದ್ದಾಳೆ.
'ಕಸ್ತೂರಿ ಬಾ' ಎಂಬ ಮಮತೆಯ ಸುಗಂಧವಿರದೇ  ಇದ್ದರೆ ಗಾಂಧಿಯ ಬದುಕು ಅದೆಷ್ಟು ಶೂನ್ಯವಾಗಿರುತ್ತಿತ್ತು.ಅದೆಷ್ಟು ಬರಡಾಗಿರುತ್ತಿತ್ತು. ಪತಿಯ ಹೋರಾಟದ ಅಂತಃಶಕ್ತಿಯಾಗಿದ್ದ, ಜೀವನದ ಚೈತನ್ಯವಾಗಿದ್ದ  ಕಸ್ತೂರಿ ಬಾ ತೀರಿ ಹೋದಾಗ ಕೋಟ್ಯಾನುಕೋಟಿ ಭಾರತೀಯರ ಮಧ್ಯೆಯೂ ಅಕ್ಷರಶಃ  ಗಾಂಧೀಜಿ ಒಂಟಿಯಾಗಿದ್ದರು. 'ಬಾ' ಳನ್ನು ಬಿಟ್ಟು ಅನಾಥವಾಗಿದ್ದ ಗಾಂಧಿ ಮೇಲಿನ ಕಾವ್ಯದ ಸಾಲುಗಳಂತೆ ದುಃಖಿಸಿರಬೇಕು ಎಂಬುದನ್ನು ಮನೋಜ್ಞವಾಗಿ ನಿರೂಪಿಸುತ್ತಾರೆ. ಗದ್ಯದ ಲಯದ ಜೊತೆಗೆ ಪದ್ಯದ ನಾದ ಜೊತೆಯಾದರೆ ಆ ಸಾಹಿತ್ಯ ರಸದೌತಣವಾಗುವುದರಲ್ಲಿ ಸಂದೇಹವಿಲ್ಲ. ರಾಗಂರವರದು ಕಾವ್ಯಾತ್ಮಕ  ಗದ್ಯ ಶೈಲಿ.ಅವರ ಗದ್ಯ ಬರಹವನ್ನು ಲಯಕ್ಕೆ ತಕ್ಕಂತೆ ಪದ್ಯದ ಪಂಕ್ತಿಗಳನ್ನಾಗಿಯೂ ಪರಿವರ್ತಿಸಬಹುದಾದಷ್ಟು ಇವರ ಗದ್ಯ ಕಾವ್ಯಾತ್ಮಕ ಶೈಲಿಯದು.ಇಲ್ಲಿಯ ಕತೆಗಳೆಲ್ಲ ಬದುಕಿನ ನಿತ್ಯ ಸತ್ಯ ಘಟನೆಗಳಾಗಿರುವುದರಿಂದ ನಾಟಕೀಯತೆ ಒಂದಿನಿತೂ ಇಣುಕಿಲ್ಲ. ನಮ್ಮ ನೆರೆಹೊರೆಯಲ್ಲಿ ಬದುಕುತ್ತಿರುವ ಪಾತ್ರಗಳೇನೋ ಎನ್ನುವಷ್ಟರ ಮಟ್ಟಿಗೆ ಇಲ್ಲಿಯ ವ್ಯಕ್ತಿತ್ವಗಳು ಆಪ್ಯಾಯಮಾನವಾಗುತ್ತವೆ.ತಮ್ಮ ಬದುಕನ್ನು ತೆರೆದ ಪುಸ್ತಕದಂತೆ ಬಿಚ್ಚಿಡುತ್ತವೆ. ಗಟ್ಟಿ  ಕತೆಗಾರ ರಾಗಂ ರವರು ಒಬ್ಬ ಸಂವೇದನಾಶೀಲ ನಿರೂಪಕರೆಂಬುದಕ್ಕೆ ಈ ಕತೆಗಳೆ ಜೀವಂತ ಸಾಕ್ಷಿಯಾಗಿವೆ .ಕಥೆಗಳನ್ನು ತಾವೇ ಸ್ವತಃ ನಮ್ಮೆದುರಿಗೆ ನಿಂತು ನಿರೂಪಿಸುತ್ತಿದ್ದಾರೆ ಏನೋ ಎಂಬ ಭಾವ ನಮ್ಮನ್ನಾವರಿಸುವಂತೆ ಭಾಷೆ ಸುಲಲಿತವಾಗಿದೆ; ಸಮೃದ್ಧವಾಗಿದೆ. ಅವಕಾಶ ಸಿಕ್ಕಾಗ ಪದಗಳೆ. ನಾಟ್ಯವಾಡುತ್ತವೆ.ಶಬ್ದಲೋಕ ಎಷ್ಟು ವಿಸ್ಮಯ ಎಂಬುದಕ್ಕೆ ಈ ಕತೆಗಳ ಭಾವಲಹರಿಯನ್ನು ಅಧ್ಯಯನ ಮಾಡಲೇಬೇಕು.


24 comments:

  1. ಸ್ತ್ರೀ ಜನ್ಮದ ಸಾರ್ಥಕ್ಯದ ಈ ಲೇಖನ ಸ್ತ್ರೀ ಅಷ್ಟೇ ಸುಂದರವಾಗಿದೆ.

    ReplyDelete
  2. Real culture
    Come from nature
    not from imitate
    Women is nature
    Who is future
    Not torture
    She teach us
    Please honour her
    in a flour bunches

    ReplyDelete
  3. ನಿಮ್ಮ ಪದಬಂಧಗಳ ಸೊಬಗು ಸುಂದರ ಸರ್

    ReplyDelete
  4. ಸ್ತ್ರೀ ಪರ ಚಿಂತನೆ ಅದ್ಬುತವಾಗಿ ಮೂಡಿಬಂದಿದೆ.ಸೂಕ್ಷ್ಮ ಸಂವೇದನಾಶೀಲತೆಯ ಮೂಲಕ ಮನ ಮುಟ್ಟುವಂತೆ ತಿಳಿಸಿದ ತಮಗೆ ಧನ್ಯವಾದಗಳು.ಸರ್

    ReplyDelete
  5. ನಿಮ್ಮ ಪದಗಳ ಸೊಗಸು ಭಾವ ಗಳ ಬೆಚ್ಚಗಿನ ಸ್ಪರ್ಶ ವಿಚಾರಗಳ ಎತ್ತರಕ್ಕೆ ಸ್ತ್ರೀ ಲೋಕ ನಮಿಸುತ್ತದೆ

    ReplyDelete
  6. ನಿಮಗೆ ಸಾವಿರ ಶರಣು ಜ್ಞಾನಧಾತರೇ.
    ಮಹಿಳೆಯರ ಪರವಾದ, ಸುಸಂಸ್ಕೃತವಾದ ವಿಷಯದ ಅಭಿವ್ಯಕ್ತಿಗೆ ಅಭಿನಂದನೆಗಳು, ನಿಮ್ಮ ಪ್ರೀತಿ ಪ್ರೇಮ ಸಹನೆ ಅಕ್ಕರೆ ಮಾತುಗಳು ಮಹಿಳಾ ಸಂಸ್ಕೃತಿಯು ಹಬ್ಬದಂತೆ ಹರಿದಾಡುತ್ತಿದೆ,ಸೂಪರ್ ಸರ್

    ReplyDelete

 ಉಳುಕು                          ಆಗಾಗ ಉಳುಕುತಿರಬೇಕು ಸರಾಗ ಹೆಜ್ಜೆಗಳು                           ಸತ್ಯದ ಮರ್ಮವನ್ನರಿಯಲು ಬೇಕು ಉಳುಕಿನ ಗೆಜ್ಜೆಗಳು        ...