Total Pageviews
Thursday, 8 February 2018
ಜಾನಪದ ಸಿಧ್ಧಿಯ ವರಕವಿ ಸಿದ್ದಣ್ಣ ಬಿದರಿ
ಜಾನಪದ ಸಿಧ್ಧಿಯ ವರಕವಿ ಸಿದ್ದಣ್ಣ ಬಿದರಿ
ಕನ್ನಡ ಸಾರಸ್ವತ ಲೋಕದ 'ಮೇರು ಕವಿ', 'ಶಬ್ದಬ್ರಹ್ಮ ' ಬೇಂದ್ರೆ ಯವರ ಹೆಸರಿನಲ್ಲಿರುವ ಧಾರವಾಡದ "ದ ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ " ಪ್ರತಿವರ್ಷ, ಅವರ ಜನ್ಮದಿನವಾದ ಜನೇವರಿ ೩೧ ರಂದು ಕೊಡಮಾಡುವ ರಾಷ್ಟ್ರಮಟ್ಟದ ಪ್ರಶಸ್ತಿ ಈ ಬಾರಿ 'ಸಿದ್ದಣ್ಣ ಬಿದರಿ'ಯವರಿಗೆ ದೊರೆತಿರುವುದು ಔಚಿತ್ಯಪೂರ್ಣವಾದುದು ಹಾಗೂ ಅರ್ಥಪೂರ್ಣವಾದುದು. ಡಾ.ಮಲ್ಲಿಕಾ ಘಂಟಿ ಯವರು ಹೇಳಿದ ಹಾಗೆ
Tuesday, 30 January 2018
ಗಾಂಧಿವಾದವನ್ನಲ್ಲ, ಗಾಂಧಿಯನ್ನು ಓದಿ
ಗಾಂಧಿವಾದವನ್ನಲ್ಲ,
ಗಾಂಧಿಯನ್ನು ಓದಿ
“ಈ ಗಾಂಧಿ ಎಂಬ ಮಹಾಬೆಳಕಿಗೆ
ಬೆಂಬಲದ ಬೆಳಕಾಗಿ ‘ಉರಿದು ಸುಟ್ಟ
ಬತ್ತಿಯ ಹಾಗೆ ಸುಮ್ಮನಾದ
ಮೃತ್ಯುವಿನ ಮೇಲೆ ಸ್ವಾತಂತ್ರ್ಯದ ಹಚ್ಚೆ
ಹಾಕಿದ”
ಕೆಲವೇ ಜೀವಗಳು ಇಂದು ನಮ್ಮೊಂದಿಗಿವೆ . ಗಾಂಧಿ ಎಂಬ ಅನಂತದೊಳಗೆ ಆ ಪದ ಮಾತ್ರದಿಂದಲೇ ವೈರಾಗ್ಯ ಮೂರ್ತಿಯಾಗಿ ಚರಕ ದೀಕ್ಷೆ ಪಡೆದ ಚಿಂತಕ ‘ಕೆ. ಎ. ಅಬ್ಬಾಸ’ ರ ಅಜ್ಜಿ ‘ಹಕ್ಕೂ’ ರಂತº ಅದೆಷ್ಟೋ ಚೇತನಗಳು ಇತಿಹಾಸದ ಕಾಲಗರ್ಭದಲ್ಲಿ ‘ನೆಲದ ಮರೆಯ ನಿದಾನ 'ದಂತೆ ಹೆಸರಿಲ್ಲದೇ ಅಪರಿಚಿತರಂತೆ ಗತಿಸಿಹೋಗಿವೆ .ಹಲವು ತಲೆಮಾರುಗಳೇ ಆಳಿದ' ಅಖಂಡ ಭಾರತ'ವೆಂಬ ಬ್ರಿಟಿಷ್ ಸಾಮ್ರಾಜ್ಯದ ತಳಹದಿಯನ್ನು ಕೇವಲ ತನ್ನ ‘ಉಪವಾಸ ಸತ್ಯಾಗ್ರಹ’, ‘ಶಾಂತಿ’, 'ಅಹಿಂಸೆ', ‘ಸತ್ಯ’,ಗಳೆಂಬ ನಿರಾಯುಧಗಳಿಂದಲೇ ಅಭದ್ರಗೊಳಿಸಿದ ಗಾಂಧಿ ಎಂಬ ಬೆಳಕು ,ಜಗತ್ತನ್ನೇ ಬೆಳಗುವ ಪರಂಜ್ಯೋತಿಯಾಗಿ ಇಡೀ ವಿಶ್ವವೇ ಅವರ ಜಯಂತಿಯನ್ನು ‘ಅಹಿಂಸಾ ದಿನ’ ವನ್ನಾಗಿ ಆಚರಿಸುವಷ್ಟು ನಮ್ಮನ್ನು ಆವರಿಸಿಕೊಂಡಿದ್ದಾರೆ. “ಈ ಸರಳ ಗಾಂಧಿ ಪಂಡಿತನಾಗಿರಲಿಲ್ಲ. ಕಸಗುಡಿಸುತಾ,ಜಗಳವಾಡುತ್ತ ,ಉಪವಾಸ ಬೀಳುತ್ತಾ ಆತ ತನ್ನೊಳಗಿನದನ್ನು ಸ್ವಚ್ಛಗೊಳಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಹೊರಗಣವರಿಗೆ ವiಹಾತ್ಮನಾದ ಮರದ ಬೇರು ನೆಲದೊಳಗಿಳಿದಷ್ಟೂ ಅದರ ಹೊರಗಣ ಸೊಬಗು ಹೆಚ್ಚಾಗುತ್ತದೆ.ಹೀಗೆ ಗಾಂಧಿ ಹೆಮ್ಮರದ ಬೇರುಗಳಂತೆ ಇಳಿದ, ಪ್ರಪಂಚದ ಸಂವೇದನೆಗಳೊಂದಿಗೆ .” ಎಂದು ಮಠಪತಿಯವರು ಗಾಂಧಿಯವರ ವ್ಯಕ್ತಿತ್ವವನ್ನು ಅನುಷ್ಠಾನಗೊಳಿಸುತ್ತಾರೆ.
"ಏರಿದೇರಿದನೇರಿ ಗಾಳಿಗುದುರೆ ಸವಾರಿ
ಚಂದ್ರಕಿರಣವ ಮೀರಿ ಸೂರ್ಯ ಸೇರಿ
ಬೆಳಕನ್ನೇ ಹಿಂದೊಗೆದು ತಮದ ಬಸಿರನೆ ಬಗೆದು
ಅಸ್ಪರ್ಶ ಅವಕಾಶದಲ್ಲಿ ಇದ್ದ"
ಎಂಬ ‘ಅಂಬಿಕಾತನಯದತ್ತ’ ರ ‘ಬುದ್ಧ’ ಕವಿತೆ ‘ದಾಸ್ಯ’ ವೆಂಬ ತಮಂಧದ ಬಸಿರನ್ನೇ ಬಗೆದು ‘ಸ್ವಾತಂತ್ರ್ಯ’ ದ ಜ್ಯೋತಿ ಬೆಳಗಿದ ಗಾಂಧಿ ಎಂಬ ಅರೆ ಬೆತ್ತಲೆ ಫಕೀರನಿಗೂ ಅಷ್ಟೇ ಗಂಭೀರವಾಗಿ ಅನ್ವಯವಾಗುತ್ತದೆ. ಅದಕ್ಕೆ ಬುದ್ಧ ಬಸವ ಗಾಂಧಿ ಒಂದೊಂದು ಯುಗಾಂತರದಲ್ಲಿ ಅವತರಿಸಿಯೂ ಸೃಜನಶೀಲ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಯುದ್ದಭೂಮಿಯಲ್ಲಿಯೂ ಜೀವಕ್ಕಾಗಿ ಬಡಿದಾಡುವ ಒಂದು ಹೂವನ್ನು ಗಮನಿಸುವ ಶಾಂತಿ ಸಹನೆ ಅವರಲ್ಲಿತ್ತು.
ಗಾಂಧೀಜಿಯವರು ಭಾರತಕ್ಕೆ ಬಿಟ್ಟು ಹೋದ ಮೂಲಶಿಕ್ಷಣದ ಪಳೆಯುಳಿಕೆ ಇಂದು ನಮ್ಮ ದೇಶದಲ್ಲಿ ನೆಲೆಯೂರಿರುವ ಬಹುರಾಷ್ಟೀಯ ಕಂಪೆನಿಗಳ ಕಾರ್ಖಾನೆಗಳಲ್ಲಿ ಕೊಳೆಯುತ್ತಿದೆ.ಗಾಂಧೀಜಿಯವರ ಶಾಂತಿ ಅಹಿಂಸೆ ಗಳು ಜಾತಿ ಧರ್ಮಗಳ ಕೋಮುದಳ್ಳುರಿಯ ಬೆಂಕಿಯಲ್ಲಿ , ಸೀಮಾರೇಖೆಯಲ್ಲಿ ಶತ್ರುದೇಶಗಳತ್ತ ಮುಖ ಮಾಡಿ ನಿರಂತರ ಸದ್ದು ಮಾಡುತ್ತಿರುವ ಬಂದೂಕಿನ ನಳಿಕೆಯ ತುದಿಗಳಲ್ಲಿ ,ಎಂ.ಎಂ.ಕಲಬುರ್ಗಿ ,ಗೌರಿಲಂಕೇಶ ರಂತಹ ವೈಚಾರಿಕ ಕಿಡಿಗಳನ್ನು ಹತ್ಯಗೈಯ್ಯುವ ಪಿಸ್ತೂಲುಗಳ ಗುಂಡುಗಳಲ್ಲಿ ಶೋಧಿಸಬೇಕಾಗಿದೆ .ಗಾಂಧಿಯವರ ಸತ್ಯವನ್ನು ಇಂದಿನ ಬೂಟಾಟಿಕೆಯ ರಾಜಕಾರಣಿಗಳ ಅಕ್ರಮ ಹಗರಣಗಳಲ್ಲಿ ಸಕಲವನ್ನೂ ತಿಂದು ತೇಗುವ (ಮೇವನ್ನೂ ಸಹ ) ಉಳ್ಳವರ ಹರಿಬಿಡುವ ಸೀಳು ನಾಲಿಗೆಗಳ ತುದಿಯಲ್ಲಿ ಹುಡುಕಬೇಕಾಗಿರುವುದು ದುರಂತ. ಸೂರ್ಯ ಮುಳುಗದ ಸಾಮ್ರಾಜ್ಯವನ್ನೇ ಮುಳುಗಿಸಿದ ಗಾಂಧಿಯವರ ಉಪವಾಸವನ್ನು ಇಂದು ಅನ್ನದಾತನ ನೆಲಬಗೆದು ಜೀವಸೆಲೆ ಕಬಳಿಸುತ್ತಿರುವ ಶ್ರೀಮಂತರ ಹೊಟ್ಟೆ ಬಾಕತನದಲ್ಲಿ ,ಸಾಮಾನ್ಯರ ತೆರಿಗೆ ಹಣ ವನ್ನೇ ಹೊದ್ದು ಸುಖಲೋಲುಪತೆಯಲ್ಲಿ ಮೈ ಮರೆಯುತ್ತಿರುವ ಭ್ರಷ್ಟಾಚಾರಿಗಳ ಹಿಂಗದ ದುರಾಸೆಯ ಬಕಾಸುರರಲ್ಲಿ ಅರಸಬೇಕಾಗಿರುವುದು ನಮ್ಮ ದೌರ್ಭಾಗ್ಯವೇ ಸರಿ. “Truth and Ahimsa had been the weapons for achieving Swaraj .Today we have forgotten both Mistaken. I consider it my good luck that god has at last opened my eyes .I regard it now as God’s grace that even if I can do nothing else,I shall now be able to do or die ,bravely taking the name of god .If Hindus and Muslims become sincere friends , I will tour the whole India and then Pakistan .”
ಎಂದು ಸ್ವರಾಜ್ಯ ಮತ್ತು ಸಾಮರಸ್ಯವನ್ನು ಗಾಂಧಿ ಬದುಕಿದ್ದಾಗಲೇ ಮರೆತಿರುವುದರ ವಿಷಣ್ಣ ಭಾವ ವನ್ನು ಡಾ. ರಾಜಶೇಖರ ಮಠಪತಿಯವರು ಗಾಂಧಿಯವರ ಮಾತುಗಳಲ್ಲೇ ಕಟ್ಟಿಕೊಟ್ಟಿರುವುದು ಪ್ರಸ್ತುತ ಸಂದರ್ಭಕ್ಕೂ ಕೈಗನ್ನಡಿಯಂತಿದೆ.
“I really do not see why we ,old people ,should continue to live if we are useless .People like me who have grown up to an advanced age feel that if we cannot influence society ,it is better that we pass on.” ಎಂಬ ರಾಜಗೋಪಾಲಚಾರಿಯವರ ಈ ಮಾತುಗಳು ಪ್ರಸ್ತುತದಲ್ಲಿ ನಾವು ಎಷ್ಟು ಅರ್ಥಹೀನವಾಗಿ ಬದುಕುತ್ತಿದ್ದೇವೆ ಎಂಬುದನ್ನೂ ಪ್ರತಿಧ್ವನಿಸುತ್ತಿರುವುದು ಎಷ್ಟು ಕಾಕತಾಳೀಯವಲ್ಲವೇ.ಗಾಂಧಿ ಕೊನೆಗಾಲದಲ್ಲಿ ಹೇಳಿದ ಮಾತು ‘ನೀವು ಬದಲಾಗಿ ,ಇಲ್ಲದೇ ಹೋದರೆ ನನಗೆ ಸಾಯಲು ಬಿಡಿ’.ನಾವು ಅವರನ್ನು ಸಾಯಲು ಬಿಟ್ಟಿದ್ದೇವೆ. ನಾಥೂರಾಮ ಗೋಡ್ಸೆ ಗಾಂಧಿಯವರ ದೇಹವನ್ನು ಕೊಂದ, ನಾವಿಂದು ಅವರ ಆತ್ಮವನ್ನು ಕೊಲ್ಲುತ್ತಿದ್ದೇವೆ.ಆತ್ಮಾವಲೋಕನ ಅಗತ್ಯ.
Sunday, 28 January 2018
ಸ್ಕೌಟ್ ಎಂಬ " ಜೀವನಪಥ "-2
ಸ್ಕೌಟ್ ಎಂಬ " ಜೀವನಪಥ "
೧೯೦೮ ರಲ್ಲಿ "ಸ್ಕೌಟಿಂಗ್ ಫಾರ್ ಬಾಯ್ಸ್" ಪುಸ್ತಕ ಬಿ.ಪಿ. ಯವರಿಂದ ಪ್ರಕಟವಾದಾಗ ಅದರ ಪ್ರತಿಗಳು ದೊರಕಲಾರದಷ್ಟು ಪ್ರಸಿದ್ಧಿಯನ್ನು ಪಡೆಯಿತೆಂದರೆ ಅದರ ಮಹತ್ವ ಜಗತ್ತಿಗೆ ತಿಳಿಯಹತ್ತಿತ್ತು. ಭಾರತದ ಮೊದಲ ಸ್ಕೌಟ್ ದಳ ೧೯೦೯ ರಲ್ಲಿ ಬೆಂಗಳೂರಿನಲ್ಲಿ ಆರಂಭವಾಯಿತು.ಅಲ್ಲಿಂದ ಇಲ್ಲಿಯವರೆಗೆ ಬಹುತೇಕ ಎಲ್ಲ ಶಾಲೆ,ಕಾಲೇಜುಗಳಲ್ಲಿ ಆಲದ ಮರದ ಬಾಲ ಹಕ್ಕಿಗಳ ಕಲರವಕ್ಕೆ ಸ್ಕೌಟ್ ಧ್ವನಿಯಾಗಿದೆ.
ವಿವೇಕಾನಂದರು ಯುವಶಕ್ತಿಯನ್ನು "ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ " ಎಂದು ಜಾಗೃತಗೊಳಿಸಲು ತಮ್ಮದೇ ಕೈಂಕರ್ಯ ವನ್ನು ತೊಟ್ಟ ಹಾಗೆ ಬಿ.ಪಿ ರವರು ಬಾಲಕರು ಮತ್ತು ಯುವಕರಿಗೆ ಸೂಕ್ತ ಶಿಸ್ತು ಮತ್ತು ಜೀವನ ದ ತರಬೇತಿ ನೀಡಬೇಕೆಂದು ಪ್ರತಿಪಾದಿಸಿದರು.ತರಬೇತಿಯಲ್ಲಿ ನಮಗೆ ಪ್ರತಿದಿನ ರಾತ್ರಿ ೮ ಗಂಟೆಗೆ ಶಿಬಿರಾಗ್ನಿ ಕಾರ್ಯಕ್ರಮವಿರುತ್ತಿತ್ತು.ನಾವೆಲ್ಲ ರೋವರ್ ಗಳಾಗಿ ಭಾಗವಹಿಸಿ ,ದಿನವೆಲ್ಲಾ ಚಟುವಟಿಕೆಗಳಿಂದ ದಣಿದ ದೇಹ ಮತ್ತು ಮನಸುಗಳಿಗೆ ಅಗ್ನಿಯ ಸುತ್ತ ಹಾಡಿ ಕುಣಿದು ಬೆಚ್ಚನೆಯ ಭಾವಗಳೊಂದಿಗೆ ,ಉಲ್ಲಸಿತರಾಗುತ್ತಿದ್ದೆವು.
೩೦ ಜನರಿದ್ದ ನಮ್ಮನ್ನು ೪ ತಂಡಗಳಾಗಿ(Pಚಿಣಡಿoಟ) ವಿಭಾಗಿಸಿ ನಲ್ಲಿ ತಂಡಕ್ಕೊಂದರಂತೆ ನೀಡಿದ ಟೆಂಟ್ ನಲ್ಲಿ ಸೈನಿಕ ಜೀವನ ನಡೆಸಿದ್ದು ,ವಿಶಿಷ್ಟ ಅನುಭವ ನೀಡಿತು.ಮೊದಲೆರಡು ದಿನ ತರಬೇತಿಗೆ ಹೊಂದಿಕೊಳ್ಳುವುದು ನಮ್ಮ ಮರವಾಗಿ ಬೆಳೆದ, 'ಲೌಕಿಕ ವಿಷಯಲೋಲುಪತೆ' ಯಲ್ಲಿ ಮುಳುಗಿದ್ದ ದೇಹ ಮತ್ತು ಮನಸ್ಸುಗಳಿಗೆ ಸ್ವಲ್ಪ ಕಷ್ಟವಾದರೂ,"ಅರಿದೊಡೆ ಮೋಕ್ಷ, ಅರಿಯದಿದ್ದೊಡೆ ಬಂಧ " ಎಂಬಂತೆ ಬರಬರುತ್ತಾ ,ಹಾಕಿದ ಪಾತ್ರೆಯ ಆಕಾರ ಪಡೆಯುವ 'ಜಲ 'ದಂತೆ ತರಬೇತಿಯ ನಿಯಮಗಳಿಗೆ ಒಗ್ಗಿಕೊಂಡೆವು.
ಒಂದು ದಿನ ನಮ್ಮೆಲ್ಲರನ್ನೂ ಹೊರಸಂಚಾರಕ್ಕೆ ನಿಯೋಜಿಸಿದರು .ಅಂದು ದಿ ೨೦-೧-೧೮ ರಂದು ಸಂಜೆ ೪ .೩೦ ಕ್ಕೆ ಊiಞiಟಿg ಹೊರಟ ನಾವು ಮಾರ್ದರ್ಶಕರು ಕೊಟ್ಟ ನಕಾಶೆಯ ಸೂಚನೆಗಳನ್ನಾಧರಿಸಿ ಒಂದು ರಾತ್ರಿ ಕಳೆಯಲು ಬೇಕಾದ ಎಲ್ಲ ಸರಂಜಾಮುಗಳನ್ನು ಹೊತ್ತು, ಕೇಂದ್ರದಿಂದ ಸುಮಾರು ೮ ಕಿ.ಮಿ.ದೂರವಿದ್ದ ನಮ್ಮ ಅಂತಿಮ ಗುರಿಯಾಗಿದ್ದ ಬನ್ನಿಮಂಗಲ ಹಳ್ಳಿಯ ಆಂಜನೇಯ ದೇವಸ್ಥಾನ ವನ್ನು ಮೂರು ಗಂಟೆಗಳ ನಡಿಗೆಯ ಮೂಲಕ ಗೆಳೆಯರೊಂದಿಗೆ ನಲಿಯುತ್ತಾ, ಹಾಡುತ್ತಾ, ಪ್ರಕೃತಿಯ ಸಂಜೆಯ ಸೊಬಗನ್ನು ಆಸ್ವಾದಿಸುತ್ತಾ ,ತಲುಪಿದೆವು.
ಅಲ್ಲಿಯ ಹಿರಿಯರೊಬ್ಬರನ್ನು ಸಂಪರ್ಕಿಸಿ ದೇವಸ್ಥಾನದ ಭೋಜನಾಲಯದಲ್ಲಿ ವಸತಿ ಕಲ್ಪಿಸಿಕೊಂಡೆವು.ಅಂದು ರಾತ್ರಿ ೮ ಗಂಟೆಗೆ ದೇವಸ್ಥಾನದ ಹೊರಾವರಣದಲ್ಲಿ ನಡೆದ 'ಶಿಬಿರಾಗ್ನಿ'ಯ ಮಕ್ಕಳಂತೆ ಹಾಡಿ ಕುಣಿದು ಸಂಭ್ರಮಿಸಿದೆವು.ನಂತರ ನಾವೇ ಗೆಳೆಯರೊಂದಿಗೆ ಸೇರಿ ತಯಾರಿಸಿದ ಮೃಷ್ಟಾನ್ನವನ್ನು 'ಮಾಡಿದ್ದುಣ್ಣೋ ಮಹಾರಾಯ' ರಂತೆ ಸವಿದು ಶಯನಗೃಹಕ್ಕೆ ತೆರಳಿದೆವು.ಬೆಳಿಗ್ಗೆ ೬.ಗಂಟೆಗೆ ಎಂದಿನಂತೆ ಸ್ಕೌಟ್ ಧ್ವಜಾರೋಹಣ ಕಾರ್ಯ ಮುಗಿಸಿ, ದೇವಸ್ಥಾನದ ಆವರಣ ಸ್ವಚ್ಛತೆಯ ಸೇವೆ ಕೈಗೊಂಡು ಮರಳಿ ಗೂಡಿಗೆ ಹೊರಟೆವು.ವ್ಯಕ್ತಿ ಸ್ವಯಂ ಜೀವನ ಕಟ್ಟಿಕೊಳ್ಳುವಾಗ ಎದುರಾಗುವ ಸವಾಲುಗಳನ್ನು ಪರಿಹರಿಸಿಕೊಳ್ಳುವ ಮಾರ್ಗೋಪಾಯಗಳನ್ನು ಈ ತರಬೇತಿಯಿಂದ ಪ್ರಾಯೋಗಿಕವಾಗಿ ಅನುಭವಿಸಿ ಪಡೆದುಕೊಂಡದ್ದು ನಮ್ಮ ಹೆಮ್ಮೆ.
ಸುಮಾರು ೧ ತಿಂಗಳು ನಡೆಯಬೇಕಾಗಿದ್ದ ತರಬೇತಿಯನ್ನು ಒಂದು ವಾರಕ್ಕೆ ಇಳಿಸಿರುವುದು ಕಡಲನ್ನು ಬೊಗಸೆಯಲ್ಲಿ ಹಿಡಿಯುವ ಸಾಹಸವೇಕೋ ತಿಳಿಯದು.ನಮ್ಮ ಕೋರ್ಸ ನ ಸ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಂ ಗಣಪತಿ ರೋವರ್ ಸ್ಕೌಟ್ ಲೀಡರ್ ರವರ ಕ್ಷಣ ಕ್ಷಣವೂ ನಮ್ಮಂತಹ ಅಧ್ಯಾಪಕರುಗಳನ್ನು ನಿಭಾಯಿಸುವ ಅವರ ತಾಳ್ಮೆ,ಸಮಯಪಾಲನೆ, ಸಹನಶೀಲತೆ, ತತ್ವಜ್ಞಾನ , ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಡೇನಿಯಲ್ ಸುಕುಮಾರ್ ರವರ ನೇರ ವಿಷಯ ವಿವೇಚನೆ ಎಲ್ಲರ ಮನಸೆಳೆಯಿತು. ಆದರೆ ಅವರ ಪಕ್ಷಿತಜ್ಞತೆ, ಉರಗಪ್ರೇಮ,ವನ್ಯಜೀವಿಗಳೊಂದಿಗಿನ ಒಡನಾಟದ ಝಲಕುಗಳನ್ನು ಸವಿಯುವ ಅವಕಾಶ ತಪ್ಪಿಹೋಗಿದ್ದು ಬೇಸರ ತಂದಿತು. ಇನ್ನೋರ್ವ ಮಾರ್ಗದರ್ಶಕ ರಾದ ಶ್ರೀ ಪ್ರತೀಮ್ ಕುಮಾರ್ ರವರ ಮಂಗಳೂರು ಭಾಷೆಯ ಗಮ್ಮತ್ತು, ವಿಶಿಷ್ಟ ನಿರೂಪಣಾ ಶೈಲಿ ನಮ್ಮೆಲ್ಲರ ಮನಸೂರೆಗೊಂಡಿತು.
ಸ್ಕೌಟ್ ನ್ನೇ ಉಸಿರಾಗಿಸಿಕೊಂಡು ತಮ್ಮನ್ನು ಸಮರ್ಪಿಸಿಕೊಂಡಿದ್ದ ೮೫ ರ ಹರೆಯದಲ್ಲೂ ಉತ್ಸಾಹದಿಂದ ಆಗಮಿಸಿದ್ದ ಸ್ಕೌಟ್ ದಂತಕಥೆ ಶ್ರೀ ಟಿ ಎಸ್ ಲೂಕಾಸ್ ರವರ ನುಡಿಮುತ್ತುಗಳನ್ನು ಆಲಿಸುವ ಭಾಗ್ಯ ನಮ್ಮದಾಗಿತ್ತು. ಇಂತಹ ಹಲವಾರು ವ್ಯಕ್ತಿತ್ವಗಳು ಸ್ಕೌಟನ್ನು ಜಗತ್ತಿನಾದ್ಯಂತ ಮುನ್ನಡೆಸುತ್ತಿವೆ.
ಒಟ್ಟಾರೆ ಈ ಏಳು ದಿನಗಳ ತರಬೇತಿ ಶಿಸ್ತು,ಸಮಯಪಾಲನೆ,ಸಂಯಮ,ಸದ್ಗುಣಶೀಲತೆ,ಸೇವಾಮನೋಭಾವ,ಭ್ರಾತೃತ್ವ,ವಿಶ್ವಪ್ರೇಮ,ಮುಂತಾದ ಮೌಲ್ಯಗಳನ್ನು ಯುವವಿದ್ಯಾರ್ಥಿಗಳಲ್ಲಿ ಹೇಗೆ ಪಡೆ ಮೂಡಿಸಬಹುದು ಎಂಬುದನ್ನು ಸ್ವಯಂವೇದ್ಯವಾಗುವಂತೆ ಮಾಡಿತು..ಮನುಷ್ಯ ಪೃಕೃತಿಯ ಮಗುವಾಗಿ ಸರಳ ಮತ್ತು ಸಹಜ ಸುಂದರ ಶಿಸ್ತಿನ ಮೌಲ್ಯಯುತ ಸ್ವಯಂ ಜೀವನದ ಮಾರ್ಗ ದರ್ಶನ ಮಾಡಿಸುವುದು ಸ್ಕೌಟ್ ನ ಪರಮೋದ್ದೇಶ.
ಸ್ಕೌಟ್ ಎಂಬ " ಜೀವನಪಥ "- 1
ಸ್ಕೌಟ್ ಎಂಬ " ಜೀವನಪಥ "
ಅಂದು ನಾನು ಬಸ್ಸನ್ನೇರಿದಾಗ ಸಮಯ ರಾತ್ರಿ ೮.೧೫ .ರಾಜ್ಯ ಸೌಟ್ಸ ತರಬೇತಿ ಸಂಸ್ಥೆಯ ವತಿಯಿಂದ ದಿ ೧೬ -೧-೨೦೧೮ ರಿಂದ ದಿ.೨೨-೧-೨೦೧೮ ರವರೆಗೆ ನಡೆಯುವ 'ರೋವರ್ ಸ್ಕೌಟ್ ಲೀಡರ್ ' ತರಬೇತಿಗೆಂದು ಬೆಂಗಳೂರಿನ ಹತ್ತಿರದ 'ದೊಡ್ಡಬಳ್ಳಾಪುರ'ದಲ್ಲಿರುವ 'ರಾಜ್ಯ ಸ್ಕೌಟ್ಸ ಮತ್ತು ಗೈಡ್ಸ ತರಬೇತಿ ಸಂಸ್ಥೆ' ಇರುವ ಅನಿಬೆಸೆಂಟ್ ಪಾರ್ಕಿಗೆ ನಾನು ಸಿದ್ಧನಾಗಿ ಹೊರಟಿದ್ದೆ.ಈ ಮೊದಲು ೧೯೯೮-೯೯ ರಲ್ಲಿ ನಾನು ಟಿ ಸಿ ಹೆಚ್ ತರಬೇತಿ ಪಡೆಯುವಾಗ ಮೂರು ದಿನಗಳ 'ನಾಗರಿಕತ್ವ ತರಬೇತಿ ಶಿಬಿರ' ದಲ್ಲಿ ಶಿಬಿರಾರ್ಥಿಯಾಗಿ ಈ 'ಅನಿಬೆಸೆಂಟ್ ಪಾರ್ಕ'ನಲ್ಲಿ ಗೆಳೆಯರೊಂದಿಗೆ ಓಡಾಡಿದ ನೆನಪುಗಳು ಆ ಪ್ರಯಾಣದ ರಾತ್ರಿಯಲ್ಲಿ ಮನದ ಮೂಲೆಯಿಂದ ಗರಿಗೆದರಿ ನಿಂತು ನಿದ್ರಾದೇವಿಯನ್ನ ದೂರ ಮಾಡಿ ಕಾಡಹತ್ತಿದವು. ಕಿಟಕಿಯಿಂದ ಭರಗುಟ್ಟುವ ಹಿತವಾದ ತಂಗಾಳಿ ನೆನಪುಗಳ ತಂಪಿಗೆ ಮತ್ತಷ್ಟು ಮುದವನ್ನು ತಂದಿತ್ತು. ಮತ್ತೊಮ್ಮೆ, ಮಗದೊಮ್ಮೆ ಆಸ್ವಾದಿಸುತ್ತ ಆಹ್ಲಾದಕರವಾಗಿದ್ದ ಮನಸ್ಸು ಆ ಸವಿಘಳಿಗೆಗಳ ಧ್ಯಾನದಲ್ಲಿ ತೊಡಗಿತ್ತು.ಎಚ್ಚರವಾದಾಗ ತುಮಕೂರು ಹತ್ತಿರದ ದಾಬಸ್ ಪೇಟೆ ಯಲ್ಲಿದ್ದೆ. ಅಲ್ಲಿ ಇಳಿದು ಮತ್ತೊಂದು ಖಾಸಗಿ ಬಸ್ಸಿನ ಮೂಲಕ ದೊಡ್ಡಬಳ್ಳಾಪುರಕ್ಕೆ ಬಂದೆ.ರೈಲ್ವೆ ಸ್ಟೇಷನ್ ನಿಂದ ನಡೆದುಕೊಂಡು ಅನಿಬೆಸೆಂಟ್ ಪಾರ್ಕ್ ಗೆ ಬಂದಾಗ ಸಮಯ ೮ ಗಂಟೆ .
ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಕುತೂಹಲದಿಂದಲೇ ಆವರಣ ಪ್ರವೇಶಿಸಿದ ನನ್ನನ್ನು ಹಾಗೂ ಶಿಬಿರಾರ್ಥಿಗಳಾಗಿ ನನ್ನಂತೆ ಆಗಮಿಸುತ್ತಿದ್ದ ವರನ್ನೂ ತರಬೇತಿ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಬರಮಾಡಿಕೊಂಡು, ನಿತ್ಯಕರ್ಮಗಳನ್ನು ಮುಗಿಸಿಕೊಳ್ಳಲು ಸ್ಕೌಟ್ ಪಿತಾಮಹ ಬೇಡನ್ ಪೊವೆಲ್ ಭವನದಲ್ಲಿ ನಮಗೆ ಶಿಬಿರಾರ್ಥಿಗಳಿಗೆಂದು ಇರುವ ಕೋಣೆಗಳಲ್ಲಿ ವ್ಯವಸ್ಥೆ ಕಲ್ಪಿಸಿದರು.ಬೆಳಗಿನ ಕಾರ್ಯಗಳನ್ನು ಮುಗಿಸಿ ನಮ್ಮ ಭವನದ ಎದುರಿಗಿದ್ದ ಊಟ ಮತ್ತು ಉಪಹಾರ ಭವನದಲ್ಲಿ ನಮಗಾಗಿ ತಯಾರಾಗಿದ್ದ ಉಪಹಾರವನ್ನು ಸೇವಿಸಿ ತರಬೇತಿಗಾಗಿ ನೋಂದಣಿ ಪ್ರಕ್ರಿಯೆಯನ್ನು ಮುಗಿಸಿದೆವು.ಸ್ಕೌಟ್ ಧ್ವಜಾರೋಹಣ ದಲ್ಲಿ ಪಾಲ್ಗೊಂಡು ಅದುವರೆಗೂ ನಮಗೆ ಅಪರಿಚಿತವಾಗಿದ್ದ ಸ್ಕೌಟ್ ಪ್ರಾರ್ಥನೆ ಮತ್ತು ಝಂಡಾ ಗೀತೆಗಳನ್ನು ಮೊದಲ ಬಾರಿಗೆ ಕೇಳುವುದರೊಂದಿಗೆ ಅಲ್ಪ ದನಿಗೂಡಿಸುವುದರ ಮೂಲಕ ನಮ್ಮ ತರಬೇತಿಗೆ ಅಧಿಕೃತ ಚಾಲನೆ ದೊರೆಯಿತು.
ನಾನು ಹಿಂದೆ ಇಲ್ಲಿ ಬಿಟ್ಟುಹೋಗಿದ್ದ ಹೆಜ್ಜೆಗುರುತುಗಳನ್ನು ಹುಡುಕಾಡಲು ತವಕಿಸಿದೆ.ಆ ಉದ್ಯಾನವನದಲ್ಲಿ ನಾವು ವಿಹರಿಸಿದ್ದ ಹಳೆಯ ನೆನಪುಗಳ ತಾಣಗಳನ್ನು ಶೋಧಿಸಿದೆ. ಕೊನೆಗೂ ಒಂದು ಮೂಲೆಯಲ್ಲಿ ಅಂದು ನಾವು ವಾಸವಿದ್ದ ತಾವುಗಳನ್ನು ಕಂಡು ಹರ್ಷಿತನಾದೆ. ಶಿಬಿರಾಗ್ನಿಯ ಸ್ಥಳ ಕಂಡು ಪುಳಕಿತನಾದೆ.ಮನದಾಗಸದಲ್ಲಿ ಸವಿನೆನಪುಗಳ ನಕ್ಷತ್ರಗಳನ್ನು ದರ್ಶಿಸಿ ಅವುಗಳ ಬೆಳಕಿನಲ್ಲಿ ಕುಣಿದು ತಣಿದೆ.
ಕಾಡಿನಂತೆ ಹಲವಾರು ಗಿಡ ಮರಗಳನ್ನು ಸುಂದರವಾಗಿ ತನ್ನ ಮೈಯುದ್ದಕ್ಕೂ ಹರಡಿಕೊಂಡು ನಿಂತಿರುವ ಈ ಕೆಮ್ಮಣ್ಣಿನ ವಿಸ್ತಾರವಾದ ಆವರಣದಲ್ಲಿ ತರಬೇತಿ ಪಡೆಯುವುದೆಂದರೆ ನಮಗೆ ಎಲ್ಲಿಲ್ಲದ ಕುತೂಹಲ ಹಾಗೂ ಉತ್ಸಾಹವನ್ನು ತಂದಿತ್ತು. ಆ ಮರಗಳ ಬುಡದಲ್ಲಿ ಕುಳಿತು ಅಕ್ಷರಶ: ಪ್ರಕೃತಿಯ ಮಕ್ಕಳಾಗಿದ್ದ ನಮಗೆ ಪ್ರಾರ್ಥನೆ ಹಾಗೂ ಝಂಡಾ ಗೀತೆಗಳನ್ನು ,ರಾಗಬದ್ಧವಾಗಿ ಹಾಡುವುದನ್ನು, ಅವುಗಳ ಅರ್ಥವನ್ನು ಹೇಳಿಕೊಡುವುದರೊಂದಿಗೆ ತರಬೇತಿಯ ಮೊದಲ ತರಗತಿಯನ್ನು, ವೃತ್ತಿಯಲ್ಲಿ ವಕೀಲರಾಗಿದ್ದರೂ, ಸ್ಕೌಟ್ ನೊಂದಿಗೆ ಅವಿನಾಭಾವ ಸಂಬಂಧದ ಮೂಲಕ ತಮ್ಮನ್ನು ಸಮರ್ಪಿಸಿಕೊಂಡಿರುವ ಶಿವಮೊಗ್ಗ ಜಿಲ್ಲೆಯವರಾದ ಶ್ರೀ ಎಂ ಗಣಪತಿ ರೋವರ್ ಸ್ಕೌಟ್ ಲೀಡರ್ ರವರಿಂದ ಶುರುವಾಯಿತು.ಹೀಗೆ ಪ್ರಾರಂಭವಾದ ನಮ್ಮ ತರಬೇತಿಯಲ್ಲಿ ಸ್ಕೌಟ ನ ಮೂಲಭೂತ ವಿಷಯಗಳು,ಉದ್ದೇಶ, ಪ್ರಮಾಣವಚನ,ನಿಯಮಗಳು,ಸಂಕೇತ,ಸೆಲ್ಯೂಟ್,ಎಡಗೈ ಹಸ್ತಲಾಘವದ ವಿಶೇಷತೆ,ಆದೇಶಗಳು,ಸ್ಕೌಟ್ ಧ್ವಜದ ಮಹತ್ವ ,ಸಂಘಟನೆಯ ಶಕ್ತಿ,ನಕಾಶೆ ರಚನೆ,ಉಪಯೋಗಗಳು,ದಿಕ್ಸೂಚಿ ಸಾಧನ ಪರಿಚಯ ,ಹಗ್ಗದಲ್ಲಿ ಹಾಕುವ ವಿವಿಧ ರೀತಿಯ ಗಂಟುಗಳು,ಹಗ್ಗದಿಂದ ಕೋಲಿಗೆ ಹಾಕುವ ಗಂಟುಗಳು, ಉಪಯೋಗಗಳು, ರೋವರ್ ಸ್ಕೌಟ್ ನ ಧ್ಯೇಯವಾದ ಸೇವೆಯ ಮಹತ್ವ, ಮುಂತಾದ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಗಳೊಂದಿಗೆ ,ಪ್ರಾಯೋಗಿಕವಾಗಿ ಈ ಏಳು ದಿನಗಳ ತರಗತಿಗಳಲ್ಲಿ ಮನದಟ್ಟು ಮಾಡಿಸಿದರು.
ಬಿ.ಪಿ ಎಂದೇ ಸ್ಕೌಟ್ ಗಳಿಂದ ಪ್ರೀತಿಯಿಂದ ಕರೆಯಲ್ಪಡುವ ಬೇಡನ್ ಪೊವೆಲ್ ಆಫ್ ಗಿಲ್ ವೆಲ್ (೧೮೫೭-೧೯೪೧) ರವರಿಂದ ೧೯೦೭ ರಲ್ಲಿ ಇಂಗ್ಲೀಷ್ ಕಡಲ್ಗಾಲುವೆ ಯ ಬದಿಯಲ್ಲಿರುವ 'ಬ್ರೌನ್ ಸೀ' ದ್ವೀಪದಲ್ಲಿ ೨೦ ಬಾಲಕರ ತಂಡದೊಂದಿಗೆ ಪ್ರಾಯೋಗಿಕವಾಗಿ ಪ್ರಾರಂಭವಾದ ಪ್ರಥಮ ಸ್ಕೌಟ್ ಶಿಬಿರ ಇಂದು ೨೦೦ ರಷ್ಟು ದೇಶಗಳಲ್ಲಿ ಹೆಮ್ಮರವಾಗಿ ಬೆಳೆದು ವಿಶ್ವದಾದ್ಯಂತ ತನ್ನ ರೆಂಬೆ ಕೊಂಬೆಗಳನ್ನು ಹರಡಿಕೊಂಡು ವಿಸ್ತಾರವಾಗಿದೆ..
Monday, 15 January 2018
ಭೀಮಾ ತೀರದ ಬೆಳಕು ಭಾಗ 3
'ಜೋಳಿಗೆ' ಯೆಂಬ ಕವಿಶೈಲ.....
ಸ್ಥಾವರವೊಂದು ಸಾಂಸ್ಕೃತಿಕ ಪರಂಪರೆಯನ್ನು ಹುಟ್ಟುಹಾಕಿ ತನ್ನೊಡಲಲ್ಲಿ ಕಡಲಾಳದಷ್ಟು,ಸಾಹಿತ್ಯ, ಕಲೆ, ಜ್ಞಾನ ಚಿಂತನ ಹಾಗೂ ಅನುಭವಗಳ ಬುತ್ತಿಯನ್ನು, ದರ್ಶಿಸಿದವರಿಗೆಲ್ಲಾ ಮಥನದ ಮೂಲಕ ವಿನಿಮಯ ಮಾಡಿಕೊಳ್ಳುತ್ತಾ ಮನ ಮನಗಳಲ್ಲಿ ಚಲನಶೀಲತೆ ಕ್ರಿಯಾಶೀಲತೆ ಪಡೆದು "ಜೋಳಿಗೆ"ಯಾಗಿ ಸ್ವಯಂ ಜಂಗಮ' ವಾಗುವುದಿದೆಯಲ್ಲ ಅದು ಅನೂಹ್ಯವಾದದ್ದು.
ಇಳಕಲ್ಲಿನ ಶ್ರೀ ಮಹಾಂತ ಶಿವಯೋಗಿಗಳ 'ಜಂಗಮ ಜೋಳಿಗೆ' ಮನುಷ್ಯರ ದುಶ್ಚಟಗಳನ್ನೇ ಭಿಕ್ಷೆಯಾಗಿ ಪಡೆದು ಸಾಮಾಜಿಕ ಕ್ರಾಂತಿಯೊಂದನ್ನು ಹುಟ್ಟುಹಾಕಿದಂತೆ,ಚಡಚಣ ದ ರಾಗಂ ರವರ ಈ ಜೋಳಿಗೆ ಸಾಧಕರ, ಚಿಂತಕರ, ಸಾಹಿತಿಗಳ, ಕಲಾವಿದರ,ಜನಪದರ, ಮಹನೀಯರ , ನಮ್ಮ ನೆಲದ ಜ್ಞಾನ, ಸಂಸ್ಕೃತಿ ಹಾಗೂ ಅನುಭವಗಳನ್ನೆಲ್ಲ ತನ್ನ ಮೂರ್ತ ಮತ್ತು ಅಮೂರ್ತ ರೂಪದಲ್ಲಿ ಹೀರಿಕೊಂಡು ಮಥಿಸಿ,ಅವುಗಳನ್ನು ಸಾಹಿತ್ಯ ಸೇವೆಯ ಮೂಲಕ ಸಮಾಜಕ್ಕೆ ಮರಳಿಸುವ "ಜ್ಞಾನಕಣಜ'' ದ ಅಕ್ಷಯ ಪಾತ್ರೆ ಯಾಗಿ ಸಾಂಸ್ಕೃತಿಕ ಕ್ರಾಂತಿಗೆ ಕಾರಣವಾಗಿದೆ.
ಜೋಳಿಗೆ ಯ ಒಳಗೆ ಎಡಭಾಗದಲ್ಲಿ ಜ್ಞಾನದ ಹಸಿವು ತಣಿಸುವ ಹೃದಯದಂತಿರುವ ಹಲವು ಸಾವಿರಗಳಷ್ಟು ಪುಸ್ತಕಗಳನ್ನು ಹೊಂದಿದ ಸುಸಜ್ಜಿತ ಗ್ರಂಥಾಲಯ,ನನ್ನನ್ನು ಕೈಬೀಸಿ ಕರೆಯಿತು.ತಗ್ಗಾದ ನಡುಮನೆ ಒಳಾಂಗಣ ಸೌಂದರ್ಯವನ್ನು ಸಹಜವಾಗಿ ಹೆಚ್ಚಿಸಿದೆ.ಕಿಟಕಿಗಳನ್ನು ಕೇಳಿಯೇ ಒಳಬರಬೇಕಾದ ಸೂರ್ಯನ ಹಿತ ಮಿತ ಗಾಳಿ ಬೆಳಕುಗಳು ಮನೆಯ ಒಳಗೆ ತಂಪಾದ ವಾತಾವರಣವನ್ನು ರೂಪಿಸಿವೆ.
ಆಗ್ನೇಯ ಮೂಲೆಯಲ್ಲಿ ಬರುವ ಅತಿಥಿಗಳ ಹಸಿವು ನೀಗಿಸುವ ಹೊಸ ಶೈಲಿಯ ವಿನ್ಯಾಸ ಹೊಂದಿರುವ ಸುಸಜ್ಜಿತವಾದ ಅಡುಗೆ ಮನೆ ಸುಂದರವಾಗಿದೆ. ನೈರುತ್ಯ ಮೂಲೆ ಹಾಗೂ ವಾಯುವ್ಯ ಮೂಲೆಗೊಂದೊಂದು ವಿಶ್ರಾಂತಿ ಕೊಠಡಿಗಳು.ಮನೆಯ ಹೃದಯದ ಮೇಲ್ಭಾಗದಲ್ಲಿ ಮನೆಯ ಎತ್ತರಕ್ಕೆ ತಕ್ಕಂತೆ ಸೊಗಸಾಗಿ ನಿರ್ಮಿತವಾಗಿರುವ 'ಧ್ಯಾನಮಂದಿರ', ಒಳಗೆ ಪ್ರವೇಶಿಸಿದ ಕೂಡಲೇ ಮನಸ್ಸನ್ನು ನಿರ್ಮಲವಾಗಿಸಿ ಧ್ಯಾನಾಸಕ್ತಿಯನ್ನು ಉದ್ದೀಪನಗೊಳಿಸುವ ಮನೆಯ ಪ್ರಶಾಂತ ತಾಣವಾಗಿದೆ. ಟಿಬೇಟಿಯನ್ ಶೈಲಿಯ ಮಧ್ಯಗೋಪುರ ಮನೆಯ ಸೌಂದರ್ಯಕ್ಕೊಂದು ಅಲಂಕಾರದ ಮುಕುಟವಾಗಿದೆ.ಮನೆಯ ಮುಂದಣ ಪಡಸಾಲೆ ಮಂದಿರ ದ ಕಳೆಯನ್ನು ಹೆಚ್ಚಿಸಿದೆ.
ಮನೆಯೊಳಗೆ ಹಗಲಿನಲ್ಲಿ ರಂಗದ ನೆನಪು ತರುವ ಸಹಜವಾದ ನೆರಳು ಬೆಳಕಿನಾಟ,ರಾತ್ರಿಯ ಮಂದ ಪ್ರಕಾಶದ ಅಲಂಕಾರ ದೀಪಗಳ ಬೆಳಕ ನೋಟ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.
ಹೊರಗೆ 'ಜೋಳಿಗೆ' ಯ ಮುಂದೆ ವಿಶಾಲವಾದ ಬಯಲು .ಬಯಲಿನಲ್ಲಿ ಬಿಸಿಲಿಗೆ ಹೊಂದಿಕೊಂಡು ನಿಧಾನವಾಗಿ ಬೆಳೆಯುತ್ತಿರುವ ಗಿಡಮರಗಳು ಪ್ರಕೃತಿ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಊರ ಹೊರಗಿನ ನಿಶಾಂತವಾದ, ನಿಶ್ಯಬ್ದವಾದ ಜಾಗದಲ್ಲಿ ನಿರ್ಮಾಣವಾಗಿರುವ ಈ 'ಜೋಳಿಗೆ' ಯಲ್ಲಿ ರಾಗಂ ರವರು ತಂದೆಯೊಂದಿಗೆ ನಡೆದಾಡಿದ ಹೆಜ್ಜೆಗುರುತುಗಳಿವೆ. 'ಭೀಮೆ' ಯಂತೆ ಹೊಳೆಯಾಗಿ ಹರಿಯುವಷ್ಟು ಭಾವಬಿಂದುಗಳಿವೆ, ಸಿಹಿ ಕಹಿ ನೆನಪುಗಳಿವೆ,ಶುದ್ಧ ಪ್ರೇಮದ ಸಲ್ಲಾಪಗಳಿವೆ. ಪರಿಶ್ರಮದ,ಸ್ವಾಭಿಮಾನದ ಬದುಕು ನಡೆಸಿದ ಸವಾಲುಗಳ ಪುಟಗಳಿವೆ, ಊರಮನೆಗಳ ಸಾಕಿಯರ ಮೃಷ್ಟಾನ್ನದ ಋಣಗಳಿವೆ,ಬಾಲ್ಯದ ಗೆಳೆಯರ ಒಡನಾಟದ ಒರತೆಗಳಿವೆ.ಅವರು ಪ್ರೀತಿಸುವ ನಿಷ್ಠೆಯ ಪ್ರಾಣಿ ನಾಯಿಗಳೊಂದಿಗಿನ ಮುದ್ದಾಟಗಳಿವೆ.
ಹೀಗೆ ನಾನು ಒಂದು ದಿನ ಅಲ್ಲಿದ್ದು ಮರುದಿನ ಮಧ್ಯಾಹ್ನ ೩ .೧೫ ರ ಹೊತ್ತಿಗೆ ಗುರು ರಾಗಂ ರವರಿಗೆ ಅವರ ಮುದ್ದು ಕುಡಿಗಳಿಗೆ ವಿದಾಯ ಹೇಳಿ ಮತ್ತೆ ಊರ ಕಡೆಗೆ ಹೊರಟೆ.ಆ ಮಂದಿರದಲ್ಲಿ ಕಳೆದ ಮಧುರ ನೆನಪುಗಳು ನಮ್ಮೂರಿನವರೆಗೆ ಕರೆದುಕೊಂಡು ಬಂದವು.
ಭೀಮಾ ತೀರದ ಬೆಳಕು ಭಾಗ ೨
ಭೀಮಾ ತೀರದ ಬೆಳಕು ಭಾಗ ೨
'ಜೋಳಿಗೆ' ಯೆಂಬ ಕವಿಶೈಲ
ಅಂದು ದಿ.೧೪.೧.೧೮ ರ ರಾತ್ರಿ ೧೧ ಗಂಟೆಯ ಹೊತ್ತಿಗೆ ಗುರುಗಳಾದ ಡಾ.ರಾಜಶೇಖರ ಮಠಪತಿ (ರಾಗಂ) ರವರಿಗೆ ಸುಮ್ಮನೆ ಫೋನಾಯಿಸಿದಾಗ ಇಂಡಿ ತಾಲೂಕಾ ೧೦ ನೆಯ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಪರಿವರ್ತನೆಗೊಂದು ಹೆದ್ದಾರಿಯೆಂಬಂತಿದ್ದ, ದಿಕ್ಸೂಚಿಯಾಗಿರುವ ವಿಶಿಷ್ಟವಾದ ಆಮಂತ್ರಣ ಪತ್ರಿಕೆ ಹಾಗೂ ಕಾರ್ಯಕ್ರಮಗಳ ಕುರಿತು ಚರ್ಚಿಸಿದೆವು. ರಾಗಂವರು ಅಂದು "ಜೋಳಿಗೆ "(ರಾಗಂ ರವರು ಸ್ಥಾಪಿಸಿದ ಗ್ರಂಥಾಲಯ ಹಾಗೂ ಧ್ಯಾನಮಂದಿರ) ಯಲ್ಲಿದ್ದ ಸಂಗತಿ ತಿಳಿದು ತಡ ಮಾಡದೇ ಅವರ ಅನುಮತಿಗೂ ಕಾಯದೇ ಚಡಚಣಕ್ಕೆ ಹೊರಟು ನಿಂತೆ.
ಬೀಳಗಿಯ ನನ್ನ ಕಾಲೇಜಿನ ಕರ್ತವ್ಯ ಮುಗಿಸಿ ಮಧ್ಯಾಹ್ನ ೩ .೩೦ ರ ಹೊತ್ತಿಗೆ ವಿಜಯಪುರದ ಬಸ್ಸನ್ನೇರಿ ಕುಳಿತಾಗ ಅಲ್ಲಿಯವರೆಗೆ 'ಜೋಳಿಗೆ' ಯನ್ನು ನೋಡಿರದಿದ್ದ ನನಗೆ ಆ ಸ್ಥಾವರ ವನ್ನು ಕುರಿತ ನನ್ನ ಕಲ್ಪನೆಯ ಚಿತ್ರ ಚಿತ್ತಾರಗಳು ಮನಭಿತ್ತಿಯ ಮೇಲೆ ಪುಂಖಾನುಪುಂಖವಾಗಿ ಆಗಮಿಸಿ ಕುಣಿಯತೊಡಗಿದವು. ಸಮಾಧಾನಿಸಿದೆ, ಅನುಭವಿಸಿದೆ, ಆನಂದಿಸಿದೆ ಧ್ಯಾನಿಸಿದೆ, ತವಕಿಸಿದೆ .ಮೈಮರೆತು ಭಾವಲೋಕದಲ್ಲಿ ಮುಳುಗಿದೆ. ವಿಜಯಪುರದಲ್ಲಿಳಿದಾಗ ಗೋಧೂಳಿಯ ಸಮಯ ೬ ಗಂಟೆ .ಅಲ್ಲಿ ಚಡಚಣ ದ ಮೂಲಕ ವಿಠ್ಠಲನ ಫಂಡರಾಪುರಕ್ಕೆ ಹೋಗುವ ಬಸ್ಸಿನಲ್ಲಿ ಕುಳಿತು, ಪ್ರಥಮ ಬಾರಿಗೆ ಪಯಣಿಸುತ್ತಿರುವ, ಚಡಚಣ ಎಂಬ ಭೀಮಾ ತೀರದ ಊರಾದರೂ ಹೇಗಿದ್ದೀತು ಜೋಳಿಗೆ ಹೇಗಿರಬಹುದು ಎಂದು ಮತ್ತದೇ ಕನವರಿಕೆಯಲ್ಲಿ ಚಡಪಡಿಸಿದೆ. ಅದಾಗಲೇ ಎರಡು ಸಲ ಎಲ್ಲಿರುವೆ ಎಂದು ವಿಚಾರಿಸಿದ್ದ ಗುರುಗಳೂ ನನಗಾಗಿ ಕಾಯುತ್ತಿದ್ದರು.
ಝಳಕಿಯ ಮೂಲಕ "ಬಿಸಿಲನಾಡು" ಚಡಚಣ ಕ್ಕೆ ಬಂದಿಳಿದಾಗ ಸಮಯ ಸುಮಾರು ರಾತ್ರಿ೮ ಗಂಟೆ.ಕುತೂಹಲದಿಂದಲೇ ಗುರುಗಳು ನನಗಾಗಿ ಕಳುಹಿಸಿದ ತಮ್ಮ ಮಿತ್ರನಾದ ಬಷೀರ್ ಮುಲ್ಲಾ ರವರು ನನ್ನನ್ನು ಹೇಗೋ ಗುರ್ತಿಸಿ ಸ್ವಾಗತದ ಹಸನ್ಮುಖದೊಂದಿಗೆ ಬರಮಾಡಿಕೊಂಡರು.
ಮನದಲ್ಲಿ ಅದುವರೆಗೂ ನಾನು ಕಲ್ಪಿಸಿಕೊಂಡಿದ್ದ ಚಡಚಣ ಕ್ಕೂ, ನಾನು ಉದ್ಯಮಿ ಬಷೀರ್ ಮುಲ್ಲಾ ರವರ ಮಾನವತೆಯ ಮೂಲಕ ನೋಡುತ್ತಿರುವ ಚಡಚಣಕ್ಕೂ ಅಜಗಜಾಂತರ ವ್ಯತ್ಯಾಸ.ಬಷೀರ್ ಮುಲ್ಲಾ ರವರು ರಾಗಂರವರ ತಂದೆಯವರ ಪ್ರೀತಿಯ ಶಿಷ್ಯರಲ್ಲಿ ಒಬ್ಬರು. ಬಸ್ ನಿಲ್ದಾಣದಿಂದ ಸುಮಾರು ಎರಡು ಕಿ.ಮೀ ದೂರವಿದ್ದ ಗುರುಗಳ ಮನೆಗೆ ನನ್ನನ್ನು ತಮ್ಮ ಹುಡುಗನೊಬ್ಬನ ಬೈಕಿನಲ್ಲಿ ಕಳುಹಿಸಿದರು. ಬೈಕನ್ನೇರಿದ ನನಗೆ ಚಡಚಣ ದ ಬಯಲು ಸೀಮೆ ಬೆರಗುಗೊಳಿಸಿತ್ತು.
ಎದುರಾಗಿ ಬರುವ ತಂಗಾಳಿಯ ಮುದವನ್ನು ಆನಂದಿಸುತ್ತಾ
ನೇರವಾಗಿ ಗುರುಗಳ ಮನೆಯ ಮುಂದಿಳಿದಾಗ ಅದಾವುದೋ ಸ್ವರ್ಗಕ್ಕೆ ಬಂದ ಅನುಭವ.ನಾನು ಅಲ್ಲಿ ಇಳಿದದ್ದು ನೇಸರನು ದಕ್ಷಿಣಾಯನದಿಂದ ಉತ್ತರಾಯಣ ಕ್ಕೆ ತನ್ನ ಪಥವನ್ನು ಬದಲಿಸುತ್ತಿರುವ ಮಹಾ ಸಂಕ್ರಮಣದ ಘಳಿಗೆಯಲ್ಲಿ. ಅದು ನನ್ನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬದುಕಿನಲ್ಲಿಯೂ ಹೊಸ ಮನ್ವಂತರಕ್ಕೆ ನಾಂದಿಯಾಗುತ್ತದೆಂದು ನಾನು ಗ್ರಹಿಸಿರಲಿಲ್ಲ. ಒಂದು ಎಕರೆಯಷ್ಟಿರುವ ಗಟ್ಟಿ ನೆಲದ ಮೇಲೆ ಅಚ್ಚುಕಟ್ಟಾಗಿ ಮೈತಳೆದು ನಿಂತಿರುವ ಆ 'ಜೋಳಿಗೆ' ಯೆಂಬ ಸುಂದರವಾದ ಮಂದಿರ ದಂತಿರುವ ಭವ್ಯ ಕಟ್ಟಡ ದ ಮುಂದೆ ನಿಂತು ಗುರುಗಳು ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡರು.ನನಗೆ ಪುಣ್ಯಭೂಮಿಯ ಮೇಲೆ ಕಾಲಿಟ್ಟ ಅನುಭವ. ನಾನು ಅಲ್ಲಿ ಇಳಿದದ್ದು ನೇಸರನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುತ್ತಿರುವ ಸಂಕ್ರಮಣ ಕಾಲದಲ್ಲಿ. ನನ್ನ ಸಾಂಸ್ಕೃತಿಕ ಬದುಕಿನ ಪಥವನ್ನೂ ಬದಲಿಸುವ ಹೊಸ ಮನ್ವಂತರ ಕಾಲದ ಮಹತ್ವದ 'ದರ್ಶನ' ವಾಗಿ ಸಂಭ್ರಮವಾಯಿತು .
ಆ ನೆಲದ ಮಹಿಮೆಯೋ ಏನೋ ಅಲ್ಲಿಗೆ ಭೇಟಿ ನೀಡಿದ ಎಲ್ಲರಿಗೂ ಅದು ಆಧ್ಯಾತ್ಮದ ಸವಿನೆನಪುಗಳನ್ನು ಕಟ್ಟಿಕೊಟ್ಟಿದೆ. ತುಂಬಿದ ನನ್ನ ತನುಮನಗಳು ಪುಳಕಗೊಂಡು ಏನನ್ನೋ ನೆನೆಯುತ್ತಾ ಜೋಳಿಗೆ ಯನ್ನು ಪ್ರವೇಶಿಸಿದವು. ಗುರುಗಳ ಪುಟ್ಟ ಕಂದಮ್ಮಗಳಾದ ತರಂಗಿಣಿ ಹಾಗೂ ಸಿದ್ಧಾರ್ಥ ರು ನಮ್ಮನ್ನು ಹಿಂಬಾಲಿಸಿದರು.
ಒಳಗೆ ಪ್ರವೇಶಿಸುತ್ತಲೇ ಅಪ್ಪಟ ಭೀಮಾ ತೀರದ ನೆಲದ ಜನಪದ ಸಂಸ್ಕೃತಿಯ ಸೊಗಡಿನ ಸಾಮಗ್ರಿಗಳಿಂದಲೇ ಮೈವೆತ್ತು ಜಾನಪದ ರಂಗಭೂಮಿಯಂತೆ ಸುಂದರವಾದ ವೇದಿಕೆಯ ರೂಪಿನಿಂದ ಕಂಗೊಳಿಸುತ್ತಿರುವ ಒಳಾಂಗಣ ದ ರಚನೆ ನನ್ನನ್ನು ಬಹುವಾಗಿ ಸೆಳೆಯಿತು.ಎಲ್ಲಿಯೂ ಕೃತಕತೆಯ ಸ್ಪರ್ಶವಿಲ್ಲದ 'ಜೋಳಿಗೆ'ಯ ಸಹಜ ಸೌಂದರ್ಯ ಎಂಥವರನ್ನೂ ಬಯಲು ಆಲಯದೊಳಗೊ
ಆಲಯವು ಬಯಲೊಳಗೊ
ಎಂಬಂತೆ ಸೆಳೆದು ಮಂತ್ರಮುಗ್ಧರನ್ನಾಗಿಸುತ್ತದೆ.
ಹಾಗೆಂದೇ ಅದು ತನ್ನ ಶಂಕುಸ್ಥಾಪನೆಗೆಂದು ನಾಡಿನ ಹಿರಿಯ ಕ್ರೀಯಾಶೀಲ ಸಾಹಿತಿ ಚಿಂತಕ ಚಂಪಾ ರವರನ್ನು ಮುನ್ನುಡಿಯಾಗಿ ಬರಮಾಡಿಕೊಂಡಿದೆ.
ಅಲ್ಲದೇ ಉದ್ಘಾಟನೆಗೆಂದು ಇಡೀ ದಿನವೆಲ್ಲಾ ಹೊನಲು ಹರಿಸಿದ ಕಾವ್ಯಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳು, ಗ್ರೀನ್ ಆಸ್ಕರ್ ವಿಜೇತ ಶ್ರೀ ಧರ್ಮದಾಸ ಭಾರತಿ,ನಾಡಿನ ಹೆಸರಾಂತ ಕವಯಿತ್ರಿ ಶ್ರೀಮತಿ ಸುಜಾತಾ ಕುಮಟಾ, ಖ್ಯಾತ ಭಾಷಾಂತರಕಾರ ಪ್ರೊ ಜಿ. ಬಿ. ಸಜ್ಜನ ,ಹಿರಿಯ ನಟ ಶ್ರೀ ರಾಜೇಶ್, ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಶ್ರೀ ಮದಭಾವಿ, ಮಧುರಚೆನ್ನರ ಪುತ್ರ ಶ್ರೀ ಪುರುಷೋತ್ತಮ ಗಲಗಲಿ, ರಾಜ್ಯಪ್ರಶಸ್ತಿ ವಿಜೇತ ಸಿನೆಮಾ ನಿರ್ದೇಶಕ ಶ್ರೀ ರವೀಂದ್ರನಾಥ ಸಿರಿವರ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ಶ್ರೀ ಬೇಲೂರು ರಘುನಂದನ್, ಹೆಸರಾಂತ ನಾಟಕಕಾರ ಶ್ರೀ ಬಿ ಆರ್ ಪೋಲೀಸ್ ಪಾಟೀಲ, ಸಾಹಿತಿ ಚಿಂತಕರಾದ ಪ್ರೊ.ಆರ್ ಕೆ ಕುಲಕರ್ಣಿ, ರಾಷ್ಟ್ರಪ್ರಶಸ್ತಿ ವಿಜೇತ ಪ್ರಸಿದ್ಧ ಚಿತ್ರನಿರ್ದೇಶಕ ಶ್ರೀ ವಿ. ಮೂರ್ತಿ (ಜಿ. ವಿ. ಅಯ್ಯರ್ ಅವರ ಅಳಿಯ), ಚಿತ್ರಕಲಾ ಅಕಾಡೆಮಿಯ ಮಾಜಿ ಸದಸ್ಯರಾದ ಶ್ರೀ ಬಿ. ಎಸ್. ದೇಸಾಯಿ ,ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಶ್ರೀ ಸಿದ್ಧಲಿಂಗಪ್ಪ ಹಳ್ಳೂರ ಹೀಗೆ ನಾಡಿನ ಅನೇಕ ಮಹತ್ವದ ರಾಜಕೀಯ ಸಾಹಿತ್ಯಿಕ,ಸಾಂಸ್ಕೃತಿಕ, ಕ್ಷೇತ್ರಗಳ ಸಾಧಕ ಮಹನೀಯರು 'ಜೋಳಿಗೆ' ಯ ಗ್ರಂಥಗಳಲ್ಲಿ ತಮ್ಮ ಪುಟಗಳನ್ನು ದಾಖಲಿಸಿ ಹೋಗಿದ್ದಾರೆ.
Sunday, 7 January 2018
ಭೀಮಾ ತೀರದ ಬೆಳಕು
ಭೀಮಾ ತೀರದ ಬೆಳಕು
ಭೀಮಾ ತೀರದ ಬೆಳಕು
ಡಾ.ರಾಜಶೇಖರ ಮಠಪತಿ (ರಾಗಂ) ರವರು ಗಡಿನಾಡು ಬೆಳಗಾವಿ ಜಿಲ್ಲೆಯ ತೆಲಸಂಗದಲ್ಲಿ ಜನಿಸಿ,
'ಅಥಣಿ', 'ಚಡಚಣ' ದಲ್ಲಿ ಬೆಳೆದು 'ಸೊಲಾಪುರ' 'ವಿಜಯಪುರ' 'ಧಾರವಾಡ' ಗಳಲ್ಲಿ ಶಿಕ್ಷಣ
ಪಡೆದು ,ಗುಳೇದಗುಡ್ಡ ,ಬಾಗಲಕೋಟೆ, ಬೇಲೂರು, ಮೈಸೂರು ಬೆಂಗಳೂರು ಗಳಲ್ಲಿ ಅಧ್ಯಾಪಕ
ವೃತ್ತಿಯನ್ನು ಕೈಗೊಂಡು ಕನ್ನಡ ನಾಡಿನಾದ್ಯಂತ ಅಲೆದು 'ಅಕ್ಷರದ ಮಹಾಮನೆ' ಕಟ್ಟುವ
ಜಂಗಮನಂತೆ ಬದುಕುತ್ತಿದ್ದಾರೆ.
"ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ" ಎಂಬುದನ್ನು ಸಾಧಿಸಿ ತೋರುತ್ತಿರುವಂತೆ
ಅಲೆಮಾರಿ ಗುರುವಾಗಿ, ಹೋದ ಕಡೆಯಲ್ಲೆಲ್ಲಾ ಸಾಹಿತ್ಯ ಸಂಭ್ರಮವನ್ನು ಸೃಷ್ಟಿಸಿ
ಸಾಹಿತಿಗಳ, ಸಾಧಕರ,ಗೆಳೆಯರ, ಶಿಷ್ಯ ಬಳಗಗಳ ಬಹು ದೊಡ್ಡ ಜೀವಂತ ಪರಂಪರೆಯೊಂದನ್ನು
ಹುಟ್ಟುಹಾಕಿ ಮತ್ತೆ ಮುನ್ನಡೆಯುವ "ರಾಗಂ" ರವರ "ಅಕ್ಷರ ಜಂಗಮ"ನ ಜಾಯಮಾನ
ವಿಶಿಷ್ಟವಾದುದು.
೪೬ ರ ಕಿರಿಯ ವಯಸ್ಸಿನಲ್ಲಿಯೇ ಸಾಧನೆಯ ಹಿಮಾಲಯವನ್ನೇರಿ ಸಾಹಿತ್ಯದ ಭೀಮೆಯಾಗಿ ,'ಓಶೋ - ಬೆಳಕಿನ ಕಥೆ' , 'ಹೂವ
ತಂದವರು' ,'ಇರುವಷ್ಟು ಕಾಲ' , 'ಗಾಂಧಿ ಅಂತಿಮ ದಿನಗಳು', 'ಬಹಿಷ್ಕೃತರ ಬೆಳಕಿನಲ್ಲಿ',
'ಹೆಣ್ಣು ಹೇಳುವ ಅರ್ಧಸತ್ಯ', 'ಗಲ್ಲು ಗಡಿಪಾರು' ಮುಂತಾದ ೭೨ ರಷ್ಟು ಸಂಖ್ಯೆಯ ಕೃತಿಗಳ
ಮೂಲಕ 'ರಾಗಂ'ರವರು ಕನ್ನಡ ನಾಡಿನಾದ್ಯಂತ ಹಾಗೂ ನಾಡಿನಾಚೆಯೂ ವಿಸ್ತಾರವಾಗಿ
ಪ್ರವಹಿಸಿದ್ದಾರೆ.
ಡಾ.ರಾಜಶೇಖರ ಮಠಪತಿ(ರಾಗಂ) ರವರು ದಣಿವರಿಯದ ಬರಹಗಾರ.ಅವರ ಲೇಖನಿಗೆ ನಿಂತು
ವಿರಮಿಸುವಷ್ಟು ತಾಳ್ಮೆಯಿಲ್ಲ .ಹಾಗೆಂದು ಮೀರಿದ ಓಘದಿಂದ ಅವರ ಸಾಹಿತ್ಯ ಲಯ ತಪ್ಪಿದ್ದೂ
ಇಲ್ಲ. ಅವರ ಲೇಖನಿಗೆ ಗೊತ್ತಿರುವುದೊಂದೆ ಅದು "ನಿರಂತರ ಅಕ್ಷರ ಪ್ರವಾಹ". ಕಾಣುವುದೆಲ್ಲವನ್ನೂ ಅರ್ಥಪೂರ್ಣವಾಗಿ ಅನುಭವಿಸಿ ಪದಗಳನ್ನು ಕಟ್ಟುವ 'ರಾಗಂ' ರವರ ಕವಿಕೌಶಲ ರಮಣೀಯವಾದದ್ದು.
ಬದುಕೆಂಬ ಮಹಾಕಾವ್ಯವನ್ನು
ಸನಿಹಕ್ಕೆ ಬರುವ ಒಂದಂಶವೂ ಬಿಟ್ಟುಹೋಗದಂತೆ ಅರ್ಥಪೂರ್ಣವಾಗಿ, ಸಾರ್ಥಕವಾಗಿ ಕಟ್ಟಬೇಕೆಂಬ ರಾಗಂ ರವರ ಹಂಬಲ ತೀರದ ದಾಹ.
"ಆಕಾಶವೆಂಬ ಪಾತ್ರೆಯನ್ನು
ಕಣ್ಣುಗಳಿಂದಲೇ ಖಾಲಿ ಮಾಡುತ್ತೇನೆ
ಜಗದ ಹಿಮಗಿರಿಗಳನ್ನೆಲ್ಲ
ನನ್ನೆದೆಯಲ್ಲಿ ಬಚ್ಚಿಡುತ್ತೇನೆ
ಸೂರ್ಯರಶ್ಮಿಗಳನ್ನೆಲ್ಲ
ಬುದ್ಧಿಯ ಬುತ್ತಿಯಲ್ಲಿ ಹೊಚ್ಚಿಡುತ್ತೇನೆ
ನನ್ನ ನಿಲುವಿನಲ್ಲಿ ಆ ದೇವನನ್ನೂ ಸೋಲಿಸುತ್ತೇನೆ "
ಎಂದು ಅವರೇ ಒಂದು ಕಡೆ ಉಲ್ಲೇಖಿಸುವ 'ಜಾನ್ ಕೀಟ್ಸ್'ನ ಸಾಲುಗಳಿಗೆ 'ರಾಗಂ' ರವರು ಅನ್ವರ್ಥವಾಗಿ ಬದುಕುತ್ತಿದ್ದಾರೆ.
ಪ್ರಚಾರಪ್ರಿಯ ಸಾಹಿತ್ಯಕ್ಕಿಂತಲೂ, ವಿಚಾರ ಪ್ರಿಯ ಸಾಹಿತ್ಯ ರಚಿಸಿ ಯುವ ಬರಹಗಾರರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.ಮೊಗೆದಷ್ಟೂ , ಬರೆದಷ್ಟೂ ಒರತೆಯಾಗಿ, ಜೀವಸೆಲೆಯಾಗಿ ಉಕ್ಕುವ 'ರಾಗಂ' ರವರ ಸಾಹಿತ್ಯಗಂಗೆ
ಕಾವ್ಯ, ನಾಟಕ, ಪ್ರಬಂಧ ,ಅಂಕಣ ಬರಹ, ಸಂಶೋಧನೆ, ವಿಮರ್ಶೆ, ಭಾಷಾಂತರ ಪ್ರಕಾರಗಳ ಮೂಲಕ
ವಿಶಾಲ ಹರವನ್ನು ಪಡೆದಿದ್ದಾಳೆ
"ಮಣ್ಣು ಮೃಷ್ಟಾನ್ನವಾಗಿ ಕೈತುತ್ತಾಗಿ
ಬಿದ್ದ ಗಾಯಕ್ಕೆ ಮುಲಾಮಾಗಿ ಮಣ್ಣೇ ಮಾಗಿದ ಮುಷ್ಠಿಗೆ ಸಿಕ್ಕು
ಕೊಸರಿ ಕೆಸರಾಗಿ
ಅಂದಗೇಡಿ ಅಂದವಾಗಿ
ಮೂರ್ತಿ ಮಹಾನವಮಿಯಾಗಿ
ಬಾಯ್ಗಿಟ್ಟು ಮೆತ್ತಿದ್ದ ನೆಲದಲ್ಲಿಯೇ
ಇಲ್ಲೆ ಎಲ್ಲೊ ಇವೆ ನನ್ನ ಹೆಜ್ಜೆಗುರುತುಗಳು"
(ಹೆಜ್ಜೆ ಗುರ್ತುಗಳು)
ತವರಿಗಾಗಿ
ತುಡಿಯುವ ಈ ಹೆಜ್ಜೆ ಗುರುತುಗಳೇ ಇದೇ ಜನವರಿ ೨೨ ರಂದು ತವರು ನಾಡಾದ ಇಂಡಿ ತಾಲೂಕಿನ
ಕೆರೂರು ನಲ್ಲಿ ನಡೆಯುವ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ ರಾಗಂ
ರವರನ್ನು ಹುಡುಕಿಕೊಂಡು ಬರುವಂತೆ ಮಾಡಿವೆ.
'ರಾಗಂ' ರವರಿಗೆ ಹಾರ್ದಿಕ ಅಭಿನಂದನೆಗಳು
Subscribe to:
Posts (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಜಾನ್ ಕೀಟ್ಸ್ ನ ಮೌನರಾಗ.....(ಭಾಗ 2) JOHN KEATS ಕೀಟ್ಸ್ ನಲ್ಲಿ ಕಾವ್ಯ ಪವಿತ್ರವಾಗಿತ್ತು,ದಿವ್ಯ ಬೆಳಕಾಗಿತ್ತು, ಮೌನದ ಮಹ...































