Total Pageviews

Sunday, 4 August 2019

ಚಹಾಯಣ
ಕಲಿಯುಗದ ಅಮೃತವೆಂದೇ  ಪೆಸರ್ವಡೆದಿರುವ 'ಚಹಾ' ಸೇವನೆಯನ್ನು ನನ್ನ ಜೀವನದುದ್ದಕ್ಕೂ ಸಂಭ್ರಮದ ಸ್ವರ್ಗಸುಖದ ಘಳಿಗೆಗಳೆಂದು ಆಚರಿಸುತ್ತಾ ಬಂದಿರುವುದು ನನ್ನ ವ್ಯಕ್ತಿತ್ವದ ಹೆಗ್ಗಳಿಕೆಗಳಲ್ಲಿ ಒಂದು!!.  ಸೂರ್ಯೋದಯದ ಹೊಂಗಿರಣಗಳು ಭುವಿಯನ್ನು ತಬ್ಬಿ ಮೈಮರೆಯುವುದಕ್ಕಿಂತ ಮೊದಲೇ"ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಳಂ ಕುರು.."ಎಂದು ಮನೆಯ ಹತ್ತಿರದ  ದೇವಸ್ಥಾನದ ಶುಭ ಸುಪ್ರಭಾತದೊಂದಿಗೆ  ಎಚ್ಚರವಾಗುವ ನನಗೆ ಬೆಳಗು  ನಿತ್ಯೋತ್ಸವವಿದ್ದಂತೆ. ಪ್ರತಿ ಶುಭೋದಯವನ್ನೂ ಹಬ್ಬದಂತೆ ಸಂಭ್ರಮಿಸಿ ಹರ್ಷಿಸುತ್ತೇನೆ. ಮನೆಯ ಮುಂದಿನ ಬೇವು, ತೆಂಗು, ಕಣಗಲಿ ಗಿಡಮರಗಳೊಳಗಣ ಗೂಡುಗಳಿಂದ ರೆಕ್ಕೆಬಿಚ್ಚಿ ಮೈಮುರಿಯುತ್ತಾ ಹೊರಬಂದ ಗಿಳಿ, ಗುಬ್ಬಿ , ಪಾರಿವಾಳ, ಕೋಗಿಲೆ ಕಾಕಗಳ ಚಿಲಿಪಿಲಿ ಗಾನ, ಮನೆಯ ಮುಂದಿನ ಕಲ್ಪವೃಕ್ಷದ ಪ್ರತೀಕದಂತಿರುವ ತೆಂಗು ಬೇವು ಸೀತಾಫಲ ಮರಗಳ ಎಲೆಗಳ ಮಧ್ಯೆ ಇಣುಕುತ್ತಾ ತೂರಿಬಂದು ನೆಲದ ಮೇಲೆ ಸ್ವರ್ಣ ಬೆಳಕಿನ ರಂಗೋಲಿ ಬಿಡಿಸಿದ ನೇಸರನ ನವೋಲ್ಲಾಸದ ಹೊನ್ನ ಕಿರಣಗಳ  ಎರಕ, ಮೈದುಂಬಿಕೊಂಡು ದಟ್ಟ ಆಮ್ಲಜನಕದ ತೇವಭರಿತ ಗಂಧ ಸೂಸುತ್ತಿರುವ ಮಂದಹಾಸದ ತಂಗಾಳಿಯ ಹಿತವಾದ ಸ್ಪರ್ಶ, ಇಬ್ಬನಿಯ ಹನಿಗಳಿಂದ ತೊಯ್ದು ಇರುವೆಗಳ ಮುಂಜಾವಿನ ಜಾತ್ರೆಗೆ ಕಾರಣವಾದ ಸವಿನೆಲದ ರಸ ಮಾಧುರ್ಯ, ದಾಸವಾಳ, ಮಲ್ಲಿಗೆ,ಸೇವಂತಿಗೆ ಕುಸುಮಗಳ ಮೇಲೆ ಸವಾರಿ ಹೊರಟು ರೆಕ್ಕೆಬಡಿಯುತ್ತಾ ಹನಿಹನಿಯಾಗಿ ಮಧು ಹೀರುತ್ತಿರುವ ದುಂಬಿಗಳ ನಿನಾದ,  ಚುಮುಚುಮು ಬೆಳಕಿನ ಉದಯರಾಗ, ಕೈಗೆಟುಕುವ ಕಣ್ಣಳತೆಯಲ್ಲಿ ಗೂಡುಕಟ್ಟಿ ಮಧುವಿನ ಸಂಗ್ರಹದಲ್ಲಿ ತೊಡಗಿರುವ ಮರಿದುಂಬಿಗಳ ಸ್ವರಾಂಜಲಿ,ಹೂವಿಂದ ಹೂವಿಗೆ ಹಾರಿ, ರಸರುಚಿಯ ಪರೀಕ್ಷೆಗಿಳಿದು ಸುತ್ತಿ ಸುಳಿಯುತ್ತಿರುವ ಚಿಟ್ಟೆಗಳ ಸರಸ ಸಲ್ಲಾಪ, ರವಿಯ ಹೊಂಗಿರಣಗಳಿಗೆ ಮೈಯ್ಯೊಡ್ಡಿ ಅರಳಿ ನಿಂತು ಸುಗಂಧಸುಧೆಯನ್ನು ಹರಿಸುತ್ತಿರುವ ತುಳಸಿ,ದುಂಡುಮಲ್ಲಿಗೆ,ಚೆಂಡು ಹೂ, ಸೇವಂತಿಗೆ, ಕಣಗಿಲೆ, ಸೂಜಿಮಲ್ಲಿಗೆ,ಮಧ್ಯಾಹ್ನಮಲ್ಲಿಗೆ, ಬೇವಿನ ಹೂ,ಪೇರು ಹೂಗಳ ವೈವಿಧ್ಯಮಯ ಚಿತ್ತಾಕರ್ಷಕ ಬಣ್ಣಗಳ  ಸೌಂದರ್ಯಮೀಮಾಂಸೆ,  ಮಂಜಿನ ರಸಗಂಗೆಯ ಹನಿಗಳ ಮಿಲನದಿಂದಾಗಿ  ಪೆಟ್ರಿಕೋರ್ ವಿದ್ಯಮಾನದುಂದುಂಟಾಗಿ ಚಿಮ್ಮುತಿರುವ  ಆರ್ದ್ರ ಮಣ್ಣಿನ ಹದಭರಿತ ಪರಿಮಳ, ಭಾನುವಿನ ನವಪ್ರಭೆಗಾಗಿ ಕಾತರಿಸುತ್ತಲೇ ಮರೆಯಾಗುತ್ತಿರುವ ಮಂದಬೆಳಕಿನ ಉದಯಗೀತೆ..... ಹೀಗೆ ಸರದಿಯಂತೆ ಬಂದಪ್ಪಳಿಸುವ ಶುಭೋದಯದ ನಾದಬಿಂದುಗಳೊಂದಿಗೆ ಚಹಾಮಾಯಿಯ ಚಪ್ಪರಿಸುವ ಸವಿ ಗುಟುಕಿದ್ದರೆ ಮುಗಿಯಿತು. ಅದು ಧರೆಗಿಳಿದ ನಂದನವನದ ಸಾಕ್ಷಾತ್ಕಾರದ ಪರಮಸುಖ ; ನೆಲದ ಮೇಲಿನ ಬೃಂದಾವನ ದರ್ಶಿಸಿದ ಮಹದಾನಂದ ; ಅಮೃತಧಾರೆಯನ್ನೇ ಹೀರಿದ ದಿವ್ಯಾನುಭವ ; ಇಬ್ಬನಿಯ ಹನಿಗಳೆಲ್ಲಾ ಮುತ್ತಾದ ಸಂಭ್ರಮ; ಮರ್ತ್ಯ ಲೋಕದಿಂದ ಹಾರುತಿರುವ ಹೃದಯಾನಂದದ ಅನುಭವ. ಈ ಅನುಭವಗಳು ಒಮ್ಮೆಲೇ ಬಂದಪ್ಪಳಿಸಿ ಅಂತರಂಗದ ಕಡಲಿಗೆ ಪ್ರಶಾಂತಿಯನ್ನು ನೀಡುವ ದಿವ್ಯಾನುಭವ ನನಗೆ ಶುಭೋದಯದ ಚಹಾರಾಣಿ ನನ್ನೊಳಗಿಳಿದಾಗ ಸಂಭವಿಸಿದೆ. ನನ್ನನ್ನು ಧ್ಯಾನದ ಶೂನ್ಯಕ್ಕೆ ಕರೆದೊಯ್ಯುವ ಹಕ್ಕಿಯಂತೆ ಚಹಾಮಾಯೆ ನನ್ನನ್ನು ಬೆಂಬತ್ತಿದೆ."ಆನಂದಮಯ ಈ ಜಗಹೃದಯ|ಭಯವೇತಕೆ ಮಾಣೊ ಸೂರ್ಯೋದಯ | ಚಂದ್ರೋದಯ ದೇವರ ದಯೆ ಕಾಣೊ" ಎಂಬ ಕುವೆಂಪುರವರ ಉಕ್ತಿಯಂತೆ ಉದಯರವಿಯೊಂದಿಗೆ, ಸಲ್ಲಾಪದಲ್ಲಿ ತೊಡಗಿದರೆ ಸಾಕು ಬರೆಯುತ್ತಿರುವ ಸಂಗತಿಗಳೆಲ್ಲಾ ಕಿರಣಗಳ ಹೊಳಪಿನಲ್ಲಿ ಮಂದವಾಗುತ್ತವೆ.
ಚಹಾದ ಮಗ್ಗಿಗೆ ಬರೋಣ. ಚಹಾವೆಂದರೆ ನನಗಂತೂ ಎಲ್ಲಿಲ್ಲದ ಹಿಗ್ಗು. ಬೆಳಗಿನ ಈ ಸುಖಜೀವನದ ಘಳಿಗೆಗಳೊಂದಿಗಿನ ಸೇವನೆ ನನ್ನ ನಿತ್ಯದ ಬದುಕನ್ನು ರಸಮಯವಾಗಿಸಿದೆ. ಚೈತನ್ಯದ ಚಿಲುಮೆಯ ಒರತೆಯನ್ನಾಗಿಸಿದೆ. ಚಹಾದ ಗುಟುಕಿನಿಂದಲೇ ನನ್ನ ಬೆಳಗಿನ ಅಧಿಕೃತ ಪ್ರಾರಂಭವೆಂದರೆ ತಪ್ಪಾಗಲಾರದು. ಅಂದರೆ ಬೆಳಿಗ್ಗೆ ೬ ಗಂಟೆಗೆ ಎದ್ದರೂ ಅಂದು ತಡವಾಗಿ ೧೦ ಗಂಟೆಗೆ ಚಹಾ ಹೀರಿದರೆ ನನಗೆ ಶುಭೋದಯವಾಗುವುದು ೧೦ ಗಂಟೆಗೆ ಎಂದರೆ ಚಹಾ ನನ್ನನ್ನಾವರರಿಸಿರುವ ಪರಿಯನ್ನೊಮ್ಮೆ ಊಹಿಸಬಹುದು. ಬೆಳಗಿನಲ್ಲಿ ಮಾತ್ರವಲ್ಲ ಹೊತ್ತಲ್ಲದ ಹೊತ್ತಿನಲ್ಲೂ ನನ್ನೊಳಗಿಳಿಯುವ ಆಪತ್ಕಾಲದ ಪಾನರಾಣಿ. ತಲೆ ನೋವಿನ ಹಾವಳಿಯಿರಲಿ, ಸುಖವೆಂದು ಬಗೆದ ಸಂಸಾರದ ಅಸಂಖ್ಯಾತ ತಾಪತ್ರಯಗಳ ದಾಳಿಯಿರಲಿ, ಮೈ ಹಣ್ಣಾಗುವ ಆಯಾಸವಿರಲಿ, ಮೈಗಳ್ಳತನವೆಂಬ ಠಕ್ಕನ ಬಲೆಯಾಗಿರಲಿ,ತರಗತಿಗಳಲ್ಲಿನ ಉಪನ್ಯಾಸದ ಬಳಲಿಕೆಯಿರಲಿ, ಸ್ನೇಹಿತರೊಂದಿಗಿನ ಹರಟೆಯಿರಲಿ ಅಥವಾ ಏನೂ ಇಲ್ಲದೇ ಸುಮ್ಮನೆ ಹೊತ್ತುಗಳೆಯುತಿದ್ದರೂ ಚಹಾ ಎಂಬ ಮನದನ್ನೆ ಮಾತ್ರ ನನ್ನನ್ನು ಆಗಾಗ ಬಂದು ಕ್ಷೇಮಕುಶಲ ತಿಳಿದು ಮನದ ಕ್ಲೇಶ ಕಳೆಯುವ ಜೀವ ಸಂಜೀವಿನಿಯಾಗಲೇಬೇಕು. ಕಾರಣಗಳೇ ಬೇಕೆಂದೇನಿಲ್ಲ  ನಾನು ಆಕೆಯನ್ನು ಬಯಸುವುದಕ್ಕೆ. ನೆಪಗಳಿದ್ದರೆ ಸಾಕು, ಬರಸೆಳೆದು ಬಾಚಿಕೊಳ್ಳುತ್ತೇನೆ ಆಕೆಯನ್ನು ಸಂಧಿಸಲು ದೊರೆತ ಅವಕಾಶಗಳನ್ನು. ನೆಪಗಳಿಲ್ಲದಿದ್ದರೂ ಚಿಂತೆಯಿಲ್ಲ ತಲೆ ಸರಿಯಿಲ್ಲವೆಂದೊ, ಗೆಳೆಯರಾರೊ ಬಹಳ ಮಾತನಾಡಿದರೆಂದೋ, ಪ್ರಾಂಶುಪಾಲರು ಹೊಗಳಿದರೆಂದೋ, ಚಹಾ ಒಲ್ಲದ ಸಹೋದ್ಯೋಗಿಗಳು ಬಯಸಿದರೆಂದೋ, ಗಂಟೆಗಟ್ಟಲೇ ಕಂಪ್ಯೂಟರ್ ಮುಂದೆ ಕುಳಿತೆನೆಂದೊ, ಗೆಳೆಯರ ಜನ್ಮದಿನವೆಂದೊ...   ಹೀಗೆ ತರಹೇವಾರಿ  ನೆಪಗಳನ್ನು ಅವಳಿಗಾಗಿ ಹುಟ್ಟುಹಾಕಿಕೊಳ್ಳುತ್ತೇನೆ. ಕೆಲವೊಮ್ಮೆ ಮಧ್ಯಾಹ್ನದ ಭೋಜನ  ಸವಿಯುವಾಗಲೇ ಆಕೆಗಾಗಿ ಕಾಯುವ ಪ್ರೇಮತಪಸ್ವಿಯಾಗುತ್ತೇನೆ. ಹೌದು ಆಕೆಯೆಂದರೆ ಸಮಯದ ಪರಿವೆಯಿಲ್ಲ ಎನಗೆ. ಆಕೆ ನೆನಪಾದರೆ ಮುಗಿಯಿತು ಹೊರಡಲೇಬೇಕು ಅವಳು ಸಿಗುವಲ್ಲಿಗೆ. ಬಸ್ಸು ನನ್ನನ್ನು ಬಿಟ್ಟು ಹೊರಟರೂ ಪರವಾಗಿಲ್ಲ ಆಕೆಯೊಂದಿಗೆ ಕೆಲಕಾಲ ಮಾತಿಗಿಳಿಯಲೇಬೇಕು. ಆಕೆಯ ಸಂಗದಿಂದ ಕ್ಷಣಹೊತ್ತು ಮೈಮರೆತು ಕುಳಿತ ನಂತರ, ಎಚ್ಚರವಾದಾಗ ಏನನ್ನೋ ಅವಳಿಗಾಗಿ ಕಳೆದುಕೊಂಡಿರುತ್ತೇನೆ. ಮಹತ್ವದ ಸಮಯವನ್ನೊ,ಮನೆ ಸೇರಿಸಬೇಕಾದ ಬಸ್ಸನ್ನೊ, ಮಹತ್ವದ ಕೆಲಸವಾಗಬೇಕಾದ ಯಾರದೋ ಭೇಟಿಯನ್ನೊ,ಹೊರಟಿರುವ ಪ್ರಯಾಣದ ರೈಲನ್ನೊ, ಕಾಯುತ್ತಿರುವ ಗೆಳೆಯನನ್ನೊ ಅಥವಾ ಸಂಬಂಧಿಕರನ್ನೊ  ಇನ್ನೇನೇನೋ ಆ ಕ್ಷಣಕ್ಕೆ ಕಳೆದುಕೊಂಡಿರುತ್ತೇನೆ.  
ಆದರೂ ಚಿಂತೆಯಿಲ್ಲ ನನಗೆ. ಕಳೆದುಕೊಂಡಿದ್ದೇನೆ ಎಂಬ ಕೊರಗಿಲ್ಲ; ದಕ್ಕದೇ ಹೋಯಿತೆಂಬ ಪಶ್ಚಾತ್ತಾಪವಿಲ್ಲ; ತಪ್ಪಿಹೋಯಿತಲ್ಲ ಎಂಬ ಕನವರಿಕೆಯಿಲ್ಲ ; ಜಾರಿದೆನೆಂಬ ಪ್ರಾಯಶ್ಚಿತವಿಲ್ಲ; ಅನಾಹುತವಾಯಿತಲ್ಲ ಎಂಬ ಹೆದರಿಕೆಯಿಲ್ಲ ; ಸಂಭವಿಸಬಾರದಾಗಿತ್ತು ಎಂಬ ಹಳಹಳಿಕೆಯಿಲ್ಲ; ಎಚ್ಚರ ತಪ್ಪಿದೆನೆಂಬ ಹಳವಂಡವಿಲ್ಲ; ಓಹೋ ಕೈಜಾರಿತೆಂಬ ಪರಿತಪಿಸುವಿಕೆಯಂತೂ ನನ್ನಲಿಲ್ಲ ಏಕೆಂದರೆ ನಾನು ಅವಳನ್ನು (ಚಹಾಮಾಯೆ) ಕುಡಿದಿದ್ದೇನೆ. ಅಲ್ಲಮನಿಗೆ ತಾಮಸವು ಮಾಯೆಯಾಗಿ ಕಾಡಿದಂತೆ ನನಗೆ ಚಹಾ ಮಾಯೆಯಾಗಿ ಕಾಡಿದೆ. ಆದರೆ ಅಲ್ಲಮ ಮಾಯೆಯನ್ನು ಗೆದ್ದು ಬೀಗಿ ಬಯಲಾದ. ನಾನು ಸೋತು ಹಿಗ್ಗಿ ಪರವಶನಾದೆ. ಅವಳೊಲವಿನ ಶಾಶ್ವತ ಪ್ರೇಮಭಿಕ್ಷುವಾದೆ. ಆಕೆ ಪ್ರೇಮಮಧುವನ್ನು ಧಾರೆಯೆರೆಯುವ ಗಂಗೆಯಾದಳು. ಆಕೆಯ ರಸಾನುಭವದ ಸಖನಾದೆ. ಆಕೆಯ ಪರಿಮಳದ ಹಬ್ಬದಲ್ಲಿ ಸಂಭ್ರಮಿಸುವ ಮಗುವಾದೆ. ಹದಭರಿತ ಚಹಾಕನ್ನಿಕೆಯ ಸ್ವಾದಕ್ಕಿಂತ ಮಿಗಿಲಾದ ರಸರಾಸಾಯನ ಈ ಭುವಿಯ ಮೇಲೆ ಬೇರೊಂದಿಲ್ಲ. ಉಪ್ಪಿಗಿಂತ ರುಚಿಯಿಲ್ಲ ಎಂಬರು ಬಲ್ಲವರು. ಆದರೆ ನನಗೆ ಈ ಜಗದಲಿ ಚಹಾಗಿಂತ ರುಚಿ ಬೇರೊಂದಿಲ್ಲ.
ಕಾರಣ ಚಹಾಷೋಡಶಿಯ ಬಾಯಿ ಚಪ್ಪರಿಸುವ ಆಸ್ವಾದ; ನನ್ನೊಳಗಿಳಿದು ನಶೆಯೇರಿಸುವ ಅವಳ ಆಮೋದ. ಸಾಮಾನ್ಯವಾಗಿ ಸರ್ವರಿಗೂ ತಿಂಗಳಿಗೊಮ್ಮೆ ಹುಣ್ಣಿಮೆ, ಅಮವಾಸ್ಯೆಗಳ ಹಬ್ಬವಾದರೆ ನನಗೆ ಚಹಾಸಿನಿ ಯ ಸಖ್ಯ ದೊರೆತಾಗಲೆಲ್ಲ ಮಹಾನವಮಿ. ಯಾಕೆಂದರೆ ಚಹಾಮಾಯೆಯನ್ನು ಪಡೆದುಕೊಂಡಿದ್ದೇನೆ. 
"ಬೆಳಗಾಗೆದ್ದ ಕೂಡಲೇ ಯೋಗಿಯಾಗುತ್ತೇನೆ ಧ್ಯಾನನಿರತನಾಗುತ್ತೇನೆ, ನಂತರವಾದರೂ ಚಹಾಮೃತವನ್ನು ಸವಿಯಬಹುದೆನ್ನುವ ಮಹಾ ಹಂಬಲದಿಂದ, ಮಜ್ಜನದಲಿ ತೊಯ್ಯುತ್ತೇನೆ, ತಾಳದ ಚಳಿ ಪಡೆದು ಹೆಚ್ಚು ಚಹಾ ಹೀರಬಹುದೆಂಬ ಮಹದಾಸೆಯಿಂದ, ಉಪಹಾರ ಸೇವಿಸುತ್ತೇನೆ ಜಠರಲದಲ್ಲಿನಿತು ಅವಕಾಶವನಿಟ್ಡು. ಸಾಧ್ಯವಾದಷ್ಟೂಅವಳನ್ನು ಕುಡಿದು ತುಂಬಿಕೊಳ್ಳಬೇಕೆಂಬ ಬಯಕೆಯಿಂದ "ಸದಾ ತುಂಬಿಕೊಂಡೇ ನಶೆಯನ್ನೇರಿಸಿಕೊಳ್ಳುವ ಚಹಾದ ಮಗ್ಗನ್ನು ಕಂಡು ಅಸೂಯೆಪಟ್ಟಿದ್ದೇನೆ. ಸಂಸ್ಕರಿತ ಮಣ್ಣಿನ ಹೊಳೆಯುವ ಶ್ವೇತ ವರ್ಣದ ಪಿಂಗಾಣಿ ಮಗ್ಗಿನಲ್ಲಿಯ ಆಕೆಯ ತುಳುಕುವಿಕೆಯನ್ನು ಕಂಡು ಮೋದಿಸಿದ್ದೇನೆ. ಕೆಂಬಣ್ಣದ ಕೆನ್ನೆಯಂತಿರುವ ಅವಳ ಕೆನೆಯನ್ನು ಸವರಿ ಎತ್ತಿಕೊಂಡು ಚರ್ವಿಸಿದ್ದೇನೆ. ನಾಲಿಗೆ ಚಪ್ಪರಿಸಿ ರಸಾಂಕುರಗಳನ್ನು ಉದ್ದೀಪಿಸಿದ್ದೇನೆ. ಹರಿವಂಶರಾಯ್ ಬಚ್ಚನ್ ರವರು-"ನನ್ನ ಶೆರೆಯಲ್ಲಿ ಒಂದೊಂದುಹನಿ ಒಬ್ಬೊಬ್ಬರಿಗೂ| ನನ್ನ ಪ್ಯಾಲೆಯೊಳಗೆ ಒಂದೊಂದು ಗುಟುಕು ಎಲ್ಲರಿಗೂ| ನನ್ನ ಸಾಕಿಯೊಳಗೇ ಅವರವರ ಸಾಕಿಯರ ಸುಖ ಎಲ್ಲರಿಗೂ|ಯಾರಿಗೆ ಯಾವ ಹಂಬಲವೊ ಹಾಗೇ ಕಂಡಳು ನನ್ನ ಮಧುಶಾಲಾ"ಎಂದು  ಮದಿರೆ ಹಾಗೂ ಮಧುಶಾಲೆಯನ್ನು ಕುರಿತು ಹಾಡಿದ ಕವಿತೆಯ ಸಾಲುಗಳು ನನ್ನ ಚಹಾ ಹಾಗೂ ಚಹಾಶಾಲೆಯನ್ನು ಕುರಿತ ಅನುಭವವನ್ನು ಹೋಲುತ್ತವೆ.  ಚಹಾಶಾಲೆಯಲ್ಲಿ ಕುಳಿತು ಚಹಾವನ್ನು ಮದಿರೆಯಂತೆ ಹೀರಿದ್ದೇನೆ. "ವಾಹ್ ತಾಜ್..." ಎಂಬ ತಬಲಾವಾದಕನ  ಚಹಾ ಹೀರುವ ದೃಶ್ಯದ ತುಣುಕು ನನಗೆ ಜಾಹೀರಾತಾಗಿ ಕಾಣಲೇ ಇಲ್ಲ, ಬದಲಾಗಿ ಚಹಾದ ತಾಜಾ ಸ್ವಾದ ಹಾಗೂ ನವೋಲ್ಲಾಸದ ಹೊಳೆಯ ಅಭಿವ್ಯಕ್ತಿಯಾಗಿ ಕಾಣುತ್ತದೆ. ಮೈಯ್ಯೊಳಗೆ ರುಧಿರದ ಬದಲಾಗಿ ಚಹಾವೇ ಪ್ರವಹಿಸುವಂತಿದ್ದರೆ ದಿನವಿಡೀ ಮನೋಲ್ಲಾಸದ ಮಡುವಿನಲ್ಲಿ ತೇಲಾಡಬಹುದಿತ್ತಲ್ಲ ನಶೆಯ ಗುಂಗಿನಲ್ಲಿಯೇ ಓಲಾಡಬಹುದಿತ್ತಲ್ಲ ಎಂಬ ದುರಾಸೆಯ ಕನಸಿನ ಬೆನ್ನು ಹತ್ತಿ ಕನವರಿಸಿದ್ದೇನೆ. ಊಟ, ಉಪಹಾರವಿಲ್ಲದೇ ಸರಾಗವಾಗಿ ಜೀವನ ನಡೆಸಬಹುದು ಆದರೆ ಚಹಾಕನ್ನಿಕೆಯ ದರ್ಶನವಿಲ್ಲದ ನನ್ನ ಹೃದಯ ಮತ್ತು ಮನಸ್ಸುಗಳು ಕ್ಷಣಕಾಲವೂ ಬದುಕಿರಲಾರವು ಎಂಬುದು ನನ್ನ ಅನುಭವದ ಸಾರ!! ದೇವತೆಗಳು ಭೂಲೋಕದಲ್ಲಿ ಆಕಸ್ಮಾತ್ ಆಗಿ ಮರೆತು ಬಿಟ್ಟು ಹೋದ ಸುಧೆಯ ಮೂಲರಸಾಯನವೇ ಚಹಾ ಇರಬಹುದು ಎಂಬ ನನ್ನ ದೃಢ ಕಪೋಲ  ಕಲ್ಪನೆಗೂ ರೆಕ್ಕೆ ಕಟ್ಟಿ ಹಾರಿಸಿದ್ದೇನೆ. ಶಿವರಾತ್ರಿಯ ಉಪವಾಸ ನನ್ನಿಂದ ಸಾಧ್ಯವಾಗುವುದು ಅಮೂರ್ತ ಶಿವನೆಡೆಗಿನ ಭಕ್ತಿಗಿಂತ ಹೆಚ್ಚಾಗಿ  ಈ ಚಹಾಯಣದ ಅಮೂರ್ತ ಸಾಂಗತ್ಯದ ಆಧ್ಯಾತ್ಮದಿಂದ; ಆಸ್ವಾದದ ಎದೆಯಗಾನದ ಲಹರಿಯಿಂದ ; ಚಹಾಮಾಯಿಯನ್ನು ಅಪ್ಪಿಕೊಳ್ಳುವ  ಸುಖಲೋಲುಪತೆಯಲ್ಲಿ ಕಳೆದುಹೋಗುವುದರಿಂದ; ಚಹಾರಾಣಿಯ ಮಡಿಲಲ್ಲಿ ಮೈಮರೆಯುವ ಅಂತರ್ಧ್ಯಾನದಿಂದ. ಒಂದು ಬಾರಿ ಮಹತ್ವದ ಕಾರ್ಯಕ್ಕಾಗಿ ತಹಶೀಲ್ದಾರರ ಭೇಟಿಗೆ ಅಂದು ತುರ್ತಾಗಿ ಹೋಗಲೇಬೇಕಾಗಿ ಬಂದಾಗ ಮನೆಯಲ್ಲಿ ಉಪಹಾರದ ನಂತರ ಸಮಯವಿಲ್ಲದಿದ್ದರೂ ನಾನು ಹೋಗಿದ್ದು ಯಥಾಪ್ರಕಾರ ಚಹಾದ ಸುಖವನ್ನು ಹೊತ್ತುಕೊಂಡೇ.
ಶಾಲಾ ಕರ್ತವ್ಯ ಮುಗಿಸಿ ಸರ್ವ ಶಿಕ್ಷಕ ಬಳಗವೆಲ್ಲಾ ದಂಡಿಯಾಗಿ ನೆರೆಯುತ್ತಿದ್ದ ಬಸ್ ನಿಲ್ದಾಣದ ಹತ್ತಿರ ನಿಂತು ಬಳಗದವರನ್ನೆಲ್ಲಾ ಕರೆದು, ಒಲ್ಲೆ ಎಂದವರನ್ನೂ ಕೇಳದೇ ಕೈಹಿಡಿದು  ಹತ್ತಿರದ ಚಹಾಶಾಲೆಯಲ್ಲಿ ಚಹಾವನ್ನು ಸ್ವಾದಿಸಿ ಖುಷಿಪಟ್ಟಿದ್ದುಂಟು. ಮತ್ತೆ ಹೊರಬಂದ ನಂತರ ಯಾರಾದರೂ ಹೊಸಬರು ಬಂದರೆ ಅವರನ್ನೂ   ಕರೆದೊಯ್ದು ಚಹಾ ಹೀರಿಸಿ ನಾವೂ ಹೀರಿ ಅತಿಸುಖವನ್ನು ಪಡೆದದ್ದಿದೆ. ಹೀಗೆ ಸರಿಯಾಗಿ ಲೆಕ್ಕ ಹಾಕಿದರೆ ನಾವು ಆ ದಿನಗಳಲ್ಲಿ ಪ್ರತಿದಿನ ಆನಂದಿಸುತ್ತಿದ್ದ ನಮ್ಮ ಚಹಾಪ್ರಣಯ ಪ್ರಸಂಗದ ವಿಲಾಸವನ್ನು ಊಹಿಸಿಕೊಳ್ಳಬೇಕು. ಚಹಾ ಜಗತ್ತಿನ ಅದ್ವಿತೀಯ ರಸಾಯನಗಳಲ್ಲಿ ಒಂದು. ಆಧುನಿಕ ಜಗತ್ತಿನ ಬೆಡಗಿನ ಒಯ್ಯಾರಿಯ ಸೆಳೆತಕ್ಕೆ ಸಿಕ್ಕ  ಚಹಾರಾಣಿ  ಗ್ರೀನ್ ಟೀ  ಎಂಬ ಹೊಸ ದಿರಿಸು ತೊಟ್ಟು ಕುಣಿಯುತ್ತಿದ್ದಾಳೆ. ಶುಂಠಿಯ ಕಷಾಯ, ಹೊನ್ನಂಬರಿ ಹೂಗಳ ಕಷಾಯ, ತುಳಸಿ ಕಷಾಯ, ಬೆಲ್ಲದ ಕಷಾಯ, ದಂತಹ ತರಹೇವಾರಿ ರೂಪಗಳನ್ನು ಹೊಂದಿರುವ ಈಕೆಯ ಬಿನ್ನಾಣಕ್ಕೆ ವೈದ್ಯಕೀಯ ಮಹಾಪರಂಪರೆಯ ಸೊಗಡಿದೆ. ಮನೆಮದ್ದುಗಳಿಗೆಲ್ಲ ರಸರಾಣಿಯಾಗಿರುವ ಇವಳ ಸೌಗಂಧವೇ ಹಲವಾರು ಆಗಾಗ್ಗೆ ಬಂದುಹೋಗುವ  ಅತಿಥಿ ರೋಗಗಳನ್ನು ಗುಣಪಡಿಸಬಲ್ಲ ರಸೌಷಧಿ. ಶೀತವಾದಾಗ ನನ್ನವ್ವನ ಕೈಯ್ಯಲ್ಲಿ ಶುಂಠಿಯ ಕಷಾಯವಾಗುವ ಇವಳ ಘಾಟುತನ, ದೇಹ ಉಷ್ಣದಿಂದ ಬಳಲಿದಾಗ ಬೆಲ್ಲದ ಕಷಾಯವಾಗಿ ರೂಪು ಪಡೆಯುವ ಇವಳ ಮಾಧುರ್ಯ, ತಲೆನೋವೆನಿಸಿದಾಗ ಹೊನ್ನಂಬರಿ ಹೂಗಳ ಕಷಾಯದ ರೂಪದಲ್ಲಿ ನಾಲಿಗೆಯನ್ನಾವರಿಸುವ ಸವಿ, ಅಲರ್ಜಿಯಾದಾಗ ಮಸಾಲೆಯ ಕಷಾಯವಾಗಿ ಬರುವ ಇವಳ ಮಸಾಲೆಯ ಕಂಪುಗಳೀಗಲೂ ನನ್ನ ನಾಲಿಗೆಯ ರಸಗ್ರಹಣಿಗಳ ತುದಿಯ ಮೇಲೆ ಕುಣಿಯುತ್ತಿವೆ.  ಮನದ ಮೂಲೆಯಲ್ಲಿ ಇವುಗಳ ಆಸ್ವಾದನೆಯ ಸುವಾಸನೆ ಹಾಗೂ ರಸರುಚಿ ಸದಾ ಹಚ್ಚ ಹಸಿರಾಗಿ ಕಾಡುತ್ತಲೇ ಇರುತ್ತವೆ.  ಚಹಾ ಸಿಗದ ನಾಡಿಗೊಮ್ಮೆ ಪ್ರವಾಸ ಹೋಗಿದ್ದೆ. ಕೆಲವು ದೂರ ನಡೆದು ಎದುರಾದ ಗೂಡಂಗಡಿಗೆ ಗೆಳೆಯರೊಂದಿಗೆ ತೆರಳಿ " ಚಹಾ ಕೊಡಿ "  ಎಂದರೆ " ಚಹಾ ಮಾಡಲ್ಲ ಸರ್ " ಎಂದುಬಿಡಬೇಕೆ?  ಸುಮಾರು ಊರುಬಿಟ್ಟು ೩೦೦ ಕಿಲೋಮೀಟರ್ ದೂರದೂರು ತಲುಪಿದ ಪ್ರಯಾಣದ ಆಯಾಸವನ್ನು ಕಳೆದುಕೊಳ್ಳಬೇಕೆಂದರೆ ಚಹಾರಾಣಿಯ ಸುಳಿವೇ ನಮಗೆ ದಕ್ಕಲಿಲ್ಲ ಸಪ್ಪೆ ಮೋರೆ ಹಾಕಿಕೊಂಡು ಮತ್ತೆ ಮುಂದೆ ನಡೆದೆವು. ಆ ಊರು ಬಿಟ್ಟು ಬೇರೊಂದು ಊರಿಗೆ ಬಂದಾಗ ಓಯಸಿಸ್ ನಂತೆ ಎದುರಾದ  ಚಹಾಕನ್ನಿಕೆಯ ಆಲಿಂಗನದಿಂದ ಮುದ ಪಡೆದು ಚೈತನ್ಯಶೀಲರಾದೆವು. ನಾನು ಡಿಇಡಿ ವ್ಯಾಸಂಗದ ನಿಮಿತ್ತ ಬೆಂಗಳೂರಿನ ವಿಜಯನಗರದ ವಸತಿನಿಲಯವೊಂದರಲ್ಲಿ ಎರಡು ವರ್ಷಗಳ ಆಶ್ರಯ ಪಡೆದಿದ್ದೆ. ನಿಲಯದಲ್ಲಿ ಚಹಾಸಂಸ್ಕೃತಿಯೇ ಇಲ್ಲದ್ದರಿಂದ  ಎಲ್ಲ ವಿದ್ಯಾರ್ಥಿಗಳು ಮುಗ್ಧತೆಯಿಂದ ಒಗ್ಗಿಕೊಂಡು ನಿರಾಳವಾಗಿದ್ದರೆ, ನಾನು ಮಾತ್ರ ಒಳಗೊಳಗೆ ಚಡಪಡಿಸುತ್ತಿದ್ದೆ. ಉಪಹಾರ ಭೋಜನಗಳಿಲ್ಲದ ಹಾಸ್ಟೆಲ್ ನಲ್ಲಿ ಬೇಕಾದರೆ ಇದ್ದು ಜಯಿಸಬಲ್ಲೆ  ಆದರೆ ಚಹಾ ಕೊಡದ ವಸತಿನಿಲಯದಲ್ಲಿ ಹೇಗಿರುವುದು?  ಎಂದುಕೊಂಡು ಬಹುಕಾಲ ಕಸಿವಿಸಿಪಟ್ಟಿದ್ದೇನೆ. ವಿದ್ಯಾಭ್ಯಾಸದ ಕನಸನ್ನು ನನಸು ಮಾಡಿಕೊಳ್ಳಲಿರುವ ಏಕೈಕ ಆಸರೆಯನ್ನು ಚಹಾಗೋಸ್ಕರ ತಿರಸ್ಕರಿಸುವ ಶಕ್ತಿ ಇಲ್ಲದ್ದರಿಂದ ಅನಿವಾರ್ಯವಾಗಿ ವಸತಿನಿಲಯದ ವಾತಾವರಣಕ್ಕೆ ಹೊಂದಿಕೊಂಡು ಪರ್ಯಾಯ ದಾರಿಯೊಂದನ್ನು ಕಂಡುಕೊಂಡೆ. ಪ್ರತಿದಿನ ಬೆಳಿಗ್ಗೆ   ಹಾಗೂ ಸಂಜೆ ಚಹಾರಾಣಿಯ ಭೇಟಿಗಾಗಿ ಒಂದು ಪ್ರಶಸ್ತವಾದ  ಭಟ್ಟರ ವಿಶೇಷ ಚಹಾಶಾಲೆಯೊಂದನ್ನು ( ಕೆಫೆ) ಗುರ್ತಿಸಿಕೊಂಡೆ. ಪ್ರತಿದಿನ ಕಾಲೇಜು ಮುಗಿದ ನಂತರ ಮುಸ್ಸಂಜೆಯ ಮುಖಮಜ್ಜನದಲ್ಲಿ ಮಿಂದು ನವೋಲ್ಲಾಸದ ಮನಸು ಹೊತ್ತು  ವಾಯುವಿಹಾರಕ್ಜೆ ಹೊರಟೆನೆಂದರೆ ಅದು ಕೊನೆಯಾಗುವುದು ಚಹಾಮಣಿಯ ಲೀಲಾವಿಲಾಸದ ಸಮಾಗಮದೊಂದಿಗೆ ಎಂಬುದು ನಿಶ್ಚಿತವಾಯಿತು. ಹೀಗೆ ಕೆಲವು ದಿನ ಕಳೆದವು. ಪ್ರಾರಂಭದಲ್ಲಿ ಚಹಾಶಾಲೆಯ ಚಹಾ ಮೊದಲಿಗೆ ಸಪ್ಪೆಯೆನಿಸುತ್ತಿತ್ತು. ದಿನಗಳೆದ ನಂತರ ಚಹಾಶಾಲೆಯ ಮಾಣಿಯೊಂದಿಗೆ ಸ್ನೇಹ ಮಧುರವಾಗುತ್ತಾ ಹೋದಂತೆ  ನಮ್ಮ ಚಹಾಷೋಡಶಿಯು ಸಿಹಿಯಾಗುತ್ತಲೇ ಹೋದಳು. ಮಾಣಿಯೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಾ ಪುಸಲಾಯಿಸಿ ಬೇಕಾದಷ್ಟು ಸಕ್ಕರೆಯನ್ನು ಬೆರೆಸುವಂತೆ ಮಾಡಿ ಚಹಾರಾಣಿಯ ನೈಜ  ಸ್ವಾದವನ್ನು ಅನುಭವಿಸತೊಡಗಿದೆ.
ಚಹಾರಾಣಿಯ ದರ್ಶನ ಅಪರೂಪವೆಂಬಂತಿದ್ದ ಕಾಫಿಜಗತ್ತಿನಲ್ಲಿ ಚಹಾಜೇನು ಸವಿದ ಆನಂದ ಪಡೆದು ತೇಲಾಡತೊಡಗಿದೆ.  ಹೀಗೊಂದು ದಿನ ಸಂಜೆ ಯಥಾಪ್ರಕಾರ ಚಹಾಶಾಲೆಯತ್ತ ಹೊರಟಾಗ ಜೇಬಿನಲ್ಲಿ ಬಿಡಿಪೈಸೆಯೂ ಇರಲಿಲ್ಲ. ಗೋಧೂಳಿಯ ಮುಹೂರ್ತ ಮೀರುವ ಮಹತ್ವದ ಘಳಿಗೆಯಲ್ಲಿ ಚಹಾರಾಣಿ ನನಗಾಗಿ ಕಾಯುತ್ತಿದ್ದಾಳೆ. ಮನಸು ಅವಳದೇ ನೆನಪಿನಲ್ಲಿ ಪಿಸುಗುಟ್ಟಿ ತೊಳಲಾಡುತ್ತಿದೆ. ಮನಸ್ಸು ಆಕೆಯನ್ನು ಬಿಟ್ಟು ಕದಲೊಲ್ಲದು. ಅತ್ತ ಊರಿನಿಂದ ಬರಬೇಕಾಗಿದ್ದ ಅವ್ವ ಕಳಿಸಿದ ದುಡ್ಡು ಇನ್ನೂ ತಲುಪಿರಲಿಲ್ಲ. ಏನು ಮಾಡುವುದು ಎಂದು ತೋಚದಾದಾಗ ಗೆಳೆಯನೊಬ್ಬನ ಹತ್ತಿರ 'ಸಾಲ ಮಾಡಿಯಾದರೂ ತುಪ್ಪ ತಿನ್ನು' ಎಂಬಂತೆ ಸಾಲ ಪಡೆದಾದರೂ ಅವಳ ಸಂಗಡ ಈ ಸಂಜೆ ಮಾತಿಗಿಳಿಯಲೇಬೇಕು. ನನ್ನೆದೆಯೊಳಗೆ ಅವಳ ಮಾತಿನ ಸವಿಯನ್ನಿಳಿಸಿಕೊಂಡು  ಕಾಪಿಟ್ಟುಕೊಳ್ಳಲೇಬೇಕಾಗಿತ್ತು. ಹೀಗೆ ಅವಳತ್ತ ವಿಭವದಿಂದ  ಜಾರುವ ಮನದ ನೂರಾರು ಮಾತುಗಳನ್ನು ಅಂತರಾಳದಲ್ಲಿ ಕಟ್ಟಿಕೊಂಡೇ  ನೂರು ರೂಪಾಯಿ ಸಾಲ ಪಡೆದು ನೇರವಾಗಿ ಅವಳಿರುವಲ್ಲಿಗೆ  ಹೋಗಿ ಅವಳೊಂದಿಗೆ ಸಲ್ಲಾಪಕ್ಕಿಳಿದೆ. ಗುಟುಕು ಗುಟುಕಾಗಿ ಅವಳೊಂದಿಗೆ ಹಂಚಿಕೊಂಡ ರಸನಿಮಿಷಗಳನ್ನು  ಅಂತರಂಗದಲ್ಲಿಳಿಸಿಕೊಂಡು ಹರ್ಷಗೊಂಡೆ. ಇಂತಹ ಸವಿಸಮಯವನ್ನು ಕದ್ದೊಯ್ದು ಕಳೆದುಕೊಳ್ಳುವಂತೆ ಮಾಡುತ್ತಿದ್ದ ಆರ್ಥಿಕ  ದುರಾದೃಷ್ಟವನ್ನು ನೆನೆದು  ಶಪಿಸಿಕೊಂಡೆ. ಹೀಗೆ ಸಾಗಿತ್ತು ಚಹಾಸಖಿಯೊಂದಿಗಿನ ನನ್ನ ಪ್ರಣಯಗೀತೆ. ಮತ್ತೊಮ್ಮೆ  ಕೈಯ್ಯಲ್ಲಿ ಹಣವಿಲ್ಲದ ಬಡಪಾಯಿ ಪರಿಸ್ಥಿತಿಯೊದಗಿ ಬಂದಾಗ ನೇರವಾಗಿ ಚಹಾಶಾಲೆಯ ಮಾಲೀಕ ಭಟ್ಟರ ಹತ್ತಿರವೇ ನನ್ನ ಹೆಸರಿನ ಮೌಖಿಕ ಖಾತೆಯೊಂದನ್ನು ತೆರೆದು ಸಾಲ ಕೇಳಿದ್ದೆ. ಅವರ ದೃಷ್ಟಿಯಲ್ಲಿ ಯಕಃಶ್ಚಿತ ಚಹಾದ ಸಾಲವಾಗಿದ್ದರೆ, ನನಗದು ಚಹಾ ರಾಣಿಯೊಂದಿಗೆ ಸಮಯ ಕಳೆಯಲು  ಅಡೆತಡೆಯಿಲ್ಲದೆ ಕನಿಷ್ಠ ಹಣದ ಭಯವಿಲ್ಲದೆಯೂ ಚಹಾಶಾಲೆಯನ್ನು ಮುನ್ನುಗ್ಗಲು ಅಧಿಕೃತ ಲೈಸೆನ್ಸ್ ದೊರೆತಂತಾಗಿತ್ತು. ಯಾರ ಅಪ್ಪಣೆಗೂ ಕಾಯದೇ ಸಂಜೆಯನ್ನು ಸಾರ್ಥಕಗೊಳಿಸಿಕೊಳ್ಳುವ ನನ್ನ ಪ್ರಯತ್ನಕ್ಕೆ ತಾತ್ಕಾಲಿಕ ಯಶಸ್ಸು ದೊರೆತಿತ್ತು. ಕೊನೆ ಕೊನೆಗೆ ಚಹಾರಾಣಿಯೊಂದಿಗಿನ ಬಿಡುವಿಲ್ಲದ ಸಹವಾಸ ಕಂಡ ಭಟ್ಟರು ಚಹಾಶಾಲೆಯ ಖಾಯಂ ಗಿರಾಕಿಯೆಂದುಕೊಂಡು ಸಾಲವನ್ನು ಬರೆದುಕೊಳ್ಳಹತ್ತಿದರು. ಚಹಾಕಿಶೋರಿಯೊಂದಿಗಿನ ನಮ್ಮ ಅವಿನಾಭಾವ ಸಂಬಂಧವನ್ನು ಕಂಡ ಮಾಲೀಕ ನಮಗೆ ಆರ್ಥಿಕ ಸಂಕಷ್ಟ ಎದುರಾದಾಗ ಹಣದ ಸಾಲವನ್ನೂ ನೀಡಿ ಕೈಹಿಡಿದು ಮುನ್ನಡೆಸಿದನೆಂದರೆ, ಚಹಾದ ಸಂಗ ಹೆಜ್ಜೇನು ಸವಿದಂತಾಗಿತ್ತು ನನಗೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಾತ್ರ ಮಲ್ಲಿಗೆಯಿರಲೇಬೇಕೆಂಬಂತಾಗಿತ್ತು ಚಹಾದೆಡೆಗಿನ ನನ್ನ ಪ್ರೀತಿ. ಹೀಗೆ ಎರಡು ವರ್ಷದ ಬೆಂಗಳೂರಿನ ಚಹಾಬೆಡಗಿಯ ಸಾಂಗತ್ಯ ನನಗೆ ಚಹಾಶಾಲೆಯ  ಹೊಸ ಆಪ್ತ ಗೆಳೆಯರನ್ನು ಪರಿಚಯಿಸಿತ್ತು. ಮನೆಯಲ್ಲಿನ ಹಿಂಡು ಮಂದಿಗೆ ಮಾಡುವ ಚಹಾ ನನಗೆ ಅಷ್ಟಾಗಿ ಸೆಳೆಯುತ್ತಿರಲಿಲ್ಲ. ಪರಿಹಾರವಾಗಿ ಮನೆಮಂದಿಗೆಲ್ಲ ಚಹಾ ತಯಾರಿಸುವ ಪಾಠವನ್ನು ಆಗಾಗ ಪ್ರಾತ್ಯಕ್ಷಿಕೆಯ ಮೂಲಕ   ಹೇಳಿಕೊಟ್ಟಿದ್ದಿದೆ. ಹದಬೆರೆತ  ರಸಾಯನವೇ ನನಗಿಷ್ಟವೆಂದು ಅವ್ವ ನನಗಾಗಿ ಮಾಡುವ ಚಹಾ ಗಾಗಿ ಕಾದು ಕುಳಿತಿರುತ್ತಿದ್ದೆ. ಅಂದು ಚಹಾಗೆಳತಿಯ ದರ್ಶನವಾಗದಿದ್ದಾಗ ಚಡಪಡಿಸಿ ಅಡುಗೆಮನೆಗೆ ಹೋಗಿ  ಬೆಳದಿಂಗಳು ಬಣ್ಣದ ಹಾಲಿನಲ್ಲಿ ಕೆಂಬಣ್ಣದ ಚಹಾದೆಲೆಗಳನ್ನುದುರಿಸಿ ಅಗ್ನಿಹಂಸದ ತೂಲಿಕಾತಲ್ಪದಲಿಟ್ಟು ಚೆನ್ನಾಗಿ ಕುದಿಸುತ್ತಾ ತಪದಂತೆ ಕಾದಿದ್ದೇನೆ.ನನ್ನ ಮೇಲಿನ  ಪ್ರೀತಿಯುಕ್ಕಿ ಪಾತ್ರೆಯೊಳಗಿಂದ ಮೇಲೆ ಹಸನ್ಮುಖಿಯಾಗಿ ಬಂದ ನೊರೆಯ ಮುತ್ತುಗಳನ್ನು   ಕಂಡು ಹರ್ಷಗೊಂಡಿದ್ದೇನೆ. ಕೊನೆಗೆ ಹದವಾದ ಸಕ್ಕರೆಯನ್ನು ಬೆರೆಸಿ ಘಮಘಮಿಸುವ ಪರಿಮಳದಲ್ಲಿ ಮೈಮರೆತು ಸಮಾಧಿಗೇರಿದ್ದೇನೆ. ಶೋಧಿಸುವಾಗ ಹೊರಟ ಸುಮಧುರ ಸುವಾಸನೆಯನ್ನು ಹೀರಿ ಸಂಭ್ರಮಿಸಿದ್ದೇನೆ. ಶ್ವೇತಸುಂದರಿಯಂತಿರುವ ಮಗ್ಗಿನೊಳಗೆ ಒಯ್ಯಾರದಿಂದ ನರ್ತಿಸಿತ್ತಿದ್ದ ಹಾಲುಗೆನ್ನೆಯ ಚಹಾಚೆಲುವೆಯನ್ನು ಕಂಡು ಹಿಗ್ಗಿದ್ದೇನೆ.
ಚಹಾ ಎಂಬುದು ನನ್ನ ಪಾಲಿಗೆ ಕೇವಲ ಕರ್ಮೋಪಚಾರಕ್ಕಾಗಿ ಸೇವಿಸುವ ಭೌತಿಕ ದ್ರಾವಣವಲ್ಲ. ಯಾಂತ್ರಿಕವಾಗಿ ಕ್ಷಣಮಾತ್ರ ಭುಜಿಸಿ ಮತ್ತೆ ಅರೆಗಳಿಗೆಯಲ್ಲಿ ಮರೆತುಬಿಡುವ  ಹಾಲು ಸಕ್ಕರೆಗಳ ಮಿಶ್ರಣ ಮಾತ್ರದ ರಸಾಯನವಲ್ಲ. ಕೇವಲ ಆಯಾಸ ಕಳೆಯಲಿಕ್ಕಾಗಿ ಇರುವ ಉಪಚಾರದ ಪಾನೀಯವೂ ಅಲ್ಲ .ಚಹಾ ಎಂದರೆ ನನ್ನೊಳಗೆ ಸದಾ ರಿಂಗಣಿಸುವ ಪ್ರಣಯಗೀತೆ; ಹೃದಯದೊಳಗೆ ಜುಳು ಜುಳು ಎಂದು ಹರಿಯುವ ಝರಿಯ  ನಿನಾದ; ಮನದೊಳಗೆ ಕೋಗಿಲೆಯ ಧ್ವನಿಯಂತೆ ಇಳಿಯುವ ರಸಗಾನ; ಮನಕಡಲಿನ ಮೇಲೆ ಕುಣಿಯುವ ಅಲೆಗಳ ಬಣ್ಣಿಸಲಾಗದ ಮೌನರಾಗದ ಮೊರೆತ; ಗುಟುಕು ಗುಟುಕಾಗಿ  ನಾಲಿಗೆ ಚಪ್ಪರಿಸಿ ಹೀರಿ ಅದರಲ್ಲಿಯೇ ಲೀನವಾಗುವಂತೆ ಸೆಳೆಯುವ ಅಮೃತಧಾರೆಯ ಜೇನಹನಿ; ನೆನಪು ಮಾತ್ರದಿಂದಲೇ ಚಿಮ್ಮಿ ಉತ್ಸಾಹ ಉಕ್ಕಿಸುವ ಚಿಲುಮೆಯೊರತೆ. ಚಹಾ ಎಂದರೆ ಭಾವದೊಳಗಿನ ಬಂಧುರ ಒಲವಿನೊಳಗಿನ ಮಂದಾರ. ಶ್ರಾವಣದ ಇಳೆ ಮಳೆಗಳೊಂದಿಗಿನ ಅನುಸಂಧಾನ ಬೇಂದ್ರೆಯವರಂತಹ ಆರಾಧಕರಲ್ಲಿ ಕಾವ್ಯದ ಮೂಲಕ ಸಾಧ್ಯವಾಗಿದೆ. ಕವಿಸೂರಿಗಳದು ಪ್ರಕೃತಿ ಆರಾಧನೆಯಾದರೆ ನನ್ನದು ಚಹಾರಾಧನೆ. ಆಷಾಢದ ಜಿಟಿ ಜಿಟಿ ಜಡಿ ಮಳೆಯಲ್ಲಿ  ಚಹಾಶಾಲೆಯ ಮುಂದೆ ನಿಂತು ಬಿಸಿ ಬಿಸಿಯಾದ ಚಹಾಮಾಯಿಯ ಹನಿ ಹನಿಯ ಗುಟುಕುಗಳ ಮಾಯೆಗೆ ಕರಗುವುದೆಂದರೆ  ಪ್ರಕೃತಿಯಲ್ಲಿನ ಪಾರಮಾರ್ಥಕ್ಕೆ ಪಯಣ ಹೊರಟಂತೆ. ಚಹಾರಾಣಿಯೊಂದಿಗಿನ ಎನ್ನ ಒಡನಾಟ ಇಂದು ನಿನ್ನೆಯದಲ್ಲ, ನನ್ನೆದೆಯೊಳಗೆ ಇಷ್ಟೊಂದು ಆಳವಾಗಿ ಮೈಚಾಚಿಕೊಂಡು ಹರಡಿ ಮೈಮನಗಳನ್ನು ತುಂಬಿಕೊಂಡಿರುವ ಇದರ ಭಾವಗೀತೆಗಳ ಆಲಾಪವನ್ನು ಬಾಲ್ಯದಿಂದಲೂ ಆಲಿಸಿಕೊಂಡು ಬಂದಿದ್ದೇನೆ. ಇಲ್ಲಿಯವರೆಗೂ ಆಕೆ (ಚಹಾಮಾಯಿ) ಕಟ್ಟಿಕೊಟ್ಟಿರುವ ಸವಿನೆನಪುಗಳನ್ನು ರೆಕ್ಕೆ ಮೂಡುವವರೆಗೂ ನನ್ನದೆಯ ಗೂಡಿನಲ್ಲಿ ಮರಿಹಕ್ಕಿಗಳಂತೆ ಜತನದಿಂದ ಕಾಪಿಟ್ಟುಕೊಂಡು ಬಂದಿದ್ದೇನೆ. ಭಾವಗಳಿಲ್ಲದೇ ಬತ್ತಿ ಕೊರಡಾಗುವ ಘಳಿಗೆ ಎದುರಾದಾಗ, ಈ ನೆನಪುಗಳನ್ನು ಹೆಕ್ಕಿ ತೆಗೆದು ಆನಂದಿಸಿ, ಮತ್ತೆ ಮತ್ತೆ ಚಹಾ ರಾಣಿಯ ಸಾಂಗತ್ಯವನ್ನು   ಸವಿದಿದ್ದೇನೆ. ನನ್ನಲ್ಲಿ ಚಹಾ ಹುಟ್ಟಿಸಿದ ಭಾವಯಾಣ ಅನುಪಮವಾದದ್ದು, ಅನೂಹ್ಯವಾದದ್ದು. ಆರೋಗ್ಯದ ಲಯ ತಪ್ಪಿದಾಗ ಚಹಾ ತ್ಯಜಿಸಬೇಕೆಂದು ಹೇಳಿದ ವೈದ್ಯರನ್ನು 
" ನಿಮಗೇನು ಗೊತ್ತು ಚಹಾದ ಗಮ್ಮತ್ತು ಕುಡಿದರಿಲ್ಲ ಜೀವಕೇನೂ ಆಪತ್ತುಬಿಟ್ಟರೆ ನನಗೆ ಅದೇ ವಿಪತ್ತುಸವಿಯಲು ನನಗಿಲ್ಲ ಹೊತ್ತು ಗೊತ್ತು ಎತ್ತಣ ಮಾಮರ ಎತ್ತಣ ಕೋಗಿಲೆ ?" ಎಂದು ಹೀಗಳೆದಿದ್ದೇನೆ. ಬಹುಶಃ ಚಹಾ ಸೇವನೆಯಲ್ಲಿ ತಪ್ಪಿದ ಲಯವೇ ಆರೋಗ್ಯವನ್ನು ಹದಗೆಡಿಸಿರಬೇಕು ಎಂಬ ಬಲವಾದ ನಂಬಿಕೆ ನನ್ನದು!"ನೀನೆಂದರೆ ಮಧುರಗಾನ |ಸವಿಜೇನಿನ ರಸಪಾನ| ಹಿಗ್ಗುತಿರುವೆ ಮನದುಂಬಿ |ಹೊರಟಿರುವೆ ಭಾವಯಾಣ | ಹಾಲುಗೆನ್ನೆಯ ಚೆಲುವೆ |ಕೆಂಬಣ್ಣದ ಮೈಮನವೆ | ಇಳಿದು ಬಾ ಮಹಾರಾಣಿ |ದೇವಲೋಕದ ಸುರಪಾಣಿ | ಮಹಾದಿವ್ಯದ ಸಂಗತ| ದಿವದೆಡೆಗಿನ ನವನೀತ | ನಿನ್ನೊಲುಮೆಯ ಕೈಸೆರೆ | ನನ್ನನಾಳುವ ಸುಮಧುರೆ | ಮುತ್ತು ರತ್ನ ಹವಳ ನೊರೆ| ಕೇಳುತಿರು ನನ್ನ ಮೊರೆ |ಮಹಾಸಂಗಮ ಆಲಿಂಗನ|ಎದೆಯುಕ್ಕುವ ರಸಚೇತನ| ಮಾಧುರ್ಯದ ರಸಪಾಕ |ಚಹಾಶಾಲೆಯೇ ಸವಿನಾಕ |ಎಂದು ಚಹಾಷೋಡಶಿಯೊಂದಿಗಿನ ಪಿಸುಮಾತು ನನ್ನಲ್ಲಿ ಹರ್ಷೋಲ್ಲಾಸದ ಹೊಳೆಯನ್ನು ಹರಿಸುತ್ತದೆ. ಘಳಿಗೆಗೊಮ್ಮೆಯ ಆಕೆಯ ಭೇಟಿ  ಎನ್ನ  ಹೃದಯವನ್ನು ರಸಾನಂದದ ಕಡಲಾಗಿ ಪರಿವರ್ತಿಸುತ್ತದೆ.
ಚಹಾರಾಣಿಯನ್ನು ನೆನೆದಾಗಲೆಲ್ಲಾ -
"ಹರಿಯಬೇಕು ಆಕೆ ಕರೆದಲ್ಲಿ| ಹೊರಡಬೇಕು ಆಕೆ ಬಯಸಿದಲ್ಲಿ| ನಡೆಯಬೇಕು ಜೊತೆಯಾಗಿ ಕೈಹಿಡಿದು | ಮಾತಾಗಿ ಸಲ್ಲಾಪದ ಸವಿಜೇನು |ಸವಿಯಬೇಕು ಎದೆತುಂಬಿ ಗುಟುಕು ರಸ| ತಣಿಯಬೇಕು ಹೀರಿ ಮತ್ತೆ| ನೆನೆಯಬೇಕು "ಎಂದು ಪದೇ ಪದೇ ಆಕೆಯ ಸುತ್ತ ಸುಳಿದು ಸೇವಿಸಲೇಬೇಕೆನ್ನಿಸುತ್ತದೆ. ನನಗೆ ಚಹಾಸೇವನೆ ಎಂದರೆ ನಿತ್ಯ ವೈಭವದ ಮೆರವಣಿಗೆಯ ಮಹಾನವಮಿ ಹಬ್ಬವಾಚರಿಸಿದಂತೆ. ಬಿದಿಗೆಯ ಚಂದ್ರನ ಬೆಳ್ಳಿಯ ಬೆಳಕು ಅಂತರಾಳಕ್ಕಿಳಿದು ಹೊಳೆದು ಬೆಳಗಿದಂತೆ. ಚೈತನ್ಯದ ಕಡಲುಕ್ಕಿ  ಅಲೆ ಅಲೆಯಾಗಿ ಹರಿದು ನಾದಗೈದು ವಿಜೃಂಭಿಸಿದಂತೆ. "ಮುಗ್ಧ ಮಗುವಿನಂತೆ ಚಹಾವೇಣಿಯ ಮೊಗ್ಗು  ಹಿಡಿದು ಮೇಲೆತ್ತಿ ಬಾಯಿಚಪ್ಪರಿಸಿ ನಾಲಿಗೆ ಸವರಿದಾಗಲೇ ರಸರುಚಿಯ ದರ್ಶನಾನುಭವ ದಕ್ಕುವುದು. ರಸಾಂಕುರಗಳಿಗೆ ನೈಜ ರಸಾನುಭವದ ಸಾಕ್ಷಾತ್ಕಾರವಾಗುವುದು. ಭಾವಗಳ ಮುಗ್ಧತೆ ಹೇಗೆ ಕಾವ್ಯವೊಂದರ ಹುಟ್ಟಿಗೆ ಕಾರಣವಾಗಬಲ್ಲದೋ ಹಾಗೆ ಪೂರ್ವಾಗ್ರಹಗಳಿಲ್ಲದೇ,  ಮುಗ್ಧತೆಯಿಂದ ಹೀರುವ ಚಹಾದ  ಸ್ವಾದಸುಖವೂ ಕಾವ್ಯಾನಂದವನ್ನು ಹುಟ್ಟಿಸಬಲ್ಲದು. ಕಾವ್ಯ ಮತ್ತು ಚಹಾಗಳ ಅದೈತ ಸಂಗಮಸುಖವನ್ನು ಶ್ರಧ್ಧೆಯಿಂದ ಅನುಭವಿಸಿದ್ದೇನೆ ನಾನು. ವೈದೇಹಿಯವರ" ತಿಳಿಸಾರು ಎಂದರೆ ಏನೆಂದುಕೊಂಡಿರಿ? | ಅದಕ್ಕೂ ಬೇಕು ಒಳಗೊಂದು |ಜಲತತ್ವ-ಗಂಧತತ್ವ ಕುದಿದು| ಹದಗೊಂಡ ಸಾರತತ್ವ "ಎಂಬ  ಕಾವ್ಯಾಲಾಪದಂತೆ ಸಕ್ಕರೆ ಹಾಲು, ಚಹಾದೆಲೆಗಳು ಹದವಾಗಿ ಬೆರೆಯಲು ಗಂಧತತ್ವ, ಜಲತತ್ವ ಹಾಗೂ ಸಾರತತ್ವಗಳ ತಿಳುವಳಿಕೆ ಅತ್ಯಗತ್ಯ. ಈ  ತ್ರಿವಿಧ ಸಂಗತಿಗಳ ಹದಭರಿತ ಸಮರಸದ ಸಂಗಮವೇ ಚಹಾರಸಾಯನದ ತಿರುಳು. ನನ್ನೂರು ಗುಳೇದಗುಡ್ಡ  ನೇಕಾರಿಕೆಯ ನೂಲಿನ ಬಳ್ಳಿಯನ್ನೆ  ತಮ್ಮ ಬದುಕಿನ ಸುತ್ತ ಹಬ್ಬಿಸಿಕೊಂಡ ಕರಕುಶಲಿಗರ ನಾಡು. ರಂಗಭೂಮಿ, ಬಯಲಾಟ, ಸಂಗೀತ, ಚಿತ್ರಕಲೆ ಗಳೊಂದಿಗೆ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯ ಚಾಲುಕ್ಯರಾಳಿದ ಬೀಡು.  ಇಂತಹ ಹೊನ್ನಾಡಿನಲ್ಲಿ  ಕುಶಲೋದ್ಯಮದ ಜೊತೆಜೊತೆಗೆ ಚಹಾಸಂಸ್ಕೃತಿಯೊಂದು ಮೈದಾಳಿರುವುದು ಇಲ್ಲಿಯ ವಿಶೇಷ. ಪ್ರತಿ ಒಂದು ಮೀಟರ್ ನೇಯ್ಗೆಗೊಂದು ಕಪ್ ಚಹಾ ಈ ಕರ ಕುಶಲಿಗರ ದೇಹದ ದೇಗುಲಕ್ಕರ್ಪಣೆಯಾಗಲೇಬೇಕು. ಒಂದು ಹೊತ್ತಿನ ಉಪಹಾರ, ಭೋಜನವಿರದಿದ್ದರೂ ನಡೆದೀತು ಆದರೆ ಚಹಾ ಇರದ ಕ್ಷಣಗಳನ್ನು ಈ ಕುಶಲಿಗಳು ಕಳೆಯಲಸಾಧ್ಯವೆನ್ನುವಷ್ಟರ ಮಟ್ಟಿಗೆ ಇಲ್ಲಿಯ ಬದುಕು ಚಹಾಗೊಡ್ಡಿಕೊಂಡಿದೆ. ಪೂರ್ವಾಶ್ರಮದ ನೇಯ್ಗೆಯ ಪ್ರಭಾವವೋ ಏನೋ ಘಳಿಗೆಗೊಮ್ಮೆ  ನನ್ನವ್ವನಿಗೆ ಹಾಗೂ ನನಗೆ ಚಹಾ ಅಮೃತ ಚೈತನ್ಯವನ್ನು ನೀಡಲೇಬೇಕು. ನನ್ನ ಮನೆಯ ಪಕ್ಕದ ಚಹಾಶಾಲೆಯಲ್ಲಿ ಚಹಾದ ದರ ಈಗಲೂ ೨ ರೂಪಾಯಿಗಳೆಂದರೆ ಚಹಾ ಎಷ್ಟೊಂದು ಅಗ್ಗದ ಸಂಗತಿಯಾಗಿ ನನ್ನೂರನ್ನು ಆವರಿಸಿಕೊಂಡಿದೆ  ಎಂಬುದನ್ನು ಅರ್ಥೈಸಿಕೊಳ್ಳಬಹುದು. ಡಾ.ರಾಜಶೇಖರ ಮಠಪತಿ (ರಾಗಂ) ರವರು, ಹದಿನಾರು ವರ್ಷಗಳ ನಂತರವೂ  ಒಂದೇ ಒಂದು ಪೈಸೆಯಷ್ಟು ಬೆಲೆಯನ್ನೂ ಹೆಚ್ಚಿಸಿಕೊಳ್ಳದ ರೂ. ೨ ರ ಒಂದು ಕಪ್  ಚಹಾ ಹಾಗೂ 'ಚಟಕ್ ಪಟಕ್ ' ಎಂದು ಲಯಬದ್ಧವಾಗಿ ನುಡಿಯುತ್ತಿರುವ ಅದೇ ಮಗ್ಗಗಳ ನಿನಾದ ಬದಲಾಗದ್ದನ್ನು ಗಮನಿಸುತ್ತಾ  "ನಾ ಕಂಡಂತೆ ಒಂದೂವರೆ ದಶಕದ ನಂತರವೂ ಕೇವಲ ಚಿಕ್ಕ ಪುಟ್ಟ ಸ್ಥಿತ್ಯಂತರಗಳನ್ನು ಹೊರತುಪಡಿಸಿ ಮೂಲಸ್ವರೂಪವನ್ನು ಬದಲಿಸಿಕೊಳ್ಳದೇ ತನ್ನ ಪರಂಪರೆ ಹಾಗೂ ಸತ್ವವನ್ನು ಉಳಿಸಿಕೊಂಡ ಕರ್ನಾಟಕದ ವಿರಳಾತಿವಿರಳ ಪುರಗಳಲ್ಲಿ ಒಂದು ಗುಳೇದಗುಡ್ಡ " ಎಂದು  ಬಣ್ಣಿಸಲ್ಪಟ್ಟ ಊರಿನಲ್ಲಿ ಇಂದಿಗೂ ಚಹಾದೊಂದಿಗಿನ ಸಂಗತಿಗಳಾವವೂ ಆಧುನಿಕ ಯುಗದ ಯಾವ ಸೆಳೆತಗಳಿಗೂ ಒಳಗಾಗಿಲ್ಲ. ನೇಕಾರಿಕೆ ಹಾಗೂ ಉಪಕಸುಬುಗಳ ಕುಶಲವೃತ್ತಿಗಳ ಜೊತೆ ಜೊತೆಗೆ ಬೆಳೆದು ಬಂದಿರುವ ಈ ಚಹಾ ಸಂಸ್ಕೃತಿ ಆತಿಥ್ಯದ ಹೊಸ ಪರಿಭಾಷೆಯೊಂದನ್ನು ಕಟ್ಟಿ  ಕೊಟ್ಟಿದೆ. ಅಬಾಲವೃದ್ಧರಾದಿಯಾಗಿ  ಮನೆಗೆ ಬರುವ ಸಕಲ ಅತಿಥಿಗಳು ಕನಿಷ್ಠ ಚಹಾತಿಥ್ಯವನ್ನಾದರೂ ಸ್ವೀಕರಿಸಲೇಬೇಕು. ಇದು ಅಘೋಷಿತ ಅತಿಥಿ ಸತ್ಕಾರದ ನಿಯಮ. ಯಾರಾದರೂ ಅತಿಥಿಗಳು ಮನೆಗೆ ಬಂದರೆ ಸಾಕು ಚಹಾದ ಪಾತ್ರೆ ಅಗ್ನಿಹಂಸವನ್ನೇರಲೇಬೇಕು.  ಚಹಾ ನನ್ನೂರಿನ ಕರಕುಶಲಿಗಳ ಕಾಯಕಕ್ಕೆ ಉತ್ಸಾಹದ ಚಿಲುಮೆಯಾಗಿರುವಂತೆ, ಬಂಧುಗಳೆಡೆಗಿನ ಪ್ರೀತಿ ವಾತ್ಸಲ್ಯದ  ದ್ಯೋತಕವೂ ಆಗಿದೆ. ಆತಿಥ್ಯದ ಸಂಕೇತವಾಗಿರುವ 'ಚಹಾ'ವನ್ನು  ಅತಿಥಿಗಳು ನಿರಾಕರಿಸಿದರೆ ಸಾಕು ಬೇಡದ ಮುನಿಸು ತಪ್ಪಿದ್ದಲ್ಲ.
ಅನುಬಂಧದ ಪ್ರತೀಕವಾಗಿರುವ  ಚಹಾವನ್ನು ಸ್ವೀಕರಿಸಲೇಬೇಕು.ಚಹಾತಿಥ್ಯ ಸತ್ಕಾರ ಆತಿಥೇಯರಲ್ಲಿ ಅವರ್ಣನೀಯ ಆನಂದವನ್ನು ತಂದರೆ ಅತಿಥಿಗಳಲ್ಲಿ ವಾತ್ಸಲ್ಯದ ಸುಮವನ್ನು ಅರಳಿಸುತ್ತದೆ.  ಸಂಬಂಧಗಳನ್ನು  ಗಟ್ಟಿಯಾಗಿ ಬೆಸೆಯುವ ಸೇತುವೆಯಾಗಿ ಚಹಾದ ರಾಯಭಾರಿತನ ತಲೆದೂಗುವಂತಹುದು. ಮನೆಯವರಗೆ ಜಗಳವಾಡಲು ಬಂದವರಿಗೂ ಕುಳ್ಳಿರಿಸಿ ಚಹಾದಿಂದ ಸತ್ಕರಿಸುವಂತಹ ಅತಿಥಿ ಔದಾರ್ಯ ಅನಿಕೇತನವಾದದ್ದು. ಚಹಾ ಬಂಧುತ್ವದ ಸೇತುವೆಯಾಗಿರುವಂತೆಯೇ  ಋಣದ ಪ್ರತಿನಿಧಿಯೂ ಆಗಿದೆ. ಬಗೆಹರಿಯಲಾರದ ಎಷ್ಟೋ ವಿವಾದಗಳು ಚಹಾದ ಬಾಂಧವ್ಯ ಮಾತ್ರದಿಂದ ಮಾಯವಾಗಿದ್ದನ್ನು ಕಂಡಿದ್ದೇನೆ. ಪರರ ಮನೆಯ ಚಹಾದ ಋಣ ಬಗೆಯಬೇಕಾದ ದುಷ್ಟರ ದ್ರೋಹಗಳನ್ನು, ಅಪನಂಬಿಕೆಗಳನ್ನು ತಿಳಿಗೊಳಿಸಿ ತಣ್ಣಗಾಗಿಸಿದ್ದನ್ನು ತಿಳಿದಿದ್ದೇನೆ. ಮನುಷ್ಯ- ಮನುಷ್ಯರ ಮಧ್ಯದ ದ್ವೇಷ, ವಿರಸ,ವೈರತ್ವಗಳಿಗೆ ರಾಮಬಾಣದ ಔಷಧಿಯಾಗಬಲ್ಲ ಶ್ರೇಷ್ಠ ಚಿಕಿತ್ಸಾಗುಣ ನಮ್ಮೂರಿನ ಚಹಾದಲ್ಲಿದೆ. ಸಂಜೆಯಾದರೆ ಸಾಕು ನಮ್ಮೂರಿನ ತರಕಾರಿ ಉಪ ಮಾರುಕಟ್ಟೆ ಹರಟೆಯ ಕೇಂದ್ರವಾಗಿ ಬದಲಾಗುತ್ತದೆ. ಹೀಗೆ ಸೂರ್ಯಾಸ್ತವಾಗುತ್ತಲೇ ಸೂಜಿಗಲ್ಲಿನಂತೆ ಹರಟುವವರನ್ನಾಕರ್ಷಿಸಿ ತನ್ನತ್ತ ಸೆಳೆಯುವ  ಮಾಂತ್ರಿಕನೆಂದರೆ  'ಚಹಾಮಣಿ'. ಪ್ರತಿನಿತ್ಯ ಈ ಮುಸ್ಸಂಜೆಯ ಹರಟೆಯನ್ನು  ಜಾತ್ರೆಯೆಂಬಂತೆ ಪರಿಪಾಲಿಸಿಕೊಂಡು ಬಂದಿದ್ದಾರೆ ಇಲ್ಲಿಯ ಜನ. ಇಲ್ಲಿ ಜಾಗತಿಕವಲ್ಲದೇ, ಕೇಂದ್ರದಿಂದ ಹಿಡಿದು ಗ್ರಾಮಮಟ್ಟದವರೆಗಿನ ಸಮಕಾಲೀನ ರಾಜಕೀಯ, ಸಾಮಾಜಿಕ, ಆರ್ಥಿಕ,ಆಧ್ಯಾತ್ಮಿಕವಾದ ಸೂಕ್ಷ್ಮ  ಒಳನೋಟಗಳ ಚರ್ಚೆಯಿದೆ; ಊರಿನಲ್ಲಿ ಜರುಗುತ್ತಿರುವ ಹಾಗೂ ಜರುಗಿದ ಪ್ರಸ್ತುತ ವಿದ್ಯಮಾನಗಳ ಕುರಿತು ಸಂವಾದವಿದೆ; ಅಂದು ಗಮನಸೆಳೆದಿರುವ ಊರಿನ ಪ್ರಮುಖ ಸಂಗತಿಗಳ ಕುರಿತು ಮಾತುಗಳಿವೆ; ಸ್ನೇಹಿತರು, ದಾಯಾದಿ ಸಂಬಂಧಿಗಳ ಮಧ್ಯದ  ವಾದವಿವಾದಗಳ ವಿವೇಚನೆಯಿದೆ;  ಕೌಟುಂಬಿಕ, ಸಾಮಾಜಿಕ,ಆರ್ಥಿಕ,ನೈತಿಕ, ಸಾಂಸ್ಕೃತಿಕ ಅಲ್ಲದೇ ಪಾರಮಾರ್ಥಿಕ ಸಂಗತಿಗಳ ವ್ಯಾಖ್ಯಾನಗಳಿವೆ; ಸಂಬಂಧಿಕರ ಮಧ್ಯದ ವಿವಾದಗಳಿಗೆ ಮುಕ್ತಿ ನೀಡಬಲ್ಲ ನ್ಯಾಯಿಕ ಪರಿಹಾರಗಳ ಸಂಕಥನಗಳಿವೆ; ತಮ್ಮ ಕೈಗೆಟುಕದ ರಾಜಕಾರಣದ ಒಳಸುಳಿಗಳಿಗೂ ಇಲ್ಲಿ ಅನೌಪಚಾರಿಕ ಪರಿಹಾರಗಳಿವೆ; ಗೆಳೆಯರ ಮಧ್ಯದ ತುಂಟಾಟದ ಭಾವಗಳ ಸಲ್ಲಾಪಗಳಿವೆ.  ಮಾನವನ ಸಕಲ ಮನೋವ್ಯಾಪಾರಗಳ ಅಭಿವ್ಯಕ್ತಿಗೊಂದು ದಿವ್ಯಲೋಕ ಈ ಚಹಾಜಾತ್ರೆ. ಮಾನವಶಾಸ್ತ್ರ ಹಾಗೂ ಸಮಾಜಶಾಸ್ತ್ರ ಶಿಸ್ತುಗಳ ಅಧ್ಯಯನಕಾರರಿಗೆ ಒಂದು ಪ್ರಯೋಗಶಾಲೆಯಂತಿದೆ ಈ ಮೇಳ.  ಜಾತಿ ಧರ್ಮ, ಮತ,ವರ್ಣಗಳ ಭೇದವಿಲ್ಲದೇ ಚಹಾಗಾಗಿ  ಒಂದೆಡೆ ನೆರೆಯುವ ಸಂಗತಿಯೇ ವಿಸ್ಮಯ  ಮೂಡಿಸಿದೆ. ಕಲೆ ಹಾಗೂ ಸಾಹಿತ್ಯ ಮೀಮಾಂಸೆಗೂ ಅಲ್ಲಿ ಜಾಗವಿದೆಯೆಂದರೆ ಚಹಾ ಹೇಗೆ ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂಬುದನ್ನರಿಯಬಹುದು. ತೆರೆದುಕೊಳ್ಳುವ ಚಹಾಕಾರಣದ ನಮ್ಮೂರಿನ ಈ ಮಾರುಕಟ್ಟೆಯ ಜಗತ್ತು  ಸರ್ವಜನಾಂಗದವರನ್ನಳಗೊಂಡು ಇತಿಹಾಸ, ಅರ್ಥಶಾಸ್ತ್ರ, ಸಮಾಜವಿಜ್ಞಾನ,ರಾಜ್ಯಶಾಸ್ತ್ರ, ತತ್ವಜ್ಞಾನಾದಿಯಾಗಿ ಔಪಚಾರಿಕ ಹಾಗೂ ಅನೌಪಚಾರಿಕ ಸಂಗತಿಗಳನ್ನೆಲ್ಲಾ ನಿಷ್ಕರ್ಷೆಗೊಳಪಡಿಸಬಲ್ಲ  ಅನುಭವ ಮಂಟಪವಾಗಿದೆ. ಜಾಗತಿಕ ವಿದ್ಯಮಾನಗಳಿಂದ ಹಿಡಿದು ಪಕ್ಕದ ಮನೆಯವರೆಗಿನ ಸುದ್ದಿ ಸಮಾಚಾರಗಳೆಲ್ಲಾ ಈ ಅನುಭವ ಮಂಟಪದಲ್ಲಿ ನಿಕಷಕ್ಕೊಳಗಾಗಲೇಬೇಕು.ನೇಕಾರ ಸಂಗಣ್ಣ, ವಾಲೀಕಾರ ಬಸಪ್ಪ,  ಕಮ್ಮಾರ ಹನುಮಂತ, ಕುಂಬಾರ ಮಲ್ಲಪ್ಪ, ಗೌಡರ ಲಕ್ಷ್ಮಣ್ಣ ಹೀಗೆ ತರತಮಗಳಿಲ್ಲದ ಜಾತ್ಯಾತೀತ ಸಮುದಾಯವೊಂದು ಬೀದಿ ಬದಿಯ ಚಹಾಶಾಲೆಗಳ ಮುಂದೆ ಶ್ರದ್ಧೆಯಿಂದ ನಿತ್ಯ ನೆರೆಯುತ್ತದೆಯೆಂದರೆ ಚಹಾದ ಈ ಮಾಯಾಲೋಕಕ್ಕೆ ಧನ್ಯವಾದಗಳನ್ನರ್ಪಿಸಲೇಬೇಕು.
ಚಹಾದೊಂದಿಗೆ ಚೂಡಾ,  ಮಿರ್ಚಿ ಬಜಿ, ದೊಣ್ಣೆಮೆಣಸಿನಕಾಯಿ ಬಜಿ,  ಬದನೆಕಾಯಿ ಬಜಿ, ವಡಾ ಬಜಿ, ಆಲೂ ಬಜಿ, ಹುರಿದ ಮಸಾಲೆ ಶೇಂಗಾಕಾಳುಗಳು, ಒಗ್ಗರಣೆ ಹಾಕಿದ ಚುರುಮರಿ, ಹೀಗೆ ಬಗೆ ಬಗೆಯ ವೈವಿಧ್ಯಮಯ ಖಾದ್ಯಗಳ ಸಾಂಗತ್ಯ ಹರಟೆಗೆ ನಿತ್ಯೋತ್ಸವದ ಮೆರಗನ್ನು ನೀಡುತ್ತದೆ. ಬಿಸಿಯಾದ ಈ ಕರಿದ ಖಾದ್ಯಗಳನ್ನು ಸವಿಯುತ್ತಲೇ  ನಡೆಯುವ  ಚರ್ಚೆ ಕಾವೇರುವ ಬಗೆಯನ್ನು ನಮ್ಮ ಜನರ ಗ್ರಾಮೀಣ ಸೊಗಡಿನ ಭಾಷೆಯಲ್ಲಿಯೇ  ಕೇಳಬೇಕು. ಕರಿದ ಖಾದ್ಯಗಳ ಸವಿಯನ್ನುಂಡ ನಂತರದ ಸಾಂಗತ್ಯವೇ ಚಹಾಪಾನೀಯದ್ದು. ಅಲ್ಲಿಗೆ ಅಂದಿನ ಹರಟೆ ಅಂತಿಮ ಹಂತಕ್ಕೆ ಬಂದಿದೆಯೆಂದೇ ತಿಳಿಯಬೇಕು. ಒಂದು ಪುಟ್ಟ ಗ್ರಾಮದ  ಜಾತ್ರೆಯಷ್ಟು ಜನರನ್ನು ಸೆಳೆಯುವ ಈ  ಚಹಾಶಾಲೆಗಳೇನೂ ಪಂಚತಾರಾಗೃಹಗಳಲ್ಲ. ಬೀದಿ ಬದಿಯ ಮೂಲೆಯೊಂದರಲ್ಲಿ  ತಳ್ಳುವ ಗಾಡಿಗಳ,ಚತುರ್ಭುಜಗಳಂತಿರುವ  ನಾಲ್ಕು ಚಕ್ರಗಳ ಮೇಲೆ   ಪ್ರತಿಷ್ಠಾಪಿಸಲ್ಪಟ್ಟ ಸಂಚಾರಿಯಂತೆ ಕಾಣುವ ಡಬ್ಬಿಯಂಗಡಿಗಳು.  ಮಲೆನಾಡಿನ ಚಹಾಕುಶಲಿಗಳು ಚೂಡಾದಂಗಡಿಯ ಪಕ್ಕತೆರೆದಿರುವ  ಚಹಾಶಾಲೆ ಒಂದಕ್ಷರದ ವಿದ್ಯೆಯನ್ನು ಧಾರೆಯೆರೆಯದಿದ್ದರೂ ಚಹಾದ ಅನುಭಾವದ ರಸಪಾಕವನ್ನು ರಸಿಕರಿಗೆ ಹಂಚುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ!. ಮುಸ್ಸಂಜೆಯ ವಿಹಾರಿಗಳು ಸೇರುವ ಈ ಜಾಗ ವಿಶಾಲವಾದ ಬಯಲೇನೂ ಅಲ್ಲ, ಸುಮಾರು ೧೦೦ ಮೀಟರ್ ಉದ್ದಳತೆಯ ಚಿಕ್ಕ ಉಪಮಾರುಕಟ್ಟೆಯ ತಾಣವದು. ಅಂದ ಹಾಗೆ ಈ ಹರಟೆಯ ಜಗತ್ತಿನ ನಿತ್ಯದ ಆಯಸ್ಸು ಸಂಜೆ  ೫ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ಮಾತ್ರವೆಂದರೆ ಅಚ್ಚರಿಯೆನಿಸದಿರದು.  ಗೋಧೂಳಿಯ ಮುಹೂರ್ತದಲ್ಲಿ  ಜನಿಸಿ, ವಿವಿಧೆಡೆಗಳಿಂದ  ಹರಿದು ಬಂದ ಜಲ ಸಾಗರವ ಸೇರುವಂತೆ ನಮ್ಮೂರಿನ ಗಲ್ಲಿ ಹಲ್ಲುಗಳಿಂದ ಜನ ನಿತ್ಯದ ಈ ಚಹಾಮೇಳಕ್ಕೆ ಹರಿದುಬರುತ್ತಾರೆ. ಕೆಲವೇ ಗಂಟೆಗಳಲ್ಲಿ  ಬೃಹದಾಕಾರವಾಗಿ ಬೆಳೆದು, ಮತ್ತೆ ಐದಾರು ಗಂಟೆಗಳಲ್ಲಿಯೇ ಕೊನೆಯಾಗುವ ಈ ಚಹಾರಂಜನೆಯ ಜಾತ್ರೆ ಬಲು ವಿಶಿಷ್ಟವಾದುದು.
ಸಾಮಾನ್ಯರಾದಿಯಾಗಿ ಶಿಕ್ಷಕರು, ವಕೀಲರು, ಸುದ್ದಿಮಾಧ್ಯಮದವರು,  ಕಾರ್ಮಿಕರು, ನೌಕರರು, ವಿದ್ಯಾರ್ಥಿಗಳು, ಕರಕುಶಲಿಗಳು, ರೈತರು  ಹೀಗೆ ವರ್ಗಭೇದವಿಲ್ಲದೇ ಸರ್ವರನ್ನೂ ಸೆಳೆದು, ಭ್ರಾತೃತ್ವದ ಮುನ್ನುಡಿಯನ್ನು ಹಾಡುತ್ತಿರುವ ಸೌಹಾರ್ದತೆಯ ಸಂಗೀತವನ್ನು ನುಡಿಸುತ್ತಿರುವ, ಸಮಾನತೆಯ ತತ್ವವನ್ನು ಸಾರುತ್ತಿರುವ,ಜಗತ್ತಿಗೆ ಬಾಂಧವ್ಯದ ಪಾಠ ಮಾಡುತ್ತಿರುವ, ನಮ್ಮೂರಿನ ಚಹಾಜಗತ್ತಿನ ಮಾಂತ್ರಿಕ ಮೋಡಿ ಅದೆಷ್ಟು ಅರ್ಥಪೂರ್ಣ, ಭಾವಪೂರ್ಣ, ಔಚಿತ್ಯಪೂರ್ಣ  ಅಲ್ಲವೆ ?  ದಿನವೆಲ್ಲಾ ದುಡಿದು ಬಳಲಿದ ಮನಸುಗಳನ್ನು ತನ್ನತ್ತ ಕೈ ಬೀಸಿ ಕರೆದು ಉಣಬಡಿಸಿ,  ಸಂಜೆಯ ಚಹಾಮೃತದ ಸವಿಯನ್ನು ನಿಷ್ಪಕ್ಷಪಾತವಾಗಿ ಹಂಚುವ ಈ ನಿರ್ಮಲ ಜಗತ್ತು ನನ್ನನ್ನು ಇನ್ನಿಲ್ಲದಂತೆ ಕಾಡಿದೆ. ಶ್ರಮ ಸಂಸ್ಕೃತಿಯ ಬೇರುಗಳಿಂದ ನವಚಿಗುರನ್ನು ಪಡೆದು ಕಂಗೊಳಿಸುತ್ತಿರುವ ನಮ್ಮೂರಿನ ನಾಗರಿಕತೆಯಲ್ಲಿ, ಕೆಲವು ಕಾಲ ಬಡವರ ಜಠರಾಗ್ನಿಯನ್ನು ತಣಿಸಿ ಹಸಿವನ್ನು ಮುಂದೂಡುವ ಅಥವಾ ಒಂದು ಹೊತ್ತಿನ ಉಪವಾಸಕ್ಕೆ ಸಹಕರಿಸಿ ತಾತ್ಕಾಲಿಕವಾಗಿ ಹೊಟ್ಟೆ ತುಂಬಿಸುವ ಈ ಚಹಾ ಎಂಬ ಮಾಯೆ ತನ್ನ ಸುತ್ತ  ಒಂದು ನವಸಂಸ್ಕೃತಿಯನ್ನೆ ರೂಪಿಸಿಕೊಂಡದ್ದರಲ್ಲಿ ಅಚ್ಚರಿಯೇನಿಲ್ಲ. ಬಡವರ ಕೊನೆಯಿರದ ಹಸಿವಿನ ಔಷಧಿಯಾಗಿರುವ ಈ "ಬಡವರ ಬಂಧು" ಶ್ರಮಿಕರ ಅಮೃತವೂ ಹೌದು; ಶೋಷಿತರ ಬದುಕಿನ ತೀರ್ಥವೂ ಹೌದು.ಲಾಲ್ ಬಹಾದ್ದೂರ ಶಾಸ್ತ್ರಿಯವರು ಕರೆಕೊಟ್ಟ ಸೋಮವಾರದ ಉಪವಾಸ ಯಶಸ್ವಿಯಾಗುವಂತೆ ಮಾಡಿ ದೇಶ ಸೇವೆ ಮಾಡಿದ ಚಹಾಮಾಯಿಯ ದೇಶಭಕ್ತಿಯನ್ನು ಮೆಚ್ಚಲೇಬೇಕು! ಈ ಲೇಖನ ಅಕ್ಷರವಾಗುವ ಹೊತ್ತಿನಲ್ಲಿ ಸಹೋದ್ಯೋಗಿ ಪ್ರಾಧ್ಯಾಪಕ ಗೆಳೆಯ ಮೌನೇಶ ಕಮ್ಮಾರರವರು ಹಾಡಿದ"ಕಪ್ಪ ಬಸಿ ಚಹಾ | ಗೆಳೆಯ ಗೆಳೆಯರು ಕೂಡಿ| ಸಲಿಗೆಯ ಮಾತನಾಡಿ|ಪ್ರೀತಿಗೆ ನಾಂದಿಯಾತು| ಕಪ್ಪ ಬಸಿ ಚಹಾ| ಅದು ಒಂದು ಇಲ್ಲದಿರೆ|ಗೆಳೆತನ ಎಲ್ಲಾ ಮರೆ| ಬದುಕುವುದು ಬಿರಿಯಾತು| ಕಪ್ಪ ಬಸಿ ಚಹಾ|"ಎಂಬ ಜಾನಪದ ಗೀತೆಯಲ್ಲಿ ಅಭಿವ್ಯಕ್ತವಾದ  ಚಹಾಮಾಯಿಯ ಸೊಬಗು ಅವರ್ಣನೀಯ. ಚಹಾ ಜನಪದರ ಜೀವಸೆಲೆಯಾಗಿ ಬದುಕಿಗೆ ಚೈತನ್ಯವನ್ನು ಧಾರೆಯೆರೆಯುತ್ತಲೇ ಬಂದಿದೆ. ನಾಡವರ ಕಾಯಕದಲ್ಲಿನ ಕೈಲಾಸ ತಲುಪಲು ಈ ಚಹಾ ಎಂಬ ಉತ್ಸಾಹದ ಚಿಲುಮೆ  ಪ್ರವಹಿಸಲೇಬೇಕು. "ನೀನೆಂದರೆ  ಕಣ ಕಣದಲೂ ರೋಮಾಂಚನ | ಮನದ ಮೂಲೆಯಲೂ ಭರವಸೆಯ ಹೊಂಗಿರಣ| ಅರಳಿ ನಿಂತ ಎದೆಯಲಿ ನೀನು ಅಮೃತ ಸಿಂಚನ| ಕದಡಿದ ಮನ ತಿಳಿಯ ಬಾನು | ಆಗದೇನು ಇಳಿದಾಗ ಚಹಾ ಹನಿಯ ಜೇನು|"ಎಂಬ ಚಹಾರಾಧನೆ ಮನದ ಮೂಲೆಯಲ್ಲಿ ಸದಾ ಜರುಗುತ್ತಲೇ ಇರುತ್ತದೆ. ಆಧುನಿಕ ಜಗತ್ತಿನ ಆಹಾರ ಸಂಸ್ಕೃತಿಯ ಅತ್ಯಗತ್ಯ ಪಾನೀಯಗಳಲ್ಲಿ ಒಂದಾಗಿರುವ ಚಹಾದೇವಿ, ವರ್ತಮಾನದ ಬೆಡಗಿನ ಲೋಕದ ಸೆಳೆತಕ್ಕೆ ಸಿಕ್ಕು ಕೆಫೆಗಳಲ್ಲಿ ಕಪ್ಪು ಸುಂದರಿಯಾಗಿ, ಬಿಳಿ ಕಿಶೋರಿಯಾಗಿ, ಹಸಿರು ನೀರೆಯಾಗಿ, ಕೆಂಬಣ್ಣದ ಮೋಹಿನಿಯಾಗಿ, ವೈವಿಧ್ಯಮಯ ರೂಪಗಳನ್ನು ಅಲಂಕರಿಸಿದ್ದಾಳೆ. ಪ್ರಾತಃಕಾಲದಲೆದ್ದು ಮುಖ, ಹಲ್ಲುಗಳನುಜ್ಜಿ, ವಿಭೂತಿ ಧರಿಸಿ ಒಂದು ಲೋಟ ಚಹಾ ಹೀರಿದಾಗಲೇ ಅಂದಿನ ಕಾಯಕದ ಅಧಿಕೃತ ಪ್ರಾರಂಭಕ್ಕೆ ಮುನ್ನುಡಿ ಬರೆದ ಹಾಗೆ. ಅಲ್ಲಿಂದ ಮೂರು ಗಂಟೆಗಳಿಗೊಮ್ಮೆ ಚಹಾರಾಣಿಯೊಂದಿಗೆ ಉಲ್ಲಾಸದ ಹಾಡನ್ನು ಹಾಡಲೇಬೇಕು. ಶ್ರಮಿಕ ವರ್ಗದ ಜನರ ಜೀವನದ ಚೈತನ್ಯವಾಗಿರುವ ಕಲಿಯುಗದ ಅಮೃತವಾಗಿರುವ ಚಹಾ ನಮ್ಮೂರಿನ ಭಾವೈಕ್ಯತೆಯ ಪ್ರತೀಕವೂ ಆಗಿದೆಯೆಂದರೆ ಅತೀಶಯೋಕ್ತಿಯೇನಲ್ಲ.




ಚಹಾಯಣ

ಚಹಾಯಣ

ಕಲಿಯುಗದ ಅಮೃತವೆಂದೇ  ಪೆಸರ್ವಡೆದಿರುವ 'ಚಹಾ' ಸೇವನೆಯನ್ನು ನನ್ನ ಜೀವನದುದ್ದಕ್ಕೂ ಸಂಭ್ರಮದ ಸ್ವರ್ಗಸುಖದ ಘಳಿಗೆಗಳೆಂದು ಆಚರಿಸುತ್ತಾ ಬಂದಿರುವುದು ನನ್ನ ವ್ಯಕ್ತಿತ್ವದ ಹೆಗ್ಗಳಿಕೆಗಳಲ್ಲಿ ಒಂದು!!.  ಸೂರ್ಯೋದಯದ ಹೊಂಗಿರಣಗಳು ಭುವಿಯನ್ನು ತಬ್ಬಿ ಮೈಮರೆಯುವುದಕ್ಕಿಂತ ಮೊದಲೇ
ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್ ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಳಂ ಕುರು..........
" ಎಂದು ಮನೆಯ ಹತ್ತಿರದ  ದೇವಸ್ಥಾನದ ಶುಭ ಸುಪ್ರಭಾತದೊಂದಿಗೆ  ಎಚ್ಚರವಾಗುವ ನನಗೆ ಬೆಳಗು  ನಿತ್ಯೋತ್ಸವವಿದ್ದಂತೆ. ಪ್ರತಿ ಶುಭೋದಯವನ್ನೂ ಹಬ್ಬದಂತೆ ಸಂಭ್ರಮಿಸಿ ಹರ್ಷಿಸುತ್ತೇನೆ.ಮನೆಯ ಮುಂದಿನ ಬೇವು,ತೆಂಗು,ಕಣಗಲಿ ಗಿಡಮರಗಳೊಳಗಣ ಗೂಡುಗಳಿಂದ ರೆಕ್ಕೆಬಿಚ್ಚಿ ಮೈಮುರಿಯುತ್ತಾ ಹೊರಬಂದ ಗಿಳಿ, ಗುಬ್ಬಿ ,ಪಾರಿವಾಳ,ಕೋಗಿಲೆ ಕಾಕಗಳ ಚಿಲಿಪಿಲಿ ಗಾನ, ಮನೆಯ ಮುಂದಿನ ಕಲ್ಪವೃಕ್ಷದ ಪ್ರತೀಕದಂತಿರುವ ತೆಂಗು, ಬೇವು, ಸೀತಾಫಲ ಮರಗಳ ಎಲೆಗಳ ಮಧ್ಯೆ ಇಣುಕುತ್ತಾ ತೂರಿಬಂದು ನೆಲದ ಮೇಲೆ ಸ್ವರ್ಣ ಬೆಳಕಿನ ರಂಗೋಲಿ ಬಿಡಿಸಿದ ನೇಸರನ ನವೋಲ್ಲಾಸದ ಹೊನ್ನ ಕಿರಣಗಳ  ಎರಕ, ಮೈದುಂಬಿಕೊಂಡು ದಟ್ಟ ಆಮ್ಲಜನಕದ ತೇವಭರಿತ ಗಂಧ ಸೂಸುತ್ತಿರುವ ಮಂದಹಾಸದ ತಂಗಾಳಿಯ ಹಿತವಾದ ಸ್ಪರ್ಶ, ಇಬ್ಬನಿಯ ಹನಿಗಳಿಂದ ತೊಯ್ದು ಇರುವೆಗಳ ಮುಂಜಾವಿನ ಜಾತ್ರೆಗೆ ಕಾರಣವಾದ ಸವಿನೆಲದ ರಸ ಮಾಧುರ್ಯ, ದಾಸವಾಳ, ಮಲ್ಲಿಗೆ,ಸೇವಂತಿಗೆ ಕುಸುಮಗಳ ಮೇಲೆ ಸವಾರಿ ಹೊರಟು ರೆಕ್ಕೆಬಡಿಯುತ್ತಾ ಹನಿಹನಿಯಾಗಿ ಮಧು ಹೀರುತ್ತಿರುವ ದುಂಬಿಗಳ ನಿನಾದ,  ಚುಮುಚುಮು ಬೆಳಕಿನ ಉದಯರಾಗ, ಕೈಗೆಟುಕುವ ಕಣ್ಣಳತೆಯಲ್ಲಿ ಗೂಡುಕಟ್ಟಿ ಮಧುವಿನ ಸಂಗ್ರಹದಲ್ಲಿ ತೊಡಗಿರುವ ಮರಿದುಂಬಿಗಳ ಸ್ವರಾಂಜಲಿ,ಹೂವಿಂದ ಹೂವಿಗೆ ಹಾರಿ, ರಸರುಚಿಯ ಪರೀಕ್ಷೆಗಿಳಿದು ಸುತ್ತಿ ಸುಳಿಯುತ್ತಿರುವ ಚಿಟ್ಟೆಗಳ ಸರಸ ಸಲ್ಲಾಪ, ರವಿಯ ಹೊಂಗಿರಣಗಳಿಗೆ ಮೈಯ್ಯೊಡ್ಡಿ ಅರಳಿ ನಿಂತು ಸುಗಂಧಸುಧೆಯನ್ನು ಹರಿಸುತ್ತಿರುವ ತುಳಸಿ,ದುಂಡುಮಲ್ಲಿಗೆ,ಚೆಂಡು ಹೂ, ಸೇವಂತಿಗೆ, ಕಣಗಿಲೆ, ಸೂಜಿಮಲ್ಲಿಗೆ,ಮಧ್ಯಾಹ್ನಮಲ್ಲಿಗೆ, ಬೇವಿನ ಹೂ,ಪೇರು ಹೂಗಳ ವೈವಿಧ್ಯಮಯ ಚಿತ್ತಾಕರ್ಷಕ ಬಣ್ಣಗಳ  ಸೌಂದರ್ಯಮೀಮಾಂಸೆ,  ಮಂಜಿನ ರಸಗಂಗೆಯ ಹನಿಗಳ ಮಿಲನದಿಂದಾಗಿ  ಪೆಟ್ರಿಕೋರ್ ವಿದ್ಯಮಾನದುಂದುಂಟಾಗಿ ಚಿಮ್ಮುತಿರುವ  ಆರ್ದ್ರ ಮಣ್ಣಿನ ಹದಭರಿತ ಪರಿಮಳ, ಭಾನುವಿನ ನವಪ್ರಭೆಗಾಗಿ ಕಾತರಿಸುತ್ತಲೇ ಮರೆಯಾಗುತ್ತಿರುವ ಮಂದಬೆಳಕಿನ ಉದಯಗೀತೆ..... ಹೀಗೆ ಸರದಿಯಂತೆ ಬಂದಪ್ಪಳಿಸುವ ಶುಭೋದಯದ ನಾದಬಿಂದುಗಳೊಂದಿಗೆ ಚಹಾಮಾಯಿಯ ಚಪ್ಪರಿಸುವ ಸವಿ ಗುಟುಕಿದ್ದರೆ ಮುಗಿಯಿತು. ಅದು ಧರೆಗಿಳಿದ ನಂದನವನದ ಸಾಕ್ಷಾತ್ಕಾರದ ಪರಮಸುಖ ; ನೆಲದ ಮೇಲಿನ ಬೃಂದಾವನ ದರ್ಶಿಸಿದ ಮಹದಾನಂದ ; ಅಮೃತಧಾರೆಯನ್ನೇ ಹೀರಿದ ದಿವ್ಯಾನುಭವ ; ಇಬ್ಬನಿಯ ಹನಿಗಳೆಲ್ಲಾ ಮುತ್ತಾದ ಸಂಭ್ರಮ; ಮರ್ತ್ಯ ಲೋಕದಿಂದ ಹಾರುತಿರುವ ಹೃದಯಾನಂದದ ಅನುಭವ.
ಈ ಅನುಭವಗಳು ಒಮ್ಮೆಲೇ ಬಂದಪ್ಪಳಿಸಿ ಅಂತರಂಗದ ಕಡಲಿಗೆ ಪ್ರಶಾಂತಿಯನ್ನು ನೀಡುವ ದಿವ್ಯಾನುಭವ ನನಗೆ ಶುಭೋದಯದ ಚಹಾರಾಣಿ ನನ್ನೊಳಗಿಳಿದಾಗ ಸಂಭವಿಸಿದೆ. ನನ್ನನ್ನು ಧ್ಯಾನದ ಶೂನ್ಯಕ್ಕೆ ಕರೆದೊಯ್ಯುವ ಹಕ್ಕಿಯಂತೆ ಚಹಾಮಾಯೆ ನನ್ನನ್ನು ಬೆಂಬತ್ತಿದೆ.

" ಆನಂದಮಯ ಈ ಜಗಹೃದಯಭಯವೇತಕೆ ಮಾಣೊ ಸೂರ್ಯೋದಯ ಚಂದ್ರೋದಯದೇವರ ದಯೆ ಕಾಣೊ" ಎಂಬ ಕುವೆಂಪುರವರ ಉಕ್ತಿಯಂತೆ ಉದಯರವಿಯೊಂದಿಗೆ, ಸಲ್ಲಾಪದಲ್ಲಿ ತೊಡಗಿದರೆ ಸಾಕು ಬರೆಯುತ್ತಿರುವ ಸಂಗತಿಗಳೆಲ್ಲಾ ಕಿರಣಗಳ ಹೊಳಪಿನಲ್ಲಿ ಮಂದವಾಗುತ್ತವೆ. ಚಹಾದ ಮಗ್ಗಿಗೆ ಬರೋಣ.ಚಹಾವೆಂದರೆ ನನಗಂತೂ ಎಲ್ಲಿಲ್ಲದ ಹಿಗ್ಗು. ಬೆಳಗಿನ ಈ ಸುಖಜೀವನದ ಘಳಿಗೆಗಳೊಂದಿಗಿನ ಸೇವನೆ ನನ್ನ ನಿತ್ಯದ ಬದುಕನ್ನು ರಸಮಯವಾಗಿಸಿದೆ. ಚೈತನ್ಯದ ಚಿಲುಮೆಯ ಒರತೆಯನ್ನಾಗಿಸಿದೆ. ಚಹಾದ ಗುಟುಕಿನಿಂದಲೇ ನನ್ನ ಬೆಳಗಿನ ಅಧಿಕೃತ ಪ್ರಾರಂಭವೆಂದರೆ ತಪ್ಪಾಗಲಾರದು. ಅಂದರೆ ಬೆಳಿಗ್ಗೆ ೬ ಗಂಟೆಗೆ ಎದ್ದರೂ ಅಂದು ತಡವಾಗಿ ೧೦ ಗಂಟೆಗೆ ಚಹಾ ಹೀರಿದರೆ ನನಗೆ ಶುಭೋದಯವಾಗುವುದು ೧೦ ಗಂಟೆಗೆ ಎಂದರೆ ಚಹಾ ನನ್ನನ್ನಾವರರಿಸಿರುವ ಪರಿಯನ್ನೊಮ್ಮೆ ಊಹಿಸಬಹುದು. ಬೆಳಗಿನಲ್ಲಿ ಮಾತ್ರವಲ್ಲ ಹೊತ್ತಲ್ಲದ ಹೊತ್ತಿನಲ್ಲೂ ನನ್ನೊಳಗಿಳಿಯುವ ಆಪತ್ಕಾಲದ ಪಾನರಾಣಿ. ತಲೆ ನೋವಿನ ಹಾವಳಿಯಿರಲಿ, ಸುಖವೆಂದು ಬಗೆದ ಸಂಸಾರದ ಅಸಂಖ್ಯಾತ ತಾಪತ್ರಯಗಳ ದಾಳಿಯಿರಲಿ, ಮೈ ಹಣ್ಣಾಗುವ ಆಯಾಸವಿರಲಿ, ಮೈಗಳ್ಳತನವೆಂಬ ಠಕ್ಕನ ಬಲೆಯಾಗಿರಲಿ,ತರಗತಿಗಳಲ್ಲಿನ ಉಪನ್ಯಾಸದ ಬಳಲಿಕೆಯಿರಲಿ, ಸ್ನೇಹಿತರೊಂದಿಗಿನ ಹರಟೆಯಿರಲಿ ಅಥವಾ ಏನೂ ಇಲ್ಲದೇ ಸುಮ್ಮನೆ ಹೊತ್ತುಗಳೆಯುತಿದ್ದರೂ ಚಹಾ ಎಂಬ ಮನದನ್ನೆ ಮಾತ್ರ ನನ್ನನ್ನು ಆಗಾಗ ಬಂದು ಕ್ಷೇಮಕುಶಲ ತಿಳಿದು ಮನದ ಕ್ಲೇಶ ಕಳೆಯುವ ಜೀವ ಸಂಜೀವಿನಿಯಾಗಲೇಬೇಕು. ಕಾರಣಗಳೇ ಬೇಕೆಂದೇನಿಲ್ಲ  ನಾನು ಆಕೆಯನ್ನು ಬಯಸುವುದಕ್ಕೆ. ನೆಪಗಳಿದ್ದರೆ ಸಾಕು, ಬರಸೆಳೆದು ಬಾಚಿಕೊಳ್ಳುತ್ತೇನೆ ಆಕೆಯನ್ನು ಸಂಧಿಸಲು ದೊರೆತ ಅವಕಾಶಗಳನ್ನು. ನೆಪಗಳಿಲ್ಲದಿದ್ದರೂ ಚಿಂತೆಯಿಲ್ಲ ತಲೆ ಸರಿಯಿಲ್ಲವೆಂದೊ, ಗೆಳೆಯರಾರೊ ಬಹಳ ಮಾತನಾಡಿದರೆಂದೋ,ಪ್ರಾಂಶುಪಾಲರು ಹೊಗಳಿದರೆಂದೋ, ಚಹಾ ಒಲ್ಲದ ಸಹೋದ್ಯೋಗಿಗಳು ಬಯಸಿದರೆಂದೋ,ಗಂಟೆಗಟ್ಟಲೇ ಕಂಪ್ಯೂಟರ್ ಮುಂದೆ ಕುಳಿತೆನೆಂದೊ, ಗೆಳೆಯರ ಜನ್ಮದಿನವೆಂದೊ...   ಹೀಗೆ ತರಹೇವಾರಿ  ನೆಪಗಳನ್ನು ಅವಳಿಗಾಗಿ ಹುಟ್ಟುಹಾಕಿಕೊಳ್ಳುತ್ತೇನೆ. ಕೆಲವೊಮ್ಮೆ ಮಧ್ಯಾಹ್ನದ ಭೋಜನ  ಸವಿಯುವಾಗಲೇ ಆಕೆಗಾಗಿ ಕಾಯುವ ಪ್ರೇಮತಪಸ್ವಿಯಾಗುತ್ತೇನೆ. ಹೌದು ಆಕೆಯೆಂದರೆ ಸಮಯದ ಪರಿವೆಯಿಲ್ಲ ಎನಗೆ. ಆಕೆ ನೆನಪಾದರೆ ಮುಗಿಯಿತು ಹೊರಡಲೇಬೇಕು ಅವಳು ಸಿಗುವಲ್ಲಿಗೆ. ಬಸ್ಸು ನನ್ನನ್ನು ಬಿಟ್ಟು ಹೊರಟರೂ ಪರವಾಗಿಲ್ಲ ಆಕೆಯೊಂದಿಗೆ ಕೆಲಕಾಲ ಮಾತಿಗಿಳಿಯಲೇಬೇಕು.
ಆಕೆಯ ಸಂಗದಿಂದ ಕ್ಷಣಹೊತ್ತು ಮೈಮರೆತು ಕುಳಿತ ನಂತರ, ಎಚ್ಚರವಾದಾಗ ಏನನ್ನೋ ಅವಳಿಗಾಗಿ ಕಳೆದುಕೊಂಡಿರುತ್ತೇನೆ. ಮಹತ್ವದ ಸಮಯವನ್ನೊ,ಮನೆ ಸೇರಿಸಬೇಕಾದ ಬಸ್ಸನ್ನೊ, ಮಹತ್ವದ ಕೆಲಸವಾಗಬೇಕಾದ ಯಾರದೋ ಭೇಟಿಯನ್ನೊ,ಹೊರಟಿರುವ ಪ್ರಯಾಣದ ರೈಲನ್ನೊ, ಕಾಯುತ್ತಿರುವ ಗೆಳೆಯನನ್ನೊ ಅಥವಾ ಸಂಬಂಧಿಕರನ್ನೊ  ಇನ್ನೇನೇನೋ ಆ ಕ್ಷಣಕ್ಕೆ ಕಳೆದುಕೊಂಡಿರುತ್ತೇನೆ.  ಆದರೂ ಚಿಂತೆಯಿಲ್ಲ ನನಗೆ. ಕಳೆದುಕೊಂಡಿದ್ದೇನೆ ಎಂಬ ಕೊರಗಿಲ್ಲ;
ದಕ್ಕದೇ ಹೋಯಿತೆಂಬ ಪಶ್ಚಾತ್ತಾಪವಿಲ್ಲ; ತಪ್ಪಿಹೋಯಿತಲ್ಲ ಎಂಬ ಕನವರಿಕೆಯಿಲ್ಲ ;
ಜಾರಿದೆನೆಂಬ ಪ್ರಾಯಶ್ಚಿತವಿಲ್ಲ; ಅನಾಹುತವಾಯಿತಲ್ಲ ಎಂಬ ಹೆದರಿಕೆಯಿಲ್ಲ ; ಸಂಭವಿಸಬಾರದಾಗಿತ್ತು ಎಂಬ ಹಳಹಳಿಕೆಯಿಲ್ಲ;
ಎಚ್ಚರ ತಪ್ಪಿದೆನೆಂಬ ಹಳವಂಡವಿಲ್ಲ;ಓಹೋ ಕೈಜಾರಿತೆಂಬ ಪರಿತಪಿಸುವಿಕೆಯಂತೂ ನನ್ನಲಿಲ್ಲಏಕೆಂದರೆ ನಾನು ಅವಳನ್ನು (ಚಹಾಮಾಯೆ) ಕುಡಿದಿದ್ದೇನೆ.
ಅಲ್ಲಮನಿಗೆ ತಾಮಸವು ಮಾಯೆಯಾಗಿ ಕಾಡಿದಂತೆ ನನಗೆ ಚಹಾ ಮಾಯೆಯಾಗಿ ಕಾಡಿದೆ. ಆದರೆ ಅಲ್ಲಮ ಮಾಯೆಯನ್ನು ಗೆದ್ದು ಬೀಗಿ ಬಯಲಾದ. ನಾನು ಸೋತು ಹಿಗ್ಗಿ ಪರವಶನಾದೆ. ಅವಳೊಲವಿನ ಶಾಶ್ವತ ಪ್ರೇಮಭಿಕ್ಷುವಾದೆ. ಆಕೆ ಪ್ರೇಮಮಧುವನ್ನು ಧಾರೆಯೆರೆಯುವ ಗಂಗೆಯಾದಳು.ಆಕೆಯ ರಸಾನುಭವದ ಸಖನಾದೆ. ಆಕೆಯಪರಿಮಳದ ಹಬ್ಬದಲ್ಲಿ ಸಂಭ್ರಮಿಸುವ ಮಗುವಾದೆ.
ಹದಭರಿತ ಚಹಾಕನ್ನಿಕೆಯ ಸ್ವಾದಕ್ಕಿಂತ ಮಿಗಿಲಾದ ರಸರಾಸಾಯನ ಈ ಭುವಿಯ ಮೇಲೆ ಬೇರೊಂದಿಲ್ಲ. ಉಪ್ಪಿಗಿಂತ ರುಚಿಯಿಲ್ಲ ಎಂಬರು ಬಲ್ಲವರು.ಆದರೆ ನನಗೆ ಈ ಜಗದಲಿ ಚಹಾಗಿಂತ ರುಚಿ ಬೇರೊಂದಿಲ್ಲ. "ನಹೀ ಜ್ಞಾನೇನ ಸದೃಶಂ"  ಎನ್ನುವಂತಯೇ ನನಗೆ ನಹೀ ಚಹಾ ಸದೃಶಂ ಎಂದೆನ್ನಿಸಿದೆ. ಇದ ಕಾರಣ ಚಹಾಷೋಡಶಿಯ ಬಾಯಿಚಪ್ಪರಿಸುವ ಆಸ್ವಾದ; ನನ್ನೊಳಗಿಳಿದು ನಶೆಯೇರಿಸುವ ಅವಳ ಆಮೋದ. ಸಾಮಾನ್ಯವಾಗಿ ಸರ್ವರಿಗೂ ತಿಂಗಳಿಗೊಮ್ಮೆ ಹುಣ್ಣಿಮೆ, ಅಮವಾಸ್ಯೆಗಳ ಹಬ್ಬವಾದರೆ ನನಗೆ ಚಹಾಸಿನಿ ಯ ಸಖ್ಯ ದೊರೆತಾಗಲೆಲ್ಲ ಮಹಾನವಮಿ.ಯಾಕೆಂದರೆ ಚಹಾಮಾಯೆಯನ್ನು ಪಡೆದುಕೊಂಡಿದ್ದೇನೆ. ಬೆಳಗಾಗೆದ್ದ ಕೂಡಲೇ ಯೋಗಿಯಾಗುತ್ತೇನೆ ಧ್ಯಾನನಿರತನಾಗುತ್ತೇನೆ, ನಂತರವಾದರೂ ಚಹಾಮೃತವನ್ನು ಸವಿಯಬಹುದೆನ್ನುವ ಮಹಾ ಹಂಬಲದಿಂದ.ಮಜ್ಜನದಲಿ ತೊಯ್ಯುತ್ತೇನೆ.ತಾಳದ ಚಳಿ ಪಡೆದುಹೆಚ್ಚು ಚಹಾ ಹೀರಬಹುದೆಂಬ ಮಹದಾಸೆಯಿಂದಉಪಹಾರ ಸೇವಿಸುತ್ತೇನೆಜಠರಲದಲ್ಲಿನಿತು ಅವಕಾಶವನಿಟ್ಡು. ಸಾಧ್ಯವಾದಷ್ಟೂ ಅವಳನ್ನು ಕುಡಿದು ತುಂಬಿಕೊಳ್ಳಬೇಕೆಂಬ ಬಯಕೆಯಿಂದ.
ಸದಾ ತುಂಬಿಕೊಂಡೇ ನಶೆಯನ್ನೇರಿಸಿಕೊಳ್ಳುವ ಚಹಾದ ಮಗ್ಗನ್ನು ಕಂಡು ಅಸೂಯೆಪಟ್ಟಿದ್ದೇನೆ. ಸಂಸ್ಕರಿತ ಮಣ್ಣಿನ ಹೊಳೆಯುವ ಶ್ವೇತ ವರ್ಣದ ಪಿಂಗಾಣಿ ಮಗ್ಗಿನಲ್ಲಿಯ ಆಕೆಯ ತುಳುಕುವಿಕೆಯನ್ನು ಕಂಡು ಮೋದಿಸಿದ್ದೇನೆ. ಕೆಂಬಣ್ಣದ ಕೆನ್ನೆಯಂತಿರುವ ಅವಳ ಕೆನೆಯನ್ನು ಸವರಿ ಎತ್ತಿಕೊಂಡು ಚರ್ವಿಸಿದ್ದೇನೆ. ನಾಲಿಗೆ ಚಪ್ಪರಿಸಿ ರಸಾಂಕುರಗಳನ್ನು ಉದ್ದೀಪಿಸಿದ್ದೇನೆ.
ಹರಿವಂಶರಾಯ್ ಬಚ್ಚನ್ ರವರು-
"ನನ್ನ ಶೆರೆಯಲ್ಲಿ ಒಂದೊಂದುಹನಿ ಒಬ್ಬೊಬ್ಬರಿಗೂನನ್ನ ಪ್ಯಾಲೆಯೊಳಗೆಒಂದೊಂದು ಗುಟುಕು ಎಲ್ಲರಿಗೂನನ್ನ ಸಾಕಿಯೊಳಗೇಅವರವರ ಸಾಕಿಯರ ಸುಖ ಎಲ್ಲರಿಗೂಯಾರಿಗೆ ಯಾವ ಹಂಬಲವೊಹಾಗೇ ಕಂಡಳು ನನ್ನ ಮಧುಶಾಲಾ"ಎಂದು  ಮದಿರೆ ಹಾಗೂ ಮಧುಶಾಲೆಯನ್ನು ಕುರಿತು ಹಾಡಿದ ಕವಿತೆಯ ಸಾಲುಗಳು ನನ್ನ ಚಹಾ ಹಾಗೂ ಚಹಾಶಾಲೆಯನ್ನು ಕುರಿತ ಅನುಭವವನ್ನು ಹೋಲುತ್ತವೆ.  ಚಹಾಶಾಲೆಯಲ್ಲಿ ಕುಳಿತು ಚಹಾವನ್ನು ಮದಿರೆಯಂತೆ ಹೀರಿದ್ದೇನೆ. "ವಾಹ್ ತಾಜ್..." ಎಂಬ ತಬಲಾವಾದಕನ  ಚಹಾ ಹೀರುವ ದೃಶ್ಯದ ತುಣುಕು ನನಗೆ ಜಾಹೀರಾತಾಗಿ ಕಾಣಲೇ ಇಲ್ಲ, ಬದಲಾಗಿ ಚಹಾದ ತಾಜಾ ಸ್ವಾದ ಹಾಗೂ ನವೋಲ್ಲಾಸದ ಹೊಳೆಯ ಅಭಿವ್ಯಕ್ತಿಯಾಗಿ ಕಾಣುತ್ತದೆ. ಮೈಯ್ಯೊಳಗೆ ರುಧಿರದ ಬದಲಾಗಿ ಚಹಾವೇ ಪ್ರವಹಿಸುವಂತಿದ್ದರೆ ದಿನವಿಡೀ ಮನೋಲ್ಲಾಸದ ಮಡುವಿನಲ್ಲಿ ತೇಲಾಡಬಹುದಿತ್ತಲ್ಲ ನಶೆಯ ಗುಂಗಿನಲ್ಲಿಯೇ ಓಲಾಡಬಹುದಿತ್ತಲ್ಲ ಎಂಬ ದುರಾಸೆಯ ಕನಸಿನ ಬೆನ್ನು ಹತ್ತಿ ಕನವರಿಸಿದ್ದೇನೆ. ಊಟ,ಉಪಹಾರವಿಲ್ಲದೇ ಸರಾಗವಾಗಿ ಜೀವನ ನಡೆಸಬಹುದು ಆದರೆ ಚಹಾಕನ್ನಿಕೆಯ ದರ್ಶನವಿಲ್ಲದ ನನ್ನ ಹೃದಯ ಮತ್ತು ಮನಸ್ಸುಗಳು ಕ್ಷಣಕಾಲವೂ ಬದುಕಿರಲಾರವು ಎಂಬುದು ನನ್ನ ಅನುಭವದ ಸಾರ!! ದೇವತೆಗಳು ಭೂಲೋಕದಲ್ಲಿ ಆಕಸ್ಮಾತ್ ಆಗಿ ಮರೆತು ಬಿಟ್ಟು ಹೋದ ಸುಧೆಯ ಮೂಲರಸಾಯನವೇ ಚಹಾ ಇರಬಹುದು ಎಂಬ ನನ್ನ ದೃಢ ಕಪೋಲ  ಕಲ್ಪನೆಗೂ ರೆಕ್ಕೆ ಕಟ್ಟಿ ಹಾರಿಸಿದ್ದೇನೆ. ಶಿವರಾತ್ರಿಯ ಉಪವಾಸ ನನ್ನಿಂದ ಸಾಧ್ಯವಾಗುವುದು ಅಮೂರ್ತ ಶಿವನೆಡೆಗಿನ ಭಕ್ತಿಗಿಂತ ಹೆಚ್ಚಾಗಿ  ಈ ಚಹಾಯಣದ ಅಮೂರ್ತ ಸಾಂಗತ್ಯದ ಆಧ್ಯಾತ್ಮದಿಂದ; ಆಸ್ವಾದದ ಎದೆಯಗಾನದ ಲಹರಿಯಿಂದ ; ಚಹಾಮಾಯಿಯನ್ನು ಅಪ್ಪಿಕೊಳ್ಳುವ  ಸುಖಲೋಲುಪತೆಯಲ್ಲಿ ಕಳೆದುಹೋಗುವುದರಿಂದ; ಚಹಾರಾಣಿಯ ಮಡಿಲಲ್ಲಿ ಮೈಮರೆಯುವ ಅಂತರ್ಧ್ಯಾನದಿಂದ. ಒಂದು ಬಾರಿ ಮಹತ್ವದ ಕಾರ್ಯಕ್ಕಾಗಿ ತಹಶೀಲ್ದಾರರ ಭೇಟಿಗೆ ಅಂದು ತುರ್ತಾಗಿ ಹೋಗಲೇಬೇಕಾಗಿ ಬಂದಾಗ ಮನೆಯಲ್ಲಿ ಉಪಹಾರದ ನಂತರ ಸಮಯವಿಲ್ಲದಿದ್ದರೂ ನಾನು ಹೋಗಿದ್ದು ಯಥಾಪ್ರಕಾರ ಚಹಾದ ಸುಖವನ್ನು ಹೊತ್ತುಕೊಂಡೇ. ಶಾಲಾ ಕರ್ತವ್ಯ ಮುಗಿಸಿ ಸರ್ವ ಶಿಕ್ಷಕ ಬಳಗವೆಲ್ಲಾ ದಂಡಿಯಾಗಿ ನೆರೆಯುತ್ತಿದ್ದ ಬಸ್ ನಿಲ್ದಾಣದ ಹತ್ತಿರ ನಿಂತು ಬಳಗದವರನ್ನೆಲ್ಲಾ ಕರೆದು, ಒಲ್ಲೆ ಎಂದವರನ್ನೂ ಕೇಳದೇ ಕೈಹಿಡಿದು  ಹತ್ತಿರದ ಚಹಾಶಾಲೆಯಲ್ಲಿ ಚಹಾವನ್ನು ಸ್ವಾದಿಸಿ ಖುಷಿಪಟ್ಟಿದ್ದುಂಟು. ಮತ್ತೆ ಹೊರಬಂದ ನಂತರ ಯಾರಾದರೂ ಹೊಸಬರು ಬಂದರೆ ಅವರನ್ನೂ   ಕರೆದೊಯ್ದು ಚಹಾ ಹೀರಿಸಿ ನಾವೂ ಹೀರಿ ಅತಿಸುಖವನ್ನು ಪಡೆದದ್ದಿದೆ. ಹೀಗೆ ಸರಿಯಾಗಿ ಲೆಕ್ಕ ಹಾಕಿದರೆ ನಾವು ಆ ದಿನಗಳಲ್ಲಿ ಪ್ರತಿದಿನ ಆನಂದಿಸುತ್ತಿದ್ದ  ನಮ್ಮ ಚಹಾಪ್ರಣಯ ಪ್ರಸಂಗದ ವಿಲಾಸವನ್ನು ನೀವು ಊಹಿಸಿಕೊಳ್ಳಬೇಕು.

ಚಹಾ ಜಗತ್ತಿನ ಅದ್ವಿತೀಯ ರಸಾಯನಗಳಲ್ಲಿ ಒಂದು. ಆಧುನಿಕ ಜಗತ್ತಿನ ಬೆಡಗಿನ ಒಯ್ಯಾರಿಯ ಸೆಳೆತಕ್ಕೆ ಸಿಕ್ಕ  ಚಹಾರಾಣಿ  ಗ್ರೀನ್ ಟೀ  ಎಂಬ ಹೊಸ ದಿರಿಸು ತೊಟ್ಟು ಕುಣಿಯುತ್ತಿದ್ದಾಳೆ. ಶುಂಠಿಯ ಕಷಾಯ, ಹೊನ್ನಂಬರಿ ಹೂಗಳ ಕಷಾಯ, ತುಳಸಿ ಕಷಾಯ, ಬೆಲ್ಲದ ಕಷಾಯ, ದಂತಹ ತರಹೇವಾರಿ ರೂಪಗಳನ್ನು ಹೊಂದಿರುವ ಈಕೆಯ ಬಿನ್ನಾಣಕ್ಕೆ ವೈದ್ಯಕೀಯ ಮಹಾಪರಂಪರೆಯ ಸೊಗಡಿದೆ.
ಮನೆಮದ್ದುಗಳಿಗೆಲ್ಲ ರಸರಾಣಿಯಾಗಿರುವ ಇವಳ ಸೌಗಂಧವೇ ಹಲವಾರು ಆಗಾಗ್ಗೆ ಬಂದುಹೋಗುವ  ಅತಿಥಿ ರೋಗಗಳನ್ನು ಗುಣಪಡಿಸಬಲ್ಲ ರಸೌಷಧಿ. ಶೀತವಾದಾಗ ನನ್ನವ್ವನ ಕೈಯ್ಯಲ್ಲಿ ಶುಂಠಿಯ ಕಷಾಯವಾಗುವ ಇವಳ ಘಾಟುತನ, ದೇಹ ಉಷ್ಣದಿಂದ ಬಳಲಿದಾಗ ಬೆಲ್ಲದ ಕಷಾಯವಾಗಿ ರೂಪು ಪಡೆಯುವ ಇವಳ ಮಾಧುರ್ಯ, ತಲೆನೋವೆನಿಸಿದಾಗ ಹೊನ್ನಂಬರಿ ಹೂಗಳ ಕಷಾಯದ ರೂಪದಲ್ಲಿ ನಾಲಿಗೆಯನ್ನಾವರಿಸುವ ಸವಿ, ಅಲರ್ಜಿಯಾದಾಗ ಮಸಾಲೆಯ ಕಷಾಯವಾಗಿ ಬರುವ ಇವಳ ಮಸಾಲೆಯ ಕಂಪುಗಳೀಗಲೂ ನನ್ನ ನಾಲಿಗೆಯ ರಸಗ್ರಹಣಿಗಳ ತುದಿಯ ಮೇಲೆ ಕುಣಿಯುತ್ತಿವೆ.  ಮನದ ಮೂಲೆಯಲ್ಲಿ ಇವುಗಳ ಆಸ್ವಾದನೆಯ ಸುವಾಸನೆ ಹಾಗೂ ರಸರುಚಿ ಸದಾ ಹಚ್ಚ ಹಸಿರಾಗಿ ಕಾಡುತ್ತಲೇ ಇರುತ್ತವೆ.  ಚಹಾ ಸಿಗದ ನಾಡಿಗೊಮ್ಮೆ ಪ್ರವಾಸ ಹೋಗಿದ್ದೆ. ಕೆಲವು ದೂರ ನಡೆದು ಎದುರಾದ ಗೂಡಂಗಡಿಗೆ ಗೆಳೆಯರೊಂದಿಗೆ ತೆರಳಿ " ಚಹಾ ಕೊಡಿ "  ಎಂದರೆ " ಚಹಾ ಮಾಡಲ್ಲ ಸರ್ " ಎಂದುಬಿಡಬೇಕೆ?  ಸುಮಾರು ಊರುಬಿಟ್ಟು ೩೦೦ ಕಿಲೋಮೀಟರ್ ದೂರದೂರು ತಲುಪಿದ ಪ್ರಯಾಣದ ಆಯಾಸವನ್ನು ಕಳೆದುಕೊಳ್ಳಬೇಕೆಂದರೆ ಚಹಾರಾಣಿಯ ಸುಳಿವೇ ನಮಗೆ ದಕ್ಕಲಿಲ್ಲ ಸಪ್ಪೆ ಮೋರೆ ಹಾಕಿಕೊಂಡು ಮತ್ತೆ ಮುಂದೆ ನಡೆದೆವು. ಆ ಊರು ಬಿಟ್ಟು ಬೇರೊಂದು ಊರಿಗೆ ಬಂದಾಗ ಓಯಸಿಸ್ ನಂತೆ ಎದುರಾದ  ಚಹಾಕನ್ನಿಕೆಯ ಆಲಿಂಗನದಿಂದ ಮುದ ಪಡೆದು ಚೈತನ್ಯಶೀಲರಾದೆವು.

ನಾನು ಡಿಇಡಿ ವ್ಯಾಸಂಗದ ನಿಮಿತ್ತ ಬೆಂಗಳೂರಿನ ವಿಜಯನಗರದ ವಸತಿನಿಲಯವೊಂದರಲ್ಲಿ ಎರಡು ವರ್ಷಗಳ ಆಶ್ರಯ ಪಡೆದಿದ್ದೆ. ನಿಲಯದಲ್ಲಿ ಚಹಾಸಂಸ್ಕೃತಿಯೇ ಇಲ್ಲದ್ದರಿಂದ  ಎಲ್ಲ ವಿದ್ಯಾರ್ಥಿಗಳು ಮುಗ್ಧತೆಯಿಂದ ಒಗ್ಗಿಕೊಂಡು ನಿರಾಳವಾಗಿದ್ದರೆ, ನಾನು ಮಾತ್ರ ಒಳಗೊಳಗೆ ಚಡಪಡಿಸುತ್ತಿದ್ದೆ. ಉಪಹಾರ ಭೋಜನಗಳಿಲ್ಲದ ಹಾಸ್ಟೆಲ್ ನಲ್ಲಿ ಬೇಕಾದರೆ ಇದ್ದು ಜಯಿಸಬಲ್ಲೆ  ಆದರೆ ಚಹಾ ಕೊಡದ ವಸತಿನಿಲಯದಲ್ಲಿ ಹೇಗಿರುವುದು?  ಎಂದುಕೊಂಡು ಬಹುಕಾಲ ಕಸಿವಿಸಿಪಟ್ಟಿದ್ದೇನೆ. ವಿದ್ಯಾಭ್ಯಾಸದ ಕನಸನ್ನು ನನಸು ಮಾಡಿಕೊಳ್ಳಲಿರುವ ಏಕೈಕ ಆಸರೆಯನ್ನು ಚಹಾಗೋಸ್ಕರ ತಿರಸ್ಕರಿಸುವ ಶಕ್ತಿ ಇಲ್ಲದ್ದರಿಂದ ಅನಿವಾರ್ಯವಾಗಿ ವಸತಿನಿಲಯದ ವಾತಾವರಣಕ್ಕೆ ಹೊಂದಿಕೊಂಡು ಪರ್ಯಾಯ ದಾರಿಯೊಂದನ್ನು ಕಂಡುಕೊಂಡೆ. ಪ್ರತಿದಿನ ಬೆಳಿಗ್ಗೆ   ಹಾಗೂ ಸಂಜೆ ಚಹಾರಾಣಿಯ ಭೇಟಿಗಾಗಿ ಒಂದು ಪ್ರಶಸ್ತವಾದ  ಭಟ್ಟರ ವಿಶೇಷ ಚಹಾಶಾಲೆಯೊಂದನ್ನು ( ಕೆಫೆ) ಗುರ್ತಿಸಿಕೊಂಡೆ.
ಪ್ರತಿದಿನ ಕಾಲೇಜು ಮುಗಿದ ನಂತರ ಮುಸ್ಸಂಜೆಯ ಮುಖಮಜ್ಜನದಲ್ಲಿ ಮಿಂದು ನವೋಲ್ಲಾಸದ ಮನಸು ಹೊತ್ತು  ವಾಯುವಿಹಾರಕ್ಜೆ ಹೊರಟೆನೆಂದರೆ ಅದು ಕೊನೆಯಾಗುವುದು ಚಹಾಮಣಿಯ ಲೀಲಾವಿಲಾಸದ ಸಮಾಗಮದೊಂದಿಗೆ ಎಂಬುದು ನಿಶ್ಚಿತವಾಯಿತು. ಹೀಗೆ ಕೆಲವು ದಿನ ಕಳೆದವು. ಪ್ರಾರಂಭದಲ್ಲಿ ಚಹಾಶಾಲೆಯ ಚಹಾ ಮೊದಲಿಗೆ ಸಪ್ಪೆಯೆನಿಸುತ್ತಿತ್ತು. ದಿನಗಳೆದ ನಂತರ ಚಹಾಶಾಲೆಯ ಮಾಣಿಯೊಂದಿಗೆ ಸ್ನೇಹ ಮಧುರವಾಗುತ್ತಾ ಹೋದಂತೆ  ನಮ್ಮ ಚಹಾಷೋಡಶಿಯು ಸಿಹಿಯಾಗುತ್ತಲೇ ಹೋದಳು. ಮಾಣಿಯೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಾ ಪುಸಲಾಯಿಸಿ ಬೇಕಾದಷ್ಟು ಸಕ್ಕರೆಯನ್ನು ಬೆರೆಸುವಂತೆ ಮಾಡಿ ಚಹಾರಾಣಿಯ ನೈಜ  ಸ್ವಾದವನ್ನು ಅನುಭವಿಸತೊಡಗಿದೆ. ಚಹಾರಾಣಿಯ ದರ್ಶನ ಅಪರೂಪವೆಂಬಂತಿದ್ದ ಕಾಫಿಜಗತ್ತಿನಲ್ಲಿ ಚಹಾಜೇನು ಸವಿದ ಆನಂದ ಪಡೆದು ತೇಲಾಡತೊಡಗಿದೆ.  ಹೀಗೊಂದು ದಿನ ಸಂಜೆ ಯಥಾಪ್ರಕಾರ ಚಹಾಶಾಲೆಯತ್ತ ಹೊರಟಾಗ ಜೇಬಿನಲ್ಲಿ ಬಿಡಿಪೈಸೆಯೂ ಇರಲಿಲ್ಲ. ಗೋಧೂಳಿಯ ಮುಹೂರ್ತ ಮೀರುವ ಮಹತ್ವದ ಘಳಿಗೆಯಲ್ಲಿ ಚಹಾರಾಣಿ ನನಗಾಗಿ ಕಾಯುತ್ತಿದ್ದಾಳೆ. ಮನಸು ಅವಳದೇ ನೆನಪಿನಲ್ಲಿ ಪಿಸುಗುಟ್ಟಿ ತೊಳಲಾಡುತ್ತಿದೆ. ಮನಸ್ಸು ಆಕೆಯನ್ನು ಬಿಟ್ಟು ಕದಲೊಲ್ಲದು. ಅತ್ತ ಊರಿನಿಂದ ಬರಬೇಕಾಗಿದ್ದ ಅವ್ವ ಕಳಿಸಿದ ದುಡ್ಡು ಇನ್ನೂ ತಲುಪಿರಲಿಲ್ಲ. ಏನು ಮಾಡುವುದು ಎಂದು ತೋಚದಾದಾಗ ಗೆಳೆಯನೊಬ್ಬನ ಹತ್ತಿರ 'ಸಾಲ ಮಾಡಿಯಾದರೂ ತುಪ್ಪ ತಿನ್ನು' ಎಂಬಂತೆ ಸಾಲ ಪಡೆದಾದರೂ ಅವಳ ಸಂಗಡ ಈ ಸಂಜೆ ಮಾತಿಗಿಳಿಯಲೇಬೇಕು. ನನ್ನೆದೆಯೊಳಗೆ ಅವಳ ಮಾತಿನ ಸವಿಯನ್ನಿಳಿಸಿಕೊಂಡು  ಕಾಪಿಟ್ಟುಕೊಳ್ಳಲೇಬೇಕಾಗಿತ್ತು. ಹೀಗೆ ಅವಳತ್ತ ವಿಭವದಿಂದ  ಜಾರುವ ಮನದ ನೂರಾರು ಮಾತುಗಳನ್ನು ಅಂತರಾಳದಲ್ಲಿ ಕಟ್ಟಿಕೊಂಡೇ  ನೂರು ರೂಪಾಯಿ ಸಾಲ ಪಡೆದು ನೇರವಾಗಿ ಅವಳಿರುವಲ್ಲಿಗೆ  ಹೋಗಿ ಅವಳೊಂದಿಗೆ ಸಲ್ಲಾಪಕ್ಕಿಳಿದೆ. ಗುಟುಕು ಗುಟುಕಾಗಿ ಅವಳೊಂದಿಗೆ ಹಂಚಿಕೊಂಡ ರಸನಿಮಿಷಗಳನ್ನು  ಅಂತರಂಗದಲ್ಲಿಳಿಸಿಕೊಂಡು ಹರ್ಷಗೊಂಡೆ. ಇಂತಹ ಸವಿಸಮಯವನ್ನು ಕದ್ದೊಯ್ದು ಕಳೆದುಕೊಳ್ಳುವಂತೆ ಮಾಡುತ್ತಿದ್ದ ಆರ್ಥಿಕ  ದುರಾದೃಷ್ಟವನ್ನು ನೆನೆದು  ಶಪಿಸಿಕೊಂಡೆ. ಹೀಗೆ ಸಾಗಿತ್ತು ಚಹಾಸಖಿಯೊಂದಿಗಿನ ನನ್ನ ಪ್ರಣಯಗೀತೆ. ಮತ್ತೊಮ್ಮೆ  ಕೈಯ್ಯಲ್ಲಿ ಹಣವಿಲ್ಲದ ಬಡಪಾಯಿ ಪರಿಸ್ಥಿತಿಯೊದಗಿ ಬಂದಾಗ ನೇರವಾಗಿ ಚಹಾಶಾಲೆಯ ಮಾಲೀಕ ಭಟ್ಟರ ಹತ್ತಿರವೇ ನನ್ನ ಹೆಸರಿನ ಮೌಖಿಕ ಖಾತೆಯೊಂದನ್ನು ತೆರೆದು ಸಾಲ ಕೇಳಿದ್ದೆ. ಅವರ ದೃಷ್ಟಿಯಲ್ಲಿ ಯಕಃಶ್ಚಿತ ಚಹಾದ ಸಾಲವಾಗಿದ್ದರೆ, ನನಗದು ಚಹಾ ರಾಣಿಯೊಂದಿಗೆ ಸಮಯ ಕಳೆಯಲು  ಅಡೆತಡೆಯಿಲ್ಲದೆ ಕನಿಷ್ಠ ಹಣದ ಭಯವಿಲ್ಲದೆಯೂ ಚಹಾಶಾಲೆಯನ್ನು ಮುನ್ನುಗ್ಗಲು ಅಧಿಕೃತ ಲೈಸೆನ್ಸ್ ದೊರೆತಂತಾಗಿತ್ತು. ಯಾರ ಅಪ್ಪಣೆಗೂ ಕಾಯದೇ ಸಂಜೆಯನ್ನು ಸಾರ್ಥಕಗೊಳಿಸಿಕೊಳ್ಳುವ ನನ್ನ ಪ್ರಯತ್ನಕ್ಕೆ ತಾತ್ಕಾಲಿಕ ಯಶಸ್ಸು ದೊರೆತಿತ್ತು. ಕೊನೆ ಕೊನೆಗೆ ಚಹಾರಾಣಿಯೊಂದಿಗಿನ ಬಿಡುವಿಲ್ಲದ ಸಹವಾಸ ಕಂಡ ಭಟ್ಟರು ಚಹಾಶಾಲೆಯ ಖಾಯಂ ಗಿರಾಕಿಯೆಂದುಕೊಂಡು ಸಾಲವನ್ನು ಬರೆದುಕೊಳ್ಳಹತ್ತಿದರು.
ಚಹಾಕಿಶೋರಿಯೊಂದಿಗಿನ ನಮ್ಮ ಅವಿನಾಭಾವ ಸಂಬಂಧವನ್ನು ಕಂಡ ಮಾಲೀಕ ನಮಗೆ ಆರ್ಥಿಕ ಸಂಕಷ್ಟ ಎದುರಾದಾಗ ಹಣದ ಸಾಲವನ್ನೂ ನೀಡಿ ಕೈಹಿಡಿದು ಮುನ್ನಡೆಸಿದನೆಂದರೆ, ಚಹಾದ ಸಂಗ ಹೆಜ್ಜೇನು ಸವಿದಂತಾಗಿತ್ತು ನನಗೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಾತ್ರ ಮಲ್ಲಿಗೆಯಿರಲೇಬೇಕೆಂಬಂತಾಗಿತ್ತು ಚಹಾದೆಡೆಗಿನ ನನ್ನ ಪ್ರೀತಿ.
ಹೀಗೆ ಎರಡು ವರ್ಷದ ಬೆಂಗಳೂರಿನ ಚಹಾಬೆಡಗಿಯ ಸಾಂಗತ್ಯ ನನಗೆ ಚಹಾಶಾಲೆಯ  ಹೊಸ ಆಪ್ತ ಗೆಳೆಯರನ್ನು ಪರಿಚಯಿಸಿತ್ತು.
ಮನೆಯಲ್ಲಿನ ಹಿಂಡು ಮಂದಿಗೆ ಮಾಡುವ ಚಹಾ ನನಗೆ ಅಷ್ಟಾಗಿ ಸೆಳೆಯುತ್ತಿರಲಿಲ್ಲ. ಪರಿಹಾರವಾಗಿ ಮನೆಮಂದಿಗೆಲ್ಲ ಚಹಾ ತಯಾರಿಸುವ ಪಾಠವನ್ನು ಆಗಾಗ ಪ್ರಾತ್ಯಕ್ಷಿಕೆಯ ಮೂಲಕ   ಹೇಳಿಕೊಟ್ಟಿದ್ದಿದೆ. ಹದಬೆರೆತ  ರಸಾಯನವೇ ನನಗಿಷ್ಟವೆಂದು ಅವ್ವ ನನಗಾಗಿ ಮಾಡುವ ಚಹಾ ಗಾಗಿ ಕಾದು ಕುಳಿತಿರುತ್ತಿದ್ದೆ. ಅಂದು ಚಹಾಗೆಳತಿಯ ದರ್ಶನವಾಗದಿದ್ದಾಗ ಚಡಪಡಿಸಿ ಅಡುಗೆಮನೆಗೆ ಹೋಗಿ  ಬೆಳದಿಂಗಳು ಬಣ್ಣದ ಹಾಲಿನಲ್ಲಿ ಕೆಂಬಣ್ಣದ ಚಹಾದೆಲೆಗಳನ್ನುದುರಿಸಿ ಅಗ್ನಿಹಂಸದ ತೂಲಿಕಾತಲ್ಪದಲಿಟ್ಟು ಚೆನ್ನಾಗಿ ಕುದಿಸುತ್ತಾ ತಪದಂತೆ ಕಾದಿದ್ದೇನೆ.ನನ್ನ ಮೇಲಿನ  ಪ್ರೀತಿಯುಕ್ಕಿ ಪಾತ್ರೆಯೊಳಗಿಂದ ಮೇಲೆ ಹಸನ್ಮುಖಿಯಾಗಿ ಬಂದ ನೊರೆಯ ಮುತ್ತುಗಳನ್ನು   ಕಂಡು ಹರ್ಷಗೊಂಡಿದ್ದೇನೆ. ಕೊನೆಗೆ ಹದವಾದ ಸಕ್ಕರೆಯನ್ನು ಬೆರೆಸಿ ಘಮಘಮಿಸುವ ಪರಿಮಳದಲ್ಲಿ ಮೈಮರೆತು ಸಮಾಧಿಗೇರಿದ್ದೇನೆ. ಶೋಧಿಸುವಾಗ ಹೊರಟ ಸುಮಧುರ ಸುವಾಸನೆಯನ್ನು ಹೀರಿ ಸಂಭ್ರಮಿಸಿದ್ದೇನೆ. ಶ್ವೇತಸುಂದರಿಯಂತಿರುವ ಮಗ್ಗಿನೊಳಗೆ ಒಯ್ಯಾರದಿಂದ ನರ್ತಿಸಿತ್ತಿದ್ದ ಹಾಲುಗೆನ್ನೆಯ ಚಹಾಚೆಲುವೆಯನ್ನು ಕಂಡು ಹಿಗ್ಗಿದ್ದೇನೆ.

ಚಹಾ ಎಂಬುದು ನನ್ನ ಪಾಲಿಗೆ ಕೇವಲ ಕರ್ಮೋಪಚಾರಕ್ಕಾಗಿ ಸೇವಿಸುವ ಭೌತಿಕ ದ್ರಾವಣವಲ್ಲ. ಯಾಂತ್ರಿಕವಾಗಿ ಕ್ಷಣಮಾತ್ರ ಭುಜಿಸಿ ಮತ್ತೆ ಅರೆಗಳಿಗೆಯಲ್ಲಿ ಮರೆತುಬಿಡುವ  ಹಾಲು ಸಕ್ಕರೆಗಳ ಮಿಶ್ರಣ ಮಾತ್ರದ ರಸಾಯನವಲ್ಲ. ಕೇವಲ ಆಯಾಸ ಕಳೆಯಲಿಕ್ಕಾಗಿ ಇರುವ ಉಪಚಾರದ ಪಾನೀಯವೂ ಅಲ್ಲ .ಚಹಾ ಎಂದರೆ ನನ್ನೊಳಗೆ ಸದಾ ರಿಂಗಣಿಸುವ ಪ್ರಣಯಗೀತೆ; ಹೃದಯದೊಳಗೆ ಜುಳು ಜುಳು ಎಂದು ಹರಿಯುವ ಝರಿಯ  ನಿನಾದ; ಮನದೊಳಗೆ ಕೋಗಿಲೆಯ ಧ್ವನಿಯಂತೆ ಇಳಿಯುವ ರಸಗಾನ; ಮನಕಡಲಿನ ಮೇಲೆ ಕುಣಿಯುವ ಅಲೆಗಳ ಬಣ್ಣಿಸಲಾಗದ ಮೌನರಾಗದ ಮೊರೆತ; ಗುಟುಕು ಗುಟುಕಾಗಿ  ನಾಲಿಗೆ ಚಪ್ಪರಿಸಿ ಹೀರಿ ಅದರಲ್ಲಿಯೇ ಲೀನವಾಗುವಂತೆ ಸೆಳೆಯುವ ಅಮೃತಧಾರೆಯ ಜೇನಹನಿ; ನೆನಪು ಮಾತ್ರದಿಂದಲೇ ಚಿಮ್ಮಿ ಉತ್ಸಾಹ ಉಕ್ಕಿಸುವ ಚಿಲುಮೆಯೊರತೆ. ಚಹಾ ಎಂದರೆ ಭಾವದೊಳಗಿನ ಬಂಧುರ ಒಲವಿನೊಳಗಿನ ಮಂದಾರ. ಶ್ರಾವಣದ ಇಳೆ ಮಳೆಗಳೊಂದಿಗಿನ ಅನುಸಂಧಾನ ಬೇಂದ್ರೆಯವರಂತಹ ಆರಾಧಕರಲ್ಲಿ ಕಾವ್ಯದ ಮೂಲಕ ಸಾಧ್ಯವಾಗಿದೆ. ಕವಿಸೂರಿಗಳದು ಪ್ರಕೃತಿ ಆರಾಧನೆಯಾದರೆ ನನ್ನದು ಚಹಾರಾಧನೆ. ಆಷಾಢದ ಜಿಟಿ ಜಿಟಿ ಜಡಿ ಮಳೆಯಲ್ಲಿ  ಚಹಾಶಾಲೆಯ ಮುಂದೆ ನಿಂತು ಬಿಸಿ ಬಿಸಿಯಾದ ಚಹಾಮಾಯಿಯ ಹನಿ ಹನಿಯ ಗುಟುಕುಗಳ ಮಾಯೆಗೆ ಕರಗುವುದೆಂದರೆ  ಪ್ರಕೃತಿಯಲ್ಲಿನ ಪಾರಮಾರ್ಥಕ್ಕೆ ಪಯಣ ಹೊರಟಂತೆ. ಚಹಾರಾಣಿಯೊಂದಿಗಿನ ಎನ್ನ ಒಡನಾಟ ಇಂದು ನಿನ್ನೆಯದಲ್ಲ, ನನ್ನೆದೆಯೊಳಗೆ ಇಷ್ಟೊಂದು ಆಳವಾಗಿ ಮೈಚಾಚಿಕೊಂಡು ಹರಡಿ ಮೈಮನಗಳನ್ನು ತುಂಬಿಕೊಂಡಿರುವ ಇದರ ಭಾವಗೀತೆಗಳ ಆಲಾಪವನ್ನು ಬಾಲ್ಯದಿಂದಲೂ ಆಲಿಸಿಕೊಂಡು ಬಂದಿದ್ದೇನೆ.
ಇಲ್ಲಿಯವರೆಗೂ ಆಕೆ (ಚಹಾಮಾಯಿ) ಕಟ್ಟಿಕೊಟ್ಟಿರುವ ಸವಿನೆನಪುಗಳನ್ನು ರೆಕ್ಕೆ ಮೂಡುವವರೆಗೂ ನನ್ನದೆಯ ಗೂಡಿನಲ್ಲಿ ಮರಿಹಕ್ಕಿಗಳಂತೆ ಜತನದಿಂದ ಕಾಪಿಟ್ಟುಕೊಂಡು ಬಂದಿದ್ದೇನೆ.ಭಾವಗಳಿಲ್ಲದೇ ಬತ್ತಿ ಕೊರಡಾಗುವ ಘಳಿಗೆ ಎದುರಾದಾಗ, ಈ ನೆನಪುಗಳನ್ನು ಹೆಕ್ಕಿ ತೆಗೆದು ಆನಂದಿಸಿ, ಮತ್ತೆ ಮತ್ತೆ ಚಹಾ ರಾಣಿಯ ಸಾಂಗತ್ಯವನ್ನು   ಸವಿದಿದ್ದೇನೆ. ನನ್ನಲ್ಲಿ ಚಹಾ ಹುಟ್ಟಿಸಿದ ಭಾವಯಾಣ ಅನುಪಮವಾದದ್ದು, ಅನೂಹ್ಯವಾದದ್ದು. ಆರೋಗ್ಯದ ಲಯ ತಪ್ಪಿದಾಗ ಚಹಾ ತ್ಯಜಿಸಬೇಕೆಂದು ಹೇಳಿದ
ವೈದ್ಯರನ್ನು " ನಿಮಗೇನು ಗೊತ್ತು ಚಹಾದ ಗಮ್ಮತ್ತು ಕುಡಿದರಿಲ್ಲ ಜೀವಕೇನೂ ಆಪತ್ತುಬಿಟ್ಟರೆ ನನಗೆ ಅದೇ ವಿಪತ್ತುಸವಿಯಲು ನನಗಿಲ್ಲ ಹೊತ್ತು ಗೊತ್ತು ಎತ್ತಣ ಮಾಮರ ಎತ್ತಣ ಕೋಗಿಲೆ ?" ಎಂದು ಹೀಗಳೆದಿದ್ದೇನೆ.  ಬಹುಶಃ ಚಹಾ ಸೇವನೆಯಲ್ಲಿ ತಪ್ಪಿದ ಲಯವೇ ಆರೋಗ್ಯವನ್ನು ಹದಗೆಡಿಸಿರಬೇಕು ಎಂಬ ಬಲವಾದ ನಂಬಿಕೆ ನನ್ನದು!
"ನೀನೆಂದರೆ ಮಧುರಗಾನಸವಿಜೇನಿನ ರಸಪಾನಹಿಗ್ಗುತಿರುವೆ ಮನದುಂಬಿಹೊರಟಿರುವೆ ಭಾವಯಾಣ
ಹಾಲುಗೆನ್ನೆಯ ಚೆಲುವೆಕೆಂಬಣ್ಣದ ಮೈಮನವೆಇಳಿದು ಬಾ ಮಹಾರಾಣಿದೇವಲೋಕದ ಸುರಪಾಣಿ
ಮಹಾದಿವ್ಯದ ಸಂಗತದಿವದೆಡೆಗಿನ ನವನೀತನಿನ್ನೊಲುಮೆಯ ಕೈಸೆರೆನನ್ನನಾಳುವ ಸುಮಧುರೆ
ಮುತ್ತು ರತ್ನ ಹವಳ ನೊರೆಕೇಳುತಿರು ನನ್ನ ಮೊರೆಮಹಾಸಂಗಮ ಆಲಿಂಗನಎದೆಯುಕ್ಕುವ ರಸಚೇತನ
ಮಾಧುರ್ಯದ ರಸಪಾಕಚಹಾಶಾಲೆಯೇ ಸವಿನಾಕ
ಎಂದು ಚಹಾಷೋಡಶಿಯೊಂದಿಗಿನ ಪಿಸುಮಾತು ನನ್ನಲ್ಲಿ ಹರ್ಷೋಲ್ಲಾಸದ ಹೊಳೆಯನ್ನು ಹರಿಸುತ್ತದೆ. ಘಳಿಗೆಗೊಮ್ಮೆಯ ಆಕೆಯ ಭೇಟಿ  ಎನ್ನ  ಹೃದಯವನ್ನು ರಸಾನಂದದ ಕಡಲಾಗಿ ಪರಿವರ್ತಿಸುತ್ತದೆ.ಚಹಾರಾಣಿಯನ್ನು ನೆನೆದಾಗಲೆಲ್ಲಾ -
"ಹರಿಯಬೇಕು ಆಕೆ ಕರೆದಲ್ಲಿಹೊರಡಬೇಕು ಆಕೆ ಬಯಸಿದಲ್ಲಿನಡೆಯಬೇಕು ಜೊತೆಯಾಗಿಕೈಹಿಡಿದು ಮಾತಾಗಿಸಲ್ಲಾಪದ ಸವಿಜೇನುಸವಿಯಬೇಕು ಎದೆತುಂಬಿಗುಟುಕು ರಸ ತಣಿಯಬೇಕುಹೀರಿ ಮತ್ತೆ ನೆನೆಯಬೇಕು
ಎಂದು ಪದೇ ಪದೇ ಆಕೆಯ ಸುತ್ತ ಸುಳಿದು ಸೇವಿಸಲೇಬೇಕೆನ್ನಿಸುತ್ತದೆ. ನನಗೆಚಹಾಸೇವನೆ ಎಂದರೆ ನಿತ್ಯ ವೈಭವದ ಮೆರವಣಿಗೆಯ ಮಹಾನವಮಿ ಹಬ್ಬವಾಚರಿಸಿದಂತೆ. ಬಿದಿಗೆಯ ಚಂದ್ರನ ಬೆಳ್ಳಿಯ ಬೆಳಕು ಅಂತರಾಳಕ್ಕಿಳಿದು ಹೊಳೆದು ಬೆಳಗಿದಂತೆ. ಚೈತನ್ಯದ ಕಡಲುಕ್ಕಿ  ಅಲೆ ಅಲೆಯಾಗಿ ಹರಿದು ನಾದಗೈದು ವಿಜೃಂಭಿಸಿದಂತೆ.
"ಮುಗ್ಧ ಮಗುವಿನಂತೆ ಚಹಾವೇಣಿಯ ಮೊಗ್ಗು  ಹಿಡಿದು ಮೇಲೆತ್ತಿ ಬಾಯಿಚಪ್ಪರಿಸಿ ನಾಲಿಗೆ ಸವರಿದಾಗಲೇ ರಸರುಚಿಯ ದರ್ಶನಾನುಭವ ದಕ್ಕುವುದು. ರಸಾಂಕುರಗಳಿಗೆ ನೈಜ ರಸಾನುಭವದ ಸಾಕ್ಷಾತ್ಕಾರವಾಗುವುದು. ಭಾವಗಳ ಮುಗ್ಧತೆ ಹೇಗೆ ಕಾವ್ಯವೊಂದರ ಹುಟ್ಟಿಗೆ ಕಾರಣವಾಗಬಲ್ಲದೋ ಹಾಗೆ ಪೂರ್ವಾಗ್ರಹಗಳಿಲ್ಲದೇ,  ಮುಗ್ಧತೆಯಿಂದ ಹೀರುವ ಚಹಾದ  ಸ್ವಾದಸುಖವೂ ಕಾವ್ಯಾನಂದವನ್ನು ಹುಟ್ಟಿಸಬಲ್ಲದು. ಕಾವ್ಯ ಮತ್ತು ಚಹಾಗಳ ಅದೈತ ಸಂಗಮಸುಖವನ್ನು ಶ್ರಧ್ಧೆಯಿಂದ ಅನುಭವಿಸಿದ್ದೇನೆ ನಾನು. ವೈದೇಹಿಯವರ
"ತಿಳಿಸಾರು ಎಂದರೆ ಏನೆಂದುಕೊಂಡಿರಿ?ಅದಕ್ಕೂ ಬೇಕು ಒಳಗೊಂದು ಜಲತತ್ವ-ಗಂಧತತ್ವ -ಕುದಿದು ಹದಗೊಂಡ ಸಾರತತ್ವ "
ಎಂಬ  ಕಾವ್ಯಾಲಾಪದಂತೆ ಸಕ್ಕರೆ ಹಾಲು, ಚಹಾದೆಲೆಗಳು ಹದವಾಗಿ ಬೆರೆಯಲು ಗಂಧತತ್ವ ಜಲತತ್ವ ಹಾಗೂ ಸಾರತತ್ವಗಳ ತಿಳುವಳಿಕೆ ಅತ್ಯಗತ್ಯ. ಈ  ತ್ರಿವಿಧ ಸಂಗತಿಗಳ ಹದಭರಿತ ಸಮರಸದ ಸಂಗಮವೇ ಚಹಾರಸಾಯನದ ತಿರುಳು.
ನನ್ನೂರು ಗುಳೇದಗುಡ್ಡ  ನೇಕಾರಿಕೆಯ ನೂಲಿನ ಬಳ್ಳಿಯನ್ನೆ  ತಮ್ಮ ಬದುಕಿನ ಸುತ್ತ ಹಬ್ಬಿಸಿಕೊಂಡ ಕರಕುಶಲಿಗರ ನಾಡು. ರಂಗಭೂಮಿ, ಬಯಲಾಟ, ಸಂಗೀತ,ಚಿತ್ರಕಲೆ ಗಳೊಂದಿಗೆ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯ ಚಾಲುಕ್ಯರಾಳಿದ ಬೀಡು. 
ಇಂತಹ ಹೊನ್ನಾಡಿನಲ್ಲಿ  ಕುಶಲೋದ್ಯಮದ ಜೊತೆಜೊತೆಗೆ ಚಹಾಸಂಸ್ಕೃತಿಯೊಂದು ಮೈದಾಳಿರುವುದು ಇಲ್ಲಿಯ ವಿಶೇಷ. ಪ್ರತಿ ಒಂದು ಮೀಟರ್ ನೇಯ್ಗೆಗೊಂದು ಕಪ್ ಚಹಾ ಈ ಕರ ಕುಶಲಿಗರ ದೇಹದ ದೇಗುಲಕ್ಕರ್ಪಣೆಯಾಗಲೇಬೇಕು. ಒಂದು ಹೊತ್ತಿನ ಉಪಹಾರ, ಭೋಜನವಿರದಿದ್ದರೂ ನಡೆದೀತು ಆದರೆ ಚಹಾ ಇರದ ಕ್ಷಣಗಳನ್ನು ಈ ಕುಶಲಿಗಳು ಕಳೆಯಲಸಾಧ್ಯವೆನ್ನುವಷ್ಟರ ಮಟ್ಟಿಗೆ ಇಲ್ಲಿಯ ಬದುಕು ಚಹಾಗೊಡ್ಡಿಕೊಂಡಿದೆ. ಪೂರ್ವಾಶ್ರಮದ ನೇಯ್ಗೆಯ ಪ್ರಭಾವವೋ ಏನೋ ಘಳಿಗೆಗೊಮ್ಮೆ  ನನ್ನವ್ವನಿಗೆ ಹಾಗೂ ನನಗೆ ಚಹಾ ಅಮೃತ ಚೈತನ್ಯವನ್ನು ನೀಡಲೇಬೇಕು. ನನ್ನ ಮನೆಯ ಪಕ್ಕದ ಚಹಾಶಾಲೆಯಲ್ಲಿ ಚಹಾದ ದರ ಈಗಲೂ ೨ ರೂಪಾಯಿಗಳೆಂದರೆ ಚಹಾ ಎಷ್ಟೊಂದು ಅಗ್ಗದ ಸಂಗತಿಯಾಗಿ ನನ್ನೂರನ್ನು ಆವರಿಸಿಕೊಂಡಿದೆ  ಎಂಬುದನ್ನು ಅರ್ಥೈಸಿಕೊಳ್ಳಬಹುದು. ಡಾ.ರಾಜಶೇಖರ ಮಠಪತಿ (ರಾಗಂ) ರವರು, ಹದಿನಾರು ವರ್ಷಗಳ ನಂತರವೂ  ಒಂದೇ ಒಂದು ಪೈಸೆಯಷ್ಟು ಬೆಲೆಯನ್ನೂ ಹೆಚ್ಚಿಸಿಕೊಳ್ಳದ ರೂ. ೨ ರ ಒಂದು ಕಪ್  ಚಹಾ ಹಾಗೂ 'ಚಟಕ್ ಪಟಕ್ ' ಎಂದು ಲಯಬದ್ಧವಾಗಿ ನುಡಿಯುತ್ತಿರುವ ಅದೇ ಮಗ್ಗಗಳ ನಿನಾದ ಬದಲಾಗದ್ದನ್ನು ಗಮನಿಸುತ್ತಾ  "ನಾ ಕಂಡಂತೆ ಒಂದೂವರೆ ದಶಕದ ನಂತರವೂ ಕೇವಲ ಚಿಕ್ಕ ಪುಟ್ಟ ಸ್ಥಿತ್ಯಂತರಗಳನ್ನು ಹೊರತುಪಡಿಸಿ ಮೂಲಸ್ವರೂಪವನ್ನು ಬದಲಿಸಿಕೊಳ್ಳದೇ ತನ್ನ ಪರಂಪರೆ ಹಾಗೂ ಸತ್ವವನ್ನು ಉಳಿಸಿಕೊಂಡ ಕರ್ನಾಟಕದ ವಿರಳಾತಿವಿರಳ ಪುರಗಳಲ್ಲಿ ಒಂದು ಗುಳೇದಗುಡ್ಡ " ಎಂದು  ಬಣ್ಣಿಸಲ್ಪಟ್ಟ ಊರಿನಲ್ಲಿ ಇಂದಿಗೂ ಚಹಾದೊಂದಿಗಿನ ಸಂಗತಿಗಳಾವವೂ ಆಧುನಿಕ ಯುಗದ ಯಾವ ಸೆಳೆತಗಳಿಗೂ ಒಳಗಾಗಿಲ್ಲ. ನೇಕಾರಿಕೆ ಹಾಗೂ ಉಪಕಸುಬುಗಳ ಕುಶಲವೃತ್ತಿಗಳ ಜೊತೆ ಜೊತೆಗೆ ಬೆಳೆದು ಬಂದಿರುವ ಈ ಚಹಾ ಸಂಸ್ಕೃತಿ ಆತಿಥ್ಯದ ಹೊಸ ಪರಿಭಾಷೆಯೊಂದನ್ನು ಕಟ್ಟಿ  ಕೊಟ್ಟಿದೆ. ಅಬಾಲವೃದ್ಧರಾದಿಯಾಗಿ  ಮನೆಗೆ ಬರುವ ಸಕಲ ಅತಿಥಿಗಳು ಕನಿಷ್ಠ ಚಹಾತಿಥ್ಯವನ್ನಾದರೂ ಸ್ವೀಕರಿಸಲೇಬೇಕು. ಇದು ಅಘೋಷಿತ ಅತಿಥಿ ಸತ್ಕಾರದ ನಿಯಮ. ಯಾರಾದರೂ ಅತಿಥಿಗಳು ಮನೆಗೆ ಬಂದರೆ ಸಾಕು ಚಹಾದ ಪಾತ್ರೆ ಅಗ್ನಿಹಂಸವನ್ನೇರಲೇಬೇಕು.  ಚಹಾ ನನ್ನೂರಿನ ಕರಕುಶಲಿಗಳ ಕಾಯಕಕ್ಕೆ ಉತ್ಸಾಹದ ಚಿಲುಮೆಯಾಗಿರುವಂತೆ, ಬಂಧುಗಳೆಡೆಗಿನ ಪ್ರೀತಿ ವಾತ್ಸಲ್ಯದ  ದ್ಯೋತಕವೂ ಆಗಿದೆ. ಆತಿಥ್ಯದ ಸಂಕೇತವಾಗಿರುವ 'ಚಹಾ'ವನ್ನು  ಅತಿಥಿಗಳು ನಿರಾಕರಿಸಿದರೆ ಸಾಕು ಬೇಡದ ಮುನಿಸು ತಪ್ಪಿದ್ದಲ್ಲ. ಅನುಬಂಧದ ಪ್ರತೀಕವಾಗಿರುವ  ಚಹಾವನ್ನು ಸ್ವೀಕರಿಸಲೇಬೇಕು.ಚಹಾತಿಥ್ಯ ಸತ್ಕಾರ ಆತಿಥೇಯರಲ್ಲಿ ಅವರ್ಣನೀಯ ಆನಂದವನ್ನು ತಂದರೆ ಅತಿಥಿಗಳಲ್ಲಿ ವಾತ್ಸಲ್ಯದ ಸುಮವನ್ನು ಅರಳಿಸುತ್ತದೆ.  ಸಂಬಂಧಗಳನ್ನು  ಗಟ್ಟಿಯಾಗಿ ಬೆಸೆಯುವ ಸೇತುವೆಯಾಗಿ ಚಹಾದ ರಾಯಭಾರಿತನ ತಲೆದೂಗುವಂತಹುದು. ಮನೆಯವರಗೆ ಜಗಳವಾಡಲು ಬಂದವರಿಗೂ ಕುಳ್ಳಿರಿಸಿ ಚಹಾದಿಂದ ಸತ್ಕರಿಸುವಂತಹ ಅತಿಥಿ ಔದಾರ್ಯ ಅನಿಕೇತನವಾದದ್ದು. ಚಹಾ ಬಂಧುತ್ವದ ಸೇತುವೆಯಾಗಿರುವಂತೆಯೇ  ಋಣದ ಪ್ರತಿನಿಧಿಯೂ ಆಗಿದೆ. ಬಗೆಹರಿಯಲಾರದ ಎಷ್ಟೋ ವಿವಾದಗಳು ಚಹಾದ ಬಾಂಧವ್ಯ ಮಾತ್ರದಿಂದ ಮಾಯವಾಗಿದ್ದನ್ನು ಕಂಡಿದ್ದೇನೆ. ಪರರ ಮನೆಯ ಚಹಾದ ಋಣ ಬಗೆಯಬೇಕಾದ ದುಷ್ಟರ ದ್ರೋಹಗಳನ್ನು, ಅಪನಂಬಿಕೆಗಳನ್ನು ತಿಳಿಗೊಳಿಸಿ ತಣ್ಣಗಾಗಿಸಿದ್ದನ್ನು ತಿಳಿದಿದ್ದೇನೆ. ಮನುಷ್ಯ- ಮನುಷ್ಯರ ಮಧ್ಯದ ದ್ವೇಷ, ವಿರಸ,ವೈರತ್ವಗಳಿಗೆ ರಾಮಬಾಣದ ಔಷಧಿಯಾಗಬಲ್ಲ ಶ್ರೇಷ್ಠ ಚಿಕಿತ್ಸಾಗುಣ ನಮ್ಮೂರಿನ ಚಹಾದಲ್ಲಿದೆ. 
ಸಂಜೆಯಾದರೆ ಸಾಕು ನಮ್ಮೂರಿನ ತರಕಾರಿ ಉಪ ಮಾರುಕಟ್ಟೆ ಹರಟೆಯ ಕೇಂದ್ರವಾಗಿ ಬದಲಾಗುತ್ತದೆ. ಹೀಗೆ ಸೂರ್ಯಾಸ್ತವಾಗುತ್ತಲೇ ಸೂಜಿಗಲ್ಲಿನಂತೆ ಹರಟುವವರನ್ನಾಕರ್ಷಿಸಿ ತನ್ನತ್ತ ಸೆಳೆಯುವ  ಮಾಂತ್ರಿಕನೆಂದರೆ  'ಚಹಾಮಣಿ'. ಪ್ರತಿನಿತ್ಯ ಈ ಮುಸ್ಸಂಜೆಯ ಹರಟೆಯನ್ನು  ಜಾತ್ರೆಯೆಂಬಂತೆ ಪರಿಪಾಲಿಸಿಕೊಂಡು ಬಂದಿದ್ದಾರೆ ಇಲ್ಲಿಯ ಜನ. ಇಲ್ಲಿ ಜಾಗತಿಕವಲ್ಲದೇ, ಕೇಂದ್ರದಿಂದ ಹಿಡಿದು ಗ್ರಾಮಮಟ್ಟದವರೆಗಿನ ಸಮಕಾಲೀನ ರಾಜಕೀಯ, ಸಾಮಾಜಿಕ, ಆರ್ಥಿಕ,ಆಧ್ಯಾತ್ಮಿಕವಾದ ಸೂಕ್ಷ್ಮ  ಒಳನೋಟಗಳ ಚರ್ಚೆಯಿದೆ; ಊರಿನಲ್ಲಿ ಜರುಗುತ್ತಿರುವ ಹಾಗೂ ಜರುಗಿದ ಪ್ರಸ್ತುತ ವಿದ್ಯಮಾನಗಳ ಕುರಿತು ಸಂವಾದವಿದೆ; ಅಂದು ಗಮನಸೆಳೆದಿರುವ ಊರಿನ ಪ್ರಮುಖ ಸಂಗತಿಗಳ ಕುರಿತು ಮಾತುಗಳಿವೆ; ಸ್ನೇಹಿತರು, ದಾಯಾದಿ ಸಂಬಂಧಿಗಳ ಮಧ್ಯದ  ವಾದವಿವಾದಗಳ ವಿವೇಚನೆಯಿದೆ;  ಕೌಟುಂಬಿಕ, ಸಾಮಾಜಿಕ,ಆರ್ಥಿಕ,ನೈತಿಕ, ಸಾಂಸ್ಕೃತಿಕ ಅಲ್ಲದೇ ಪಾರಮಾರ್ಥಿಕ ಸಂಗತಿಗಳ ವ್ಯಾಖ್ಯಾನಗಳಿವೆ; ಸಂಬಂಧಿಕರ ಮಧ್ಯದ ವಿವಾದಗಳಿಗೆ ಮುಕ್ತಿ ನೀಡಬಲ್ಲ ನ್ಯಾಯಿಕ ಪರಿಹಾರಗಳ ಸಂಕಥನಗಳಿವೆ; ತಮ್ಮ ಕೈಗೆಟುಕದ ರಾಜಕಾರಣದ ಒಳಸುಳಿಗಳಿಗೂ ಇಲ್ಲಿ ಅನೌಪಚಾರಿಕ ಪರಿಹಾರಗಳಿವೆ; ಗೆಳೆಯರ ಮಧ್ಯದ ತುಂಟಾಟದ ಭಾವಗಳ ಸಲ್ಲಾಪಗಳಿವೆ.  ಮಾನವನ ಸಕಲ ಮನೋವ್ಯಾಪಾರಗಳ ಅಭಿವ್ಯಕ್ತಿಗೊಂದು ದಿವ್ಯಲೋಕ ಈ ಚಹಾಜಾತ್ರೆ. ಮಾನವಶಾಸ್ತ್ರ ಹಾಗೂ ಸಮಾಜಶಾಸ್ತ್ರ ಶಿಸ್ತುಗಳ ಅಧ್ಯಯನಕಾರರಿಗೆ ಒಂದು ಪ್ರಯೋಗಶಾಲೆಯಂತಿದೆ ಈ ಮೇಳ.  ಜಾತಿ ಧರ್ಮ, ಮತ,ವರ್ಣಗಳ ಭೇದವಿಲ್ಲದೇ ಚಹಾಗಾಗಿ  ಒಂದೆಡೆ ನೆರೆಯುವ ಸಂಗತಿಯೇ ವಿಸ್ಮಯ  ಮೂಡಿಸಿದೆ. ಕಲೆ ಹಾಗೂ ಸಾಹಿತ್ಯ ಮೀಮಾಂಸೆಗೂ ಅಲ್ಲಿ ಜಾಗವಿದೆಯೆಂದರೆ ಚಹಾ ಹೇಗೆ ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂಬುದನ್ನರಿಯಬಹುದು. ತೆರೆದುಕೊಳ್ಳುವ ಚಹಾಕಾರಣದ ನಮ್ಮೂರಿನ ಈ ಮಾರುಕಟ್ಟೆಯ ಜಗತ್ತು  ಸರ್ವಜನಾಂಗದವರನ್ನಳಗೊಂಡು ಇತಿಹಾಸ, ಅರ್ಥಶಾಸ್ತ್ರ, ಸಮಾಜವಿಜ್ಞಾನ,ರಾಜ್ಯಶಾಸ್ತ್ರ, ತತ್ವಜ್ಞಾನಾದಿಯಾಗಿ ಔಪಚಾರಿಕ ಹಾಗೂ ಅನೌಪಚಾರಿಕ ಸಂಗತಿಗಳನ್ನೆಲ್ಲಾ ನಿಷ್ಕರ್ಷೆಗೊಳಪಡಿಸಬಲ್ಲ  ಅನುಭವ ಮಂಟಪವಾಗಿದೆ. ಜಾಗತಿಕ ವಿದ್ಯಮಾನಗಳಿಂದ ಹಿಡಿದು ಪಕ್ಕದ ಮನೆಯವರೆಗಿನ ಸುದ್ದಿ ಸಮಾಚಾರಗಳೆಲ್ಲಾ ಈ ಅನುಭವ ಮಂಟಪದಲ್ಲಿ ನಿಕಷಕ್ಕೊಳಗಾಗಲೇಬೇಕು.
ನೇಕಾರ ಸಂಗಣ್ಣ, ವಾಲೀಕಾರ ಬಸಪ್ಪ,  ಕಮ್ಮಾರ ಹನುಮಂತ, ಕುಂಬಾರ ಮಲ್ಲಪ್ಪ, ಗೌಡರ ಲಕ್ಷ್ಮಣ್ಣ ಹೀಗೆ ತರತಮಗಳಿಲ್ಲದ ಜಾತ್ಯಾತೀತ ಸಮುದಾಯವೊಂದು ಬೀದಿ ಬದಿಯ ಚಹಾಶಾಲೆಗಳ ಮುಂದೆ ಶ್ರದ್ಧೆಯಿಂದ ನಿತ್ಯ ನೆರೆಯುತ್ತದೆಯೆಂದರೆ ಚಹಾದ ಈ ಮಾಯಾಲೋಕಕ್ಕೆ ಧನ್ಯವಾದಗಳನ್ನರ್ಪಿಸಲೇಬೇಕು. ಚಹಾದೊಂದಿಗೆ ಚೂಡಾ,  ಮಿರ್ಚಿ ಬಜಿ, ದೊಣ್ಣೆಮೆಣಸಿನಕಾಯಿ ಬಜಿ,  ಬದನೆಕಾಯಿ ಬಜಿ, ವಡಾ ಬಜಿ, ಆಲೂ ಬಜಿ, ಹುರಿದ ಮಸಾಲೆ ಶೇಂಗಾಕಾಳುಗಳು, ಒಗ್ಗರಣೆ ಹಾಕಿದ ಚುರುಮರಿ, ಹೀಗೆ ಬಗೆ ಬಗೆಯ ವೈವಿಧ್ಯಮಯ ಖಾದ್ಯಗಳ ಸಾಂಗತ್ಯ ಹರಟೆಗೆ ನಿತ್ಯೋತ್ಸವದ ಮೆರಗನ್ನು ನೀಡುತ್ತದೆ. ಬಿಸಿಯಾದ ಈ ಕರಿದ ಖಾದ್ಯಗಳನ್ನು ಸವಿಯುತ್ತಲೇ  ನಡೆಯುವ  ಚರ್ಚೆ ಕಾವೇರುವ ಬಗೆಯನ್ನು
ನಮ್ಮ ಜನರ ಗ್ರಾಮೀಣ ಸೊಗಡಿನ ಭಾಷೆಯಲ್ಲಿಯೇ  ಕೇಳಬೇಕು. ಕರಿದ ಖಾದ್ಯಗಳ ಸವಿಯನ್ನುಂಡ ನಂತರದ ಸಾಂಗತ್ಯವೇ ಚಹಾಪಾನೀಯದ್ದು. ಅಲ್ಲಿಗೆ ಅಂದಿನ ಹರಟೆ ಅಂತಿಮ ಹಂತಕ್ಕೆ ಬಂದಿದೆಯೆಂದೇ ತಿಳಿಯಬೇಕು. ಒಂದು ಪುಟ್ಟ ಗ್ರಾಮದ  ಜಾತ್ರೆಯಷ್ಟು ಜನರನ್ನು ಸೆಳೆಯುವ ಈ  ಚಹಾಶಾಲೆಗಳೇನೂ ಪಂಚತಾರಾಗೃಹಗಳಲ್ಲ. ಬೀದಿ ಬದಿಯ ಮೂಲೆಯೊಂದರಲ್ಲಿ  ತಳ್ಳುವ ಗಾಡಿಗಳ,ಚತುರ್ಭುಜಗಳಂತಿರುವ  ನಾಲ್ಕು ಚಕ್ರಗಳ ಮೇಲೆ   ಪ್ರತಿಷ್ಠಾಪಿಸಲ್ಪಟ್ಟ ಸಂಚಾರಿಯಂತೆ ಕಾಣುವ ಡಬ್ಬಿಯಂಗಡಿಗಳು.  ಮಲೆನಾಡಿನ ಚಹಾಕುಶಲಿಗಳು ಚೂಡಾದಂಗಡಿಯ ಪಕ್ಕತೆರೆದಿರುವ  ಚಹಾಶಾಲೆ ಒಂದಕ್ಷರದ ವಿದ್ಯೆಯನ್ನು ಧಾರೆಯೆರೆಯದಿದ್ದರೂ ಚಹಾದ ಅನುಭಾವದ ರಸಪಾಕವನ್ನು ರಸಿಕರಿಗೆ ಹಂಚುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ!. ಮುಸ್ಸಂಜೆಯ ವಿಹಾರಿಗಳು ಸೇರುವ ಈ ಜಾಗ ವಿಶಾಲವಾದ ಬಯಲೇನೂ ಅಲ್ಲ, ಸುಮಾರು ೧೦೦ ಮೀಟರ್ ಉದ್ದಳತೆಯ ಚಿಕ್ಕ ಉಪಮಾರುಕಟ್ಟೆಯ ತಾಣವದು. ಅಂದ ಹಾಗೆ ಈ ಹರಟೆಯ ಜಗತ್ತಿನ ನಿತ್ಯದ ಆಯಸ್ಸು ಸಂಜೆ  ೫ ಗಂಟೆಯಿಂದ ರಾತ್ರಿ ೧೦ ಗಂಟೆಯವರೆಗೆ ಮಾತ್ರವೆಂದರೆ ಅಚ್ಚರಿಯೆನಿಸದಿರದು.  ಗೋಧೂಳಿಯ ಮುಹೂರ್ತದಲ್ಲಿ  ಜನಿಸಿ, ವಿವಿಧೆಡೆಗಳಿಂದ  ಹರಿದು ಬಂದ ಜಲ ಸಾಗರವ ಸೇರುವಂತೆ ನಮ್ಮೂರಿನ ಗಲ್ಲಿ ಹಲ್ಲುಗಳಿಂದ ಜನ ನಿತ್ಯದ ಈ ಚಹಾಮೇಳಕ್ಕೆ ಹರಿದುಬರುತ್ತಾರೆ. ಕೆಲವೇ ಗಂಟೆಗಳಲ್ಲಿ  ಬೃಹದಾಕಾರವಾಗಿ ಬೆಳೆದು, ಮತ್ತೆ ಐದಾರು ಗಂಟೆಗಳಲ್ಲಿಯೇ ಕೊನೆಯಾಗುವ ಈ ಚಹಾರಂಜನೆಯ ಜಾತ್ರೆ ಬಲು ವಿಶಿಷ್ಟವಾದುದು.
ಸಾಮಾನ್ಯರಾದಿಯಾಗಿ ಶಿಕ್ಷಕರು, ವಕೀಲರು, ಸುದ್ದಿಮಾಧ್ಯಮದವರು,  ಕಾರ್ಮಿಕರು, ನೌಕರರು, ವಿದ್ಯಾರ್ಥಿಗಳು, ಕರಕುಶಲಿಗಳು, ರೈತರು  ಹೀಗೆ ವರ್ಗಭೇದವಿಲ್ಲದೇ ಸರ್ವರನ್ನೂ ಸೆಳೆದು, ಭ್ರಾತೃತ್ವದ ಮುನ್ನುಡಿಯನ್ನು ಹಾಡುತ್ತಿರುವ ಸೌಹಾರ್ದತೆಯ ಸಂಗೀತವನ್ನು ನುಡಿಸುತ್ತಿರುವ, ಸಮಾನತೆಯ ತತ್ವವನ್ನು ಸಾರುತ್ತಿರುವ,ಜಗತ್ತಿಗೆ ಬಾಂಧವ್ಯದ ಪಾಠ ಮಾಡುತ್ತಿರುವ, ನಮ್ಮೂರಿನ ಚಹಾಜಗತ್ತಿನ ಮಾಂತ್ರಿಕ ಮೋಡಿ ಅದೆಷ್ಟು ಅರ್ಥಪೂರ್ಣ, ಭಾವಪೂರ್ಣ, ಔಚಿತ್ಯಪೂರ್ಣ  ಅಲ್ಲವೆ ? ದಿನವೆಲ್ಲಾ ದುಡಿದು ಬಳಲಿದ ಮನಸುಗಳನ್ನು ತನ್ನತ್ತ ಕೈ ಬೀಸಿ ಕರೆದು ಉಣಬಡಿಸಿ,  ಸಂಜೆಯ ಚಹಾಮೃತದ ಸವಿಯನ್ನು ನಿಷ್ಪಕ್ಷಪಾತವಾಗಿ ಹಂಚುವ ಈ ನಿರ್ಮಲ ಜಗತ್ತು ನನ್ನನ್ನು ಇನ್ನಿಲ್ಲದಂತೆ ಕಾಡಿದೆ. ಶ್ರಮ ಸಂಸ್ಕೃತಿಯ ಬೇರುಗಳಿಂದ ನವಚಿಗುರನ್ನು ಪಡೆದು ಕಂಗೊಳಿಸುತ್ತಿರುವ ನಮ್ಮೂರಿನ ನಾಗರಿಕತೆಯಲ್ಲಿ, ಕೆಲವು ಕಾಲ ಬಡವರ ಜಠರಾಗ್ನಿಯನ್ನು ತಣಿಸಿ ಹಸಿವನ್ನು ಮುಂದೂಡುವ ಅಥವಾ ಒಂದು ಹೊತ್ತಿನ ಉಪವಾಸಕ್ಕೆ ಸಹಕರಿಸಿ ತಾತ್ಕಾಲಿಕವಾಗಿ ಹೊಟ್ಟೆ ತುಂಬಿಸುವ ಈ ಚಹಾ ಎಂಬ ಮಾಯೆ ತನ್ನ ಸುತ್ತ  ಒಂದು ನವಸಂಸ್ಕೃತಿಯನ್ನೆ ರೂಪಿಸಿಕೊಂಡದ್ದರಲ್ಲಿ ಅಚ್ಚರಿಯೇನಿಲ್ಲ. ಬಡವರ ಕೊನೆಯಿರದ ಹಸಿವಿನ ಔಷಧಿಯಾಗಿರುವ ಈ "ಬಡವರ ಬಂಧು" ಶ್ರಮಿಕರ ಅಮೃತವೂ ಹೌದು; ಶೋಷಿತರ ಬದುಕಿನ ತೀರ್ಥವೂ ಹೌದು.ಲಾಲ್ ಬಹಾದ್ದೂರ ಶಾಸ್ತ್ರಿಯವರು ಕರೆಕೊಟ್ಟ ಸೋಮವಾರದ ಉಪವಾಸ ಯಶಸ್ವಿಯಾಗುವಂತೆ ಮಾಡಿ ದೇಶ ಸೇವೆ ಮಾಡಿದ ಚಹಾಮಾಯಿಯ ದೇಶಭಕ್ತಿಯನ್ನು ಮೆಚ್ಚಲೇಬೇಕು.
ಈ ಲೇಖನ ಅಕ್ಷರವಾಗುವ ಹೊತ್ತಿನಲ್ಲಿ ಸಹೋದ್ಯೋಗಿ ಪ್ರಾಧ್ಯಾಪಕ ಗೆಳೆಯ ಮೌನೇಶ ಕಮ್ಮಾರರವರು ಹಾಡಿದ
"ಕಪ್ಪ ಬಸಿ ಚಹಾಗೆಳೆಯ ಗೆಳೆಯರು ಕೂಡಿಸಲಿಗೆಯ ಮಾತನಾಡಿಪ್ರೀತಿಗೆ ನಾಂದಿಯಾತು
ಕಪ್ಪ ಬಸಿ ಚಹಾಅದು ಒಂದು ಇಲ್ಲದಿರೆಗೆಳೆತನ ಎಲ್ಲಾ ಮರೆಬದುಕುವುದು ಬಿರಿಯಾತುಕಪ್ಪ ಬಸಿ ಚಹಾ........................................................ಎಂಬ ಜಾನಪದ ಗೀತೆಯಲ್ಲಿ ಅಭಿವ್ಯಕ್ತವಾದ  ಚಹಾಮಾಯಿಯ ಸೊಬಗು ಅವರ್ಣನೀಯ. ಚಹಾ ಜನಪದರ ಜೀವಸೆಲೆಯಾಗಿ ಬದುಕಿಗೆ ಚೈತನ್ಯವನ್ನು ಧಾರೆಯೆರೆಯುತ್ತಲೇ ಬಂದಿದೆ. ನಾಡವರ ಕಾಯಕದಲ್ಲಿನ ಕೈಲಾಸ ತಲುಪಲು ಈ ಚಹಾ ಎಂಬ ಉತ್ಸಾಹದ ಚಿಲುಮೆ  ಪ್ರವಹಿಸಲೇಬೇಕು.
ನೀನೆಂದರೆ  ಕಣ ಕಣದಲೂರೋಮಾಂಚನಮನದ ಮೂಲೆಯಲೂಭರವಸೆಯ ಹೊಂಗಿರಣಅರಳಿ ನಿಂತ ಎದೆಯಲಿನೀನು ಅಮೃತ ಸಿಂಚನ
ಕದಡಿದ ಮನ ತಿಳಿಯಬಾನುಆಗದೇನು ಇಳಿದಾಗಚಹಾ ಹನಿಯ ಜೇನು.........ಎಂಬ ಚಹಾರಾಧನೆ ಮನದ ಮೂಲೆಯಲ್ಲಿ ಸದಾ ಜರುಗುತ್ತಲೇ ಇರುತ್ತದೆ. ಆಧುನಿಕ ಜಗತ್ತಿನ ಆಹಾರ ಸಂಸ್ಕೃತಿಯ ಅತ್ಯಗತ್ಯ ಪಾನೀಯಗಳಲ್ಲಿ ಒಂದಾಗಿರುವ ಚಹಾದೇವಿ, ವರ್ತಮಾನದ ಬೆಡಗಿನ ಲೋಕದ ಸೆಳೆತಕ್ಕೆ ಸಿಕ್ಕು ಕೆಫೆಗಳಲ್ಲಿ ಕಪ್ಪು ಸುಂದರಿಯಾಗಿ, ಬಿಳಿ ಕಿಶೋರಿಯಾಗಿ, ಹಸಿರು ನೀರೆಯಾಗಿ, ಕೆಂಬಣ್ಣದ ಮೋಹಿನಿಯಾಗಿ, ವೈವಿಧ್ಯಮಯ ರೂಪಗಳನ್ನು ಅಲಂಕರಿಸಿದ್ದಾಳೆ. ಪ್ರಾತಃಕಾಲದಲೆದ್ದು ಮುಖ, ಹಲ್ಲುಗಳನುಜ್ಜಿ, ವಿಭೂತಿ ಧರಿಸಿ ಒಂದು ಲೋಟ ಚಹಾ ಹೀರಿದಾಗಲೇ ಅಂದಿನ ಕಾಯಕದ ಅಧಿಕೃತ ಪ್ರಾರಂಭಕ್ಕೆ ಮುನ್ನುಡಿ ಬರೆದ ಹಾಗೆ. ಅಲ್ಲಿಂದ ಮೂರು ಗಂಟೆಗಳಿಗೊಮ್ಮೆ ಚಹಾರಾಣಿಯೊಂದಿಗೆ ಉಲ್ಲಾಸದ ಹಾಡನ್ನು ಹಾಡಲೇಬೇಕು. ಶ್ರಮಿಕ ವರ್ಗದ ಜನರ ಜೀವನದ ಚೈತನ್ಯವಾಗಿರುವ ಕಲಿಯುಗದ ಅಮೃತವಾಗಿರುವ ಚಹಾ ನಮ್ಮೂರಿನ ಭಾವೈಕ್ಯತೆಯ ಪ್ರತೀಕವೂ ಆಗಿದೆಯೆಂದರೆ ಅತೀಶಯೋಕ್ತಿಯೇನಲ್ಲ.

Tuesday, 16 July 2019

ಮುಳ್ಳು ಹಾದಿಯಲ್ಲಿ ನಡೆದ ಕಾವ್ಯ ಭೀಷ್ಮ….
            ಜೀವನವೊಂದು ಸಂತೋಷ ನಲಿವುಗಳ ಪರಮಸುಖವಷ್ಟೇ ತುಂಬಿರುವ ಸಂಭ್ರಮದಾಗರವಾಗಿದ್ದರೆ, ಬದುಕಿನ ಕಷ್ಟಕೋಟಲೆಗಳ ಬೆಂಕಿಯಲ್ಲಿ ಬೆಂದ ದಿವಂಗತ ಡಾ. ಸಂಗಪ್ಪ ಶಿವಪ್ಪ ಬಸುಪಟ್ಟದ ಎಂಬ ಕಾವ್ಯಭೀಷ್ಮರೊಬ್ಬರು ಕನ್ನಡ ಸಾರಸ್ವತ ಲೋಕಕ್ಕೆ ಹೀಗೆ ಪುಟಕ್ಕಿಟ್ಟ ಚಿನ್ನವಾಗಿ ದಕ್ಕುತ್ತಿರಲಿಲ್ಲವೇನೋ. ನಮ್ಮ ಸೌಭಾಗ್ಯ ಗುಳೇದಗುಡ್ಡ ಎಂಬ ಬಯಲು ಸೀಮೆಯ ನಾಡಿಗೊಬ್ಬ ಡಾ. ಎಸ್ ಎಸ್ ಬಸುಪಟ್ಟದರವರೆಂಬ ಕಾವ್ಯಋಷಿಯನ್ನು ಪಡೆದ ಧನ್ಯತೆ ನಮ್ಮದಾಗಿದೆ. ಬಡತನವನ್ನೇ ಹಾಸಿ ಹೊದ್ದ ನೇಕಾರಿಕೆಯ ಮನೆತನದಲ್ಲಿ ಶಿವಪ್ಪ ಹಾಗೂ ನೀಲವ್ವ ಎಂಬ ಸಾತ್ವಿಕ ದಂಪತಿಗಳ ಸುಪುತ್ರರಾಗಿ 14 ನೇ ನವೆಂಬರ್ 1923 ರಲ್ಲಿ ಜನಿಸಿದ ಸಂಗಪ್ಪನವರು ಬಾಲ್ಯದಿಂದಲೇ ಸಾಹಿತ್ಯದ ಒಲವನ್ನು ಬೆಳೆಸಿಕೊಂಡವರು. ಬಾಗಲಕೋಟ ಜಿಲ್ಲೆಯ ಆಗಿನ ಬದಾಮಿ ತಾಲ್ಲೂಕಿನ (ಈಗ ಗುಳೇದಗುಡ್ಡ ತಾಲ್ಲೂಕು) ಜಗತ್ಪ್ರಸಿದ್ದ ‘ರೇಷ್ಮೆ ಖಣಗಳ ತವರೂರು’ ಎಂದು ಪ್ರಖ್ಯಾತವಾದ  ‘ಗುಳೇದಗುಡ’್ಡ ದಲ್ಲಿ ಜನಿಸಿ ಇಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಐದನೇ ತರಗತಿಯಲ್ಲಿ ಓದುತ್ತಿರುವಾಗಲೇ ‘ಅರಳು ಮಲ್ಲಿಗೆ’ ಎಂಬ ಹಸ್ತ ಪತ್ರಿಕೆಯೊಂದನ್ನು ಸಂಪಾದಿಸಿದ ಸಂಗಪ್ಪನವರು ಪತ್ರಿಕೆಯ ಹೆಸರಿನಂತೆ ಕನ್ನಡ ನಾಡಿಗೆ ಸಾಹಿತ್ಯದ ರಸಗಂಧವನ್ನು ಹರಡುವ ಅರಳು ಮಲ್ಲಿಗೆಯೇ ಆಗಿದ್ದರು. ‘ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು’ ಎಂಬಂತೆ ಸಾಹಿತ್ಯದ ಸಿರಿಯಾಗಿ ಬೆಳೆಯುತ್ತಿದ್ದ ಸಂಗಪ್ಪನವರು ಗುಳೇದಗುಡ್ಡ, ಗದಗ, ಬಾಗಲಕೋಟೆ, ಸೋಲಾಪುರಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಸೊಲ್ಲಾಪುರದ ಹೈಸ್ಕೂಲಿನಲ್ಲಿ ಸಹ ಶಿಕ್ಷಕರಾಗಿ ಒಂದು ವರ್ಷ ದುಡಿದು, ಗುಳೇದಗುಡ್ಡದ ಮುನ್ಸಿಪಲ್ ಹೈಸ್ಕೂಲಿನಲ್ಲಿ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದರು. ಮತ್ತೆ ಹತ್ತು ವರ್ಷ ಅದೇ ಹೈಸ್ಕೂಲಿನಲ್ಲಿ ಮುಖ್ಯಾಧ್ಯಾಪಕರಾಗಿ, ನಂತರ ಭಂಡಾರಿ ಕಲಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ 1978 ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರವೂ ವಿಶ್ರಾಂತಿ ಪಡೆಯದ ಇವರು ಬದಾಮಿಯ  ಶ್ರೀ  ವೀರಪುಲಿಕೇಶಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಂಸ್ಥಾಪಕ ಪ್ರಾಚಾರ್ಯರಾಗುವ ಅವಕಾಶ ಒದಗಿ ಬಂದಾಗ ತುಂಬು ಹೃದಯದಿಂದ ಒಪ್ಪಿಕೊಂಡು“ಕನ್ನಡ ನೆಲವೆಲ್ಲ ಕನ್ನಡದ ಜಲವೆಲ್ಲಕನ್ನಡದ ಜನಮನದ ಬಾಳಿಗಾಗಿಕನ್ನಡದ ಗಿರಿಯೆಲ್ಲ ಕನ್ನಡದ ಸಿರಿಯೆಲ್ಲಕನ್ನಡದ ಮುನ್ನಡೆಯ ಕೇಳಿಗಾಗಿ”
ಎಂದು ಹಾಡುತ್ತಾ ಸೇವೆಗೈದರು. ಸಂಗಪ್ಪನವರು ಹೀಗೆ ಶಿಕ್ಷಕ  ವೃತಿಯನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಂಡು ವಿದ್ಯಾರ್ಥಿಗಳ ಹೃದಯ ಗೆದ್ದ ಕವಿ ಸಾಮ್ರಾಟರಾಗಿ ಕನ್ನಡ ಸರಸ್ವತಿಯ ಹೆಮ್ಮೆಯ ಪುತ್ರರಾಗಿ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ. ಹೊಸಗನ್ನಡ ಸಾಹಿತ್ಯ ಚರಿತ್ರೆಯ ನೀಲಾಗಸದಲ್ಲಿ ಅರುಣೋದಯವಾಗುತ್ತಿದ್ದ, ಹೊಂಬೆಳಕು ಮೂಡುತ್ತಿದ್ದ ಕಾಲವದು. ಹೊಸಗನ್ನಡದ ನೇಸರನು ನವೋದಯದ ಚೆಂಬೆಳಕಿನಲ್ಲಿ ಆಂಗ್ಲಸಾಹಿತ್ಯದ ಮಾಧುರ್ಯತೆಯನ್ನು ಹೀರುತ್ತಾ ಪ್ರಖರವಾಗುತಿದ್ದ ನವ ಮನ್ವಂತರದ ಕಾಲಘಟ್ಟವದು.
ಅತ್ತ ಕಾವ್ಯ ಶಕುಂತಲೆಯನ್ನು ಪಿತೃವಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಪಿಡುವ ಸಂಕಲ್ಪದ ಹೆಬ್ಬಯಕೆಯನ್ನು ಹೊಂದಿ, ನಾಡಿನಾದ್ಯಂತ ಸಂಚಲನವನ್ನುಂಟು ಮಾಡಿದ  ‘ಕನ್ನಡದ ಕಣ್ವ’ ಎಂದೇ ಪ್ರಖ್ಯಾತರಾದ  ಬಿ. ಎಂ. ಶ್ರೀಕಂಠಯ್ಯ ನವರ ಮೊಟ್ಟ ಮೊದಲ ಹಾಗೂ ಕನ್ನಡ ಸಾಹಿತ್ಯಕ್ಕೊಂದು ಹೊಸ ದಿಕ್ಸೂಚಿ ಕೃತಿಯೆಂದೇ ಹೆಸರಾದ ‘ಇಂಗ್ಲೀಷ ಗೀತೆಗಳು’ ಕವನಸಂಕಲನ ಪ್ರಕಟವಾಗುತ್ತಿದ್ದರೆ, ಇತ್ತ ಗುಳೇದಗುಡ್ಡದಲ್ಲಿ  ಸಂಗಪ್ಪ ಶಿವಪ್ಪ ಬಸುಪಟ್ಟದ ಎಂಬ ಕಾವ್ಯಭೀಷ್ಮ ರ ಜನನ ದುಂದುಭಿ ಮೊಳಗಿತ್ತು. ಹೊಸಗನ್ನಡ ಸಾಹಿತ್ಯ ಚರಿತ್ರೆಯ ನವೋದಯ ,ಪ್ರಗತಿಶೀಲ, ನವ್ಯ , ದಲಿತ ಮತ್ತು ಬಂಡಾಯ ವೆಂಬ ಚಳುವಳಿಗಳ ಹೆದ್ದಾರಿಯಲ್ಲಿ ದ ರಾ ಬೇಂದ್ರೆ, ಶಿವರಾಮ ಕಾರಂತ, ರಂ. ಶ್ರೀ. ಮುಗಳಿ, ಡಿ ಎಸ್ ಕರ್ಕಿ, ಎಸ್ ಎಸ್ ಭೂಸನೂರಮಠ , ಚೆನ್ನವೀರ ಕಣವಿ ಯವರಂತಹ ಸಾಹಿತ್ಯ ದಿಗ್ಗಜರ ಜೊತೆ ಜೊತೆಯಾಗಿ ಸಾಗುತ್ತಲೇ ಬಸುಪಟ್ಟದರವರು ತಾವು ನೆಟ್ಟ ಕಾವ್ಯ ಮರಗಳ ರಸ ಸೌಂದರ್ಯವನ್ನು ನಾಡಿಗೆ ಹಂಚುತ್ತಲೇ ನಾಡದೇವಿಗೆ ಸಮೃದ್ಧ ಪರಂಪರೆಯ ಕೊಡುಗೆಯನ್ನು ನೀಡಿದರು. ಡಾ ಎಸ್ ಎಸ್ ಬಸುಪಟ್ಟದರವರು ಬದುಕಿನ ಕಡಲಿನಲ್ಲಿ ಹೆಬ್ಬಂಡೆಯಂತೆ ತಮಗೆ ಎದುರಾಗುವ ಕಷ್ಟಗಳನ್ನು, ನೋವುಗಳನ್ನು ಕಲ್ಲಾಗಿ ಎದುರಿಸಿ ಅವುಗಳನ್ನೇ ತಮ್ಮ ಕಾವ್ಯದ ತಲ್ಲಣಗಳನ್ನಾಗಿಸಿಕೊಂಡರು. ಇವರಿಗೆ ಕಾವ್ಯವೆಂದರೆ ಕೇವಲ ಭಾವಯಾಣವಲ್ಲ : ಭಾವತೀವ್ರತೆಯ ಔಪಚಾರಿಕ ಬಂಧನವಲ್ಲ; ಬದಲಾಗಿ ತಾವು ಹಾಕಿದ ಬದುಕಿನ ಹೆಜ್ಜೆಗಳನ್ನು, ಜೀವನ ತಮಗೆ  ಕಲಿಸಿದ ಪಾಠಗಳನ್ನು ಪ್ರಯೋಗಿಸುವ ಒಂದು ಯಜ್ಞಶಾಲೆ. ಸಾಹಿತ್ಯವನ್ನು ತಪಸ್ಸಿನಂತೆ ಆಚರಿಸಿ ಅದಕ್ಕಾಗಿ ಹಂಬಲಿಸಿದರು. ಜೀವನದ ಪ್ರೀತಿ, ನೋವು, ಸುಖ, ಸಂತೋಷ, ವಿರಹ, ಉತ್ಸಾಹ ಗಳೆಂಬ ಭಾವನೆಯ ಎಳೆಗಳನ್ನು ಕಲಾತ್ಮಕವಾಗಿ ಕುಸುರಿನ ಚಿತ್ರಗಳನ್ನು ಚಿತ್ತಾರಗಳೊಂದಿಗೆ ಬಿಡಿಸಿ ನೇಯುತ್ತಲೇ ಕಾವ್ಯದ ಬಟ್ಟೆಯನ್ನು  ಅರಿವಿನ ಹೊಳಪಿನಿಂದ ಮೆರಗುಗೊಳಿಸಿದರು. ಡಾ.ಬಸುಪಟ್ಟದರವರ ಕಾವ್ಯ ಯಾತ್ರೆಯು ಅವರ ಬದುಕಿನ ಪ್ರತಿಕ್ಷಣವನ್ನೂ ಆಹ್ಲಾದಿಸುವ ಸಂಭ್ರಮದ ಹೊಳೆ. ಬದುಕಿನ ಕುರಿತು ಈ ಕವ್ಯಾರಾಧಕರ ಜೀವನ ಪ್ರೀತಿ, ಅದಮ್ಯ ಉತ್ಸಾಹ, ಗುಳೇದಗುಡ್ಡ ಹಾಗೂ ಸುತ್ತಮುತ್ತಲಿನ ಬಯಸಲುಸೀಮೆಯ ಪ್ರಕೃತಿ ಸೌಂದರ್ಯ, ಈ ನೆಲದ ಸಾವಯವ ಸಂಸ್ಕøತಿ, ದಾಂಪತ್ಯ ಪ್ರೇಮ, ಭವಿಯಾಗಿದ್ದೂ ಭಕ್ತನಾಗುವ ಅನನ್ಯ ಹಂಬಲ, ಬಾಳ ಯುದ್ಧದಲ್ಲಿ ಯೋಧನಂತೆ ಹೋರಾಡಿ ಗೆಲ್ಲುವ ಹೆಬ್ಬಯಕೆ, ಬದುಕಿನ ಶ್ರದ್ಧೆಯೆಡೆಗಿನ ನಿರಂತರ ತುಡಿತ, ನಿಷ್ಠೆಯಡೆಗಿನ ಸೆಳೆತ, ಪ್ರಾಮಾಣಿಕತೆಯೆಡೆಗಿನ ಭಕ್ತಿ, ತಮ್ಮನ್ನು ತೇದುಕೊಂಡಷ್ಟೂ ಗಂಧದಂತೆ, ಸುಗಂಧವನ್ನು ಸೂಸುವ ಗಟ್ಟಿತನ, ಒರೆಗೆ ಹಚ್ಚಿದಷ್ಟೂ ಹೊಳೆಯುವ ಅವರ ಅಚಲತೆ, ಬಡವರ ದೀನದಲಿತರ ಶೋಷಿತರ ಪರ ಕಾಳಜಿ ಹೀಗೆ ಬದುಕಿನ ಪ್ರತಿ ಘಳಿಗೆಯನ್ನೂ ಆಸ್ವಾದಿಸುತ್ತಲೇ, ಅನಂತವನ್ನು ಶೋಧಿಸುವ ಅನಿಕೇತನದತ್ತ ಇವರ ಕಾವ್ಯ ಪಯಣ ಸಮೃದ್ಧವಾದುದು. ಬದುಕೆಂಬ ಕಡಲಿನ ಹನಿ ಹನಿಯನ್ನೂ ಮೊಗೆದು ಕಾವ್ಯವನ್ನಾಗಿ ಕಟ್ಟುವ ಇವರ ಕಾವ್ಯ ಕೃಷಿ ಅನೂಹ್ಯವಾದದ್ದು.
          ‘ವೀಣಾನಾದ’, ‘ರತ್ನದೀಪ’, ‘ವೈಜಯಂತಿ’, ‘ಸತ್ತವರು ನಾವಲ್ಲ’, ‘ಚೈತ್ರಾಗಮನ’, ‘ನಿಜಗುಣ ಶಿವಯೋಗಿಗಿಳು; ಜೀವನ ಮತ್ತು ಕೃತಿಗಳು’, ಮುಂತಾದ ಕೃತಿರತ್ನಗಳು ಇವರ ದಣಿವರಿಯದ ಲೇಖನಿಯಿಂದ ನದಿಯಾಗಿ ಹರಿದಿವೆ. ಹೊಳೆಯಂತೆ ಸಹೃದಯರ ಬತ್ತಿದೆದೆಗಳಿಗೆ ಜೀವ ಸೆಲೆಯನ್ನು  ಉಣಿಸುತ್ತಾ ಆತ್ಮಾನಂದದ ಹಸಿರ ಉಸಿರನ್ನು ನೀಡಿ ಕಂಗೊಳಿಸಿವೆ.“ನಿಮ್ಮ ಮೇಲೆ ನಾವು ಹತ್ತಿ ನಿಂತುಬಂಗಾರದ ಬಾಚಣಿಕೆ ಹಿಡಿದು ತಲೆಯ ಬಾಚುತ್ತೇವೆಮುಗಿಲಿಗೆ ಕೈ ಹಚ್ಚುತ್ತೇವೆಹೀಗಿದ್ದರೂ,ನಿಮ್ಮನ್ನು ಮೆಟ್ಟಿದ ಈ ಕಾಲತಲೆಯ ಮೇಲೆ ಹೊತ್ತು ಆದಿಶೇಷನ ತೆರದಿ ನಿಂತಿದ್ದೀರಿಅಂತೆಯೇ ನಮ್ಮ ದೊಡ್ಡವರಹಾರಾಟ- ಏರಾಟ”ಚರಿತ್ರೆಯ ಪುಟಗಳಲ್ಲಿ ಶತಶತಮಾನಗಳಿಂಲೂ ಯಜಮಾನ್ಯ ಸಂಸ್ಕøತಿಯ ಶೋಷಣೆ ದೌರ್ಜನ್ಯ ದಬ್ಬಾಳಿಕೆಗಳ ತುಳಿತಕ್ಕೆ ಸಿಕ್ಕು , ತಮ್ಮನ್ನು ತಾವು ದೀಪದಂತೆ ಸುಟ್ಟುಕೊಂಡು ಅನ್ಯರ ಬಾಳಿಗೆ ಬೆಳಕಾಗುವ ಶೋಷಿತರ ಬದುಕಿನ ತ್ಯಾಗದ ಪರಿ ಬಣ್ಣಿಸಲಸದಳವಾದದ್ದು. ಹಾಗಿದ್ದೂ ತಮ್ಮನ್ನು ಪಾದದಡಿಯಲ್ಲಿ ಸಿಲುಕಿ ನೋವನನುಭವಿಸುವ  ಮಣ್ಣ ಕಣಗಳಂತೆ ನಡೆಸಿಕೊಳ್ಳುತ್ತಿರುವ ಸಮಾಜದ ಕುರಿತು ಕವಿಯಲ್ಲಿ ಮೂಡಿದ ಆಕ್ರೋಶದ ಬೆಂಕಿ ಜ್ವಾಲೆಯಾಗಿ ‘ಮಣ್ಣ ಕಣಗಳು’ ಎಂಬ ಕವಿತೆಯ ರೂಪ ತಾಳಿದೆ. ಸಮಾಜದ ಅಂಚಿಗೆ ತಳ್ಳಲ್ಪಟ್ಟವರನ್ನು ಏಣಿಯಂತೆ ಬಳಸಿಕೊಂಡು ಮೇಲೇರಿದ ಮೇಲೆ ತುಳಿಯುವ ದೊಡ್ಡವರ  ಅಮಾನವೀಯ ಮುಖ ಈ ಕವಿತೆಯಲ್ಲಿ ಬಯಲಾಗಿದೆ. ಬಂಡಾಯದ ಈ ಕವಿತೆ ನನ್ನಲ್ಲಿ ದಲಿತ ಕವಿ ಡಾ. ಸಿದ್ಧಲಿಂಗಯ್ಯನವನರ ‘ಸಾವಿರಾರು ನದಿಗಳು’ ಕವಿತೆಯ ಈ ಸಾಲುಗಳನ್ನು ನೆನಪಿಗೆ ತರುತ್ತದೆ. ‘ನಾವು ಸತ್ತವರಲ್ಲ’ ಕವಿತೆಯಲ್ಲಿ“ನಾವು ಸತ್ತವರಲ್ಲ ಸಾರ್ಆದರೆ ಮೊದಲೇ ನಾವು ಬಾಯಿ ಸತ್ತವರು. . . . . . . .. . . . . . .. . . .ಧ್ವನಿ ದೊಡ್ಡದು ಮಾಡಿ ಕಿರುಚಿ ನಮಗೆ ಗೊತ್ತಿಲ್ಲನಾವೇನೂ ಸತ್ತಿಲ್ಲ. .  . . . …. . . …..    . . .ಹಲವಾರು ತೆರದಿ ಬಡಿಬಡಿದು ಹೋದರೂಕಲ್ಲು ಬಂಡೆಯ ತೆರದಿ ನಿಂತವರು ನಾವು ”
ಶೋಷಿತರ ಪರವಾಗಿ ಧ್ವನಿಯನ್ನೆತ್ತುವ ಇವರ ಕವಿತೆ ದಲಿತ ಮತ್ತು ಬಂಡಾಯದ ಚಳುವಳಿಯ ಹಾದಿಯನ್ನು ಹೇಗೆ ತನ್ನ ಹೆದ್ದಾರಿಯನ್ನಾಗಿಸಿಕೊಂಡಿದೆ ಎಂಬುದನ್ನು ಮನದಟ್ಟು ಮಾಡಿಸುತ್ತದೆ. ಬದುಕಿನ ಪ್ರತಿ ಹಂತದಲ್ಲಿಯ ಕೋಟಿ  ಕೋಟಲೆಗಳು ಎದುರಾದರೂ ಕಲ್ಲುಬಂಡೆಯಂತೆ ಎದೆಗೊಟ್ಟು ಎದುರಾಗಿ ನಿಲ್ಲುವ ದಿಟ್ಟತನವನ್ನು, ಆತ್ಮವಿಶ್ವಾಸವನ್ನು ಶೋಷಿತರಲ್ಲಿ ಮೂಡಿಸುವ ಸಾಮಾಜಿಕ ಹೊಣೆಗಾರಿಕೆಯನ್ನು ಇವರ ಕವಿತೆ ಪ್ರಾಮಾಣಿಕತೆಯಿಂದ ನಿಭಾಯಿಸುತ್ತದೆ. ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಹೋರಾಡುತ್ತದೆ. ಬಡತನವೆಂಬ ಹೆಮ್ಮಾರಿಯ ಕೈಯ್ಯೊಳಗೆ ಸಿಕ್ಕು ನರಳುತ್ತಿರುವ ಮನುಷ್ಯನ ಅಳ್ಳೆದೆಯಲ್ಲಿ ಹೆಮ್ಮಾರಿಯ ವಿರುದ್ಧ ಹೋರಾಡುವ ಶೂರತನವನ್ನು, ಧೈರ್ಯವನ್ನು ತುಂಬುತ್ತದೆ.
ಕವಿ ಸಮಾಜದಲ್ಲಿ ಧ್ವನಿಯಿಲ್ಲದವರ ಧ್ವನಿಯಾಗಿ ದೊಡ್ಡವರಿಗೊಂದು ಸಂದೇಶವನ್ನು ತಮ್ಮ ಕಾವ್ಯದ ಮೂಲಕ ತಲುಪಿಸುತ್ತಾರೆ. ಸಾಯುವ ಹಾಗೂ ಸತ್ತಂತೆ ಬದುಕುವ ನಿರಾಶಾವಾದವನ್ನು ಬದಿಗೊತ್ತಿ ಚೈತನ್ಯದ ಜೀವಂತಿಕೆಯನ್ನು ಚಿಗುರಿಸಿ ಬದುಕಿಗೆ ಉಲ್ಲಾಸವನ್ನು ತುಂಬುವ ಇವರ ಕವಿತೆ ಅನನ್ಯವಾಗಿದೆ.
“ತುಂಬು ಹೊಳೆ ತಾ ಹರಿದು ದೂರ ದೂರದಲಿರುವಎರಡು ದಡಗಳನಿಲ್ಲಿ ಕೂಡಿಸುತಲಿಹುದು;ಎರಡೆಲ್ಲ ಒಂದಾಗಿ ನಿಂದಿರಲಿ ಬಾಳಿನಲಿಎಂಬ  ನುಡಿಯನು ಇಳೆಗೆ ಊಡಿಸುತಲಿಹುದು”                                                 (ಹೊಳೆ- ಚೈತ್ರಾಗಮನ)ನಿಸರ್ಗ ಕವಿಯನ್ನು ಜೀವನದ ಚೈತನ್ಯವಾಗಿ ಕಾಡಿದೆ. ಚೈತ್ರಾಗಮನ ಕವನಸಂಕಲನದಲ್ಲಿಯ  ‘ಹೊಳೆ’ ಎಂಬ ಕವಿತೆಯಾಗಿ ಹರಿದ ಬಾಳು ಸುಖ ದುಃಖಗಳೆಂಬ ಎರಡು ಕವಲು ದಡಗಳನ್ನು ಒಂದು ಮಾಡಿ ಸಮರಸವನ್ನು ಮೂಡಿಸಬೇಕೆಂಬ ಹಂಬಲವನ್ನಿಟ್ಟುಕೊಂಡಿದೆ. ನಿಸರ್ಗದೆಡೆಗಿನ ಕುತೂಹಲದಲ್ಲಿ ಕುವೆಂಪು, ಬೇಂದ್ರೆಯವರಂತಹ ಪ್ರಕೃತಿಯ ಆರಾಧಕರನ್ನು ಸ್ಮರಿಸುವಂತೆ ಮಾಡುವ ಹೆಮ್ಮೆಯ ಕವಿ ಚಿಂತಕ ಸಂಶೋಧಕ ಆಧ್ಯಾತ್ಮಿಕ ಜೀವಿಗಳಾದ ಡಾ. ಎಸ್ ಎಸ್ ಬಸುಪಟ್ಟದರವರ”ನಿನ್ನ ಕರುಣೆಯ ಕಿರಣ ಕಣ ಕಣದಿ ತೋರಿಬರೆನಾನೇಕೆ ಭಯಪಡಲಿ ಓ ಎನ್ನ ದೊರೆಯೆನಿನ್ನ ಕರುಣೆಯ ಕಿರಣ ಸ್ಪರ್ಶ ಮಾತ್ರದಿ ಇಲ್ಲಿಪ್ರತಿವಸ್ತು ತಾವೆಲ ್ಲಚೈತನ್ಯದಾ ಸಿರಿಯೆ”
 ಸಾಲುಗಳು ಕುವೆಂಪು ರವರ ಈ ಕೆಳಗಿನ ಪದ್ಯವನ್ನು ನೆನಪಿಸುವಂತೆ ಮಾಡುತ್ತವೆ.”ಆನಂದಮಯ ಈ ಜಗಹೃದಯಭಯ ಏತಕೆ ಮಾಣೊಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೊ”
ಬೇಂದ್ರೆಯವರ ಕೆಳಗಿನ ಸಾಲುಗಳು ಬಸುಪಟ್ಟದರವರ ಪ್ರಕೃತಿ ಕಾವ್ಯಕ್ಕೆ ಪ್ರೇರಣೆಯನ್ನೊದಗಿಸಿರಬೇಕು- 
“ಮೂಡಲ ಮನೆಯ ಮುತ್ತಿನ ನೀರಿನಎರಕವ ಹೊಯ್ದನುಣ್ಣನೆ ಎರಕವ ಹೊಯ್ದಬಾಗಿಲು ತೆರೆದು ಬೆಳಕೂ ಹರಿದು ಜಗವೆಲ್ಲ ತೊಯ್ದಗಿಡ ಗಂಟೆಗಳ ಕೊರಳೊಳಗಿಂದಹಕ್ಕಿಗಳಾ ಹಾಡು ಹೊರಟಿತು ಹಕ್ಕಿಗಳಾ ಹಾಡುಗಂಧರ್ವರ ಸೀಮೆಯಾಯಿತುಕಾಡಿನಾ ನಾಡು ಕ್ಷಣದೊಳು ಕಾಡಿನಾ ನಾಡು”
ಹಿರಿಯ ತಲೆಮಾರಿನ ನವೋದಯದ ಆದರ್ಶಗಳನ್ನು ಕಾವ್ಯದಲ್ಲಿ ತಂದು ಮಾರ್ಗದರ್ಶಿಸಿದ ಕವಿ ಬಸುಪಟ್ಟದರವರು ಜೀವ ಜಗತ್ತನ್ನು ಅನವರತ ಬೆಳಗುತ್ತಿರುವ, ಜೀವಜಂತುಗಳಿಗೆಲ್ಲಾ ಚೈತನ್ಯದ ಸವಿಯನ್ನು ಉಣಬಡಿಸುತ್ತಾ ನೆತ್ತಿ ಕಾಯುತ್ತಿರುವಂತೆಯೆ ತನ್ನ ಜ್ಞಾನದ ಬೆಳಕಿನ ಕಿರಣಗಳ ಮೂಲಕ ಜಗತ್ತಿನ ಅಂಧಕಾರವನ್ನು ದೂರಮಾಡುತ್ತಿರುವ  ಕಿರಣಗಳ ದಾರ್ಶನಿಕ ನೇಸರನನ್ನು ಕುರಿತು ಆಲಾಪಿಸಿದ್ದಾರೆ.
ಕುವೆಂಪು ಬೇಂದ್ರೆಯವರಲ್ಲಿ ಗಂಧರ್ವ ಸೀಮೆಯ ಮಾಂತ್ರಿಕನಾಗಿರುವ ನೇಸರ ಬಸುಪಟ್ಟದರವರಲ್ಲಿ ಚೈತನ್ಯದ ಸಿರಿಯಾಗಿದ್ದಾನೆ. ಜಗದ ಕೀಲಿ ಕೈ ಇರುವುದು ನೇಸರನಲ್ಲಿ ಎಂಬ ಸತ್ಯದ ದರ್ಶನವನ್ನು ಅನಾವರಣಗೊಳಿಸುತ್ತಾರೆ, ನಿತ್ಯ ಸೌಂದರ್ಯದ ದೇವತೆಯಾಗಿ ಮಾನವ ಕುಲವನ್ನು ಸಹಿಸಿಕೊಂಡು ಸಲಹುತ್ತಿರುವ ಪ್ರಕೃತಿಯನ್ನು ರವಿಯ ರೂಪದಲ್ಲಿ ಆರಾಧಿಸುತ್ತಾರೆ. ಕುವೆಂಪುರವರು ‘ತೆರೆದಿದೆ ಮನೆ ಓ ಬಾ ಅತಿಥಿ’ ಎಂದು ಬೆಳಕಿನ ಅಧಿಪತಿಯನ್ನು ಬರಮಾಡಿಕೊಂಡರೆ ಬಸುಪಟ್ಟದರವರು ‘ಕರುಣೆ ದೋರು ಓ ಎನ್ನ ದೊರೆಯೆ’ ಎಂದು ಸಂಭ್ರಮಿಸುತ್ತಾರೆ. ಪ್ರಕೃತಿ ಕವಿಯನ್ನು ಚೈತನ್ಯದ ಚಿಲುಮೆಯಾಗುವಂತೆ ಹಾರೈಸುತ್ತದೆ.

“ಆಗು ಹೋಗು ಸೌಖ್ಯ ದುಃಖ ಏಳು ಬೀಳು ಸೋಲು ಗೆಲುವಹೂವ ಮಾಡಿ ಸೊಗದ ಜೊತೆಗೆ ಬಾಳಹಾಸಿನಲ್ಲಿ ಚೆಲುವಹೊಕ್ಕ ಹಾಕಿ ನೇಯ್ವನಿವನು”
 ಎಂದು ಬಸುಪಟ್ಟದರವರು ದೇವನೊಬ್ಬ ಈ ಸುಂದರ ಬಾಳಿನ ಕಲಾತ್ಮಕ ನೇಕಾರ ಎಂಬುದನ್ನು ಅರ್ಥಪೂರ್ಣವಾಗಿ ಬಣ್ಣಿಸುತ್ತಾರೆ.  ನೇಕಾರ ಮನೆತನದಲ್ಲಿ ಹುಟ್ಟಿ ಸ್ವತಃ ಕಾವ್ಯಬಟ್ಟೆ ನೇಯುವ ಕೌಶಲ್ಯ ಕರಗತ ಮಾಡಿಕೊಂಡಿದ್ದ ಇವರಿಗೆ ದೇವನೂ ಕೂಡ ಬಲುಚತುರ ನೇಕಾರನಾಗಿ ಕಂಡಿದ್ದರಲ್ಲಿ ಆಶ್ಚರ್ಯ ಕಾಣದು. ಬಣ್ಣ ಬಣ್ಣದ ನೂಲಿನ ಎಳೆಗಳಿರುವಂತೆ ಬದುಕಿನ ತೊಳಲಾಟಗಳನ್ನು ಸುಂದರ ಹಾಸನ್ನಾಗಿ ಮಾಡಿಕೊಂಡು ಚೆಲುವಿನ ಚಿತ್ತಾರಗಳ ಜೀವನದ ಬಟ್ಟೆಯನ್ನು ನೇಯುವ ಕರಕುಶಲಿಗನಾದ ದೇವನೇ ಈ ಜಗದೊಡೆಯ ಎಂಬ ದಾರ್ಶನಿಕತೆ ಕವಿಯದು.  ಬದುಕನ್ನು ಅದು ಬಂದಂತೆಯೇ ಸ್ವೀಕರಿಸಿ ಆತ್ಮಾನಂದ ಪಡೆಯಬೇಕೆಂಬ ಜೀವನೋತ್ಸಾಹ ಇಲ್ಲಿ ಮಾದರಿಯಾಗಿದೆ. ಮಧುರ ಚೆನ್ನರ ಪರಜೀವನ ತತ್ವ, ಕುವೆಂಪುರವರ ಆಧ್ಯಾತ್ಮಿಕತೆಯ ದರ್ಶನ, ಬೇಂದೆಯವರ ಜೀವನ ತತ್ವಜ್ಞಾನದ ಒಲವು, ಚೆನ್ನವೀರ ಕಣವಿಯವರ ಕಾವ್ಯದ ಚೆಂಬೆಳಕು, ಕರ್ಕಿಯವರ ನಾಡಪ್ರೆಮ, ರಂ ಶ್ರೀ ಮುಗಳಿಯವರ ಸಂಶೋಧನಾ ಪ್ರೀತಿ,ವಿ. ಕೃ.ಗೋಕಾಕರು, ಗೋಪಾಲ ಕೃಷ್ಣ ಅಡಿಗರಂತಹ ನವ್ಯರ ಮಣ್ಣಿನ ವಾಸನೆಯ ಸತ್ವಶೀಲತೆ, ಬಂಡಾಯ ಸಾಹಿತ್ಯದ ಕೆಚ್ಚೆದೆಯ ಹೋರಾಟದ ಸಕಲ ಗುಣಗಳೂ ಮುಪ್ಪರಿಗೊಂಡು, ಎರಕ ಹೊಯ್ದ ಸುಗುಣಶೀಲದ ಕಲಾತ್ಮಕ ಮೂರ್ತಿಯಾಗಿದ್ದಾರೆ ಬಸುಪಟ್ಟದರವರು.“ಮನದ ಕಲ್ಮಶವೆಲ್ಲ ತೊಳೆದು ತಿಳಿಗೊಳವಾಯ್ತುಅಮರ ಗಂಗ ನದಿಯು ನೀನುಚಪಲ ಚಂಚಲ ನಿಂತು ಚಿತ್ತ ಸುಸ್ಥಿರವಾಯ್ತುಅನುಪಮ ಹಿಮಾಚಲ ನೀನು” ಎಂದು ಹಾಡುವ ಕವಿಯ ಪ್ರೀತಿಯು, ಮನಸೆಂಬ ಶತಮುಖ ಅವತಾರದ ಕಲ್ಮಶಗಳನ್ನೆಲ್ಲ ತೊಳೆಯುವ ಅಮರ ಗಂಗೆಯಾಗಿ , ಮನಸೆಂಬ ಮಾಯೆಯ ಹುಚ್ಚು ಕುದುರೆಯ ಓಟವನ್ನು ತಡೆದು ನಿಲ್ಲಿಸುವ ಅಚಲ ಹಿಮಾಚಲವಾಗಿ ವಿಲಾಸಗೈದಿದೆ.
ಕೆ ಎಸ್ ನರಸಿಂಹಸ್ವಾಮಿಯವರ ಪ್ರೀತಿಯ ಈ ಸಾಲುಗಳನ್ನು ನೋಡಿ
“ಸೋಲು ಗೆಲುವುಗಳಲ್ಲಿ ಮುಂಬರಿಯುವೆನು ನಾನುನಾನು ಅಂಜುವುದಿಲ್ಲ ಬಿರುಗಾಳಿಗೆನನ್ನ ನಂಬಿಕೆಯಲ್ಲಿ ಅಡಿಯನಿಡುವೆನು ನಾನುನಾನೆ ನಕ್ಷತ್ರ ನೀಲಾಕಾಶ ನೀನೆ”ಈ ಕವಿತೆಯಲ್ಲಿ ನೀಲಾಕಾಶ ವಾಗಿರುವ ಒಲವು ಬಸುಪಟ್ಟದರವರ ಮೇಲಿನ ಸಾಲುಗಳಲ್ಲಿ ಗಂಗೆಯಾಗಿ ಹರಡಿದೆ; ಹಿಮಾಚಲವಾಗಿ ನಿಂತಿದೆ. ಬಸುಪಟ್ಟದರವರು ಪ್ರಕ್ರೃತಿಯ ಆರಾಧಕರಾಗಿರುವಂತೆ ಒಲವಿನ ಪೂಜಾರಿಗಳೂ ಆಗಿದ್ದರೆಂಬುದಕ್ಕೆ ಅವರ ಕವಿತೆಗಳು ನಿದರ್ಶನವಾಗಿವೆ. ಮನಸೆಂಬ ಮಾಯೆಗೊಂದು ಸುಭದ್ರ ಕಡಿವಾಣ ಪ್ರೀತಿಯಲ್ಲಿದೆ ಎಂಬ ನಿಲುವು ಕವಿಯದು. ಸಾಮಾನ್ಯವಾಗಿ ಕವಿಗಳಲ್ಲಿ ಚಿತ್ತ ಚಾಂಚಲ್ಯಕ್ಕೆ ಕಾರಣವಾಗುವ ಒಲವು ಬಸುಪಟ್ಟದರವರಲ್ಲಿ ಸುಸ್ಥಿರ ಹಾಗೂ ದೃಢ ಹಿಮಾಚಲಕ್ಕೆ ಕಾರಣವಾಗಿದೆ. ಪ್ರಣಯದ ಮೂಲಕ ಅನಂತತೆಯ ಔನ್ನತ್ಯಕ್ಕೇರುವ ಹೆಬ್ಬಯಕೆ ಬಸುಪಟ್ಟದರವರದು. ಪರಿಶುಧ್ಧ ಪ್ರೇಮದ ತುಡಿತ ಕವಿಯನ್ನು ಗಂಗೆಯಲ್ಲಿ ಮಿಂದೇಳುವಂತೆ ಮಾಡಿದೆ. ಅಗಣಿತ ಅನಂತ ಚೈತನ್ಯದ ಸೂತ್ರಧಾರಿ ಈ ಒಲವು ಎಂಬುದಕ್ಕೆ ಕವಿಯ ಸಾಲುಗಳನ್ನು ಗಮನಿಸಿ“ನೀನೆರಡು ನುಡಿ ನುಡಿಯೆ ಅಕ್ಕರೆಯ ಸಕ್ಕರೆಯಹಾಲು ಜೇನಿನ ಹೊಳೆಯೆ ಹರಿದು ಬಂತುಕಣ್ಣು ಮಿಂಚದು ತಾನು ಸಾಂದ್ರ ಚಂದ್ರಿಕೆಯಾಗಿಹೃದಯದಂಗಳವನ್ನು ಬೆಳಗಿತಿಂತು” ಜೀವನದ ಪರಮ ಉತ್ಸಾಹ ಅಡಗಿರುವುದು ಜೇನಿನ ಹೊಳೆಯಂತೆ ಹರಿಯುವ ಸುಮಧುರ ಪ್ರೀತಿಯಲ್ಲಿ. ಅದು ಸಾಂದ್ರ ಚಂದ್ರಿಕೆಯಾಗಿ ಹೃದಯದಂಗಳವನ್ನು ಬೆಳಗಿದರಂತೂ ತಣಿದು ಭಾವಪರವಶರಾಗುವ ಸುಖವಂತೂ ವರ್ಣಿಸಲಸದಳವಾದದ್ದು. ಒಲವಿನಾಕೆಯ ಎರಡು ನುಡಿ ಅಕ್ಕರೆಯ ಹೊಳೆಯನ್ನು ಹರಿಸುವ ಇವರ ಕಾವ್ಯದ ಪರಿಗೆ ಮೂಕವಿಸ್ಮಿತರಾಗದವರೆ ಇಲ್ಲ. ಒಲವು ಇವರ ಹೃದಯದಲ್ಲಿ  ಹಾಲು ಜೇನಿನ ಹೊಳೆಯಾಗಿ ಹರಿದು ಮಾಧುರ್ಯವನ್ನು ತಂದಿದೆ. ಹೃದಯವನ್ನು ಬೆಳಗುವ ಏಕೈಕ ಶಕ್ತಿ ಅದು ಒಲವು . ಒಲವಿನಿಂದಲೆ ಜೀವನ ಸಾಕ್ಷಾತ್ಕಾರ ವೆಂಬ ಗಂತವ್ಯದ ನೆಲೆ ಬಸುಪಟ್ಟದರವರ ಕಾವ್ಯದ ಸೆಲೆ. ಇವರು ಹಾಡಿದ ಒಲವಿನಾಲಾಪವನ್ನು ಕೇಳಿದೊಡನೆ ನನ್ನ ಮನದ ಮೂಲೆಯಿಂದ ತೂರಿ ಬಂದ ನನ್ನದೆ ಕವಿತೆಯ ಸಾಲುಗಳನ್ನು ದನಿಗೂಡಿಸುವುದಾದರೆ-“ಚಂದ್ರನಿಲ್ಲದ ಹುಣ್ಣಿಮೆಯುಂಟೆಬೆಳಗು ಬತ್ತಿದ ಹೃದಯತಣಿಸು ಬಾ ನನ್ನೆದೆಯನಿನ್ನ ಹೆಜ್ಜೆಗಳ ನಿನಾದದಿಂದ”          ಡಾ. ಶೀಲಾಕಾಂತ ಪತ್ತಾರ ರವರು ಬಸುಪಟ್ಟದರವರ ಸಾತ್ವಿಕ ವ್ಯಕ್ತಿತ್ವ, ದಾರ್ಶನಿಕತೆಯ ಸಾಹಿತ್ಯ, ಸಮಾಜದ ಅಲಕ್ಷಿತ ವರ್ಗದವರೆಡೆಗಿನ ಕಾಳಜಿ, ವಿನಯ ತುಂಬಿದ ಪಾಂಡಿತ್ಯ ಕುರಿತು ‘ನಮ್ಮೂರ ಟ್ಯಾಗೋರ್’ ಎಂದು ಬಣ್ಣಿಸಿರುವುದು ಔಚಿತ್ಯಪೂರ್ಣವಾಗಿದೆ.“ಮಾತು ನಿನ್ನದು ಮಲ್ಲಿಗೆಅಷ್ಟು ಶುಭ್ರ; ಸುವಾಸಿತಹಸಿರು ಗದ್ದೆಯ ಮಧ್ಯೆಶ್ವೇತ ಕುಸುಮವು ನೀನುಮಾತಿನಿಂದ ಇರಿದವನು ನೀನಲ್ಲಹರಿದವನೂ ನೀನಲ್ಲಅಧಿಕಾರದ ಲಗಾಮು ಹಿಡಿದವನಲ್ಲನಿನ್ನಿಂದ ಬೆಲೆ ಆ ಕುರ್ಚಿಗೆಅದರಿಂದ ನಿನಗಲ್ಲನಿನ್ನ ಗುರುತ್ವ ಶಕ್ತಿಯೊಂದು ನನಗೆ ಒಗಟು”ಎಂದು ವಿದ್ವಾಂಸರೂ, ಸಂಶೋಧಕರೂ, ಇತಿಹಾಸ ತಜ್ಞರೂ ಆದ ಡಾ. ಶೀಲಾಕಾಂತ ಪತ್ತಾರರವರು ಬಸುಪಟ್ಟದರವರ ವ್ಯಕ್ತಿತ್ವವನ್ನು ಕವಿತೆಯಾಗಿ ಹಾಡಿ ಹೆಮ್ಮೆ ಮೂಡಿಸಿದ್ದಾರೆ. ಡಾ.ಬಸುಪಟ್ಟದರವರು ಅಧ್ಯಯನ, ಅಧ್ಯಾಪನ, ಅಧ್ಯಾಪಕವೃತ್ತಿಗಳ ಬಿಡುವಿಲ್ಲದ ಪರಿಶ್ರಮದ ತಪಸ್ಸಿನ ಮಧ್ಯೆಯೂ ಬದುಕನ್ನು ಹಣ್ಣಿನಂತೆ ಸವಿದವರು; ಜೇನಿನಂತೆ ಹೀರಿದವರು; ನೀಲಾಂಬರದಂತೆ ಪ್ರೀತಿಸಿದವರು.
ನಮ್ಮ ನಾಡಿನ ಮತ್ತೊಬ್ಬ ವಿದ್ವಾಂಸರಾದ  ಹಾ. ಮಾ . ನಾಯಕರು ಕವಿ ಬಸುಪಟ್ಟದರವರನ್ನು ಕುರಿತು “ಹತ್ತಿರದಿಂದ ಬಲ್ಲವರಿಗೆ ಸಹೃದಯಮಿತ್ರ, ಕಾವ್ಯ ಪ್ರೇಮಿಗಳಿಗೆ ನಿಜವಾದ ಕವಿ, ನಿಷ್ಠಾವಂತ ಅಧ್ಯಾಪಕ. ತಾಳ್ಮೆ ಹಾಗೂ ಮಾಗುವಿಕೆ ಬಸುಪಟ್ಟದ ರವರವರ ಬದುಕಿನ ಸೂತ್ರ.” ಎಂದು ಅಭಿಮಾನದ ಹಾರೈಕೆಯನ್ನಿತ್ತಿದ್ದಾರೆ,
ಹತ್ತು ದಿಕ್ಕಿಗೂ ಹಾದಿ ಹರಡಿಹುದು ಸುತ್ತುಹಾದಿಯಲಿ  ಬಹುಮುಳ್ಳಹಾದಿಯಲಿ ಬಹ ಈ ಮುಳ್ಳುಗಳ ತಳ್ಳುಸಾಗು ಮುಂದಕೆ ಸಾಗುಎಂದು ಜೀವನದಲ್ಲಿ ಎದುರಾಗುವ ಸಂಕಷ್ಟಗಳಿಗೆ ಬೆನ್ನು ತೋರಿ ಹೇಡಿಯಾಗುವುದಕ್ಕಿಂತ ಮುಳ್ಳುಗಳಂತೆ ಬದುಕಿನ ದಾರಿಯಲ್ಲಿ ಹರಡಿರುವ ತಡೆಗಳನ್ನು ಸವಾಲುಗಳೆಂದು ಸ್ವೀಕರಿಸಿ ಮುನ್ನಡೆಯುವುದೇ ಬದುಕಿನ ಪರಮೋದ್ಧೇಶವಾಗಬೇಕು. ‘ಮುಳ್ಳ ಮಂಚವನ್ನೇರಿ ನೀನಾಗು ಭೀಷ್ಮ’ ಎಂಬ ಅವರದೆ ಕವಿತೆಯ ಸಾಲು ಅವರ ವ್ಯಕ್ತಿತ್ವಕ್ಕೊಂದು  ಮೆರಗನ್ನು ನೀಡುತ್ತದೆ. 1960 ರ ದಶಕದಲ್ಲಿ ಅಖಂಡ ವಿಜಯಪುರ ಜಿಲ್ಲೆಯಲ್ಲಿಯೇ ಪಿ.ಎಚ್.ಡಿ ಪಡೆದ ಏಕೈಕ ವಿದ್ವಾಂಸರೆಂಬ ಹೆಗ್ಗಳಿಕೆಯೂ ಡಾ. ಎಸ್ ಎಸ್ ಬಸುಪಟ್ಟದರವರದು. ಹೀಗೆ ಆಗಿನ ಗುಳೇದಗುಡ್ಡ ವೆಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಅವರು ಅಖಂಡ ಕರ್ನಾಟಕಕ್ಕೆ ತಮ್ಮ ಸಾಹಿತ್ಯದ ಸವಿಯನ್ನು ಉಣಬಡಿಸಿ ನೀಲಾಗಸದಂತೆ ವಿಸ್ತರಿಸಿಕೊಂಡ ಕೀರ್ತಿಪುರುಷರಾಗಿದ್ದಾರೆ.


Thursday, 27 June 2019

ಕಾವ್ಯೋದ್ಯಾನವನದಲ್ಲೊಂದು ವಿಹಾರ ಭಾಗ 2
ಶಬ್ದಸೂತಕದಿಂದ ಕಾವ್ಯವನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಹಾಗೆಯೇ ಬದುಕನ್ನೂ ಕೂಡ. ಶಬ್ದಗಳ ಬಂಧನದಲ್ಲಿಟ್ಟಷ್ಟೂ ಮುಕ್ತವಾಗುತ್ತಲೇ ಹೋಗುವುದು  ಕಾವ್ಯದ ಜಾಯಮಾನ; ನಿಗೂಢವಾಗುತ್ತಲೇ ಹೋಗುವುದು ಕಾವ್ಯದ ಗುಣ.ಕಾವ್ಯದ ಪಯಣವೆಂದಿಗೂ ಅನಂತತೆಯ ಕಡೆಗೆ.ದಕ್ಕಿದೆ ಎನ್ನುವಾಗಲೇ ದಕ್ಕದೇ ಹೋಗುವುದೂ ಕೂಡ ಕಾವ್ಯರಾಣಿಯ ಚಂಚಲತೆಯ ಲಕ್ಷಣ.ಇಂತಹ ಚಂಚಲ ಹಾಗೂ ಅಷ್ಟೇ  ಅಮಲಿನ ಕಾವ್ಯವನ್ನು ಸಾರ್ಥಕವಾಗಿ ದಕ್ಕಿಸಿಕೊಂಡ ಜಗತ್ತಿನ ದಾರ್ಶನಿಕರನ್ನು ದರ್ಶಿಸುವ ಮಹತ್ವದ ಕೃತಿಯಾಗಿ "ಜಾಡಮಾಲಿಯ ಜೀವ......." ಗಮನಸೆಳೆಯುತ್ತದೆ. ತನ್ನ ಪರಮಶಿಷ್ಯ ಜಲಾಲುದ್ದೀನ್ ರೂಮಿಯ ಅನುಯಾಯಿಗಳಿಂದಲೇ ಕೊಲೆಯಾಗಿ ರೂಮಿಯ ಮಗನಿಂದ ಸಮಾಧಿಯನ್ನಲಂಕರಿಸಿಕೊಂಡ,"ವಕಾಲತ್- ಎ-ಶಾಮ್ಸ -ಎ-ತಬ್ರೀಝಿ" ಎಂಬ ಏಕೈಕ ಪರ್ಶಿಯನ್ ಕೃತಿಯ ನೇಕಾರ, ಜಗತ್ಪ್ರಸಿದ್ಧ ಚಿಂತಕ ಶಾಮ್-ಎ-ತಬ್ರೀಝಿಯಾಗಿರಬಹುದು,ಸೌಂದರ್ಯವನ್ನೇ ಆರಾಧಿಸಿ,ಕಾಲು ಕಳೆದುಕೊಂಡ ಭಗ್ನ ಶಿಲ್ಪವಾಗಿ ಬದುಕನ್ನು ಸಾವಿನೊಂದಿಗೆ ಸವೆಸಿದ ಮೆಕ್ಸಿಕನ್ ಕಾವ್ಯಾರಾಧಕಿ ಫ್ರಿದಾ ಕಾಹಲೊವಾ ಆಗಿರಬಹದು,ಕಾವ್ಯ ಮತ್ತು ಖಡ್ಗಗಳ ಸಾಂಗತ್ಯದಲ್ಲಿ ಕ್ರಾಂತಿಯ ಬೀಜ ಬಿತ್ತಿ ಸೋವಿಯತ್ ಸರ್ಕಾರದಿಂದ ಗಲ್ಲಿಗೇರಿಸಲ್ಪಟ್ಟ ಅಹಮದ್ ಜಾವೇದ್ ಇರಬಹುದು,"ಸಾಂಗ್ಸ ಆಫ್ ದಿ ಆರ್ಮಿ "ಯನ್ನು ರಚಿಸಿ ಇಂಗ್ಲೆಂಡಿನ ಕಾರ್ಮಿಕರ ದನಿಯಾಗಿ ಕೊನೆಗೆ ಆತ್ಮಹತ್ಯೆಯಂತಹ ದುರಂತ ಸಾವನ್ನು ಕಂಡ ಕಾದಂಬರಿಕಾರ ಫ್ರಾನ್ಸಿಸ್ ಆ್ಯಡಮ್ಸ್ ಆಗಿರಬಹದು, ಸೇವೆಯನ್ನು ಸೈತಾನನಿಂದ ಕಲಿಯಬೇಕು ಎಂದು ಪ್ರತಿಪಾದಿಸಿ ಔರಂಗಜೇಬನಿಂದ ತಲೆದಂಡಕ್ಕೊಳಗಾದ ನಗ್ನತೆಯ ಆರಾಧಕ ಮೊಹಮ್ಮದ ಸಯೀದ್ ಸರ್ಮದ್ ಖಶಾನಿಯಾಗಿರಬಹುದು ,ಧರ್ಮಸುಧಾರಣೆಗಾಗಿ ತುಡಿದ ಮಾರ್ಟಿನ್ ಲೂಥರ್ ಕಿಂಗ್ ನನ್ನು ನೆನಪಿಸುವ, ಬಸವಣ್ಣನವರ ಆಚಾರವೇ ಸ್ವರ್ಗ ಅನಾಚಾರವೇ ನರಕ ವೆಂಬ ಚಿಂತನೆಗಳಿಗೆ ಹತ್ತಿರವಾಗಿ, ಅಕ್ಕಮಹಾದೇವಿಯಂತೆ ಸಾವಿಲ್ಲದ ಗಂಡನನ್ನು ಹುಡುಕುತ್ತಲೇ ಲೀನವಾದ ರಾಬಿಯಾ ಆಗಿರಬಹದು,ಪ್ರೇಯಸಿಯಿಂದ ಪ್ರೀತಿಯಿಂದ ಹೊಡೆಸಿಕೊಳ್ಳದವನು,ಶೆರೆ ಕುಡಿಯದವನು ಎಂದಿಗೂ ಕವಿಯಾಗಲಾರ ಎಂಬ ವಿಲಕ್ಷಣವಾದ ಸತ್ಯವನ್ನು ಪ್ರತಿಪಾದಿಸಿ ಕವಿತೆಯಾಗಿ ಮಾತ್ರ ಈ ಜಗಕೆ ದಕ್ಕಿದ ಗಾಲಿಬನಾಗಿರಬಹದು ಹೀಗೆ ಈ ಕೃತಿಗೆ ಮುನ್ನುಡಿಯಾದವರೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಬದುಕೆಂಬ  ದುರಂತ ನಾಟಕದ ನತದೃಷ್ಟ ನಾಯಕರುಗಳೆ;
ಸಮಾಜೋದ್ಧಾರಕ್ಕಾಗಿ ಪ್ರಭುತ್ವದ ವಿರುದ್ದ ಕಾವ್ಯಖಡ್ಗವನ್ನು ಹಿಡಿದು ಝಳಪಿಸಿದವರೇ ; ಕ್ರಾಂತಿಯ  ಮೂಲಕ ಮಾನವತೆಗಾಗಿ  ಪ್ರತಿಭಟಿಸಿದವರೇ.ಈ ಜಗದ ಸಾಂಸ್ಕೃತಿಕ ಲೋಕವನ್ನು ತಮ್ಮೊಳಗಿನ ಆಂತರ್ಯದ ಒಳನೋಟದ ಮೂಲಕ ನಿರ್ಭೀತಿಯಿಂದ ಎಚ್ಚರಗೊಳಿಸಿದವರೇ. ಮನುಷ್ಯನೊಳಗಣ ಮನುಷ್ಯತ್ವವನ್ನು ತೆರೆದು ತೋರಿಸುವ ಇಲ್ಲಿಯ ಕವಿತೆಗಳು ಮಹಾಮಾನವೀಯತೆಯ ಗಿಡದಲ್ಲರಳಿದ ಪುಷ್ಪಗಳು. ಮಾನವ ಆಚರಿಸಬೇಕಾದ ತತ್ವಜ್ಞಾನದ ಸಾಲುಗಳನ್ನು ಸರಳ ಸಾಲುಗಳ ಪರಿಮಳದ ಮೂಲಕ ಜನಮನಕೆ ತಲುಪಿಸಿದ ದಾಸಯ್ಯರು ಇಲ್ಲಿಯ ಕವಿಸೂರಿಗಳು. ಮೂಲ ಭಾವ, ಅರ್ಥ, ಆಶಯಗಳಿಗೆ ಕಿಂಚಿತ್ತೂ  ಧಕ್ಕೆಯೊದಗದಂತೆ ರಾಗಂರವರ ಲೇಖನಿಯಲ್ಲಿ ಇಲ್ಲಿಯ ಕವಿತೆಗಳು ಮರುಹುಟ್ಟು ಪಡೆದಿವೆ. ರಾಗಂರವರೇ ಹೇಳುವಂತೆ ಇಲ್ಲಿಯ ಕವನಗಳು  ಬರಿ ಶುಷ್ಕವಾದ ಭಾಷಾಂತರವಲ್ಲ ಬದಲಾಗಿ ಭಾವಶುದ್ಧತೆಯೊಂದಿಗೆ ಪುನರ್ ಸೃಷ್ಠಿಗೊಳಗಾಗಿವೆ. ನಿಜ. ನೀರಸ ಅನುವಾದ ಮೌಲಿಕವಾದುದನ್ನು ಹೊರಗಿಡುತ್ತದೆ. ಈ ಕವಿತೆಗಳನ್ನು ಪುನರ್ ಸೃಷ್ಟಿಸುವ ರಾಗಂರವರ  ಪರಿಯೇ ಮನೋಜ್ಞವಾಗಿದೆ -
"ಎಲ್ಲ ಇದೆ ಈ ಮೈಯೊಳಗೆ
ಹಸಿ ಗಂಧದ ಪರಿಮಳ
ಬಗೆ ಹೂಗಳ ಉಸಿರು
ಕೋಟಿ ಸಸಿಗಳಿಗೊಂದು ಬಸಿರು
ಎಲ್ಲ ಇದೆ ಈ ಮೈಯೊಳಗೆ
ಎದೆಯ ಬಟ್ಟಲದೊಳಗೇ
ಉಸಿರು ಕಟ್ಟಿಸುವ ವಿಷ
ಎಲ್ಲ ಎಲ್ಲ ಇದೆ ಈ ಮೈಯೊಳಗೆ"
ಎಂಬಲ್ಲಿನ ಆರ್ದ್ರತೆ ನವಪರಿಮಳದೊಂದಿಗೆ  ಘಮಘಮಿಸುತ್ತಿರುವ ಪರಿಯನ್ನು ಗಮನಿಸಿ. ರೂಪದರ್ಶಿ,"ವೈಟ್ ಎಲಿಫೆಂಟ್", "ವರ್ಲ್ಡ್ ಹೋಟೆಲ್ " ನಂತಹ ಕಾವ್ಯ ಸಂಕಲನಗಳ ಮೂಲಕ ಜನಮನಸೂರೆಗೊಂಡು ಮಡಿಲು ತುಂಬಿ ಹರಿಯುವಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡು  ಪಂಜಾಬಿನಲ್ಲಿ ಹುಟ್ಟಿ ಅಮೆರಿಕಾದವರೆಗೆ ಹಬ್ಬಿಕೊಂಡ ಕಾವ್ಯಬಳ್ಳಿಯಂತಿದ್ದ ರೀತಿಕಾ ವಾಜಿರಾಣಿ ಎಂಬ, ಹೆತ್ತ ಮಗನನ್ನೇ ಕೊಂದು ಆತ್ಮಹತ್ಯೆ ಮಾಡಿಕೊಂಡ ದುರಂತ ನಾಯಕಿಯ ಮೇಲಿನ ಕಾವ್ಯ ಏನೆಲ್ಲವನ್ನೂ ಧ್ವನಿಸುತ್ತಿದೆ ಅಲ್ಲವೇ?  ಜನನದಿಂದ ಮರಣದವರೆಗಿನ ಉಸಿರು, ಬಸಿರು, ವಿಷದ ಮೂಲಕ ಅಂತ್ಯದ ಸಂಗತಿಗಳನ್ನು ಮೇಲಿನಂತೆ ಕೆಲವೇ ಸಾಲುಗಳಲ್ಲಿ ಹಾಡಿದ ರೀತಿಕಾಳ ನೋವ ಒಡಲು ಅದೆಷ್ಟು ಯಾತನೆಯಿಂದ ನರಳಿರಬೇಕಲ್ಲವೇ?  ಆ ನರಳುವಿಕೆ ಈ ಪದಗಳ ಮೂಲಕ ಬ್ರಹ್ಮಾಂಡವನ್ನೇ ಆವರಿಸಿ ಅನುರಣಿಸುತ್ತಿದೆ. ಕರಣ ಕರಣದಲೂ ರಿಂಗಣಿಸಿ ಸುತ್ತಿ ಸುಳಿಯುವ ಮಡುವನ್ನೇ ಸೃಷ್ಟಿಸುವ ಈ ಕಾವ್ಯದ ಅಂತಃಶಕ್ತಿಗೆ ನಾವು ತಲೆಬಾಗಲೇಬೇಕು.
ರಾಗಂ ರವರು ಜಗತ್ತಿನ ಹೊರವಲಯದ ಗುಡಿಸಲುಗಳಲ್ಲಿ ಕಳೆದುಹೋಗಿದ್ದ ಕಾವ್ಯಮಣಿಗಳನ್ನು ಆಯ್ದು ತಂದು ಪೊಸ ಮಾಲೆಯನ್ನಾಗಿ ಕಟ್ಟಿ ಕನ್ನಡ ಸರಸ್ವತಿಯ ಮುಡಿಗೇರಿಸಿ ಅಲಂಕರಿಸಿರುವುದು ಹೆಮ್ಮೆ ಹಾಗೂ ಅಭಿಮಾನದ ಸಂಗತಿ. ರೋಮ್ಯಾಂಟಿಕ್ ಯುಗದ ನಂತರದ ಸಮರ ಕಾವ್ಯಯುಗದ ಕವಿಗಳೂ ಕೂಡ ಶಬ್ದಸಂಗೀತವಾಗಿ ಈ ಕೃತಿಯ ಮೂಲಕ ಸುಮಧುರವಾದ ಕಾವ್ಯವಾಗಿದ್ದಾರೆ. "ದೇವರು" ಎಂಬ ತಮ್ಮ ವಿಶಿಷ್ಟ  ವೈಚಾರಿಕ ಕೃತಿಯಿಂದ ಭಗವಂತನನ್ನು ಹುಡುಕಿದ ಚಿಂತಕರಾದ ಎ. ಎನ್. ಮೂರ್ತಿರಾಯರು ಅಂತಿಮವಾಗಿ ಶೋಧಿಸಿದ್ದು ಇಲ್ಲಿಯ ಮನ್ಸೂರ ನೆಂಬ ಮಾನವಪ್ರೇಮಿ ಕವಿಯೊಬ್ಬ ತಡಕಾಡಿದ ದೇವರನ್ನೇ ಎಂಬುದನ್ನು ನೋಡಿ -  "ಹೃದಯದ ಕಣ್ಣುಗಳಿಂದ
ದೇವರ ಕಂಡೆ
ಯಾರು ನೀ ಎಂದೆ
ಮುಗುಳ್ನಕ್ಕು ಆತ ನುಡಿದ
"ನೀನು"
ನಾನೆಂದರೆ ನೀನೆ.." .
ಯುದ್ದಕಾವ್ಯ ಯುಗದಲ್ಲಿ ಪರಿಶುದ್ಧ ಪ್ರೇಮವನ್ನು ಬಿತ್ತಿ,
ಪ್ರೇಮ ತುಂಬಿದ ಹೃದಯದ ಬೆಳಕನ್ನು ಹರಡುವ ರಷ್ಯಾದ ಅಲೆಮಾರಿ ಕವಿ ನಾಟಕಕಾರ ವಿಮರ್ಶಕ ನಿಖೊಲೆ ಗ್ಯಾಮಿಲಿಯೊ ನ ಪ್ರಣಯ ಕವಿತೆಯ ಸೌಂದರ್ಯವನ್ನೊಮ್ಮೆ ಆಸ್ವಾದಿಸಿ -
"ಯಾರೂ ಸಾಯುವುದಿಲ್ಲ
ನಿನ್ನ ಮುಟ್ಟಿ
ಯಾರೂ ಬದುಕುವುದಿಲ್ಲ
ನಿನ್ನ ಮೆಟ್ಟಿ
ಒಟ್ಟಂದದ ಬದುಕಿನಲ್ಲಿ
ನಿನ್ನ ಸಂಗವೆ
ಪರಮ ಮಂಗಳ
ನಿನ್ನ ಸ್ಮರಣೆಯ
ಬೆಳಕು ಹಬ್ಬಿದೆ
ಗೆಲುವಾಗಿದೆ ಹೃದಯದಂಗಳ"
ಈ ಕವಿತೆಯ ಸಾಲುಗಳನ್ನು ಕಣ್ತುಂಬಿಕೊಳ್ಳುತ್ತಿದ್ದರೆ ಕೆ ಎಸ್ ನರಸಿಂಹಸ್ವಾಮಿಯವರ
" ನಿನ್ನ ಪ್ರೇಮದ ಪರಿಯೆ
ನಾನರಿಯೇ ಕನಕಾಂಗಿ
ನಿನ್ನೊಳಿದೆ ನನ್ನ ಮನಸು.." ಎಂಬ ಕಾವ್ಯದೆಸಳುಗಳು  ನೆನಪಾಗುತ್ತವೆ.ಹೌದು. ಪ್ರೇಮದ ಲಲಾಟವೇ ಅಂಥಹದ್ದು. ಪ್ರೇಮ ಕಾಡದ ಕವಿಯಿರಲಾರ ಎಂಬುದಕ್ಕೆ ಷೇಕ್ಸಪಿಯರ್ ನ ನಾಟಕಗಳೂ ಸಾಕ್ಷ್ಯ ಹೇಳುತ್ತವೆ; ಬೇಂದ್ರೆಯವರ ಸಖಿಗೀತ ಗಳು ದೃಷ್ಟಾಂತವನ್ನೊದಗಿಸುತ್ತವೆ; ಕುವೆಂಪುರವರ ಪ್ರೇಮಕಾಶ್ಮೀರ ಹಿಮಸುರಿಸಿ ಹಾಡುತ್ತದೆ. ಎಚೆಸ್ವಿಯವರ ಭಾವಗೀತೆಗಳು ದನಿಯೆತ್ತಿ ಗಾಯನಗೈಯ್ಯುತ್ತವೆ.
ಮಾನವಸಮಾಜವನ್ನು ಮುನ್ನಡೆಸಲು ಬೇಕಾದ ಸಮಾಜವಿಜ್ಞಾನ, ರಾಜ್ಯಶಾಸ್ತ್ರ,ತತ್ವಜ್ಞಾನ,ವಿಜ್ಞಾನ,ಆಧ್ಯಾತ್ಮ,ಯೋಗ,ಇತಿಹಾಸ, ಮಾನವಶಾಸ್ತ್ರಗಳಾದಿಯಾಗಿ ಮುಗಿಯದ ಮುಗಿಲಿನಂತಹ ವಸ್ತುವೈವಿಧ್ಯದ ಇಲ್ಲಿಯ ಕಾವ್ಯಗಳು ಸಾರ್ವತ್ರಿಕ ಸತ್ಯವನ್ನು ತಮ್ಮ ಉಸಿರೆಂಬಂತೆ ಸಾರುತ್ತವೆ.
ಆಧುನಿಕ ಧರ್ಮಕಾರಣದ ಸಮಕಾಲೀನ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾಗಿರುವ ಭಾವೈಕ್ಯೆತೆಯ ಪ್ರಜ್ಞೆಯನ್ನು ಕುರಿತು ಚರ್ಚಿಸುವ ಕವಿಕಾವ್ಯಗಳು ಈ ಕೃತಿಯನ್ನಲಂಕರಿಸಿರುವುದು ಔಚಿತ್ಯಪೂರ್ಣವಾಗಿದೆ.
ಪಾಕಿಸ್ತಾನಕ್ಕಂಟಿಕೊಂಡಿರುವ ಪಂಜಾಬಿನವನಾದ ಸಂತ,ಮಹಾವಿದ್ರೋಹಿಯಾದ ಬುಲ್ಲೇಷಾ ನಲ್ಲಿ ಹುಟ್ಟಿದ
" ಎಲ್ಲ ಎಲ್ಲರೂ ಕುರುಡರಾದಲ್ಲಿ
ಹೋಗೋಣ ಬಾ ಬುಲ್ಲೆ
ಅಲ್ಲಿ ಗುರ್ತಿಸುವುದಿಲ್ಲ ನಮ್ಮನಾರೂ
ಜಾತಿ ಬಣ್ಣ ದೇಶ ಧರ್ಮಗಳಿಲ್ಲದ
ಕುರುಡರ ಕಾರುಣ್ಯದಲ್ಲಿ
ನಾನ್ಯಾರು?  ಅನ್ಯರಾರು" ಎಂಬ ಕಾವ್ಯಝರಿಯು ಭೇದವಿಲ್ಲದ ಲೋಕದ ಆಲಾಪವನ್ನು ಸರ್ವರ ಕಿವಿಗಿಂಪಾಗುವಂತೆ ಹೇಗೆ  ಮೊರೆಯುತ್ತಿದೆಯಲ್ಲವೇ ? ಇದೇ ಇಂದಿನ ತುರ್ತು ಸಂದರ್ಭದ ತುಡಿತವಾಗಬೇಕು.
ಅರಸೊತ್ತಿಗೆಯ ಹೊಂಚಿಗೆ, ಮಿಲಿಟರಿಯ ಬಲೆಯ ಸಂಚಿಗೆ ಕೊರಳೊಡ್ಡಿಕೊಂಡ, ಕ್ರಾಂತಿಕಾರಿ
ಬಂಡಾಯಕ್ಕೆ ಮತ್ತೊಂದು ಹೆಸರಾಗಿದ್ದ ಮೈನುಯೆಂಗ್ ಕೆ. ಕುಂತೀ ಯ ಸಿಡಿಲ ಕಿಡಿಗಳನ್ನು ಒಮ್ಮೆ ಕೇಳಿ-
" ಗೊತ್ತಿರಲಿಲ್ಲ ನಾಯಕರೆ
ಬೂಟಿನ ಹಿಂಬದಿಯ ಹಿಡಿ ಮಣ್ಣಿನಲ್ಲಿ
ನನ್ನ ಕ್ರಾಂತಿಯ ಕನಸರಳುತ್ತದೆ
ಅದು ಸಿಡಿದರೆ ಕಿಡಿಯಾಗಿ
ಅನ್ಯಾಯದ ಗದ್ದುಗೆ ಉರುಳುತ್ತದೆ " ನಮ್ಮ ಕನ್ನಡದ
ಬಂಡಾಯ ಕಾವ್ಯದ ಬಿಸುಪನ್ನು ಸ್ಮರಿಸುವ ಈ ಸಾಲುಗಳು ಅನ್ಯಾಯವನ್ನು  ಧಿಕ್ಕರಿಸಿ ನಿಲ್ಲುತ್ತವೆ. ಭಾವೈಕ್ಯತೆಯೂ ಜಗತ್ತಿನ ತಲ್ಲಣಗಳನ್ನು ತುಂಬಿಕೊಂಡ ಕಾವ್ಯ ಎಷ್ಟು ಅರ್ಥಪೂರ್ಣವಾಗಿರಬಲ್ಲದು ? ಎಷ್ಟು ಚಿಂತನಾಶೀಲವಾಗಿರಬಲ್ಲದು ? ಎಂಬುದಕ್ಕೆ ಇಲ್ಲಿ ಪದಗಳಾದ ಕವಿಕಾವ್ಯಗಳೇ ನಿದರ್ಶನಗಳಾಗಿವೆ. ಬದುಕಿನ ಮುಂದಿರುವ ಸವಾಲುಗಳನ್ನು ಎದುರಿಸಿ ಹೋರಾಡುವ ಆಂತರಿಕ ಎಚ್ಚರಿಕೆಯ ಪ್ರಜ್ಞೆ, ಸಮಾಜದ ಸಮಸ್ಯೆಗಳೊಂದಿಗೆ ಬದುಕುವ ಕಲೆಯನ್ನು ಕಲಿಸುವ ಸಾಮಾಜಿಕ ಪ್ರಜ್ಞೆ, ಶೋಷಿಸುವ ಪ್ರಭುತ್ವದ ವಿರುದ್ಧ ಹೋರಾಡುವ ಬಂಡಾಯದ ಪ್ರಜ್ಞೆ, ರಾಜ್ಯವನ್ನು ಮುನ್ನಡೆಸುವ ರಾಜಕೀಯ ಪ್ರಜ್ಞೆ, ವಕ್ರರೇಖೆಯಂತೆ ಎದುರಾಗುವ ಬದುಕನ್ನು ಬಂದಂತೆ ಪ್ರೀತಿಸುವ ಜೀವನ ಪ್ರಜ್ಞೆಗಳೊಂದಿಗೆ ಮುಖಾಮುಖಿಯಾಗುವಂತೆ ಮಾಡುವ ಅಪರೂಪದ ಕೃತಿ ಜಾಡಮಾಲಿಯ ಜೀವ ಕೇಳುವುದಿಲ್ಲ.
ಪ್ರೊ.ಸಂಗಮೇಶ ಗಣಿಯವರು ಹೇಳುವಂತೆ ಭೌತಿಕ ಹಾಗೂ ಮನುಷ್ಯನೊಳಗಿನ ಆಂತರಿಕ ಯುದ್ಧೋನ್ಮಾದದ ಸಮಕಾಲೀನ ವಿಷಮ  ಸಂದರ್ಭದಲ್ಲಿ ಪ್ರೀತಿ,ವಾತ್ಸಲ್ಯ, ದಯೆ, ಅಂತಃಕರಣ, ಮಾನವೀಯತೆಗಳನ್ನು ನಮ್ಮ ಎದೆಯಲ್ಲಿ ಬಿತ್ತಬಲ್ಲ ಈ ಕೃತಿ  ಇಂದು ಅತ್ಯಂತ ಪ್ರಸ್ತುತ ಹಾಗೂ ಔಚಿತ್ಯಪೂರ್ಣವೆನಿಸಿದೆ. ಜಾಗತಿಕವಾಗಿ ವಿಭಿನ್ನ ಸಂಸ್ಕೃತಿಯ ಕವಿಕಾವ್ಯಗಳನ್ನು ಕನ್ನಡದ ಸಂದರ್ಭದಲ್ಲಿಟ್ಟು ಅನುಸಂಧಾನಿಸುವ ಕ್ರಿಯೆಯೇ ಅನನ್ಯವಾದುದು. ಹೀಗೆ ಅನನ್ಯತೆಯನ್ನೇ ತಮ್ಮ ಸಾಹಿತ್ಯದ ಲಕ್ಷಣವಾಗಿಸಿಕೊಂಡ ಡಾ.ರಾಜಶೇಖರ ಮಠಪತಿಯವರು (ರಾಗಂ) ಈ ಕೃತಿಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ವಿಭಿನ್ನವಾದ ಕೊಡುಗೆಯೊಂದನ್ನು ನೀಡಿದ್ದಾರೆ.ಈ ಕೃತಿಯಲ್ಲಿ ಪಡೆಮೂಡಿರುವ ಬಹುಪಾಲು ಕಾವ್ಯಾರಾಧಕರೆಲ್ಲ ಪ್ರೇಮಪೂಜಾರಿಗಳೇ. ಪ್ರೇಮದ ಜೊತೆಗೂಡಿ ಬಂದ ಮಾನವೀಯತೆ ಈ ಕೃತಿಯನ್ನಾವರಿಸಿದ  ಮತ್ತೊಂದು ವಿಶ್ವಪಥದ ಮೌಲ್ಯ. ಏನಾದರೂ ಆಗು ಮೊದಲು ಮಾನವನಾಗು ಎಂಬ ಕನ್ನಡ ಕವಿಯ ಸಾಲುಗಳು ಇಲ್ಲಿಯ ಕಾವ್ಯದ ಪಾದಗಳನ್ನು ಹೋಲುತ್ತವೆ. ಮಹಾಮಾನವತಾವಾದಿಗಳನ್ನೆಲ್ಲ ತಮ್ಮ ಕೃತಿಯ ಮೂಲಕ ಹೀಗೆ ಕಟ್ಟಿಕೊಡುತ್ತಿರುವ ಪ್ರಯತ್ನ ಅರ್ಥಪೂರ್ಣವಾದುದು. ಕವಿಕಾವ್ಯಗಳ ಜಾಗತಿಕ ಸಂಕಥನಗಳನ್ನು ಕಟ್ಟಿಕೊಡುವ ರಾಗಂರವರ ಪ್ರಯತ್ನ ಅನುಪಮವಾದದ್ದು.ಸಾರ್ಥಕವಾದದ್ದು. ಈ ಕೃತಿಯ ಶೀರ್ಷಿಕೆಯಲ್ಲಿ ಬಳಕೆಯಾದ ಜಾಡಮಾಲಿಯೇ ಒಂದು ರೂಪಕ.ಜಗತ್ತನ್ನು ಪೊರೆಯುವ ಪ್ರಕೃತಿಯಿಂದ  ಹಿಡಿದು ಉದ್ಯಾನವನದಲ್ಲಿ ಸಸಿಗಳನ್ನು ಪೋಷಿಸುವ ಪೋಷಕಿಯವರೆಗೆ ಜಾಡಮಾಲಿ  ಇಲ್ಲಿ ವಿಶಾಲವಾದ ಹರವು ಪಡೆದುಕೊಂಡಿದ್ದಾಳೆ. ಜೀವ ತುಂಬಿ ಕಾವ್ಯ ಹೆಣೆದು ಕಾಪಿಡುವ ಈ ಕುಶಲಿಗರೂ ಇಲ್ಲಿ ಜಾಡಮಾಲಿಗಳೆ.ಕರಕಿಯೆಳೆಯ ಹೆಕ್ಕಿ ತಂದು, ತೂಗುವಂಥ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿ ಮಾಡಿ, ಗುಟುಕಿಡುವ ಹಕ್ಕಿಯೂ ಜಾಡಮಾಲಿಯೇ. ನವಮಾಸಗಳ ಹೊತ್ತು ಹೆತ್ತು ಕರುಳು ಕುಡಿಗಳಿಗೆ ಜೀವತುಂಬುವ ತಾಯಿಯೂ ಜಾಡಮಾಲಿಯೇ.ಹೀಗೆ ಜಾಡಮಾಲಿಯನ್ನು ನಾವು ಇದುವರೆಗೂ ಕಂಡು ಕೇಳರಿಯದ ಬಗೆಯಲ್ಲಿ ವಿಸ್ತರಿಸಿಕೊಳ್ಳುವ ರೂಪಕವನ್ನಾಗಿಸಿದ್ದಾರೆ ರಾಗಂರವರು.  ವಿಶ್ವದ ಕಾವ್ಯಕುಸುರಿಗರ ಕಾವ್ಯಗಳನ್ನು ತಮ್ಮದೇ ಭಾಷೆಯಲ್ಲಿ ಅರಳಿಸಿ, ಕನ್ನಡದ ತೊಡುಗೆಯುಡಿಸಿ  ಅಲಂಕರಿಸಿರುವ  ಡಾ. ರಾಜಶೇಖರ ಮಠಪತಿಯವರೂ ಒಬ್ಬ ಜಾಡಮಾಲಿಯೇ. ತನ್ನೆಲ್ಲ ನೋವು ಸಂಕಟಗಳನ್ನು ಪೊರೆಯುವುದರಲ್ಲಿಯೇ ತನ್ನೆಲ್ಲ ನೋವು ಸಂಕಷ್ಟಗಳನ್ನು ಮರೆಯುವ ಅವಳ ಅಂತಃಕರಣ, ಸಹನೆ, ತ್ಯಾಗ,  ಅವಿಸ್ಮರಣೀಯವಾದುದು. ಆರ್ತನಾದ, ವೇದನೆಯನ್ನು ಕೇಳಿದಾಗ ಜಾಡಮಾಲಿಯ ಜೀವ ಹೇಗೆ ಕೇಳುವುದಿಲ್ಲವೋ,  ( ತಡೆಯುವುದಿಲ್ಲವೋ)  ಹಾಗೆ ದುರಂತನಾಯಕರಾಗಿರುವವರ ಕವಿಕಾವ್ಯಗಳನ್ನು ಕಂಡಾಗ ರಾಗಂ ರವರ ಜೀವವೂ ಕೇಳಿಲ್ಲ.
ಡಾ. ಬರಗೂರು ರಾಮಚಂದ್ರಪ್ಪನವರು ಕನ್ನಡದ ಸಂದರ್ಭದಲ್ಲಿ  ಉಲ್ಲೇಖಿಸಿದ ಗಂಭೀರ ಮಾತುಗಳನ್ನು ಇಲ್ಲಿ ಪಡೆಮೂಡಿರುವ ಜಾಗತಿಕ ಸಾಹಿತ್ಯ ಕ್ಷೇತ್ರಕ್ಕೆ ಅನ್ವಯಿಸುವುದಾದರೆ, ಸತ್ಯ,ಶಾಂತಿ, ಪ್ರೀತಿ,ನಿರ್ಮಲತೆ,ಪರಿಶುದ್ಧತೆಯ ಮಾನವತಾವಾದದ ಅಮರ ಮೌಲ್ಯಗಳನ್ನು ತಮ್ಮ ಕಾವ್ಯಗಳ ಮೂಲಕ ಬಿತ್ತಿದ ಇಂತಹ ಕವಿಕಾವ್ಯಗಳನ್ನು ಭಾಷೆ,ಸಾಹಿತ್ಯ,ದೇಶ ಕಾರಣವಾಗಿ ವಿಮರ್ಶೆಯ ಮುಖ್ಯವಾಹಿನಿಯಿಂದ ಹೊರಗಿಟ್ಟ ಸಾಂಸ್ಕೃತಿಕ ಅಸ್ಪೃಶ್ಯತೆಯನ್ನು ಹೋಗಲಾಡಿಸಬೇಕಾಗಿದೆ.ಇಂತಹ ಸಾಂಸ್ಕೃತಿಕ ಅಸ್ಪೃಶ್ಯ  ಪರಂಪರೆಯೊಂದರ ಕಡೆಗೆ ಎಚ್ಚರಗೊಳ್ಳಬೇಕಾದ ಅವಶ್ಯಕತೆಯನ್ನು ಈ ಕೃತಿ ಅತ್ಯಪೂರ್ವವಾಗಿ ಸಾರುತ್ತದೆ.


ಚಹಾ ಮತ್ತು ನಾನು

 ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...