Total Pageviews

Monday, 21 January 2019

ಜನರ ಜಂಗಮ..
                ಸಾಟಿಯಿಲ್ಲ ಓ ಸದ್ಗರು ನಿನಗೆ                                 ಜಗವೇ ನಡೆದಿದೆ ನಿನ್ನಯ ಕಡೆಗೆ                       ಹೊರಟೆಯಾ ನೀನು ನಿಜ ಮನೆಯೆಡೆಗೆ       ಮನುಕುಲಕಾರು ದಿಕ್ಕು ಕೊನೆಗೆ


              ತ್ರಿವಿಧ ದಾಸೋಹಿ ಕನ್ನಡ ರತುನ                         ಕಾದೆಯಾ ನೀ ಯುಗವೊಂದನು ಜತುನ                      ಮುಗಿಯಿತೆ ಕಾಲದೊಂದಿಗೆ ಮಂಥನ             ನಡೆದಾಡುವ ದೇವನೆ ಮುಗಿಯದು ಕಥನ


           ವಸುಧೈವಕೆ ಮಾನವ ಧರ್ಮ ದರ್ಶನ                      ಕಾಯಕ ಯೋಗಿ ನೀನೇ ಸುದರ್ಶನ                          ಜನರ ಜಂಗಮ ದೀನರ ಸಂಗಮ                ಜಗದಂಧಕಾರವ ಕಳೆದ ಅಲ್ಲಮ


              ಜಾತಿ ಧರ್ಮ ಮತ ಪಂಗಡ ಭೂತ                         ಹಿಡಿದು ಕರಗಿಸಿದ ಸಮತೆಯ ಸಂತ                            ವಿಶ್ವಮಾನವತೆ ಹರಡಿದ ದೇವ.                     ಅರಿವೇ ಗುರು  ನೀ ಯುಗದಾ ಬಸವ


                  ಮೌಢ್ಯದ ಕತ್ತಲೆ ಕಳೆದ ಚಂದಿರ                              ಜಗವ ಬೆಳಗಿದ ಭಕ್ತಿಯ ನೇಸರ                        ಅನಂತಕೂ ಮಿಗಿಲು ಕ್ಷಿತಿಜಕೂ ದಿಗಿಲು              ಎಲ್ಲಿಯ ಜ್ಯೊತಿ ಎಲ್ಲಿಗೆ ಬೆಳಕು


            ನಿರ್ಗುಣ  ನಿರಹಂಕಾರದ ಮೂರುತಿ                        ಹಸಿವು ಹಿಂಗಿಸಿದ ಮಹಾ ಅನುಭೂತಿ                        ಜ್ಞಾನ,ಭಕ್ತಿ ಕರ್ಮಗಳ ಯೋಗಿ                    ಉದ್ಧರಿಸಿದೆ ಬಡವ ಬಲ್ಲಿದರೆನ್ನದೆ ತೂಗಿ

                                                   ಚಂದ್ರಶೇಖರ ಹೆಗಡೆ

Tuesday, 15 January 2019

ರಕ್ತರಾತ್ರಿಯ ಬೆಳಕಿನಲ್ಲಿ...ಭಾಗ 1

‘ಕಲ್ಲಿನಲ್ಲಿ ಮಲಗಿರುವ ಅಣಿಗಳನ್ನೆಬ್ಬಿಸಿ, ಬೃಹತ್ ಬ್ರಹ್ಮಾಂಡದೊಳು ಕಬ್ಬೊಗೆಯ ತುಂಬಿಸಿ, ರುದ್ರಾಗ್ನಿ ಜ್ವಾಲೆ ಧಗಧಗಿಸಿ ಬೆಟ್ಟ ನಿಟ್ಟುಗಳ ಸುಟ್ಟುರಿವಂತೆಸಗುವ ಆ ಅಶ್ವತ್ಥಾಮನ ಬಿಲ್ವಿದ್ಯೆಗೆ ಇಲ್ಲಿಂದಲೇ ನಮೋ ಎಂಬೆ.’ ‘ಪಾಶುಪತಾಸ್ತ್ರದಿಂದ ಹೊರಹೊಮ್ಮುವ ಸಿಡಿಲಿನ ಬೆಂಗಿಡಿ ಕೆಮ್ಮಿಂಚಿನ ಕೆಂಗಿಡಿ ದಟ್ಟಯಿಸಿ ಕಿಕ್ಕಿರಿದು  ಜಡಿದಾಗ ಹೆಬ್ಬೆಟ್ಟವೇ ಹುಡಿಯೊಡೆದು ಹಾರಿ ಹೋಗುವುದು. ಆಮೇಲೆ ಕರ್ಣನಾವ ಗಿಡದ ತೊಪ್ಪಲು?' ಎಂಬ ಮಾತುಗಳ ಭೋರ್ಗರೆಯುವ ಶಬ್ದ ಕಡಲು; ಮಹೋನ್ನತ ಉನ್ಮತ್ತ ಪ್ರತಿಭಾಶೈಲದಿಂದ ಆರ್ಭಟದಿ ಧುಮ್ಮಿಕ್ಕುತ್ತಿರುವ ಪದಗಳ ಜಲಲ ಜಲಧಾರೆ; ಝೇಂಕರಿಸಿ ಮುತ್ತಿಕ್ಕುವ, ನರನಾಡಿಗಳಲ್ಲಿ ರುಧಿರವಾಗಿ ಹರಿಯುವ ನಾದಪ್ರವಾಹ; ಅಂತರಂಗದ ವಸುಧಾವಲಯ ಗರ್ಭದೊಳ್ ಬೈಚಿಟ್ಟುಕೊಂಡರೂ ಒತ್ತಡದಿ ಕುದಿಕುದಿದು ಸುಳಿದು ಸುತ್ತಿ ಭೋಂಕನೆ ಮೇಲೆದ್ದು ಕಲಾದೇವಿಯಾಗಿ ಅವತರಿಸಿ ಆವರಿಸುವ ಭಾವಶಿಲಾರಸ; ಶೃಂಗಾರ ಕರುಣ ಹಾಸ್ಯ ರೌದ್ರ ವೀರ ಭಯಾನಕಾದಿಗಳು ಹೃದಯ ಸಮುದ್ರವನ್ನೇ ಕಲಕಿ, ತಾಳಕ್ಕೆ ತಕ್ಕಂತೆ  ಪುಟಿ ಪುಟಿದು ರಂಗವನ್ನೇ ಕಂಪಿಸುತ್ತಾ ಬಿಜಯಂಗೈದು ತಮ್ಮಲ್ಲೇ ಸಂಧಾನಿಸಿ ಲಯಸೂತ್ರದಲ್ಲಿ ಓತಪ್ರೋತವಾಗಿ ಸಮಾಗಮಿಸುವ ನವರಸಪಾಕವದು.
ಹೀಗೆ ಸಾಮಾಜಿಕರಾದ ನಮ್ಮ  ಎದೆ ತುಂಬಿ ಘಂಟಾನಾದಗೈದು ಹೊರಟ ಶಬ್ದತಾಪಕ್ಕೆ ನಮ್ಮನ್ನೇ ಕುದಿಸಿ ಕುಣಿಯುವಂತೆ ಮಾಡಿದ ಅವಧೂತ ನಾಟಕವೆಂದರೆ ಕಂದಗಲ್ಲ ಹನಮಂತರಾಯರ ‘ರಕ್ತರಾತ್ರಿ'. ದಿನಾಂಕ 10 ನೇ ಜನವರಿ 2019 ರ ಋತು ಹೇಮಂತ ದಯಪಾಲಿಸಿದ ಮೈಕೊರೆಯುವ ಚಳಿಯಲ್ಲೂ ಎದೆಯ ಬಿಸಿರಕ್ತ ಕುದಿಯುವಂತೆ, ತುದಿಗಾಲಿನಲ್ಲಿ ನಿಂತು ವೀಕ್ಷಿಸುವಂತೆ ಮಾಡಿದ ರಂಗಪ್ರಯೋಗ ರಕ್ತರಾತ್ರಿ. ಗುಳೇದಗುಡ್ಡದ ಲಕ್ಷ್ಮೀ ಸಹಕಾರಿ ಬ್ಯಾಂಕ್ ಶತಮಾನೋತ್ಸವ ಸಂಭ್ರಮದ ಘಳಿಗೆಯಲ್ಲಿ ಏರ್ಪಡಿಸಿದ ಸಾಂಸ್ಕøತಿಕ ಉತ್ಸವದ ಅಂಗವಾಗಿ ನಡೆದ ಈ ರಂಗಪ್ರಯೋಗ ರಂಗರಸಿಕರ ಮನವನ್ನು ಗೆದ್ದಿತು. ಆಧುನಿಕ ತಂತ್ರಜ್ಞಾನದ ಡಿಜಿಟಲ್ ಯುಗದ ಹಾವಳಿಯಿಂದಾಗಿ ಇತ್ತೀಚೆಗೆ ಪ್ರೇಕ್ಷಕರ ಬರವನ್ನು ತೀವ್ರವಾಗಿ ಎದುರಿಸುತ್ತಿರುವ  ವೃತ್ತಿರಂಗಭೂಮಿಯ ಸಂಕಟದ ಈ ದಿನಗಳಲ್ಲಿ ಪೌರಾಣಿಕ ನಾಟಕವೊಂದು ಈ ಮಟ್ಟಿನ ಯಶಸ್ಸು ಸಾಧಿಸಿರುವುದು ರಂಗವಿಮರ್ಶಕರಿಗೆ ಹುಬ್ಬನ್ನೇರಿಸುವಂತೆ ಮಾಡಿದರೂ ಗುಳೇದಗುಡ್ಡ ಎಂಬ ಶ್ರೀಮಂತ ರಂಗಪರಂಪರೆಯ ನಾಡಿನಲ್ಲಿ ಇದು ಅಚ್ಚರಿಯ ಸಂಗತಿಯೇನಲ್ಲ. ರಾತ್ರಿ 2 ಗಂಟೆಯವರೆಗೂ ನಡೆದ ಈ ರಂಗಪ್ರಯೋಗವು ಹಿಮಗಟ್ಟುವ ಚಳಿಯಲ್ಲೂ ವ


ಸ್ಸಿನ 
ಭೇದ

ವಿಲ್ಲದೆ ಅಬಾಲವೃದ್ಧರಾದಿಯಾಗಿ ಸರ್ವರೂ ತವಕದ ಮುಳ್ಳಿನ ಮೇಲೆ ನಿಂತು ರಸಾನುಭವದಲ್ಲಿ ಮಿಂದೇಳುವಂತೆ ಮಾಡುವಲ್ಲಿ ಯಶಸ್ವಿಯಾಯಿತು.


ಅದು ಭೋರ್ಗರೆದಷ್ಟೂ ನಿಯಂತ್ರಿಸಲಾಗದ ಆರ್ಭಟದ ಕಡಲ ಅಬ್ಬರ. ಉಕ್ಕಿದಷ್ಟೂ ತಡೆಯಲಾಗದ ಹೊನ್ನುಡಿಗಳ ಚಿಲುಮೆ. ಹರಿದಷ್ಟೂ ವಿಸ್ತಾರ ಪಡೆಯುವ ಶಬ್ದಪಾವನ ಗಂಗೆಯದು. ಬೀರಿದಷ್ಟೂ ಬ್ರಹ್ಮಾಂಡವನ್ನೇ ಆವರಿಸುವ ನುಡಿಬೆಳಕಿನ  ಮಹಾಜ್ಯೋತಿಯದು. ತಣಿದಷ್ಟೂ ಹನಿಯುವ ರಸಇಬ್ಬನಿಯದು, ಆಲಿಸಿದಷ್ಟೂ ಎದೆಯೊಳಗಿಳಿಯುವ ರಾಗವೈಭವವದು. ಅಕ್ಷರಗಳಿಗೇ ಅಚ್ಚರಿಯಾಗುವಂತೆ ಸದಾ ರೆಕ್ಕೆಯಾಡಿಸುವ ದುಂಬಿಯ ತಡೆಯಿಲ್ಲದ ನುಡಿ ಝೇಂಕಾರವದು. ಹೀಗೆ ತಮ್ಮ ಮಾಂತ್ರಿಕ ನಾಟ್ಯ ಭೈರವರಾಗದಿಂದ ಹೃದಯ ಕಡಲನ್ನೇ ಅಲ್ಲೋಲ ಕಲ್ಲೋಲಗೊಳಿಸುವ ‘ಕರ್ನಾಟಕದ ಶೇಕ್ಸಪಿಯರ್’, ‘ನಾಟ್ಯಕವಿಕೇಸರಿ’, ಎಂದೇ ಪ್ರಸಿದ್ಧರಾದ  ಕಂದಗಲ್ಲ ಹನಮಂತರಾಯರ ‘ರಕ್ತರಾತ್ರಿ’ ನಾಟಕದ ರಂಗಪ್ರಯೋಗ ಜನಮನಸೆಳೆಯಿತು. ಈ ನಾಟಕದ ಶ್ರೀಕೃಷ್ಣ ಪಾತ್ರಧಾರಿಯ ಅಭಿನಯದ ವೈಭವ ಎಷ್ಟು ಪ್ರಭಾವಮಯವಾಗಿತ್ತೆಂದರೆ ಪ್ರಯೋಗ ಮುಗಿಯುತ್ತಲೇ ಪ್ರೇಕ್ಷಕರಲ್ಲಿಯೇ ಕೆಲವರು ಅವರ ಪಾದಸ್ಪರ್ಶಿಸಿ ನಮನ ಸಲ್ಲಿಸಿದರು. ಕಥಾವಸ್ತುವಿಗೆ ಹಾಗೂ ಅಂದಿನ ರಂಗಪ್ರಯೋಗಕ್ಕೂ ಸೂತ್ರಧಾರನಂತಿದ್ದ ‘ಕಲಿಯುಗದ ಶ್ರೀಕೃಷ್ಣ’ ನೆಂದು ಬಿರುದಾಂಕಿತರಾದ ಬಳ್ಳಾರಿಯ ಶ್ರೀ ಚಿದಾನಂದಪ್ಪ ಗವಾಯಿ ಯವರು ನಿರ್ವಹಿಸಿದ ಶ್ರೀಕೃಷ್ಣ ಪಾತ್ರ ಜನಮೆಚ್ಚುಗೆ ಗಳಿಸಿತು. ಸಾಕ್ಷಾತ್ ಶ್ರೀಕೃಷ್ಣನೇ ಧರೆಗಿಳಿದಂತಿದ್ದ, ನಟ, ನಿರ್ದೇಶಕ, ಸಂಗೀತ ನಿರ್ದೇಶಕರಾಗಿ ದುಡಿದ ಅನುಭವದ ಹದಭರಿತ ಹಾವಭಾವ, ಕಣ್ಮನ ಕುಕ್ಕುವ ರಂಗು ರಂಗಿನ ವೇಷಭೂಷಣ, ಸಂಗೀತ ಶಿಕ್ಷಕರಾಗಿ ವೃತ್ತಿನಿರತ ಅನುಭಾವಿಯಾಗಿರುವ ಇವರ ರಾಗ, ತಾಳ, ಲಯಬದ್ಧ ಶಾಸ್ತ್ರೀಯತೆ, ವಿದ್ವತ್ಪೂರ್ಣ ಸ್ಪಷ್ಟ ಸಂಭಾಷಣೆಯ ಅಭಿವ್ಯಕ್ತಿ, 400 ನೇ ರಂಗಪ್ರಯೋಗದ ಅನುಭವ ಹೊಂದಿದ ಯತಿಭರಿತ ಸಂಯಮದ ಭಾವಾಭಿನಯ, ಅಷ್ಟೇ ಅಲ್ಲದೇ ಮಾತು ಮರೆಯುವ ಸಹಕಲಾವಿದರಿಗೂ ಮಾತಿನ ನೆನಹೇ ತಾವಾಗಿ ರಂಗದ ಸಮತೋಲನ ತೂಗಿದ ಇವರ ಸಮಯಪ್ರಜ್ಞೆ ಗಳು ರಂಗಕ್ಕೆ ವಿಶೇಷ ಕಳೆಯನ್ನು ತಂದಿದ್ದವು.
ನೆರೆಯ ಆಂದ್ರಪ್ರದೇಶದ ಗಡಿ ಗ್ರಾಮ ಗುಳ್ಯಂ ನಲ್ಲಿ ಗಡಿನಾಡ ಕನ್ನಡಿಗರಾಗಿ ಬೆಟ್ಟದಷ್ಟು ಸಮಸ್ಯೆಗಳನ್ನೆದುರಿಸುತ್ತಲೇ ಸವಾಲಾಗಿ ಸ್ವೀಕರಿಸಿ 80 ವರ್ಷಗಳ ಸುದೀರ್ಘ ಕಾಲ ಕನ್ನಡ ಮಾತೃಭೂಮಿಯ ಹಾಗೂ ಮಾತೃಭಾಷೆಯ ಸೊಗಡಿನ ಸುಗಂಧವನ್ನು ನಾಡಿನೆಲ್ಲೆಡೆ ತಮ್ಮ 150 ರಂಗ ಪ್ರಯೋಗಗಳ ಕಲಾಭಿನಯದಿಂದ ಪಸರಿಸಿ ಕಲಾಲೋಕದಲ್ಲಿ ‘ಅಭಿನವ ಅಶ್ವತ್ಥಾಮ’ ರೆಂದೇ ಖ್ಯಾತರಾದ ಶ್ರೀಯುತ ಗುಳ್ಯಂ ಶರಣಯ್ಯಸ್ವಾಮಿ ಯವರ ಪುತ್ರ ಗುಳ್ಯಂ ಶೂಲಪಾಣಿ ಸ್ವಾಮಿಯವರು, ತಮ್ಮ ತಂದೆಯವರ ಪರಂಪರೆಯನ್ನೇ ಮುಂದುವರೆಸಿಕೊಂಡು ಹೋಗುತ್ತಿರುವಂತೆ, ಈ ರಕ್ತರಾತ್ರಿ ನಾಟಕದ ತಮ್ಮ 12 ನೇಯ ಪ್ರಯೋಗದಲ್ಲಿ ಅಶತ್ಥಾಮನ ಪಾತ್ರದ ಪರಕಾಯ ಪ್ರವೇಶ ಮಾಡಿದ್ದು ವಿಶೇಷವಾಗಿತ್ತು. ‘ಕನ್ನಡ ನಾಡಿನ 'ಸಾಂಸ್ಕøತಿಕ ಕಲಾ ಲೋಕ ಗುಳೇದಗುಡ್ಡ'ದಲ್ಲಿ ಅಭಿನಯಿಸಿ ರಂಗರಸಿಕರ ಮನ ಗೆದ್ದರೆ ಸಾಕು ನಾಡಿನೆಲ್ಲೆಡೆಯಲ್ಲಿಯೂ ನಟನಾಗಿ ಕೀರ್ತಿ ಪಡೆಯಬಹುದು’  ಎಂದು ತಮ್ಮ ತಂದೆ ಶರಣಯ್ಯಸ್ವಾಮಿಯವರ ಮಾತನ್ನು ಸ್ಮರಿಸಿಕೊಂಡು, ಹೆಚ್. ಆರ್. ಭಸ್ಮೆ, ಪಿ. ಬಿ. ಧುತ್ತರಗಿ, ಕಂದಗಲ್ಲ ಹನಮಂತರಾಯರಂತಹ ರಂಗಭೀಷ್ಮರ ಕರ್ಮಭೂಮಿ ಗುಳೇದಗುಡ್ಡದಲ್ಲಿನ ತಮ್ಮ ಈ ಕಲಾಸೇವೆ ಸಾರ್ಥಕ್ಯವನ್ನು ಪಡೆದುದರ ಬಗ್ಗೆ ಘೋಷಿಸಿ ಹೆಮ್ಮೆಪಡುತ್ತಾರೆ; ಶೂಲಪಾಣಿಯವರು. ದ್ರೌಪದಿಯ ಪಾತ್ರವನ್ನು ನಿರ್ವಹಿಸಿದ ಮತ್ತೋರ್ವ ಕಲಾರಾಗಿಣಿಯವರ ಕಂಚಿನ ಕಂಠದ ನುಡಿರಣನ ಭೀಷಣವಾಗಿತ್ತು.


ಶಕುನಿಯ ಪಾತ್ರದಲ್ಲಿದ್ದ ಸ್ಥಳೀಯರಾದ  ಶ್ರೀ ಈಶ್ವರ ಕಂಠಿಯವರ ಸಿರಿಕಂಠದ ಅಭಿನಯ ಜನಮನಸೂರೆಗೊಂಡಿತು.
ರೇಷ್ಮೆಸೀರೆಗಳ ನಾಡು ಇಳಕಲ್ಲಿನ ರಂಗಕಲಾಚತುರೆ ಶ್ರೀಮತಿ ಉಮಾರಾಣಿ ಬಾರಿಗಿಡದ ರವರ,  ವೀರ ಅಭಿಮನ್ಯುವನ್ನು ಕಳೆದುಕೊಂಡ  'ಉತ್ತರೆ' ಯ ಪಾತ್ರ ಪ್ರವೇಶ ಜನರನ್ನು  ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತು. ಭೀಮ, ದುರ್ಯೋಧನ ಮುಂತಾದವರು  ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದರು. ಧರ್ಮರಾಜನ ಪಾತ್ರಧಾರಿ ಇನ್ನಷ್ಟು ಪಳಗಿ ಬೆಳಗಬೇಕಾಗಿತ್ತು. 
ಕನ್ನಡ ನಾಡಿಗೇ ವೃತ್ತಿರಂಗಭೂಮಿಯ ಪಾಠವನ್ನು ಹೇಳಿಕೊಟ್ಟ ಕಂದಗಲ್ಲ ಹನಮಂತರಾಯರ ನಾಟಕಗಳು ನಾಡವರಿಗೆ ರಸದೌತಣವನ್ನು ವ್ಯಂಜಿಸುವ ರಸಾಯನಗಳು. ಅವು ಕೇವಲ ನಾಟಕಗಳಲ್ಲ; ರಗಳೆಯನ್ನೇ ಸಂಭಾಷಣೆಯ ಹೊಳೆಯನ್ನಾಗಿ ಹರಿಸಿದ ಮಹಾಕಾವ್ಯಗಳು. ಅವರ ಪ್ರತಿಯೊಂದು ನಾಟಕವೂ ರಂಗು ರಂಗಿನ ನಾಟ್ಯ ಮಯೂರಿ ಕುಣಿದ ಮಹಾಕಾವ್ಯ. ‘ಬಡತನದ ಭೂತ’, ‘ಚಿತ್ರಾಂಗದಾ’, ‘ಕುರುಕ್ಷೇತ್ರ’ ಅರ್ಥಾತ್ ‘ಪಾಂಡವರ ಪಾಣಿಪತ್’, ‘ವರಪ್ರದಾನ’ ಅಥವಾ ‘ವಿಜಯನಗರ ಸಾಮ್ರಾಜ್ಯ ಸ್ಥಾಪನೆ’,’ತಾವರೆಯ ತೊಟ್ಟಿಲು’, ‘ಮಾತಂಗ ಕನ್ಯಾ’, ‘ಅದ್ಭುತ ರಾಮಾಯಣ (ಅಗ್ನಿಕಮಲ), ‘ಬೆಳ್ಳಿಚಿಕ್ಕಿ’, ‘ಆಗಸ್ಟ್ ಹದಿನೈದರ ನಂತರ’, ‘ಬಾಣಸಿಗ ಭೀಮ’, ‘ಪುಣ್ಯಪ್ರಭಾ’, ‘ದೈವದುರಂತ ಕರ್ಣ’, ‘ನೆತ್ತರದೌತಣ’, ‘ಪಾಂಚಾಲಿ’(ದ್ರೌಪದಿಯ ಸ್ವಯಂವರ), ‘ಜಗನ್ಮಾಯಾ’, ‘ಪಾಶುಪತಾಸ್ತ್ರ’ ಅರ್ಥಾತ್ ‘ನರವೀರ ಪಾರ್ಥ’ ಇತ್ಯಾದಿ 25 ಕ್ಕೂ ಹೆಚ್ಚು ನಾಟಕಕೃತಿಗಳು ಅವರ ಲೆಕ್ಕಣಿಕೆಯಿಂದ ಪ್ರವಾಹೋಪಾದಿಯಲ್ಲಿ ಧುಮ್ಮಿಕ್ಕಿವೆ. ಇವರ ನಾಟಕಗಳಲ್ಲಿ ಸಂಸ್ಕøತಭೂಯಿಷ್ಠ ಮಾರ್ಗದ ಹೊಳಪಿದೆ.
ರನ್ನನ ಎಂಟೆದೆಯಲ್ಲರಳಿದ ವಾಗ್ದೇವಿಯ ಭಂಡಾರದ ಮುದ್ರೆಯನ್ನೊಡೆದ ಪದಭೀಷಣವಿದೆ. ಪಂಪನ ಹಳಗನ್ನಡದ ನಾದಮಾಧುರ್ಯವಿದೆ. ವಿಕ್ರಮಾರ್ಜುನ ವಿಜಯಭೇರಿಯ ಲಯವಿದೆ. ಇಂದ್ರನ ಒಡ್ಡೋಲಗದಲ್ಲಿ ಜರುಗಿದ ನೀಲಾಂಜನೆಯ ನೃತ್ಯವೈಭವದ ಪದಲಲಾಟವಿದೆ. ಗದಾಯುದ್ಧದಲ್ಲಿ ಹೊತ್ತಿಕೊಂಡು ಭಾರತವನ್ನಾಕ್ರಮಿಸುತ್ತಿರುವ ರಣಕಿಡಿಗಳಿವೆ. ವೈಶಂಪಾಯನ ಸರೋವರದೊಳಗಿದ್ದೂ  ಬೆವರುವಂತಹ ನಿರಸ್ತ ಘನರವವಿದೆ; ಪೊನ್ನನ ‘ಶಾಂತಿ ಪುರಾಣ’ದ ಅಮರ ಅಮೃತತ್ವವಿದೆ; ಲಕ್ಷ್ಮೀಶನ ‘ಜೈಮಿನಿಭಾರತ’ ದ ಉಪಮಾಲಾಲಿತ್ಯವಿದೆ; ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾ ಮಂಜರಿ’ಯ ಕೃಷ್ಣ ಲೀಲಾ ವಿನೋದವಿದೆ; ರೂಪಕ 

ಸಾಮ್ರಾಜ್ಯ
ವಿದೆ; ಮುದ್ದಣ ಮನೋರಮೆಯರ ಸಲ್ಲಾಪಗಳಿವೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಸಹೃದಯದಲ್ಲಿ ಮಹದಾನಂದದ ರಸ ಹೊಳೆಯಾಗಿ ಹರಿಯುವುದಕ್ಕೆ ಬೇಕಾದ ಶಬ್ದಲೋಕದ ಅಷ್ಟೈಶ್ವರ್ಯಗಳೂ ಇಲ್ಲಿವೆ.

 

Tuesday, 1 January 2019

ನವವಸಂತ

 ನವವಸಂತ
 
ಸಂಭ್ರಮದ ನವವಸಂತಕೆ
ಕೇಕು ಕತ್ತರಿಸುವ ಮುನ್ನ 
ಯೋಚಿಸಿ ಒಮ್ಮೆ......


  ಬೇಕರಿಯ ಪಾಕಶಾಲೆಯಲಿ

ಬೆಂಕಿಗೆ ಬೇಯುವ  ಕೈಗಳ
  ಮೇಲೆ ಬದುಕು ಎಳೆದ
  ಬಡತನದ ಬರೆಗಳು ಹೇಗೆ
 ಹೆಪ್ಪುಗಟ್ಟಿವೆ ಎಂದು...

  ಮಧುಶಾಲೆಯ  ಮುಂದೆ
  ಶೇಂಗಾ, ಕಡಲೆ, ಹುಳಿ
  ಮಾರುವ ಕಪ್ಪು ಮುಖಗಳಲ್ಲಿ
  ಚಿಂತೆಯ ಗೆರೆಗಳು ಕಂತೆಯಾಗಿ
  ಏಕೆ ಸುಕ್ಕುಗಟ್ಟಿವೆ ಎಂದು
ಮದಿರೆಯ ಮಧುವಿನಲ್ಲಿ
  ಮುಳುಗೇಳುವ ಮುನ್ನ
  ಹಿಂತಿರುಗಿ ನೋಡಿ ಒಮ್ಮೆ.......
  ನಾವು ಬಂದ ದಾರಿಯ
  ದುಃಖ ನೋವು ಸಂಕಟಗಳು
  ಹೇಗೆ ಬೆನ್ನತ್ತಿವೆ ಎಂದು

  ಮಾಂಸ ಮದ್ಯಗಳ ಮಧ್ಯೆ
  ಹಾಡಿ ಕುಣಿದು  ಕುಪ್ಪಳಿಸಿ
  ಮರೆಯುವ ಭಾರತ ಮಣ್ಣಿನ
  ಶ್ರೀಮಂತ ಸಂಸ್ಕೃತಿ
  ಪರಂಪರೆಯ ಹೆಜ್ಜೆಗಳಿಂದು
  ಝಗಮಗಿಸುವ ಅದಾವ
  ಬೆಳಕಿನಲ್ಲಿಂದು ಮಾಯವಾಗುತ್ತಿವೆ ಎಂದು

 ಪಂಚತಾರೆಯ  ಬೆಡಗಿನ
  ಬಳುಕಿನಲಿ ಕತ್ತರಿಸಿದ
  ಉಡುಪಿನೊಳಗೆ ಮೈಮರೆಯುವ
  ಮುನ್ನ ಚಿಂತಿಸಿ ಒಮ್ಮೆ.....
  ಎಲ್ಲೋ ಬಿದ್ದ ಹರಿದ
  ನಿಲುವಂಗಿಯ  ಧರಿಸಿ
  ಬೀದಿಯಲಿ ನಾವೆಸೆದ
  ಅನ್ನವನು ಬಾಯಿಗಿಡುವ
  ನತದೃಷ್ಟರ ಹಸಿವು
  ಹಿಂಗಿಸುವುದು  ಹೇಗೆಂದು?
ಕೇಕಿನ ಮೇಲೆ ಮೊಂಬತ್ತಿ
  ಬೆಳಗುವ ಮುನ್ನ ಆಲೋಚಿಸಿ
  ಒಮ್ಮೆ........
  ಜಾತಿ  ಪಂಥ ಮತ ಪಂಗಡ
  ಭೇದಗಳ ಬೆಂಕಿಯ ಬೇಗೆ
  ಆರಿಸುವುದು ಹೇಗೆಂದು
  ಸರ್ವಜನಾಂಗದ ಶಾಂತಿಯ
  ತೋಟದ ಬೆಳಕು
  ಹರಡುವುದು ಹೇಗೆಂದು?

  ಐತಿಹಾಸಿಕ ದೇವಾಲಯಗಳ
 ಹೆಬ್ಬಾಗಿಲ ನೆರಳ ಮುಂದೆ
  ಭೂಮಾತೆಯ ಮಡಿಲು
  ಉತ್ತಿ ಬಿತ್ತಿ ಅನ್ನವನೀಯುವ
  ಅನ್ನದಾತೆಯಿಂದು
  ರೊಟ್ಟಿ ಮೊಸರು ಮಜ್ಜಿಗೆ
  ಸೌತೆ, ಹಪ್ಪಳ, ಹಿಡಿದು
  ಏಕೆ ದುಂಬಾಲು ಬೀಳುತ್ತಿರುವಳೆಂದು?
  ಪಂಪ ರನ್ನ ಪೊನ್ನ ಜನ್ನ
  ಅಕ್ಕ ಬಸವ ಅಲ್ಲಮ
  ಕವಿ ಪುಂಗವ ಶರಣರ
  ಪುಣ್ಯ ಭೂಮಿಯಲಿಂದು
  ಅರ್ಧಾಂಗಿ ಧರಿಸಿ ತೇಲಿ
  ನಾವು ಬೆಳೆಯುತ್ತಿರುವುದು
  ಏನೆಂದು?

  ಹೊಸ ವರ್ಷದ ಹಾರ್ದಿಕ ಶುಭಾಶಯಗಳೊಂದಿಗೆ
  ಚಂದ್ರಶೇಖರ ಹೆಗಡೆ

Wednesday, 19 December 2018

ಸ್ತ್ರೀ ಎಂದರೆ ಅಷ್ಟೆ ಸಾಕೆ ?...(ಭಾಗ ೨)
ಸಾಮಗಾನದ ಕವಿ ಜಿ. ಎಸ್. ಶಿವರುದ್ರಪ್ಪ, ನವಿಲೂರ ಚೆಲುವೆಯ ರವಿ ಕೆ. ಎಸ್.ನರಸಿಂಹಸ್ವಾಮಿ, ಸಖಿಗೀತ ಹಾಡಿದ ಗಾರುಡಿಗ ದ.ರಾ.ಬೇಂದ್ರೆ, 'ಷೋಡಶಿ'ಯ ರನ್ನ ಕುವೆಂಪು ಮೊದಲಾದ ಕಾವ್ಯಾರಾಧಕರ ಆಲಾಪವಾದ 'ಅವಳು' 'ರಾಗಂ'(ಡಾ.ರಾಜಶೇಖರ ಮಠಪತಿ) ರವರ "ಹೆಣ್ಣು ಹೇಳುವ ಅರ್ಧ ಸತ್ಯ" ಕೃತಿಯಲ್ಲಿ ಬದುಕೆಂಬ ಬೆಳಕಿನ ಸುತ್ತಲೇ  ಸುಳಿದು ಸುಟ್ಟುಕೊಳ್ಳುವ ಪತಂಗವಾಗಿದ್ದಾಳೆ. 'ಹೊನ್ನೋಲೆ ಕಿವಿಯೋಳೆ,ಕೆನ್ನೇಲಿ ಸೂರ್ಯ ಹೊಳೆಯೋಳೆ' ಎಂದು ಜನಪದರಿಂದ ಸಿಂಗರಿಸಿಕೊಂಡ 'ಅವಳು' ಕುರಿತು ಲೇಖಕರು ಬಸವರಾಜ ಒಕ್ಕುಂದರ ಅಗ್ನಿಸಾಕ್ಷಿ ಕವಿತೆಯೊಂದರ ಆಯ್ದ ಭಾಗವನ್ನು  ಹೀಗೆ ಉಲ್ಲೇಖಿಸಿದ್ದಾರೆ-
"ಗೆಳತಿ
ಅಗ್ನಿಸಾಕ್ಷಿಗೆ ಏನೇನೋ ಅರ್ಥಗಳ 
ಮೂಡಿಸಿದೆ ನೀನು
................
ಜತೆಗೂಡಿ ಬಂದಿ, ಸಹಗಮನವೆಂದಿ
ಬೆಂಕಿಯನು ಸಮನಾಗಿ
ಹಂಚಿಕೊಂಡಿ
ಅರ್ಧಾಂಗಿಯಾಗಿ ಸರಿಯಾಗಿ
ಅರ್ಧ ಸುಟ್ಟುಕೊಂಡಿ"
ಎಲ್ಲಿಂದಲೋ  ಜೊತೆಯಾಗಿ , ತನ್ನದೆನ್ನುವ ಎಲ್ಲವನ್ನೂ ಬಸಿದುಕೊಂಡು ಅರ್ಧಾಂಗಿಯಾಗಿ, ಕರುಳು ಬಳ್ಳಿಯ ಬೆಳೆಸಲು ಬರುವ ಜೀವವೊಂದನ್ನು ಕುರಿತು ನನ್ನಲ್ಲಿ ಹುಟ್ಟಿದ ಸಾಲುಗಳಿವು-
ಬಯಕೆಗಳ ಉಸಿರು
ಬಿಗಿಹಿಡಿದು
ತಲ್ಲಣಗಳ ದನಿಯಾಗಿ
ಕರುಳಬಳ್ಳಿಯ ಬೇರಿಗೆ
ಹೀರುವ ಸವಿ ಸಾರವಾಗಿ
ವಾತ್ಸಲ್ಯದ ತಣಿಯನೆರೆದು
ತಣ್ಣನೆ ಬಸಿಬಸಿದು 
ಹಸಿದ ಒಡಲ ಜೇನಾಗಿ
ಏಕೆ ಹೆಸರು ನಿನಗೆ
ಬರಿದಾಗುವ  ವಿಶಾಖಿ
ಮಮತೆಯ ಗೂಡಿನಲ್ಲಿ
ಹಸಿರು ತ್ಯಾಗವ ಹಾಸಿ
ಉಸಿರ ಬಿಸಿಯ
ಹೊರಹಾಕುತ
ಬಯಸಿದವರ ಬೆಚ್ಚಗಿಡುವ 
ನೀ ಮಾಯಿ ಹೆಮ್ಮರ
ತಾಯಿ ನೀನು ಅಜರಾಮರ
ಬಿಗಿದಪ್ಪುವ ನೋವುಗಳಿಗೆ
ಸಾಂತ್ವನದ ಕೊರಳೊಡ್ಡಿ
ನೆಪ ಹೇಳದೆ ನಗುವಾಗಿ
ಬಯಸಿ ಬಂದ 
ಮಗುವಿನಂತೆ
ಚೈತನ್ಯದ ಮಡುವಾಗಿ
ಬೆಂಕಿಯ ಬಲೆಯಲ್ಲಿ
ಆನಂದದ ಹೊಳೆ ಹರಿಸುವ
ಜಲಧಾರಿಣಿ ಓ ಮಾನಿನಿ
ತನ್ನ ಮಮತೆಯ ಮಡಿಲು ಹಿಡಿದು, ಎಲ್ಲ ನೋವುಗಳನ್ನು ಮರೆತು ತನ್ನವರೆನ್ನುವ ಎಲ್ಲರನ್ನೂ  ಕಾಪಿಡುವ ಆ ಪರಿಯೇ ಹೃದಯಂಗಮಯ."ಹರಿವ ಹೊಳೆಯೊಳಗೆ, ಮೊರೆವ ಅಲೆಗಳೊಳಗೆ, ಜಗದ ಸಚರಾಚರ ಜೀವಗಳೊಳಗೆ ಬದುಕಿನ ವ್ಯಾಪಾರಕ್ಕೆ ಕಾರಣವಾದ, ಕಣ್ಣೀರ ಹನಿಗೂ, ಹವಳದಾ ಕುಡಿಗೂ,  ಜೀವಧಾರೆಯಾಗುವ ಆ ಶಕ್ತಿಯನ್ನು 'ಅವಳು' ಎನ್ನಬೇಕೆ?" ಎಂದು 'ಅವಳ'ನ್ನು ಮತ್ತೆ ನಮ್ಮಲ್ಲಿ  ಮೂಡಿ, ಎಂದೆಂದಿಗೂ ಉತ್ತರಿಸಲಾಗದೇ  ಉಳಿಯುವ ಪ್ರಶ್ನೆಯಾಗಿ ನಮ್ಮ ಮುಂದಿಡುತ್ತಾರೆ. ಪುರಂದರದಾಸರು ಹೇಳುವಂತೆ
" ಶೃಂಗಾರದ ದೇಹವೆಲ್ಲಾ
ಅಂಗ ಮುರಿದು ಬೀಳುವಾಗ
ಕಂಗಳಿಗಾತ್ಮ ಸೇರಿದಾಗ
ಧ್ಯಾನ ಒದಗದೋ
ರಂಗನ ಧ್ಯಾನ ಒದಗದೋ"
ಶೃಂಗಾರ ವೆಂಬ ಮಾಯಾ ಜಿಂಕೆಯ ಬೆನ್ನು ಹತ್ತಿ ಬೆಡಗಿನ ಲೋಕದ ಬಿನ್ನಾಣದಲ್ಲಿ ನಮ್ಮನ್ನು ನಾವು ಕಳೆದುಕೊಂಡು ಮೈಮನಕೆ ಮುಪ್ಪಡರಿದಾಗ ದೇವನ ಧ್ಯಾನದೊಳು ಪೊಗುವೆನೆಂದರೆ, ಸಮಾಧಿಯಾಗುವ ಮುಸ್ಸಂಜೆಯ ಹೊತ್ತಿನಲ್ಲಿ ಉದ್ಧಾರದ ಅಂಬರಕ್ಕೇರುವ ಹುಸಿ ಕನಸುಗಳನ್ನು ಕಟ್ಟಿದಂತಾಗುತ್ತದೆ . ಶೃಂಗಾರದ ಮಾಯೆಯಲ್ಲಿ, ಸಾತ್ವಿಕವಾಗಿಯೇ ಬದುಕಬೇಕೆಂದು ನಿರ್ಧರಿಸಿ,  ಜೀವನದ ತಿರುವುಗಳಲ್ಲಿ ಗೊತ್ತಿಲ್ಲದೆ  ಜಾರಿ ಹೋದ 'ಜಾನಕಿ'ಯರಂತಹ  ಸಾಕಿಯರ ಹಣೆಬರಹವನ್ನು ದಾಸರ ಈ  ಸಾಲುಗಳು ಮನೋಜ್ಞವಾಗಿ ಬಣ್ಣಿಸುತ್ತವೆ. ದಾಸರು ಹೇಳಿದ ಶೃಂಗಾರದ ಶಾಶ್ವತವಲ್ಲದ ನಿಸ್ಸಾರತೆಯನ್ನು ಓದಿದ ನನಗೆ ಹೀಗೆ ಹಾಡಬೇಕೆನಿಸುತ್ತಿದೆ-
"ಜಗವಿದು ರಂಗನ ರಂಗ
ಪಾತ್ರಧಾರಿಗಳು ನಾವು
ಕುಣಿಯಬೇಕು ಕುಣಿಸಿದಂತೆ
ಬೆಳಗಬೇಕು ನೀಲಾಗಸದಲಿ 
ಬದುಕು ಬಿಡಿಸುವ 
ರಂಗು ರಂಗಿನ
ಕಾಮನಬಿಲ್ಲಿನಂತೆ...."
ಸಿನಿಮಾ ರಂಗದ ಕಲ್ಪನೆಯ ಬೆಳಕಿನಲ್ಲಿ, ಕಷ್ಡಪಟ್ಟು ತನ್ನಲ್ಲರಳಿದ ಕಲಾ ಪ್ರತಿಭೆಯಿಂದ ಚಿತ್ರರಂಗದ ಕೆಲವು ದಿಗ್ಗಜರ ಬೆರಳು ಹಿಡಿದು ಬಹದೂರ ಸಾಗಿ, ಯಶಸ್ಸಿನ ಉತ್ತುಂಗಕ್ಕೇರಿ, ಮತ್ತೆ ರಂಗಭೂಮಿಯ ಕಡೆಗೆ ಹೆಜ್ಜೆ ಹಾಕಿ ಬದುಕಿನ ಬವಣೆಗಳ ತಾಪಕ್ಕೆ ಮಂಜುಗಡ್ಡೆಯಾಗಿ ಕರಗುತ್ತಲೇ ಮಿನುಗಿ  ಮಾಯವಾದವಳು ಮಿನುಗುತಾರೆ ಕಲ್ಪನಾ. ಅಪ್ಪಟ ವೃತ್ತಿಪರ ಕಲಾವಿದೆಯೊಬ್ಬಳು ಏರಬೇಕಾದ ಎತ್ತರವನ್ನೇರಿಯೂ, ಜೀವನ ಕಷ್ಟವಾದಾಗ ಮರಳಿ ಬಂದು ಬಸವರಾಜ ಗುಡಗೇರಿಯವರೊಂದಿಗೆ ರಂಗಭೂಮಿಯ ಕಲಾವಿದೆಯಾಗಿ ಹಾಡಿ ಕುಣಿದವಳು; ಬದುಕು ಇಷ್ಟೊಂದು ಅನಿಶ್ಚಿತವೆ ಎಂಬ ಕಲ್ಪನೆಯೂ ಬಾರದಂತೆ ಬದುಕನ್ನು ಬಂದಂತೆ ಸ್ವೀಕರಿಸಿದವಳು; ಕಲಾಲೋಕದ  ಶರಪಂಜರದಲ್ಲಿ, ಹೊಳೆಯುವ ಬೆಳ್ಳಿಮೋಡದ ಗೆರೆಗಳನ್ನು ಕಾಣುತ್ತಲೇ, ಸಿನೆಮಾ ಹಾಗೂ ರಂಗಭೂಮಿಯೆಂಬ  ಎರಡು ಕನಸು ಕಂಡು, ಚಿನ್ನದ ಗೊಂಬೆಯಾದವಳು  ಕಲ್ಪನಾ. ಪಂತಲು ರವರ 'ಸಾಕುಮಗಳು' 'ಸೀತೆ'ಯಾಗಿ 'ಬಂಗಾರದ ಹೂ' ಮುಡಿದು  ಕಲ್ಪನೆಯ 'ಬಯಲು ದಾರಿ' ಸವೆಸಿ ಬದುಕಿನಲ್ಲಿ 'ಸೋತು ಗೆದ್ದವಳು';ಕಾವ್ಯ ಛಂದಸ್ಸಿನ ಏರಿಳಿತದಂತೆ ಬದುಕಿ  ಕೊನೆಗೆ ಕವಿತೆಯಾಗಿ ಪುಟಗಳಲ್ಲಿ ಸೇರಿ ಹೋದವಳು. ಪುಟ್ಟಣ್ಣ ಕಣಗಾಲ್ ರಂತಹ ಅತ್ಯಾಪ್ತ ಮಾರ್ಗದರ್ಶಕರ ಗರಡಿಯಲ್ಲಿ  ಧೃವತಾರೆಯಾಗಿ ಬೆಳೆದ ಜೀವವೊಂದು ಗೋಟೂರಿನ ಬಂಗಲೆಯಲ್ಲಿ ಉಂಗುರದ ವಜ್ರ ಕುಡಿದು ತಣ್ಣಗೆ ಮಲಗಿತ್ತು ಎಂದರೆ ಜಗತ್ತು ನಂಬಲಾಗಲಿಲ್ಲ. ಸತ್ಯವಾಗಿತ್ತು ಆಕೆ ಬದುಕಿನ ತಿರುವಿನಲ್ಲಿದ್ದಳು ಎಂಬುದು; ಸತ್ಯವಾಗಿತ್ತು ಆಕೆಗೆ ಬದುಕು ಕೊನೆಗಾಲದಲ್ಲಿ ಸಹಿಸಲಾಗದ ಸಂಕಟಗಳನ್ನು ನೀಡಿತ್ತು ಎಂಬುದು. ರಾಗಂರವರು 
"ಕಣ್ಣೀರ ಮಳೆಯೊಳಗೆ
ಎದೆಯ ಉರಿ ಹೊಳೆಯೊಳಗೆ
ಬಳಗ ಚೆಲ್ಲಿದ ಬದುಕು
ಕೊಚ್ಚಿ ಹೋಗಿದ್ದಕ್ಕಾಗಿ
ನಾನು ಸಾಯುತ್ತೇನೆ" 
ಎಂದು ಕಲ್ಪನಾಳ ಸಾವನ್ನು ಕವಿತೆಯ ಅಚ್ಚಿನಲ್ಲಿ ಎರಕ ಹೊಯ್ದಿದ್ದಾರೆ. ಬದುಕು ಹೋಗೆಂದ ಕಡೆ ಹೋದ  ಕಲ್ಪನಾ ಬರೆದ ಮರಣ ಪತ್ರದಲ್ಲಿನ ಸಾಲುಗಳಿವು-
'ಬದುಕು ಜಟಕಾ ಬಂಡಿ
ವಿಧಿಯದರ ಸಾಹೇಬ
ಮದುವೆಗೋ ಮಸಣಕೋ
ಹೋಗೆಂದ  ಕಡೆ ಹೋಗು
ಮಂಕುತಿಮ್ಮ"
ಹೀಗೆ ಓದುತ್ತಾ ಹೋದಂತೆ ನಮ್ಮನ್ನು ಕತೆಯ ಆವರಣದೊಳಗೆ ಎಳೆದುಕೊಂಡು ನಮ್ಮನ್ನಾವರಿಸಿಕೊಳ್ಳುವ ಅಪರೂಪದ ಕೃತಿ. ರಾಗಂ ರವರ ಕಾವ್ಯಭಾಷೆ ಗದ್ಯಕ್ಕೊಂದು ಸಂಗೀತದ ಸ್ಪರ್ಶವನ್ನು ನೀಡಿದೆ.ಇಲ್ಲಿಯ ಶಬ್ದಗಳು ರಾಗಂ ರವರು ಕುಣಿಸಿದಂತೆ ಕುಣಿಯುತ್ತವೆ; ಮಣಿಸಿದಂತೆ ಮಣಿಯುತ್ತವೆ; ತೇಲಿಸಿದಂತೆ ತೇಲುತ್ತವೆ; ಹಕ್ಕಿಯಂತೆ ಹಾರುತ್ತವೆ. ಸಹೃದಯರನ್ನು ಕೈಹಿಡಿದು ಕರೆದೊಯ್ಯುತ್ತವೆ. ಇಲ್ಲಿ ಬರುವ ಕತೆಗಳು ನಿಜ ಜೀವನದಲ್ಲಿ ಲೇಖಕರು ಕಂಡ ಜೀವಂತ ದಂತಕಥೆಗಳೇ ಆಗಿರುವುದರಿಂದ ಸಹೃದಯರಲ್ಲಿ ಮತ್ತಷ್ಟು ಕುತೂಹಲವನ್ನು ಮೂಡಿಸುತ್ತವೆ. ಸ್ವತಃ ಲೇಖಕರೇ ನಮ್ಮ ಕಣ್ಣೆದುರಿಗೆ ನಿಂತು ಸಂವಾದ ನಡೆಸುತ್ತಾ ಈ ಘಟನೆಗಳನ್ನು ಮೆಲುಕು ಹಾಕುತ್ತಿರುವರೇನೋ  ಎಂಬಂತೆ ಕತೆಗಳು ಆರ್ದ್ರವಾಗಿ ಆಪ್ತವಾಗಿ ನಿರೂಪಿತವಾಗಿರುವುದು ವಿಶೇಷ. ಇಲ್ಲಿ ಬಯಲಾಗಿರುವ ಸಾಕಿಯರನ್ನು ಓದುವಾಗ, ಹಿನ್ನೆಲೆಯಾಗಿ ತಕ್ಕ ಲಯದ ಗದ್ಯಸಂಗೀತವೊಂದು ಶಬ್ದಗಳ ನಾದದೊಂದಿಗೆ ಹೊರಟು ಅಲೆಅಲೆಯಾಗಿ ತೇಲಿಬಂದು ಕತೆಯ ಘಟನೆಗಳನ್ನು ದೃಶ್ಯಕಾವ್ಯಗಳನ್ನಾಗಿ ಪರಿವರ್ತಿಸುತ್ತವೆ. ಶಬ್ದಗಳು ರಾಗಂರವರ ಲೇಖನಿಯೆಂಬ ಕುಂಚದಲ್ಲಿ ಕಲಾಕೃತಿಗಳಾಗಿವೆ; ಕಣ್ಣ ಮುಂದಿನ ದೃಶ್ಯಗಳಾಗಿವೆ. ಕಾಲ್ಪನಿಕ ಕತೆಗಳಿಗಿಂತ  ನೈಜ ಬದುಕುಗಳನ್ನು ಕತೆಯಾಗಿ ಹೆಣೆಯುವುದು  ಬಲು ಸಾಹಸದ ಸಂಗತಿ. ಲೇಖಕರು ಸವಾಲಾಗಿ ಸ್ವೀಕರಿಸಿ, ಆ ಸಾಹಸ ಮೆರೆದಿದ್ದಾರೆ. ನೆಲದ ಮರೆಯ ನಿದಾನದಂತೆ ಎಲ್ಲೋ  ಅರಳಿ, ಎಲ್ಲೋ ಪರಮಳ ಬೀರಿ ಮತ್ತೆಲ್ಲೋ ಕಾಯಿಯಾಗಿ, ಹಣ್ಣಾಗಿ,ಬೀಜವಾಗಿ ಕೊನೆಗೆ  ಮಣ್ಣಲ್ಲಿ ಮಣ್ಣಾಗುವ ಗಟ್ಟಿಗಿತ್ತಿ, ಭಂಡ, ದುರಂತ ಸಾಕಿಯರನ್ನು ಕಣ್ಣ ಮುಂದೆ ಸಾಲಾಗಿ ನಿಲ್ಲಿಸಿ, ಒಬ್ಬೊಬ್ಬರನ್ಬಾಗಿ ಕರೆದು ಅನಾವರಣಗೊಳಿಸುವ  ಅತ್ಯುತ್ತಮವಾದ ದಾಖಲೆಯಾಗಿದೆ ಈ ಕೃತಿ. ತಮ್ಮ ನೆಲಕ್ಕಂಟಿ ಬದುಕಿ,ನೊಂದು, ಬೆಂದು,ಸವೆದು, ತೆವಳಿದರೂ ಸೋಲು ಬಿಟ್ಟುಕೊಡದ  ಈ ಸಾಕಿಯರ  ಜೀವನೋತ್ಸಾಹದ ಪರಿ ಅದಮ್ಯವಾದುದು. ರಾಗಂರವರು  ಜೀವನಸಾಗರದಲ್ಲಿ ಮಳೆಹನಿಗಳಾಗಿ ಕರಗಿ ಮರೆಯಾಗಬೇಕಾಗಿದ್ದ  ಈ ಸಾಕಿಯರನ್ನು ತಮ್ಮ ಕತೆಗಳ ಚಿಪ್ಪುಗಳಲ್ಲಿ ಹಿಡಿದು ಬೆಳಕಿನ ಮಣಿಗಳನ್ನಾಗಿಸಿದ್ದಾರೆ; ತಮ್ಮನ್ನು ಸುಟ್ಟುಕೊಂಡು ಜಗಕೆ ಬೆಳಕು ಬೀರುವ ಜ್ಯೋತಿಗಳನ್ನಾಗಿಸಿದ್ದಾರೆ. ಹೆಸರಿಲ್ಲದಂತೆ ಸಮಾಧಿಯಾಗಿ ಹೋದ ಜೀವಗಳನ್ನು ಮೇಲೆತ್ತಿ ರಕ್ತಕಣ್ಣೀರಿನ  ಕಲಾಮೂರ್ತಿಗಳನ್ನಾಗಿ ಕೆತ್ತಿ  ನಿಲ್ಲಿಸಿದ್ದಾರೆ. ಬದುಕಿನ ಮತ್ತೊಂದು ಆಯಾಮವನ್ನು ದರ್ಶಿಸುವಂತೆ ಮಾಡುವ ಈ ಕೃತಿ ಸಮಾಜದ ನಿಗೂಢ ಸತ್ಯಗಳನ್ನು  ತೆರೆದಿಡುತ್ತದೆ. ಆದರ್ಶಗಳ ಬೆನ್ನುಬಿದ್ದು ಉಪದೇಶ  ಮಾಡುವ ನಮಗೆ ಈ ಸಾಕಿಯರ ಬದುಕುಗಳೇ ಜೀವನ ಪಾಠವಾಗಲಿಕ್ಕೆ ಸಾಕು.
ಈ ಕೃತಿಯಲ್ಲಿ ನನ್ನನ್ನು ಸೆಳೆದ ಮತ್ತೊಬ್ಬ ದುರಂತ ಭಾವದೊಡತಿಯೆಂದರೆ , ಭಾರತೀಯ ಚಿತ್ರರಂಗದ ಅಂದಕಾಲತ್ತಿನ ಅನಭಿಷಕ್ತ ರಾಣಿಯಾಗಿ ಅಕ್ಷರಶಃ ಸಿನೆಮಾ ಸಾಮ್ರಾಜ್ಯವನ್ನಾಳಿ,
ಹುಚ್ಚು ಪ್ರೇಯಸಿ ನಾನು 
ರಾತ್ರಿ ಕಳೆಯುತ್ತೇನೆ
ದುಃಖ ನನ್ನ ವೈರಿ,
ದುಃಖವೇ ಹಂಬಲ ಈ 
ಹೃದಯಕೆ ಮತ್ತೆ
ಅಗಲುವಿಕೆಯ ಅರೆಕ್ಷಣದಲ್ಲೂ
ಅದರದೇ ಹುಡುಕಾಟ"
ಎಂದು ಹಾಡಿ ಬರೆದು ಈ ಕವಿತೆಯೊಳಗಿನ ಪ್ರಿಯತಮೆಯಾದ ಮೀನಾಕುಮಾರಿ ಅಲಿಯಾಸ್ ಮುನ್ನಿ ಅಲಿಯಾಸ್ ಮಜಹಬೀನ್ ಜಗತ್ತಿನ ನಶೆಯೆಲ್ಲಾ ತನ್ನೊಳಗೇ ಇಳಿಯಬೇಕೆಂದು  ಹೀರಿ ಮದಿರೆಯೊಳಗಿನ ಮಧುವಾದ ಮೀನಾಕುಮಾರಿ ಬಣ್ಣ ಹಚ್ಚಿದ್ದು ತನ್ನ ಏಳನೇ ವಯಸ್ಸಿನಲ್ಲಿ. ಕಿತ್ತು ತಿನ್ನುವ ಬಡತನವೆಂಬ ಹಂತಕ ಹದ್ದಿನ ಕೆಂಗಣ್ಣುಗಳಿಗೆ ಗುರಿಯಾಗಿ, ಬಣ್ಣದ ಬದುಕೆಂದರೆ ಏನೆಂದೂ ಅರಿಯದ ಎಳೆಯ ಬಾಲ್ಯದಲ್ಲಿಯೇ, ಕೆಲವಾರು ಸಿನೇಮಾಗಳಲ್ಲಿ ನಟಿಸಿ ಬಾಲಕಲಾವಿದೆಯಾಗಿ ಗುರ್ತಿಸಿಕೊಂಡವಳು. ಈಕೆ ಲೇಖಕರೇ ಅಕ್ಷರಿಸಿದಂತೆ
ಗೊಂಬೆಯೊಳಗೊಣ ಗೊಂಬೆ
ಗೊಂಬೆಯೊಳಗಣ ಗೊಂಬೆ
ಗೊಂಬೆಯೊಳಗಣ ಗೊಂಬೆಯಾಗಿದ್ದವಳು. 
"ಮಾನವಸಂಬಂಧಗಳ ಭೀಷ್ಮ"ನೆಂಬ ಖ್ಯಾತಿಯ ಕೆ. ಎ. ಅಬ್ಬಾಸರು ಈಕೆಗೆ ವಿದೇಶದಿಂದ  ತಂದುಕೊಟ್ಟ ಗೊಂಬೆಗೆ ಪ್ರೀತಿಯ ಪ್ರಾಣ ಕೊಟ್ಟು ಮುದ್ದಿಸಿದವಳು. ಗೊಂಬೆಗಳೊಂದಿಗೆ ಆಟವಾಡಿ ಸಂಭ್ರಮಿಸಬೇಕಾಗಿದ್ದ ಬಾಲ್ಯವನ್ಜು ಪರದೆಯ ಮೇಲೆ ಗೊಂಬೆಯಾಗಿ ನಟಿಸಿ ಕಳೆದುಕೊಂಡ ದುರ್ದೈವಿ. ಬಾಲ್ಯದಲ್ಲಿ ಜೊತೆಯಾಗದ ಗೊಂಬೆಯೆಂದರೆ ಅವಳಿಗೆ ಪಂಚಪ್ರಾಣವಾಗಿತ್ತು.ಅದಕ್ಕಾಗಿ ಮನೆಯಲ್ಲೊಂದು ಗೊಂಬೆಗಳ ಮ್ಯುಸಿಯಂನ್ನೇ ನಿರ್ಮಾಣ ಮಾಡಿದ್ದಳು. ಕಮಲ್ ಅಮ್ರೋಹಿ ನಿರ್ದೇಶನದ ಬಿಜುಬಾವ್ರಾ, ಪರಿಣಿತಾ ,ಗುರುದತ್ತ ನಿರ್ದೇಶನದ ' ಸಾಹಿಬ್ ಬೀಬಿ ಔರ್ ಗುಲಾಮ್' ಹಾಗೂ ' ಕಾಜಲ್' ಸೇರಿದಂತೆ ೩೯ ವರ್ಷಗಳಲ್ಲಿ ಆಕೆ ನಟಿಸಿದ ಚಿತ್ರಗಳ ಸಂಖ್ಯೆ ಬರೋಬ್ಬರಿ ೭೦ ಎಂದರೆ ಆಕೆಯಲ್ಲಿರುವ ಕಲಾವಿದೆಯ ಸೆಳೆತವನ್ನು ಅರ್ಥಮಾಡಿಕೊಳ್ಳಬೇಕು. 'ಬದುಕೆಂದರೆ ಸಿನೇಮಾ, ಸಿನೇಮಾ ಎಂದರೆ ಬದುಕು' ಎಂದೇ ಜೀವಿಸಿದವಳು.
"ನಾ ಹೇಗೆ ಬದುಕುವೆ 
ಎಂದಲ್ಲವೇ ಪ್ರಶ್ನೆ ನಿನಗೆ
ರಾತ್ರಿ ಉರುಳುತ್ತವೆ ಭಿಕಾರಿಯಂತೆ
ಬೆಳಗು ಬರೀ ಬೇಡಿಕೊಳ್ಳುವುದರಲ್ಲಿ..."
ಎಂಬ ಅವಳ ವೇದನೆ ಯಾರಿಗೂ  ಕೇಳಿಸದೇ ಹೋಯಿತು. ಇವಳನ್ನು ಕೇವಲ  ಕಲಾವಿದೆಯಾಗಿ ಕಲಾರಾಧಕಳಾಗಿ ಕಂಡ ಜಗತ್ತು ಸ್ವತಃ ಜೀವಂತ ಕವಿತೆಯಾಗಿದ್ದ  ಈಕೆಯ ಕವಯಿತ್ರಿಯ ಮನಸ್ಸನ್ನು ಅರಿಯದೆ ಹೋಯಿತು. ಹೀಗೆ ನಟಿಸಿ, ಕುಡಿದು ಇತಿಹಾಸದ ಪುಟದೊಳಗಿನ  ಕವಿತೆಯಾಗಿ  ಮರೆಯಾದ ಮೀನಾಕುಮಾರಿಯ ಬದುಕು ಕಡುಕಷ್ಟಗಳಿಗೂ ಬಂಡೆಯಂತೆ ನಿಲ್ಲುವ ಗೊಂಬೆಯಂತಾಗಿತ್ತು. ತನ್ನದೇ ಕವಿತೆಯೊಳಗಿನ ಕವಿತೆಯಾಗಿ ಸಾವನ್ನೇ ನಶೆ ಎಂದು ಆಹ್ವಾನಿಸಿದ  ಮೀನಾಕುಮಾರಿ ಈ ಹೊತ್ತಿನಲ್ಲಿ ನಮ್ಮನ್ನು ನೋಡಿ ಧೃವತಾರೆಯಾಗಿ ನಗುತ್ತಿರಬೇಕು ಎಂದೆನಿಸುತ್ತದೆ.
"ಇಹವ ತೊರೆದವಳೊಂದಿಗೇನು
ಎಂದು, ಮನಸ್ಸಿಲ್ಲದೆ ಮಾತಿಗಿಳಿದೆ
ಮುಸಲಧಾರೆಯಂತೆ ಬಂದವು
ದಡಬಡಿಸಿ ಹೋದವಳ
ನೆನಪು ಮರುಕಳಿಸಿದವು"
ಜೀವನದ ಸಂತೆಯಲ್ಲಿ  ಮಕ್ಕಳ ಹೊಟ್ಟೆಗೆ ಹಿಟ್ಟು ಹುಡುಕುವ, ಬಡತನವೆಂಬ ಮಾರಿಗಾಗಿ ತನ್ನ ಸೆರಗಿನ ಕಷ್ಟಗಳನ್ನು  ಶೆರೆಯ  ಗುಂಗಿನಲ್ಲಿ ಅನುಭವಿಸುತ್ತಾ ಜನರ ಬಾಯಿಗೆ ತುತ್ತಾಗಿ ಹಳ್ಳದ ದಂಡೆಯ ಹೆಣವಾದ ಗಂಗವ್ವಳನ್ನು ಕುರಿತು ಲೇಖಕರ ಸಾಲುಗಳಿವು. ನಿಜ.ಲೇಖಕರಾದ ರಾಗಂರವರು ನೆಲಮೂಲ ಸಂಸ್ಕೃತಿಯ ಬೇರುಗಳಾಗಿ  ಆಳಕ್ಕಿಳಿದು ಬದುಕುತ್ತಾ,ಬಾಳಪಯಣದಲ್ಲಿ  ಹೆಸರಿಲ್ಲದ  ಹೂಗಳಂತೆ ಎದುರಾದ ಸಾಕಿಯರೊಂದಿಗೆ  ಮುಖಾಮುಖಿಯಾಗುತ್ತಾರೆ. ಅವರ ಎದೆಯ ಭಿತ್ತಿಯೊಳಗೆ ಅವಿತಿರುವ ನೋವುಗಳ ಚಿತ್ತಾರಗಳನ್ನು ಅಕ್ಷರಗಳ ಕುಂಚದಲ್ಲಿ ಮೇಲಿನಂತೆ ಬರೆಯುತ್ತಾರೆ. ಅಲಿ ಸರ್ದಾರ್ ಜಾಫ್ರಿಯವರ
"ಒಂದು ಕ್ಷಣ, ನೀನು ಬೆಂಕಿ, 
ಮತ್ತೊಂದು ಕ್ಷಣ ಇಬ್ಬನಿ
ನೀನು ವಜ್ರ,ಒಮ್ಮೆ ದೇವತೆ,
ಮತ್ತೆ ಪುನಃ ಶಿಲಾಮೂರ್ತಿ" 
ಎಂಬ  ಮಾತುಗಳನ್ನು ಉಲ್ಲೇಖಿಸುವ ಲೇಖಕರು ಮಾತಿಗೆ ಸೋತವಳನ್ನು ಮಾತಾಗಿಸುತ್ತಾರೆ; ಕಾವ್ಯದಲ್ಲಿ ಸೋತವಳನ್ನು ಗದ್ಯವಾಗಿಸುತ್ತಾರೆ; ಗದ್ಯದಲ್ಲಿ ಸೋತವಳನ್ನು ಪದ್ಯವಾಗಿಸುತ್ತಾರೆ; ಚಾರಿತ್ರ್ಯದಲಿ ಸೋತವಳನ್ನು ಚರಿತ್ರೆಯಾಗಿಸುತ್ತಾರೆ; ಪದಗಳಿಗೂ ಸೋತವಳನ್ನು ನಮ್ಮೆದೆಯೊಳಗಿನ ಭಾವವಾಗಿಸುತ್ತಾರೆ; ಬದುಕಾಗಿ ಸೋತವರನ್ನು ತಮ್ಮ ಮಾಂತ್ರಿಕ ಲೇಖನಿಯಲ್ಲಿ ಅಮರವಾಗಿಸುತ್ತಾರೆ."ಬಾಳಿನ ದಾರಿಯಲ್ಲಿ ಬೆಳಕಿದ್ದವರ ಬೆನ್ನುಹತ್ತಿ ಬಹಳಷ್ಟು ಹೆಂಗಸರು ಬರುತ್ತಾರೆ.ಬಂದವರು ಮೈಯಲ್ಲಿ ಮುಳುಗಿ, ಮಾತಲ್ಲಿ ಅರಳಿ,ಮತ್ಯಾವುದೋ ವಿನಾಕಾರಣಕ್ಕೆ ಕೆರಳಿ, ಇದುವರೆಗಿನ ಈ ಬದುಕೇ ಸುಳ್ಳು ಎನ್ನುವಂತೆ ಎಲ್ಲ ಕಿತ್ತೆಸೆದು ಹೊರಟು ಹೋಗುತ್ತಾರೆ. ಕೆಲವೇ ಕೆಲವರು ಮಾತ್ರ ಹಳೆಯ ಹಾಡಿನಂತೆ, ಗಂಟೆಯ ರಿಂಗಣದಂತೆ,ಮಧುರವಾಸನೆಯಂತೆ ಅವರ ನಿರ್ಗಮನದ ನಂತರವೂ ಉಳಿದುಬಿಡುತ್ತಾರೆ.
ಇಂಥವರ ನೆನಪೆಂದರೆ ಹುಚ್ಚು ಹುಚ್ಚಾಗಿ ಕೆನ್ನೆ ಕಚ್ಚುವ ಕೂಸಿನ ಮಾತೇ ಅಲ್ಲವೇ?"ಎಂದು ಅವಳು ಕುರಿತು ಹೃದಯದಾಳಕ್ಕಿಳಿಯುತ್ತಾರೆ ರಾಗಂರವರು. ಸಾಕಿಯನ್ನು ಬರಹಕ್ಕಿಳಿಸುವಾಗ ಲೇಖಕರು ಬಹುದೂರದ ವ್ಯರ್ಥ ಅಲೆದಾಟಕ್ಕೆ ತೊಡಗದೇ ತಮ್ಮ ತಲೆ ನೇವರಿಸಿ ಕೈ ಸೋಕಿಸಿ ನೆತ್ತಿ ಕಾದ  ಅವರ ಅಜ್ಜಿ ಕಾಶೀಬಾಯಿಯನ್ನೇ ಕರೆತರುತ್ತಾರೆ. ಹೀಗೆ ನಮ್ಮ ದೇಶದ ಚರಿತ್ರೆಯೆಂಬ ನೀಲಾಗಸದಲ್ಲಿ  ಮಿನುಗುತಾರೆಗಳಾಗಿ ಬೆಳಗಬೇಕಾಗಿದ್ದ ಸಾಕಿಯರ ದುರದೃಷ್ಟಕರ, ದುರಂತ ಬದುಕುಗಳನ್ನು ಲೇಖಕರಾದ ರಾಗಂ ರವರು  ಅರ್ಥಪೂರ್ಣವಾಗಿ  ಕಟ್ಟಿಕೊಟ್ಟಿದ್ದಾರೆ. ಸದಾ  ಆದರ್ಶ  ಜೀವನಗಳತ್ತಲೇ ನೋಟ ಬೀರುವ ಸಮಾಜದ ದೃಷ್ಟಿಕೋನವನ್ನು ದುರಂತದ ವಾಸ್ತವಿಕ  ಬದುಕುಗಳ ಕಡೆಗೂ  ಅಷ್ಟೇ ಪ್ರೀತಿಯಿಂದ ಹರಿಸಬೇಕಾದ ಅವಶ್ಯಕತೆಯಿದೆ ಎಂಬ ಕಾಳಜಿ ರಾಗಂರವರದು. ಸಾಕಿಯರ ಜೀವನದ  ಕತ್ತಲೆ ಬೆಳಕುಗಳನ್ನು ಅನಾವರಣಗೊಳಿಸುತ್ತಲೆ ಕಟ್ಟಿದ ಕಪ್ಪುಬಿಳುಪಿನ ದೃಶ್ಯಕಾವ್ಯವಿದು. ಆದರ್ಶದ ಬೆಳಕಿನಲ್ಲಿ ಕಪ್ಪು ಕಲೆಗಳಿಂದ ಮರೆಯಾಗಿ ಹೋಗಬೇಕಾಗಿದ್ದ ವ್ಯಕ್ತಿತ್ವಗಳನ್ನು  ಸಾಹಿತ್ಯದ ಬೆಳಕಿನಲ್ಲಿ ಮತ್ತೆ  ಪ್ರಕಾಶಿಸುವಂತೆ ಮಾಡಿದ್ದಾರೆ. ಲೇಖಕರು ಸಮಾಜವನ್ನು ನೋಡುವ ದೃಷ್ಟಿಯೇ ವಿಭಿನ್ನ ಎಂಬುದಕ್ಕೆ ಈ ಕೃತಿ ನಿದರ್ಶನವಾಗಿದೆ. ಈ 'ಅವಳು' ಕುರಿತು ಎಷ್ಟು ಬರೆದರೂ, ಎಷ್ಟು ಭಾಷಣ ಮಾಡಿದರೂ ಅವಳೊಂದು ಬರಿ ಮಾತಿಗೆ ದಕ್ಕದ ಎಂದೆಂದಿಗೂ ಮುಗಿಯದ ಅಧ್ಯಾಯ. ಏಕೆಂದರೆ ಅವಳು ಮೇಲೆ ಹೇಳಿದಂತೆ ಹರಿಯುವ ನದಿ; ಉಕ್ಕುವ ಕಡಲು; ಬೆಳಗುವ ನಂದಾದೀಪ; ಅಂತ್ಯವಿಲ್ಲದ ಅನಂತ; ಕೈಗೆಟುಕುವಂತೆ ಕಾಣುವ ನಿಲುಕದ ನಕ್ಷತ್ರ; ಸೀಮಾತೀತ ನಭೋಮಂಡಲ. ರಾಗಂರವರು  "...ನಾನು ಅವಳನ್ನು ಕುರಿತು ಏನೆಲ್ಲ ಬರೆದೂ ವಿಫಲನಾಗಿದ್ದೇನೆ.ಯಾಕೆಂದರೆ, 'ಅವಳು' ಕಾಮನಬಿಲ್ಲಿನಂತೆ,  ಏಳೂ ಬಣ್ಣಗಳನ್ನು ಸೇರಿಸಿ ಕಾಮನಬಿಲ್ಲು ಎಂದು ಕರೆದೆ, ಆದರೆ ಬಣ್ಣ ಬಣ್ಣಗಳು ಸಂಧಿಸಿ ಹೊರಹೊಮ್ಮುವ ಚೆಲುವಿಗೆ ಏನೆಂದು ಹೆಸರಿಸಲಿ? ಮಾತಿಗೆ ಮಾತೆಂದೆ,ಮೌನಕ್ಕೆ ಮೌನ. ಮಾತು ಮತ್ತು ಮೌನಗಳು ಸಂಧಿಸುವ ಸುಮ್ಕಾನಕ್ಕೆ ಯಾವ ಹೊಸ ವ್ಯಾಖ್ಯಾನ ನೀಡಲಿ?  " ಎಂದು ಲೇಖನಿಯ ತುದಿಯಲ್ಲಿ ಹಿಡಿಯಲಾಗದ ಬ್ರಹ್ಮಾಂಡ ಅವಳು ಎಂದು ಮನೋಜ್ಞವಾಗಿ ಬಣ್ಣಿಸುತ್ತಾರೆ ; ಕಾವ್ಯದ ಕ್ಯಾನ್ವಾಸಿನಲ್ಲಿಯೂ ಬಿಡಿಸಲಾಗದ ಭವ್ಯ ಸಂಕೀರ್ಣ ಕಲಾಕೃತಿ ಅವಳು  ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಕವಿತೆಯಾಗಿಯೂ ಅವಳು ಎಷ್ಟು ಅಪೂರ್ಣವೆಂಬುದನ್ನು ಕೆಳಗಿನಂತೆ ನಾನು ಹೀಗೆ ಬರೆಯಬೇಕೆನ್ನಿಸುತ್ತಿದೆ -
"ಹೇಗೆ ಬಿಡಿಸಲಿ ಗೆಳತಿ 
ನಿನ್ನ ಹಂಬಲದ ಗೆರೆಗಳನು
ಮನದ ತುಮುಲರೇಖೆಗಳನು
ಒಲವ ಧಾರೆಗಾವ ಬಣ್ಣ
ಇದೆಯೊ ಬಣ್ಣ ಉಸುರಿಗೆ
ಮಮತೆಗೆಲ್ಲಿಯ ರೂಹು
ವಾತ್ಸಲ್ಯಕ್ಕಾವ ರಂಗು 
ನೀನೆಂದರೆ 
ಸುಳಿಯಲೆಗಳ ಮಹಾಕಡಲು
ಸುಳಿಸುಳಿದು ಬೀಸುವ
ಮಂದಾನಿಲ ಹೇಗೆಂದರೂ
ನೀನೊಂದು ಬರೆದಷ್ಟೂ
ಬಗೆದಷ್ಟೂ ಎಂದಿಗೂ
ಮುಗಿಯದ ಮಹಾಧ್ಯಾಯ".



x

Sunday, 2 December 2018

ಸ್ತ್ರೀ ಎಂದರೆ ಅಷ್ಟೇ ಸಾಕೆ....(ಭಾಗ-೧)
          'ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಎಂದು ಹೆಣ್ಣು ಪಡೆಯಬೇಕಾದ ಶಿಕ್ಷಣದ ಅವಶ್ಯಕತೆಯ ಬಗ್ಗೆ  ನಾವು ಉದ್ಘೋಷಿಸುವುದಕ್ಕಿಂತ ಅದೆಷ್ಟೋ ಮುಂಚೆಯೇ ಎದೆಯಲ್ಲೊಂದು ಅಕ್ಷರದ ಗಂಧವನ್ನೂ ಸುಳಿಯಗೊಡದ ಆ ಹೆಣ್ಣು ಹಿಮಾಲಯದಂತಹ ಜೀವನಗಳನ್ನು ಮುಗಿಲೆತ್ತರಕ್ಕೆ ಕಟ್ಟಿ ಅಪರಿಮಿತ ಜೀವಗಳಿಗೆ ಬೆಳಕಾಗಿ ಬದುಕಿನ ದಾರಿಗೆ ಚೈತನ್ಯವಾಗಿದ್ದಳು. ಅದೂ ಸಮಾಜದ   ಪಂಡಿತರೆಲ್ಲ ಸೇರಿ ನಿರ್ಮಿಸಿದ ಕಟ್ಟಳೆಗಳ ಸಂಕೋಲೆಯ ಮಧ್ಯೆ ಎಂದರೆ ಹೆಣ್ಣು ಎಂಬ ಜೀವವೊಂದರ ಉಸಿರಾಟವನ್ನು ನಾವಿನ್ನೂ  ಅರಿಯಬೇಕಾಗಿದೆ. "ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ " ಎಂಬ ಉವಾಚವನ್ನು ಮುನಿದ ಹೆಣ್ಣಿನ ಮುಂದೆ ಉಲಿದು ಸಮಾಧಾನ ಪಡಿಸಿ ಮತ್ತೆಂದೂ ತಲೆ ಎತ್ತದಂತೆ ಫಲಭರಿತ ಬಾಳೆಯಂತೆ ಬಾಗಿಸಿ  ನಡೆಸಿಕೊಳ್ಳುವ  ಕಲೆ ಸಮಾಜಕ್ಕೆ ಪಾರಂಪರಿಕವಾಗಿ ಕರಗತವಾಗಿದೆ. ಹೆಣ್ಣೆಂದರೆ ಮೌನ ಹೆಣ್ಣೆಂದರೆ ಸುಮ್ಮಾನ.ಹೆಣ್ಣೆಂದರೆ ಜೀವನದ ಕುಶಲ ಕಲೆಗಾರ್ತಿ, ಹೆಣ್ಣೆಂದರೆ ಬದುಕೆಂಬ ನಾಟಕದ ರಂಗನಾಯಕಿ.ಹೆಣ್ಣೆಂದರೆ ಧೋ ಎಂದು ಸುರಿಯುವ ಬಿರುಮಳೆ;

  ಕೆಲವೊಮ್ಮೆ ಹೆಣ್ಣೆಂ
ದರೆ ಜಿಟಿಜಿಟಿ ಸದ್ದಿನ ಜಡಿಮಳೆ.ಮಗದೊಮ್ಮೆ ಹೆಣ್ಣೆಂದರೆ  ಬದುಕಿನ ಸವಾಲುಗಳ ಕಲ್ಲುಬಂಡೆಗಳ ಮಧ್ಯೆ ನಿಶಾಂತವಾಗಿ ಜಿನುಗುವ ಹಾಲನೊರೆ; ಅವಳೆಂದರೆ ಆಗಸದಲ್ಲಿ ಒಡಮೂಡಿ ಗುಡುಗುವ ಕಾರ್ಮೋಡ.ಅವಳೆಂದರೆ ಕ್ರಮಿಸಲಾಗದ ಬಲು ದೀರ್ಘ ದಾರಿ ಹೀಗೆ ಅವಳು ನಮಗೆ ಎಲ್ಲವೂ ಆಗಿ ಏನೂ ಆಗಿಲ್ಲದಂತೆ ಬದುಕುವ ನಿಸ್ಪೃಹ ಜೀವಿ. ಇತಿಹಾಸದಲ್ಲಿ ಹೆಣ್ಣು ಷಹಜಾನನ ಹೆಂಡತಿಯಾಗಿ ತಾಜಮಹಲಿನ ಗೋರಿಯೊಳಗೆ ಮಲಗಿ ವಿರಮಿಸಿದ ಪ್ರೀತಿಯಾಗಿದ್ದಾಳೆ. ಶ್ರೀಕೃಷ್ಣನ ಹದಿನಾರು ಸಾವಿರ ಮಡದಿಯರಾಗಿ ಶ್ರೀ ಕೃಷ್ಣಮಹಾತ್ಮೆಯ ಝರಿಗಳಾಗಿದ್ದಾರೆ. ಹದಿನಾಲ್ಕು ವರ್ಷಗಳ ಸುದೀರ್ಘ ಕಾಲ ವನವಾಸಗೈದು ರಾವಣನಂತಹವರ ಕೈಯ್ಯಲ್ಲಿ ನರಳಿ ಮತ್ತೆ ಪತಿಯೇ ಪರದೈವವೆಂದು ಶ್ರೀರಾಮನ ಪಾದಕೆರಗಿದ ಸೀತೆಯಾಗಿದ್ದಾಳೆ. ದುಷ್ಯಂತನ ಬಲೆಯಲ್ಲಿ ಸಿಲುಕಿದ ದುಂಬಿಯಂತೆ  ಚಡಪಡಿಸಿ, ಒಡಲೊಳಗೊಂದು ಕರುಳಕುಡಿಯನ್ನಿಟ್ಟುಕೊಂಡು ಬಾಳಭಿಕ್ಷುಕಿಯಾಗಿ ದುಷ್ಯಂತನೆಂಬ ಮಹಾರಾಜನ ಮುಂದೆ ಸೆರಗೊಡ್ಡಿ ನಿಂತ ಶಕುಂತಲೆಯಾಗಿದ್ದಾಳೆ.
   ದ್ರುಪದನೆಂಬ ಮಹತ್ವಾಕಾಂಕ್ಷೆಯ ಚಕ್ರವರ್ತಿಯ ಕೈಯ್ಯಲ್ಲಿನ ಕೈದುವಾಗಿ , ಶಿವಧನಸ್ಸನ್ನು ಹೆದೆಯೇರಿಸಿ ಮುರಿದು ಮೀನಾಕ್ಷಿಗೆ ಗುರಿಯಿಟ್ಟು ಪಾರ್ಥನೊಬ್ಬನೇ ಹೊಡೆದ ಬಾಣವನ್ನು ಕೊರಳ ಮಾಲೆಯಾಗಿ ಧರಿಸಿ, ಪಾಂಡವರೈವರಿಗೂ ಪತ್ನಿಯಾಗಿ, ಸಂತಾನಮಾತೆಯಾಗಿದ್ದೂ ಬಾಲರನ್ನು ಕಳೆದುಕೊಂಡ ಬಂಜೆತನದ ಹುಲ್ಲೆಯಾಗಿ,ಮಹಾ ಸಾಮ್ರಾಜ್ಯದ ಮಹಾಮಹಿಮರಿಂದ ತುಂಬಿದ ಒಡ್ಡೋಲಗದಲ್ಲಿ ಮುಡಿಯನೆಳೆಸಿಕೊಂಡು ಹೆರಳ ನೆರಳಲ್ಲಿ ಮುಖ ಹುದುಗಿಸಿ, ಸೀರೆ ಸೆಳೆವ ಹೆಬ್ಬಾವಿನ  ಕೈಗೆ  ಸಿಕ್ಕ ಮೊಲದಂತೆ ವಿಲವಿಲನೆ ಒದ್ದಾಡಿ, ಅರಚಾಡಿ,ಹೊಟ್ಟೆ ಹೊಸೆದುಕೊಂಡು ಸೋತು ತಲೆಬಾಗಿಸಿದ, ರಾಜಾಧಿರಾಜರ ರಾಣಿಯಾಗಿ ಸಕಲ ಸೌಭಾಗ್ಯಗಳನ್ನು ಪಡೆದಂತಿದ್ದರೂ, ಅನುಭವಿಸದಂತಿದ್ದು ಕೊನೆಗೆ ಧರ್ಮರಾಯನ ಮಾತಿನಂತೆ ಕಾಣದ ಸ್ವರ್ಗದತ್ತ ಹೆಜ್ಜೆ ಹಾಕಿದ ದ್ರೌಪದಿಯಾಗಿದ್ದಾಳೆ. ಕಪಟನಾಟಕ ಸೂತ್ರಧಾರಿಯಾಗಿ ಧರೆಗಿಳಿದ  ಇಂದ್ರನ ತೋಳತೆಕ್ಕೆಯಲ್ಲಿ ಗೊತ್ತಿಲ್ಲದೇ ಮುಖವಿಟ್ಟು ಮಲಗಿ ಕಳೆದ ಸುಖಕ್ಕೆ  ತಾನೇ ಹೊಣೆಯಾಗಿ ತನ್ನದಲ್ಲದ ತಪ್ಪಿಗೆ ದಂಡಿಸಿಕೊಂಡು ಮೂಕ ಶಿಲೆಯಾಗಿ ನಿಂತ ಅಹಲ್ಯೆಯಾಗಿದ್ದಾಳೆ. ಉರಿಯುವ ಜಮದಗ್ನಿಯ ಸತಿಯಾಗಿ ಯಕಃಶ್ಚಿತ ಸಂದೇಹದ ಕಾರಣವಾಗಿ ಕಟುಕನ ಮುಂದೆ ಬಾಗಿದ ಹಸುವಿನಂತೆ, ತಲೆ ತಗ್ಗಿಸಿ ನಿಂತು ಪುತ್ರ ಪರಶುರಾಮನಿಂದ ಕೊರಳಿಗೆ ಕೊಡಲಿಯೇಟು ಹಾಕಿಸಿಕೊಂಡು  ನೆತ್ತರ ಹೊಳೆಯಾಗಿ ಹರಿದ ರೇಣುಕೆಯಾಗಿದ್ದಾಳೆ.
 ಹಿರಣ್ಯಕಶ್ಯಪನ ಪತ್ನಿಯಾಗಿ ಸಹಿಸಲಾರದ ಸಂಕಷ್ಟಗಳನ್ನೆಲ್ಲ ವಿಷದಂತೆ ನುಂಗಿಯೂ ಬದುಕಿದ ಕಯಾದು ಆಗಿದ್ದಾಳೆ ಈ ಹೆಣ್ಣು. ಹೀಗೆ  ಪುರಾಣ ಮತ್ತು ಚರಿತ್ರೆಯ  ಪುಟಗಳನ್ನು  ತಿರುವುತ್ತಾ ಹೋದಂತೆ  ನಮಗೆದುರಾಗುವ  ಸಂಗತಿಗಳೆಲ್ಲ ಹೆಣ್ಣು ಹೇಳುವ ಅರ್ಧ ಸತ್ಯಗಳೇ ಆಗಿವೆ.  ಈ ಸಂಗತಿಗಳೆಲ್ಲ ಮನದ ಮೂಲೆಯಿಂದ ತೂರಿಬರಲು ಕಾರಣವಾಗಿ, ನನ್ನನ್ನು ಇನ್ನಿಲ್ಲದಂತೆ  ಕಾಡಿ ಬಿಡಿಸಲಾಗದ ಯಕ್ಷ ಪ್ರಶ್ನೆಗಳನ್ನು ಹುಟ್ಟುಹಾಕಿದ ಕೃತಿಯೆಂದರೆ ಗುರುಗಳಾದ ಡಾ. ರಾಜಶೇಖರ ಮಠಪತಿ(ರಾಗಂ)ಯವರ  "ಹೆಣ್ಣು ಹೇಳುವ ಅರ್ಧ ಸತ್ಯ".- ಈ ಸಾಕಿಯರ ಕೈ ಸೋಕಿ.....ಇತಿಹಾಸವೆಂಬ ಭೂಗರ್ಭದ ಬೆಂಕಿಯಲ್ಲಿ ಕೊತಕೊತನೆ ಕುದಿಯುತ್ತಿರುವ ರಕ್ತವರ್ಣದ  ಲಾವಾ ರಸವಾಗಿ, ಜಗತ್ತಿನ ಸವ್ಯ ಸಾಕಿಯರು ಅನುಭವಿಸಿದ ತಲ್ಲಣಗಳನ್ನು,ಏರಿಳಿತಗಳನ್ನು,ಸಂಕಟಗಳನ್ನು,ಹಿಂಸೆಗಳನ್ನು, ಸಂವೇದನೆಗಳನ್ನು ಸಹೃದಯರ ಹೃದಯದ ಭಿತ್ತಿಗೇ ಸುನಾಮಿಯ ಆರ್ಭಟದ ಅಲೆಗಳಾಗಿ ಬಂದಪ್ಪಳಿಸಿ  ಕೊಚ್ಚಿಹೋಗುವಂತೆ ಮಾಡುವ ಅನನ್ಯ ಕೃತಿ ಈ "ಹೆಣ್ಣು ಹೇಳುವ ಅರ್ಧ ಸತ್ಯ" .
ಹೆಣ್ಣು ಈ ಜಗದ ಕಣ್ಣು ಎಂದೆಲ್ಲ ಬೊಗಳೆ ಬಿಡುವ ನಾವು ಆ ಕಣ್ಣಿಗೆ ಮಣ್ಣೆರಚಿ ಅವಳಿಗೆ  ಮಾಡಿದ ಅಪಚಾರಗಳು ಒಂದೇ   ಎರಡೇ... ಹೇಗೆಂದು ವರ್ಣಿಸುವುದು ಮನುಕುಲದ ಈ ಒಂಟಿಗಾಲಿನ ನಡಿಗೆಯನ್ನು; ಒಂಟಿ ಎತ್ತಿನ ಬಂಡಿಯ ಈ  ಬಾಳ ಪಯಣವನ್ನು.. ಒಕ್ಕಣ್ಣಿನ ನೋಟದಿಂದ ಮುನ್ನಡೆಯುತ್ತಿರುವ ಜೀವನದ ಅರೆಬೆಳಕಿನ ದಾರಿಯನ್ನು.. ಏನೆಂದು ಬಣ್ಣಿಸುವುದು ಪ್ರಕೃತಿಯಲ್ಲಿ ಮಿಂದು ಪ್ರಕೃತಿಯನ್ನೇ ಬದುಕಿ ಪ್ರಕೃತಿಸ್ವರೂಪಿಯ ಸಾಕಿಯರನ್ನು ಮರೆತು ಜೀವಿಸುವ ಜೀವಸಂಕುಲದ ಭಾವಲಹರಿಯನ್ನು... ಜಗತ್ತು  ಪರಿಪೂರ್ಣವೆಂದು ಎಂದೆನಿಸುತ್ತಿಲ್ಲ  ಎಂಬುದಕ್ಕೆ ಈ ಕೃತಿಯಲ್ಲಿ ಉಲ್ಲೇಖಿಸಿದ ಗಿಬ್ರಾನ್ ನ ಈ ಸಾಲುಗಳನ್ನು  ನೋಡಿ  " ಹೆಣ್ಣು ಮಗಳ ಮುಖ ಜಗತ್ತಿನ ನೆರಳಲ್ಲಿ ಅರ್ಧ ಮುಚ್ಚಿದೆ.ಮತ್ತು ಅರ್ಧ ಮುಖ ಸೂರ್ಯನ ಪ್ರಖರ ಕಿರಣಗಳಿಂದ ಹೊಳೆಯುತ್ತದೆ. ಅಂದ ಮೇಲೆ, ಅದು ಎಲ್ಲಿಂದ ನೋಡಿದರೂ, ಹೇಗೆ ನೋಡಿದರೂ ಅರ್ಧವಾಗಿಯೇ ಕಾಣಿಸುತ್ತದೆಯೊ?  ಅಥವಾ ಅರ್ಧವಾಗಿಯೇ ಇದೆಯೊ? "  
ಹೀಗೆ ಸಾಕಿಯರ ಕುರಿತು ನಮ್ಮಲ್ಲಿ ಶತಾವಧಾನದ ಚಿಂತನೆಗಳನ್ನು, ಭಾವಬಿಂದುಗಳನ್ನು ಸ್ಫುರಿಸುವ ಈ ಕೃತಿಯ  ತಂಗಾಳಿಯ ತಂಪನ್ನೆರೆದೂ, ಎದೆಯೊಳಗೆ ನಿಧಾನವಾಗಿ  ಹೊತ್ತಿಕೊಳ್ಳುವ ಚಳಿಗಾಲದ  ಅಗ್ನಿಯಂತಿರುವ  ಸಾಲುಗಳು ನಮ್ಮ ಬದುಕೆಂಬ ನಾವೆಯ ದಿಕ್ಕನ್ನೇ ಬದಲಿಸುವಂತಿವೆ.
ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರು
"ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ 
ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೇ 
ಸ್ತ್ರೀ ಎಂದರೆ ಅಷ್ಟೇ ಸಾಕೆ
ಮನೆಮನೆಯಲಿ ದೀಪ ಉರಿಸಿ ಹೊತ್ತುಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೇ" 
ಸ್ತ್ರೀ ಎಂದರೆ ಅಷ್ಟೇ ಸಾಕೆ ?"
ಎಂದು ಹಾಡುವಂತೆ  ಶಬ್ದಗಳ ಮಿತಿಗೆ ಸಿಗದ ಬದುಕಿನ
ಶಬ್ದಾತೀತ ತರಂಗಗಳ ಹುಟ್ಟೆನಿಸಿದ ಆಕೆಗೊಂದು
ತಕ್ಕ ಹೆಸರಿಗಾಗಿ ತಡಕಾಡುವಷ್ಟು 'ಅವಳು' ಕಾಡಿದ್ದಾಳೆ. ಹಸಿರನ್ನುಟ್ಟು ಜೀವಿಗಳ ಹಸಿದ ಒಡಲು ತುಂಬಿಸಿದ್ದಾಳೆ.ಜಗತ್ತಿನ ಆಗುಹೋಗುಗಳನ್ನೇ ಅಲ್ಲವೆನಿಸುವ ಅಲ್ಲಮನಿಗೇ ಮಾಯೆಯಾಗಿ ಕಾಡಿದ,  ನಿರ್ಮೋಹಿಗೆ ಮೋಹದ ಪಾಠವನ್ನು ಹೇಳಲು ಹೋಗಿ ಸೋತ 'ತಾಮಸೆ'ಯಾಗಿ ಕ್ರಾಂತಿಯ ಕಾಂತೆಯಾದವಳು ಈ 'ಮಾಯೆ' ಯೆಂಬ ಅವಳು. ಇಂತಹ ಕೊನೆಯಿರದ ನೀಲಾಂಬರ, ಆಳವೇ ಅನಂತವಾದ ಕಡಲು ಎಂಬ ಅರ್ಥಗಳನ್ನು ಹೊರಡಿಸುತ್ತಲೇ ನಿರಂತರವಾಗಿ ಅನುರಣಿಸುವ ಶಬ್ದ, ಅಪರಿಮಿತವನ್ನೇ ಎದೆಯೊಳಿಟ್ಟುಕೊಂಡು ಸೀಮೆಯೇ ಇಲ್ಲದ ಸೀಮಾತೀತ ಜೀವ ಈ 'ಅವಳು' ಆಗಿದ್ದಾಳೆ.
ಸನಾತನ ಕಾಲದಿಂದಲೂ ನಮ್ಮ ಬದುಕಿನಲ್ಲಿ 'ಅವಳು' ನಿರಂತರ ನಿಶಾಂತವಾಗಿ ಹರಿಯುವ ಗಂಗೆಯಾಗಿದ್ದಾಳೆ ;  ನಿರಮ್ಮಳವಾಗಿ ಹರಡುವ  ಕಾವೇರಿಯಾಗಿದ್ದಾಳೆ ;ಧುಮ್ಮಿಕ್ಕಿ ಇಳಿಯುವ ಕವಲೊಡೆದ   ಜಲಪಾತವೆಂಬ ಶರಾವತಿಯಾಗಿದ್ದಾಳೆ; ಭರ ಭರನೇ ಅವಸರಿಸಿ ನೆಲ ತಬ್ಬಿ ಹಸಿರಾಗುವ ಕೃಷ್ಣೆಯಾಗಿದ್ದಾಳೆ; ಅಲ್ಲದೇ ಸಮಯ ಬಂದಾಗ 'ಅವಳು' ಭೋರ್ಗರೆಯುವ ಆರ್ಭಟದ ಕಡಲೂ ಆಗಿದ್ದಾಳೆ.
ಗೋಪಾಲಕೃಷ್ಣ ಅಡಿಗರ 'ಮೊರೆಯದಲೆಗಳ ಮೂಕ ಮರ್ಮರ'ವಾಗಿದ್ದಾಳೆ. "ಮೋಹ"ನ ಮುರಳಿಗೆ ಮನಸೋತು ಕನ್ನಿಕೆಯಾಗಿದ್ದಾಳೆ. ಕುವೆಂಪುರವರಿಗೆ
“ನೀನು ಬಳಿ ಇಲ್ಲದಿದರೆ, ಓನಲ್ಲೆ ಹೇಮಾಕ್ಷಿ, ಜಗವೆಲ್ಲ
ಜಡಬಂಡೆ ಬೇಸರದ ಬೀಡು’ ಎಂದು ಬಾಳು ಬೆಳಗುವ ದೇವತೆಯಾಗಿದ್ದಾಳೆ.
ಹಿಮಾಲಯದೆತ್ತರಕೆ ಬೆಳೆದರೂ ಆಕೆ, ಸುಡುವ ಸೂರ್ಯನಂತೆ ಎದುರಾಗುವ  ಸಂಕಟಗಳ ತಾಪಕ್ಕೆ ಹಿಮದಂತೆ  ಕಣ್ಣೀರಾಗುವುದು ತಪ್ಪಲಿಲ್ಲ. ಜೀವನಪೂರ್ತಿ ನಿರಂತರವಾಗಿ ಬಸಿರಾಗಿ ಹರಿಯುವುದು ಕೊನೆಯಾಗಲಿಲ್ಲ. ಎಂತಹ ಆಮಿಷವದು ! ಬೆಳಕಿನಂತೆ ತಾನು ದಕ್ಕುವುದಿಲ್ಲವೆಂದು ಗೊತ್ತಿದ್ದರೂ ತನ್ನ ಸುತ್ತವೇ ಸುತ್ತುವ ಪತಂಗಗಳನ್ನು ಆಕರ್ಷಿಸಿ ಬಲಿ ಹಾಕುವ ಮಹಾಹದನವದು. ನಿಜಗುಣಶಿವಯೋಗಿಗಳ ಕೈವಲ್ಯಪದ್ಧತಿಯಲ್ಲಿ
" ಗಿರಿಜೆ ಗೀರ್ವಾಣಿಪೂಜಿತೆ,ಗೌರಿ ಗುಹಜನನಿ
ಪರನಾದಬಿಂದುಮಂದಿರೆ,ಮನೋಂಬುಜಹಂಸೆ
ವರದೆ ವೈಭವೆ ನಿತ್ಯಮುಕ್ತೆ ನಿರ್ಮಲೆ..." 
ಇತ್ಯಾದಿ ಆದ ಹೆಣ್ಣು ಷಹಜಾನನ ಸಾಲುಗಳಲ್ಲಿ ' ಎಂದೆಂದಿಗೂ ಈ ಜಗತ್ತು ಆಕೆಯ ಮೊಲೆ ಕುಡಿಯುವ ಹಸುಗೂಸು ' ಎನ್ನುವಲ್ಲಿನ 'ಜಗನ್ಮಾತೆ'ಯಾಗುತ್ತಾ, ರಾಗಂರವರ ಈ ಕೃತಿಯಲ್ಲಿ ಮತ್ತೆ ಮತ್ತೆ ಬಸಿದು ಸಾಯುವ ಜೈನಬಿ,ದಾಸರ ದಾಸಿಯಂತೆ ಬದುಕಿ ಅಬ್ಬಾಸರ ದೇವತೆಯಾದ ಮುಜತಾಬಾಯಿ, ಸೆರೆ ಮತ್ತು ಕಾಮದ ಗುಂಗಿನಲ್ಲಿ ಕೊನೆಯುಸಿರೆಳೆಯುತ್ತಲೇ ತನ್ನೂರಿಗೆ ಗಂಗೆಯನ್ನು ಧರೆಗಿಳಿಸಿದ ಪಕ್ಕದ ಮನೆಯ ಪಾತ್ರ ಗಂಗವ್ವ,ಮಹಾಕವಿ ಆಧ್ಯಾತ್ಮಿಕ ಜೀವಿ ಮಧುರಚನ್ನರಿಗೆ ದಿವ್ಯಜೀವನದ ದಾರಿ ತೋರಿದ 'ವಾಸಂತಿ'ಯಾಗಿದ್ದ 'ಬಸವ್ವ' ಳಾಗಿ ಹೀಗೆ ಹತ್ತು ಹಲವು ರೂಪಾಂತರಗಳನ್ನು ಪಡೆದು ಅವತರಿಸಿದ್ದಾಳೆ.
" ಹುಗಿದ ನೆಲದಲ್ಲೊಂದಿಷ್ಟು ಸುಮ್ಮನಿರಬಹುದು ನನ್ನವ್ವ 
ನಾಯಿ ಬಾಳಿನಿಂದ ಮುಕ್ತಿ ಪಡೆದು
ತಣ್ಣಗಿರಬಹುದು"
ಎಂದು  ನೆಲದಲ್ಲಿ ಮುಖವಿಟ್ಟು ಮಲಗಿದಾಗಲೇ ಹೆಣ್ಣಿಗೆ ಸಿಗುವ ಪರಮಸುಖಕ್ಕಿಂತ ಮಿಗಿಲಾದುದು ಈ ಜಗತ್ತಿನಲ್ಲಿ ಯಾವುದಿದೆ ಹೇಳಿ?  ಆಕೆಯ ಭವಬಂಧನದ ಬಿಡುಗಡೆಯ ಮೋಕ್ಷ  ಎಂದರೆ ಅದು ತಾನು ಕಟ್ಟಿ ಹೆಣೆದ ಕರುಳು ಜಾಲವನ್ನು ಕತ್ತರಿಸಿಕೊಂಡು ಯಾರಿಗೂ ಹೇಳದೇ ಇಲ್ಲಿಂದ ಮತ್ತೆಂದೂ ಬರದಂತೆ ಎದ್ದು  ಹೋಗುವುದು ಎಂದರ್ಥವೆನಿಸುತ್ತದೆ. ಹೀಗೆ ಕಾಡಿದ ತಾಯಿಯನ್ನು ಜೈನಬಿಯ ರೂಪದಲ್ಲಿ ಲೇಖಕರು ಸ್ಮರಿಸಿಕೊಳ್ಳುತ್ತಾರೆ.
" ಈಗ ಊರು ಬದಲಾಗಿದೆ
ತಳದಲ್ಲಿ, ಬುಡದಲ್ಲಿ
ಆದರೂ
ಅವ್ವನ ಘೋರಿಯ ಪಕ್ಕದ
ಹುಣಸೆ ಇನ್ನೂ ಹಸಿರಾಗಿದೆ
ಸಮಾಧಿ ಮೇಲಿನ ಹುಲ್ಲು
ಇನ್ನೂ ಚಿಗುರುತ್ತಿದೆ."
ಹೀಗೆ ಅವ್ವನ ಬಿಸಿಯುಸಿರು ಹುಣಸೆಯಂತೆ ಚಿಗುರುವ ಬದುಕಿಗೆ ಹೇಗೆ ತನ್ನೊಡಲ ಜೀವಜಲವನ್ನು ಬಸಿಯುತ್ತಲೇ  ಭರವಸೆಯಾಗುತ್ತದೆ ಎಂಬುದನ್ನು ರಾಗಂರವರು ಸೋಪಜ್ಞವಾಗಿ ಬಣ್ಣಿಸುತ್ತಾರೆ .ಮಣ್ಣೊಳಗೆ ಮಣ್ಣಾದರೂ ಜಗ ಕಾಯುವ ಅವಳ ಮಮತೆಗೇನೂ ಕೊರತೆಯಾಗಬಾರದೆಂದೇ ಅವಳು ಮಮತಾಮಯಿಯಾದ. ಈ 'ವಸುಂಧರೆ'ಯನ್ನು ಬಿಟ್ಟುಹೋಗಿರುವಳೇನೋ ಎಂದೆನಿಸುತ್ತದೆ ಕೊನೆಗೆ. ಲೇಖಕರು ಉಲ್ಲೇಖಿಸುವ,"In the home is true union; In the home is enjoyment of life ; why should I forsake my home and wander in to forest? " ಎಂಬ ಟ್ಯಾಗೋರರು ಭಾಷಾಂತರಿಸಿದ ಕಬೀರರ ಸಾಲುಗಳು' ಮಹಿಳೆ' ಎಂದರೆ 'ಮನೆ', 'ಮನೆ' ಎಂದರೆ 'ಮಹಿಳೆ 'ಎನ್ನುವ ಪರಮಸತ್ಯವನ್ನು  ಜಗತ್ತಿನ ಮುಂದೆ ತೆರೆದು ತೋರುತ್ತವೆ.ನಾವು ಆ ಮನೆಯೊಳಗಿನ ವಾತ್ಸಲ್ಯದ ಮಡಿಲಲ್ಲಿ ಕರುಗಳಾಗಿರುವುದನ್ನು ಮತ್ತೆ ಮತ್ತೆ ನೆನಪಿಸುತ್ತವೆ. ರಾಗಂರವರು ಹೇಳುತ್ತಿರುವ ಜೀವಂತ ಕತೆಗಳ ಕಥಾನಾಯಕಿಯರೆಲ್ಲ ಹತ್ತರೊಳಗೆ ಹನ್ನೊಂದಾಗಿ ಬದುಕಿ ಹೋದವರಲ್ಲ. ಈ ಭೂಮಿಯ ಮೇಲೆ ಕೇವಲ ಭೌತಿಕವಾದ ಅಸ್ತಿತ್ವವನ್ನು  ನೆಚ್ಚಿಕೊಂಡವರೂ ಅಲ್ಲ; ಜೀವನವನ್ನು 'ಹೊರೆ' ಯೆಂದು ಬಗೆದು ಬದುಕಿದವರಲ್ಲ.
ಹಾಗಾದರೆ ಅವರೇನು ? ಅವರು ಯಾರು?  ಎಂಬುದನ್ನು ಲೇಖಕರ ಮಾತಿನಲ್ಲಿಯೇ ಕೇಳಿ.
"ಸಭ್ಯತೆಯ ಚೌಕಟ್ಟಿನಲ್ಲಿಯೇ ಸುಳಿಯದ, ಯಾವುದೋ ಭ್ರಮೆಗಾಗಿ ತಮ್ಮನ್ನೇ ಸುಟ್ಟುಕೊಂಡವರು. ಸಭ್ಯ ಸಮಾಜದ ಯಾವುದೇ ನ್ಯಾಯಿಕ ವ್ಯವಸ್ಥೆ ಇವರನ್ನು ಆದರ್ಶ ಪ್ರಾಯರೆಂದು ಘೋಷಿಸಲು ಸಾಧ್ಯವಿಲ್ಲ. ಮೋಜಿನ ಸಂಗತಿಯೆಂದರೆ ನಿಮ್ಮ ಘೋಷಣೆಗಳನ್ನು ಈ ಸಾಕಿಯರು ಮನ್ನಿಸಲೂ ಇಲ್ಲ. 'ಸಭ್ಯತೆ' ಎನ್ನುವ ಏರಿನಲ್ಲಿ ನಾವು ಬದುಕಿದರೆ, ಪ್ರಾಮಾಣಿಕತೆ ಎಂಬ ತೇರಿನಲ್ಲಿ ಕುಳಿತು ಸಮಾಜ ಸಂಸಾರ ಗಳ ಹುಸಿ ಹರಕೆಗಳ ಕೇಳಿ,ಇಣುಕಿ ನೋಡಿ ಸಾಗಿಹೋದವರು ಈ ಸಾಕಿಯರು." 
ಜಗವನ್ನೇ ತೊಟ್ಟಿಲಲ್ಲಿಟ್ಟು ತೂಗುವ ತಾಯಿಯಾಗಿ, ,ಮಾತೆಯಂತೆ ವಾತ್ಸಲ್ಯದ ನೆಲೆಯಾದ ಸಹೋದರಿಯಾಗಿ, ತಲೆಮಾರುಗಳಿಗೆಲ್ಲ ಬುದ್ಧಿ ಹೇಳಿ ಕತೆಯಾಗುವ ಅಜ್ಜಿಯಾಗಿ, ಕುಟುಂಬದ ಗೌರವವನ್ನು  ಕಣ್ಣಂಚಿನಲ್ಲಿಟ್ಟು ಕಾಪಾಡುವ   ಮಗಳಾಗಿ, ಮನವೆಂಬ ಕಾಣದ ಕಡಲಿನ ಭಾವದಲೆಗಳಿಗೆ ದಾರಿ ತೋರುವ  'ನವಿಲೂರ ಚೆಲುವೆ'ಯಾಗಿ ನಮ್ಮೊಂದಿಗೆ ಬದುಕಿನುದ್ದಕ್ಕೂ, ಕ್ಷಣ ಕ್ಷಣಕ್ಕೂ ನಮ್ಮನ್ನು ನೆರಳಿನಂತೆ ಹಿಂಬಾಲಿಸಿ ಬಾಳು ಬೆಳಗುವ ನಂದಾದೀಪವಾದ ಹೆಣ್ಣಿನ ಕುರಿತು ವಿಶಿಷ್ಟ  ಕೃತಿಯೊಂದು ರಾಗಂ ರವರಿಂದ ರಚನೆಯಾಗಿರುವುದು ಅಭಿನಂದನಾರ್ಹವಾಗಿದೆ.
" ನಾ ನಿನ್ನ ಕಂಡೆ, ನೀ ನನ್ನ ಕಂಡೆ, ಕಂಡದ್ದು ಯಾರ ಯಾವ
ನೀ ನನ್ನನುಂಡೆ, ನಾ ನಿನ್ನನುಂಡೆ,  ಉಳಿದದ್ದೆ ಆತ್ಮಭಾವ " ಎಂಬ ಅಂಬಿಕಾತನಯದತ್ತರ ಕವಿತೆಯ ಸಾಲುಗಳು  ಮಧುರಚೆನ್ನರು ಹಾಗೂ ಅಶಿಕ್ಷಿತ ಧರ್ಮಪತ್ನಿ ಬಸವ್ವ ಳೆಂಬ 'ಪುಣ್ಯವಂತಿ'ಯ ರ  ದಾಂಪತ್ಯಕ್ಕೆ  ಒಪ್ಪುವಂತಿವೆ. ತನ್ನ ಪತಿಯ ಒಡನಾಡಿಯಾಗಿದ್ದ ಮಧುರಚೆನ್ನರ ಒಲವಿನ ಧಾರೆಯಿದು-
"ನಲ್ಲೆ ವಾಸಂತಿ
ತಾ ಜೀವದ ಜೊತೆಗಾರ್ತಿ" .
ಸಿಂಪಿ ಲಿಂಗಣ್ಣ, ರೇವಪ್ಪ ಕಾಪ್ಸೆ  ಪಿ.ಧೂಲಾಸಾಹೇಬ,ಬೇಂದ್ರೆ ಮುಂತಾದ ಮಹನೀಯರಿಂದ ಜನ್ಮತಾಳಿದ ಹಲಸಂಗಿ ಗೆಳೆಯರ ಬಳಗದ ಮಾತೆಯಾಗಿ, ಬಡತನದ ಬೇಗೆಯಲ್ಲಿ ಬೆಂದು, ಮಧುರಚೆನ್ನರ ಸಂಸಾರದ ನೊಗಹೊತ್ತು  ಬದುಕಿನ ಬಂಡಿಯನ್ನು ಅಂಬಿಕೆಯಂತೆ ಸರಾಗವಾಗಿ ಮುನ್ನಡೆಸಿದವರು ಈ ಬಸವ್ವಳೆಂಬ ಮಧುರಚೆನ್ನರ ಆಧ್ಯಾತ್ಮಿಕ ಸಂಪತ್ತಿನ ಒಡತಿ . ಯಶಸ್ವಿ ಪುರುಷನ ಹಿಂದೆ ಮಹಿಳೆಯ ಕಾಣದ ಕೈಗಳಿರುತ್ತವೆ ಎಂಬುದು ಸತ್ಯವಾದರೂ ಆ ಕೈಗಳು ಯಶಸ್ಸಿನ ಪಕ್ಕದಲ್ಲಿ ಕಾಣುವುದು ವಿರಳಾತಿವಿರಳ. ಆ ಕಾಣದ ಕೈಗಳನ್ನು, ಬದುಕಿನ ಕಷ್ಟಗಳ ಬಂಡೆಗಲ್ಲುಗಳಿಂದಾಗಿ ತಮಗಾದ ಎಂದೂ ಮಾಯದ ಹುಣ್ಣುಗಳೊಂದಿಗೆ, ನಿರ್ದಯಿ ಜೀವನ ಹಾಕಿದ ಕಪ್ಪಿಟ್ಟ ಕಡು ಕೆಂಬಣ್ಣದ ಬರೆಗಳೊಂದಿಗೆ ಜಗತ್ತಿಗೆ  ಕಾಣುವಂತೆ ಮಾಡುವ ಕೃತಿ ಈ ಸಾಕಿಯರ ಕೈ ಸೋಕಿ...
"ಕುಣಿಯುತ್ತಾಳೆ ಆಕೆ 
ನನ್ನೆದೆಯ ಗೂಡಿನೊಳಗೆ
ನಸುನಗುತ್ತಾ ಹೆಜ್ಜೆ ಹಾಕಿ
ತಾನು ನನ್ನುಸಿರ
ಬಿಸಿಯಲ್ಲಿದ್ದೇನೆ ಎಂಬ
ಭ್ರಮೆಯಿಂದ ತಾಳ ಹಾಕಿ
ಗೊತ್ತಿಲ್ಲ ಅವಳಿಗೆ
ನನ್ನೊಲವಿನುಸಿರು
ಯಾರದೆಂದು ?
ಕುಣಿಯಲಿ ಮನ
ತಣಿಯಲಿ
ನನ್ನುಸಿರ ಸಿರಿಯಲಿ
ಬೆಳೆಯಲಿ
ಹೆಸರುಳಿಸುವ ಹಸಿರ
ಬಳ್ಳಿಯಂತೆ  ಮಲ್ಲಿಗೆಯ
ಮುಡಿಯಲಿ..."
ಎಂಬ ನನ್ನದೇ ಕವಿತೆಯ ಸಾಲುಗಳಲ್ಲಿನ ಆಕೆಯ ಉಸಿರು ಮತ್ತೊಬ್ಬರ ಸಂತಸದಲ್ಲಿದೆ. ಎಂಬ ಉದಾರ  ಹೆಬ್ಬಯಕೆ ಆಕೆಯದು. ಬದುಕು ದ.ರಾ. ಬೇಂದ್ರೆಯವರು ಹಾಡುವಂತೆ 
ಬದುಕು ಬೇವು ಬೆಲ್ಲಗಳ ಮಹಾಸಂಗಮ ವೆಂಬುದನ್ನು ರಾಗಂ ರವರ ಕೆಳಗಿನ ಸಾಲುಗಳು ನೆನಪಿಗೆ ತರುತ್ತವೆ.
" ನಿನ್ನ ಚಿತೆ ಸುಡುವಲ್ಲಿ
ನನ್ನ ಕನಸುಗಳಿಲ್ಲ
ಕಳೆದ ಬದುಕೆಲ್ಲವೂ
ಬೇವು ಬೆಲ್ಲ
ನಿನ್ನ ರಾತ್ರಿಯ ಎದೆಗೆ
ನನ್ನ ನೆನಪುಗಳಿಲ್ಲ
ಉಳಿದ ಉಸಿರೆಲ್ಲವೂ
ಉರಿದ ಹುಲ್ಲು "
ಪ್ರಾಣಸಖಿಯೇ ಇಲ್ಲವಾದಾಗ  ಬತ್ತಿಹೋಗುವ ನೆನಪುಗಳ  ಜೀವನವೆಷ್ಟು ಶೂನ್ಯ .ಉಸಿರು ಕೂಡ ಉರಿಯುವ ಹುಲ್ಲಾಗಿ ಕಾಡುವ ಬಗೆಯನ್ನು ಲೇಖಕರು ಮನೋಜ್ಞವಾಗಿ ಬಣ್ಣಿಸುತ್ತಾರೆ.ಕುವೆಂಪುರವರಿಗೂ ಕೂಡ ಈ ಸಾಕಿ
"ರವಿಯುದಯಕೆ, ಶಶಿಯುದಯಕೆ
ಹೂದಿಂಗಳುದಯಕೆ
ಕೃತಿಯ ಮಧುರ ಸಮುದಯಕೆ
ಹೇಮಲತೆಯೇ ಹೃದಯವಂತೆ!
ಕಲೆ, ಕೀರ್ತಿ ಸಿರಿಯೆಲ್ಲವೂ ಹೇಮಲತೆ ಇಲ್ಲದಿಲ್ಲ,
ಹೇಮಲತೆಯೇ ಎಲ್ಲ"
ಚೈತನ್ಯಶಕ್ತಿಯಾಗಿದ್ದಾಳೆ.
'ಕಸ್ತೂರಿ ಬಾ' ಎಂಬ ಮಮತೆಯ ಸುಗಂಧವಿರದೇ  ಇದ್ದರೆ ಗಾಂಧಿಯ ಬದುಕು ಅದೆಷ್ಟು ಶೂನ್ಯವಾಗಿರುತ್ತಿತ್ತು.ಅದೆಷ್ಟು ಬರಡಾಗಿರುತ್ತಿತ್ತು. ಪತಿಯ ಹೋರಾಟದ ಅಂತಃಶಕ್ತಿಯಾಗಿದ್ದ, ಜೀವನದ ಚೈತನ್ಯವಾಗಿದ್ದ  ಕಸ್ತೂರಿ ಬಾ ತೀರಿ ಹೋದಾಗ ಕೋಟ್ಯಾನುಕೋಟಿ ಭಾರತೀಯರ ಮಧ್ಯೆಯೂ ಅಕ್ಷರಶಃ  ಗಾಂಧೀಜಿ ಒಂಟಿಯಾಗಿದ್ದರು. 'ಬಾ' ಳನ್ನು ಬಿಟ್ಟು ಅನಾಥವಾಗಿದ್ದ ಗಾಂಧಿ ಮೇಲಿನ ಕಾವ್ಯದ ಸಾಲುಗಳಂತೆ ದುಃಖಿಸಿರಬೇಕು ಎಂಬುದನ್ನು ಮನೋಜ್ಞವಾಗಿ ನಿರೂಪಿಸುತ್ತಾರೆ. ಗದ್ಯದ ಲಯದ ಜೊತೆಗೆ ಪದ್ಯದ ನಾದ ಜೊತೆಯಾದರೆ ಆ ಸಾಹಿತ್ಯ ರಸದೌತಣವಾಗುವುದರಲ್ಲಿ ಸಂದೇಹವಿಲ್ಲ. ರಾಗಂರವರದು ಕಾವ್ಯಾತ್ಮಕ  ಗದ್ಯ ಶೈಲಿ.ಅವರ ಗದ್ಯ ಬರಹವನ್ನು ಲಯಕ್ಕೆ ತಕ್ಕಂತೆ ಪದ್ಯದ ಪಂಕ್ತಿಗಳನ್ನಾಗಿಯೂ ಪರಿವರ್ತಿಸಬಹುದಾದಷ್ಟು ಇವರ ಗದ್ಯ ಕಾವ್ಯಾತ್ಮಕ ಶೈಲಿಯದು.ಇಲ್ಲಿಯ ಕತೆಗಳೆಲ್ಲ ಬದುಕಿನ ನಿತ್ಯ ಸತ್ಯ ಘಟನೆಗಳಾಗಿರುವುದರಿಂದ ನಾಟಕೀಯತೆ ಒಂದಿನಿತೂ ಇಣುಕಿಲ್ಲ. ನಮ್ಮ ನೆರೆಹೊರೆಯಲ್ಲಿ ಬದುಕುತ್ತಿರುವ ಪಾತ್ರಗಳೇನೋ ಎನ್ನುವಷ್ಟರ ಮಟ್ಟಿಗೆ ಇಲ್ಲಿಯ ವ್ಯಕ್ತಿತ್ವಗಳು ಆಪ್ಯಾಯಮಾನವಾಗುತ್ತವೆ.ತಮ್ಮ ಬದುಕನ್ನು ತೆರೆದ ಪುಸ್ತಕದಂತೆ ಬಿಚ್ಚಿಡುತ್ತವೆ. ಗಟ್ಟಿ  ಕತೆಗಾರ ರಾಗಂ ರವರು ಒಬ್ಬ ಸಂವೇದನಾಶೀಲ ನಿರೂಪಕರೆಂಬುದಕ್ಕೆ ಈ ಕತೆಗಳೆ ಜೀವಂತ ಸಾಕ್ಷಿಯಾಗಿವೆ .ಕಥೆಗಳನ್ನು ತಾವೇ ಸ್ವತಃ ನಮ್ಮೆದುರಿಗೆ ನಿಂತು ನಿರೂಪಿಸುತ್ತಿದ್ದಾರೆ ಏನೋ ಎಂಬ ಭಾವ ನಮ್ಮನ್ನಾವರಿಸುವಂತೆ ಭಾಷೆ ಸುಲಲಿತವಾಗಿದೆ; ಸಮೃದ್ಧವಾಗಿದೆ. ಅವಕಾಶ ಸಿಕ್ಕಾಗ ಪದಗಳೆ. ನಾಟ್ಯವಾಡುತ್ತವೆ.ಶಬ್ದಲೋಕ ಎಷ್ಟು ವಿಸ್ಮಯ ಎಂಬುದಕ್ಕೆ ಈ ಕತೆಗಳ ಭಾವಲಹರಿಯನ್ನು ಅಧ್ಯಯನ ಮಾಡಲೇಬೇಕು.


Sunday, 11 November 2018

ಹೆಗಲ ಭಾರ

ಹೆಗಲ ಭಾರ
ನಾನು ಎಂಬುದೊಂದು
ಹೊರಲಾರದ ಮಣಭಾರ
ಜಾಗ ಸಿಕ್ಕಲ್ಲಿ ಇಣುಕುವುದು
ಕೈಚಾಚಿ ಜನಸಂದಣಿಗಳ ಮಧ್ಯೆ

ಜಗತ್ತನ್ನೇ ಗೆಲ್ಲಬೇಕೆಂದರೂ
ಹೆಣವಾದ ಭಾರದಿಂದ
ಕುಗ್ಗುತಿದೆ ಈ ಹೆಗಲು
ಹಗುರವಾದೀತು ಎಂದು ಈ ಹೊರೆ
ಕಾಯುತಿರುವೆ ನಿಟ್ಟುಸಿರಿಗಾಗಿ

ಬಿಟ್ಟು ತೊಲಗೆಂದರೂ
ವಿಕ್ರಮನ ಈ ಭೂತ
ರಹಸ್ಯಗಳ ಪ್ರಶ್ನೆ ಕೇಳಿ ಕೇಳಿ
ನೆಪ ಹೊತ್ತು ಜೋತು ಬಿದ್ದಿದೆ
ಬೆಂಬಿಡದೆ ಬೆನ್ನೇರಿದೆ

ಸಾಧನೆಗೆ ಶರಾ ಬರೆದು
ಪತನಕೆ ಬೆನ್ನು ತೋರಿ
ಬೀಗುತಲೆ ಕಾಡುತಿದೆ ಗುಳ್ಳೆ ನರಿ
ದಿಗಂತದಿಂದ ಎದ್ದು ಬಂದು
ಮಧ್ಯೆ ನಿಲ್ಲುತಿದೆ ಹೇಳದೆ ಈ ಪರಿ
ಈ ಜಗಕೆ ನಾ ಕಾರಣ
ಈ ಸುಖಕೆ ನಾ ಧಾರಣ
ಗೆಲುವಿಗಂತೂ ನಾ ಭೂಷಣ
ಎಂದಂದೇ ಹಪಹಪಿಸಿ
ನಂಬಿಸಿ ಹಾತೊರೆದಿದೆ
ವ್ಯಕ್ತಿತ್ವದ ಬಲಿಗಾಗಿ

ಸ್ವರ್ಗದ ಮಡಿಲಿಗೆ
ನಾ ಹೋದರೆ ಹೋದೇನು
ಎಂದರವರು ದಾಸರು
ಭಯಂಕರದ ಈ ಭವದಿಂದ
ನಾ ಹೇಗೆ ಹೋಗುವುದು
ಅರಿಯುತಿಲ್ಲ ಆಳುತಿಹುದು

ಇಳಿಸಿದರೂ ಭಾರವದು
ಕಾಲಿಗಾದರೂ ತೊಡರುವುದು
ಬಿಟ್ಟನೆಂದರೂ ಬಿಡದೀ ಮಾಯೆ
ಅಷ್ಟಪದಿಯ ಬಾಹುಗಳ
ಬಿಡದ ಗಟ್ಟಿ ಹಿಡಿತವದು


Thursday, 1 November 2018

ಕನ್ನಡದ "ಆಮುಕ್ತಮಾಲ್ಯದ"- ಡಾ.ನಿರುಪಮಾ(ಮುಂದುವರೆದ ಭಾಗ)
ಶ್ರೀಕೃಷ್ಣದೇವರಾಯನು ಚೆದುರಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಬಿಡಿ ಪುಷ್ಪಗಳನ್ನೆಲ್ಲ ಆಯ್ದು ತಂದು ಪರಿಮಳಭರಿತ ಹೊಸ ಹೂ ಮಾಲೆಯನ್ನು ಕಟ್ಟಿದಂತಿದೆ ಈ ಮಹಾಕಾವ್ಯ.ಈ ಕಾವ್ಯವನ್ನು ಓದುತ್ತಿದ್ದರೆ ಹಂಪೆಯ ಮೈ ತುಂಬ ತುಂಡರಿಸಿಕೊಂಡು ಸೋತುಬಿದ್ದ  ಶಿಲ್ಪ ಗಳೆಲ್ಲಾ ಜೀವಚೈತನ್ಯ ಪಡೆದು ಸುಂದರ ಕಲಾಕನ್ನಿಕೆಯರಾಗಿ ಕಣ್ಣಮುಂದಿನ ರಂಗದಲ್ಲಿ ನೆನಪುಗಳ ಗೆಜ್ಜೆ ಕಟ್ಟಿಕೊಂಡು ಕಾವ್ಯದ ತಾಳಗತಿಗೆ ತಕ್ಕಂತೆ  ಕುಣಿಯುತ್ತಿರುವಂತೆ ಭಾಸವಾಗುತ್ತದೆ. ಕುಮಾರವ್ಯಾಸ ಭಾರತ ಕಣ್ಣಲಿ ಕುಣಿದಂತೆ ಮಧುರಾಪುರದ ನೈಜ ಚಿತ್ರಣ, ಪುಷ್ಪಲಾವಿಕೆಯರ ವ್ಯಾಪಾರದ ಸೌಂದರ್ಯ ಲಾಲಿತ್ಯ, ವೇಶ್ಯೆಯರ ಅಲಂಕಾರ ಮಜ್ಜನ, ಪ್ರಖರ ಸೂರ್ಯನ ಬಿಸಿಲು ಹೊದ್ದು ಪ್ರಕೃತಿಯ ಅಗ್ನಿಕುಂಡವೇ ಆದ ಗ್ರೀಷ್ಮ ಋತುವಿನ ವರ್ಣನೆ, ಯಮುನಾಚಾರ್ಯನ ಉಪದೇಶ ಗಳು ನಮ್ಮ ಮನೋರಂಗದ ಮೇಲೆ ಒಂದಾದ ಮೇಲೊಂದರಂತೆ ಹೆಣೆದುಕೊಂಡು ಸರಣಿಯ ಸುಂದರ ದೃಶ್ಯಗಳಾಗಿ  ಮೈದಳೆಯುತ್ತವೆ.
ಭಾವತೀವ್ರತೆಯಿಂದ ಪರಕಾಯ ಪ್ರವೇಶವನ್ನುಂಟು ಮಾಡುವ ರೀತಿಯಲ್ಲಿ , ಸ್ವತಃ ರಾಯನೇ ಖುದ್ದಾಗಿ ಸಾಮಾನ್ಯ ಜನಪದ ಸಂಸಾರೊಂದಿಗರ ಮನೆ ಮನೆಯಲ್ಲಿ ವಾಸವಿದ್ದು ಕಂಡಂತೆ ಅವರ ಬದುಕಿನ ಪ್ರತಿ ಕ್ಷಣಗಳನ್ನು ತನ್ನ ಅಂತರ್ ಚಕ್ಷು ಎಂಬ ಸೂಕ್ಷ್ಮ ದರ್ಶಕ ಯಂತ್ರದಿಂದ ಬಹು ಸೂಕ್ಷ್ಮವಾಗಿ ಹಿಗ್ಗಲಿಸಿ ಪರಿಶೀಲಿಸಿದ್ದಾನೆ; ಮನೋಜ್ಞವಾಗಿ ದಾಖಲಿಸಿದ್ದಾನೆ.ಇಂದು ಕೆಂಬಣ್ಣದ  ಧೂಳು  ತುಂಬಿಕೊಂಡು ತನ್ನ ಕಾಲಗರ್ಭದಲ್ಲಿ ಬಾಯಿಬಿಟ್ಟು ಹೇಳಲಾಗದ ಅದೆಷ್ಟೋ ನಿಗೂಢ ಸತ್ಯಗಳನ್ನು ಬಚ್ಚಿಟ್ಟುಕೊಂಡು ನರಳುತ್ತಿದ್ದರೂ  ನಳನಳಿಸುತ್ತಲೇ ತೋರಿಕೆಯ    ಹಸನ್ಮುಖದಿಂದ ತನ್ನೆಡೆಗೆ ಬರುವವರನ್ನೆಲ್ಲಾ ಸ್ವಾಗತಿಸುತ್ತಿರುವ  ಪಾಳು ಬಿದ್ದ  ಹಂಪೆಯು ಈ ಕೃತಿಯ ಒಳಹೊಕ್ಕಾಗ  ತನ್ನ ಕಪ್ಪು ಬಿಳುಪನ್ನು ಕಳಚಿಕೊಂಡು ಸಮೃದ್ಧತೆಯ ಹಸಿರುಸಿರು ತುಂಬಿಕೊಂಡು,ಕಣ್ಣು ಕೋರೈಸುವ ಹೊಂಬಣ್ಣದಿಂದ ಅಲಂಕರಿಸಿಕೊಂಡು, ಪ್ರಜ್ವಲಿಸುವ ಮುತ್ತು ರತ್ನ ಹವಳಗಳ ಹೊಂಬೆಳಕಿನ ಬೀದಿಗಳನ್ನು ಹೊಂದಿ ದೇದೀಪ್ಯಮಾನವಾಗಿ ವಿಜೃಂಭಿಸುವ  ಸಾಮ್ರಾಜ್ಯವಾಗಿ ಪುನರುಜ್ಜೀವ ಪಡೆಯುತ್ತದೆ. 

                ಮಧುರಾಪುರ ನಗರ ವರ್ಣನೆಯ ಸಂದರ್ಭವೊಂದು ಹೀಗಿದೆ"ಮಧುರಾಪುರ ಭೋಗ ಭಾಗ್ಯಗಳಿಂದ ಕೂಡಿದೆ.ಆ ನಗರದ ರಾಜರಲ್ಲದೇ ಸಾಮಾನ್ಯರು ಸಹ ಮರಕತ ಮಾಣಿಕ್ಯದ ಆಭರಣಗಳನ್ನು ಧರಿಸುತ್ತಾರೆ......ಅವರ ಮನೆಗಳ ದ್ವಾರಗಳು, ಹೊಸ್ತಿಲುಗಳು, ಮಕರಸ್ತಂಭಗಳು ಬೆಳ್ಳಿ ಬಂಗಾರದಿಂದ ಅಮೂಲ್ಯ ರತ್ನಗಳ ಅಲಂಕಾರದಿಂದ ಕುಬೇರನ ಭವನವನ್ನು ನೆನಪಿಗೆ ತರುವಂತಿದೆ. ಅತಿ ಎತ್ತರದ ಕೋಟೆ ಬುರುಜುಗಳು ಆಗಸದಲ್ಲಿನ ಸಂಪಿಗೆಯ ಹೂವಿನ ಮಾಲೆಯಂತೆ ಕಂಗೊಳಿಸುತ್ತಿವೆ! ಆ ಕೋಟೆಯ ಸುತ್ತಲೂ ತುಂಬ ಆಳವಾದ ಕಂದಕಗಳು ನೀರಿನಿಂದ ತುಂಬಿ ಮಂದಾಕಿನಿಯನ್ನು ನೆನಪಿಗೆ ತರುತ್ತದೆ. ಪೌರಕಾಂತೆಯರ ಸುಕುಮಾರ ದೇಹದ ಮೇಲೆ ಗಂಧ, ಕಸ್ತೂರಿ,ಕುಂಕುಮ,ಅಗರುಚಂದನಗಳನ್ನು ಲೇಪಿಸುವಾಗ ಇವುಗಳಲ್ಲಿ ಬೆರೆತಿದ್ದರಿಂದ ಆ ಕಂದಕಕ್ಕೆ 'ಭೋಗವತಿ' ಎಂದು ಹೆಸರು ಬಂತು....." ಇಲ್ಲಿ ಮಧುರಾಪುರ ದ ಹೆಸರಿನಲ್ಲಿ ಕೃಷ್ಣದೇವರಾಯ ಬಣ್ಣಿಸಿರುವುದೆಲ್ಲ ತನ್ನ  ಸಾಮ್ರಾಜ್ಯದ ಭೋಗವಿಲಾಸವನ್ನೇ ಎಂದೆನಿಸುತ್ತದೆ. ಈ ಕಾವ್ಯದ ಆರಂಭದ ಭಾಗವಂತೂ ಇದೊಂದು ಶೃಂಗಾರ ಕಾವ್ಯವೆನ್ನುವಷ್ಟರ ಮಟ್ಟಿಗೆ ರಸಮಯವಾಗಿದೆ.
                   ಇಲ್ಲಿ ರಾಯನೆಂಬ ರಸಿಕನಾಡಿದ ಮಾತುಗಳು ಶಶಿಯುದಿಸಿ ಬಂದಂತೆ ಸಹೃದಯರ ಮನದ ತುಂಬೆಲ್ಲಾ ಹಾಲುಬೆಳದಿಂಗಳನ್ನು ಚೆಲ್ಲಿ ಮುದ ನೀಡುತ್ತವೆ.ಇಲ್ಲಿ ಬರುವ ವೇಶ್ಯೆಯರು,ವಿಲ್ಲಿಪುತ್ತೂರಿನ ಸ್ತ್ರೀಯರು, ಲತಾಂಗಿಯರು,ಪುರದಂಗನೆಯರ ಒನಪು- ಒಯ್ಯಾರ,ಹಾಸ್ಯ- ಲಾಸ್ಯಗಳ ಚಿತ್ರಣ  ಶೃಂಗಾರ ರಸದ ನವನವೀನ ಕಲಾಲೋಕಕ್ಕೆ ಓದುಗರನ್ನು ಕರೆದೊಯ್ಯುತ್ತವೆ.ಇಲ್ಲಿ ಶೃಂಗಾರ ರಸ ಮೈಯ್ಯುಕ್ಕಿ ಪ್ರವಾಹೋಪಾದಿಯಲ್ಲಿ ಹರಿಯುತ್ತದೆ. 
"ಆ ಲತಾಂಗಿಯರು ತಮ್ಮ ಮಹಡಿಯ ಮೇಲೆ ನಿಂತು ನೀಳ ಕೇಶ ರಾಶಿಯನ್ನು ಬಿಚ್ಚಿ ಸಿಕ್ಕು ಬಿಡಿಸುತ್ತಿದ್ದಾಗ, ಹೂಗಳನ್ನು ಕುಯ್ಯುತ್ತಿದ್ದಾಗ, ವೀಣೆಯನ್ನು ನುಡಿಸುವಾಗ ಅವರ ಬೆರಳುಗಳು ಒಂದೇ ರೀತಿಯಲ್ಲಿ, ಲಲಿತಸುಕುಮಾರವಾಗಿ, ಲಯಬದ್ಧವಾಗಿ ನೃತ್ಯ ಮಾಡುತ್ತಿರುವಂತೆ ಕಾಣುತ್ತವೆ.ಒಮ್ಮೊಮ್ಮೆ ಆ ಬೆರಳುಗಳನ್ನೇ ಹೂಗಳೆಂದು ಭ್ರಮಿಸಿ ದುಂಬಿಗಳು ಮೋಹಿಸಿ ಎರಗುತ್ತವೆ" ಈ ಕಾವ್ಯದಲ್ಲಿಉಪಮೆಯು ರಾಯನನ್ನು  ಲತಾಂಗಿನಿಯಂತೆ ಬಳಿ ಕರೆದು ಮೋಹಿಸಿದೆ .ಉತ್ಪ್ರೇಕ್ಷೆಯು ರಾಣಿಯಂತೆ ಪಕ್ಕದಲ್ಲಿದ್ದು ಕಾಂತಾಸಂಮ್ಮಿತವನ್ನು ಬೋಧಿಸಲು ನೆರವಾಗಿದೆ. 
         ಮಧುರಾಪುರದ ವನಿತೆಯರು ಮುಡಿದುಕೊಂಡು ಮಹಡಿಯಿಂದ ಕೆಳಗೆಸೆದ ಪುಷ್ಪಗಳು ದಾರಿಹೋಕರಿಗೆ ಆಗಸದಿಂದುದುರುವ ಮುತ್ತುಗಳಾಗಿ ರೂಪು ಪಡೆಯುತ್ತವೆ.ಮುತ್ತುಗಳಾಗಿ ಎಂಬಲ್ಲಿ ಅಲಂಕಾರಗಳು ರಾಯನ ಕೈಯ್ಯಲ್ಲಿ ಪಳಗಿದ ರೀತಿಯನ್ನು ಗಮನಿಸಬೇಕು. ಬಹುಶಃ ಶ್ರೀಕೃಷ್ಣದೇವರಾಯ ತನ್ನ ರಾಜ್ಯದ ಬೀದಿಗಳಲ್ಲಿ ಕಂಡ ಜನಜೀವನದ ಚೆಹರೆಗಳನ್ನೇ ತನ್ನ ಕಾವ್ಯದ ಘಟನೆಗಳನ್ನಾಗಿ ಬಹು ಸುಂದರವಾಗಿ ಬಣ್ಣಿಸಿದ್ದಾನೆ.ತೆಲುಗು ಸಾಹಿತ್ಯದ ಮಹತ್ವದ "ಪ್ರಬಂಧ ಕಾವ್ಯ"ವಾಗಿ ಹೆಸರಾಗಿರುವ ಈ ಕೃತಿಯಲ್ಲಿ  ಪ್ರತಿಯೊಂದು ಪಾತ್ರವೂ ಸಹಜತೆಯಿಂದ ಸರಳತೆಯಿಂದ ಕೂಡಿದೆ. ಇವನಂತೆ ಜನಪದರ ಜೀವನವನ್ನು ಇಷ್ಟೊಂದು ಹತ್ತಿರದಿಂದ ಪರಿಶೀಲಿಸಿ ಉಲ್ಲೇಖಿಸಿದ  ಸಾಮ್ರಾಟ ಮತ್ತೊಬ್ಬನಿಲ್ಲವೆಂದೇ ಹೇಳಬಹುದು. ಬೀದಿಯಲ್ಲಿ ಸಿಕ್ಕ ಶ್ರೀಸಾಮಾನ್ಯ ಹೆಣ್ಣೂ ಕೂಡ ಶ್ರೀಕೃಷ್ಣದೇವರಾಯನ ಲೇಖನಿಯ ಕುಂಚದಲ್ಲಿ ವಿಷ್ಣುವನ್ನೇ ಮಧುವಣಿಗನನ್ನಾಗಿ ಪಡೆದು ಪರಮಶ್ರೇಷ್ಠ ಸ್ಥಾನವನ್ನು ಅಲಂಕರಿಸುತ್ತಾಳೆ. ಗ್ರೀಷ್ಮ,ವಸಂತ,ವರ್ಷಾ ಋತುಗಳ ವರ್ಣನೆಯಲ್ಲಿ  ಪ್ರಕೃತಿಯೂ ಒಂದು ಮಹತ್ವದ ಪಾತ್ರವಾಗಿ ದಾಖಲಾಗಿದೆ.ಮಳೆಗಾಲದ ನಂತರ ಬರುವ 'ಶರದೃತು ಎಂಬ ಯುವತಿಗೆ  ಸೂರ್ಯ ಚಂದ್ರರಿಬ್ಬರೂ ಕಾಂತಿ ಮತ್ತು ಬಣ್ಣಗಳನ್ನು ತೊಡಿಸಿದಂತಿದೆ.
" ಕಬ್ಬಿನ ಜಲ್ಲೆಗಳು ಅತಿ ಎತ್ತರಕ್ಕೆ ಬೆಳೆದು ತೆನೆಗಳಿಂದ ಭಾರವಾಗಿ ಬಿಲ್ಲಿನಂತೆ ಬಗ್ಗುತ್ತಾ ಸಿಹಿಯಾದ ರಸದೊಂದಿಗೆ ತುಂಬಿದೆ.ಈ ಸಿಹಿ ಗಾಳಿ ಪ್ರತಿಯೊಂದು ಹೂವಿಗೂ ಸೋಕಿಸುತ್ತಾ ಪದ್ಮಗಳೊಡನೆ ಚೆಲ್ಲಾಟವಾಡುತ್ತಿದೆ.ಈ ಗಾಳಿಗೆ ಮಾರುಹೋಗಿ ದುಂಬಿಗಳ ಗುಂಪು ಝೇಂಕಾರ ಗೀತೆಯನ್ನಾಲಾಪಿಸುತ್ತಿದೆ." ಹೀಗೆ ಪ್ರಕೃತಿ ವರ್ಣನೆಯು ಅವಕಾಶ ದೊರೆತಾಗೆಲ್ಲ ಮನೋಹರವಾಗಿ  ಮೈದುಂಬಿ ಬಂದಿದೆ. ಮಧುರಾಪುರದ ವನಿತೆಯರೊಂದಿಗೆ ಋತುಗಳೂ ಕೂಡ ಹೆಣ್ಣಾಗಿ ಈ ಕೃತಿಯನ್ನು ಶೃಂಗರಿಸಿವೆ. ವಿಷ್ಣುಚಿತ್ತನ ಮೂಲಕ ವೈಷ್ಣವ ಮತ ಪ್ರತಿಷ್ಠಾಪನೆಯ ಈ ಕಾವ್ಯದ ಬೀಜವಾಗಿದ್ದರೂ ,ಅತ್ಯುತ್ತಮ ಜನಾನುರಾಗಿಯಾಗಿದ್ದ ರಾಯನು ಈ ಕಾವ್ಯದ ಮುಖೇನ ತನ್ನ ಸಾಮ್ರಾಜ್ಯದ  ಸಮಕಾಲೀನ ರಾಜನೀತಿ,ಧರ್ಮ, ಜನಜೀವನ,ಕಲೆ,ಸಾಹಿತ್ಯ ಸಂಸ್ಕೃತಿ,ಜ್ಞಾನ, ವೈರಾಗ್ಯ, ಸಂಪ್ರದಾಯಗಳನ್ನು  ಆ  ಬೀಜದ ಸುತ್ತಲೂ ಆವರಿಸಿರುವ ಹಣ್ಣಿನ ತಿರುಳಿನಂತೆ ಲೇಪಿಸಿ ರಸವತ್ತಾದ ಪಾಕವನ್ನಾಗಿಸಿದ್ದಾನೆ.ಇದೊಂದು ಲೌಕಿಕದಿಂದೊಡಗೂಡಿದ ಅಲೌಕಿಕ ಕಾವ್ಯ.
ಅಲ್ಲಸಾನಿ ಪೆದ್ದನ, ನಂದಿ ತಿಮ್ಮಣ್ಣ, ಧೂರ್ಜಟ ,ಅಯ್ಯೆಲರಾಜ ರಾಭದ್ರ ಕವಿ, ಮಲ್ಲನ, ತೆನಾಲಿ ರಾಮಕೃಷ್ಣ, ಪಿಂಗಳಸೂರನ,ರಾಮರಾಜಭೂಷಣ ರಂತಹ ಅಷ್ಟದಿಗ್ಗಜರಿಗೆ ಆಶ್ರಯವನ್ನಿತ್ತು ಪೋಷಿಸಿ ನಮ್ಮ ನಾಡಿನ ಸಾಹಿತ್ಯ,ಕಲೆ, ಸಂಸ್ಕೃತಿಯ ಹಿರಿಮೆಯನ್ನು ಉತ್ತುಂಗ ಶಿಖರಕ್ಕೇರಿಸಿದ ಸುಪ್ರಭು ಶ್ರೀಕೃಷ್ಣದೇವರಾಯ.ಡಾ.ನಿರುಪಮಾ ರವರು ತೆಲುಗಿನ ಈ "ಆಮುಕ್ತಮಾಲ್ಯದ" ಕಾವ್ಯವನ್ನು  ಒಪ್ಪವಿಟ್ಟು ಕನ್ನಡದ ಅಚ್ಚಿನಲ್ಲಿ ಸುಂದರ ಪುತ್ಥಳಿಯನ್ನಾಗಿ ಎರಕ ಹೊಯ್ದಿದ್ದಾರೆ; ಕನ್ನಡ ದೇವಿಯ ಮುಡಿ
ಯನ್ನು ಎಂದೂ ಬಾಡದ ಈ ಕಾವ್ಯ ಪುಷ್ಪ 'ಮಾಲ್ಯ'ದಿಂದ ಅಲಂಕರಿಸಿ ಮತ್ತಷ್ಟು  ಶೋಭಿಸುವಂತೆ ಮಾಡಿದ್ದಾರೆ.





ಚಹಾ ಮತ್ತು ನಾನು

 ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...