Total Pageviews

Monday, 30 December 2019

ಪ್ರೇಮದೀಕ್ಷೆ


ತಾಜಮಹಲಿನೊಳಗಿನ ಪ್ರೇಮ

ಸುಗಂಧ ಹರಡಿ ಕರೆದು ತಬ್ಬುತಿದೆಕೊಸರಿ ಬಿಡಿಸಿಕೊಂಡಷ್ಟೂ ಬಿಗಿದಪ್ಪಿ ಹಬ್ಬುತಿದೆ


ಮೈಸವರಿ ಹೃದಯದೊಳಗಿಳಿದುಸಂತೈಸಿ ಅಮಲು ಹರಿಸಿಬತ್ತಿಹೋದ ಬೆಚ್ಚಗಿನ ಭಾವಬಿಂದು ಬಂಧುಗಳಹೆಕ್ಕಿ ಹೆಕ್ಕಿ ತೆಗೆಯುತಿದೆ


ಭಾಷೆ ಕಲಿಸಿ, ಮೌನ ನಿಲಿಸಿಧ್ಯಾನದೊಳಗೆ ಮೆರೆದುಬಯಕೆಗಳಿಗೆ ಸ್ಪೂರ್ತಿ ತುಂಬಿಪ್ರೇಮಮೂರ್ತಿಯ ಕಡೆದುಇನ್ನು ಮಹಲು ತನ್ನದೆಂದುಬೀಗುತಿದೆ


ಅಮೃತಶಿಲೆಯ ಬಿಳುಪು ಅಲ್ಲಿಪ್ರೇಮ ನಿತ್ಯ ನಲಿವ ಹೊಳಪುಬಲೆ ಬೀಸಿದಂತೆ ಸೆಳೆದು ಸಮಾಧಿಯಾದ ನೆನಪು ತೆಗೆದುಘಮಲು ಹರಿಸಿ ಉಸಿರುತಿದೆ


ನಿರ್ಮಲತೆಯ ಗಂಧ ತೀಡಿತಂಗಾಳಿಯ ಹೆಜ್ಜೆ ಬಳಸಿಕಲಾದೇವಿಯ ನಾಟ್ಯವಿದೆಂದುಶಹಜಾನನ ಪ್ರೇಮದೆದೆಯ ತೋರಿಆರ್ದ್ರ ಭಾವ ಹಣಿಸುತಿದೆ


ಎದೆಯೊಳಗೆ ಇಳಿದ ಮಹಲುನೂರ್ ಳಂತೆ ಆಳಿ ಒಡಲುಹಂಬಲದ ದಾರಿ ತೋರಿಪ್ರೀತಿ ಅಮೃತತ್ವ ಉಣಿಸಿಹೊರಗೆದ್ದು ಕುಣಿಯತಿದೆ


ಒಳಗೆ ಪಿಸುಮಾತುಗಳ ಸದ್ದುಜಹಾನರ ಸಲ್ಲಾಪದ ಮುದ್ದುಸಮಾಧಿಯ ಮೇಲೆ ಚಾಚಿಕೊಂಡ ಗುಲಾಬಿಯೆಸಳುಗಳ ಮೋಹಜಾಲಆವರಿಸಿ ಎಡೆಬಿಡದೆ ಅನುರಣಿಸಿಮತ್ತೆ ಮತ್ತೆ ಸೆಳೆಯುತಿದೆ


ನಿಜದೊಲುಮೆ ಗೂಡು ತಮ್ಮದೆಂದುಪ್ರೇಮದ ಮಹಾ ರೂಪಕವೆಂದುಕಂಬಗಳ ಮೇಲೆ ಮೈಚಾಚಿದ ಕುಸುರಿ ಚಿತ್ತಾರದ ವ್ಯೂಹವೂ ಬಂಧಿಸಿ ಕರೆದೊಯ್ಯುತಿದೆ


ಉದ್ಯಾನವನದ ಹುಲ್ಲುಮೊರಡಿಕೈಬೀಸಿ ಬಾಚಿ ಕರೆದುಚಂದಿರನ  ತಂಬೆಳದಿಂಗಳ ಮಜ್ಜನದ ನರುಗಂಪನೆರೆದುಪ್ರೇಮ‌ದೀಕ್ಷೆ ನೀಡುತಿದೆ

Wednesday, 4 December 2019

ವಿಜ್ಞಾನದ ಹಬ್ಬ
ಬಂದಿದೆ ಬಂದಿದೆ ವಿಜ್ಞಾನದ ಹಬ್ಬ
ನಮಗೆಂದೇ ತಂದಿದೆ ಬೆಳಕಿನ ಹಬ್ಬ
ಏಳು ಬಣ್ಣಗಳ ತಿಳಿಯುವ ಹಬ್ಬ
ಹಲವು ವಿಷಯಗಳ ಕಲಿಯುವ ಹಬ್ಬ

ಪರಿಸರ ಗಣಿತ ಸಮಾಜದ ಹಬ್ಬ
ಹಾಡು ನಾಟಕ ಕುಣಿಯುವ ಹಬ್ಬ
ಮಾಡುತ ನಲಿಯುತ ಕಲಿಯುವ ಹಬ್ಬ
ಹರ್ಷದಿ ಆಡಿ ತಿಳಿಯುವ ಹಬ್ಬ

ಬದುಕಿನ ಪಾಠವ ಕಲಿಸುವ ಹಬ್ಬ
ಜ್ಞಾನದ ದೀವಿಗೆ ಹಿಡಿಯುವ ಹಬ್ಬ
ಚಟುವಟಿಕೆ ಪ್ರಯೋಗ ದರ್ಶನ ಹಬ್ಬ
ನೆಚ್ಚಿನ ಕೌಶಲ ಗಳಿಸುವ ಹಬ್ಬ

ನಾವ್ ಇಂದೇ ಜ್ಞಾನಿಗಳಾಗುವ ಹಬ್ಬ
ಗೆಳೆಯರೊಂದಿಗೆ ಕಲಿಯುವ  ಹಬ್ಬ
ವಿಶ್ಲೇಷಣೆ, ತರ್ಕ, ಕಾರಣ  ಹಬ್ಬ
ಪರಿಸರವನ್ನು ಅರಿಯುವ ಹಬ್ಬ

ತಿರುಗುವ ಭೂಮಿಯ ಹಿಡಿಯುವ ಹಬ್ಬ
ನ್ಯೂಟನ್ ಬೋಸ್ ನೆನಪಿನ ಹಬ್ಬ
ಕೂಡಿ ಕಳೆದು ಭಾಗಿಸುವ ಹಬ್ಬ
ಸಂಧಿ ವಚನ ವ್ಯಾಕರಣದ ಹಬ್ಬ

ರೈಮ್ಸ ಗೇಮ್ಸ ಟಿ ಪಿ ಆರ್ ಹಬ್ಬ
ಭೂಗೋಳವ ಸುತ್ತಿ ಬರೆಯುವ ಹಬ್ಬ
ಗೀತ ಸಂಗೀತ ಒಗಟಿನ ಹಬ್ಬ
ನಾಟಕ ನಾಟ್ಯವನಾಡುವ ಹಬ್ಬ

ನಾವೆಲ್ಲರೂ ಹಕ್ಕಿಗಳಾಗುವ ಹಬ್ಬ
ಹಾರಿ ಚಂದಿರ ಹಿಡಿಯುವ ಹಬ್ಬ
ಮರ ಗಿಡಗಳು ನಾವು ಆಗುವ ಹಬ್ಬ
ಉಸಿರಿನ ಹಸಿರು ತುಂಬುವ ಹಬ್ಬ

ನಮ್ಮೊಡನೆ ತಾರೆಗಳಿಳಿಯುವ ಹಬ್ಬ
ಸೌರಮಂಡಲಕೆ ನೆಗೆಯುವ ಹಬ್ಬ
ಬುಧ ಗುರು ಶುಕ್ರವ ಮುಟ್ಟುವ ಹಬ್ಬ
ಶನಿಯ ಉಂಗುರ ಧರಿಸುವ ಹಬ್ಬ

ಹುಣಸೆ ಬೀಜ ಗೋಲಿಗಳ ಹಬ್ಬ
ಎಣಿಸಿ ಲೆಕ್ಕವ ಮಾಡುವ ಹಬ್ಬ
ಗುಣಿಸಿ ಸಂತಸ ಹಂಚುವ ಹಬ್ಬ
ಭಾಗಿಸಿ ಕಷ್ಟವ ಕಳೆಯುವ ಹಬ್ಬ

ಬಣ್ಣದ ಚಿತ್ರವ ಬಿಡಿಸುವ ಹಬ್ಬ
ಬರಹದ ಕಲೆಯ ಅರಳಿಸೊ ಹಬ್ಬ
ರೇಖೆಯ ಮೇಲೆ ಪಯಣದ ಹಬ್ಬ
ಚಿತ್ತಾರದ ಮಾಯಾಲೋಕದ ಹಬ್ಬ

ಮೈಟೋಕಾಂಡ್ರಿಯ ಮೀರಿಸೋ ಹಬ್ಬ
ಹೃದಯದ ಮಾತು ಕೇಳುವ ಹಬ್ಬ
ಮೆದುಳಿನ ಚಿಂತನೆ ಅರಿಯುವ ಹಬ್ಬ
ಕರುಳಿನ ಕೂಗು ಆಲಿಸೋ ಹಬ್ಬ

ಭೂಪಟ ನಕಾಶೆ ರಚಿಸುವ ಹಬ್ಬ
ಏಳು ಖಂಡಗಳ ಜಿಗಿಯುವ ಹಬ್ಬ
ಸಾಗರದೊಳಗೆ ಮುಳುಗುವ ಹಬ್ಬ
ಜಲಚರಗಳೊಂದಿಗೆ ಆಡುವ ಹಬ್ಬ

ಜೀವಿಯ ನಿಜ ಜಾತಿ ತಿಳಿಯುವ ಹಬ್ಬ
ತಾರತಮ್ಯವ ತೊಲಗಿಸೋ ಹಬ್ಬ
ಕಲಿಕೆಯ ಅಂಬರವೇರುವ ಹಬ್ಬ
ಪಂಚತಂತ್ರಗಳ ಬಳಸುವ ಹಬ್ಬ

ಜೀವನ ಕಲೆಯ ತೋರಿಸೊ ಹಬ್ಬ
ಅಜ್ಞಾನದ ಬಲೆಯ ಬಿಡಿಸುವ ಹಬ್ಬ
ಪ್ರೀತಿ ಸಂತಸದಿ ಕುಣಿಯುವ ಹಬ್ಬ
ಜ್ಞಾನಸಾಗರದಿ ಈಜುವ ಹಬ್ಬ

ನೆಲ ಜಲ ಗಾಳಿಯಲಾಡುವ ಹಬ್ಬ
ಸೀಳಿ ರಚನೆಯ ತಿಳಿಯುವ ಹಬ್ಬ
ಕಾಡು ಪರ್ವತ ಏರುವ ಹಬ್ಬ
ಮಂಗಳನಂಗಳ ಕಾಣುವ ಹಬ್ಬ


Wednesday, 13 November 2019

ಕರಿಕೆ ಸಂಹಾರ

ಕರಿಕೆ ಸಂಹಾರ

ಮಣ್ಣಿನ ಮಾಳಿಗೆಯನೇರಿ  ಸಾಕಿ ಹೊರಟಳೆಂದರೆ ಅಲ್ಲಿ ಮೈಯ್ಯುಬ್ಬಿ ಬೆಳೆದ ಕರಕಿಯೊಂದಿಗೆ  ಜಗಳವಾಡಲೇಬೇಕು. ಪ್ರತಿ ಮಳೆಗಾಲಕ್ಕೂ ಚಿಗುರಿ ತನ್ನ ಪರಿವಾರದೊಂದಿಗೆ ಹಬ್ಬುವ ಅದರ ಮೊಂಡುತನಕ್ಕೆ ಬೇಸತ್ತು ಹಳಿದು ಕದನಕ್ಕಿಳಿಯಲೇಬೇಕು.  ಅಲ್ಲಿ ಮಲ್ಲಯುದ್ಧ ದೃಷ್ಟಿಯುದ್ದ ಸಂಭವಿಸಲೇಬೇಕು. ಗೊಣಗುಟ್ಟುವ ಸದ್ದು ವಠಾರವನ್ನು ಆವರಿಸಿ ಅನುರಣಿಸಲೇಬೇಕು. ಹೌದು ಮನೆಯ ಮುಂದೆ ಹಸಿರು ಹಸಿರಾಗಿ ಮೆತ್ತನೆಯ ಕುಸುರಾಗಿ ಚಾಚಿಕೊಳ್ಳಬೇಕಾದ ಕರಕಿ ಮನೆಯ ತಲೆಯ ಮೇಲೆ ಹಬ್ಬಿಕೊಂಡರೆ ಅದಕ್ಕೆ ಸಿಗುವ ಸಮ್ಮಾನವಾದರೂ ಎಂತಹುದು ಎಂಬುದಕ್ಕೆ ನನ್ನವ್ವನ ಮಾತುಗಳನ್ನು ಕೇಳಬೇಕು. ಕರಕಿಯದ್ದೇ ಮಹಾಪರಾಧ. ಅದಕ್ಕಾಗಿ ಶಿಕ್ಷೆ ಕಟ್ಟಿಟ್ಟಬುತ್ತಿ. ಏನು ಕಾದಿದೆಯೋ ಇಂದು ಮಾಳಿಗೆಯ ಕರಕಿಗೆ ? ಎಂದು ಅಂಗಳದಲ್ಲಿನ ಮರ ಗಿಡ ಪ್ರಾಣಿಪಕ್ಷಿಗಳಿಗೆಲ್ಲ ಚಿಂತೆ. ನನ್ನ ಸಾಕಿ   ಹದಬೆರೆತ ಹಸಿ ನೆಲದ ಬಲೆ ಹಾಕಿ ಮತ್ತೆಂದೂ ಮೇಲೇಳದಂತೆ ಕರಕಿಯನ್ನು ಅದರ ಮಕ್ಕಳೊಂದಿಗೆ ಬಾಚಿ  ಸೆರೆಹಿಡಿಯುವ ಪರಿಯೇ ನನ್ನನ್ನು ಬೆರಗಾಗಿಸಿದೆ. ಒಮ್ಮೆ ಕರಕಿಯ ಮೂಗು ಹಿಡಿದು ಮಗದೊಮ್ಮೆ ಅದರ ಬೆಳೆದ ಜುಟ್ಟು ಎಳೆದು ಉಸಿರಾಡಲು ಬಿಡದಂತೆ, ನೆಲದ ಮರೆಯ ನಿಧಾನದಂತೆ ಅಡಗಿರುವ ಅದರ ಬೇರು ಸಹಿತ ಮೇಲೆತ್ತಿ ಹೆಡೆಮುರಿಕಟ್ಟಿ ಮುರಿದು ಕಸದ ಬುಟ್ಟಿಯೊಳಗೆ ಹಾಕಿದಳೆಂದರೆ ಮುಗಿಯಿತು ಕರಕಿಯೊಂದಿಗಿನ ಮಳೆಗಾಲದ ಸಹವಾಸ! ಆ ಕಳೆಯನ್ನು ಹೀಗೆ ಬುಡಸಮೇತ  ಕೀಳುವುದರಲ್ಲಿಯೂ ಒಂದು ಮಹಾತಂತ್ರವಿದೆ. ಅದು ಭವಿಷ್ಯದ ದೂರದೃಷ್ಟಿ.  ಬದುಕಿನಲ್ಲಿ ಅರಿತು ಆಚರಿಸಬೇಕಾದ ಮಹಾತತ್ವಶಾಸ್ತ್ರ. ಮನೆಯ ಹಣೆಯನ್ನೇರಿ ಕುಳಿತಿರುವ ಕಳೆಯನ್ನು ಅದರ ಬೀಜದ ಒಂದಂಶವೂ ನೆಲ ಮುಟ್ಟದಂತೆ ಹುಷಾರಾಗಿ ಮುಷ್ಟಿಯಲ್ಲಿ ಹಿಡಿದು ಕೀಳಬೇಕು. ರಕ್ತಬೀಜಾಸುರನಂತೆ ಈ ಮಾಳಿಗೆಯ ಕರಕಿ. ಬಿಟ್ಟಿರುವ ಬೀಜದ ಗೊನೆಯಿಂದ ಒಂದಂಶ ಬಿದ್ದರೂ ಸಾಕು ಮುಕ್ತಿ ಸಿಕ್ಕಿತೆಂದು ಕಾದು ಶುಭಕಾಲದಲ್ಲಿ ಒಮ್ಮೆಲೇ ಚಿಗುರೊಡೆಯುತ್ತವೆ ಸಾವಿರಾರು ಸಸಿಗಳು, ರಕ್ತಬೀಜಾಸುರನ ಹನಿ ರಕ್ತದಿಂದ ಪುಟಿದೇಳುವ ಲಕ್ಷಾಂತರ ರಾಕ್ಷಸರಂತೆ. ಅದರ ಪೌರಾಣಿಕ ಸೂತ್ರವನ್ನು ಚೆನ್ನಾಗಿಯೇ ಬಲ್ಲ ನನ್ನವ್ವಳ ಕೈಯ್ಯಿಂದ ಈ ಕರಕಿಯ ಒಂದೇ ಒಂದು ಬೀಜದ ಉಸಿರೂ ನೆಲಕಿಳಿಯದಂತೆ ಎಚ್ಚರದಿಂದ ಸಂಹಾರ ಮಾಡುವ ಆಕೆಯ ಯುದ್ಧೋತ್ಸಾಹದ ಕಲೆಯೇ ಅನುಕರಣೀಯ. ಅಷ್ಟೇ ಶಿಸ್ತುಬದ್ದ.  ಈ ಕಳೆ ಸಂಹಾರ ಕಲೆಯಲ್ಲೇನು  ಬದುಕಿನ ತತ್ವಶಾಸ್ತವಿದೆ ಎನ್ನುತ್ತಿರುವಿರೇನು ? ಸಮುದ್ರದ ನೆಲ್ಲಿ ಕಡಲ ಉಪ್ಪುಗಳಿಗಿರುವ ಸಂಬಂಧವೇ ಈ ಸಾಕಿ  ತೆಗೆಯುವ ಕಳೆ  ಮತ್ತು ಬದುಕುವ ಕಲೆಗಳ ಮಧ್ಯವಿರುವುದು. ಕಳೆಯನ್ನು ಬುಡಸಮೇತ ಕೀಳಬೇಕೆಂದು ನನ್ನವ್ವ ಹೇಳಿಕೊಟ್ಟ ಪಾಠ ಬದುಕಿನಲ್ಲಿಯ ಕೊಳೆಯನ್ನೂ ಬೇರುಸಹಿತ  ತೊಳೆಯಬೇಕೆಂಬುದನ್ನು ಕಲಿಸಿಕೊಟ್ಟಿದೆ ಅದರ ಬೀಜಸಹಿತ.
  ಅಂತರಂಗದ ಮಲಿನತೆಯನ್ನು ಕತ್ತಲೆಯನ್ನೂ ಕಳೆದುಕೊಳ್ಳುವ ತತ್ವಜ್ಞಾನದ ಈ ಕಳೆ ತೆಗೆಯುವ ಕಲೆಯ ದೃಷ್ಟಾಂತ ಬೋಧನೆ ಯಾವ ವಿಶ್ವವಿದ್ಯಾಲಯದಲ್ಲಿಯೂ ಹೀಗೆ ಸರಳ ಸುಲಾಲಿತ್ಯವಾಗಿ ದಕ್ಕಲಾರದು.
ಹಾಲುಂಡ ತವರೀಗಿ ಏನೆಂದು ಹರಸಲಿ
ಹೊಳೆದಂಡಿಲಿರುವ ಕರಕೀಯ ಕುಡಿಹಾಂಗ
ಹಬ್ಬಲಿ ಅವರ ರಸಬಳ್ಳಿ||
ಎಂಬ ತ್ರಿಪದಿಯ ಆಶಯದಲ್ಲಿ ( ಗರಿಕೆ) ಮನೆಯ ಮುಂದೆ ಇಲ್ಲವೇ ಹೊಳೆಯ ದಂಡೆಯ ಮೇಲೆ ಸುಂದರವಾಗಿ ಹಸಿರು ಹಾಸಿಗೆಯಂತೆ ಹಬ್ಬುವ ಕರಕಿಯ ಕುರಿತಾದದ್ದೇ ವಿನಹ ಮನೆಯ ನೆತ್ತಿಯನ್ನೇರಿ ಹಠಮಾಡಿ ಕುಳಿತಿರುವ ಹುಲ್ಲನ್ನು ಕುರಿತಾದದ್ದಲ್ಲ! ಇದು ನನ್ನವ್ವನಿಗೆ ತಿಳಿದಿರುವ ಸಂಗತಿಯೆಂದೇ ಆಕೆ ಅಟ್ಟವನ್ನೇರಿ ಅಟ್ಟಹಾಸಗೈಯ್ಯುತ್ತಿರುವ ಕರಕಿಯೊಂದಿಗೆ ಕದನಕ್ಕಿಳಿಯುವುದು.  ವಿಜಯದಶಮಿಯ ಆಚರಣೆಗೆ ಮುಂಚೆ ಒಂಭತ್ತು ದಿನಗಳ ನವರಾತ್ರಿಗೆ ಪೂರ್ವಸಿದ್ದತೆ ಮಾಡಿಕೊಳ್ಳುವಂತೆ, ಮಳೆ ತರುವ ಮೋಡಗಳಿಗಾಗಿ ಹಲವು ದಿನಗಳ ಕಾಲ ಕಾದು ಹೊಂಚುಹಾಕಿ ಕುಳಿತಿರುತ್ತಾಳೆ ಈ ಸಾಕಿ. ಹಸಿಯಾಗಿ ನೆಲ ಹದ ಮಾಡುವ ಚಿಟಪಟ ಸದ್ದಿನ ಜಡಿಮಳೆ ಬಿದ್ದೊಡನೆಯೇ ಜಾಗೃತವಾಗುತ್ತದೆ ಆಕೆಯ ಯುದ್ಧೋನ್ಮಾದ. ಅರಸನೊಬ್ಬ ಯುದ್ಧಸನ್ನದ್ಧತೆಗೆ ಬೇಕಾದ ಅಶ್ವದಳ, ಪದಾತಿ ದಳ, ಗಜಪಡೆ, ಭರ್ಚಿ,ಖಡ್ಗ, ಭಲ್ಲೆ, ಗುರಾಣಿಗಳೊಂದಿಗೆ ಹರಿತಗೊಂಡು ಸಂಹಾರಕ್ಕಾಗಿ ಕಾಯುವ ಸಕಲ ಶಸ್ತ್ರಾಸ್ತ್ರಗಳ ಪೂರ್ವತಯಾರಿಗಳನ್ನು ಮಾಡಿಟ್ಟುಕೊಳ್ಳುವಂತೆ, ಮಳೆಯಾಗುವುದಕ್ಕಿಂತ ಮೊದಲೇ ಕರಕಿಯ ಸಂಹಾರಕ್ಕೆ ಬೇಕಾದ ಕುರುಪಿ, ಕಳೆ ತುಂಬಲೆಂದೇ ಜತನದಿಂದ ಕಾದಿಟ್ಟ ಪ್ಲಾಸ್ಟಿಕ್ ಚೀಲಗಳು, ಯುದ್ಧದ ಮಧ್ಯದಲ್ಲಿ ಆಯಾಸವಾದರೆ ಪರಿಹರಿಸಲು ಬೇಕಾಗುವಷ್ಟು ಒಂದೆರಡು ತಂಬಿಗೆ ನೀರು, ಕದನಕ್ಕಿಳಿದಾಗ ಕಾಡುವ ಅಸ್ತಮಾದ ಉಬ್ಬಸವನ್ನು ನಿಯಂತ್ರಿಸಿ ಮತ್ತೆ ಮುನ್ನುಗ್ಗಲು ಬೇಕಾದ ವೈದ್ಯರು ಕೊಟ್ಟ Iಟಿhಚಿಟeಡಿ (ಉಸಿರಿನೊಂದಿಗೆ ಮಾತ್ರೆ ಎಳೆದುಕೊಳ್ಳುವ ಸಾಧನ)-  ಇವೆಲ್ಲವುಗಳನ್ನು ಯಾರಿಗೂ ಹೇಳದಂತೆಯೇ ಸಿದ್ಧತೆಯಲ್ಲಿಟ್ಟುಕೊಂಡಿರುತ್ತಾಳೆ. ನಿತಾಂತವಾಗಿ ನೆಲದ ಅಂತರಂಗಕಿಳಿಯುವ ಜಡಿಮಳೆಯಾದೊಡನೆಯೇ ಹೊರಡಲು ಅಣಿಯಾಗುತ್ತಾಳೆ. ಮನೆಯಲ್ಲಿರುವ ಯಾರಿಗೂ ಇದರ ಪರಿವೆಯಿಲ್ಲದಂತೆ ಏಕ ಮಾತ್ರ ಯೋಧನಂತೆ ಹೋರಾಟಕ್ಕಿಳಿಯಲು ಅನುವಾಗುತ್ತಾಳೆ. ವರ್ಷಧಾರೆ ನೆಲವನಪ್ಪಿದ ಮಾರನೇ ದಿನ ತನ್ನ ಕಿರಣಗಳ ಅಶ್ವವನ್ನೇರಿ ಬರುವ ನೇಸರನ ಬೆಳಗು, ಹಿಂದಿನ ರಾತ್ರಿ ಧರೆಗಿಳಿದ ಮೇಘರಾಜ, ಮಣ್ಣಿನ ಕಣಗಳೊಳಗೆ ಕರಗಿದಾಗ ಹೊರಟ ಸುಮಧುರ ಸುಗಂಧ, ವರುಣ ಬಂದನೆಂದು ಮುಖವೆತ್ತಿ ಎದೆಯೊಳಗೆ ಮುತ್ತುಗಳ ಹನಿಗಳನ್ನಿಟ್ಟುಕೊಂಡು ನಸುನಗುತ್ತಿರುವ ಮನೆಯಂಗಳದಲ್ಲಿನ ಮಲ್ಲಿಗೆ, ದಾಸವಾಳ, ಪೇರು, ಸೇವಂತಿಗೆ ಕುಸುಮಗಳ ತೂಗಾಟ,   ಇನಿಯ ಬಂದನೆಂಬ ಖುಷಿಗೆ ಮೈಹರಡಿಕೊಂಡು ಆರ್ದ್ರಹೃದಯದಿಂದ ಬಾಚಿ ತಬ್ಬಿಕೊಂಡ ಬಯಕೆಯಿಂದ ಸಂತೃಪ್ತಿಯನ್ನನುಭವಿಸುತ್ತಿರುವ ಹಸಿ ನೆಲ, ವರುಣನಿಂದಾಗಿ ಪ್ರಪುಲ್ಲವಾಗಿ ಕುಡಿಯೊಡೆದಿರುವ ಚಿಗುರನ್ನುಂಡು, ಆನಂದದ ರಾಗವನ್ನು ಹಾಡುತ್ತಿರುವ ಗುಬ್ಬಿ ಕೋಗಿಲೆ ಗಿಳಿಗಳ ಕಲರವ- ಮನೆಯಂಗಳದ ಮಹಾಹಬ್ಬವೆಂಬಂತೆ ಸಂಭ್ರಮವನ್ನು ತಂದ ಪ್ರಕೃತಿಗೆ ನಮಿಸುತ್ತಲೇ ಉಪವಾಸದ ವ್ರತವನ್ನಾಚರಿಸುತ್ತಾ ತನ್ನೆಲ್ಲಾ ಸಕಲ ಅಸ್ತ್ರಗಳೊಂದಿಗೆ ಮಾಳಿಗೆಯನ್ನೇರಿ ಹೊರಡುವ ಸಾಕಿಯ ಜೀವನೋತ್ಸಾಹವನ್ನು ಹೇಗೆಂದು ಬಣ್ಣಿಸುವುದು.
ಅಂದೇ ವಿಜಯದಶಮಿ ಅವಳಿಗೆ ರಾವಣನಂತೆ ದಶಾವತಾರವನ್ನು ಎತ್ತಿ ಮಾಳಿಗೆಯ ಮೇಲೆ ವಿರಾಟ್ ರೂಪ ಮೆರೆಯುತ್ತಿರುವ ಕರಕಿಯ ಸಂಹಾರಕ್ಕೆ.  ಸಾಕಿಯ ಈ ಯುದ್ಧಸಂಭ್ರಮವನ್ನು  ಮಗುವಿನಂತೆ ಕಣ್ಣು ತುಂಬಿಕೊಂಡು ನೋಡುವ ಮುಗ್ಧತೆಯೊಂದೇ ನನಗುಳಿದ ದಾರಿಯಾಯಿತು. ಆದರೂ ಮಾಳಿಗೆಯನ್ನೇರಿ ಹೇಗೆ ಯುದ್ಧ ಮಾಡುತ್ತಾಳೆಂದು ಕಣ್ತುಂಬಿಕೊಂಡು ಬಿಡಲೇಬೇಕು ಎಂದು ಕಷ್ಟಪಟ್ಟು ಅವಳನ್ನು ಹಿಂಬಾಲಿಸಿದೆ. ನನ್ನ ಎರಡು ಕರುಳ ಕುಡಿಗಳಿರಲಿಲ್ಲ ಆ ಸಮಯದಲ್ಲಿ.  ಅವರಿದ್ದರೆ ಒಟ್ಟಿಗೇ ಮೂರು ತಲೆಮಾರುಗಳು ಸೇರಿ ಕರಕಿಯೊಂದಿಗಿನ ಯುದ್ಧ ಮಾಡಿದ ಶ್ರೇಯಸ್ಸಾದರೂ ಸಿಗಬಹುದಿತ್ತೇನೋ ? ಅಂದು ಆ ಬಾಗ್ಯವಿರಲಿಲ್ಲ.  ಸರಿ. ಕೊನೆಗೆ ಎರಡು ತಲೆಮಾರುಗಳಾದರೂ  ಕಳೆ ಸಂಹಾರದ ಕಲೆಯಲ್ಲಿ  ಪರವಶವಾದವಲ್ಲ ಎಂಬ ಹೆಮ್ಮೆಯಂತೂ ಹೆಗಲೇರಿತು. ಮೇಲೇರಿದೆ. ರಾತ್ರಿಯಿಡೀ ಶೃಂಗಾರಸಮಯದಲ್ಲಿ ಹೊರಳಾಡಿದ ನೆಲದ ಹಸಿ ನಿಧಾನವಾಗಿ ಆರುತ್ತಿತ್ತು.  ಎದುರಿಗಿರುವ ನೇಸರನೂ ನೆಲದಾಕೆಯ ಸಂಭ್ರಮಕ್ಕೆ ಕಳೆಯನ್ನು ತಂದಿದ್ದ. ಮಾಳಿಗೆಯಾಕೆಯ ಮುಖ ಮಂದಹಾಸದಿಂದ ಅರಳಿ ಕೆಂಬಣ್ಣವೇರಿತ್ತು. ಕೆಂಪು ಮಣ್ಣ ಈ ಹೊಸ ಮೊಗವನ್ನು ಕಂಡು ಸಾಕಿಗೆ ಮಹದಾನಂದವಾಯಿತು. ಆ ಮಣ್ಣ ಮೊಗದ ಮೇಲೆ ಕುರೂಪ ತಂದ ಕರಕಿಯ(ಗರಿಕೆಯ) ಜಟೆಯನ್ನು ಕಂಡು ನನಗೆ ಹಾಗೆಯೇ  ಹಿಡಿದೆಳೆಯಬೇಕೆನ್ನಿಸಿತೆಂದರೆ, ಕರಕಿಯಿಂದ ಸೋರುತಿಹುದು ಮನೆಯ ಮಾಳಿಗೆ ಎಂದು  ಪರಿತಾಪವನ್ನನುಭವಿಸಿದ ನನ್ನ ಸಾಕಿಗಿನ್ನೆಷ್ಟು ಮುನಿಸು ಬಂದಿರಬೇಕು ? ಅಲ್ಲವೇ ! ಸಾಕಿ ಬರುವುದನ್ನು ಕಂಡು ಯುದ್ದಕ್ಕಾಗಿಯೇ ಸಿದ್ಧವಾಗಿ ನಿಂತಂತಿದ್ದ ಕರಕಿಯೂ ತಲೆಯೆತ್ತಿ ಗಾಳಿಗೆ ತಲೆದೂಗುತ್ತಾ ಪಂಥಾಹ್ವಾನ ನೀಡಿ ಸಾಕಿ ಹಾಗೂ ಪಡೆಯನ್ನು  ಕರೆದಂತೆ ಭಾಸವಾಗುತ್ತಿತ್ತು. ಹಾಗೆ ಕರಕಿ ಮೊದಲೇ ಸಿದ್ದವಾಗುತ್ತಿದ್ದುದಕ್ಕೂ ಬಲವಾದ ಕಾರಣವಿದೆ. ಯುದ್ಧಕ್ಕೆ ಹೋಗುವ ಮೊದಲು ಈ ಕರಕಿ ಯುದ್ಧದ ಇತಿಹಾಸದ ಕಥೆಯನ್ನೊಮ್ಮೆ  ಕೇಳಿಬಿಡಿ- ಕುರುಕ್ಷೇತ್ರದಂತಹ ಮಹಾಭಾರತ ಯುದ್ಧವೇ ಕೇವಲ ಹದಿನೆಂಟು ದಿನಗಳಲ್ಲಿ ಮುಗಿದುಹೋಗಿತ್ತು. ಆದರೆ ನಮ್ಮ ಮನೆ ಮಾಳಿಗೆಯ ಮೇಲಿನ ಕರಕಿಯೊಂದಿಗಿನ ನನ್ನವ್ವಳ ಈ ಯುದ್ಧ ಮಾತ್ರ ಎಂದೋ ಪ್ರಾರಂಭವಾಗಿ ಈಗಲೂ ಮುಂದುವರೆಯುತ್ತಲೇ ಇದೆ. ಈ ಯುದ್ಧ ಇಂದು ನಿನ್ನೆಯದಲ್ಲ. ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ನನ್ನ ಗ್ರಹಿಕೆಯಂತೆ  ನನ್ನವ್ವ ನಮ್ಮ ಮನೆಗೆ ಬಂದಂದಿನಿಂದಲೂ ನಡೆಯುತ್ತಲೇ ಇದೆ. ಹಿಂದೆ ನಮ್ಮ ಪೂರ್ವಜರು ಯಾರು ಈ ಯುದ್ಧದಲ್ಲಿ ಪಾಲ್ಗೊಂಡಿದ್ದರೋ ಗೊತ್ತಿಲ್ಲ. ಈ ಯುದ್ಧ ಸಾಗುವ ಪ್ರಕ್ರಿಯೆಯೇ  ಬಲು ವಿಸ್ಮಯ. ಮಹಾಭಾರತದ ಯುದ್ಧಕ್ಕೆ ಷರತ್ತುಗಳಿದ್ದಂತೆ ಈ ಯುದ್ಧದಲ್ಲಿಯೂ ಅಘೋಷಿತ ನಿಯಮಗಳಿವೆ.  ಮೊದಲನೇಯದಾಗಿ ಈ ಕದನ ವರುಷದಲ್ಲೊಮ್ಮೆ ಮಳೆಗಾಲದಲ್ಲಿ ಮಾತ್ರ ನಡೆಯುವಂತಹುದು. ಎರಡನೇಯದಾಗಿ ಇದರ ಕಾಲಾವಧಿ ಮಳೆಗಾಲದ ದಿನಗಳಷ್ಟೇ. ಮೂರನೇಯದಾಗಿ ಮಳೆಗಾಲದ ನಂತರ ಎರಡೂ ಪಕ್ಷದವರು ಕದನವಿರಾಮ ಘೋಷಿಸಬೇಕು. ಅರ್ಥಾತ್ ಮಳೆಗಾಲ ಮುಗಿದ ನಂತರದಿಂದ ಹಿಡಿದು ಮರಳಿ ಮಳೆ ಪ್ರಾರಂಭವಾಗುವ  ಅವಧಿಯವರೆಗಿನ ಸಮಯದಲ್ಲಿ ಕರಕಿ ಕಿರಿಕಿರಿ  ಮಾಡುವ ಹಾಗಿಲ್ಲ, ನನ್ನವ್ವನೂ ಕರಕಿಯನ್ನು ಮರಳಿ ಕೆಣಕುವ ಹಾಗಿಲ್ಲ. ಇದು ಯುದ್ಧದ ಅತ್ಯಂತ ಮಹತ್ವದ ಶಾಂತಿ ಒಪ್ಪಂದ. ಅಂದರೆ ಒಂದು ವಸಂತದ ಮೂರನೇಯ ಒಂದು ಭಾಗ ಮಾತ್ರ ಯುದ್ಧಕಾಲ. ಈ ಮಹತ್ವದ ಷರತ್ತುಗಳನ್ನು ಎರಡೂ ಪಕ್ಷದವರೂ ಉಲ್ಲಂಘಿಸುವ ಹಾಗಿಲ್ಲ.
ಅದೂ ನಡೆದುಹೋಯಿತೊಮ್ಮೆ. ನನ್ನ ಅವ್ವ ಒಮ್ಮೆ ವರ್ಷಾಕಾಲ ಮುಗಿದು ಚಳಿಗಾಲ ಕೊನೆಯಾಗುವ ಮಾರ್ಗಶಿರ ಮಾಸದಲ್ಲೊಂದು ದಿನ ಮಾಳಿಗೆಯನ್ನೇರಿ, ಕರಕಿ  ಒಣಗಿದ್ದನ್ನು ಕಂಡು ಇದೇ ಸರಿಯಾದ  ಸಮಯವೆಂದುಕೊಂಡು ಕದನವಿರಾಮವನ್ನು ಮುರಿದು  ಕುರುಪೆ ಹಿಡಿದು ನಿರ್ಮೂಲನೆಗಿಳಿದುಬಿಟ್ಟಳಂತೆ. ಮೊದಲೇ ಅಶಕ್ತವಾಗಿ ಒಣಗಿದ ಹುಲ್ಲು ಒಲ್ಲದ ಮನಸಿನಿಂದ ಮಣ್ಣಿನಿಂದ ಹೊರಬರದೇ ಹಠವಿಡಿದ ಮಗುವಿನಂತೆ ನೆಲ ತಬ್ಬಿ ಆರ್ತನಾದ ಮಾಡಿತಂತೆ. ಮಣ್ಣಿನಿಂದ ಪೂರ್ಣ ಕೀಳಲಾಗದ ಒಣ ಕರಕಿಯ ಮೊಂಡಾಟದಿಂದ ಅರ್ಧಕ್ಕೆ ಬಿಟ್ಟುಬಂದಳಂತೆ. ನಿಯಮ ಮೀರಿ ಬಲವನ್ನು ಕಳೆದುಕೊಂಡು ಶಸ್ತ್ರಾಸ್ತ್ರ ಕಳಚಿಟ್ಟ ಹೊತ್ತಲ್ಲದ ಹೊತ್ತಿನಲ್ಲಿ  ತನ್ನ ಬುಡವನ್ನೇ ಅಲ್ಲಾಡಿಸಲು ಬಂದ ಸಾಕಿಯ ಸೀಮೋಲ್ಲಂಘನದಿಂದ ರೊಚ್ಚಿಗೆದ್ದ ಕರಕಿ ಈಗಲೂ ಮಾಳಿಗೆ ತೊಲಗಿ ಹೋಗುವ ಬದಲು ರಕ್ತಬೀಜಾಸುರನ ಗುಣ ಬೆಳೆಸಿಕೊಂಡು  ಮೊದಲಿಗಿಂತ ಹುಲುಸಾಗಿ ಮಾಳಿಗೆಯ ತುಂಬೆಲ್ಲಾ ಹರಡಿಕೊಂಡು  ನನ್ನವ್ವನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆಯಂತೆ ಎಂದು ನನ್ನವ್ವನೇ ನನಗೆ ವಿಷಾದದಿಂದ ಹೇಳಿದ ನೆನಪು. ನನಗೂ ಸಾಕಿಯದೇ ತಪ್ಪೆಂದೆನಿಸಿದರೂ ಋತುವಿನಲ್ಲೊಂದರಲ್ಲಿಯೇ ಎಲ್ಲ ಅರಿವಿದ್ದೂ ನೂರೆಂಟು ಸಲ ಕದನವಿರಾಮ ಉಲ್ಲಂಘಿಸುವ ದೇಶಗಳಿಗಿಂತ ಯಾವಾಗಲೋ ಒಂದು ಬಾರಿ ತಿಳಿಯದೇ ಕದನವಿರಾಮ ಮೀರಿದ ನನ್ನವ್ವ ಎಷ್ಟೋ ಪಾಲು ಶ್ರೇಷ್ಠವಲ್ಲವೇ ಎಂದು ಕರಕಿಯ ಮುಂದೆ ಬಾಗುವುದರ ಬದಲಾಗಿ ಬೀಗಿದೆ.  ಹ್ಞಾಂ!  ಈಗ ಯುದ್ಧಕ್ಕೆ ಬರೋಣ- ಇದು ಮುಗಿಯದ ಅಧ್ಯಾಯವೆಂದು  ಕರಕಿಗೂ ಚೆನ್ನಾಗಿ ಗೊತ್ತಿದ್ದುದರಿಂದಲೋ ಏನೋ ತಲೆಯೆತ್ತಿ ಸೆಡ್ಡು ಹೊಡೆಯುತ್ತಿರುವಂತೆ ಚಟಪಟ ಓಲಾಡುತ್ತಿತ್ತು. ಮೊದಲು ಯುದ್ಧ ಪ್ರಾರಂಭವಾಗಲಿ ಆಮೇಲೆ ನೋಡಿಕೊಳ್ಳುತ್ತೇನೆ ನಿನ್ನನ್ನು ಎಂದು ನಾನೂ ಕಾಯುತ್ತಿದ್ದೆ. ರಾಣಿಯೇ ಎಂದಾದರೂ ಮುನ್ನುಗ್ಗಿ ಹೋರಾಡುವ ಯುದ್ಧವನ್ನೆಂದಾದರೂ ಕಂಡಿದ್ದೀರಾ ? ನೀವು ಕಂಡಿರಲಿಕ್ಕಿಲ್ಲ. ಆದರೆ ನಾನಂದು ಕಣ್ಣಾರೆ ಕಂಡೆ.  ಚೀಲದೊಳಗಿದ್ದ ಕುರುಪೆಯನ್ನು ಹೊರಗೆಳೆದವಳೆ  ಜಟಾಜೂಟಳಾಗಿ ಮೆರೆಯುತ್ತಿದ್ದ ಹುಲ್ಲನ್ನು ಕತ್ತರಿಸುತ್ತಾಳೆಂದುಕೊಂಡಿದ್ದೆ. ಆದರೆ ಕರಕಿಯ ವಿಕಟ ವಿಲಾಸವನ್ನು ಬಲ್ಲ ಸಾಕಿ ಮಾತ್ರ ಕುರುಪೆಯನ್ನೇ ಖಡ್ಗದಂತೆ ಬೀಸಿ  ಗುರಿಯಿಟ್ಟು ಹೊಡೆದಿದ್ದು ಮಾತ್ರ ಕರಕಿಯ ಬುಡಕ್ಕೆ ಎಂದರೆ ಮಣ್ಣಿನೊಳಗೆ ಅಡಗಿಕುಳಿತಿರುವ ಬೇರಿಗೆ.  ಸಾಕಿಗೆ ಗೊತ್ತಿತ್ತು ಒಳಗೊಳಗೇ ಎಲ್ಲೆಂದರಲ್ಲಿ ಚಾಚಿ ನಡೆಸುವ ಬೇರಿನ  ಗೆರಿಲ್ಲಾ ಯುದ್ಧ ತಂತ್ರ. ಕುರುಪೆಯಿಂದ ಮಣ್ಣ ಮುಖಕ್ಕೆ ತರಿದು ಕರಕಿಯ ಬೇರಿಗೇ ಕೈ ಹಾಕಿ ಮೇಲೆತ್ತಿ ನಕ್ಕು ಮುಂದುವರಿದಳು.  ಬೇರುಗಡಿತವಾದ ಮೊಂಡು ಕರಕಿ ಅದುರಿ ಅಲ್ಲಾಡಿ ಬೆದರಿ ಬೆಂಡಾಡಿ ಸಾಕಿಯ ಕೈಯ್ಯಲ್ಲಿನ ಕುರುಪೆಯ ಗರಗಸಕ್ಕೆ  ಅಂಗಾಂಗಗಳನ್ನು ಕತ್ತರಿಸಿಕೊಂಡು ಕಂಗಾಲಾಗಿ  ಬಲಿಯಾಗಿ ಹೋಗುತ್ತಿತ್ತು. ಪಾಪ ಕಣ್ಣಮುಂದೆಯೇ ತನ್ನ ಒಡಲ ಕುಡಿಗಳು ಬುಡ ಕತ್ತರಿಸಿಕೊಂಡು ಮಾಡುತ್ತಿದ್ದ ಆರ್ತನಾದ ಕೇಳಿ ಒಂದು ಕ್ಷಣ ಯುದ್ಧದಿಂದ ಹಿಂದೆ ಸರಿಯಬೇಕೆಂದು ವಿಚಲಿತನಾದರೂ, ನನ್ನವ್ವನ ವಿರುದ್ಧ ಶಕುನಿಯಂತೆ ಅಂದಕಾಲತ್ತಿನ ಸೇಡನ್ನಿಟ್ಟುಕೊಂಡು ಮಾಳಿಗೆಯ ತುಂಬೆಲ್ಲಾ ಚಾಚಿಕೊಂಡು ತನ್ನ ಬೇರುಗಳ ಮೂಲಕ ಮನೆಯೊಳಗೆ ನೀರನ್ನು ಇಳಿಬಿಟ್ಟು ಹೊಂಡದಂತೆ ಕೆಸರು ಮಾಡುತ್ತಾ ಕುಟುಂಬಕ್ಕೆ ಕಿರಿಕಿರಿ ಮಾಡುತ್ತಿದ್ದುದನ್ನು ನೆನೆದು, ಸಹೋದರ ಪ್ರೀತಿಯಿಂದ ಕರ್ಣನ ವಿರುದ್ಧ ಬಿಲ್ಲನ್ನು ಮೇಲೆತ್ತದೇ ಕುರುಕ್ಷೇತ್ರದಲ್ಲಿ ಅರ್ಜುನ ತೊಳಲಾಡಿ ಕೊನೆಗೆ ಕೃಷ್ಣನಿಂದ ಯುದ್ದೋತ್ಸಾಹವನ್ನು ಪಡೆದು ಮುನ್ನುಗ್ಗಿದಂತೆ, ನಾನೂ ಚಿಕ್ಕ ಕೈಚೂರಿಯಂತಿದ್ದ ಕುರುಪೆಯನ್ನು ಹಿಡಿದು ಮುನ್ನುಗ್ಗಿದೆ.
ಕೈಗೆ ಸಿಕ್ಕಂತೆ ಜುಟ್ಟು ಹಿಡಿದೆಳೆದು ಬೇರು ಸಹಿತ ಕೀಳಲಾರಂಭಿಸಿದೆ. ಸೇಡಿನ ಕಿಚ್ಚೋ ಏನೋ ಕರಕಿ ಮಾತ್ರ ತನ್ನೊಡನೆ ಬೇರಿನ ಹಿಡಿತಕ್ಕೆ ಸಾಧ್ಯವಾಗುವಷ್ಟು  ಮಣ್ಣನ್ನು ಮೆತ್ತಿಕೊಂಡೇ ಬರಲಾರಂಭಿಸಿತು. ಸುಂದರ ಕೆಂಬಣ್ಣವನ್ನೇರಿಸಿಕೊಂಡ ಮಾಳಿಗೆಯ ಮೊಗ ನಾವು ಕೀಳುವ ಕರಕಿಯಿಂದ ಬಿದ್ದ ಚಿಕ್ಕ ದೊಡ್ಡ ಹೊಂಡಗಳಿಂದಾಗಿ ಮತ್ತಷ್ಟು ಕುರೂಪಗೊಂಡಿತು. ಸಾವಿನಲ್ಲೂ ಸೆಣಸಾಡುವ ಕರಕಿಯ ಈ ಅದಮ್ಯ ಹೋರಾಟದ ವೀರೋತ್ಸಾಹವನ್ನು ಕಂಡು ವಿಸ್ಮಯಗೊಂಡೆ.  ಸಾಕಿ ಎಚ್ಚರಿಸಿದಳು, ಈ ಮೊಂಡ ಕರಕಿಯ ಒಂದೇ ಒಂದು ಬೀಜವನ್ನು ನೆಲ ತಬ್ಬದಂತೆ ಕೀಳು ಎಂದು.  ಹೌದು, ಈ ಕರಕಿ ರಕ್ತಬೀಜಾಸುರನಿದ್ದಂತೆ. ಒಂದೇ ಒಂದು ಬೀಜ ನೆಲಕ್ಕುದುರಿದರೆ ಸಾಕು ಅದು ಮಣ್ಣಿನಲ್ಲಡಗಿಕೊಂಡು  ಮತ್ತೆ ಮುಂದಿನ ಮಳೆಗಾಲದಲ್ಲಿ ಚಿಗುರೊಡೆದು ಹಬ್ಬಿ ಮಾಳಿಗೆಯ ಅಂದಗೆಡಿಸಲು ಕಾತರಿಸುತ್ತಿರುತ್ತದೆ. ಕರಕಿಯ ಈ ಅಮಿತ ಜೀವನ ಪ್ರೀತಿಯೇ ನಮ್ಮನ್ನು ಬೆರಗುಗೊಳಿಸುತ್ತದೆ.  ಈ ಅಡಗಿಕೊಂಡು ಹೋರಾಡುವ ಗೆರಿಲ್ಲಾ ಯುದ್ಧತಂತ್ರದಿಂದಲೇ ಅದು ಇಲ್ಲಿಯವರೆಗೆ ಸುಮಾರು ಐವತ್ತು ವಸಂತಗಳಷ್ಟು  ನಿರಂತರವಾಗಿ ನನ್ನವ್ವಳೊಂದಿಗೆ ಕದನ ಮಾಡುತ್ತಲೇ ಬಂದಿದೆ. ಎಷ್ಟೋ ದೇಶಗಳು ಈ ತಂತ್ರದಿಂದಲೇ ತಾನೇ ಇನ್ನೂ ಜೀವಂತವಾಗಿರುವುದು ! ಏಕಕಾಲಕ್ಕೆ ನೂರಾರು ಬೀಜಗಳನ್ನು ಹೊತ್ತು ಕುಣಿಯುವ ಕರಕಿಯನ್ನು ಮಣಿಸುವುದೇ ಒಂದು ಸವಾಲು. ಇದರ ವಿಜ್ಞಾನವನ್ನು ತಿಳಿದು ಯುದ್ದದಲ್ಲಿ ಭೀಷ್ಮನಂತಾಗಿದ್ದ ಸಾಕಿ ಎಚ್ಚರಿಕೆಯಿಂದಲೇ ಕರಕಿಯ ಸಂಹಾರ ಮಾಡುತ್ತಿದ್ದಳು. ನಾನು ಎಷ್ಟೇ ಎಚ್ಚರವಹಿಸಿದರೂ ಜೀರಿಗೆಯಷ್ಟಿರುವ ಗಾತ್ರದ ನೂರಾರು ಹಸಿರು ಬೀಜಗಳಲ್ಲಿ ಅರ್ಧದಷ್ಟಾದರೂ ನೆಲಕಚ್ಚುತ್ತಿದ್ದವು. ಸಾಕಿ ಅವುಗಳನ್ನು ಹುಡುಕಿ ಹುಡುಕಿ ಹೊಸಕಿಹಾಕುತ್ತಿದ್ದಳು. ಈ ಯುದ್ಧದಲ್ಲಿ ನಮ್ಮದು ಅಭಿಮನ್ಯುವಿನ ಪಾತ್ರವಿದ್ದಂತೆ. ಕರಕಿಯ ಚಕ್ರವ್ಯೂಹದೊಳಗೆ ಪ್ರವೇಶಿಸುವುದು ಮಾತ್ರ ಗೊತ್ತು. ಬಿಡಿಸಿಕೊಂಡು ಹೊರಬರುವ ವಿದ್ಯೆ ನಮಗೆ ದಕ್ಕಲಿಲ್ಲವೆಂದೇ ಹೇಳಬೇಕು.  ಇದುವರೆಗೂ ಈ ಹಠಮಾರಿ ಮಾಳಿಗೆಯ ಕಡುಮೋಹಿ ಕರಕಿಯೂ ಯುದ್ಧ ಸಾಕು ಎಂದು ಸೋತು ಹಿಂದೆಸರಿದಿಲ್ಲ.  ಯಕಃಶ್ಚಿತ  ಎರಡೆಲೆಗಳ ನೀಳ ತೃಣಕ್ಕೆ ಶತಮಾನಗಳ ಕಾಲ ಯುದ್ಧವನ್ನು ಮಾಡುವ ವೀರೋತ್ಸಾಹವಿರಬೇಕಾದರೆ ಇನ್ನು ನನ್ನಂತಹ ಮನೆಯಲ್ಲಿರುವ ಇಪ್ಪತ್ತು ಕರುಳಕುಡಿಗಳನ್ನು ಎತ್ತಿ ಆಡಿಸಿ ಬೆಳೆಸಿರುವ ಸಾಕಿಗೆ ಇನ್ನೆಷ್ಟು ವೀರಾವೇಶದ  ಚೈತನ್ಯವಿರಲಿಕ್ಕಿಲ್ಲ ನೀವೇ ಕಲ್ಪಿಸಿಕೊಳ್ಳಿ. ಸಾಕಪ್ಪ ಈ ಕರಕಿಯ ಸಹವಾಸ ಎಂದು ಸಾಕಿಯೂ ಮಾಳಿಗೆಯ ರಣರಂಗದಿಂದ ಹಿಂದೆಸರಿದವಳಲ್ಲ. ತಾನು ಕಾಯಿಲೆಯಿಂದ ನರಳುತ್ತಿರುವಾಗಲೂ ಈ ಕರಕಿಯೊಂದಿಗಿನ ಹೋರಾಟವನ್ನು ನಿಲ್ಲಿಸಿದವಳಲ್ಲ ಸಾಕಿ ಎಂದ ಮೇಲೆ  ಯುದ್ದ ಮುಂದುವರೆಯಲೇಬೇಕಲ್ಲ. ಸಾಕಿಯೇ ಮುಂದುವರೆಸಿ ಕರಕಿಯನ್ನು ಚೆನ್ನಾಗಿ ತರಿದೊಟ್ಟಿದಳು. ತಂದಿದ್ದ ಪ್ಲಾಸ್ಟಿಕ್ ಚೀಲದಲ್ಲಿ ಹೆಡೆಮುರಿ ಕಟ್ಟಿ ಮುರಿಮುರಿದು ತುಂಬಿದಳು. ನೇಸರ ಸಂಜೆಗಣ್ಣಿನಿಂದ ವೀಕ್ಷಿಸುತ್ತಿದ್ದ. ಬಹುಶಃ ಸಾಕಿಯ ಈ ಬತ್ತದ ಅನುಪಮ ಚೈತನ್ಯಕ್ಕೆ ಆತನೂ ಬೆರಗಾದಂತಿದ್ದ. ಮಾಳಿಗೆ ಮೊದಲಿನ ಕಳೆಯನ್ನು ಪಡೆದುಕೊಂಡು ಸಂಜೆಯ ಕಿರಣಗಳ ಸ್ಪರ್ಶದಿಂದ ಮತ್ತೆ ಮಂದಹಾಸ ಬೀರುತ್ತಿತ್ತು. ಈಗಲೂ ಅದೇ ಕೆಂಬಣ್ಣ ಮಾಳಿಗೆಯ ಮುಖವನ್ನಾವರಿಸಿ ಸಂಜೆಗೊಂದು ಅನನ್ಯ ಸೌಂದರ್ಯ ತಂದಿತ್ತು. ಅಲ್ಲಿಗೆ ಕರಕಿಯೊಂದಿಗಿನ ಈ ಮಳೆಗಾಲದ ಯುದ್ಧ ಮುಗಿದಿತ್ತು ಮತ್ತೆ ಮುಂದಿನ ಮಳೆಗಾಲದವರೆಗೆ ಕದನವಿರಾಮವನ್ನು ಘೋಷಿಸಿಯೇ ಬಿಟ್ಟ ನೇಸರ.  ಚೀಲದೊಳಗೆ ಗಹಗಹಿಸಿ ನಗುತ್ತಿದ್ದ ಎಂದೂ ಸೋಲದ ಕರಕಿಯ ವಿಕಟ ನಗುವಿನ ಧ್ವನಿ ಮಾತ್ರ ಮತ್ತೆ ಮುಂದಿನ ಮಳೆಗಾಲದವರೆಗೆ ಅನುರಣಿಸುತ್ತಲೇ ಇರುತ್ತದೆ.


Monday, 28 October 2019


ಬೆಳಕೆ ನೀ ತೊರೆಯದಿರು
ತಮಂಧವನು ಕಳೆದು
ಆವರಿಸು ಮನೆ ಮನಗಳ
ಪಯಣವೆಂದೆಂದೂ ಅನವರತ


ದಯೆ ಕರುಣೆ ಸಹನೆ ತಾಳ್ಮೆ
ಬೆಳಗು ಭಿನ್ನ ಬಗೆ ಬಗೆ
ಅಹಿಂಸೆ ಶಾಂತಿ ನೆಮ್ಮದಿ
ತೊಳಗು ಕಿರಣ ವೈವಿಧ್ಯ


ಕತ್ತಲೆಯ ಕುರುಡು ದಾರಿ
ಭರವಸೆಯ ಬಣ್ಣದೋರಿ
ಹೊರಟು ಬಾ ಹೊಂಬೆಳಕೆ
ಜೊತೆಯಾಗಿರು ನೀ ನಂಬಿಕೆ


ಅಮೂರ್ತ ದಿಗ್ ದಿಗಂತ
ಕಂಡೆ ಎಂಬುದೊಂದು ಹರುಷ
ಕಾರುಣ್ಯದ ಕೈಹಿಡಿದು
ಕರೆದೊಯ್ ಅನಂತದೆಡೆಗೆ


ದಿವ್ಯಾನುಭೂತಿ ಸ್ಪರ್ಶ
ಮಾಯಾಜಾಲದಂತೆ ರೂಪ
ಧನ್ಯತೆಯದೋ ದರ್ಶನ
ಮರೆಯಾಗದಿರು ಹೀಗೊಮ್ಮೆ ಕಂಡು

   
ನೀ ಬಿಡಿಸಿದ ರಂಗವಲ್ಲಿ
ಬದುಕೆಂಬ ಬನದ ಮೊಲ್ಲೆ
ಬಣ್ಣಬಣ್ಣಗಳ ಚೆಲ್ಲಾಟ
ಸುಂದರವದೋ ಹಬ್ಬನೋಟ


ಸರ್ವರಿಗೂ ಬೆಳಕಿನ ಹಬ್ಬದ ಹಾರ್ದಿಕ ಶುಭಾಶಯಗಳು
      ಚಂದ್ರಶೇಖರ ಹೆಗಡೆ




ಬೆಳಕೆ ನೀ ತೊರೆಯದಿರು
ತಮಂಧವನು ಕಳೆದು
ಆವರಿಸು ಮನೆ ಮನಗಳ
ಪಯಣವೆಂದೆಂದೂ ಅನವರತ
ದಯೆ ಕರುಣೆ ಸಹನೆ ತಾಳ್ಮೆ
ಬೆಳಗು ಭಿನ್ನ ಬಗೆ ಬಗೆ
ಅಹಿಂಸೆ ಶಾಂತಿ ನೆಮ್ಮದಿ
ತೊಳಗು ಬೆಳಕೆ ವೈವಿಧ್ಯ
ಕತ್ತಲೆಯ ಕುರುಡು ದಾರಿ
ಭರವಸೆಯ ಬಣ್ಣದೋರಿ
ಹೊರಟು ಬಾ ಹೊಂಬೆಳಕೆ
ಜೊತೆಯಾಗಿರು ನೀ ನಂಬಿಕೆ
ಅಮೂರ್ತ ದಿಗ್ ದಿಗಂತ
ಕಂಡೆ ಎಂಬುದೊಂದು ಹರುಷ
ಕಾರುಣ್ಯದ ಕೈಹಿಡಿದು
ಕರೆದೊಯ್ ಅನಂತದೆಡೆಗೆ
ದಿವ್ಯಾನುಭೂತಿ ಸ್ಪರ್ಶ
ಮಾಯಾಜಾಲದಂತೆ ರೂಪ
ಧನ್ಯತೆಯದೋ ದರ್ಶನ
ಮರೆಯಾಗದಿರು ಹೀಗೊಮ್ಮೆ ಕಂಡು    
ಸರ್ವರಿಗೂ ಬೆಳಕಿನ ಹಬ್ಬದ ಹಾರ್ದಿಕ ಶುಭಾಶಯಗಳು
      ಚಂದ್ರಶೇಖರ ಹೆಗಡೆ
x
x
x

Wednesday, 2 October 2019

ಹೊರಟಿದ್ದರು ಗಾಂಧಿ


ಹೊರಟಿದ್ದರು ಗಾಂಧಿ
ಸತ್ಯ ಶಾಂತಿ ಮೈಯ್ಯುಟ್ಟು
ಹೆಜ್ಜೆಗಳೂ ಮರ್ಮರಿಸುತ್ತಿದ್ದವು
ಕನಸುಗಳ ದಾರಿ ಬೆನ್ನು ಹತ್ತಿ
ನೋವ ಮರೆತು ವರ್ಣ ಚಿಂತೆ
ಹೊತ್ತು ಸಮಾನತೆ ನ್ಯಾಯಗಳ
ಶುಭ್ರ ಧೋತಿಯ ಧರಿಸಿ
ಅಲುಗಾಡದೆ ದಿಟ್ಟಿ ನೆಟ್ಟು
ಕನ್ನಡಕದ ಗಾಜಿನೊಳಗೆ
ದಾಸ್ಯ ಹಿಂಸೆ ದಬ್ಬಾಳಿಕೆಗಳ
ಮೇಲೆದ್ದು ಕುಣಿದು ತುಳಿಯುತಿರುವ
ಧೂಳು ಕಣಗಳಿಂದಾವೃತ
ಭರತ ಮಾತೆಯ ಮಡಿಲು
ಹುಡುಕುವ ಧಾವಂತದಲಿ
ಹೊರಟಿದ್ದರು  ಗಾಂಧಿ
ನೂಕಿದರೂ ಮನದ ಆಚೆ
ಮೌನ ಮುರಿಯಲಿಲ್ಲ ಮುಂಚೆ
ನೆಪವಾಯಿತು ರೈಲು
ಹೊರಟಿತವನೆದೆಯಲಿ
ವರ್ಣ ಜಾತಿ ಮತ ಪಂಥ ನೋಡಿ
ನಿಂತು ಯಾರ ನೂಕದೆ
ಬಾಚಿ ತಬ್ಬಿ ಜಗವ ಕರೆದು
ಕೂಗುಟ್ಟುತ ಎಚ್ಚರಿಕೆಯ ಕರೆಗಂಟೆ
ಬೆಚ್ಚಿ ಬಿತ್ತು  ನ್ಯಾಯಾಂಗ
ಅಸ್ಮಿತೆಯ ದನಿಯೊಂದು
ಗಟ್ಟಿಯಾಗಿ ಕಟಕಟೆಯ ಮೀರಿ
ಹೊರಡುವುದ ಕಂಡು
ಅಂತರಂಗಕೆ ಗುರಿಯಿಟ್ಟು
ವರ್ಣಭಾರದಿ ಬೀಗುತಿರುವ
ಬಿಳಿತಲೆಗಳ ಬಾಗಿಸಿ ನೇವರಿಸಿ
ಮತ್ತೆಂದೂ  ಎದ್ದು ಮರಳಿ
ತಿರುಗಿ ತಿವಿಯದಂತೆ ನಿಲಿಸಿ
ಮುನ್ನುಗ್ಗಿ ಹೊರಟಿದ್ದರು
ಜನರ ಜೀವ ಗಾಂಧಿ
ಕೋಟು ಅಂಗಿ ಭಾರವಾಗಿ
ಬೂಟು ಬೆಡಗು ಬೇಡವಾಗಿ
ಬರಿತೊಗಲ ಬಟ್ಟೆ ಹೊದ್ದು
ಭೂಮಿ ತೂಕದ ಮನುಜ
ಭರತಮಾತೆಯ ತನುಜ
ಭಾರತೀಯರ ಕಣ್ಣೀರು ಕುಡಿದು
ಗಹಗಹಿಸಿ ಅಟ್ಟಹಾಸ ಮೆರೆವ
ಬಂದೂಕುಗಳ ನಳಿಕೆ ತುದಿಗೆ
ಶಾಂತಿ ಸಹನೆ ದಯೆ ಕರುಣೆಗಳ
ಧೀಮಂತ ತೆರೆದೆದೆಯನೊಡ್ಡಿ
ರಾಮರಾಜ್ಯದ ಕನವರಿಕೆಯಲ್ಲಿ
ಮುಳುಗೆದ್ದು ಹೊರಟಿದ್ದರು
ಸತ್ಯ ಸತ್ವವನರಸಿ ಗಾಂಧಿ
ಹೋರಾಟದ ಕಿಡಿಗಳ
ಗೆರೆ ಎಳೆದು ಚರಕ ಕಟ್ಟಿ
ಚೈತನ್ಯದ ನೂಲು ಹಿಡಿದು
ಸ್ವಾತಂತ್ರ್ಯದ ಬಟ್ಟೆ ನೇಯ್ದು
ಭಾರತಿಯ ಸಂಕೋಲೆ ಕಳಚಿ
ಎದುರಾಳಿಯ ಮುಕ್ತಿಗೂ
ಪ್ರಾರ್ಥನೆಯ ಭಜನೆಗೈದು
ಉಪ್ಪಿನ ಋಣ ಹೊತ್ತು
ಕಡಲನೂ ಬಾಚಿ ಕರೆದು ನಾಚುವಂತೆ
ವಿಷಮ ಜಗದ ಹೊಣೆ ಹೊತ್ತು
ಹೊರಟಿದ್ದರು ಮುಂದೆ ಗಾಂಧಿ
ಬೇಗುದಿಗಳ ಕೆಂಡ ತುಳಿದು
ಹಿಂಸೆಗಳ ಮುಳ್ಳು ಹಾದಿ ಸವೆಸಿ
ಭಂಡರ ಬಂಡವಾಳ ಬಿಚ್ಚಿ
ಆಳುವವರ ಎದೆ ಬಗೆದು
ಆತ್ಮ ಹೃದಯ ಮನಸು ತೋರಿ
ಮಾನವತೆಯ ಕಂದೀಲು ಹಿಡಿದು
ವಸಾಹತು ಬುನಾದಿ ಕೆಡವಿ
ಕೆಚ್ಚಿನ ಕಿಚ್ಚು ಹೊತ್ತಿಸುತ
ಕತ್ತಲೆಯೊಳಗೆ ತನ್ನ ಬದುಕನುರಿಸಿ
ಬೆಳಕು ಬೀರಿ ಹೊರಟಿದ್ದರು
ದಿವ್ಯ ತಪಸ್ವಿ ಗಾಂಧಿ
ಅಧಿಕಾರದ ಚಳಿ ಬಿಡಿಸಿ
ಪ್ರಭುತ್ವದ ಅರ್ಥ ಬದಲಿಸಿ
ಧೀರತೆಗೆ ಹೆಮ್ಮೆ ಮೂಡಿಸಿ
ಬಲಿದಾನದ ಕೋಟೆಯ ಮೇಲೆ
ಬಾವುಟ ಹಾರುವುದ ಕಂಡು
ಬೆಂದು ಕಂದಿ ನೊಂದವರ ಕಣ್ಣೀರಿಗೆ
ಭವಿತವ್ಯದ ಸೂರ್ಯ ತೋರಿ
ಉಪವಾಸದ ಧಗೆಯಲ್ಲಿ
ಸಾಮ್ರಾಜ್ಯವನೇ ಸುಟ್ಟು
ನೆತ್ತರಿಲ್ಲದ ಕ್ರಾಂತಿ ಹಾದಿ ಕ್ರಮಿಸಿ
ಭವದಲಿದ್ದೂ ಭವಿಯಾಗದೆ
ಅನುಭಾವದ ಕಡಲಾಗಿ
ಹೃದಯವಾಗಿಲು ತೆರೆದಿಟ್ಟು
ಹೊರಟಿದ್ದರು ಯೋಗಿ ಗಾಂಧಿ
ಚಳುವಳಿಯ ಬೆಂಕಿಯಲ್ಲಿ
ಹಸಿವು ನೋವುಗಳ ಬೇಯಿಸಿ
ಮೃಷ್ಟಾನ್ನ ಅಡುಗೆ ಬಡಿಸಿ
ಕಾರ್ಮೋಡವನೆ ಹೊಕ್ಕು
ಜ್ವಾಲಾಮುಖಿಯೊಳಗೆ ಇಳಿದು
ಮೆಟ್ಟಿ ನಿಂತು ಮೆಟ್ಟಿಲಿಳಿದು
ಹೇಳದೇ ಹೇ ರಾಮ್ ಎಂದು
ಹೊರಟಿದ್ದರು ಗಾಂಧಿ
ಕೊರಳು ಬಿಗಿವ ಗುಂಡಿನಪ್ಪುಗೆಯಲಿ
ಭಾರತಿಯ ಕೈ ಬಿಟ್ಟು
ಅಹಿಂಸೆಯ ಒಂಟಿ ಮಾಡಿ
ಸತ್ಯ ಶಾಂತಿಗಳ ಅನಾಥವಾಗಿಸಿ
ಹಿಂಸೆ ರಕ್ಕಸನ ಕಬಂಧ
ಬಾಹುಗಳಲಿ ನರಳಿದ ಕೆನ್ನೆತ್ತರ
ಒಡಲುಗಳ ಮೇಲೆ ಹೂವಿಟ್ಟು
ಭಾರತಿಯ ಮುಡಿಗೆ ಬಾವುಟವನಿಟ್ಟು
ದಿಗ್ದೇಶಗಳ ತೋರಿ ಸ್ವಾತಂತ್ರ್ಯ
ಜ್ಯೋತಿಯ ಬೆಳಗಿಸಿ ತೊಳಗಿ
ಹೊರಟಿದ್ದರು ಗಾಂಧಿ
x

Thursday, 12 September 2019

ಜಗದ್ವಂದ್ಯ ಭಾರತ

ಭಾರತ ವೈವಿಧ್ಯಮಯ ಧರ್ಮ ಜಾತಿ ಮತ ಪಂಥಗಳೆಂಬ  ಅನನ್ಯವಾದ ಫಲಪುಷ್ಪಗಳ  ನಂದನವನ. ಅಖಂಡತೆ ಹಾಗೂ ಏಕತೆಯ ಸೌಂದರ್ಯದಲ್ಲಿ ನಳನಳಿಸುತ್ತಿರುವ ಇಲ್ಲಿಯ ಅಭೂತಪೂರ್ವ ವಿಭಿನ್ನ ಸಂಸ್ಕೃತಿಮಣಿಗಳ ಸಮ್ಮಿಲನ ಒಂದು ಮಹಾಬೆರಗು ಹಾಗೂ ಬೆಳಕನ್ನು ಸೃಷ್ಟಿಸಿದೆ." ಅಹಿಂಸೆಯೇ ಪರಮೋಧರ್ಮ" ಎಂದು ಸಾರಿದ ಜೈನ ಧರ್ಮದ ಉದ್ಯಾನವನವಾಗಿ, ಪ್ರೀತಿ,ಅನುಕಂಪ, ದಯೆ,ಮಾನವೀಯತೆ, ಅಂತಃಕರಣ, ಜ್ಞಾನಗಳನ್ನೇ ತನ್ನ ಕೊರಳ ಕುಸುಮಗಳನ್ನಾಗಿ ಧರಿಸಿ ಜಗತ್ತಿನೆಲ್ಲೆಡೆ ಪರಿಮಳವನ್ನೇ ಪಸರಿಸಿದ ಬುದ್ಧನ ಪವಿತ್ರ ನೆಲವಾಗಿ ; ಶೌರ್ಯ, ತ್ಯಾಗ, ಸೇವೆ, ಆಧ್ಯಾತ್ಮದ ದಾರ್ಶನಿಕ  ಗುರುನಾನಕರು ಮೆಟ್ಟಿದ ಧರೆಯಾಗಿ, ಸಮಾನತೆ, ಆಧ್ಯಾತ್ಮ ಸಾಧನೆ,ಸಮಾಜ ಸುಧಾರಣೆಯ ಹೆಮ್ಮರವನ್ನು ಬೆಳೆಸಿ ಎಳೆಹೂಟೆಗೆ ಕೊರಳು ಕೊಟ್ಟ ಸಹಸ್ರಾರು ಶರಣರ ಪುಣ್ಯಭೂಮಿಯಾಗಿ ; ಈ ದೇಶದ ಆತ್ಮವಾಗಿದ್ದು, ಮಹಾತ್ಮನಾದ ಗಾಂಧೀಜಿ ನಡೆದಾಡಿದ ನೆಲವಾಗಿ,  ಮೀರಾಬಾಯಿಯ, ಜಗನ್ನಾಟಕ ಸೂತ್ರಧಾರ ಮಾಧವ ನಲಿದಾಡಿದ ಬೃಂದಾವನವಾಗಿ, ಶಿವನ ತಾಂಡವ ನೃತ್ಯಕ್ಕೆ ಹಿಮಾಲಯವಾಗಿ, ನಿರ್ವಯಲ ನೀಲವನೇ ತೋರಿದ ಸೂಫಿಗಳ ತಾಣವಾಗಿ, ಜೀವಸಂಕುಲಕ್ಕೆಲ್ಲಾ ಹಸಿರುಸಿರನ್ನು ನೀಡಿದ ಯಮುನೆ ಗಂಗೆಯರನ್ನು ತಬ್ಬಿಕೊಂಡ ಮಾತೆಯಾಗಿ, ಭರತಭೂಮಿಯ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಆಧ್ಯಾತ್ಮಿಕ ಹಿರಿಮೆ ಅವರ್ಣನೀಯ ಹಾಗೂ ಅನನ್ಯ. ಜಗತ್ತಿನ ಧರ್ಮಗಳೆಲ್ಲಾ ತಮ್ಮ ತಮ್ಮ ಅಸ್ಮಿತೆಗಾಗಿ ಏಕಾಂಗಿಯಾಗಿ ಹೋರಾಡುತ್ತಿರುವ ಸಮಕಾಲೀನ ಸಂದಿಗ್ಧ ಸಂದರ್ಭದಲ್ಲಿ ಅಗಣಿತ ಜಾತಿ, ಧರ್ಮ, ಮತ, ಪಂಗಡಗಳನ್ನು ಶಿಶುಗಳಂತೆ ತನ್ನೊಡಲಲ್ಲಿಟ್ಟುಕೊಂಡು, ಅತ್ತು ಹಠವಿಡಿದಾಗ ಸಮಾಧಾನದಿಂದ  ತೂಗಿ ಪೋಷಿಸಿ ಭಾವೈಕ್ಯತೆಯ ತಪಸ್ಸನ್ನಾಚರಿಸುತ್ತಿರುವ  ಭಾರತಿ ನಮ್ಮ ಹೆಮ್ಮೆ ಹಾಗೂ ಸ್ವಾಭಿಮಾನದ ದಿವ್ಯ ಪ್ರತಿರೂಪ. ಹಿಂದೂ ಮುಸಲ್ಮಾನರೆನ್ನದೇ ಐಕ್ಯತೆಯ ಸದ್ಭಾವದಲ್ಲಿ ಮಿಂದು ಮೊನ್ನೆ ತಾನೆ ಆಚರಿಸಿದ ಮೊಹರಂ ಹಬ್ಬ ನಮ್ಮ ದೇಶದ ಇಂತಹ ಐಕ್ಯತೆಯ ಸರ್ವಧರ್ಮ ಸಮಭಾವದ ಪರಂಪರೆಯಲ್ಲಿ ಹರಿಯುತ್ತಿರುವ ಒಂದು ಅನುಪಮ ಪರ್ವನದಿ. ಅವರಿವರೆನ್ನದೇ  ಸಕಲರಿಗೂ  ಸಕ್ಕರೆಯ ಸಿಹಿಯನ್ನು ಹಂಚಿ ಲೇಸನೇ ಬಯಸುವ ಜಾತ್ರೆ, ಉರುಸ್, ಮೊಹರಂ, ಗಣೇಶ ಚತುರ್ಥಿಯಂತಹ ಹಬ್ಬಗಳು ನಮ್ಮ ವಸುಧೈವ ಕುಟುಂಬಕಂ ಎಂಬ ಮಹಾಪರಂಪರೆಯ ರೂಪಕಗಳಲ್ಲಿ ಅನನ್ಯವಾದವುಗಳು. ಈ ಎಲ್ಲ ಸಂಗತಿಗಳಿಗೆ ಅಲಂಕಾರ ಸ್ವರೂಪವನ್ನು ನೀಡುವ ಹಾಗೆ ಇತ್ತೀಚೆಗೆ ಬಿಡುಗಡೆಯಾದ ಒಂದು ಕೃತಿ ನನ್ನ ಗಮನವನ್ನು ಅತೀವವಾಗಿ ಸೆಳೆಯಿತು.

ರಾಗಂ ಎಂದೇ ನಾಡಿಗೆ ಚಿರಪರಿಚಿತವಾಗಿರುವ ಡಾ. ರಾಜಶೇಖರ ಮಠಪತಿಯವರ "ಜಗದ್ವಂದ್ಯ ಭಾರತ" ಕಾದಂಬರಿ ಕೃತಿ ಭಾರತಿಯ ಮುಕುಟಕ್ಕೊಂದು ಕನ್ನಡದ ಗರಿಯೆಂಬಂತೆ ಮೈದಾಳಿರರುವುದು ಅರ್ಥಪೂರ್ಣವಾಗಿದೆ.ಮತ್ತೆ ರಾಷ್ಟ್ರೀಯತೆಯ ವ್ಯಾಖ್ಯಾನದ ಚರ್ಚೆ ಮುನ್ನಲೆಗೆ ಬಂದಿರುವ ಈ ಹೊತ್ತಿನಲ್ಲಿ, ಈ ಕಾದಂಬರಿ ಲೋಕಾರ್ಪಣೆಯಾಗಿ ತನ್ಮೂಲಕ ಸ್ವಗತದ ಮಾರ್ಮಿಕ ಉತ್ತರವನ್ನು ನೀಡುತ್ತಿರುವಂತೆ ರಚನೆಯಾಗಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ಇದು ನಮ್ಮ ದೇಶದ ಬಾವುಟ ಏರಿದ ಎತ್ತರ, ಆವರಿಸಿಕೊಂಡ ಆಳದ  ಚರಿತ್ರೆಯನ್ನು ಕಟ್ಟಿಕೊಡುವ ಕಾದಂಬರಿಯಾಗಿರುವಂತೆಯೇ, ನಮ್ಮ ದೇಶದ ಅನನ್ಯ ಸಂಸ್ಕೃತಿ ಪರಂಪರೆಯನ್ನು ಎತ್ತಿಹಿಡಿಯುವ ಮಹತ್ವದ ಕೃತಿಯಾಗಿಯೂ ಗಮನ ಸೆಳೆಯುತ್ತದೆ. ರಾಷ್ಟ್ರಕವಿ ಜಿ. ಎಸ್ ಎಸ್ ರವರ  ಕವಿತೆಯ ಸಾಲುಗಳಂತೆ ನಮ್ಮ ದೇಶದ ಇತಿಹಾಸವೆಂಬ ಸುರಂಗವನ್ನು ಪ್ರವೇಶಿಸಿ ಸ್ವಾಭಿಮಾನದ ಬಾವುಟದ ಮೇಲೆ ಬೆಳಕು ಚೆಲ್ಲುವ ಮಹತ್ವದ ದಾಖಲೆಯಾಗಿ ಈ ಕೃತಿ  ಆಕರದ ಸ್ಥಾನವನ್ನು ಪಡೆದುಕೊಂಡರೂ ಅಚ್ಚರಿಯೇನಲ್ಲ. ಸರಜೂ ಕಾಟ್ಕರ್ ರವರರು ರಾಷ್ಟ್ರ ಧ್ವಜದ ಮಹತ್ವ ಎಂಬ ಪ್ರಬಂಧದಲ್ಲಿ  ನಮ್ಮ ಧ್ವಜದ ಇತಿಹಾಸವನ್ನು ಸಾಂದರ್ಭಿಕವಾಗಿ ಸ್ಮರಿಸಿದ್ದಾರೆ. ಇಂತಹ ಕೆಲವೇ ಕೆಲವು ಬರಹಗಳನ್ನು ಹೊರತುಪಡಿಸಿದರೆ  ಇದುವರೆಗೂ ಕನ್ನಡದಲ್ಲಿ ನಮ್ಮ ದೇಶದ ಬಾವುಟದ ಚರಿತ್ರೆಗೆ ಸಂಬಂಧಿಸಿದ ಕೃತಿಗಳು ರಚನೆಯಾಗಿರುವುದು ವಿರಳಾತಿವಿರಳ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ  ನಮ್ಮ ಭಾರತ ಮಾತೆಯ ನೆತ್ತಿಯ ಮೇಲಿನ ಸೆರಗಿನ ಪ್ರತೀಕದಂತಿರುವ ಧ್ವಜಚರಿತ್ರೆಯನ್ನು ಕಾದಂಬರಿಯ ವಿನೂತನ ಪ್ರಯೋಗದ ಮೂಲಕ ಕಟ್ಡಿಕೊಡುತ್ತಿರುವ ರಾಗಂರವರಿಗೆ ಕೃತಜ್ಞತೆಗಳನ್ನು ಸಲ್ಲಿಸಲೇಬೇಕು. ರಾಗಂರವರಿಗೆ ಜನ್ಮದಿನದ ಶುಭಾಶಯಗಳನ್ನು  ಹೇಳಬೇಕಾದ ಈ ಶುಭಸಂದರ್ಭದಲ್ಲಿ ನೆನೆಯಲೇಬೇಕಾದ ಅವರ ಈ ಬಾವುಟದ ಕತೆಯ ಬೆಳಕು ಭಾರತೀಯರ ಮನೆಮನಗಳನ್ನು ಆವರಿಸಿ ಬೆಳಗಲಿ. ರಾಗಂರವರ ಲೇಖನಿ ಮತ್ತಷ್ಟು ಬೆಳಕಿನ ಬೆಳ್ಳಿರೇಖೆಗಳನ್ನು ಸೃಜಿಸಲಿ ಎಂದು ಹಾರೈಸೋಣ.

ಚಹಾ ಮತ್ತು ನಾನು

 ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...