Total Pageviews
Tuesday, 16 February 2021
Friday, 26 June 2020
ನೀನೊಮ್ಮೆ ಒಡಲುಗೊಂಡು ನೋಡಾ..
ನೀನೊಮ್ಮೆ ಒಡಲುಗೊಂಡು ನೋಡಾ..
ಅದು ಬ್ರಾಹ್ಮಿ ಮುಹೂರ್ತಕಾಲ. ಸಾಕಿ ಹೆಣೆದು ಹಾಸಿದ ಕೌದಿಯಿಂದ ಮೈಮನಗಳೆಲ್ಲವೂ ಎಚ್ಚರಗೊಂಡು ಮಂಜುಗಣ್ಣಿನಲ್ಲಿಯೇ ಮನೆಯ ಮುಂದಿನ ಉದ್ಯಾನವನದೊಳಗೆ ಪ್ರವೇಶಿಸಿದೆ. ಹಳದಿಯುಟ್ಟು ನಿಂತ ಅಲಂಕಾರದ ಗಿಡದೆಲೆಗಳ ಮೇಲೆ ಆಗ ತಾನೇ ಭುವಿಗಿಳಿದು ವಿರಮಿಸುತ್ತಿದ್ದ ಇಬ್ಬನಿಯ ಹನಿಗಳನ್ನು ಹುಡುಕಿ ಮೈಸವರಿದೆ. ಕಾಯುತ್ತಿದ್ದವೋ ಏನೋ ಅಂಟಿಕೊಂಡುಬಿಟ್ಟವು ದೂರದಿಂದಲೇ ಕಾಡಬೇಕೆಂದಿದ್ದ ಹಸ್ತಗಳಿಗೆ. ಎತ್ತಿಕೊಂಡೆ ಮುದ್ದಿನ ಕೂಸನ್ನು ತಾಯಿ ಹಿಡಿದೆತ್ತಿಕೊಂಬಂತೆ. ಕಣ್ಣುಗಳಿಗೆ ಸವರಿ ರೆಪ್ಪೆಗಳಿಂದ ತಬ್ಬಿಕೊಂಡೆ. ನೇತ್ರದೊಳಗೆ ಮಡುಗಟ್ಟಿದ ಅಂತರಂಗದಿಂದುದಿಸಿದ ಮಂಜಿನೊಳಗೆ ಬಹಿರಂಗದ ಇಬ್ಬನಿಯೂ ಐಕ್ಯವಾಗಿ ಅದ್ವೈತವಾಗುವುದರಲ್ಲಿರುವ ಅದಮ್ಯ ಸುಖವನ್ನನುಭವಿಸಿದೆ ಕಣ್ಣಾಲೆಗಳನ್ನು ಮೌನದಿಂದ ಮುಚ್ವಿಕೊಂಡು. ಆಗ ಶೂನ್ಯವೇ ಸಂಪಾದನೆ; ಭಾವವೇ ಆಲಾಪನೆ; ಧ್ಯಾನವೇ ಸಂಶೋಧನೆ. ಹಿಂದಿನ ರಾತ್ರಿ ಹನಿದ ಮಳೆಯಿಂದ ಮಜ್ಜನಗೈದ ಗಿಡಮರಗಳು ಹಸಿರಿನ ಹೊಸ ದಿರಿಸನ್ನುಟ್ಟು ಮಧುವಣಗಿತ್ತಿಯಂತೆ ಶುಭೋದಯದ ಸ್ವಾಗತಕ್ಕಾಗಿ ಸಿದ್ಧವಾಗಿ ನಿಂತಿದ್ದವು. ಹೃದಯದಿಂದ ಹೊರಟ ರಾಗರತಿ ಕಣ್ಣುಗಳ ಮೂಲಕ ಮತ್ತೆ ಇಳೆಗಿಳಿಯುತಿತ್ತು ಹನಿ ಹನಿಯ ಬನಿಯಾಗಿ. ಕುವೆಂಪು ಹೇಳುವ "ಆನಂದಮಯ ಈ ಜಗಹೃದಯ" ವೆಂದರೆ ಯಾವುದೆಂದು ಸರಳವಾದ ಪ್ರಯೋಗದ ಮುಖೇನ ತೋರಿದ ಇಬ್ಬನಿಯ ಹನಿ ಗೆಳೆಯರಿಗೆ ಕೈಮುಗಿದೆ. ಉದ್ಯಾನವನದಲ್ಲಿಯೇ ಸುಳಿದಾಡಿದೆ ಮಾರುತನ ಹೆಗಲ ಮೇಲೆ ಕೈಹಾಕಿ. ರಾತ್ರಿಯೆಲ್ಲಾ ಹರಿದಾಡಿ ಆಯಾಸಗೊಂಡು ಮಂದಗಾಮಿನಿಯಾಗಿದ್ದ ಒಡಲಿಲ್ಲದ ನಿರಾಕಾರನ ಕುಶಲೋಪರಿಯನ್ನು ವಿಚಾರಿಸಿದೆ.
"ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು ನೀನೊಮ್ಮೆ ಜರಿದು ನುಡಿಯದಿರು
ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥ"
ಎಂಬ ಜೇಡರ ದಾಸಿಮಯ್ಯನ ವಚನದ ಸಾಲುಗಳಲ್ಲಿರುವ ಒಡಲುಗೊಳ್ಳುವ ವ್ಯಕ್ತಿತ್ವ ವಾಯುದೇವನದಲ್ಲ ಎಂದ ಮೇಲೆ ಸತ್ಯ ಅಸತ್ಯಗಳ ದ್ವಂದ್ವಗಳ ಗೊಡವೆಯಿಲ್ಲದೇ ಆತ ಹೊತ್ತು ತಂದ ಎಲ್ಲ ಸುದ್ದಿ ಸಮಾಚಾರಗಳನ್ನೂ ಎದೆಯೊಳಗಿಳಿಸಿಕೊಂಡೆ. ಮಾತನಾಡಿಸುತ್ತಲೇ "ನೀನೊಮ್ಮೆ ಒಡಲುಗೊಂಡು ನೋಡಾ" ಎಂದು ವಚನಕಾರರು ಕಂಡ ಕನಸನ್ನು ನಾಲಿಗೆಗೆ ತಂದು ಪುನರುಚ್ಚರಿಸಿದೆ. ಮಣಿಯಲಿಲ್ಲ ಆಸಾಮಿ. ಹುಸಿ ಹಾಗೂ ಹಸಿವುಗಳೇ ಜಗತ್ತನ್ನಾಳುವವರ ರಾಜತಂತ್ರಗಳಲ್ಲವೇ. ಇದೆಲ್ಲವೂ ಮಾರುತನಿಗೆ ಗೊತ್ತಿದೆ. ಒಡಲುಗೊಂಡರೆ ಯುಗಯುಗಗಳಿಂದ ಕಾಪಾಡಿಕೊಂಡು ಬಂದ ಪಾವಿತ್ರ್ಯ ಕ್ಷಣಾರ್ಧದಲ್ಲಿಯೇ ಮಣ್ಣುಸೇರುವುದೆಂದು. ಪ್ರಹ್ಲಾದನ ತಂದೆ ಹಿರಣ್ಯಕಶ್ಯಪನಲ್ಲಿ ಮಡುಗೊಂಡ ಅಧಿಕಾರದ ಮದ ತನ್ನನ್ನೂ ಸುಮ್ಮನೇ ಬಿಟ್ಟೀತೇ? ರಾಮಾಯಣದ ಮರ್ಯಾದಾ ಪುರುಷೋತ್ತಮನನ್ನು, ಮಹಾಭಾರತದ ಲೀಲಾ ಪುರುಷೋತ್ತಮನನ್ನು ಒಡಲು ಸತಾಯಿಸಿದ್ದನ್ನು ನೆನೆಸಿಕೊಂಡ ಮಾರುತ ಒಂದಾದ ನಂತರ ಒಂದರಂತೆ ದೃಷ್ಟಾಂತಗಳನ್ನು ಬೋಧಿಸಿದ. ತನ್ನ ಜೀವಮಾನದಲ್ಲಿ ಎಂತಿಂಥವರನ್ನು ಕಂಡಿಲ್ಲ ಹೇಳಿ ಆತ. ಭುವನದ ಒಂದು ತುದಿಯಿಂದ ಮತ್ತೊಂದು ಅಂಚಿನವರೆಗೂ ಸಾಮ್ರಾಜ್ಯ ಕಟ್ಟಿ ಮೆರೆದವರು, ಕಟ್ಟಿದ ಕೋಟೆ, ಕಟ್ಟಿಕೊಂಡ ಮಹಾರಾಣಿಯರನ್ನು ಬಿಟ್ಟು ಎಲ್ಲೋ ಮಣ್ಣಾದವರು, ಹೇಳಹೆಸರಿಲ್ಲದಂತೆ ರಣರಂಗದೊಳಗೆ ಸಮಾಧಿಯಾಗಿ ನರಿತೋಳಗಳಿಗೆ ಅಹಾರವಾದವರು, ಅಧಿಕಾರದ ಅಮಲಿನಲ್ಲಿ ಮನುಷ್ಯತ್ವವನ್ನು ಮರೆತು ಜಾರಿಹೋದವರು, ಹಣದ ಹೊಳೆಯಲ್ಲಿ ಅಂಧರಾಗಿ ಕೊಚ್ವಿಹೋದವರು, ಹಗರಣಗಳಲ್ಲಿ ಕಳೆದು ಕೊಳೆತು ಹೋದವರು, ಮೋಸ ವಂಚನೆಗಳನ್ನೇ ಹಾಸಿಕೊಂಡು ಹೊದ್ದು ಒಳಗೇ ಮಾಯವಾದವರು, ಹಸಿವಿನಿಂದ ಕಂಗೆಟ್ಟು ತಿಪ್ಪೆಯಲ್ಲಿ ಅಳಿದುಳಿದ ಎಂಜಲೆಲೆಗಳ ಮೇಲಿರುವ ಅನ್ನದಗುಳನ್ನುಂಡು ಹೊಟ್ಟೆ ಹೊರೆದುಕೊಳ್ಳುವ ಅಮಾಯಕರು, ಕೊರೊನಾ ಮಹಾಮಾರಿಯಿಂದಾಗಿ ಚಡಪಡಿಸಿ ಒಲ್ಲದ ಜೀವವನ್ನು ಕೈಯ್ಯಲ್ಲಿ
ಹಿಡಿದುಕೊಂಡು ತುತ್ತಿಗಾಗಿ ಅಂಡಲೆಯುತ್ತಿರುವ ಕೂಲಿಗಳು ಹೀಗೆ ಒಂದೇ ಎರಡೇ ಮಾರುತ ದರ್ಶಿಸಿ ಉದಾಹರಿಸಿದ ಒಡಲುಗೊಂಡ ಮಾನವ್ಯದ ಸ್ವರೂಪಗಳು. ಇಂತಹ ಅಸಂಖ್ಯಾತ, ಅಪರಿಮಿತ, ಅಗಣಿತ, ಅನಂತ ಒಡಲುಗಳನ್ನು ತನ್ನ ತೀಕ್ಷ್ಣ ದೃಷ್ಟಿ ಮಾತ್ರದಿಂದಲೇ ದಹಿಸಿ ಅರಗಿಸಿಕೊಂಡವನ ಮುಂದೆ "ನೀನೊಮ್ಮೆ ಒಡಲುಗೊಂಡು ನೋಡಾ.."ಎಂದವನ ನನ್ನ ಸ್ಥಿತಿ ಹೇಗಿರಬೇಡ ಎಂದೊಮ್ಮೆ ಕಲ್ಪಿಸಿಕೊಳ್ಳಿ. ಹೀಗೆನ್ನುತ್ತಲೇ ಆತ ಗಹಗಹಿಸಿ ನಕ್ಕುಬಿಟ್ಟ ವ್ಯಂಗ್ಯವಾಗಿ ಬಿರುಬೀಸಿ ಸೆಳೆದುಬಿಟ್ಟ ವ್ಯಗ್ರವಾಗಿ. ತಂಪಾದ ಇರುಳಕೊನೆಯಲ್ಲಿಯೂ ಬಿಸಿಯಾಗಿ ತಾಪವೇರಿಸಿಕೊಂಡುಬಿಟ್ಟ ಎದೆಯೊಳಗೆ ಕೋಪದ ಕಿಚ್ಚನ್ನು ಹೊತ್ತಿಸಿಕೊಂಡವನಂತೆ. ಸಂದರ್ಭವನ್ನರಿತ ನಾನು "ಶಾಂತನಾಗು ಗೆಳೆಯಾ..ಶಾಂತನಾಗು..." ಎಂದು ಉಪಚರಿಸಿ "ನೀನು ಗಾಂಧಿಯ ಹೆಸರು ಹೇಳಲಿಲ್ಲ; ವಿವೇಕಾನಂದರ ನಾಮ ಉಲಿಯಲಿಲ್ಲ; ಅರವಿಂದರ ಮಾತೆತ್ತಲಿಲ್ಲ; ಪರಮಹಂಸರನ್ನೂ ಸ್ಮರಿಸಲಿಲ್ಲ ; ಶಾರದಾಂಬೆಯನ್ನು ನೆನೆಯಲಿಲ್ಲ..." ಎಂದು ಅಚ್ಚುಕಟ್ಟಾಗಿಯೇ ವಾಗ್ವಾದವನ್ನು ರೂಪಿಸಿ ಮಂಡಿಸಿದೆ. ಸತ್ಯವನ್ನೊಪ್ಪಿಕೊಂಡಂತೆ ಕಂಡ ಗಾಳಿಯ ಸದ್ದು ಕಡಿಮೆಯಾಯಿತೋ ಏನೋ ಕೋಪವಂತೂ ತಣ್ಣಗಾಯಿತು. ಮತ್ತೆ ಆತ ಎರೆಯುವ ತಂಪಿನ ಮಜ್ಜನಕ್ಕಾಗಿ ಕಾದು ಕುಳಿತೆ. ಅಲೆ ಅಲೆಯಾಗಿ ಮಂದಗಮನೆಯಾಗಿ ಅಪ್ಪಳಿಸಿದ ಅಂತರಂಗದ ಪರದೆಗಳಿಗೆ. ತೂಗುವ ತೊಟ್ಟಿಲಿನಂತಹ ಹೊಯ್ದಾಟದ ಪರಮಸುಖವನ್ನುಂಡ ಅಂತರಂಗದ ರಂಗು ರಂಗಿನ ಭಾವಪರದೆಗಳು ಒಳಗಿಳಿದ ವಾಯುವಿನ ಆರ್ದ್ರತೆಯಿಂದ ಸಂತೃಪ್ತಿಯನ್ನನುಭವಿಸಿದವು. ರಂಗದೊಳಗೆ ಮಗುವಾಗಿ ಅಸಂಗತ ನಾಟ್ಯವಾಡಿದೆ. ಮೊಲವಾಗಿ ಮುಂಗಾಲನ್ನೆತ್ತಿ ನೆಕ್ಕಿ ಕುಪ್ಪಳಿಸಿದೆ.
ಆಮೆಯಾಗಿ ತಾಳ್ಮೆಯಿಂದ ಕತ್ತು ಹೊರಚಾಚಿ ಸಂಭ್ರಮದ ನಿರಾಳ ಹೆಜ್ಜೆಗಳನ್ನಿಟ್ಟು ತಣಿದೆ. ಭಾವಪೂರ್ಣವಾಯಿತು ಅಂತರಂಗ ಆಕಸ್ಮಿಕವಾಗಿ ಒದಗಿಬಂದ ಶುಭೋದಯದ ರಸಘಳಿಗೆಯಲ್ಲಿ. ಬಸವಣ್ಣನವರು ಹೇಳುವ ಅಂತರಂಗ ಶುದ್ದಿಯೆಂದರೆ ಇದೇ ಅಲ್ಲವೇ ಎಂದೆನಿಸಿತು ನನಗೆ. ಅರಿವಿಲ್ಲದಂತೆಯೇ ಅದುವರೆಗೂ ಆ ರಂಗದಲ್ಲಾಡಿದ ಬದುಕಿನ ವಿಕಟತೆಗಳು ಭಾಷ್ಪಗಳ ಮೂಲಕ ಹೊರಬಂದವು ಬಹಿರಂಗದ ಇಬ್ಬನಿಯ ಹನಿಗಳನ್ನು ಆಲಂಗಿಸಿ ತಮ್ಮ ಪಾಪಗಳನ್ನು ಕಳೆದುಕೊಳ್ಳಲು. ಇದೇ ಇರಬೇಕು ಅರಿಸ್ಟಾಟಲ್ ನ ಕೆಥಾರ್ಸಿಸ್( ಭಾವಶೋಧನೆ) ಎಂದುಕೊಂಡನುಭವಿಸಿದೆ. ಗ್ರೀಕ್ ತತ್ವಜ್ಞಾನಿಯ ಸಿದ್ಧಾಂತವೊಂದನ್ನು ಹೀಗೆ ಅಳವಡಿಸಿಕೊಂಡು ಅನುಭವಿಸಿದ ಅನುಯಾಯಿಯಾದೆ. "ಬೆಳಗುವೆನಿಲ್ಲಿ ಲೌಕಿಕಮನ್ ಅಲ್ಲಿ ಜಿನಾಗಮಂ" ಎಂದ ಪಂಪನಿಗೂ ಬನವಾಸಿ ದೇಶದಲ್ಲಿ ಇದೇ ಅನುಭವವಾಗಿರಬೇಕಲ್ಲವೇ ? ಎಂದು ಬೀಗಿದೆ. ಇಷ್ಟೆಲ್ಲಾ ಸಂಕಥನ ಕಟ್ಟಿ ನಿಮ್ಮ ಮುಂದೆ ಹೀಗೆ ಬಯಲಾಗುತ್ತಿರುವುದಕ್ಕೂ ಒಂದು ಗಹನವಾದ ಕಾರಣವಿದೆ. ಅದು ವ್ಯಷ್ಟಿ ಪ್ರಜ್ಞೆಯ ಪ್ರತಿಫಲ. ನಾನು ಒಡಲುಗೊಂಡ ದಿನವಾದ ಜೂನ್ ೨೫, ಮತ್ತೊಂದು ಅರ್ಥದಲ್ಲಿ ನನಗೆ ಜಗತ್ತು ಒಡಲುಗೊಂಡ ದಿನವೂ ಹೌದು. ಮೊದಲನೇಯದು ವ್ಯಷ್ಟಿ ಪ್ರಜ್ಞೆ. ಎರಡನೇಯದು ಸಮಷ್ಟಿ ಪ್ರಜ್ಞೆ. ವಿಶಾಲಾರ್ಥದಲ್ಲಿ ನನಗೆ ಇವೆರಡೂ ಹುಟ್ಟಿಕೊಂಡ ದಿನವೂ ಹೌದು. ನಾನು ಹುಟ್ಟಿದ ದಿನಕ್ಕೂ, ಅಂದೇ ಸಂಭವಿಸಿದ ಭಾವಶೋಧನೆಯ ಈ ಲೀಲಾವಿಲಾಸಕ್ಕೂ ಕಾಕತಾಳೀಯ ಸಂಬಂಧವಷ್ಟೇ ಇರಲಾರದು ಎಂದೇ ನನ್ನ ನಂಬಿಕೆ. ಹೆಂಡತಿ ಎದ್ದು ಬಂದು ಹಾರೈಸಿದಳು. ಹುಟ್ಟುಹಬ್ಬವೆಂದರೆ ಏನೆಂದು ಅರಿಯದ ಮುಗ್ಧ ಜನಪದ ಸಮುದಾಯದ ಸಂಪ್ರದಾಯದಲ್ಲಿಯೇ ಬೆಳೆದುಬಂದ ನಮಗೆ ಇದೊಂದು ಮುಜುಗರದ ದಿನ. ತಿರುಳಿಗಿಂತ ರಂಗುರಂಗಿನ ಮುಲಾಮಿನ ಬಟ್ಟೆಯನ್ನುಟ್ಟು ನವವಧುವಿನಂತೆ ಕಂಗೊಳಿಸುವ ವೃತ್ತಾಕಾರದ ಕೇಕು, ಅದರ ಮೇಲೆ ಬಣ್ಣದ ಮುಲಾಮಿನಿಂದ ಬರೆದ ಶುಭಾಶಯದ ಅಲಂಕಾರಿಕ ಕೆತ್ತನೆ, ಮೇಲೊಂದು ಹೊತ್ತಿಸಿದಾಗ ಸುರ್ ಎಂದು ನಭದತ್ತ ಮುಖಮಾಡಿ ಚಿತ್ತಾರಗೊಳ್ಳುವ ಮಾಂತ್ರಿಕ ಮೇಣದಬತ್ತಿ, ಪ್ಲಾಸ್ಟಿಕ್ ಕತ್ತಿ, ಮನೆಯಲ್ಲಿರುವವರ ಬಿಟ್ಟ ಕಣ್ಣು ಬಿಟ್ಟಂತೆ ಸದಾ ಸಿದ್ಧವಾಗಿರುವ, ಜಂಗಮವಾಣಿಯ ತೆರೆದ ಕಣ್ಣುಗಳ ಕ್ಯಾಮರಾಗಳು, ಕೆಂಪು ಜುಟ್ಟಿನ ಒಂದಷ್ಟು ಸಾಂತಾಕ್ಲಾಸ್ ನ ಟೋಪಿಗಳಿದ್ದರೆ ಮುಗಿಯಿತು ಈ ಹೊತ್ತಿನ ಹುಟ್ಟಿದ ಹಬ್ಬದ ಆಚರಣೆಯ ಸಂಭ್ರಮ ಮುಗಿಲುಮುಟ್ಟಿಬಿಡಲು. ಇದಾವುದರ ಸೆಳೆತವೇ ಇಲ್ಲದವರಂತೆ ಬದುಕಿದ ಕುಟುಂಬದವರ ಕುಡಿಯಾಗಿ ನನಗಿದರ ಪರಿಚಯ ಬಹಳ ಕಡಿಮೆ. ಪುರಾಣವೆಂದು ಹೀಗಳೆಯದಿರಿ.
ಬಯಲು ಸೀಮೆಯ ನೆಲಮೂಲ ಸಂಸ್ಕೃತಿಯಲ್ಲಿ ಒಡಲುಗೊಂಡವರೆಲ್ಲರಿಗೂ ಸಾಮಾನ್ಯವಾಗಿ ಇದೇ ಇತಿಹಾಸದ ಹಿನ್ನೆಲೆಯಿದೆ. ಸಾಕಿಯು ಸ್ನಾನ ಮಾಡೆಂದು ಗದರಿಸಿದ ಹೊತ್ತಿಗೆ ಪ್ರಕೃತಿಯೂ ಮಳೆರಾಜನ ಪ್ರೇಮದ ಹೊಳೆಯಲ್ಲಿ ಮಿಂದೆದ್ದಿತ್ತು. ಪ್ರಾತಃಕಾಲ ನನ್ನೊಳಗೆ ಸಂಭವಿಸಿದ ಅಂತರಂಗದ ಸ್ನಾನವೂ ನನ್ನನ್ನು ನವನವೋನ್ಮೇಶನನ್ನಾಗಿ ಪರಿವರ್ತಿಸಿಬಿಟ್ಟಿತ್ತು. ಮೊಬೈಲಿನಲ್ಲಿ ಘಂಟಾನಾದಗೈಯ್ಯುತ್ತಾ ಧಾವಿಸುತ್ತಿದ್ದ ಶುಭಾಶಯಗಳ ಹೊಳೆಯಲ್ಲಿ ಅಭ್ಯಂಜನಗೈದು ವಿನೀತನಾದೆ. ಇದು ಕೇವಲ ವ್ಯಷ್ಟಿಯ ಸಂಕಥನವಲ್ಲ. ಕನಿಷ್ಠ ತಾವು ಒಡಲುಗೊಂಡ ಘಳಿಗೆಯೂ ಗೊತ್ತಿರದವರೆಲ್ಲರಿಗೂ ಸಲ್ಲಲೇಬೇಕಾದ ನುಡಿನಮನ. ಜನುಮದಿನದ ಸುಳುಹೂ ಇಲ್ಲದ ನನ್ನ ಸಾಕಿಯರಿಬ್ಬರೂ ಈ ವಿಸ್ಮೃತ ಸಮಯದಾಯದ ಪ್ರತಿನಿಧಿಗಳೇ. ಪಕ್ಕದ ಮನೆಯ ಅಜ್ಜಿಯೊಬ್ಬಳು ತೀರಿ ಹೋದಾಗ ಆಕೆಯ ವಯಸ್ಸಿನ ಲೆಕ್ಕಾಚಾರವೇ ಅದಾರಿಗೂ ನಿಲುಕಲಿಲ್ಲ. ಡಿಜಿಟಲ್ ಯುಗದಲ್ಲಿಯೂ ತಾರೀಖು, ದಿನ, ಮುಹೂರ್ತ, ಘಳಿಗೆಗಳನ್ನು ಅವುಗಳೊಂದಿಗೆ ಜೀವಿಸುತ್ತಲೇ ದಾಖಲಿಸಲು ಹೆಣಗಾಡಿ, ಮರೆತು ಸಹವಾಸವೇ ಬೇಡವೆಂದರೂ, ಮತ್ತೆ ಕ್ಯಾಲೆಂಡರಿನ ಮುಂದೆ ಧ್ಯಾನ ಮಾಡುವ ನಾವೆಲ್ಲಿ ? ಕ್ಯಾಲೆಂಡರುಗಳೇ ಇಲ್ಲದ ಹುಣ್ಣಿಮೆ ಬೆಳದಿಂಗಳು, ಅಮವಾಸ್ಯೆಗಳ ಕರಿನೆರಳುಗಳನ್ನೇ ಕಾಲವಳೆಯಲು ಆಧಾರವಾಗಿಟ್ಟುಕೊಂಡ ಯುಗದ ಕತ್ತಲೆಯೊಳಗೆ, ಹೊತ್ತು ಗೊತ್ತಿಲ್ಲದೇ ಹುಟ್ಟಿ, ಬೆಳಕಿಲ್ಲದ ದಾರಿಯಲ್ಲಿಯೇ ಕನಸುಗಳನ್ನು ಕಟ್ಟಿ, ಮುಗಿಲೆತ್ತರದ ಭರವಸೆಗಳನ್ನು ಬೆಳೆಸಿ, ತಮ್ಮದೆಲ್ಲವನ್ನೂ ಬದುಕಿಗೆ ಸಮರ್ಪಿಸಿ, ಗೂಡಿನೊಳಗಿದ್ದು ವಂಶದ ಮರಿಗಳನ್ನು ಸಿಂಹಾಸನದ ಮೇಲೆ ಹೊತ್ತು ಮೆರೆಸುವ ಜನಪದರ ಕಾಲಭೈರವನೆಲ್ಲಿ ?. ಈ ಹೊತ್ತಿನ ಹುಟ್ಟುಹಬ್ಬಗಳು ನನ್ನಲ್ಲಿ ಈ ಜಿಜ್ಞಾಸೆಯನ್ನು ಹುಟ್ಟಿಸಿವೆ. ಸಾಮಾಜಿಕ ಜಾಲತಾಣಗಳಾದಿಯಾಗಿ ಗೆಳೆಯರ ಬಳಗ, ಕೇಕು, ಹಾರ ತುರಾಯಿಗಳೊಂದಿಗೆ ಎಲ್ಲೆಲ್ಲೂ ಸಂಭ್ರಮಿಸುವ ಹುಟ್ಟಿದ ಹಬ್ಬ ನಮಗೆ ವರುಷಕ್ಕೊಮ್ಮೆ ಸಂಭವಿಸಿದರೆ, ತಮ್ಮದೇ ಜನುಮದಿನದ ಸುಳಿವನ್ನಿಟ್ಟುಕೊಳ್ಳದ ಸಾಕಿಯರಿಗೆ ನಿತ್ಯವೂ ಹುಟ್ಟುಹಬ್ಬವೇ. ಪ್ರತಿನಿತ್ಯ ತಮ್ಮವರೆಲ್ಲರ ಬದುಕನ್ನು ಹಸನುಗೊಳಿಸಿ, ಎಲ್ಲರೆದೆಯೊಳಗೂ ಚೈತನ್ಯವನ್ನು ತುಂಬಿ, ಬೇಂದ್ರೆಯವರು ಹೇಳುವ ಹಾಗೆ ಅಂತರಂಗದಲ್ಲಿ ತೊಂತನನ ಹಾಡಿದರೆ ಮುಗಿಯಿತು ಅವರು ಮತ್ತೆ ಮರುಹುಟ್ಟು ಪಡೆದಂತೆಯೇ ಅಲ್ಲವೇ ? ನಿತ್ಯದ ಕಾಯಕದಲ್ಲಿ ಒಂದರೆಘಳಿಗೆಯ ಲಯ ತಪ್ಪಿದರೂ ಸಾಕು; ಅವರೆದುರಿಸುವ ಸಂಕಟಗಳನ್ನೊಮ್ಮೆ ಕಣ್ಣೆದುರಿಗೆ ತಂದುಕೊಳ್ಳಿ. ಸಾಕಿಯನುಭವಿಸುವ ಯಾತನೆಗಳನ್ನೊಮ್ಮೆ ಸ್ಮರಿಸಿಕೊಳ್ಳಿ. ತಿಳಿದುಬಿಡುತ್ತದೆ ಅವರು ಅಚರಿಸಿಕೊಳ್ಳಲಾಗದ ಜನುಮದಿನದ ರಹಸ್ಯ. ಇವರಲ್ಲವೇ ಆ ದೇವನೂ ಸ್ವೀಕರಿಸಲಾಗದ ಸವಾಲನ್ನು ತಮ್ಮದಾಗಿಸಿಕೊಂಡು ಬದುಕಲು ನಿಜವಾಗಿಯೂ ಒಡಲುಗೊಂಡು ಬಂದವರು. ನಾವೋ ಒಡಲುಗೊಂಡು ವಿಷಯಸುಖಲೋಲುಪತೆಯ ಅರಗಿನರಮನೆಯಲ್ಲಿ ಕ್ಷಣ ಕ್ಷಣಕ್ಕೂ ಪರಿತಪಿಸುತ್ತಿರುವವರು. ಈ ಸಾಕಿಯರೋ, ಒಡಲುಗೊಂಡು ಬದುಕಿನ ಪ್ರಶ್ನೆಗಳಿಗೆ ಮತ್ತೆ ಮತ್ತೆ ಉತ್ತರವಾಗಿ ಮರಳಿ ಪ್ರಶ್ನೆಯಾಗುತ್ತಿರುವವರು.
ಗೋಧೂಳಿಯ ಸಮಯವದು. ಮನೆ ಬಿಟ್ಟು ಕಾಡಿನ ಕಡೆಗೆ ಕೈಹಿಡಿದು ಕರೆದೊಯ್ಯುವ ಕಾಲಪುರುಷ, ಎದುರಿಗಿದ್ದ ಸುಣ್ಣದ ಗೋಡೆಯ ಮೇಲೆ ತೂಗುಹಾಕಿರುವ ಗಡಿಯಾರದಲ್ಲಿರುವ ಕ್ಷಣದ ಮುಳ್ಳಿನ ಕೊನೆಯಿಂದ ಸನ್ನೆ ಮಾಡಿದ. ಏನೋ ತಿವಿದಂತಾಗಿ ಎಚ್ಚರಗೊಂಡೆ. ಚಹಾಯಣವನ್ನು ಎದೆಯೊಳಗಿಳಿಸಿಕೊಂಡು ಕರುಳ ಕುಡಿಗಳ ಕಣ್ತಪ್ಪಿಸಿ ಹೊರಟ ನನ್ನ ಹಾದಿಯಲ್ಲಿ ಎದುರಾದ ಹುಟ್ಟಿದ ಹಬ್ಬದ ಸಂಭ್ರಮವನ್ನೊಮ್ಮೆ ಕೇಳಿಬಿಡಿ - ಶುಭೋದಯದ ಅಮೃತಘಳಿಗೆಯಲ್ಲಿ ತಂದೆ ವಾಯುದೇವ ನನಗೆ ಗೆಳೆಯನಾಗಿ ದಕ್ಕಿದರೆ, ಸಂಜೆ ಅವನ ಪುತ್ರ ಆಂಜನೇಯ ಆತ್ಮಸಖನಾಗಿ ಹತ್ತಿರವಾಗಿಬಿಡುತ್ತಾನೆ. ದರ್ಶನ ಪಡೆದು ಹೊರಟ ಆಂಜನೇಯನ ದೇವಾಲಯದ ಹಿಂಭಾಗದ ಕಾಂಕ್ರೀಟ್ ರಸ್ತೆ ನನಗೆ ಅಕ್ಷರಶಃ ವೇದಿಕೆಯಾಗಿಯೇ ಕಂಡಿತು. ಆ ರಸ್ತೆಯ ಬದಿಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಶಿಸ್ತಿನ ಸಿಪಾಯಿಗಳಂತೆ ನಿಂತುಕೊಂಡಿದ್ದ ಆಲ, ಬೇವುಗಳೆಂಬ ಕಿಶೋರಿಯರು ಒಡಲನ್ನಲ್ಲಾಡಿಸಿಕೊಂಡು ಬಳುಕಿನ ಸ್ವಾಗತ ಕೋರಿದವು.
ಊರನ್ನು ದಾಟುವ ಧಾವಂತದಿಂದ ಹೊರಟವನನ್ನು ತಡೆದು, ಹುಲ್ಲಿನ ಗುಡಿಸಲಿನಲ್ಲಿದ್ದ ಜಾತಿ, ಮತ, ಪಂಥಗಳಿಂದಾಚೆ ಬದುಕುತ್ತಿದ್ದ ಸಾಕಿ ಹಾಗೂ ಸೊಸೆ ಸೇರಿ ಕುಶಲೋಪರಿ ವಿಚಾರಿಸಿದರು. ಸ್ವಲ್ಪ ಮುಂದೆ ಹೋದರೆ, ಹೊಲದಲ್ಲಿ ದುಡಿದು ಬಂದು ಎತ್ತುಗಳ ಆಯಾಸವನ್ನು ತನ್ನ ಆಪ್ತಮಾತುಗಳಿಂದ ಪರಿಹರಿಸುತ್ತಿದ್ದ ರಂಗಪ್ಪಗೌಡರು ಬಾಗಿ ನಮನಗಳನ್ನು ಸಲ್ಲಿಸಿದರು. ಆ ಹಾದಿಯ ಮಧ್ಯದಲ್ಲಿ ತನ್ನ ಬೆಳಕಿಲ್ಲದ ಗುಡಿಸಲ ಮುಂದೆ, ತಲೆಯ ಮೇಲೆ ಬಿಳಿ ರುಮಾಲಿನ ಮುಕುಟವನ್ನಿಟ್ಟುಕೊಂಡು, ಬೀಡಿಯನ್ನು ಸೇದುತ್ತಾ ಕುಳಿತ ಕುರಿಕಾಯುವ ಯಮನಪ್ಪ ಕುಳಿತಲ್ಲಿಂದಲೇ ಕೈಮುಗಿದನು. ಪಯಣ ಮುಂದುವರೆದು ಈ ಹಾದಿಯ ಕೊನೆಗೆ ಬಂದಾಗ ನನ್ನ ಸಾಕಿಯಂತೆಯೇ ನಡೆಯಲಾಗದ ಕೀಲುಗಳನ್ನು ಮೊಣಕಾಲಿನಲ್ಲಿಟ್ಟುಕೊಂಡು, ಅಸಂಖ್ಯಾತ ನೋವುಗಳನ್ನುಂಡ ಹೆಗ್ಗುರುತಾದ ಹಣೆಯ ಗೆರೆಗಳ ಮಧ್ಯೆ ಎದ್ದು ಕಾಣುವ ವಿಭೂತಿಯನ್ನು ಧರಿಸಿ ಶಿವನಾಮ ಜಪಿಸುತ್ತಾ, ತನ್ನ ಗುಡಿಸಲಿನರಮನೆಯ ಮುಂದೆ ಕೌದಿ ಹಾಸಿಕೊಂಡು ಕಾಲುಚಾಚಿ ಕುಳಿತಿದ್ದ ಹನಮವ್ವಜ್ಜಿ ತನ್ನೆರಡೂ ಕೈಗಳನ್ನೆತ್ತಿ ನಮಸ್ಕಾರಗಳನ್ನು ಸಲ್ಲಿಸಿದಳು. ಭೇದವಿಲ್ಲದೇ ಮಾತಿಗಿಳಿಯುವ ಈ ಜನಪದರ ಅನರ್ಘ್ಯ ವಾತ್ಸಲ್ಯದ ಮಾಯೆಗೆ ಶರಣು ಶರಣೆಂದೆ.ಇದೆಂತಹ ಅಪೂರ್ವ ಸೌಭಾಗ್ಯವೆಂದೆನಿಸುತ್ತದೆ ನನಗೆ. ಎಲ್ಲರಿಗೂ ತಲೆದೂಗಿ ಆಶೀರ್ವಾದ ಬೇಡಿದೆ. ಲೌಕಿಕ ಪಯಣದಲ್ಲಿ ಎದುರಾದ ಮಾತೃಹೃದಯವುಳ್ಳ ಇವರೆಲ್ಲರ ಹುಟ್ಟುಗಳಿಗೂ ಕ್ಯಾಲೆಂಡರಿನಲ್ಲಿ ಖಚಿತವಾದ ದಿನವಿಲ್ಲ. ಇವರಿಗೆಂದು ಕೇಕು ತಂದಿಟ್ಟು ಸಂಭ್ರಮಿಸುವ ಜೀವಗಳನ್ನು ನಾನಿನ್ನೂ ಕಂಡಿಲ್ಲ. ವರ್ಷವಿಡೀ ಮಣ್ಣಿನಲ್ಲಿ ಮಣ್ಣಾಗಿ ಕೃಷಿಗೈದಾಗ ತುಂಬಿ ಬರುವ ಫಸಲು ಕೈಸೇರಿದ ದಿನವೇ ಇವರೆಲ್ಲರ ಹುಟ್ಟುಹಬ್ಬ. ಒಡಲುಗೊಂಡು ಬೀದಿಯ ಬದಿಯಲ್ಲಿದ್ದರೂ ಕಡಲಿನಂತಹ ಬದುಕನ್ನು ಈಜಿದವರಿವರು ಎಂದುಕೊಂಡು ಮನದಲ್ಲಿಯೇ ನಮನಗಳನ್ನು ಸಲ್ಲಿಸಿದೆ. ವಿಹಾರದ ಮಧ್ಯದಲ್ಲಿ ಮಳೆಗಾಲದ ಹಾರುವ ಕೀಟಗಳು ನನ್ನ ಜನುಮದಿನದ ಸವಿನೆನಪಿನ ಕಾಣಿಕೆಯಾಗಿ ತಾವು ತಂದ ಕಿರೀಟವನ್ನಿಡಲು ಧಾವಿಸಿದಂತೆ ತಲೆಗೆ ಮುತ್ತಿಕೊಂಡವು. "ಅಯ್ಯಾ ಗೆಳೆಯ ಕೀಟಗಳೆ ಬೇಡಪ್ಪಾ ಬೇಡ.. ಇದೆಲ್ಲ ಮುಜುಗರದ ಸಂಗತಿ ನನಗೆ..." ಎಂದು ಪರಿಪರಿಯಾಗಿ ಹೇಳಿದರೂ ಬಿಡದೇ ನನ್ನನ್ನು ಕಿಲೋಮೀಟರುಗಟ್ಟಲೇ ಬೆನ್ನು ಬಿಡದೇ ಹಾರುತ್ತಲೇ ಹಿಂಬಾಲಿಸಿದವು. ಕತ್ತಲಾಯಿತೆಂದು ಊರಿಗಭಿಮುಖವಾಗಿ ಹೊರಳಿದೆ. ಕೀಟಗಳೂ ದಿಕ್ಕು ಬದಲಿಸಿದವು. ದಾರಿಯಲ್ಲಿ ಸಿಕ್ಕ ಕೇರಿಯ ರಾಮಪ್ಪನೊಂದಿಗೆ ಕೊರೊನಾ ಕಾಲಘಟ್ಟದ ಮಕ್ಕಳ ಶಿಕ್ಷಣದ ಬಗ್ಗೆ ಮಥಿಸುತ್ತಾ ದೌಡಾಯಿಸಿದೆ. ಕೆಲಹೊತ್ತಿನ ನಂತರ ಊರು ಸಮೀಪಿಸಿತು. ಕೀಟಗಳು ಬೀಳ್ಕೊಟ್ಟವು. ವಿದಾಯ ಹೇಳಿ ಮನೆಯೆಡೆಗೆ ತೆರಳಿದೆ. ಸುತ್ತಲ ಸಮಾಜ, ಮಳೆಗಾಲದಲ್ಲಿ ಹಸಿರುಟ್ಟು ನಿಂತ ಪ್ರಕೃತಿ, ಬೆಂಬತ್ತಿ ಗೌರವಿಸುವ ಕೀಟಜಗತ್ತು, ಸಾಮಾಜಿಕ ಜಾಲತಾಣಗಳಲ್ಲಿನ ಪ್ರೀತಿಪಾತ್ರರ ಗುಣಗಾನ ಸಾಕಲ್ಲವೇ ಹಬ್ಬ ಹುರಿಗೊಂಡು ತಾರಕಕ್ಕೇರಲು. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಈ ಹಾದಿಯಲ್ಲಿ ನಾನು ಒಡಲುಗೊಂಡ ದಿನದ ಹಬ್ಬ ಸಹಜವಾಗಿಯೇ ಸಾಕಾರಗೊಂಡಿತ್ತು. ಸಾರ್ಥಕತೆಯ ಭಾವವನ್ನು ಹೃದಯದೊಳಿರಿಸಿ ಧನ್ಯೋಸ್ಮಿ ಎಂದುಕೊಂಡೆ. ರಾತ್ರಿ ಗೆಳೆಯರೊಬ್ಬರು ಹಂಚಿಕೊಂಡ ನನ್ನದೇ ಕವಿತೆ, ಈ ದುರಿತ ಕಾಲದಲ್ಲಿ ಹೊಸ ಆಶಯವನ್ನು ಧ್ವನಿಸುವಂತಿದೆಯೆಂದೆನಿಸಿತು-
ರಕ್ತಕಣಗಳೂ ವಿಭಜನೆಯಾಗಿವೆ
ಮತ, ಧರ್ಮ, ಜಾತಿ , ವರ್ಗಗಳ ತೊಳಲಾಟದೊಳಗೆ ನಲುಗಿ
ಯಾವ ಹೊತ್ತಿಗೆ ಅದಾವ ಸಿದ್ಧಾಂತ
ಬಂದಪ್ಪಳಿಸಿ ಒಳಗಿಳಿಯುವುದೋ
ಆತ್ಮದೊಳಗೆ ಮರುಗಿ.....
Sunday, 14 June 2020
ಸಂವೇದನೆಗಳೊಂದಿಗೆ ಸಂವಾದ...
ಸಂವೇದನೆಗಳೊಂದಿಗೆ ಸಂವಾದ...
ಬತ್ತಿಹೋಗಿರುವ ಸಂವೇದನೆಗಳೆ
ಮತ್ತೆ ಚಿಗುರುವಿರೆಂದು ?
ಹೆದ್ದಾರಿಯ ಬದಿಯಲ್ಲಿ ಉರುಳಿ
ಬಿದ್ದ ವೇಗದ ಲಾರಿ
ಹೊರಟಿತ್ತು ಬಯಕೆಗಳನ್ನೇ
ತುಂಬಿ ಚೆಲ್ಲುವಂತೆ ಹೇರಿ
ಮಾನವಧರ್ಮವೆಲ್ಲಿದೆ ?
ಬೆನ್ನುಬಿದ್ದ ಕರ್ಮವೆಲ್ಲಿದೆ ?
ಬಿದ್ದಿದೆಯಲ್ಲ ಕಾಲು ಮುರಿದುಕೊಂಡು
ಅನಾಥವಾಗಿ ಲಾರಿಯ ಕೆಳಗೆ
ಮತ್ತೆಂದೂ ಮೇಲೇಳದಂತೆ ಹಾಸಿದ
ವ್ಯವಹಾರದ ನೆಲಕೆ ಒರಗಿ
ಕಣ್ಣು,ಬಾಹುಗಳನಗಲಿಸಿ ದೊರೆತಷ್ಟು
ಬಾಚಿಕೊಳ್ಳುವುದೊಂದೇ ತವಕ
ಸೋಪು, ಎಣ್ಣೆ, ಡೀಸೆಲ್,ಸಿಮೆಂಟು
ಶಾಂಪೂ ಬಗೆ ಬಗೆಯ ಬಯಕೆಗಳ ರೂಪಕ
ಆಸೆಗಳೊಂದಿಗಿನ ಯುದ್ಧದಲ್ಲಿ
ಎಲ್ಲವೂ ಸರಿ ಸಮಾನ!
ಮಾನವೀಯತೆಯೂ, ಕ್ರೌರ್ಯವೂ.
ಬಯಕೆಗಳಿಗೆ ಅಳಿವಿಲ್ಲ;
ಸಾವು ನೋವುಗಳಿಗೆ ಬೆಲೆಯಿಲ್ಲ
ಮಾರುಕಟ್ಟೆಯ ಚಕ್ರವ್ಯೂಹದೊಳಗೆ
ಅರುಣೋದಯವೂ ಲಾಭವೇ
ಮಾರಾಟಕ್ಕಿಟ್ಟರೆ ತಾಪ, ಬೆಳಕು
ಕೊರಗುತ್ತಿದೆ ಹೀಗೆ ನಲುಗಾಟವೇ
ತುಂಬಿದ ಮಾನವ ಬದುಕು
ಬಂಧನದ ಜಗವೆಲ್ಲಾ ಹಣದ
ಮಾಯೆಯೊಳಗಿನ ಹುಳುಕು
ಲಾರಿಯವನ ಆರ್ತನಾದವೂ ಕ್ಷೀಣ
ಬೆಂಬೆಡಗಿನ ಯುಗದ ಗಿಜಿಗಿಡುವ
ವಾಂಛೆಗಳನಾಳುವ ಬಜಾರಿನ ರಣಭೇರಿಯ ಮುಂದೆ
ಸತ್ತು ಹೋಗಿರುವ ನಿಮಗೆಲ್ಲಿದೆ ಮದ್ದು
ಜಗದ ಮಂದಿಗೆ ಜಾಹೀರಾತುಗಳೇ ಮುದ್ದು
ಆಳಿ ಬಿಡಿ ಭುವನವ
ನಿಮ್ಮ ಕಾಲವಿರುವತನಕ
ಬೆಕ್ಕಿನ ಕೊರಳಿಗೆ ಗೆಜ್ಜೆ ಕಟ್ಟುವ ತನಕ
ವಿಷದ ಚಕ್ರವ್ಯೂಹದೊಳಗೆ
ಮಾನವತೆಯ ಅಭಿಮನ್ಯು
ಒಳಹೊಕ್ಕಿರುವನು ಅರಿವಿದ್ದರೂ ಇಲ್ಲದವನಂತೆ
ಹೊರಬರುವುದೆಂತೋ ಕ್ಷಮಿಸಿಬಿಡಿ
ಒಮ್ಮೆ ಅಪ್ಪಿ ಅರ್ಜುನನಂತೆ.
Monday, 25 May 2020
ಭೃಂಗದ ಬೆನ್ನೇರಿ...
ಭೃಂಗದ ಬೆನ್ನೇರಿ...
ಒಂದು ಶುಭೋದಯದಲ್ಲಿ ಮನೆಯಂಗಳದಲ್ಲಿ ಬೆಳೆದು ನಿಂತ ಬೇವು, ಮಾವು, ಬದಾಮಿ, ಕಣಗಿಲೆ, ಜಾಜಿ, ಮಲ್ಲಿಗೆ, ಹಲಸಿನ ಸಸಿಗಳೊಂದಿಗೆ ಕುಶಲೋಪರಿಗಿಳಿದು ಮಾತನಾಡುತ್ತಿದ್ದೆ. ಬೇಸಿಗೆಯಾದ್ದರಿಂದ ಹಿಂದಿನ ದಿನವೆಲ್ಲಾ ನೆತ್ತಿ ಸುಡುವ ಉರಿಬಿಸಿಲಿನಲ್ಲಿ ತಲೆಯಾದಿಯಾಗಿ ಅಂಗಾಂಗಳನ್ನೆಲ್ಲಾ ಕಾಯಿಸಿಕೊಂಡು ಸುಸ್ತಾದಂತಿದ್ದ ಸಸ್ಯಗಳ ಕೈಹಿಡಿದು ಸವರಿ, ಸಂತೈಸುತ್ತಾ, ರಾತ್ರಿಯೆಲ್ಲಾ ತಂಗಾಳಿಯಲ್ಲಿ ನೆನೆದು ತಂಪಾದ ಬೆಳದಿಂಗಳ ಅನುಭವಗಳನ್ನು ಹೆಕ್ಕಿ ತೆಗೆದು ತರುಲತೆಗಳ ಮನಸ್ಸನ್ನು ಮುದಗೊಳಿಸಬೇಕೆನ್ನಿಸಿ, ಒಂದೊಂದರ ಹತ್ತಿರವೂ ನಿಂತು, ರಂಬೆ, ಕೊಂಬೆ, ಎಲೆ, ಚಿಗುರು, ಹೂಗಳ ಮೈದಡವಿ ನೇವರಿಸುತ್ತಾ, ತಣಿರಸದಂತಿದ್ದ ತಂಪು ನೀರನ್ನೆರೆದು ಸಲ್ಲಾಪಕ್ಕಿಳಿದೆ. ಸಾವರಿಸಿಕೊಂಡು ಬಾಗಿ ಅಪ್ಪಿಕೊಳ್ಳುತ್ತಿರುವಂತೆ, ಬೀಸುತ್ತಿರುವ ಮರುಳ ಸುಳಿಗಾಳಿಗೆ ತಮ್ಮ ಅಂಗಾಂಗಳನ್ನೆಲ್ಲಾ ಮುಂದೆ ಚಾಚಿ ಧನ್ಯವಾದಗಳನ್ನು ಹೇಳುತ್ತಿರುವಂತೆ ಭಾಸವಾಗಿ, ಧನ್ಯತೆಯಿಂದ ಕಣ್ತುಂಬಿಕೊಂಡೆ. ಇಬ್ಬನಿಯಿಲ್ಲದೇ ಶುಷ್ಕವಾದಂತಿದ್ದ ವಾತಾವರಣಕ್ಕೀಗ, ಕರುಳಕುಡಿಯಂತಿದ್ದ ಸಸ್ಯಗಳ ಈ ಪ್ರೀತಿಯ ರೀತಿ ಕಂಡಾಗ, ಗೊತ್ತಿಲ್ಲದೇ ನನ್ನೊಳಗೆ ಹುಟ್ಟಿದ ಆನಂದಭಾಷ್ಪಗಳು ಸೇರಿಕೊಂಡು ಸನ್ನಿವೇಶವನ್ನು ಆರ್ದ್ರವಾಗಿಸಿತು. ಕ್ಷಣ ಹೊತ್ತು ಭಾವುಕನಾದೆ. ಆ ಬಗೆ ಬಗೆಯ ಫಲ-ಪುಷ್ಪ ಸಸಿಗಳ ಬೇರಿಗೆರೆದ ಜಲಾಮೃತ ನಿಧಾನವಾಗಿ ಇಂಗಿ ಹೋಗುವಂತೆ, ಕ್ರಮೇಣ ಕಣ್ಣಹನಿಗಳೂ ಎದೆಯೊಳಗಿಳಿದು ಹಾಗೇ ಬತ್ತಿಹೋದವು. ಮತ್ತೆ ಶುಭೋದಯದ ಅಂಗಣಕ್ಕಿಳಿದೆ. ನೇಸರನ ಕಿರಣಗಳ ರಂಗೋಲಿ, ಅಂಗಳದಲ್ಲಿನ ಸಸ್ಯಸಂಕುಲ, ಕುಸುಮಗಳ ಸುತ್ತವೇ ನೆರೆದು ಮಧುವನ್ನರಸಿ ಹೊರಟ ದುಂಬಿಗಳ ಬಳಗ, ರಂಗುರಂಗಿನ ಚಾಮರದಂತಿದ್ದ ಚಿಟ್ಟೆಯ ರೆಕ್ಕೆಗಳ ಬೀಸುವಿಕೆ, ಗಿಳಿ, ಕೋಗಿಲೆ, ಗುಬ್ಬಿಗಳ ಉದಯಗಾನ, ಹೀಗೆ ಎಲ್ಲವೂ, ಎಲ್ಲರನ್ನೂ ಆಮಂತ್ರಿಸಿ, ಕರೆದು ಮೇಳೈಸಿದಂತಿತ್ತು ಆ ಶುಭೋದಯದ ದಿಬ್ಬಣಕ್ಕೆ. ಬಹುಶಃ ನಾವೆಲ್ಲರೂ ಆಚರಿಸುವ ಯೋಜಿತ ಹಬ್ಬ, ಉತ್ಸವಗಳಲ್ಲಿಯೂ ಈ ಮಟ್ಟದ ಪ್ರಕೃತಿ ಸಹಜ ಮೇಳೈಸುವಿಕೆ ಅಸಾಧ್ಯವೇನೋ ? ಅಂತೂ, ಪ್ರಕೃತಿಯ ಮೆರವಣಿಗೆಯ ಸಂಭ್ರಮ ಮನೆ ಮಾಡಿತು. ಆಕಸ್ಮಾತ್ ಆಗಿ ಅಂದು ಸರಿಯಾದ ಸಮಯಕ್ಕೆ ದಾಂಗುಡಿಯಿಟ್ಟ ಮಂಗಗಳಿಂದಾಗಿ, ಅದು ಮಂಗಣ್ಞನ ಮದುವೆಯ ದಿಬ್ಬಣವಾಗಿ ಪರಿವರ್ತನೆಯೂ ಆಗಿಹೋಯಿತು. ಮಂಗಗಳ ಚೆಲ್ಲಾಟದ ಮದುವೆಯೆಂದರೆ ಕೇಳಬೇಕೆ ? ಎಲೆ, ಹೂ, ಹಣ್ಣು, ಕಾಯಿ, ತಾಂಬೂಲಗಳನ್ನು ಸಂಗ್ರಹಿಸುವುದೇ ಬೇಡ. ಆಗಸದಲ್ಲಿ ನಿಂತು ಆಶೀರ್ವದಿಸುತ್ತಿರುವ ದೇವತೆಗಳ ಕೈಯ್ಯಿಂದ ಉದುರುತ್ತಿರುವಂತೆ, ಸಕಲ ಮಂಗಳ ಪರಿಕರಗಳೆಲ್ಲವೂ ಧರೆಗೆ ಇಳಿಯಹತ್ತಿದವು. ಕೆಲವೊಮ್ಮೆ ಏಕಕಾಲಕ್ಕೆ, ಮತ್ತೊಮ್ಮೆ ಒಂದಾದ ನಂತರವೊಂದರಂತೆ. ಆಂಜನೇಯನ ಕಾಟದಿಂದ ಬೇಸತ್ತು ಹೀಗೆ ಒಲ್ಲದ ಮನಸ್ಸಿನಿಂದ, ಕಿರುಕುಳದ ಮುನಿಸಿನಿಂದ, ಒತ್ತಾಯಪೂರ್ವಕವಾಗಿ, ತಮ್ಮಲ್ಲಿರುವ ಪರ್ಣಫಲಪುಷ್ಪಗಳ ಚೀಲ ಬರಿದಾಗುವವರೆಗೂ ಮಂತ್ರಾಕ್ಷತೆಯನ್ನು ಸಲ್ಲಿಸಿ ಸಂಭ್ರಮಪಟ್ಟಂತೆ ಶುಭಾಶಯ ಹೇಳಿ ಸುಮ್ಮನಾಗಿಬಿಟ್ಟವು ಗಿಡಮರ, ಕೀಟ, ಪಕ್ಷಿ ಸಂಕುಲಗಳು.
ವಸಂತದ ಒಂದು ಶುಭೋದಯದ ವಿಶೇಷ ಹಬ್ಬವೊಂದು ಕಣ್ಣೆದುರೇ ಅಂತರಂಗದಲ್ಲಿ ಅಚ್ಚೊತ್ತಿದಂತೆ ನಡೆದುಹೋಯಿತು. ಇದನ್ನು ಮಂಗಣ್ಣನ ಮದುವೆಯೆಂದೋ, ನೇಸರನ ಮೆರವಣಿಗೆಯೆಂದೋ, ಇಲ್ಲವೇ ಪ್ರತಿನಿತ್ಯ ನಡೆಯುವ ಪ್ರಕೃತಿಯ ನಿತ್ಯೋತ್ಸವವೆಂದಾದರೂ ಕರೆಯಿರಿ. ಒಟ್ಟಂದದಲ್ಲಿ ಮನೆಯಂಗಳದಲ್ಲಂತೂ ಚೈತ್ರವು ಹಬ್ಬಿಕೊಂಡ ಹಬ್ಬವೊಂದು ಸದ್ದಿಲ್ಲದೇ ಹೀಗೆ ಜರುಗಿಹೋಯಿತು. ಪಾಲ್ಗೊಂಡವರಲ್ಲಿ ನಾನೊಬ್ಬನೇ ಮನುಷ್ಯಜಾತಿ ಎನ್ನುವುದೇ ಹೆಮ್ಮೆಯ ಸಂಗತಿ!. ಅಲೌಕಿಕ ಭಾವಸಂತೃಪ್ತಿಯನ್ನನುಭವಿಸಿದ ಅನುಭಾವಿಯಾಗಿ ಸಂಭ್ರಮಿಸಿದೆ. ಹಬ್ಬವೆಲ್ಲಾ ಮುಗಿದು ಹೋಗಿ, ಕೆಲಹೊತ್ತಿನ ನಂತರ, ಧ್ಯಾನದಂತಹ ಮೌನ ಆವರಿಸಿತು ಅಂಗಳದ ಉದ್ಯಾನವನದಲ್ಲಿ. ಜೊತೆ ಜೊತೆಗೆ ಎದೆಯಾಳದಲ್ಲಿಯೂ. ಧೋ ಎಂದು ಸುರಿದ ಮಳೆಯ ನಂತರವೂ ತೊಟ್ಟಿಕ್ಕುವ ಹನಿಗಳು ಆಗೊಮ್ಮೆ ಈಗೊಮ್ಮೆ ಇಳೆಗಿಳಿಯುವಂತೆ, ಮೌನದೊಳಗಿಂದಲೇ ಹುಟ್ಟಿದ ನಾದದ ರೀತಿಯಲ್ಲಿ ಎಲ್ಲಿಂದಲೋ ಬಂದ ದುಂಬಿಗಳ ಝೇಂಕಾರ ಉದ್ಯಾನವನದಲ್ಲಿ ಅನುರಣಿಸಹತ್ತಿತು. ಪರೀಕ್ಷಿಸಿದೆ. ಹೌದು, ಜೇನುಹುಳುಗಳೇ ಅವು. ಅಪರೂಪದ ಮಿಂಚುಹುಳುಗಳಂತೆ ಅಲ್ಲೊಂದು ಇಲ್ಲೊಂದು ವಿರಳವಾಗಿ ಕಂಡುಬರುತ್ತಿದ್ದ ದುಂಬಿಗಳಿಂದು, ತಮ್ಮ ಮನೆ ಮಂದಿಯೊಂದಿಗೆ ಧಾವಿಸಿದ್ದನ್ನು ಗಮನಿಸಿದರೆ, ಇಲ್ಲೋ ಎಲ್ಲೋ ನೆರೆದು ಕುಳಿತ ಇವುಗಳ ಜಾತ್ರೆಯ ಸುಳಿವಿರಬೇಕಿದು ಎಂದುಕೊಂಡು ಉದ್ಯಾನವನವನ್ನೆಲ್ಲಾ ತಡಕಾಡಿದೆ. ಯಾವ ಸುಳಿವೂ ದಕ್ಕಲಿಲ್ಲ. ನದಿ ಮೂಲ, ಋಷಿ ಮೂಲಗಳನ್ನು ಹುಡುಕಿ ಹೋಗುವಂತೆ, ದುಂಬಿಗಳು ಹರಿದುಬರುತ್ತಿದ್ದ ಮೂಲವನ್ನು ಅನ್ವೇಷಿಸಿ ಹೊರಟೆ. ಕೊಲಂಬಸ್ ನಿಗಾದ ಶೋಧನೆಯ ಅನುಭವವೇ ನನಗೂ ಆಯಿತು. ಅವನು ಗುಲಾಬಿ ಯಿಂದಲಂಕರಿಸಿದ ಅಮೇರಿಕನ್ನರ ನಾಡು ಕಂಡುಹಿಡಿದ. ನಾನಿಲ್ಲಿ ಗುಂಪೆ ಹಾಕಿದ ಒಣ ಕೊರಡುಗಳ ಸಂದಿಯೊಳಗೆ ಮೈಮೇಲೆಲ್ಲಾ ಕಪ್ಪು ಹಾಗೂ ಕೇಸರ ವರ್ಣದ ಪಟ್ಟೆಗಳೆಂಬ ನಿಸರ್ಗ ಸಹಜ ಟ್ಯಾಟೂ ಹಾಕಿಸಿಕೊಂಡ ಜೇನ್ನೊಣಗಳ ಗೂಡನ್ನು ಶೋಧಿಸಿದೆ!. ಅಂಗಳದಲ್ಲಿ ಗುಡ್ಡೆ ಹಾಕಿದ ಕೊರಡುಗಳ ಸಂದಿಯೊಳಗೆ ಜೇನುದುಂಬಿಗಳ ಸಂಸಾರವು ಕಟ್ಟಿದ ಗೂಡೊಂದು ಚಿಕ್ಕದಾದ ಕೊರಡು ತುಂಡಿನ ಆಧಾರದಿಂದ, ಬಾವಲಿಯೊಂದು ಮರದ ರೆಂಬೆಗೆ ತಲೆ ಕೆಳಗಾಗಿ ಜೋತುಬಿದ್ದಂತೆ, ನೇತಾಡುತ್ತಿತ್ತು. ಅಬ್ಬಾ! ಅದೆಂತಹ ಗಿಜಿಗಿಡುವ ದುಂಬಿಗಳ ಜಾತ್ರೆ. ಅತ್ತ ಕೊರೊನಾದಿಂದ ಜನರೆಲ್ಲಾ ಹೊರಬರದೇ ಬೀದಿಗಳೆಲ್ಲಾ ಸ್ಮಶಾನ ಮೌನವನ್ನನುಭವಿಸುತ್ತಿದ್ದರೆ, ಇತ್ತ ಯಾವ ಕೊರೊನಾನೂ ಲೆಕ್ಕಿಸದೇ , ಒಬ್ಬರ ಮೇಲೊಬ್ಬರು ಬಿದ್ದು ತರಕಾರಿಯನ್ನೋ, ಹಾಲನ್ನೋ, ದಿನಸಿಯನ್ನೋ, ಸಿಕ್ಕೀತೋ ಇಲ್ಲವೋ ಎಂಬಂತೆ ಧಾವಂತದಿಂದ ಕೊಂಡುಕೊಳ್ಳುವ ಜನಜಾತ್ರೆಯ ತೆರದಿ, ಗೂಡೂ ಕಾಣದಂತೆ ಗಿಜಿಗಿಡುತ್ತಿದ್ದ ದುಂಬಿಗಳ ಜಾತ್ರೆಯನ್ನು ಕಂಡ ನನಗೆ ವಿಸ್ಮಯವಾಯಿತು. ಹೊರಗಡೆ ಕೊರೊನಾ ಕಾರಣದ ಕರ್ಫ್ಯೂ ಜಾರಿಯಲ್ಲಿದ್ದರೆ, ಮನೆಯಂಗಳದ ಕೊರಡ ಸಂದಿಯಲ್ಲಿ ಈ ದುಂಬಿಗಳು ಮೇಲೆ ಬಿದ್ದು, ಒದ್ದು ಗುದ್ದಾಡುತ್ತಲೇ, ಮಧುವೆಂಬ ದೇವಲೋಕದಲ್ಲೂ ಸಿಗದ ಮೃತ್ಯುಂಜಯ ಅಮೃತದ ಮಡುವಿಗಾಗಿ ಯಾತ್ರೆ ಹೊರಟಿಂತಿದ್ದವು.
ಇದೇನು ಲೌಕಿಕದಿಂದ ಪಾರಮಾರ್ಥಿಕತೆಯತ್ತ ಪಯಣ ಹೊರಟಿತಲ್ಲ ಎಂದು ಹೀಗಳೆಯದಿರಿ. ಹೌದು, ಇದೊಂದು ಇಹದಿಂದ ಪರದೆಡೆಗಿನ ಮಧುರ ಪಯಣವೆಂತಲೇ ನಾನು ಪರಿಭಾವಿಸಿದ್ದೇನೆ. ಪ್ರತಿ ಚದರ ಕಿಲೋಮೀಟರಿನಲ್ಲಿ ಕೇವಲ ೩೮೨ ರಂತೆ ಸರಾಸರಿ ಜನಸಾಂದ್ರತೆಯಲ್ಲಿ ಹಬ್ಬಿಕೊಂಡರೂ ಬಿಡದೇ ಹಣ, ಅಧಿಕಾರ, ಆಸ್ತಿ, ಅಂತಸ್ತು, ಜಾತಿ, ಧರ್ಮ,ಮತ, ಪಂಗಡ, ವರ್ಣಗಳೆಂದು ಇಲ್ಲದ ಕಾರಣ ಹುಡುಕಿ, ಕೆಲವೊಮ್ಮೆ ಜಗಳವಾಡಲು ಹವಣಿಸುವ ನಾವು, ಈ ಅಂಗೈಯಷ್ಟಿರುವ ಗಾತ್ರದಲ್ಲಿಯೇ ಸಾವಿರಾರು ಮನೆ - ಸಂಸಾರಗಳನ್ನು ಹೊಂದಿ ಪರಸ್ಪರ, ಸಹಬಾಳ್ವೆ, ಪ್ರೀತಿ, ವಾತ್ಸಲ್ಯ, ಪರಿಶ್ರಮ, ಪರೋಪಕಾರಗಳಿಂದ ಕಂಗೊಳಿಸುವ ಜೇನುಗೂಡಿನಿಂದ ಕಲಿಯಬೇಕಾದದ್ದು ಬಹಳಷ್ಟಿದೆ ಎಂಬುದೇ ನನ್ನ ಅಂಬೋಣ. ಇರಲಿ, ಮತ್ತೆ ಗೂಡಿಗೆ ಬರೋಣ. ಹಾಗೆ 'ಯುರೇಕಾ' ಎಂದು ಜೇನುಗೂಡನ್ನು ಸಂಶೋಧಿಸಿದವನೇ ಯಾವ ವೈರಸ್, ಕರ್ಫ್ಯೂ, ಕ್ವಾರೆಂಟೈನ್, ಐಸೋಲೇಶನ್ ಗಳ ಭಯವಿಲ್ಲದೇ ಹೀಗೆ ತಂಡೋಪತಂಡವಾಗಿ ಮುಗಿಬಿದ್ದು, ಕೂತಿರುವ ದುಂಬಿಗಳನ್ನು ಕಂಡು, ಪೋಲೀಸರನ್ನು ಕರೆಯಬೇಕೆನ್ನಿಸಿತು. ಆದರೆ ಹೊತ್ತಾದಂತೆ, ಈ ದುಂಬಿಗಳೂ ಕೂಡ ಯಾರ ಸಂಪರ್ಕಕ್ಕೂ ಬಾರದೇ ತಮ್ಮಷ್ಟಕ್ಕೆ ತಾವೇ ತಮ್ಮ ಮನೆಯೊಳಗೆ ನಿಶ್ವಿಂತೆಯಿಂದ ಕೂರುತ್ತಿವೆಯಲ್ಲವೇ? ಇದಕ್ಕಿಂತ ಮುನ್ನೆಚ್ಚರಿಕೆ ಇನ್ನೇನಿದೆ ಅಲ್ಲವೇ ಎಂದೆನಿಸಿ ಬೆಪ್ಪಾಗಿ ಯೋಚಿಸಿ ಸುಮ್ಮನಾದೆ. ಜೇನ್ನೊಣಗಳಿಗೆ ಈ ಕಾನೂನು ಅನ್ವಯವಾಗುತ್ತದೋ ಇಲ್ಲವೋ ಎಂಬ ಗೊಂದಲವೂ ಮೂಡಿ, ಯೋಚಿಸಿ ಇಲ್ಲವೆಂದು ಖಾತ್ರಿಪಡಿಸಿಕೊಂಡೆ. ಅಷ್ಟಾಗಿಯೂ ದುಂಬಿಗಳು ಇಷ್ಟೇ ಗಾತ್ರದ ಗೂಡೊಳಗಿದ್ದು ಏನು ಮಾಡುತ್ತವೆ ಎಂಬ ಕುತೂಹಲವನ್ನಿಟ್ಟುಕೊಂಡು ಪರೀಕ್ಷಿಸಲೇಬೇಕೆಂದು ಮತ್ತೆ ಗೂಡಿನತ್ತ ತೆರಳಿದೆ. ಮಧ್ಯಾಹ್ನದ ಬಿಸಿಲು ನೆತ್ತಿಗೇರಿತ್ತು. ಪ್ರಾತಃಕಾಲದಲೆದ್ದು ಕುಸುಮಗಳ ಅಂತರಂಗವನ್ನರಸಿ, ಅಲ್ಲಿ ಮಡುಗಟ್ಟಿದ ಮಧುವನ್ನು ಒಂದಿನಿತೂ ಬಿಡದಂತೆ ಹೀರಿ, ತನ್ನೊಡಲ ಪಾತ್ರೆಯೊಳಗೆ ತುಂಬಿಕೊಂಡು ಹಾರಿ, ಗೂಡಿನ ಗುಡಿಯೊಳಗೆ ನೈವೇದ್ಯ ಮಾಡಿ ಉಂಡು ಉಳಿದದ್ದನ್ನು ತಮ್ಮವರ ದಾಸೋಹಕ್ಕಾಗಿ ತೆಗೆದಿಟ್ಟರೆ ಮುಗಿದುಹೋಯಿತು, ದುಂಬಿಗಳ ಅಂದಿನ ಶ್ರದ್ಧೆಯ ಕಾಯಕದ ಕೈಲಾಸ. ದವನ, ಚೆಂಡು, ಸಂಪಿಗೆ, ನೀಲ, ದಾಸವಾಳ, ಗುಲಾಬಿ, ಕಣಗಿಲೆ,ಮಲ್ಲಿಗೆ, ಮಾವು ಇತ್ಯಾದಿ ಹೀಗೆ ಸುತ್ತ ಹತ್ತಲ್ಲದೇ ಮತ್ತೊಂದು ಕುಸುಮದ ಎದೆಗೂ ಹೊಂಚುಹಾಕಿ ಹೀರಿ ಕುಡಿದು, ಸಾಲದ್ದಕ್ಕೆ ಹೊತ್ತು ತರುವ ಮಧುಪ್ರಿಯರಂತೆ, ಮಧುವನ್ನು ಹೀರಿ ಮತ್ತೇರಿಸಿಕೊಂಡು ತೂಗಾಡುತ್ತಲೇ ತಮ್ಮದೇ ಮನೆಗೆ ಹಾರಿ ಬರುವ ದುಂಬಿಗಳ ಕಥೆ ವಿಸ್ಮಯ ಮೂಡಿಸುವಂತಹದ್ದು!. ಮಧುಶಾಲೆಯಲ್ಲಿ ಕುಳಿತು ಸೋಮರಸವನ್ನು ಹೀರಿ ಅಮಲನ್ನೇರಿಸಿಕೊಂಡು ರಸ್ತೆಯುದ್ದಕ್ಕೂ ತಮ್ಮದೇ ಲೋಕದಲ್ಲಿ ತೂರಾಡುತ್ತಾ ತೇಲಿ ಬರುವ ಯಾವ ಮಧುಪ್ರಿಯರಿಗಿಂತಲೂ ದುಂಬಿಗಳ ಕಥೆಯೇನೂ ವಿಭಿನ್ನವಾಗಿಲ್ಲವೆಂಬುದೇ ವಿಶೇಷವಾದದ್ದು. ವ್ಯತ್ಯಾಸವಿಷ್ಟೇ, ದುಂಬಿಗಳು ಹೆಕ್ಕಿ ತರುವ ಮಧು, ಪುಷ್ಪದೊಳಗೆ ಸ್ವಾಭಾವಿಕವಾಗಿ ತಯಾರಾದ ಪ್ರಕೃತಿ ರಸಾಯನ. ಆದರೆ ಮಧುಶಾಲೆಯಲ್ಲಿನ ಮಧು, ಮಾನವ ಸಂಸ್ಕರಿಸಿದ ರಸಾಯನಗಳ ಸೋಮರಸ. ಇನ್ನೊಂದು ಆಸಕ್ತಿಕರ ಭಿನ್ನತೆಯೆಂದರೆ, ರಾಣಿಜೇನು ವೈವಿಧ್ಯಮಯ ಹೂಗಳ ಮಧುವನ್ನರಸಿ ಗುಟುಕು ಗುಟುಕಾಗಿ ಹೀರಲು ಹೊರಟರೆ, ರಾಜ ಜೇನು ಕೆಲವೊಮ್ಮೆ ಲವಣಾಂಶಗಳನ್ನು ಹುಡುಕಿ ಹೆಕ್ಕಿ ಮಣ್ಣು ತಿನ್ನುತ್ತದಂತೆ!. ಮನುಷ್ಯರಲ್ಲಿ ಮಾತ್ರ ಇದು ತಿರುವು ಮುರುವು. ಮಧುಪ್ರಿಯ ಗಂಡುಗಲಿಗಳು ಮಧುಶಾಲೆಯ ಸೋಮರಸವನ್ನು ಹುಡುಕಿಹೊರಟರೆ, ನಂಬಿದ ಹೆಂಡತಿ ಮಕ್ಕಳು ಜೀವನ ಸಾಗಿಸಲಾಗದೇ ಮಣ್ಣನ್ನೇ ಅವಲಂಬಿಸಬೇಕಾಗಿ ಬಂದಿರುವುದನ್ನು ಅಲ್ಲಲ್ಲಿ ಕಂಡರಿಯುತ್ತೇವೆ. ಇದೆಂತಹ ಕಾಕತಾಳೀಯವಲ್ಲವೇ ?
ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಕಾರ್ಲ್ ವಾನ್ ಫ್ರಿಶ್ ಅವರು 'ದುಂಬಿಯೊಂದು ಮಕರಂದದತ್ತ ನರ್ತಿಸುತ್ತ ಹಾರುತ್ತದೆ. ಈ ನರ್ತನದ ಲಯವನ್ನು ಅನುಸರಿಸಿ ಉಳಿದ ದುಂಬಿಗಳು ಹಿಂಬಾಲಿಸುತ್ತವೆ' ಎಂಬ ವಿಷಯವನ್ನು ಕ್ರಿ.ಶ.1940ರಲ್ಲಿಯೇ ಹೊರಗೆಡವಿದ್ದರು ಎಂಬ ಸಂಗತಿಯನ್ನು ಎಲ್ಲೋ ಓದಿದ ನೆನಪಾಗಿ, ದುಂಬಿಗಳೇ ಹೀಗೆ ಮಕರಂದಕ್ಕಾಗಿ ಓಲಾಡುತ್ತವೆಯೆಂದ ಮೇಲೆ ಇನ್ನು ಮಧುಪ್ರಿಯರು ತೂಗಾಡುವುದರಲ್ಲಿ ತಪ್ಪೇನಿಲ್ಲವೆಂದುಕೊಂಡು ತೆಪ್ಪಗಾದೆ. ಈ ಕೊರೊನಾ ಕಾರಣದ ಕರ್ಫ್ಯೂ ನಿಂದಾಗಿ ಬಾಗಿಲು ಹಾಕಿರುವ ಮಧುಶಾಲೆ ಹಾಗೂ ಅದರ ಮುಂದೆ ಮಧು ಹೀರಲೇಬೇಕೆಂದು ಸಾಲುಗಟ್ಟಿ ನಿಂತ ಸೋಮರಸಪ್ರಿಯರನ್ನು ಈ ಹೊತ್ತಿನಲ್ಲಿ ನೆನೆದರೆ ವೇದನೆಯುಂಟಾಗುತ್ತದೆ!. ಇವರಿಗೇಕೆ ಜೇನುಗೂಡಿನೊಳಗಣ ಮಧು ಹಿಂಡಿ ಕೊಟ್ಟು ಸಮಾಧಾನ ಮಾಡಬಾರದು ಎಂದು ಪ್ರಶ್ನೆಯನ್ನಿಟ್ಟುಕೊಂಡು ತರ್ಕಕ್ಕಿಳಿದೆ. ಪ್ರಮಾಣದ ಅಸಂಗತ ಲೆಕ್ಕಾಚಾರ ನೆನೆದು ಹೌಹಾರಿದೆ. ಯಾವ ನೆಲೆಯಲ್ಲಿಯೂ ಅದು ಸಾಧ್ಯವಾಗದ ಸಾಹಸದ ಕಾರ್ಯವೆಂದು ತಿಳಿದು ನನ್ನೊಳಗೆ ಅಲ್ಲದೇ, ಮನೆಯೊಳಗೆ ಬಂಧಿಯಾದೆ. ಆ ಬಂದ್ ನ ಪ್ರಭಾವ ನಮ್ಮ ಮನೆಯಂಗಳದ ದುಂಬಿಗಳಿಗಿನ್ನೂ ತಟ್ಟಿರಲಿಲ್ಲ. ಯಾಕೆಂದರೆ ಭ್ರಮರದ ಮಧುಪಾತ್ರೆಗಳನ್ನೊಳಗೊಂಡ ಕುಸುಮಗಳು ನಿತ್ಯ ನಿರಂತರ 24/7 ದುಂಬಿಗಳಿಗಾಗಿ ಸದಾ ಬಾಗಿಲು ತೆರೆದೇ ಇರುತ್ತವೆಯೆಂದರೆ ಈ ಭ್ರಮರಗಳ ಅದೃಷ್ಟವೋ ಅದೃಷ್ಟವೆನ್ನಬೇಕು. ಅಮಲೇರಿದ ದುಂಬಿಯಂತೆ ಎಲ್ಲೆಲ್ಲೋ ಹಾರಿ ಹೊರಟಿದೆಯಲ್ಲ ಪ್ರಬಂಧ!. ದುಂಬಿಗಳು ಆಕಾಶದಲ್ಲಿ ಎಲ್ಲಿ ಹಾರಿದರೂ ಮರಳಿ ನಿಖರವಾದ ಸ್ಥಳಕ್ಕೇ ಬಂದು ಸೇರುವಂತೆ, ನೇರವಾಗಿ ವಿಷಯಕ್ಕೆ ಬರೋಣ. ಮುಂಜಾವಿನ ಆ ನಿಷ್ಠೆಯ ಕಾಯಕದಲ್ಲಿ ಬಳಲಿ ಬೆಂಡಾದ ಜೇನ್ನೊಣಗಳು ಈ ಮಧ್ಯಾಹ್ನದ ಹೊತ್ತಿನಲ್ಲಿ, ಆಟವಾಡಿ ದಣಿದು ಆಗ ತಾನೇ ತಾಯ ಹಾಲು ಕುಡಿದು ನಿದ್ರಾದೇವಿಯ ಮಾಯೆಯಲ್ಲಿ ತೇಲುತ್ತಿರುವ ಹಸುಗೂಸುಗಳಂತೆ ಜೋಗುಳವನ್ನು ಬಯಸುತ್ತಿದ್ದವೋ ಏನೋ .ಅಂತೂ ಮಬ್ಬಾದ ಮಂಪರಿನಲ್ಲಿ ಕುಳಿತಲ್ಲಿಯೇ ಅಲುಗಾಡುವುದನ್ನು ಹೊರತುಪಡಿಸಿದರೆ ದುಂಬಿಗಳ ಚಟುವಟಿಕೆಗಳು ಚೈತನ್ಯಯುತವಾಗಿರಲಿಲ್ಲ.
"ಅನುಸರಿಸಬೇಕು ಜಗ ದುಂಬಿಗಳ ಕ್ರಿಯಾಶಕ್ತಿ, ಚಲನಶೀಲತೆ
ತಲೆದೂಗಬೇಕು ಕೇಳಿ ಮಧು
ಹೀರಿ ರಾಗಿಸುವ ಅವುಗಳ
ಅಮಲಿನ ಹಾಡಿನ ಮಾಧುರ್ಯತೆ
ಎಂದು ಜೇನ್ನೊಣಗಳ ಬೆಳಗಿನ ಅದಮ್ಯ ಕಾಯಕವನ್ನು ಕಂಡು ಮೇಲಿನಂತೆ ಹಾಡುವಂತಾಯಿತು. ಇದು ದುಂಬಿಗಳಿಗೆ ಜೋಗುಳದಂತೆ ಕೇಳಿತೋ ಏನೋ ? ಗೊತ್ತಾಗಲಿಲ್ಲ. ಅವು ತಮ್ಮ ಲೋಕದಲ್ಲಿಯೇ ತಾವಿದ್ದವು. ಹೀಗೆ ಅವು ಮಲಗಿದಂತೆ ನಿಸ್ತೇಜವಾದ ಮೇಲೆ ನೋಡುವುದಿನ್ನೇನು ಎಂದು ಮೇಲೆದ್ದು ನನ್ನ ಗೂಡಿನತ್ತ ನಿಧಾನವಾಗಿ ಹೆಜ್ಜೆ ಹಾಕಿದೆ. ಹೊಸದಾಗಿ ಮನೆಯ ಮುಂದೆ ಗೂಡು ಕಟ್ಟಿಕೊಂಡು ಸಂಸಾರ ಹೂಡಿದ ಭೃಂಗಗಳನ್ನು ಮನೆಯಂಗಳಕೆ ಬಂದ ಅತಿಥಿಗಳೆಂದು, ಹೀಗೆ ದಿನವಿಡೀ ನೋಡುತ್ತಲೇ ಸಾಕಿದ ಮರಿಗಳಂತೆ ದೂರದಿಂದಲೇ ಮುದ್ದುಮಾಡಿದೆ. ತಕ್ಷಣ ನೆನಪಾಯಿತು. ಇದನ್ನು ನೋಡಿ ದುಂಬಿಗಳು ಮರಳಿ ಮುದ್ದು ಮಾಡಲು ಬಂದುಬಿಟ್ಟರೆ ಗತಿಯೇನಾಗುತ್ತದೆ ಎಂದವನೇ ಭಯಗೊಂಡು ಒಳತೂರಿಬಂದುಬಿಟ್ಟೆ. ಹೀಗೆಯೇ ಕೆಲವು ದಿನ ಕಳೆಯಿತು. ಜೇನುಗೂಡು ಹುಣ್ಣಿಮೆಯ ಚಂದಿರನಂತೆ ಬೆಳೆಯುತ್ತಿತ್ತು. ನನ್ನ ಕನಸುಗಳೂ ಕೂಡ ಬೆನ್ನತ್ತಿ ಅರಳಿಕೊಳ್ಳಲಾರಂಭಿಸಿದವು. ಈ ದುಂಬಿಗಳು ಬಯಸದೇ ಮನೆಗೆ ಬಂದ ಅಪರೂಪದ ಗೆಳೆಯರೆಂದುಕೊಂಡು ಸಂಭ್ರಮಿಸಿದೆ. ಕಾಳಿದಾಸನ ಮನೆಯ ಮುಂದಿನ ಉದ್ಯಾನವನ ನೆನಪಾಯಿತು.ಇರುವಷ್ಟು ಕಾಲ ಇಲ್ಲಿದ್ದು ಹೇಗೋ ರಾಣಿಜೇನಿನ ಮಾತುಗಳನ್ನು ಕೇಳಿ ತಮ್ಮ ಸಂಸಾರವನ್ನು ನೀಗಿಸಿಕೊಂಡು, ಮಕ್ಕಳು, ಮರಿಮಕ್ಕಳೊಂದಿಗೆ, ಮಧು ಹೀರಿ ಉದ್ಯಾನವನದಲ್ಲಿ ಗುಂಯ್ ಎಂದು ಏಕತಾರಿ ಹಿಡಿದು ಹಾಡಿದರೆ ಸಾಕು. ಶುಭೋದಯದ ಸಂಗೀತಕ್ಕೆ ದಕ್ಕುವ ಕಳೆಯೇ ವಿಭಿನ್ನ. ಕೊರಡಿನೊಳಗಣ ಸಂದಿಯಲ್ಲರಳಿಕೊಂಡ ಜೀವನದಿಂದ ಒಂದೊಮ್ಮೆ ಬೇಸರವಾಯಿತೆಂದಾಗ, ಅದುವರೆಗೂ ಎಲ್ಲಿಂದಲೋ ಹುಡುಕಿ ಹೆಕ್ಕಿ ತಂದು ತೊಟ್ಟಿಕ್ಕಿ ಸಂಗ್ರಹಿಸಿದ ಮಂದ ಕಂದು ಬಣ್ಣದ ಸವಿಜೇನನ್ನು ತಮ್ಮ ಮಕ್ಕಳು ಮೊಮ್ಮಕ್ಕಳಿಗೆಲ್ಲಾ ಕುಡಿಸಿ ಉಳಿದುದರಲ್ಲಿ ತಾವೂ ಉಂಡು, ತಮ್ಮ ಗೂಡಿನ ಕುರುಹು ಬಿಟ್ಟು ಸಂತೃಪ್ತಿಯಿಂದ ಹೋದರೆ ಸಾಕು. ಹಾರ, ತುರಾಯಿ,ವಾದ್ಯ ಗೋಷ್ಠಿಗಳಿಂದಲ್ಲದೇ ಇದ್ದರೂ, ತುಂಬುಹೃದಯದ ನಿಷ್ಕಲ್ಮಶ ಪ್ರೀತಿಯ ಆರ್ದ್ರತೆಯಿಂದಲಾದರೂ ಬೀಳ್ಕೊಟ್ಟರಾಯಿತು ಎಂದು ಮನದೊಳಗೆ ಭೃಂಗಗಳ ಭವಿತವ್ಯದ ಹಂಚಿಕೆಯ ಕನಸುಗಳನ್ನು, ಸಂಚಿಕೆಯಾಗಿ, ನನ್ನೊಳಗೇ ತುಂಬಿಕೊಳ್ಳುತ್ತಾ ಹೋದೆ.
ಹೀಗೆ ಒಂದು ಮಬ್ಬು ನಸುಕಿನಲ್ಲಿ ಎದ್ದು ಮನೆಯ ಕಿರು ಉದ್ಯಾನವನದಲ್ಲಿಯೇ ವಿಹಾರಕ್ಕಿಳಿದೆ. ಕತ್ತಲೆ ವಿದಾಯ ಹೇಳುತ್ತಿತ್ತು. ಹಕ್ಕಿಗಳ ಕಲರವ ಆಗ ತಾನೇ ಶುರುವಾಗಿತ್ತು. ನೇಸರನ ಪ್ರಥಮ ಕಿರಣಗಳು ಭುವಿ ಸ್ಪರ್ಶಕ್ಕಾಗಿ ಕಾದಿದ್ದವು. ಇನ್ನೇನು ದುಂಬಿಗಳೂ ಎದ್ದು ಬರುವ ಹೊತ್ತಾಯಿತೆಂದು ಸಂಗೀತದ ಸಾಂಗತ್ಯಕ್ಕಾಗಿ ಕಾಯುತ್ತಿದ್ದೆ. ಸೂರ್ಯ ಕಿರಣಗಳ ದರ್ಶನವಾಯಿತು. ಪಕ್ಷಿಗಳು ಗೂಡಿನಿಂದ ನಿತ್ಯ ಕಾಯಕಕ್ಕಾಗಿ ತೆರಳಿದವು. ತಂಗಾಳಿಯೂ ಭಾನು ಕಿರಣಗಳ ಅಪ್ಪುಗೆಯಿಂದ ಬೆಚ್ಚಗಾಗಲು ಪ್ರಾರಂಭಿಸಿತು. ಆದರೆ ದುಂಬಿಗಳ ಗುಂಯ್ ಗಾನ ಮಾತ್ರ ಸುಳಿಯಲೇ ಇಲ್ಲ. ಪ್ರಕೃತಿ ನಿಶ್ಯಬ್ದವೆನಿಸಿತು, ಹಾಡುವವರಿಲ್ಲದೇ ವೇದಿಕೆ ಬಿಕೋ ಎನ್ನಿಸುವ ಹಾಗೆ. ರಾತ್ರಿಯೆಲ್ಲಾ ಮಧು ಕುಡಿದು ಅಮಲಿನಲ್ಲಿ ಮಲಗಿದ ದುಂಬಿಗಳಿನ್ನೂ ನಶೆಯಿಂದ ಹೊರಬಂದಿರಲಿಕ್ಕಿಲ್ಲ. ನಾನೇ ಎಬ್ಬಿಸಿದರಾಯಿತೆಂದು ಕೊರಡುಗಳ ಸಂದಿಯೊಳಗೆ ಕಣ್ಣುಹಾಯಿಸಿದೆ. ಅಚ್ಚರಿಯೋ ಅಚ್ಚರಿ! ಆತಂಕವೋ ಆತಂಕ! ಏಕೆಂದರೆ, ದುಂಬಿಗಳು ಹೋಗಲಿ, ಜೇನುಗೂಡಿನ ಯಾವ ಕುರುಹುಗಳೂ ಅಲ್ಲಿರಲಿಲ್ಲ. ಕ್ಷಣ ಹೊತ್ತು ತಬ್ಬಿಬ್ಬಾದೆ. ದುಂಬಿಗಳ ನಶೆಯನ್ನಿಳಿಸಿ ಎಚ್ಚರಗೊಳಿಸಲು ನಾನು ಹೋದರೆ, ನನ್ನದೇ ಶುಭೋದಯದ ಮಧುರ ಉಲ್ಲಾಸವೆಲ್ಲಾ ಮಂಜು ಕರಗುವಂತೆ ಕರಗಿಹೋಯಿತು. ಮನಸ್ಸು ತಳಮಳಗೊಂಡಿತು. ಏನಾಗಿರಬಹುದು ಎಂದು ಮನೆಯವರನ್ನು ವಿಚಾರಿಸುವಾಗ, ಕೈಯ್ಯಲ್ಲೊಂದು ಬಟ್ಟಲು ಹಿಡಿದ ಕರುಳ ಕುಡಿಯೇ ಎದುರಿಗೆ ಬಂದು "ಅಪ್ಪಾ...ಜೇನು ಕುಡೀತೀಯಾ ?" ಎಂದಾಗಲೇ ನನ್ನ ಬೆಳಗಿನ ಮತ್ತೆಲ್ಲಾ ಸರ್ರನೆ ಪಾತಾಳಕ್ಕಿಳಿಯಿತು. ಮಗುವಿಗೆ ಏನೊಂದೂ ಉತ್ತರಿಸದೇ ಸ್ತಂಭೀಭೂತನಾದೆ. ಸಂಗತಿಯೇನೆಂದರೆ ಹಿಂದಿನ ದಿನವೇ ಮನೆಯವರೆಲ್ಲಾ ಸೇರಿಕೊಂಡು ಭ್ರಮರಗಳನ್ನು ಬಡಿದೋಡಿಸಿ ಗೂಡನ್ನೇ ಕಿತ್ತುಹಾಕಿ ಅದರೊಳಗಿನ ಮಧುವನ್ನು ಬಲವಂತದಿಂದ ಕಿತ್ತುಕೊಂಡಿದ್ದರು. ಇದನ್ನು ಕೇಳಿ ಮನಸ್ಸಿಗೆ ಆಘಾತವಾದಂತಾಗಿ, ಕರುಳ ಕುಡಿಗಳಂತೆಯೇ ಪ್ರೀತಿಸುತ್ತಿದ್ದ ಮರಿದುಂಬಿಗಳನ್ನು, ಕ್ರೂರವಾಗಿ ಕಳೆದುಕೊಂಡ ಭೀಕರ ನೋವನ್ನು ಮರೆಯಲಾಗದೇ ಹೊರಗೆ ಬಂದು ಒಂದು ಘಳಿಗೆ ಧ್ಯಾನದಲ್ಲಿ ಮೈಮರೆಯಲು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ಹಿಂದೊಂದು ಬಾರಿ ಮನೆಯವರು ಇಂತಹುದೇ ಪ್ರಯತ್ನಕ್ಕಿಳಿದಾಗ ಬೈದು ಈ ಆಲೋಚನೆಯಿಂದ ದೂರ ಸರಿಸಿದ್ದೆ .ಆದರೀಗ ನಾನಿಲ್ಲದ ಸರಿ ಹೊತ್ತು ನೋಡಿ ಕಾದು, ಜೇನು ಬಿಡಿಸಿದ್ದರು. ಕಣ್ಣುಗಳು ಮಂಜಾದವು. ಮೌನ ಬಿಸಿಯಾಯಿತು. ಉಸಿರು ಉರಿಯಾಯಿತು. ದುಂಬಿಗಳ ರಸಗಾನದ ಸಾಂಗತ್ಯದಲ್ಲಿ ಮೈಮರೆತು, ಕಳೆದ ನೆನಪುಗಳು ಮನದ ಗೂಡಿನಿಂದ ಒಂದೊಂದಾಗಿ ಹೊರಬರಲಾರಂಭಿಸಿದವು. ಕಳೆದುಕೊಂಡ ಭೃಂಗದ ಬೆನ್ನೇರಿ ಹೊರಟುಬಿಟ್ಟೆ. ತೇವವಾದವು ಮನಸು, ಹೃದಯಗಳು. ಮನಕಡಲಿನಿಂದ ನೋವಿನಲೆಗಳು ದಾಳಿಯಿಡಲಾರಂಭಿಸಿದವು. ಮಗು ತಂದು ಕಣ್ಣೆದುರಿಗೆ ಹಿಡಿದ ಜೇನನ್ನು ನೋಡುವ ಧೈರ್ಯವೂ ಇಲ್ಲದಾಯಿತು. ಕಣ್ಣಂಚಿನಲ್ಲಿ ಕಣ್ಣೀರು ಮಡುಗೊಂಡು ಕೆಂಪಾಗಿತ್ತು, ಜೇನಿನ ಪ್ರತಿಫಲನದಿಂದ. ಭಾಗ್ಯಗಳನ್ನು ಕೇಳಿ ಮನವೊಲಿಸಿ ಪಡೆದುಕೊಳ್ಳಬೇಕೆ ವಿನಃ ಕಿತ್ತುಕೊಳ್ಳಬಾರದಲ್ಲವೇ ? ಎಂದು ನನ್ನೊಳಗೆ ಸತ್ಯ ದರ್ಶನದ ಹುಡುಕಾಟಕ್ಕಿಳಿದೆ. ಮನುಷ್ಯ ಪ್ರಕೃತಿಯಿಂದ ಬೇಡಿ ಪಡೆದಿದ್ದಕ್ಕಿಂತ, ಕಿತ್ತುಕೊಂಡು ಕೊಳ್ಳೆ ಹೊಡೆದದ್ದೇ ಹೆಚ್ಚಲ್ಲವೇ ? ಉದ್ಯಾನವನಕ್ಕೇ ಶಿಖರಪ್ರಾಯ ಮುಕುಟದಂತಿದ್ದ ಜೇನುಗೂಡು ಮಾಯವಾಗಿತ್ತು: ಮನೆಯ ಮುಂದೆ ಒಟ್ಟಿದ ಕೊರಡುಗಳ ರಾಶಿಯೇ ದುಂಬಿಗಳ ಚಿತೆಯಾಯಿತಲ್ಲ ಎಂದು ಹಳಹಳಿಸಿ ಉಮ್ಮಳಿಸಿದೆ. ಹರ್ಷದ ಗೂಡಿಲ್ಲದ ಮನದುಂಬಿ ದಿಕ್ಕುತಪ್ಪಿ ಹಾರುತ್ತಿತ್ತು ; ಹೃದಯದರಮನೆ ಬರಿದಾಗಿತ್ತು. ಎದೆಯಗೂಡು ಬಿರಿದಾಗಿತ್ತು.
Sunday, 24 May 2020
ಸಾವಿನ ದಾರಿ..
ಸಾವಿನ ದಾರಿ
ಸ್ಮಶಾನವಾಗುತಿವೆ ಹೆದ್ದಾರಿ
ತನ್ನೊಳಗೆ ಬರುವುದೆಲ್ಲವನೂ ನುಂಗಿ ತೇಗಿ
ಅಳಿಲು, ಕುರಿ, ಕೋಳಿ, ನಾಯಿ ಬೆಕ್ಕುಗಳ
ಜೀವಗಳಿಗಂತೂ ಬೆಲೆಯೇ ಇಲ್ಲ
ಮನುಷ್ಯನ ಪ್ರಾಣಕೂ ಹಾತೊರೆಯುತಿದೆಯಲ್ಲ
ಕಪ್ಪು ರಾಕ್ಷಸನೇ ಸರಿ
ಹಿರಿದಾರಿಯೆಂದೆನಿಕೊಂಡರೂ
ವಾಹನಗಳೇ ಮೃಷ್ಟಾನ್ನ ಭೋಜನ
ಚಾಚಿದ ಕರಿನಾಲಗೆಗೆ ಹರಿಯುವ
ನೆತ್ತರು ಚಪ್ಪರಿಸುವ ಉಪ್ಪಿನಕಾಯಿ
ಹಸಿಮಾಂಸವೇ ರುಚಿಕಟ್ಟಾದ
ಭೋಗವಾಸನೆಯ ಮುದ್ದೆ
ತಿಂದು ತೇಗುವುದೊಂದೇ
ಹೊರಟ ದಾರಿಯ ನಿತ್ಯಕಾಯಕ
ಉಂಡು ಬೀಗುವುದಕೆ ಯಮಧರ್ಮನೇ ನಾಯಕ
ಯಾವ ಕಿಂದರಿಜೋಗಿ ಕರೆದೊಯ್ಯುವನೋ
ರಸ್ತೆಗಳೆಲ್ಲಾ ಜಾಮ್ ಜಾಮ್......
ಮೈದುಂಬಿಕೊಂಡ ಕಪ್ಪು ವಸ್ತ್ರದ ಮೇಲೆ
ಹರಿಯುವ ವಾಹನಗಳ ಕೋಟಿನ ಬಲೆ
ಕುಣಿಯುತ್ತ ಕಿನ್ನರಿಯನೂದುತ
ಹೊರಟ ಬಂಡಿಗಳು ಲೆಕ್ಕಕೂ ನಿಲುಕಲಾಗದ ಸೆಲೆ
ದಿಕ್ಕುತಪ್ಪಿದರೂ ಮರಳಲೇಬೇಕು
ಹೊರಳಿ ಮತ್ತೆ ಸಾವಿನ ಹಾದಿಗೆ
ಮರ ಗಿಡ ಬಳ್ಳಿ ತುಂಬಿದ ಕಾಡು
ಕಡಿದು ಕಟ್ಟಿದ ರೆಸಾರ್ಟಿನಲ್ಲಿ
ಕಂಠದವರೆಗೂ ಕುಡಿದು ಕಟ್ಟಿಕೊಂಡ ಮಹಾಪಾಪ
ಬೆನ್ನು ಬಿಡುವುದೆಲ್ಲಿ ಕೊರಗಿ
ಕರಗುತ್ತಿರುವ ಪ್ರಕೃತಿಯ ಮಹಾಶಾಪ
ಮರಗಿಡಗಳ ಮಾರಣಹೋಮ
ಮಾರ್ಗವೊಂದರ ಪ್ರತಿಷ್ಠಾಪನೆಗೆ
ಬೆಲೆಕಟ್ಟಲಾಗದ ಜನುಮಹಾನಿ
ಉಣ್ಣಲೇಬೇಕಲ್ಲವೇ ಮಾಡಿದಡುಗೆ
ಬೇವು ಬಿತ್ತಿ ಮಾವು ಕೊಂಬುವ
ದುರಾಸೆಗೆ ಬಲಿಯಿನ್ನೆಷ್ಟೋ
ಒರಗಿಹೋದ ಜೀವಗಳ ಕೊರಳಿನ ಆರ್ತನಾದಗಳೆಷ್ಟೋ
ಕುಣಿದು ಕುಪ್ಪಳಿಸುವ ಪ್ರಗತಿಯ
ದಾರಿಯೆಂದು ಬೀಗುವ ಬಾಂಧವರೇ
ಕಣ್ಣರಳಿಸಿ ತುಂಬಿಕೊಳ್ಳಿ ಸಾವಿನ ಮೆರವಣಿಗೆಯನು;
ಕರಗುತ್ತಲೇ ಕುಸಿಯುತ್ತಿರುವ ಘಟ್ಟಗಳ
ಮೈಮೇಲಿನ ಹಸಿಹಸಿಯಾದ ಗಾಯಗಳನ್ನು
ವ್ರಣಗಳಿಂದುಂಟಾದ ಕುಳಿಗಳಲ್ಲಿ ಮಡುಗಟ್ಟಿರುವ
ರಕ್ತಕಣ್ಣೀರಿನ ಹೊಳೆಯನ್ನೊಮ್ಮೆ ಹರಿಯಬಿಡಿ
ನಿಂತು ಹೋಗಲಿ ಒಮ್ಮೆ ನಿಮ್ಮ
ಮಿಡಿಯಲೊಲ್ಲದ ಪಾಪದ ಜೀವನಾಡಿ
ಹೆದ್ದಾರಿಯ ಹೆಮ್ಮಾರಿಗೆ ಜೀವಗಳ
ಕರುಳ ಹಾರಗಳಲಂಕಾರ
ಪುಟಿಯುತಿರುವ ಹೊರಬಿದ್ದ ಮೆದುಳು
ಮಿಡಿಯುತಿರುವ ಅನಾಥವಾದ ಹೃದಯದಳು
ನಡೆಸಿದಂತೆ ವಾದ್ಯಗೋಷ್ಠಿ
ಜವರಾಯನ ಆಗಮನಕೆ
ಶೋಕಗೀತೆ ಚೀರಾಟ; ಭಜನೆ ಮೇಳ ಕೂಗಾಟ
ಸಂಗೀತದ ಮಹಾವೈಭವ!!!
ದಾರಿ ತುಂಬಿಕೊಂಡ ಸುಳ್ಳಾದ ಹರಕೆ;
ಆಯುಷ್ಮಾನುಭವ! ಆಯುಷ್ಮಾನುಭವ!
Friday, 8 May 2020
ಮಧುಮೀಮಾಂಸೆ
ಕೈಯ್ಯಲ್ಲಿ ಕೋವಿ ಹಿಡಿದು ಬಾಗಿಲ ಬಳಿ ಬಲಿಗಾಗಿ ಕಾಯುತ್ತಿರುವ ಕೋವಿಡ್ - 19 ಮಹಾಮಾರಿಯ ಚೆಲ್ಲಾಟದ ಮಧ್ಯೆ ಕವಿಚಿಂತಕ ನಿಸಾರ್ ಅಹಮ್ಮದ್ ರವರನ್ನು ಕಳೆದುಕೊಂಡ ಪ್ರಾಣಸಂಕಟವನ್ನು ಎದೆಯಲ್ಲಿಯೇ ಅದುಮಿ ಹಿಡಿದುಕೊಂಡು ಮನೆಯ ತಾರಸಿಯ ಮೇಲೆ ನಿಂತು ಗಾಳಿಪಟವನ್ನು ಹಾರಿಸುವ ಹುಚ್ಚು ಸಾಹಸಕ್ಕಿಳಿದಿತ್ತು ಮನಸು.ಕವಿ ನಿಸಾರರೇ ಸಂಕಲಿಸಿದ ಹಾಗೆ ಮನಸೊಂದು ಗಾಂಧಿ ಬಜಾರು. ಕಾರಣವಿದೆ. ಮುದ್ದಿನ ಕರುಳ ಕುಡಿಗಳು ಬೆನ್ನು ಬಿದ್ದು, ಕೊರೊನಾ ಹಿಮ್ಮೆಟ್ಟಿಸಿಯಾದರೂ ಗಾಳಿಪಟಗಳನ್ನು ತಂದುಕೊಡಲೇಬೇಕು ಎಂದು ಹಠವಿಡಿದು, ಕಣ್ಣೀರಿನಿಂದ ತೊಯ್ದ ಅವರ ಕೆನ್ನೆಗಳು ಒಣಗಿದ ಹಾಳೆಯಂತಾಗಿ, ಮೂರು ದಿನಗಳು ಕಳೆದುಹೋಗಿದ್ದವು. ಇಲ್ಲವೆನ್ನಲಾಗಲಿಲ್ಲ ಮುಗ್ಧ ಮುಖಗಳನ್ನು ನೋಡಿ. ಮದ್ಯದಂಗಡಿಯ ಮುಂದೆ ಸಾಮಾಜಿಕ ಅಂತರ ಕಾಪಾಡಿಕೊಂಡು ತಾಳ್ಮೆಯಿಂದ ನಿಂತು ಕಾದಂತೆ, ಗಾಳಿಪಟದ ಅಂಗಡಿಯ ಮುಂದೆಯೂ ತುದಿಗಾಲಲ್ಲಿ ನಿಂತು ಕಾದೆ. ಹಾವಿನ ಬಾಲದಂತೆ ರಸ್ತೆಯುದ್ದಕ್ಕೂ ಚಾಚಿದ ಸಾಲಿನಿಂದ ನನ್ನ ಸರದಿ ಬಂದು ಅಂಗಡಿಯವನು ಗಾಳಿಪಟವನ್ನು ಕೈಗಿತ್ತಾಗ ಮಧುಪಾತ್ರೆಯನ್ನು ಕೈಚೀಲದೊಳಗಿಟ್ಟುಕೊಂಡಷ್ಟೇ ಖುಷಿಯಾಗಿತ್ತು ನನಗೆ. ಲಂಗುಲಗಾಮಿಲ್ಲದೇ ನಶೆಯೇರಿಸುವ ಮದಿರೆಗೂ, ಸೂತ್ರವಿಡಿದು ಮೇಲೇರುವ ಗಾಳಿಪಟಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ? ಎಂದು ಮೂಗುಮುರಿಯದಿರಿ. ಡಾ. ಗುರುದೇವಿ ಹುಲೆಪ್ಪನವರಮಠ ರವರು ಈ ಮೂಗು ಮುರಿಯುವ ಪ್ರಹಸನವನ್ನು ಕುರಿತೇ ಒಂದು ದೀರ್ಘ ಪ್ರಬಂಧವನ್ನೇ ಬರೆದಿದ್ದಾರೆ. ತರಗತಿಯಲ್ಲೊಮ್ಮೆ ಈ ಪ್ರಬಂಧದ ಚರ್ಚೆ ಮಾಡುವಾಗ, ನಾನು ವಿದ್ಯಾರ್ಥಿಗಳನ್ನು " ಯಾರು ಯಾರು ಯಾವಾಗ ಮೂಗು ಮುರಿಯುತ್ತಾರೆ ? " ಎಂದು ಕೇಳಿದೆ. ವಿದ್ಯಾರ್ಥಿಯೊಬ್ಬ ಎದ್ದು ನಿಂತವನೇ ತಡವಾದರೆ ಎಲ್ಲಿ ತನ್ನ ಉತ್ತರ ಪಂಚ್ ನ್ನು ಕಳೆದುಕೊಂಡುಬಿಡುತ್ತದೋ ಎಂಬ ಧಾವಂತದಲ್ಲಿ " ಸರ್, ಹುಡುಗಿಯರೇ ಮೂಗುಮುರಿಯುವವರು. ಅವರಿಗೆ ಕೋಪ ಬಂದಾಗ, ಮುನಿಸುಂಟಾದಾಗ, ತಿರಸ್ಕಾರದ ಭೂತ ಹೆಗಲೇರಿದಾಗ ಖಂಡಿತವಾಗಿಯೂ ಮೂಗುಮುರಿದೇ ತಮ್ಮ ಸಿಟ್ಟನ್ನು ತೀರಿಸಿಕೊಳ್ಳುತ್ತಾರೆ.." ಎಂದುಬಿಟ್ಟ. ಗೆಳೆಯನೊಬ್ಬ ಎದ್ದು ಉತ್ತರ ಹೇಳುತ್ತಿದ್ದಾನೆಂದರೆ, ಯಾವುದಾದರೊಂದು ಪಂಚ್ ಸಿಕ್ಕೇ ಸಿಗುತ್ತದೆಂಬ ಖಾತ್ರಿಯಲ್ಲಿ ಬಕ ಪಕ್ಷಿಯಂತೆ ಕಾಯುತ್ತಾ ಕುಳಿತ ಹುಡುಗರೆಲ್ಲಾ ಗೊಳ್ ಎಂದು ನಕ್ಕರೂ ಇವನದೇನು ಮಹಾ ಉತ್ತರ ? ಎಂದು ಒಳಗೊಳಗೆ ಮೂಗುಮುರಿದದ್ದು ಮಾತ್ರ ಯಾರಿಗೂ ಕಾಣಲೇ ಇಲ್ಲ. ಹುಡುಗರೆಲ್ಲಾ ಮಾನದ ವಿಷಯವೆಂದು ತೋರ್ಪಡಿಸದೇ ಮುಸಿ ಮುಸಿ ನಗುತ್ತಿದ್ದಾಗ, ಹುಡುಗಿಯರ ಕಡೆಯಿಂದ " ಇಲ್ಲ.. ಇಲ್ಲ....ಅನ್ಯಾಯ...ಸರ್..." ಎಂದು ಯುದ್ಧದ ಪ್ರಾರಂಭಕ್ಕೆ ಮಾಡುವ ಜೋರಾದ ಕಹಳೆಯ ಸದ್ದಿನಂತೆ ಎಚ್ಚರಿಕೆಯ ಧ್ವನಿವ್ಯೂಹವೊಂದು ಹೊರಟಿತು." ಸಮಾಧಾನ..... ಸಮಾಧಾನ...." ಎಂದು ಕೈಯ್ಯೆತ್ತಿ ತಡೆದಾಗ ಕೋಪದಿಂದಲೇ ಶಾಂತವಾದ ಹುಡುಗಿಯರ ಪಟಾಲಂ ನಿಂದ ವಿದ್ಯಾರ್ಥಿನಿಯೊಬ್ಬಳು ತಕ್ಷಣ ಎದ್ದು ನಿಂತು " ಮೂಗು ಮುರಿಯುವುದರಲ್ಲಿ ಗಂಡು ಹೆಣ್ಣೆಂಬ ಭೇದ ಭಾವವಿಲ್ಲ ಸರ್ ....ಎಲ್ಲರೂ ಒಂದಿಲ್ಲೊಂದು ಕಾರಣಕ್ಕೆ ಮೂಗುಮುರಿಯುವವರೇ. ಇವರೂ ಕ್ವಚಿತ್ತಾಗಿಯಾದರೂ ಮೂಗು ಮುರಿದವರೇ....ಎಂದು ಹುಡುಗರತ್ತ ಬೆರಳು ತೋರಿಸಿ ವಾಗ್ವಾದಕ್ಕಿಳಿದು ಮೂಗುಮುರಿದಳು. ಅಷ್ಟರಲ್ಲಿ ಮಧ್ಯಪ್ರವೇಶಿಸಿದ ನಾನು " ಹೌದಮ್ಮ ...ಹೌದು..ಲೇಖಕಿಯರ ಅಭಿಪ್ರಾಯವೂ ಇದೇ ಆಗಿದೆ....ಈ ಬಗ್ಗೆ ಚರ್ಚಿಸೋಣವೇ.." ಎಂದು ಸಮಾಧಾನ ಮಾಡಲು ಪ್ರಯತ್ನಿಸಿದೆ. ಅದಾಗಲೇ ಕೊನೆಯ ಬೆಂಚಿನಿಂದ ಎದ್ದುನಿಂತಿದ್ದ ಹುಡುಗನೊಬ್ಬ " ಅಯ್ಯೋ... ನೀವು ಸ್ತ್ರೀವಾದಿಗಳೇ ಹೀಗೆ... ನೀವೇ ಕಾರಣ ಎಂದರೆ ನಾವಲ್ಲ ಎನ್ನುತ್ತೀರಿ ನೀವು ಕಾರಣರಲ್ಲ ಎಂದರೆ ಎಲ್ಲವೂ ನಮ್ಮಿಂದಲೇ ಎಂದು ಬೀಗುತ್ತೀರಿ ....." ಎಂದು ಹುಡುಗಿಯರತ್ತ ಕೈ ಬೆರಳು ತೋರಿ ಕಿಡಿ ಹೊತ್ತಿಸಿದ. ಹೋಮಕ್ಕೆ ಅಗ್ನಿಸ್ಪರ್ಶ ಮಾಡಿದ ಮೇಲೆ ಇನ್ನೇನು ಕೆಲಸ ? ಮಂತ್ರ, ಶ್ಲೋಕಗಳು ಪ್ರಾರಂಭವಾಗುವ ಮುನ್ಸೂಚನೆ ದೊರೆಯಿತೆಂದೇ ಅರ್ಥ.
ನನಗೆ ಪ್ರತಿಭಾ ನಂದಕುಮಾರ ರವರ "ಹುಡುಗಿಯರೇ ಹೀಗೆ" ಕವಿತೆ ನೆನಪಾಯಿತು.-
“ಏನೇನೋ ವಟಗುಟ್ಟಿದರೂ
ಹೇಳಬೇಕಾದ್ದನ್ನು ಹೇಳದೆ
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ
ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ
ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ”
ಈ ಸಾಲುಗಳು ಸುಳ್ಳೆನಿಸಿದವು ನಮ್ಮ ವಿದ್ಯಾರ್ಥಿನಿಯರ ಧೈರ್ಯದ ಮುಂದೆ. ನನ್ನ ಉಲ್ಲೇಖವೆಲ್ಲಿ ಉರಿಯುತ್ತಿರುವ ಅಗ್ನಿಗೆ ತುಪ್ಪ ಸುರಿದಂತಾಗುತ್ತದೋ ಎಂದು ಹೆದರಿದೆ! ಆದರೂ ಎರಡೂ ಬದಿಯಿಂದ ಕೂಗಾಟ ರೇಗಾಟಗಳು ಜೋರಾಗಿಯೇ ನಡೆದವು ಎದುರುಬದುರಾಗಿ ಕುಳಿತು ಸ್ಪರ್ಧೆಗೆ ಬಿದ್ದು ಮಂತ್ರ ಹೇಳುವ ದೇವರ್ಷಿಗಳಂತೆ. ಇರಲಿ ಬಿಡಿ. ಪಾಪ ಮಕ್ಕಳು ಎಷ್ಟು ದಿವಸವಾಗಿತ್ತೋ ಹೀಗೆ ಜಗಳವಾಡದೇ ಎಂದು ತುಸು ಹೊತ್ತು ಸುಮ್ಮನಿದ್ದೆ . ಆಮೇಲೆ ನಾನು ಈ ಕದನ ಹೋಮವನ್ನು ತಡೆಯುವ ವರುಣನ ಪಾತ್ರವನ್ನು ಮಾಡಲೇಬೇಕಾಯಿತು. ತಣ್ಣನೆಯ ಮಾತುಗಳ ಜಡಿಮಳೆಯನ್ನು ಸುರಿಸಿದೆ. ಕದನ ವಿರಾಮ ಘೋಷಣೆಯಾಗಿ ಸ್ವಲ್ಪ ತಣ್ಣಗಾದಂತೆ ಕಂಡರೂ ಒಳಗಿನ್ನೂ ನಿಗಿನಿಗಿ ಕೆಂಡದಿಂದ ಹೊಗೆಯಾಡುತ್ತಲೇ ಇತ್ತು. ಕೊನೆಗೆ ಆಲಿಕಲ್ಲಿನ ವರ್ಷಧಾರೆಯನ್ನೇ ಪಟಪಟನೆ ಹನಿಸಬೇಕಾಗಿ ಬಂತು. ಬಿಸಿರಕ್ತದ ತಲೆಗಳ ಮೇಲೆ ಆಲಿಕಲ್ಲುಗಳನ್ನಿಟ್ಟರೆ ತಣ್ಣಗಾಗಲಾರವೇ ? ಆಗ ಎಲ್ಲವೂ ನೀರವ... ನಿಶಾಂತ.... ಸಮಾಧಿಮೌನ...ಲಕ್ಷ್ಮಣನ ಮುಂದೆ ಹಾರಾಡಿ ಅಬ್ಬರಿಸುತ್ತಿದ್ದ ಶೂರ್ಪನಖಿಯ ಮೂಗು ಮುರಿದಂತಾಗಿತ್ತು. ಇನ್ನೆಲ್ಲಿ ಮೂಗುಮುರಿಯುವುದು ? ಈಗ ಮೂಗುಮುರಿದು ಎಲ್ಲರನ್ನೂ ಎಚ್ಚರಿಸುವ ಸರದಿ ನನ್ನದಾಯಿತು. ಓಹೋ, ನನ್ನ ಬರಹ ಹಾದಿ ತಪ್ಪಿ ಸೀಮೋಲ್ಲಂಘನ ಮಾಡಿತೇ? ಕ್ಷಮಿಸಿ. ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ? ( ಕಾಲವಶದಿಂದ ಸಾಗರವೂ ಒಮ್ಮೊಮ್ಮೆ ಮೇರೆಯನ್ನು ದಾಟುತ್ತದೆಯಲ್ಲವೇ ) ಎಂದು ಮಹಾಮಹಿಮ ಜೈನಶಲಾಕಾ ಪುರುಷ ಹಾಗೂ ಪ್ರತಿವಾಸುದೇವನಾಗಿದ್ದ ರಾವಣನ ಚಂಚಲತೆಗೆ, ನಾಗಚಂದ್ರನೇ ಸಮರ್ಥನೆಯನ್ನು ಕೊಟ್ಟಿರುವಾಗ ನಮ್ಮಂತಹ ಹುಲುಮಾನವರ ಬರಹಕ್ಕಿನ್ನೆಲ್ಲಿಯ ಸೀಮೆಯಲ್ಲವೇ?. ಸೀತಾಪಹರಣದ ನಂತರವೂ ರಾವಣ ಕ್ಷಮೆ ಕೇಳಲಿಲ್ಲ. ನಾನಿಲ್ಲಿ ಕ್ಷಮಿಸಿ ಎನ್ನುತ್ತಿದ್ದೇನೆ. ಮತ್ತೆ ಗಾಳಿಪಟಕ್ಕೆ ಬರೋಣ. ಗಾಳಿಪಟಕ್ಕೂ ಮದ್ಯಕ್ಕೂ ಅದೆಂತಹ ಸಹಸಂಬಂಧವೆಂದು ಹೀಗಳೆಯದಿರಿ. ಮನಸಿಟ್ಟು ಮಧು ಹೀರಿ ಎದೆ ಹಗುರಾಗಿಸಿಕೊಂಡು ಉಯ್ಯಾಲೆಯಾಡುವ ಮಧುಪ್ರಿಯರಿಗೂ, ಮನಸು ಬಿಚ್ಚಿ ಮುಗಿಲೆತ್ತರಕೆ ಹಾರುವ ಗಾಳಿಪಟಕ್ಕೂ ಅವಿನಾಭವ ಸಂಬಂಧವೊಂದಿದೆ ಹೇಳುತ್ತೇನೆ ಕೇಳಿಬಿಡಿ. ಅಗಸದಲ್ಲಿ ಹರಿದಾಡುವ ಮೇಘಗಳಿಗೆ ಚುಂಬಿಸುವ ತೆರದಿ ಗಾಳಿಯನ್ನು ಕುಡಿದು ಓಲಾಡುತ್ತಾ ಹಾರುವ ಗಾಳಿಪಟ ಮನಬಂದಂತೆ ತೇಲಿ ಹಾರಾಡಿ ನಲಿಯುವುದನ್ನು ಕಣ್ಣಾರೆ ಕಂಡಿದ್ದೇವೆ. ಮಧುಪ್ರಿಯರೂ ಅಷ್ಟೇ ಒಡಲೊಳಗಳಿದ ಮಧುವಿನ ಮಹಿಮೆಯಿಂದ ರಸ್ತೆ, ಮನೆ, ಉದ್ಯಾನವನಗಳೆನ್ನದೇ, ತುಂಬೆಲ್ಲಾ ಹರಿದಾಡಿ ಹೊರಳಾಡಿ ನಿಂತಲ್ಲಿಯೇ ಅನಂತದಲ್ಲಿ ತೇಲುವುದಿಲ್ಲವೇ ?. ವ್ಯತ್ಯಾಸವೆಂದರೆ, ಮಧುಪ್ರಿಯರಿಗೆ ಭೌತಿಕವಾಗಿ ಕಾಣುವ ಬಾಲವಿಲ್ಲ. ಆದರೂ ಸಾಧ್ಯವಿರುವಷ್ಟು ಕಾಣದಂತೆ ಅವಕಾಶವಿರುವೆಡೆಯಲ್ಲೆಲ್ಲಾ ಬಿಚ್ಚುತ್ತಲೇ ಇರುತ್ತಾರೆ. ಗಾಳಿಪಟಕ್ಕೆ ಜೀವವಿಲ್ಲ. ಆದರೂ ಅಮಲನ್ನೇರಿಸಿಕೊಂಡು ಆಗಸಕ್ಕೆ ಚುಂಬಿಸಬೇಕೆಂದು ಜೀವವೂ ನಾಚುವಂತಹ ಉತ್ಸಾಹ ಪರವಶತೆಯಿಂದ ಹವಣಿಸುತ್ತಲೇ ಇರುತ್ತದೆ. ಅದೃಷ್ಟವಶಾತ್ ಗಾಳಿಪಟವನ್ನು ಸೂತ್ರದಿಂದಲಾದರೂ ಬಂಧಿಸಿ ನಿಗದಿತ ಏರಿಯಾದಲ್ಲಿ ಮಾತ್ರ ಹಾರಾಡುವಂತೆ ಮಾಡಬಹುದು. ಆದರೆ ಮಧುಪ್ರಿಯರ ಚಲನಶೀಲತೆ, ಜವ , ವೇಗಗಳನ್ನೆಲ್ಲಾ ದೇವನೇ ಬಲ್ಲ. ಕೊರೊನಾ ಕಾರಣದಿಂದ ಅಂಗಡಿಯ ಮುಂದೆ ಕೊಳ್ಳಲು ನಿಂತಾಗಲμÉ್ಟೀ ಮೂರಡಿಯ ಅಂತರದ ಸಾಲು. ಕೊಂಡ ನಂತರ ಅಂತರವೆಲ್ಲವೂ ಮಣ್ಣುಪಾಲು. ಇವರನ್ನು ಹೇಗೆ ನಿಯಂತ್ರಿಸಬಹುದು ಎಂಬುದಕ್ಕೆ ಉತ್ತರಗಳಿನ್ನೂ ಸಂಶೋಧನೆಯ ಹಂತದಲ್ಲಿಯೇ ಉಳಿದುಹೋಗಿವೆ. ಗಾಳಿಯನ್ನು ಹೀರುತ್ತಲೇ ನಿಧಾನವಾಗಿ ಮೇಲೇರಿದ ಗಾಳಿಪಟಕ್ಕೆ ಕೆಳಗಿರುವ ಭುವಿಯೇ ನಗಣ್ಯ. ಮಧುಪ್ರಿಯರ ಒಡಲೊಳಗೆ ಇಳಿದಂತೆ ಒಳಗಿರುವ ನಶೆಯ ಪಟವೂ ನೆತ್ತಿಯನ್ನೇರಿ ದಾಟಿ ಹೊರಡುವುದಕ್ಕೆ ಅಣಿಯಾಗುತ್ತದೆ. ಆಗ ಇವರಿಗೂ ಭೂಮಿ ಒಂದು ಕಾಲ್ಚೆಂಡು ಅμÉ್ಟೀ. ಒದೆಯಲದೆಷ್ಟು ವ್ಯರ್ಥ ಪ್ರಯತ್ನ ಮಾಡುವರೋ ಎಂಬುದನ್ನು ಕಣ್ತುಂಬಿಕೊಂಡೇ ಸುಖಪಡಬೇಕು. ಗಾಳಿಯನ್ನೊಮ್ಮೆ ಮನಸಾರೆ ಇಂಗಿಸಿಕೊಂಡ ಮೇಲೆ ಸಾಕಾಗುವವರೆಗೂ ಓಲಾಡಿ ತೇಲುವ ಕಥೆ ಗಾಳಿಪಟದ್ದಾದರೆ, ಮಧುಶಾಲೆಯೊಳಗೆ ಕುಳಿತು ಮನದನಿಯೆ ಸೋಮರಸವನ್ನೊಮ್ಮೆ ಗುಟುಕು ಗುಟುಕಾಗಿ ಹೀರಿದರೆ ಸಾಕು. ಅಬ್ಬಾ! ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ ಮಧುಚಂದ್ರರಿಗೆ. ಅಮಲಿನ ರಾಕೆಟ್ ಬಳಸಿ ಅಂತರಿಕ್ಷ ಯಾತ್ರಿಗಳಂತೆ ಮೇಲೇರಿದ್ದೇ ಏರಿದ್ದು. ನವಗ್ರಹಗಳನ್ನೂ ಒಮ್ಮೆ ಸುತ್ತಾಡಿ ಸುಸ್ತಾದ ಮೇಲೆ ಎಚ್ಚರವಾದಾಗಲೇ ಗೊತ್ತಾಗುವುದು ಭುವಿಗೆ ಬಂದಿಳಿದಿರುವುದು. ಗಾಳಿಪಟವೂ ಹಾಗೆಯೇ ಕುಡಿದ ಗಾಳಿಯ ನಶೆಯಿಳಿದ ಮೇಲೆಯೇ ಅಲ್ಲವೇ ಕೆಳಗಿಳಿದು ಧೊಪ್ಪನೆ ಬಾಲಮುದುರಿಕೊಂಡು ಬೀಳುವುದು.
ಈ ಮಧುಮೀಮಾಂಸೆಯನ್ನು ಕುರಿತು ಹರಿವಂಶರಾಯ್ ಬಚ್ಚನ್ ರವರ ಕವಿತೆಯನ್ನು ಕೇಳಿ-
"ಭಾವ ಮಧುವನದ
ಮದಿರೆಯನು ಕಸಿದು ತಂದಿದ್ದೇನೆ
ಯಾರೆಷ್ಟೇ ಕುಡಿದರೂ, ತುಟಿ ಕಚ್ಚಿ ಎಳೆದರೂ
ಖಾಲಿಯಾಗದು ಪ್ಯಾಲೆ ಎಂದು ನಂಬಿದ್ದೇನೆ."
ಮದಿರೆ, ಗಾಳಿಪಟ, ತಂಗಾಳಿ, ಕಾವ್ಯ, ಚಂದಿರ, ಬೆಳದಿಂಗಳು ಇವು ಜಗತ್ತಿನ ಮರೆಯಲಾಗದ ಅತ್ಯದ್ಭುತ ಸಾಂಗತ್ಯಗಳು. ಬದುಕಿನ ವ್ಯಾಖ್ಯಾನವನ್ನೇ ತಮ್ಮೊಳಗಡಗಿಸಿಕೊಂಡಿರುವ ಈ ಭುವಿಯ ವಿಸ್ಮಯಗಳಿವು. ನಾಗಚಂದ್ರನೂ ಕೂಡ ತನ್ನ "ರಾಮಚಂದ್ರಚರಿತಪುರಾಣ" ಕಾವ್ಯದಲ್ಲಿ ಹಾರಮರೀಚಿಮಂಜರಿ (ರತ್ನದ ಹಾರಗಳ ಕಿರಣ ಕಾಂತಿ), ಸುಧಾಂಶುಲೇಖೆ (ಬೆಳದಿಂಗಳ ಪುತ್ಥಳಿ), ಸುಧಾರಸಧಾರೆ( ಅಮೃತಧಾರೆ), ಕರ್ಪೂರ ಶಲಾಕೆ ಗಳಷ್ಟು ದೃಷ್ಟಿಗೆ ತಂಪನ್ನೆರೆದು ತಣಿಸಿ ಮೀರಿಸುವ ಬೇರೊಂದು ವಸ್ತು ಭುವನದಲ್ಲಿಯೇ ಇಲ್ಲವೆಂದು ಹೇಳುತ್ತಾ ಸೀತೆಯ ಸೌಂದರ್ಯವನ್ನು ಇವೆಲ್ಲವುಗಳಿಗಿಂತ ಮಿಗಿಲಾದದ್ದು ಎಂದು ಬಣ್ಣಿಸುತ್ತಾನೆ. ಸಂದರ್ಭೋಚಿತವಾಗಿ ಇವುಗಳು ಒಂದರೊಡನೊಂದು ಸೇರಿದಾಗಲಂತೂ ಕ್ಷೀರಸಾಗರದಿಂದ ಉದ್ಭವಿಸಿದ ಅಮೃತವನ್ನೂ ಮೀರಿದ ಮಹಾರಸಾಯನವೇ ಸೃಷ್ಟಿಯಾಗಿಬಿಡುತ್ತದೆ.
ಗಾಲಿಬ್ ಪ್ರೀತಿಸಿದ ಸೋಮರಸವೇ ಅವನ ಕಾವ್ಯಗಳಿಗೊಂದು ಘಮಲು ಅಮಲನ್ನು ನೀಡಿತೆಂಬುದಕ್ಕೆ ಆತ ರಚಿಸಿದ ದ್ವಿಪದಿಗಳು ಸಾಕ್ಷಿಯಾಗುತ್ತವೆ. ಮಹಾಕವಿಗಳಾದಿಯಾಗಿ ಭುವನದ ಭಾಗ್ಯವಂತರನ್ನು ಕಾಡಿದ ಮಧುಪಾತ್ರೆ ಜಗತ್ತು ಮೈಮರೆಯುವಂತೆ ಮಾಡಬಲ್ಲ ಕಾವ್ಯ ಸಾಹಿತ್ಯ ಸೃಷ್ಟಿಗೆ ತನ್ನ ಅಮಲನ್ನೆರೆದಿದೆ. ಸಾಹಿತ್ಯ, ಸಂಗೀತ, ಲಲಿತಕಲೆಗಳ ಲೋಕದಲ್ಲಿ ಮಧುವಿನದ್ದು ಕಡೆಗಣಿಸಲಾಗದ ಲೀಲಾವಿಲಾಸ. ಹಾಗೆ ಒಂದು ಸಂಜೆ ನಾನು ಹಾರಿಸಿದ ಗಾಳಿಪಟಕ್ಕೆ ಬೆರಗಾಗಿ ಚಂದಿರನೂ ಚುಂಬಿಸುತಲಿದ್ದ. ತನಗಿಷ್ಟು ನಶೆಯಿರಲಿ ಎಂದು ಅಮಲನ್ನು ಹೀರುತ್ತಲಿದ್ದ. ಚಂದ್ರಲೋಕಕ್ಕೆ ಏರಿ ಹಾರಿದ್ದ ಗಾಳಿಪಟ ಈಗ ನಶೆಯನ್ನಿಳಿಸಿಕೊಂಡು ಬಾಲವನ್ನು ಅಲ್ಲಾಡಿಸುತ್ತಲೇ ಕೆಳಗಿಳಿದಿತ್ತು. ಆಗ ಕತ್ತಲಾಗಿತ್ತು. ವಿರಹವೇದನೆಯಲ್ಲಿ ನರಳಿದ ಚಂದಿರ ಬೆಳದಿಂಗಳನ್ನೆಲ್ಲಾ ತಾನೇ ಕುಡಿದು ತೇಲಿಬಿಟ್ಟ. ಕಾಯುತ್ತಾ ಕುಳಿತಿದ್ದ ಚಕೋರಿ ಮಾತ್ರ ಬಾಯಾರಿ ಬೆಳದಿಂಗಳ ಅಮಲಿಗಾಗಿ ಕಾದು ಬಿಕ್ಕಳಿಸುತಲಿತ್ತು. ಜಗವು ಮುಕ್ಕಳಿಸುತ್ತಿತ್ತು. ಹರಿವಂಶರಾಯ್ ಬಚ್ವನ್ ರವರ ಕೊನೆಯ ಗುಟುಕು
" ನನ್ನ ಶೆರೆಯಲ್ಲಿ ಒಂದೊಂದು
ಹನಿ ಒಬ್ಬೊಬ್ಬರಿಗೂ
ನನ್ನ ಪ್ಯಾಲೆಯೊಳಗೆ
ಒಂದೊಂದು ಗುಟುಕು ಎಲ್ಲರಿಗೂ
ನನ್ನ ಸಾಕಿಯೊಳಗೆ
ಅವರವರ ಸಾಕಿಯರ ಸುಖ ಎಲ್ಲರಿಗೂ
ಯಾರಿಗೆ ಯಾವ ಹಂಬಲವೋ
ಹಾಗೇ ಕಂಡಳು ನನ್ನ ಮಧುಶಾಲಾ".
ನನಗೆ ಪ್ರತಿಭಾ ನಂದಕುಮಾರ ರವರ "ಹುಡುಗಿಯರೇ ಹೀಗೆ" ಕವಿತೆ ನೆನಪಾಯಿತು.-
“ಏನೇನೋ ವಟಗುಟ್ಟಿದರೂ
ಹೇಳಬೇಕಾದ್ದನ್ನು ಹೇಳದೆ
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ
ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ
ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ”
ಈ ಮಧುಮೀಮಾಂಸೆಯನ್ನು ಕುರಿತು ಹರಿವಂಶರಾಯ್ ಬಚ್ಚನ್ ರವರ ಕವಿತೆಯನ್ನು ಕೇಳಿ-
"ಭಾವ ಮಧುವನದ
ಮದಿರೆಯನು ಕಸಿದು ತಂದಿದ್ದೇನೆ
ಯಾರೆಷ್ಟೇ ಕುಡಿದರೂ, ತುಟಿ ಕಚ್ಚಿ ಎಳೆದರೂ
ಖಾಲಿಯಾಗದು ಪ್ಯಾಲೆ ಎಂದು ನಂಬಿದ್ದೇನೆ."
" ನನ್ನ ಶೆರೆಯಲ್ಲಿ ಒಂದೊಂದು
ಹನಿ ಒಬ್ಬೊಬ್ಬರಿಗೂ
ನನ್ನ ಪ್ಯಾಲೆಯೊಳಗೆ
ಒಂದೊಂದು ಗುಟುಕು ಎಲ್ಲರಿಗೂ
ನನ್ನ ಸಾಕಿಯೊಳಗೆ
ಅವರವರ ಸಾಕಿಯರ ಸುಖ ಎಲ್ಲರಿಗೂ
ಯಾರಿಗೆ ಯಾವ ಹಂಬಲವೋ
ಹಾಗೇ ಕಂಡಳು ನನ್ನ ಮಧುಶಾಲಾ".
ಕೈಯ್ಯಲ್ಲಿ ಕೋವಿ ಹಿಡಿದು ಬಾಗಿಲ ಬಳಿ ಬಲಿಗಾಗಿ ಕಾಯುತ್ತಿರುವ ಕೋವಿಡ್ - 19 ಮಹಾಮಾರಿಯ ಚೆಲ್ಲಾಟದ ಮಧ್ಯೆ ಕವಿಚಿಂತಕ ನಿಸಾರ್ ಅಹಮ್ಮದ್ ರವರನ್ನು ಕಳೆದುಕೊಂಡ ಪ್ರಾಣಸಂಕಟವನ್ನು ಎದೆಯಲ್ಲಿಯೇ ಅದುಮಿ ಹಿಡಿದುಕೊಂಡು ಮನೆಯ ತಾರಸಿಯ ಮೇಲೆ ನಿಂತು ಗಾಳಿಪಟವನ್ನು ಹಾರಿಸುವ ಹುಚ್ಚು ಸಾಹಸಕ್ಕಿಳಿದಿತ್ತು ಮನಸು.ಕವಿ ನಿಸಾರರೇ ಸಂಕಲಿಸಿದ ಹಾಗೆ ಮನಸೊಂದು ಗಾಂಧಿ ಬಜಾರು. ಕಾರಣವಿದೆ. ಮುದ್ದಿನ ಕರುಳ ಕುಡಿಗಳು ಬೆನ್ನು ಬಿದ್ದು, ಕೊರೊನಾ ಹಿಮ್ಮೆಟ್ಟಿಸಿಯಾದರೂ ಗಾಳಿಪಟಗಳನ್ನು ತಂದುಕೊಡಲೇಬೇಕು ಎಂದು ಹಠವಿಡಿದು, ಕಣ್ಣೀರಿನಿಂದ ತೊಯ್ದ ಅವರ ಕೆನ್ನೆಗಳು ಒಣಗಿದ ಹಾಳೆಯಂತಾಗಿ, ಮೂರು ದಿನಗಳು ಕಳೆದುಹೋಗಿದ್ದವು. ಇಲ್ಲವೆನ್ನಲಾಗಲಿಲ್ಲ ಮುಗ್ಧ ಮುಖಗಳನ್ನು ನೋಡಿ. ಮದ್ಯದಂಗಡಿಯ ಮುಂದೆ ಸಾಮಾಜಿಕ ಅಂತರ ಕಾಪಾಡಿಕೊಂಡು ತಾಳ್ಮೆಯಿಂದ ನಿಂತು ಕಾದಂತೆ, ಗಾಳಿಪಟದ ಅಂಗಡಿಯ ಮುಂದೆಯೂ ತುದಿಗಾಲಲ್ಲಿ ನಿಂತು ಕಾದೆ. ಹಾವಿನ ಬಾಲದಂತೆ ರಸ್ತೆಯುದ್ದಕ್ಕೂ ಚಾಚಿದ ಸಾಲಿನಿಂದ ನನ್ನ ಸರದಿ ಬಂದು ಅಂಗಡಿಯವನು ಗಾಳಿಪಟವನ್ನು ಕೈಗಿತ್ತಾಗ ಮಧುಪಾತ್ರೆಯನ್ನು ಕೈಚೀಲದೊಳಗಿಟ್ಟುಕೊಂಡμÉ್ಟೀ ಖುಷಿಯಾಗಿತ್ತು ನನಗೆ. ಲಂಗುಲಗಾಮಿಲ್ಲದೇ ನಶೆಯೇರಿಸುವ ಮದ್ಯಕ್ಕೂ , ಸೂತ್ರವಿಡಿದು ಮೇಲೇರುವ ಗಾಳಿಪಟಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ ? ಎಂದು ಮೂಗುಮುರಿಯದಿರಿ. ಡಾ. ಗುರುದೇವಿ ಹುಲೆಪ್ಪನವರಮಠ ರವರು ಈ ಮೂಗು ಮುರಿಯುವ ಪ್ರಹಸನವನ್ನು ಕುರಿತೇ ಒಂದು ದೀರ್ಘ ಪ್ರಬಂಧವನ್ನೇ ಬರೆದಿದ್ದಾರೆ. ತರಗತಿಯಲ್ಲೊಮ್ಮೆ ಈ ಪ್ರಬಂಧದ ಚರ್ಚೆ ಮಾಡುವಾಗ, ನಾನು ವಿದ್ಯಾರ್ಥಿಗಳನ್ನು " ಯಾರು ಯಾರು ಯಾವಾಗ ಮೂಗು ಮುರಿಯುತ್ತಾರೆ ? " ಎಂದು ಕೇಳಿದೆ. ವಿದ್ಯಾರ್ಥಿಯೊಬ್ಬ ಎದ್ದು ನಿಂತವನೇ ತಡವಾದರೆ ಎಲ್ಲಿ ತನ್ನ ಉತ್ತರ ಪಂಚ್ ನ್ನು ಕಳೆದುಕೊಂಡುಬಿಡುತ್ತದೋ ಎಂಬ ಧಾವಂತದಲ್ಲಿ " ಸರ್, ಹುಡುಗಿಯರೇ ಮೂಗುಮುರಿಯುವವರು. ಅವರಿಗೆ ಕೋಪ ಬಂದಾಗ, ಮುನಿಸುಂಟಾದಾಗ, ತಿರಸ್ಕಾರದ ಭೂತ ಹೆಗಲೇರಿದಾಗ ಖಂಡಿತವಾಗಿಯೂ ಮೂಗುಮುರಿದೇ ತಮ್ಮ ಸಿಟ್ಟನ್ನು ತೀರಿಸಿಕೊಳ್ಳುತ್ತಾರೆ.." ಎಂದುಬಿಟ್ಟ. ಗೆಳೆಯನೊಬ್ಬ ಎದ್ದು ಉತ್ತರ ಹೇಳುತ್ತಿದ್ದಾನೆಂದರೆ, ಯಾವುದಾದರೊಂದು ಪಂಚ್ ಸಿಕ್ಕೇ ಸಿಗುತ್ತದೆಂಬ ಖಾತ್ರಿಯಲ್ಲಿ ಬಕ ಪಕ್ಷಿಯಂತೆ ಕಾಯುತ್ತಾ ಕುಳಿತ ಹುಡುಗರೆಲ್ಲಾ ಗೊಳ್ ಎಂದು ನಕ್ಕರೂ ಇವನದೇನು ಮಹಾ ಉತ್ತರ ? ಎಂದು ಒಳಗೊಳಗೆ ಮೂಗುಮುರಿದದ್ದು ಮಾತ್ರ ಯಾರಿಗೂ ಕಾಣಲೇ ಇಲ್ಲ. ಹುಡುಗರೆಲ್ಲಾ ಮಾನದ ವಿಷಯವೆಂದು ತೋರ್ಪಡಿಸದೇ ಮುಸಿ ಮುಸಿ ನಗುತ್ತಿದ್ದಾಗ, ಹುಡುಗಿಯರ ಕಡೆಯಿಂದ " ಇಲ್ಲ.. ಇಲ್ಲ....ಅನ್ಯಾಯ...ಸರ್..." ಎಂದು ಯುದ್ಧದ ಪ್ರಾರಂಭಕ್ಕೆ ಮಾಡುವ ಜೋರಾದ ಕಹಳೆಯ ಸದ್ದಿನಂತೆ ಎಚ್ಚರಿಕೆಯ ಧ್ವನಿವ್ಯೂಹವೊಂದು ಹೊರಟಿತು." ಸಮಾಧಾನ..... ಸಮಾಧಾನ...." ಎಂದು ಕೈಯ್ಯೆತ್ತಿ ತಡೆದಾಗ ಕೋಪದಿಂದಲೇ ಶಾಂತವಾದ ಹುಡುಗಿಯರ ಪಟಾಲಂ ನಿಂದ ವಿದ್ಯಾರ್ಥಿನಿಯೊಬ್ಬಳು ತಕ್ಷಣ ಎದ್ದು ನಿಂತು " ಮೂಗು ಮುರಿಯುವುದರಲ್ಲಿ ಗಂಡು ಹೆಣ್ಣೆಂಬ ಭೇದ ಭಾವವಿಲ್ಲ ಸರ್ ....ಎಲ್ಲರೂ ಒಂದಿಲ್ಲೊಂದು ಕಾರಣಕ್ಕೆ ಮೂಗುಮುರಿಯುವವರೇ. ಇವರೂ ಕ್ವಚಿತ್ತಾಗಿಯಾದರೂ ಮೂಗು ಮುರಿದವರೇ....ಎಂದು ಹುಡುಗರತ್ತ ಬೆರಳು ತೋರಿಸಿ ವಾಗ್ವಾದಕ್ಕಿಳಿದು ಮೂಗುಮುರಿದಳು. ಅಷ್ಟರಲ್ಲಿ ಮಧ್ಯಪ್ರವೇಶಿಸಿದ ನಾನು " ಹೌದಮ್ಮ ...ಹೌದು..ಲೇಖಕಿಯರ ಅಭಿಪ್ರಾಯವೂ ಇದೇ ಆಗಿದೆ....ಈ ಬಗ್ಗೆ ಚರ್ಚಿಸೋಣವೇ.." ಎಂದು ಸಮಾಧಾನ ಮಾಡಲು ಪ್ರಯತ್ನಿಸಿದೆ. ಅದಾಗಲೇ ಕೊನೆಯ ಬೆಂಚಿನಿಂದ ಎದ್ದುನಿಂತಿದ್ದ ಹುಡುಗನೊಬ್ಬ " ಅಯ್ಯೋ... ನೀವು ಸ್ತ್ರೀವಾದಿಗಳೇ ಹೀಗೆ... ನೀವೇ ಕಾರಣ ಎಂದರೆ ನಾವಲ್ಲ ಎನ್ನುತ್ತೀರಿ ನೀವು ಕಾರಣರಲ್ಲ ಎಂದರೆ ಎಲ್ಲವೂ ನಮ್ಮಿಂದಲೇ ಎಂದು ಬೀಗುತ್ತೀರಿ ....." ಎಂದು ಹುಡುಗಿಯರತ್ತ ಕೈ ಬೆರಳು ತೋರಿ ಕಿಡಿ ಹೊತ್ತಿಸಿದ. ಹೋಮಕ್ಕೆ ಅಗ್ನಿಸ್ಪರ್ಶ ಮಾಡಿದ ಮೇಲೆ ಇನ್ನೇನು ಕೆಲಸ ? ಮಂತ್ರ, ಶ್ಲೋಕಗಳು ಪ್ರಾರಂಭವಾಗುವ ಮುನ್ಸೂಚನೆ ದೊರೆಯಿತೆಂದೇ ಅರ್ಥ. ನನಗೆ ಪ್ರತಿಭಾ ನಂದಕುಮಾರ ರವರ "ಹುಡುಗಿಯರೇ ಹೀಗೆ" ಕವಿತೆ ನೆನಪಾಯಿತು.-
“ಏನೇನೋ ವಟಗುಟ್ಟಿದರೂ
ಹೇಳಬೇಕಾದ್ದನ್ನು ಹೇಳದೆ
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ
ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ
ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ”
ಈ ಸಾಲುಗಳು ಸುಳ್ಳೆನಿಸಿದವು ನಮ್ಮ ವಿದ್ಯಾರ್ಥಿನಿಯರ ಧೈರ್ಯದ ಮುಂದೆ. ನನ್ನ ಉಲ್ಲೇಖವೆಲ್ಲಿ ಉರಿಯುತ್ತಿರುವ ಅಗ್ನಿಗೆ ತುಪ್ಪ ಸುರಿದಂತಾಗುತ್ತದೋ ಎಂದು ಹೆದರಿದೆ! ಆದರೂ ಎರಡೂ ಬದಿಯಿಂದ ಕೂಗಾಟ ರೇಗಾಟಗಳು ಜೋರಾಗಿಯೇ ನಡೆದವು ಎದುರುಬದುರಾಗಿ ಕುಳಿತು ಸ್ಪರ್ಧೆಗೆ ಬಿದ್ದು ಮಂತ್ರ ಹೇಳುವ ದೇವರ್ಷಿಗಳಂತೆ. ಇರಲಿ ಬಿಡಿ. ಪಾಪ ಮಕ್ಕಳು ಎಷ್ಟು ದಿವಸವಾಗಿತ್ತೋ ಹೀಗೆ ಜಗಳವಾಡದೇ ಎಂದು ತುಸು ಹೊತ್ತು ಸುಮ್ಮನಿದ್ದೆ . ಆಮೇಲೆ ನಾನು ಈ ಕದನ ಹೋಮವನ್ನು ತಡೆಯುವ ವರುಣನ ಪಾತ್ರವನ್ನು ಮಾಡಲೇಬೇಕಾಯಿತು. ತಣ್ಣನೆಯ ಮಾತುಗಳ ಜಡಿಮಳೆಯನ್ನು ಸುರಿಸಿದೆ. ಕದನ ವಿರಾಮ ಘೋಷಣೆಯಾಗಿ ಸ್ವಲ್ಪ ತಣ್ಣಗಾದಂತೆ ಕಂಡರೂ ಒಳಗಿನ್ನೂ ನಿಗಿನಿಗಿ ಕೆಂಡದಿಂದ ಹೊಗೆಯಾಡುತ್ತಲೇ ಇತ್ತು. ಕೊನೆಗೆ ಆಲಿಕಲ್ಲಿನ ವರ್ಷಧಾರೆಯನ್ನೇ ಪಟಪಟನೆ ಹನಿಸಬೇಕಾಗಿ ಬಂತು. ಬಿಸಿರಕ್ತದ ತಲೆಗಳ ಮೇಲೆ ಆಲಿಕಲ್ಲುಗಳನ್ನಿಟ್ಟರೆ ತಣ್ಣಗಾಗಲಾರವೇ ? ಆಗ ಎಲ್ಲವೂ ನೀರವ... ನಿಶಾಂತ.... ಸಮಾಧಿಮೌನ...ಲಕ್ಷ್ಮಣನ ಮುಂದೆ ಹಾರಾಡಿ ಅಬ್ಬರಿಸುತ್ತಿದ್ದ ಶೂರ್ಪನಖಿಯ ಮೂಗು ಮುರಿದಂತಾಗಿತ್ತು. ಇನ್ನೆಲ್ಲಿ ಮೂಗುಮುರಿಯುವುದು ? ಈಗ ಮೂಗುಮುರಿದು ಎಲ್ಲರನ್ನೂ ಎಚ್ಚರಿಸುವ ಸರದಿ ನನ್ನದಾಯಿತು. ಓಹೋ, ನನ್ನ ಬರಹ ಹಾದಿ ತಪ್ಪಿ ಸೀಮೋಲ್ಲಂಘನ ಮಾಡಿತೇ? ಕ್ಷಮಿಸಿ. ಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ? ( ಕಾಲವಶದಿಂದ ಸಾಗರವೂ ಒಮ್ಮೊಮ್ಮೆ ಮೇರೆಯನ್ನು ದಾಟುತ್ತದೆಯಲ್ಲವೇ ) ಎಂದು ಮಹಾಮಹಿಮ ಜೈನಶಲಾಕಾ ಪುರುಷ ಹಾಗೂ ಪ್ರತಿವಾಸುದೇವನಾಗಿದ್ದ ರಾವಣನ ಚಂಚಲತೆಗೆ, ನಾಗಚಂದ್ರನೇ ಸಮರ್ಥನೆಯನ್ನು ಕೊಟ್ಟಿರುವಾಗ ನಮ್ಮಂತಹ ಹುಲುಮಾನವರ ಬರಹಕ್ಕಿನ್ನೆಲ್ಲಿಯ ಸೀಮೆಯಲ್ಲವೇ?. ಸೀತಾಪಹರಣದ ನಂತರವೂ ರಾವಣ ಕ್ಷಮೆ ಕೇಳಲಿಲ್ಲ. ನಾನಿಲ್ಲಿ ಕ್ಷಮಿಸಿ ಎನ್ನುತ್ತಿದ್ದೇನೆ. ಮತ್ತೆ ಗಾಳಿಪಟಕ್ಕೆ ಬರೋಣ. ಗಾಳಿಪಟಕ್ಕೂ ಮದ್ಯಕ್ಕೂ ಅದೆಂತಹ ಸಹಸಂಬಂಧವೆಂದು ಹೀಗಳೆಯದಿರಿ. ಮನಸಿಟ್ಟು ಮಧು ಹೀರಿ ಎದೆ ಹಗುರಾಗಿಸಿಕೊಂಡು ಉಯ್ಯಾಲೆಯಾಡುವ ಮಧುಪ್ರಿಯರಿಗೂ, ಮನಸು ಬಿಚ್ಚಿ ಮುಗಿಲೆತ್ತರಕೆ ಹಾರುವ ಗಾಳಿಪಟಕ್ಕೂ ಅವಿನಾಭವ ಸಂಬಂಧವೊಂದಿದೆ ಹೇಳುತ್ತೇನೆ ಕೇಳಿಬಿಡಿ. ಅಗಸದಲ್ಲಿ ಹರಿದಾಡುವ ಮೇಘಗಳಿಗೆ ಚುಂಬಿಸುವ ತೆರದಿ ಗಾಳಿಯನ್ನು ಕುಡಿದು ಓಲಾಡುತ್ತಾ ಹಾರುವ ಗಾಳಿಪಟ ಮನಬಂದಂತೆ ತೇಲಿ ಹಾರಾಡಿ ನಲಿಯುವುದನ್ನು ಕಣ್ಣಾರೆ ಕಂಡಿದ್ದೇವೆ. ಮಧುಪ್ರಿಯರೂ ಅμÉ್ಟೀ. ಒಡಲೊಳಗಳಿದ ಮಧುವಿನ ಮಹಿಮೆಯಿಂದ ರಸ್ತೆ, ಮನೆ, ಉದ್ಯಾನವನಗಳೆನ್ನದೇ, ತುಂಬೆಲ್ಲಾ ಹರಿದಾಡಿ ಹೊರಳಾಡಿ ನಿಂತಲ್ಲಿಯೇ ಅನಂತದಲ್ಲಿ ತೇಲುವುದಿಲ್ಲವೇ ?. ವ್ಯತ್ಯಾಸವೆಂದರೆ, ಮಧುಪ್ರಿಯರಿಗೆ ಭೌತಿಕವಾಗಿ ಕಾಣುವ ಬಾಲವಿಲ್ಲ. ಆದರೂ ಸಾಧ್ಯವಿರುವಷ್ಟು ಕಾಣದಂತೆ ಅವಕಾಶವಿರುವೆಡೆಯಲ್ಲೆಲ್ಲಾ ಬಿಚ್ಚುತ್ತಲೇ ಇರುತ್ತಾರೆ. ಗಾಳಿಪಟಕ್ಕೆ ಜೀವವಿಲ್ಲ. ಆದರೂ ಅಮಲನ್ನೇರಿಸಿಕೊಂಡು ಆಗಸಕ್ಕೆ ಚುಂಬಿಸಬೇಕೆಂದು ಜೀವವೂ ನಾಚುವಂತಹ ಉತ್ಸಾಹ ಪರವಶತೆಯಿಂದ ಹವಣಿಸುತ್ತಲೇ ಇರುತ್ತದೆ. ಅದೃಷ್ಟವಶಾತ್ ಗಾಳಿಪಟವನ್ನು ಸೂತ್ರದಿಂದಲಾದರೂ ಬಂಧಿಸಿ ನಿಗದಿತ ಏರಿಯಾದಲ್ಲಿ ಮಾತ್ರ ಹಾರಾಡುವಂತೆ ಮಾಡಬಹುದು. ಆದರೆ ಮಧುಪ್ರಿಯರ ಚಲನಶೀಲತೆ, ಜವ , ವೇಗಗಳನ್ನೆಲ್ಲಾ ದೇವನೇ ಬಲ್ಲ. ಕೊರೊನಾ ಕಾರಣದಿಂದ ಅಂಗಡಿಯ ಮುಂದೆ ಕೊಳ್ಳಲು ನಿಂತಾಗಲμÉ್ಟೀ ಮೂರಡಿಯ ಅಂತರದ ಸಾಲು. ಕೊಂಡ ನಂತರ ಅಂತರವೆಲ್ಲವೂ ಮಣ್ಣುಪಾಲು. ಇವರನ್ನು ಹೇಗೆ ನಿಯಂತ್ರಿಸಬಹುದು ಎಂಬುದಕ್ಕೆ ಉತ್ತರಗಳಿನ್ನೂ ಸಂಶೋಧನೆಯ ಹಂತದಲ್ಲಿಯೇ ಉಳಿದುಹೋಗಿವೆ. ಗಾಳಿಯನ್ನು ಹೀರುತ್ತಲೇ ನಿಧಾನವಾಗಿ ಮೇಲೇರಿದ ಗಾಳಿಪಟಕ್ಕೆ ಕೆಳಗಿರುವ ಭುವಿಯೇ ನಗಣ್ಯ. ಮಧುಪ್ರಿಯರ ಒಡಲೊಳಗೆ ಇಳಿದಂತೆ ಒಳಗಿರುವ ನಶೆಯ ಪಟವೂ ನೆತ್ತಿಯನ್ನೇರಿ ದಾಟಿ ಹೊರಡುವುದಕ್ಕೆ ಅಣಿಯಾಗುತ್ತದೆ. ಆಗ ಇವರಿಗೂ ಭೂಮಿ ಒಂದು ಕಾಲ್ಚೆಂಡು ಅμÉ್ಟೀ. ಒದೆಯಲದೆಷ್ಟು ವ್ಯರ್ಥ ಪ್ರಯತ್ನ ಮಾಡುವರೋ ಎಂಬುದನ್ನು ಕಣ್ತುಂಬಿಕೊಂಡೇ ಸುಖಪಡಬೇಕು. ಗಾಳಿಯನ್ನೊಮ್ಮೆ ಮನಸಾರೆ ಇಂಗಿಸಿಕೊಂಡ ಮೇಲೆ ಸಾಕಾಗುವವರೆಗೂ ಓಲಾಡಿ ತೇಲುವ ಕಥೆ ಗಾಳಿಪಟದ್ದಾದರೆ, ಮಧುಶಾಲೆಯೊಳಗೆ ಕುಳಿತು ಮನದನಿಯೆ ಸೋಮರಸವನ್ನೊಮ್ಮೆ ಗುಟುಕು ಗುಟುಕಾಗಿ ಹೀರಿದರೆ ಸಾಕು. ಅಬ್ಬಾ! ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ ಮಧುಚಂದ್ರರಿಗೆ. ಅಮಲಿನ ರಾಕೆಟ್ ಬಳಸಿ ಅಂತರಿಕ್ಷ ಯಾತ್ರಿಗಳಂತೆ ಮೇಲೇರಿದ್ದೇ ಏರಿದ್ದು. ನವಗ್ರಹಗಳನ್ನೂ ಒಮ್ಮೆ ಸುತ್ತಾಡಿ ಸುಸ್ತಾದ ಮೇಲೆ ಎಚ್ಚರವಾದಾಗಲೇ ಗೊತ್ತಾಗುವುದು ಭುವಿಗೆ ಬಂದಿಳಿದಿರುವುದು. ಗಾಳಿಪಟವೂ ಹಾಗೆಯೇ ಕುಡಿದ ಗಾಳಿಯ ನಶೆಯಿಳಿದ ಮೇಲೆಯೇ ಅಲ್ಲವೇ ಕೆಳಗಿಳಿದು ಧೊಪ್ಪನೆ ಬಾಲಮುದುರಿಕೊಂಡು ಬೀಳುವುದು. ಈ ಮಧುಮೀಮಾಂಸೆಯನ್ನು ಕುರಿತು ಹರಿವಂಶರಾಯ್ ಬಚ್ಚನ್ ರವರ ಕವಿತೆಯನ್ನು ಕೇಳಿ-
"ಭಾವ ಮಧುವನದ
ಮದಿರೆಯನು ಕಸಿದು ತಂದಿದ್ದೇನೆ
ಯಾರೆμÉ್ಟೀ ಕುಡಿದರೂ, ತುಟಿ ಕಚ್ಚಿ ಎಳೆದರೂ
ಖಾಲಿಯಾಗದು ಪ್ಯಾಲೆ ಎಂದು ನಂಬಿದ್ದೇನೆ."
ಮದಿರೆ, ಗಾಳಿಪಟ, ತಂಗಾಳಿ, ಕಾವ್ಯ, ಚಂದಿರ, ಬೆಳದಿಂಗಳು ಇವು ಜಗತ್ತಿನ ಮರೆಯಲಾಗದ ಅತ್ಯದ್ಭುತ ಸಾಂಗತ್ಯಗಳು. ಬದುಕಿನ ವ್ಯಾಖ್ಯಾನವನ್ನೇ ತಮ್ಮೊಳಗಡಗಿಸಿಕೊಂಡಿರುವ ಈ ಭುವಿಯ ವಿಸ್ಮಯಗಳಿವು. ನಾಗಚಂದ್ರನೂ ಕೂಡ ತನ್ನ "ರಾಮಚಂದ್ರಚರಿತಪುರಾಣ" ಕಾವ್ಯದಲ್ಲಿ ಹಾರಮರೀಚಿಮಂಜರಿ (ರತ್ನದ ಹಾರಗಳ ಕಿರಣ ಕಾಂತಿ), ಸುಧಾಂಶುಲೇಖೆ (ಬೆಳದಿಂಗಳ ಪುತ್ಥಳಿ), ಸುಧಾರಸಧಾರೆ( ಅಮೃತಧಾರೆ), ಕರ್ಪೂರ ಶಲಾಕೆ ಗಳಷ್ಟು ದೃಷ್ಟಿಗೆ ತಂಪನ್ನೆರೆದು ತಣಿಸಿ ಮೀರಿಸುವ ಬೇರೊಂದು ವಸ್ತು ಭುವನದಲ್ಲಿಯೇ ಇಲ್ಲವೆಂದು ಹೇಳುತ್ತಾ ಸೀತೆಯ ಸೌಂದರ್ಯವನ್ನು ಇವೆಲ್ಲವುಗಳಿಗಿಂತ ಮಿಗಿಲಾದದ್ದು ಎಂದು ಬಣ್ಣಿಸುತ್ತಾನೆ. ಸಂದರ್ಭೋಚಿತವಾಗಿ ಇವುಗಳು ಒಂದರೊಡನೊಂದು ಸೇರಿದಾಗಲಂತೂ ಕ್ಷೀರಸಾಗರದಿಂದ ಉದ್ಭವಿಸಿದ ಅಮೃತವನ್ನೂ ಮೀರಿದ ಮಹಾರಸಾಯನವೇ ಸೃಷ್ಟಿಯಾಗಿಬಿಡುತ್ತದೆ.
ಗಾಲಿಬ್ ಪ್ರೀತಿಸಿದ ಸೋಮರಸವೇ ಅವನ ಕಾವ್ಯಗಳಿಗೊಂದು ಘಮಲು ಅಮಲನ್ನು ನೀಡಿತೆಂಬುದಕ್ಕೆ ಆತ ರಚಿಸಿದ ದ್ವಿಪದಿಗಳು ಸಾಕ್ಷಿಯಾಗುತ್ತವೆ. ಮಹಾಕವಿಗಳಾದಿಯಾಗಿ ಭುವನದ ಭಾಗ್ಯವಂತರನ್ನು ಕಾಡಿದ ಮಧುಪಾತ್ರೆ ಜಗತ್ತು ಮೈಮರೆಯುವಂತೆ ಮಾಡಬಲ್ಲ ಕಾವ್ಯ ಸಾಹಿತ್ಯ ಸೃಷ್ಟಿಗೆ ತನ್ನ ಅಮಲನ್ನೆರೆದಿದೆ. ಸಾಹಿತ್ಯ, ಸಂಗೀತ, ಲಲಿತಕಲೆಗಳ ಲೋಕದಲ್ಲಿ ಮಧುವಿನದ್ದು ಕಡೆಗಣಿಸಲಾಗದ ಲೀಲಾವಿಲಾಸ. ಹಾಗೆ ಒಂದು ಸಂಜೆ ನಾನು ಹಾರಿಸಿದ ಗಾಳಿಪಟಕ್ಕೆ ಬೆರಗಾಗಿ ಚಂದಿರನೂ ಚುಂಬಿಸುತಲಿದ್ದ. ತನಗಿಷ್ಟು ನಶೆಯಿರಲಿ ಎಂದು ಅಮಲನ್ನು ಹೀರುತ್ತಲಿದ್ದ. ಚಂದ್ರಲೋಕಕ್ಕೆ ಏರಿ ಹಾರಿದ್ದ ಗಾಳಿಪಟ ಈಗ ನಶೆಯನ್ನಿಳಿಸಿಕೊಂಡು ಬಾಲವನ್ನು ಅಲ್ಲಾಡಿಸುತ್ತಲೇ ಕೆಳಗಿಳಿದಿತ್ತು. ಆಗ ಕತ್ತಲಾಗಿತ್ತು. ವಿರಹವೇದನೆಯಲ್ಲಿ ನರಳಿದ ಚಂದಿರ ಬೆಳದಿಂಗಳನ್ನೆಲ್ಲಾ ತಾನೇ ಕುಡಿದು ತೇಲಿಬಿಟ್ಟ. ಕಾಯುತ್ತಾ ಕುಳಿತಿದ್ದ ಚಕೋರಿ ಮಾತ್ರ ಬಾಯಾರಿ ಬೆಳದಿಂಗಳ ಅಮಲಿಗಾಗಿ ಕಾದು ಬಿಕ್ಕಳಿಸುತಲಿತ್ತು. ಜಗವು ಮುಕ್ಕಳಿಸುತ್ತಿತ್ತು. ಹರಿವಂಶರಾಯ್ ಬಚ್ವನ್ ರವರ
ಕೊನೆಯ ಗುಟುಕು
" ನನ್ನ ಶೆರೆಯಲ್ಲಿ ಒಂದೊಂದು
ಹನಿ ಒಬ್ಬೊಬ್ಬರಿಗೂ
ನನ್ನ ಪ್ಯಾಲೆಯೊಳಗೆ
ಒಂದೊಂದು ಗುಟುಕು ಎಲ್ಲರಿಗೂ
ನನ್ನ ಸಾಕಿಯೊಳಗೆ
ಅವರವರ ಸಾಕಿಯರ ಸುಖ ಎಲ್ಲರಿಗೂ
ಯಾರಿಗೆ ಯಾವ ಹಂಬಲವೋ
ಹಾಗೇ ಕಂಡಳು ನನ್ನ ಮಧುಶಾಲಾ.
Subscribe to:
Posts (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
'ತುಘಲಕ್'ನೊಂದಿಗೆ ಮಾತಿಗಿಳಿದಾಗ... ಪುರಾಣವನ್ನಾಧರಿಸಿದ 'ಯಯಾತಿ' ಚರಿತ್ರೆಯನ್ನಾಧರಿಸಿದ 'ತುಘಲಕ್' ನಂತಹ ಶ್ರೇಷ್ಠ ನಾಟಕಗಳನ...
-
ಚಂದ್ರಗಿರಿಯ ತೀರದಲ್ಲಿ ಮಹಿಳೆ... ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭ. ಅಂತಿಮ ವರ್ಷದ ಬಿ ಎ ತರಗತಿಯಲ್ಲಿ ( ಐಚ್ಛಿಕ ಕನ್ನಡ ವಿಷಯ) ಸ್ತ್ರೀ ಸಂವೇದನೆಯ, ಬಂಡಾಯ ಲೇಖಕ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...


















