Total Pageviews

Friday, 17 April 2020

ಒಂದು ನಕ್ಷತ್ರದ ಕಥೆ

ಒಂದು ನಕ್ಷತ್ರದ ಕಥೆ
    ಕೈಯ್ಯಲ್ಲೊಂದು ಬೊಂಬೆ ಹಿಡಿದೋ, ಮನೆಯಂಗಳದಲ್ಲಿ ಗೆಳತಿಯರೊಂದಿಗೆ ಆಟವಾಡಿಯೋ ತೊದಲುನುಡಿಗಳನ್ನಾಡುತ್ತಾ ಮುಗ್ಧತೆಯ ಬದ್ದತೆಯಲ್ಲಿ ಬಾಲ್ಯವನ್ನು ಕಳೆಯಬೇಕಾಗಿದ್ದ ನರ್ಗೀಸ್ ಎಂಬ ‘ಸುಂದರ ಹೂವು’ ( ಪರ್ಷಿಯನ್ ಭಾಷೆಯಲ್ಲಿ ನರ್ಗೀಸ್ ಎಂದರೆ ಸುಂದರ ಹೂ ಎಂದರ್ಥ) ಸ್ವಚ್ಛಂದವಾಗಿ ಅರಳಬೇಕಾಗಿದ್ದ ವಯಸ್ಸಿನಲ್ಲಿಯೇ ಬಣ್ಣದ ಬದುಕಿಗೆ ತನ್ನನ್ನು ಅರ್ಪಿಸಿಕೊಂಡುಬಿಟ್ಟಿತ್ತು. ಹೀಗೆ ವಯಸ್ಸಲ್ಲದ ವಯಸ್ಸಿನಲ್ಲಿ ಬಾಲನಟಿಯಾಗಿ ಪರದೆಯ ಮೇಲೆ ಕಾಣಿಸಿಕೊಂಡ ಆಕೆಯ ಮೊದಲ ಚಿತ್ರ 'ತಲಾಶ್ ಎ ಹಕ್'. ಆಗ ಆಕೆಯ ವಯಸ್ಸು ಕೇವಲ ಆರು ವರ್ಷ. ನಾಯಕಿಯಾಗಿ ನಟಿಸಿದ ಮೊದಲ ಚಿತ್ರ "ತಮನ್ನಾ" ತೆರೆ ಕಂಡಾಗ ಈಕೆಗಿನ್ನೂ ಹದಿನಾಲ್ಕು ವರ್ಷ ವಯಸ್ಸು. ಹೀಗೆ ಬಾಲ್ಯದ ಬಣ್ಣ ಬಣ್ಣದ ಕನಸುಗಳಲ್ಲಿ ಮುಳುಗಿಹೋಗಬೇಕಾಗಿದ್ದ ನರ್ಗೀಸ್, ಹೊತ್ತಲ್ಲದ ಹೊತ್ತಿನಲ್ಲಿ ಕಲಾವಿದೆಯಾಗಿ ತನ್ನ ಬದುಕನ್ನು ರೂಪಿಸಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಳು. ಇಲ್ಲಿಂದ ಈಕೆ ಹೊರಳಿ ನೋಡಿದ್ದೇ ಇಲ್ಲ.  1949ರಲ್ಲಿ ‘ಬರ್ಸಾತ್’ ಮತ್ತು ‘ಅಂದಾಜ್’; 1951ರ ‘ಆವಾರಾ’ ಮತ್ತು ‘ದೀದಾರ್’; 1955ರ ‘ಶ್ರೀ 420’ ಮತ್ತು 1956ರ ‘ಚೋರಿ ಚೋರಿ’ ಸಿನೇಮಾಗಳು ಈಕೆಯನ್ನು ಚಿತ್ರರಂಗದ ಧೃವತಾರೆಯಾಗಿ ಕಂಗೊಳಿಸುವಂತೆ ಮಾಡಿಬಿಟ್ಟವು. ಈ ಯಶಸ್ಸಿನ ಹಿಂದೆ ರಾಜ್ ಕಪೂರ ನ ಪರಿಶ್ರಮದ ಪಾತ್ರವೂ ಮಹತ್ವದ್ದಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. 1929 ರ ಜೂನ್ 1 ರಲ್ಲಿ ತಂದೆ ಅಬ್ದುಲ್ ರಶೀದ್, ತಾಯಿ ಜದ್ದಾನ್ ಬಾಯಿ ಯ ಮಗಳಾಗಿ ಜನಿಸಿದ ಈಕೆಯ ಪೂರ್ವಾಶ್ರಮದ ಹೆಸರು ಫಾತೀಮಾ ರಶೀದ್. ಅದಾಗಲೇ ಸಂಗೀತಗಾರ್ತಿಯಾಗಿ ಹೆಸರು ಮಾಡಿದ್ದ ತಾಯಿ ಜದ್ದಾನ್ ಬಾಯಿಯ ಗರಡಿಯಲ್ಲಿ ಬೆಳೆದು ಬಂದ ನರ್ಗೀಸ್ ಳಿಗೆ ಬಾಲ್ಯದಲ್ಲಿಯೇ ಚಿತ್ರರಂಗದ ಮಹಾಮಹಿಮರ ಒಡನಾಟ ದಕ್ಕಿದ್ದು ಆಕೆ ಚಲನಚಿತ್ರರಂಗದಲ್ಲಿ ಖ್ಯಾತ ಅಭಿನೇತ್ರಿಯಾಗಿ ಬೆಳಗಲು ಕಾರಣವಾಯಿತು. ಮುಂಬೈನ ಮರೀನ್ ಡ್ರೈವ್‍ನಲ್ಲಿದ್ದ ಜದ್ದಾನ್ ಬಾಯಿಯ  ಮನೆ "ಚಾತ್ಯೂ ಮರೀನ್" ತನ್ನ ಸಾಯಂಕಾಲದ "ಮೆಹಫಿಲ್"ಗಳಿಗೆ ಪ್ರಸಿದ್ಧಿ ಪಡೆದಿತ್ತು. ಇಲ್ಲಿ ಬಾಲಿವುಡ್ ನ ಖ್ಯಾತನಾಮರಾದ ದಿಲೀಪ್ ಕುಮಾರ್, ಮೆಹಬೂಬ್ ಮತ್ತು ಕಮಲ್ ಅಮ್ರೋಹಿ ಅವರು ಖಾಯಂ ಸಂದರ್ಶಕರಾಗಿದ್ದರೆಂದ ಮೇಲೆ ನರ್ಗೀಸ್ ಅದೆಂತಹ ಭಾಗ್ಯಶಾಲಿಯಾಗಿದ್ದಳೆಂಬುದನ್ನು ಊಹಿಸಿಕೊಳ್ಳಿ. ಅವಳ ಚಿತ್ರರಂಗದ ಪಯಣಕ್ಕೆ ಬೇಕಾದ ಪೂರ್ವಸಿದ್ಧತೆ, ತರಬೇತಿ, ಸ್ಪೂರ್ತಿಗಳೆಲ್ಲವೂ ಆಕೆಗೆ ದಕ್ಕಿದ್ದು ಇದೇ ಚಿಂತಕರ ಚಾವಡಿಯಲ್ಲಿಯೇ. 
ಅದೊಂದು ಪತ್ರ ಅವಳ ಪ್ರೀತಿಯನ್ನು ಹರಿದುಹಾಕಿತ್ತು. ರಾಜ್ ಕಪೂರ್  ಪ್ರಕಾರ ಆ ಪತ್ರದಲ್ಲಿ ನರ್ಗೀಸ್ ನಿರ್ಮಾಪಕರೊಬ್ಬರನ್ನು ಮದುವೆಯಾಗುವ ಕುರಿತು ವಿವರಗಳಿದ್ದವು.  ಆ ಪತ್ರದ ಹಿನ್ನೆಲೆಯ ಸತ್ಯಸಂಗತಿಯನ್ನು ಮಾತ್ರ ನರ್ಗೀಸ್, ಮಲಗಿರುವ ತನ್ನ  ಸಮಾಧಿಯಿಂದ ಎದ್ದು ಬಂದು ಹೇಳಬೇಕಷ್ಟೇ.
'ಜಾನೇ ನ ನಜರ್ ಪೆಹಚಾನೇ ಜಿಗರ್ 
ಯೇ ಕೌನ್ ಜೋ ದಿಲ್ ಪಾರ್ ಚಾಯಾ
ಮೇರಾ ಅಂಗ್ ಅಂಗ್ ಮುಸ್ಕಾಯಾ"
(ಕಣ್ಣರಿಯದಿದ್ದರೂ ಹೃದಯವರಿಯುತ್ತಿರುವ ಆ ಚಿತ್ತಚೋರನಿಗಾಗಿ ನನ್ನ ಪ್ರತಿ ಅಂಗಾಂಗವೂ ತುಡಿಯುತ್ತಿದೆ)
ಎಂದು ಹಾಡುತ್ತಲೇ ರಾಜ್ ನನ್ನು ಪ್ರೀತಿಸುತ್ತಿದ್ದ ನರ್ಗೀಸ್ ಳ ಬಾಳಿನಲ್ಲಿ ಆ ಒಂದು  ಪತ್ರ ಬಿರುಗಾಳಿಯನ್ನೇ ಎಬ್ಬಿಸಿತು. ಈ ಕಾರಣದಿಂದ ರಾಜ್ ಕಪೂರ್ ನ ಪ್ರೇಮದ ನದಿಯಲ್ಲಿ ಜೊತೆಯಾಗಿ ಈಜುವ ಅದೃಷ್ಟ ದಕ್ಕದೇ ಹೋದಾಗ ಒಂಟಿಯಾದಳು ನರ್ಗೀಸ್. ಇದರ ಯಕಃಶ್ಚಿತ ಕಲ್ಪನೆಯ ಸುಳಿವೂ ಕೂಡ ಇಲ್ಲದವಳಿಗೆ ರಾಜ್ ಕಪೂರ್ ನ ಆ ವರ್ತನೆ ಆಘಾತ ತಂದಿತ್ತು.  ಹಾಗೆಂದು ಮೀನಾಕುಮಾರಿಯಂತೆ  ಧೃತಿಗೆಟ್ಟು ನಶೆಯೇರಿಸಿಕೊಳ್ಳಲಿಲ್ಲ;  ಮಧುಬಾಲಾಳಂತೆ ಮೋಹಪಾಶದಲ್ಲಿ ಬಿದ್ದು ಒದ್ದಾಡಲಿಲ್ಲ; ಮಿನುಗು ತಾರೆ ಕಲ್ಪನಾಳಂತೆ ಬಂಗಲೆಯಲ್ಲಿ ವಜ್ರದ ವಿಷದೊಳಗೆ ಲೀನವಾಗಲಿಲ್ಲ ಬದಲಾಗಿ ಆಕೆ ಕಂಡುಕೊಂಡದ್ದು ಜಗತ್ತಿನ ಪ್ರೇಮಿಗಳಿಗೊಂದು ಆದರ್ಶವಾಗಬಹುದಾದ ವಾಸ್ತವದ ಮಾದರಿ ಹಾದಿಯನ್ನೆಂದರೆ ನೀವು ನಂಬಲೇಬೇಕು. ಅದುವರೆಗೂ ಕುಸುಮಗಳಿಂದ ತುಂಬಿದ, ದುಂಬಿಗಳಿಂದ ನಾದಮಯವಾಗಿರುವ, ಸ್ವರ್ಗದ ದಾರಿಯಲ್ಲಿ ಕನಸುಗಳ ಅಂಬಾರಿಯನ್ನೇರಿ ಹೊರಟಿದ್ದ ನರ್ಗೀಸ್ ಳಿಗೆ ಈಗ ಇದ್ದಕ್ಕಿದ್ದಂತೆ ರಾಜ್ ನ  ಪ್ರೇಮದ ಪಲ್ಲಕ್ಕಿಯಿಂದ ಇಳಿಯುವ ಸಮಯವಾಗಿತ್ತು.
ನಿನ್ನ ದಾರಿ ಬೇರೆ ಇಳಿದುಬಿಡು ಎಂದು  ರಾಜ್ ಮೊರೆದನೋ ಅಥವಾ ತಾನೇ ಪ್ರತಿಷ್ಠೆಗೆ ಬಿದ್ದು ಇನ್ನು ಸಾಧ್ಯವಿಲ್ಲ ಎಂದು ತಾನೇ ಇಳಿದು ಹೋದಳೋ ಇಲ್ಲವೇ, ಇಲ್ಲದ ಗಾಸಿಪ್ ಗಳಿಂದ ಹುಟ್ಟಿಕೊಂಡ ಸಂದೇಹಗಳೇ ಬೇರೆ ಮಾಡಿದವೋ ಗೊತ್ತಿಲ್ಲ. ಅಂತೂ ರಾಜ್ ನ ಪ್ರೇಮದ ಪುಷ್ಪಕ ವಿಮಾನದಿಂದ ಇಳಿದೇ ಬಿಟ್ಟಿದ್ದಳು. ಹೋಗುವಾಗ ಮಾತ್ರ ನರ್ಗೀಸ್ 
"ರಸಿಕ್ ಬಲಮಾ ಯೇ ದಿಲ್ ಕ್ಯೂಂ ಲಗಾಯಾ 
ತುಝೆ ದಿಲ್ ಕ್ಯೂಂ ಲಗಾಯಾ".............
ಡೂಂಢೇ ಓ ಪಾಗಲ್ ನಯನಾ 
ಪಾಯೇ ನಾ ಏಕ್ ಪಲ್ ಚೈನಾ
(ಓ ಪ್ರೇಮವೇ ನಿನಗೇಕೆ ನನ್ನ ಹೃದಯವನ್ನು ಕೊಟ್ಟೆ......ಹುಡುಕುತ್ತಿವೆ ಹುಚ್ಚು ಕಣ್ಣುಗಳು ಕ್ಷಣವೂ ವಿರಮಿಸದಂತೆ ನಿನ್ನ) ಎಂದು ವಿರಹದ, ಪಶ್ಚಾತ್ತಾಪದ ಕಣ್ಣೀರನ್ನು  ಹರಿಸಿಯೇ ವಿದಾಯ ಹೇಳಿದಳು. ಹಾಗೆ ಹೃದಯತುಂಬಿ  ಹಾಡಿದ್ದಳೆಂಬುದಕ್ಕೆ ಸಾಕ್ಷಿಯೆಂದರೆ ಈ ಹಾಡಿನ ದೃಶ್ಯೀಕರಣದಲ್ಲಿ ಗ್ಲಿಸರಿನ್ ನ್ನೇ ಬಳಸಿರಲಿಲ್ಲ ನರ್ಗೀಸ್. ಆದರೂ ಕಣ್ಣೀರು ಮಾತ್ರ ಕೋಡಿಯಾಗಿ ಹರಿದಿತ್ತು. ಸುಳಿವೇ ಇಲ್ಲದ ಪ್ರೇಮಿಗಳ ಬದುಕಿನಲ್ಲಿ ಸಂದೇಹದ ಕಿಡಿಯೊಂದು ಬಿದ್ದು ಹೊತ್ತಿ ಉರಿಯಲಾರಂಭಿಸಿದಾಗ ಬದುಕು ಛಿದ್ರವಾಗಿರುತ್ತದೆ. ರಾಜ್ ಹಾಗೂ ನರ್ಗೀಸ್ ಳ ಪ್ರಣಯದ ಬಾಳಿನಲ್ಲಿ ಸಂಭವಿಸಿದ್ದು ಇದೇ. 
     ಹಾಗೆ ರಾಜ್ ನ ಹೃದಯ ಪಲ್ಲಕ್ಕಿಯಿಂದ ಇಳಿದು ಹೋದ ಮೇಲೆ  ಮುಂದೇನು ಎಂದು ಒಬ್ಬಂಟಿಯಾಗಿ ಅಲೆಯುತ್ತಿರುವಾಗಲೇ ಭಯಾನಕ ತೀರ್ಮಾನವನ್ನು ಕೈಗೊಂಡು ಆತ್ಮಹತ್ಯೆಯ ಬಾಗಿಲಿಗೂ ಹೋಗಿಬಂದಳು. ಈ ಸಂಕಟಗಳ ಮಧ್ಯೆ ಅವಳನ್ನು ಕರೆದು ಕೈಹಿಡಿದದ್ದು "ಮದರ್ ಇಂಡಿಯಾ" ಸಿನೇಮಾ. ಅದುವರೆಗೂ ರಾಜ್ ನನ್ನು ಕೇಳಿಯೇ ಪ್ರತಿಯೊಂದು ಹೆಜ್ಜೆ ಇಡುತ್ತಿದ್ದ ನರ್ಗೀಸ್ ಳಿಗೆ ಈಗ ಕೇಳದೇ ಮುನ್ನಡೆಯುವ ಅನಿವಾರ್ಯತೆ ಎದುರಾಗಿಬಿಟ್ಟಿತ್ತು. ಅದೇನೂ ಅರಿಯದ ಬಲಿಪಶುವಾದೆನೆಂಬ ಮುಗ್ಧತೆಯೋ ಅಥವಾ ರಾಜ್ ಮೇಲಿನ ಒಣ ಪ್ರತಿಷ್ಠೆ, ಸ್ವಾಭಿಮಾನದ ಪ್ರಲಾಪಕ್ಕೊ ಇಲ್ಲವೇ, ಕಾರಣವಿಲ್ಲದ ಮುನಿಸಿನ ಅಟ್ಟಹಾಸಕ್ಕೋ, ಅವಳಂತೂ ರಾಜ್ ನಿಂದ ಬೇರೆಯಾಗಿ ಮದರ್ ಇಂಡಿಯಾ ಸಿನೇಮಾದಲ್ಲಿ ನಟಿಸುವ ತೀರ್ಮಾನವನ್ನು ತೆಗೆದುಕೊಂಡೇ ಬಿಟ್ಟಿದ್ದಳು. ರಾಜ್ ಕಪೂರ್ ಪ್ರಕಾರ "ನರ್ಗೀಸ್ ಆ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಾಗ, ಆಕೆಗೆ ಹೆಸರೊಂದನ್ನು ಬಿಟ್ಟರೆ, ಆ ಸಿನೇಮಾದ ಉಳಿದ ಯಾವ ಸಂಗತಿಗಳ ಬಗ್ಗೆಯೂ ಅರಿವಿರಲಿಲ್ಲ" ಹೌದು. ಇದರಿಂದ ಪ್ರತಿಯೊಂದು ಚಿತ್ರವನ್ನೂ ರಾಜ್ ಹಾಗೂ ನರ್ಗೀಸ್ ಇಬ್ಬರೂ ಸೇರಿ ಅಳೆದು ತೂಗಿ ಒಪ್ಪಿಕೊಳ್ಳುವ ತಾತ್ವಿಕತೆಯನ್ನಿಟ್ಟುಕೊಂಡಿದ್ದರೆಂದು  ತಿಳಿಯುತ್ತದೆ.
ಆ ಪ್ರೇಮವೆಂಬ ಮಾಯೆಯೇ ಹಾಗೆ. ಕೆಲವೊಮ್ಮೆ ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡಿದರೆ, ಮಗದೊಮ್ಮೆ ಅಸಾಧ್ಯವಾದುದನ್ನೂ ಸಾಧಿಸಿಬಿಡುವಂತೆ ಮಾಡಿಬಿಡುತ್ತದೆ ಎಂಬುದಕ್ಕೆ ನರ್ಗೀಸ್ ಅತ್ಯುತ್ತಮ ನಿದರ್ಶನ. 
"ಲಗನ್ ಮೋರೆ ಮನ್ ಕಿ 
ಬಲಮ್ ನಹೀ ಜಾನೆ
ಸಜನ್ ನಹೀ ಜಾನೇ" 
(ಮನದ ಕಳವಳ ಹಾಗೂ ಹೃದಯದೊಲುಮೆಯನ್ನು ಅರಿಯಲೇ ಇಲ್ಲ ಪ್ರಿಯಕರ) 
ಎಂದು ನರ್ಗೀಸ್ ಹಾಡುವುದನ್ನು ಕೊನೆಯವರೆಗೂ ಕೇಳಿಸಿಕೊಳ್ಳಲೇ ಇಲ್ಲ ರಾಜ್. ಕುಪಿತಳಾಗದೇ ಆಕೆ ಆತ್ಮಸ್ಥೈರ್ಯದ ಬೆಳದಿಂಗಳಿನಲ್ಲಿ ಸಾಗಿ ಬೆಳಗಾಗುವುದರೊಳಗಾಗಿ ದಂತಕಥೆಯಾಗಿ ತನ್ನ ಹೆಸರನ್ನು ಜಗತ್ತಿನ ಇತಿಹಾಸದಲ್ಲಿ ದಾಖಲು ಮಾಡಿಬಿಟ್ಟಿದ್ದಳು.
      ಅರಿವಿತ್ತೋ ಅರಿವಿರಲಿಲ್ಲವೋ  'ಮದರ್ ಇಂಡಿಯಾ' ಎಂಬ ಅಭುತಪೂರ್ವ ಸಿನೇಮಾವೊಂದರಿಂದಲೇ ಆಕೆಯ ಜೀವನದ ದಿಕ್ಕುದೆಸೆಗಳೇ ಬದಲಾಗಿಬಿಟ್ಟವು.  ಹೌದು. ಆಕೆ ಅಂದುಕೊಂಡದ್ದನ್ನು ತನ್ನ ಮೊದಲ ಸ್ವತಂತ್ರ ಆಯ್ಕೆಯ ಸಿನೇಮಾವೊಂದರಿಂದಲೇ ಸಾಧಿಸಿಬಿಟ್ಟಳು. ಆಕೆ ಈ ತೀರ್ಮಾನದ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಿದ್ದಳೆಂದರೆ ಅಂದು  ಜಗತ್ತು ನಂಬಲಿಲ್ಲ. ರಾಜ್ ಇನ್ನೆಂದೂ ತನ್ನ ಸಮೀಪ ಸುಳಿಯಬಾರದೆಂದು ದೂರವಿಡುವುದು ಆಕೆ ಹೊಡೆದ ಮೊದಲ ಹಕ್ಕಿಯಾದರೆ, ಮತ್ತೊಂದು ತನ್ನ ಮೊದಲ ಪ್ರೀತಿಯನ್ನು ಬಲಿಕೊಟ್ಟು,  ಸುನೀಲ್ ದತ್ತನಿಂದ ಜೀವ ಪಡೆಯುವುದಾಗಿತ್ತು. 
    ಮದರ್ ಇಂಡಿಯಾದಲ್ಲಿನ ಅದೊಂದು ಹೃದಯವಿದ್ರಾವಕ ದೃಶ್ಯ ನರ್ಗೀಸ್ ಹಾಗೂ ಸುನೀಲ್ ದತ್ತ ರ ಸುನೀಲ ಸಂಬಂಧಕ್ಕೆ ಮುನ್ನುಡಿ ಬರೆದುಬಿಟ್ಟಿತ್ತು. ಮದರ್ ಇಂಡಿಯಾ  ಕಥೆಯಲ್ಲಿ ತಾಯಿ ರಾಧಾ( ನರ್ಗೀಸ್)ಳು ಡಕಾಯಿತನಾಗಿ ಬದಲಾಗಿದ್ದ ತನ್ನ ಕರುಳ ಕುಡಿ ಬ್ರಿಜು ( ಸುನೀಲ್ ದತ್ತ) ನನ್ನು ಹುಲ್ಲಿನ ಬಣವೆಯಲ್ಲಿ ಬಚ್ಚಿಟ್ಟು ಉಳಿಸಿಕೊಳ್ಳುವ ಸನ್ನಿವೇಶದ ಚಿತ್ರೀಕರಣದಲ್ಲಿ ಅವಘಡವೊಂದು ಸಂಭವಿಸಿಬಿಟ್ಟಿತ್ತು. 1957 ರ ಸಮಯದಲ್ಲಿ ಒಣ ಹುಲ್ಲಿನ ಬಣವೆಗಳಿಗೆ ಬೆಂಕಿಯಿಟ್ಟು ಚಿತ್ರೀಕರಣ ಮಾಡುವಾಗ ಬೀಸಿದ ಗಾಳಿಯಿಂದಾಗಿ ಹೊತ್ತಿಕೊಂಡ ಬೆಂಕಿ ನಿಯಂತ್ರಣಕ್ಕೆ ಬಾರದೇ ನರ್ಗೀಸ್ ಅಗ್ನಿಯ ಮಧ್ಯೆ ಸಿಲುಕಿಕೊಂಡಳು. ತಕ್ಷಣ ಎಚ್ಚೆತ್ತುಕೊಂಡು ಮಧ್ಯೆ ಧುಮುಕಿದ  ಸುನೀಲ್ ದತ್ತ ಅವಳ ಮೇಲೆ ಹೊದಿಕೆ ಹೊದಿಸಿ ಹೊತ್ತು ತಂದು ಉರಿಯುವ ಬೆಂಕಿಯಿಂದ ಅವಳನ್ನು ಪಾರು ಮಾಡಿದ್ದ. ಇದು ಆಕೆಯ ಎದೆಯಲ್ಲಿದ್ದ ರಾಜ್ ಪ್ರೇಮದಿಂದಾದ ಮೋಸದ ಉರಿಯನ್ನು ನಂದಿಸಿ, ಜೀವ ಉಳಿಸಿದ ಸುನೀಲ್ ದತ್ತ ನೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಿತ್ತು. ಮುರಿದು ಬಿದ್ದ ಪ್ರೀತಿಯ ಮಹಲನ್ನು ಕಟ್ಟಬೇಕೆಂದು ಹೆಣಗಾಡಿದ ರಾಜ್ ಕಪೂರ್ ಒಮ್ಮೆ ಆಕಸ್ಮಾತ್ ಆಗಿ ನರ್ಗೀಸ್ ಳನ್ನು ಭೇಟಿಯಾಗುತ್ತಾನೆ.  ಮಾತುಗಳೇ ಹೊರಡದೇ ಮೌನದ ಕಡಲಿನಲ್ಲಿ ತೇಲಿದ ಆದ್ರ್ರ ಸಮಯದಲ್ಲಿ ನರ್ಗೀಸ್ ಳ ಕೈಹಿಡಿದು "ಮರಳಿ ಬರುವೆಯಾ ಎನ್ನ ಹೃದಯದರಮನೆಗೆ” ಎಂದು ಕೇಳಿದ. ಅದಾಗಲೇ ಆತನೊಂದಿಗೆ ಕಂಡ ಕನಸುಗಳನ್ನೆಲ್ಲಾ ಹೆಡೆಮುರಿ ಕಟ್ಟಿ ಸಮಾಧಿಮಾಡಿದ್ದ ನರ್ಗೀಸ್ ಳ ಹೃದಯದೊಳಗಿನ ಪ್ರೀತಿಯ ಚಿಲುಮೆ ಬತ್ತಿಹೋಗಿತ್ತು. ಕಾಲ ಮಿಂಚಿ ಹೋಗಿತ್ತು. ತಲೆಯೆತ್ತಿ ಉತ್ತರಿಸಿದ ನರ್ಗೀಸ್ ಳ "ನಿನ್ನ ಹೆಂಡತಿ ಮಕ್ಕಳೊಂದಿಗೆ ಸುಖವಾಗಿರು" ಎಂಬ ಮಾತುಗಳನ್ನು ರಾಜ್ ಕಪೂರ ಜೀವವಿರುವವರೆಗೂ ಮರೆಯಲಾಗಲಿಲ್ಲ. ರಾಜ್ ನನ್ನು ಬಿಟ್ಟು ಏಕಾಂಗಿತನದೊಂದಿಗೆ ಗೆಳೆತನ ಮಾಡಿದ್ದ ನರ್ಗೀಸ್ ತನ್ನ ದಾರಿಯಲ್ಲಿ ಬಹು ದೂರ ಬಂದಾಗಿತ್ತು. ಈ ಮರಳುಗಾಡಿನ ಏಕಾಂತದ ಪಯಣದ ಮಧ್ಯದಲ್ಲಿ ಸುನೀಲ ದತ್ತ ನ ಒಲುಮೆಯ ಓಯಾಸಿಸ್ ದಕ್ಕಿಬಿಟ್ಟಿತ್ತು. ಅಲ್ಲಿಂದ ಪ್ರಾರಂಭವಾದ ಅವರಿಬ್ಬರ ಪ್ರೇಮಕಥನ ದಾಖಲಾದ ಪುಸ್ತಕದ ಹೆಸರು ‘ಡಾರ್ಲಿಂಗ್ ಜಿ’. ಈ ಕೃತಿಯಲ್ಲಿ ಲೇಖಕರಾದ ಕಿಶ್ವರ್ ದೇಸಾಯಿಯವರು ಅಕ್ಷರಿಸಿದಂತೆ ನರ್ಗೀಸ್ ಳ ಮಾತುಗಳಿವು - -  “If it were not for him, perhaps I would have ended my life before the 8th of March. For I alone know the turmoil that was going through me. ‘I want you to live,’ he said and I felt I had to live. Begin all over again.” ಒಬ್ಬರನ್ನೊಬ್ಬರು ‘ಡಾರ್ಲಿಂಗ್ ಜಿ’ ಎಂದೇ ಸಂಬೋಧಿಸಿಕೊಳ್ಳುತ್ತಿದ್ದ ಈ ದಂಪತಿಗಳು ಸಿನೇಮಾ ಬಿಟ್ಟರೆ ತಮ್ಮನ್ನು ತೊಡಗಿಸಿಕೊಂಡಿದ್ದು, ವಿಕಲಚೇತನ ಮಕ್ಕಳ ಕಲ್ಯಾಣದ ಸಾಮಾಜಿಕ ಸೇವೆಯಲ್ಲಿ. ಇದೆಲ್ಲವನ್ನು ಗಮನಿಸಿಯೇ ಆಕೆಗೆ ಜಗತ್ತು, ‘ಶತಮಾನ ಕಂಡ ಶ್ರೇಷ್ಠ ನಟಿ’ಯೆಂದು ಗೌರವವನ್ನು ಸಲ್ಲಿಸಿತು. ಭುವನವೇ ಭಾರತೀಯ ಚಿತ್ರರಂಗದತ್ತ ಹೊರಳಿನೋಡುವಂತೆ ಮಾಡಿದ ಈಕೆಯ ‘ಮದರ್ ಇಂಡಿಯಾ’ ಭಾರತೀಯ ಅಮೋಘ ಪರಂಪರೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದ ಕೀರ್ತಿಯನ್ನು ಹೊಂದಿದೆ.
ರಾಜ್ ನ ಪ್ರೀತಿಯ ಮೋಸವನ್ನು ನುಂಗಿಕೊಂಡ ದುಃಖದಲ್ಲಿ ಒಪ್ಪಿಕೊಂಡ ‘ಮದರ್ ಇಂಡಿಯಾ’ ಸಿನೇಮಾ ಆಕೆಗೆ ಇನ್ನಿಲ್ಲದ ಹೆಸರನ್ನು ಜೊತೆಗೆ ಫಿಲ್ಮಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು. ಈ ಅಪೂರ್ವವಾದ ಸಿನೇಮಾ ಕುರಿತು ನ್ಯೂಯಾರ್ಕ ಟೈಮ್ಸ ಪತ್ರಿಕೆ ಬಣ್ಣಿಸಿರುವುದು ಹೀಗೆ -
"A defining film in the history of Bollywood, the Hindi film industry based in Bombay, Mehboob Khan's ''Mother India'' (1957) is often said to have helped set the pattern for the nearly 50 years of Indian film that has followed it."  
ಮದರ್ ಇಂಡಿಯಾ ಸಿನೇಮಾ ಭಾರತೀಯ ಚಲನಚಿತ್ರರಂಗದಲ್ಲಿ ಹುಟ್ಟುಹಾಕಿದ ಸೆನ್ಸೇಷನ್ ಎಂತಹುದೆಂಬುದಕ್ಕೆ ಮೇಲಿನ ಮಾತುಗಳು ನಿದರ್ಶನವನ್ನೊದಗಿಸುತ್ತವೆ. ಜಗತ್ತಿನ ಅಕಾಡೆಮಿ ಪ್ರಶಸ್ತಿಯ ವಿದೇಶಿ ಭಾಷೆಯ ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ನಾಮಾಂಕಿತವಾದ ಭಾರತದ ಪ್ರಪ್ರಥಮ ಚಲನಚಿತ್ರ ಎಂಬ ಹೆಗ್ಗಳಿಕೆ ಈ 'ಮದರ್ ಇಂಡಿಯಾ' ಚಲನಚಿತ್ರದ್ದು. 2011ರಲ್ಲಿ ರೀಡಿಫ್.ಕಾಂ ಸಂಸ್ಥೆಯಂತೂ ನರ್ಗಿಸ್ ಅವರನ್ನು ‘ಸಾರ್ವಕಾಲಿಕವಾದ ಶ್ರೇಷ್ಠ ನಟಿ’ ಎಂದು ಹೆಸರಿಸುತ್ತಾ “ವೈವಿಧ್ಯತೆ, ಅಭಿವ್ಯಕ್ತಿ, ಪ್ರಸನ್ನತೆ ಮತ್ತು ಅಪ್ಯಾಯಮಾನತೆಗಳ ಸಂಗಮವನ್ನು ಬಿಂಬಿಸುವ ಸಂಭ್ರಮದ ನಟಿ ನರ್ಗಿಸ್ ದತ್’’ ಎಂದು ವರ್ಣಿಸಿದಾಗ, ಜಗತ್ತು ಇದು ಅವಳ ಸಾಧನೆಗೆ ಸಂದ ಅತ್ಯುತ್ತಮ ನುಡಿನಮನವೆಂದು ಬೀಗಿತ್ತು.
     ಹೀಗೆ ಸುನೀಲ ದತ್ತನೊಂದಿಗೆ ಸುಂದರವಾದ ಬದುಕನ್ನು ಕಟ್ಟಿಕೊಂಡ ನರ್ಗೀಸ್ ಳಿಗೆ ಹಾದಿ ತಪ್ಪುತ್ತಿದ್ದ ಮಕ್ಕಳ ಚಿಂತೆ ಕಾಡಲಾರಂಭಿಸಿತು. ಈ ಹೊತ್ತಿನಲ್ಲೇ ಅವಳೊಡಲಿಗೆ ಬಂದಡರಿದ ಕ್ಯಾನ್ಸರ್ ಮಹಾಮಾರಿ ಕೊನೆಯವರೆಗೂ ಅವಳನ್ನು ಕೈಬಿಡಲೇ ಇಲ್ಲ. ಅಂತಿಮವಾಗಿ 1981 ರಲ್ಲಿ ಆಕೆ  ಕೊನೆಯುಸಿರೆಳೆದಾಗ " ಕಾ ಸೇ ಕಹಾ ಮೈ ಬಹಾನಾ" (ಯಾರಿಗೆ ಹೇಳಲಿ ನನ್ನ ದುರಂತ ಕಥೆಯನ್ನು) ಎಂದು ಪರದೆಯ ಮೇಲೆ ಹಾಡಿದ್ದ ಹಾಡನ್ನು ಹೃದಯದೊಳಗೆ ಮತ್ತೊಮ್ಮೆ ಹಾಡಿಕೊಂಡಿರಬೇಕು. ಅಂದು ಅಂತಿಮ ದರ್ಶನಕ್ಕೆ ಬಂದ ರಾಜ್ ಕಪೂರ್ ನ ಕಪ್ಪುಕನ್ನಡಕದೊಳಗೆ ಹೊಳೆಯುವ ಕಣ್ಣೀರು ಮಡುಗಟ್ಟಿ ನಿಂತಿದ್ದು ಮಾತ್ರ ಯಾರಿಗೂ ಕಾಣಲೇ ಇಲ್ಲ. ರಾಜ್ ಕಪೂರ್ ನ ಆ ದುಸ್ಥಿತಿಯನ್ನು ನೋಡಿ ನರ್ಗೀಸ್ ಹಾಡಿದ ಸಾಲನ್ನು ನಾವು ಹೀಗೆ ಹಾಡಬೇಕಷ್ಟೇ.
"ಏಕ್ ಬಾರ್ ಕಹೋ ಓ ಜಾದೂಗಾರ್ 
ಯೇ ಕೌನಸಾ ಖೇಲ್ ರಚಾಯಾ" 

Thursday, 26 March 2020

ಗಜಲ್

ಗಜಲ್

ನಿನ್ನ ಸಮಾಧಿಯ ಮೇಲೆ‌ ಗುಲಾಬಿಯನ್ನಿಡುವಾಸೆ ಗಾಲಿಬ್

ತೋರಿಬಿಡು ಕೈಹಿಡಿದು ಒಮ್ಮೆ ನಿನ್ನ ಸಮಾಧಿಯ ಹಾದಿ


ಶರಾಬಿನ ಗುಟುಕನ್ನು ನಿನ್ನೊಡನೆ ಹೀರುವಾಸೆ ಗಾಲಿಬ್

ಹೇಳಿಬಿಡು ತೂಗಿ, ಮದವೇರಿದ ಕಾವ್ಯ ಸಮಾಧಿಯ ಹಾದಿ


ಹಸಿದ ಹೊಟ್ಟೆಗೆ ಚೂರು ರೊಟ್ಟಿಯೂ‌ ನೀನೇ ಗಾಲಿಬ್

ಆಗಲಾದರೂ ತೋರೀತೇ ನಿನ್ನ ಪ್ರೇಮ ಸಮಾಧಿಯ ಹಾದಿ


ನಿನ್ನೊಡನೆ ಆಸ್ಥಾನ ಕವಿಯಾಗುವ ಹಂಬಲ‌ ಗಾಲಿಬ್ 

ಹಾಡುವ ಶೇರ್ ಕೇಳಿ‌ ಹಿಡಿದುಬಿಡುವೆ ಒಮ್ಮೆ ಸಮಾಧಿಯ ಹಾದಿ


ನಿನ್ನೊಡನೆ ಮಾವಿನ ಮಾಧುರ್ಯ ಸವಿಯುವಾಸೆ ಗಾಲಿಬ್

ಸವಿಯ ಬಿಡು ನಿನ್ನ ರಸಗಾನದ ರಹಸ್ಯ ಸಮಾಧಿಯ ಹಾದಿ


ಬೆಳಕಿಲ್ಲದ ದಾರಿಯಲಿ ನಿನ್ನೊಡನೆ ನಡೆಯಬೇಕೆಂದಿರುವೆ ಗಾಲಿಬ್

ಅರಿಯಬಿಡು ಒಮ್ಮೆ ಮೈಮರೆತ ಬೆಳಕಿನ ಸಮಾಧಿಯ ಹಾದಿ


ನೀ ಹೊರಟ ಪಲ್ಲಕ್ಕಿಯ ಹಿಂದೆ ನಿತ್ಯ ಹೆಜ್ಜೆ ಹಾಕುವೆ ಗಾಲಿಬ್

ಒಮ್ಮೆಯಾದರೂ ತೋರುವೆಯೆಂದು ಯೋಗ ಸಮಾಧಿಯ ಹಾದಿ


ಹಾರ ಸನ್ಮಾನ ಪ್ರಶಸ್ತಿಗಳಿಗೆ ಕೊರಳೊಡ್ಡುವೆ ಗಾಲಿಬ್

ಮೆರೆಯಬೇಕೆಂದಲ್ಲ, ನನಗೂ ಉಂಟೆಂದು ಸಮಾಧಿಯ ಹಾದಿ


ನಿನ್ನ ಬಯಸಿದ ಜಾನ್ ಳ ಜೀವವಾಗಿಬಿಡುವೆ ಗಾಲಿಬ್

ನಿನ್ನೆದುರಿಗೇ ತೆರಳಿಬಿಡಬಹುದಲ್ಲ ಆ ಸಮಾಧಿಯ ಹಾದಿ


ನೀ ಬಳಲಿದ ಗಾಯಗಳ ನೋವಾಗುವೆ ಗಾಲಿಬ್

ಇದಕ್ಕಿಂತ ಭಾಗ್ಯವೇ ದಕ್ಕಲು ನೋವ ಸಮಾಧಿಯ ಹಾದಿ


ನಕ್ಷತ್ರದಂತೆ ಉದುರಿ ಹೋದ ನಿನ್ನ ಮಗುವಾಗುವೆ ಗಾಲಿಬ್

ಅಪ್ಪಿಕೊಂಡೇ ಅನುಭವಿಸಬಹುದಲ್ಲ ನಿನ್ನ ಆತ್ಮ ಸಮಾಧಿಯ ಹಾದಿ


ನೀ‌ ಮುಳುಗೇಳುವ ತುಪ್ಪದ ಬಟ್ಟಲು ತಂದಿಡುವೆ ಗಾಲಿಬ್

ಆನಂದಿಸಬಹುದಲ್ಲ ಮದವೇರುವ ನಿನ್ನ ಭಾವ ಸಮಾಧಿಯ ಹಾದಿ


ಅಲೆಮಾರಿಯಾಗಿ ಹಿಂಬಾಲಿಸುವೆ ನಿನ್ನ ಓ ಗಾಲಿಬ್

ದನಿಗೂಡಿಸಿ ಕಲಿಯಬಹುದಲ್ಲ, ನೀ ಕಟ್ಟುವ ಸಮಾಧಿಯ ಹಾದಿ


ನಿನ್ನ ಛೇಡಿಸುವ ಕವಿಗಳ ಸಭೆಯಲ್ಲಿರುವೆ ಗಾಲಿಬ್ 

ಒಳಗಿಳಿಸಿಕೊಳ್ಳಬಹುದಲ್ಲ ಅವರಿಗೆ ನೀ ತೋರುವ ಸಮಾಧಿಯ ಹಾದಿ


ನೀ ಬರೆದ ಕಸೀದ್ ಗಳನ್ನು ಗುರಿ ತಲುಪಿಸುವೆ ಗಾಲಿಬ್

ಒಂದಂಶವಾದರೂ ಎದೆಗಿಳಿಯಬಹುದಲ್ಲ ಅದರಲ್ಲಿರುವ ಸಮಾಧಿಯ ಹಾದಿ


ನಿನ್ನ ವಿಧೇಯ ಹಂಬಲದ ಶಿಷ್ಯನಾಗುವೆ ಗಾಲಿಬ್ 

ಅಂತರಂಗದಿ ಕುಣಿಯಬಹುದಲ್ಲ ಕಂಡು ಸಮಾಧಿಯ ಹಾದಿ


ಉಮ್ರಾವ್ ಳ ಪೂಜೆಗೆ ಹೂಗಳನ್ನಾಯ್ದು ತಂದಿಡುವೆ ಗಾಲಿಬ್

ಮಥಿಸಬಹುದಲ್ಲ ಕಂಡು ನಿಮ್ಮಿಬ್ಬರ ಭಿನ್ನ ಸಮಾಧಿಯ ಹಾದಿ


ನಿನ್ನ ಹೋರಾಟದ ಬದುಕಿಗೆ ಲೇಖನಿಯಾಗುವೆ ಗಾಲಿಬ್

ಕಣ್ಣೀರು ಹಾಕಬಹುದಲ್ಲ, ಕಂಡು ನಿನ್ನ ಕನಸುಗಳ ಸಮಾಧಿಯ ಹಾದಿ


ಅಂಡಲೆಯುವ ನಿನಗೆ ಓಡುವ ಅಶ್ವವಾಗುವೆ ಗಾಲಿಬ್

ತುಳಿಯಬಹುದಲ್ಲ ನಿನ್ನೊಡನೆ ಬಹುಬೇಗ ಸಮಾಧಿಯ ಹಾದಿ


ನಿನ್ನೊಡನೆ ಸದಾ ಜೊತೆಗಿರುವ ಊರುಗೋಲಾಗುವೆ ಗಾಲಿಬ್

ಕಣ್ಣಾರೆ ಕಾಣಬಹುದಲ್ಲ, ಮೊಗಲರು ಹಿಡಿದ ಸಮಾಧಿಯ ಹಾದಿ


ನಿನ್ನ ಸಮಾಧಿಯ ಮೇಲಿನ ಶಿಲೆಯಾಗುವೆ ಗಾಲಿಬ್

ತೋರಿಬಿಡಬಹುದಲ್ಲ ಬಂದವರಿಗೆ ಅವರವರ ಸಮಾಧಿಯ ಹಾದಿ


ನಿನ್ನ ಸಮಾಧಿಯ‌‌ ಮೇಲಿನ ಬರಹವಾಗುವೆ ಗಾಲಿಬ್ 

ಬೆಳಕಾಗಬಹುದಲ್ಲ ತೋರಿ, ಬಂದವರ ಕತ್ತಲೆ ಸಮಾಧಿಯ ಹಾದಿ


Wednesday, 25 March 2020

ಗಾಲಿಬ್@150

ಗಾಲಿಬ್@150
ದು ಪ್ರಾತಃಕಾಲ ೫ ಗಂಟೆಯ ಸಮಯ. ಶುಭೋದಯದ ಹೊಸ್ತಿಲಲ್ಲಿ ನಿಂತ ಪ್ರಕೃತಿಯು ವಸಂತಾಗಮನದಿಂದ ಉಲ್ಲಾಸಗೊಂಡಿತ್ತು. ಚೈತ್ರದ ಚಿಗುರಿನ ಸವಿಯನ್ನುಣಲು ಕಾದು ಕುಳಿತ ಗಿಳಿ, ಕೋಗಿಲೆ ,ರತುನಗಳು  ತಾ ಮುಂದು ನಾ ಮುಂದು ಎಂದು ಸ್ಪರ್ಧೆಗಿಳಿದು ಮೈಮುರಿಯುತ್ತಿದ್ದವು. ಮನೆಯ ಮುಂದಿನ ಮಲ್ಲಿಗೆ ದಾಸವಾಳ ಜಾಜಿ ಗಳು ತಂಗಾಳಿಗೆ ಮೈಯ್ಯೊಡ್ಡಿ ಮೊಗ್ಗುಗಳನ್ನರಳಿಸುತ್ತಿದ್ದ ಸುಸಮಯ. ಅದಾಗಲೇ ಅಂಗಳದ ತಲೆಯ ಮೇಲೆಲ್ಲಾ ಚಾಚಿ ಮುಗಿಲು ಚುಂಬಿಸುವ ಕೊಂಬೆಗಳಿಂದ ನೃತ್ಯಗೈಯ್ಯುತ್ತಿದ್ದ ಬೇವು, ಹೆಂಗಳೆಯರ ಬೆಂಡೋಲೆಯಂತಹ  ಚಿತ್ತಾರದ ಹಳದಿ ಹೂಗಳಿಂದಲಂಕರಿಸಿಕೊಳ್ಳುತ್ತಿದ್ದ ಶುಭಘಳಿಗೆ. ಕಣ್ಣ ಮುಂದಿನ ಪುಟ್ಟ ಮಗುವಿನಂತಿದ್ದ ಮಾವಿನ ಸಸಿಯೂ ಚಿಗುರೆಲೆಗಳಿಂದ ಸಿಂಗರಿಸಿಕೊಂಡು ಬರುವ ನವಯುಗಾದಿಯ ಹಬ್ಬಕ್ಕೆ ಹೊಸದಿರಿಸನ್ನುಡಲು ತಯಾರಿ ನಡೆಸುತ್ತಿತ್ತು. ಪಕ್ಕದಲ್ಲಿದ್ದ ಬ್ರಹ್ಮಕಮಲದ ಎಳೆಯ ಸಸ್ಯವೂ ತಾನೇನು ಕಮ್ಮಿ ಎಂದು ಉದ್ದನೆಯ ಚಾಮರದಂತಹ ಎಳೆಯ ಎಲೆಗಳನ್ನುಟ್ಟುಕೊಂಡು ಬರಲಿರುವ ಉತ್ಸವಕ್ಕಾಗಿ ಚಿಗಿಯುತ್ತಿರುವಂತಿತ್ತು. ನವ ವಸಂತದಲ್ಲಿ ರಾಗವೈಭವದಿಂದ ಹಾಡಿ ನಲಿಯಲು ದನಿಯನ್ನು ಚಿಲಿಪಿಲಿಗುಟ್ಟಿ ತಿದ್ದಿ ತೀಡಲು ಸಿದ್ಧವಾದಂತಿದ್ದವು ಕೋಗಿಲೆ, ಗುಬ್ಬಿ, ಗೀಜಗ, ಭ್ರಮರಗಳು. ಮುನ್ಸೂಚನೆಯಾಗಿ  ಗುಂಯ್ ಎನ್ನುವ ದುಂಬಿಗಳು ಏಕತಾರಿಯನ್ನು ಹಿಡಿದು ಕುಸುಮಗಳನ್ನು ಹುಡುಕಿ ಹೊರಟಂತಿದ್ದವು. ಹೀಗೆ ಪ್ರಕೃತಿಯ ಅಣುರೇಣು ತೃಣಕಾಷ್ಠವೂ ಆಗಮಿಸಿರುವ ಯುಗಾದಿಯ ಮನ್ವಂತರಕೆ ಹಾತೊರೆಯುತ್ತಿದ್ದವು. ಈ ಶುಭಘಳಿಗೆಯನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡಿದ ಪ್ರಕೃತಿ ಮಾತೆಗೆ‌ ಹೃದಯದಲ್ಲಿಯೇ ಶಿರಸಾಷ್ಟಾಂಗ ಶರಣು ಶರಣಾರ್ಥಿಗಳನ್ನು ಸಲ್ಲಿಸಿ ಬಾಗಿದೆ. 

          

          ಇಂತಹ ತಂಗಾಳಿಯ ಮಬ್ಬು ನಸುಕಿನ ಅಮೃತಘಳಿಗೆಗೆ ಯಾವುದಾದರೊಂದು ಕಾವ್ಯಾರಾಧನೆಯ ಘಮಲು ಸೇರಿದರೆ ಅದೆಷ್ಟು ಚೆನ್ನ ! ಸ್ವರ್ಗಕ್ಕೆ ಕಿಚ್ಚು ಹಚ್ಚುವುದೊಂದೇ ಬಾಕಿ. ಹಾಗೆಂದುಕೊಂಡು‌ ದೀಪ ಬೆಳಗಿಸಿ ಗ್ರಂಥಾಲಯದಲ್ಲೊಮ್ಮೆ ಇಣುಕಿ ಹುಡುಕಿದೆ. ಮಿರ್ಜಾ ಗಾಲಿಬನ ಕುರಿತಾದ ಪುಸ್ತಕವೊಂದು ಕೈಗೆ ದಕ್ಕಿತು. ಇನ್ನೇನು ಬೇಕು ? ನವ ಯುಗಾದಿಯ ಶುಭೋದಯವನ್ನಾಚರಿಸಲು. ಬೆಳಗಿನ ತಂಗಾಳಿಗೆ ಸುಗಂಧವಾಗಿ ಸುಳಿದ ಮಿರ್ಜಾ ಗಾಲಿಬ್ ನನ್ನು ಆಸ್ವಾದಿಸುವುದೆಂದರೆ, ಜಗದ ಕಾವ್ಯನಶೆಯನ್ನೆಲ್ಲಾ  ಎದೆಯೊಳಗಿಳಿಸಿಕೊಂಡಂತೆ! ಹೌದು. ಆತ ಕೇಳುತ್ತಾನೆ 


"ಗಾಲಿಬ್ ಶರಾಬ್ ಪೀನೆ ದೇ ಮಸಜಿದ್ ಮೆ ಬೈಠಕರ್

ಯ ವೋ ಜಗಾ ಬಥಾ ಜಹಾ ಖುದಾ ನಹೀ"

( ಮಸೀದಿಯಲ್ಲಿ ಕುಳಿತು ಮದಿರೆ ಕುಡಿಯಲು ಬಿಡುಇಲ್ಲಾ ದೇವನಿಲ್ಲದ ಸ್ಥಳವನ್ನಾದರೂ ತೋರು) 

ಎಂದು.‌ ಸ್ಥಾಪಿಸಿಕೊಂಡ ಸಾಂಸ್ಥಿಕ ವ್ಯವಸ್ಥೆ, ಧರ್ಮ, ಸಂಪ್ರದಾಯ, ನಂಬಿಕೆಗಳು ಅವನೆತ್ತುವ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಸೋಲುವುದನ್ನು ಕಾಣುತ್ತೇವೆ. ಇದನ್ನೇ ಅಲ್ಲವೇ ಕನದಕದಾಸರ ಬಾಳೆಹಣ್ಣಿನ ರೂಪಕವೂ ಮತ್ತೊಂದು ಬಗೆಯಲ್ಲಿ ಜಗತ್ತನ್ನು ಪ್ರಶ್ನಿಸುತ್ತಿರುವುದು.ಶಬ್ದ ರೂಪಕಗಳಷ್ಟೇ ವಿಭಿನ್ನ, ಪ್ರತಿಪಾದಿಸುತ್ತಿರುವ ಇಬ್ಬರ ತಾತ್ವಿಕತೆಯ ದರ್ಶನವೂ ಒಂದೇ. 

     

              ಕವಿಯೊಬ್ಬ ಹಾಡುತ್ತಾನೆ- "ದೇವನ ಮೆನೆಯಿದು ಈ ಜಗವೆಲ್ಲಾ ಬಾಡಿಗೆದಾರರು ನಾವುಗಳೆಲ್ಲಾ" ಈ ಸತ್ಯಶೋಧನೆಯಿಂದ ಸಮಾಜವನ್ನು ಜಾಗೃತಗೊಳಿಸುವುದು ಗಾಲಿಬ್ ನ ಕವಿತೆಯ ಗುರಿಗಳಲ್ಲೊಂದಾಗಿತ್ತು. ಗಾಲಿಬನ ಕವಿತೆಗಳೆಂದರೆ ನಿಶಾಂತವಾಗಿ ಹರಿಯುವ ನದಿಯ  ಮಂಜುಳಗಾನ ; ಏಕಾಂತದ ತಪದಲಿದ್ದು ಆಚರಿಸುವ ಮೃದು ಮಧುರ ಧ್ಯಾನ; ಶಾಂತವಾಗಿ ದಡಕಪ್ಪಳಿಸಿ ಚುಂಬಿಸುವ ಕಡಲಲೆಗಳ ಮೊರೆವ ಯಾನ; ಹಸಿರೆಲೆಗಳ‌ ಮರೆಯಿಂದ ಇಣುಕಿ ಹರಿಸುವ ಗಿಳಿ ಕೋಗಿಲೆಗಳ ರಸಗಾನ. ಒಡಲೊಳಗಿಳಿಸಿಕೊಂಡ ಮದಿರೆಯ ನಿಶಾಗಾನ. ಈ  ಮಾಧುರ್ಯದ ಬನಿಯ ಜೊತೆ ಜೊತೆಗೆ ಮಿರ್ಜಾ ಅಸಾದುಲ್ಲಾಬೇಗ್ ಖಾನ್ ಗಾಲಿಬ್ ನ ಕಾವ್ಯದ ಇರಿಯುವಿಕೆಯೂ ಅದೆಷ್ಟು ಆಳವಾಗಿತ್ತೆಂದರೆ ಸ್ವತಃ ಮಹಾಕವಿಗಳಲ್ಲದೆ, ಆಳುವ ಅರಸರೇ ಕೇಳಿ ಬೆಚ್ಚಿಬೀಳುತ್ತಿದ್ದರು.
ಆ ಪ್ರಸಂಗವೊಂದು ಹೀಗಿದೆ -  ಮೊಗಲರ ದೊರೆಯ ಮಗ ಜಾಫರ್ ನ ಕಾವ್ಯಗುರುವಾಗಿದ್ದ ಮಹಾಕವಿ ಜೈಕ್. ಅರಮನೆಗೆ ಹೋಗುವ ಬೀದಿಯಲ್ಲೊಮ್ಮೆ ಆಕಸ್ಮಾತಾಗಿ ಸಿಕ್ಕ  ಜೈಕ್ ಕವಿಯ ಪಲ್ಲಕ್ಕಿಯಲ್ಲಿನ ಮೆರವಣಿಗೆಯನ್ನು ಕಂಡ ಗಾಲಿಬ್ " "ಮಹಾರಾಜರ ಕೃಪೆಯೆಂದು ಈ ಬೀಗುವಿಕೆಯೇ ' ಎಂದು ಹಾಡಿದ. ದೂರು ದರ್ಬಾರಿಗೆ ಹೋಯಿತು. ಆಹ್ವಾನಿಸಿದ ಕವಿಗೋಷ್ಠಿಗೆ ಮುನ್ನ ಇದರ ಬಗ್ಗೆ ಸ್ಪಷ್ಟನೆ ಕೇಳಿದಾಗ ಗಾಲೀಬನೆಂದ 'ಜೈಕ್‌‌ ಕವಿಗೆ ನಾನು ಅಪಮಾನಿಸಿಲ್ಲ.' ಹಾಗಾದರೆ ಆ ಕವಿತೆಯ ಸಾಲನ್ನೊಮ್ಮೆ ಪೂರ್ಣವಾಗಿ ಹೇಳು ಎಂದು ಒತ್ತಾಯಿಸಲಾಗಿ -ತಡಮಾಡದೇ ಗಾಲಿಬ್ ಆ ಆಶುಕವಿತೆಯನ್ನು ಮುಂದುವರೆಸಿ - 

"ಮಹಾರಾಜರ ಕೃಪೆಯೆಂದು ಈ ಬೀಗುವಿಕೆಯೇ ಗಾಲಿಬ್ 

ಬೇರೇನಿದೆ ಬದುಕಲು ನಿನಗಿದನ್ನು ಹೊರತುಪಡಿಸಿ "

 ಎಂದು ಹಾಡಿಬಿಟ್ಟ. ಅಲ್ಲಿದ್ದ ಚಕ್ರವರ್ತಿಯಾದಿಯಾಗಿ ಸಭಾಸದರೆಲ್ಲರೂ ಹೋ ಎಂದು ಮೆಚ್ಚುಗೆಯ ಸುರಿಮಳೆಗೈದರು. ಯೋಧನ ಕುಟುಂಬದಲ್ಲಿ ಜನಿಸಿ ಖಡ್ಗ ಹಿಡಿಯಬೇಕಾಗಿದ್ದವನು ಕತ್ತಿಯಂತೆ ಬಳಸಬಹುದಾದ ಲೇಖನಿಯನ್ನು ಹಿಡಿದೆ ಎಂದು ಬರೆದುಕೊಳ್ಳುತ್ತಾನೆ. ಗಾಲಿಬ್ ಐದು ವರ್ಷದವನಿರುವಾಗಲೇ  ತನ್ನ ತಂದೆ ಮಿರ್ಜಾ ಅಬ್ದುಲ್ಲಾ ಬೇಗ್ ರವರನ್ನು ಕಳೆದುಕೊಂಡ. ಆಶ್ರಯದಾತನಾದ ಚಿಕ್ಕಪ್ಪ ನಸರುಲ್ಲಾ ಬೇಗ್ ಖಾನ್ ರು ‌ಗಾಲೀಬನ  ೯ ವರ್ಷದಲ್ಲಿಯೇ ತೀರಿಹೋದರು. ಇಂತಹ ವಿಧಿಯನ್ನು ಕುರಿತೇ ಗಾಲಿಬ್ ಹಾಡಿದ ಹಾಡನ್ನು ಕೇಳಿ - 

"ದೈತ್ಯ ಅಲೆಗಳ ಕದನದಲ್ಲಿ

ಸುಳಿಗೆ ಸಿಕ್ಕಿದೆ ನಾವೆ

ನಾವಿಕ ನಿದ್ದೆ ಹೋಗಿದ್ದಾನೆ

ವಿಧಿಯನ್ನೇಕೆ ಜರಿಯುವೆ ಗಾಲಿಬ್?"

             

                       ೧೨೦೦೦ ದ್ವಿಪದಿಗಳನ್ನು ರಚಿಸಿದ ಗಾಲಿಬನನ್ನು ದೆಹಲಿ ಸಹಿಸಿಕೊಂಡಿದ್ದು ಅಪರೂಪ. ಕಸೀದ್,ರೇಖ್ತಾ, ಗಜಲ್, ರುಬಾಯಿ, ದ್ವಿಪದಿ ಗಳಂತಹ ಕಾವ್ಯಾಕ್ಷಿಯರನ್ನೆಲ್ಲಾ ಮದಿರೆಯಂತೆ ಪ್ರೀತಿಸಿ ಅವರ ನಶೆಯನ್ನೇರಿಸಿಕೊಂಡ ಗಾಲಿಬನ ಬದುಕೇ ಹೋರಾಟದ ಮಹಾಕಾವ್ಯವಾಗಿತ್ತು. ಪರಿಶ್ರಮದಿಂದ ತೋಡಿದ ಬಾವಿಯ ಒರತೆಯಂತೆ ನಿತ್ಯವೂ ಕೂಲಿಗಾಗಿ ಕಾಯುವಂತಹ ದುಸ್ಥಿತಿಯನ್ನು ಅನುಭವಿಸಿ ಮಾಗಿದ. ದೆಹಲಿಯ ಸಿಂಹಾಸನದ ಪಕ್ಕದಲ್ಲಿದ್ದರೂ ಬಹುಪಾಲು ಅನಾಮಿಕನಾಗಿಯೇ ಬದುಕಿದ. ಚಿಕ್ಕಪ್ಪನ ರೂ. ೭೫೦  ಪಿಂಚಣಿಯಲ್ಲಿಯೇ ತನ್ನ ಬಾಳನ್ನು ಹಾಸಿಕೊಂಡು, ಬರೆದ ಕಾವ್ಯದ ಹಾಳೆಗಳನ್ನೇ ಹೊದ್ದು ಮಲಗಿದ‌ ಮಹಾ ಫಕೀರ. ಹೊತ್ತಲ್ಲದ ಹೊತ್ತಿನಲ್ಲಿ ಮದುವೆಯಾಗಿ ಬಾಲ್ಯದ ಗೆಳತಿಯನ್ನೇ ಸತಿಯನ್ನಾಗಿ ಕಟ್ಟಿಕೊಂಡು ತಿರುಗಿದವನ ಬಾಳಿಗೆ ಕಾವ್ಯಗಳೇ‌ ಬೆಳಕನ್ನು ನೀಡಿದವು. ದೆಹಲಿಯಲ್ಲಿನ ಮಸೀದಿಯ ಕತ್ತಲೆಯ ದಾರಿಯಲ್ಲಿ ನಡೆಯುವವನ ಕೈಹಿಡಿದು ಮುನ್ನಡೆಸಿದ್ದು ಗಜಲ್ ಗಳೇ. ತನ್ನ ಕಾವ್ಯಕ್ಕೊಂದು ಜನಮೆಚ್ಚುಗೆ ದೊರೆತು ದೊರೆಯ ಪುರಸ್ಕಾರ ದಕ್ಕಿಸಿಕೊಂಡರೆ ಸಾಕು. ಅಂದಿನ ಅವನ ಗುಲಾಬು, ಶರಾಬಿ, ರೊಟ್ಟಿಗೆ  ತಾಪತ್ರಯವಿರಲಿಲ್ಲ. ಇದಷ್ಟೇ ಅವನ ಬದುಕಿನ ಚಿಂತೆಯಾಗಿತ್ತು.  ಬಾರದು ಬಪ್ಪುದು, ಬಪ್ಪುದು ತಪ್ಪದು ಎಂಬಂತೆಯೇ ಬದುಕಿದ ಮಿರ್ಜಾ ಗಾಲಿಬ್ ದೆಹಲಿಯ ಸಂದಿಗೊಂದಿಗಳನ್ನು ತಿರುಗಿದ.‌ ಬೀದಿ ಬದಿಯ ಸಾಮಾನ್ಯರ ಸಂತೆಯಲ್ಲಿದ್ದೂ ಸಂತನಾದ. ಲೌಕಿಕ ಬದುಕಿನ ರಥ‌ ಮುನ್ನಡೆಸಲು ತನಗೆ ಬರಬೇಕಾದ ಪಿಂಚಣಿ ಹಣಕ್ಕಾಗಿ ಫಕೀರನಂತೆ ಪರದಾಡಿದ್ದರ ಮಧ್ಯೆಯೂ ಅಲೌಕಿಕ ದರ್ಶನದ ಕಾವ್ಯನಿಧಿಯನ್ನು ಭವಿತವ್ಯದ ಭಾರತಕ್ಕಾಗಿ ಸಂಪಾದಿಸಿದ ಹಿರಿಮೆ ಗಾಲೀಬನದು. 

             

                     ದೆಹಲಿಯ ದರ್ಬಾರಿನಲ್ಲಿ ರಾಜಕವಿಯಾಗುವ ಅವಕಾಶಕ್ಕಾಗಿ ಕಾದು ಕಾದು ಪ್ರಯತ್ನದಲ್ಲಿ ಸಫಲನಾದ. ಕಾವ್ಯವನ್ನೇ ಉಸಿರಾಗಿಸಿಕೊಂಡು  ಕಾವ್ಯದೊಂದಿಗೆ ಬಾಳುತ್ತಿದ್ದವನನ್ನು ಕಾವ್ಯಕನ್ನಿಕೆ ಕೈ ಬಿಡಲಿಲ್ಲ. ಆಸ್ಥಾನದ ದಾರಿ ತೋರಿ ಒಳಬಿಟ್ಟಳು. ಕಾವ್ಯಸಮ್ಮೇಳನ, ಕವಿಗೋಷ್ಠಿಗಳಲ್ಲಿ ಗಾಲೀಬನದೇ ಮೇಲುಗೈ. ಆಶ್ರಯವಿತ್ತ ಅರಸನ ಮೇಲೆ ಕಸೀದನ್ನು ಬರೆದು ಕುಣಿಸಿದ. ತನ್ನ ಮುಂದೆಯೇ ಪಲ್ಲಕ್ಕಿಯ ಮೇಲೆ ಮೆರೆದವರನ್ನು ಕಾವ್ಯಕುಂಚದಿಂದಲೇ ಕುಟುಕಿದ. ಒಳಗೊಳಗೆ ಪಿತೂರಿ ನಡೆಸುತ್ತಿದ್ದವರನ್ನು ವಿಡಂಬಿಸಿ ಹೆಡೆಮುರಿ ಕಟ್ಟಿದ. ತನ್ನ ಪಿಂಚಣಿ ಹಣಕ್ಕಾಗಿ ಕಾಡಿಸಿದವರನ್ನು ಕಸೀದ್ ಗಳಲ್ಲಿಯೇ ಬಂಧಿಸಿ ಮೆರೆಸಿ ಒಲಿಸಿಕೊಂಡ. ಮೌಢ್ಯತೆ, ಧಾರ್ಮಿಕ ಮೂಢನಂಬಿಕೆ, ಬೂಟಾಟಿಕೆಗಳನ್ನು ಖಂಡಾತುಂಡವಾಗಿ ವಿರೋಧಿಸಿ ಭಾವೈಕ್ಯತೆ, ವೈಚಾರಿಕತೆ ಮೂಲಕ ಜನ ಕಲ್ಯಾಣದ ಪಣ ತೊಟ್ಟುಕೊಂಡ.‌ ಈತನ  ಕಾವ್ಯದಲ್ಲಿ ದೋಷಗಳಿವೆ ಎಂದು ಆರೋಪಿಸಿದವರಿಗೆ ಗಜಲ್ ಗಳ  ಮೂಲಕವೇ ತಿರುಗೇಟು ಕೊಟ್ಟ. ಕನ್ನಡದ ಕವಿವರೇಣ್ಯರು ಪಂಡಿತರ ಭಾಷೆಯಾದ ಹಳಗನ್ನಡವನ್ನು ತ್ಯಜಿಸಿ ಸಾಮಾನ್ಯರ ಸವಿಗನ್ನಡಕ್ಕೆ ಒತ್ತುನೀಡಿದಂತೆ, ಗಾಲೀಬನೂ ಕೂಡ ಪಂಡಿತರ ಪರ್ಷಿಯನ್ ಬಿಟ್ಟು ಸಾಮಾನ್ಯರ ಉರ್ದುವಿನಲ್ಲಿ ಕಾವ್ಯಝರಿ ಹರಿಸಿ‌ ಉಭಯಭಾಷಾವಿಷಾರದನಾದ.‌
     ಜಾತಿ, ಮತ, ಪಂಥಗಳಾಚೆಯೂ ಬಹು ಜನರಿಗೆ ಹತ್ತಿರವಾದ. ಕಟ್ಟಿಕೊಂಡ ಸತಿ ಉಮ್ರಾವ್ ಬೇಗಂ ನಿತ್ಯ ಕರೆಗೊಡುವ ಐದೂ ಆಜಾನ್ ಗಳಿಗೆ  ತಪ್ಪದೇ ಪ್ರಾರ್ಥನೆ ಸಲ್ಲಿಸುವ ಪರಮ ದೈವ ಭಕ್ತೆ. ಆದರೆ ಗಾಲಿಬ್ ಮಸೀದಿಯ ಕಡೆಗೇ ಮುಖ ಮಾಡದ ಅಪ್ಪಟ ಕಾವ್ಯಧರ್ಮಿ. ಸಂಸಾರದ ಅಂತರಂಗದಲ್ಲಿ ದಾರಿ ಹೀಗೆ ಕವಲೊಡೆದಾಗ ಆಸರೆಯಾಗಿದ್ದು ಆತ ನಂಬಿದ ಕಾವ್ಯರಾಣಿಯೇ.  ಜನಿಸಿದ ಏಳು ಮಕ್ಕಳೂ ನಕ್ಷತ್ರಗಳಂತೆ ಕಣ್ಣೆದುರೇ ಉದುರಿಬಿದ್ದಾಗ ವಿಹ್ವಲನಾದ. ಕಣ್ಣೆದುರಿನ ಮಗುವಿನ ಕೆನ್ನೆ ಸವರಿದಾಗ ಸಿಗುವ ಸ್ವರ್ಗಾನಂದ ಯಾವ ಕಾವ್ಯಾನಂದಕ್ಕಿಂತ ಕಡಿಮೆ ಹೇಳಿ ?  ಈ ಭಾಗ್ಯ ಗಾಲೀಬನಿಗೆ ದಕ್ಕದಿದ್ದಾಗ ತನ್ನದೇ ಅಂತರಂಗದ ಕುಡಿಗಳಂತಿದ್ದ ಕಾವ್ಯಗಳನ್ನೇ ತಿರಸ್ಕರಿಸಲಾರಂಭಿಸಿದ.‌ ಆದರೆ ಕಾವ್ಯವನ್ನು ಬಿಟ್ಟ ಗಾಲಿಬ್ ನನ್ನು  ಕಲ್ಪಿಸಿಕೊಳ್ಳುವುದಾದರೂ ಹೇಗೆ? ಮೊಮ್ಮಕ್ಕಳ‌ ಮುಖ ನೋಡಿ ಮತ್ತೆ ಲಯಕ್ಕೆ ಹಿಂತಿರುಗಿದ. ಇದು ಅವನಲ್ಲಿದ್ದ ಜೀವನಪ್ರೀತಿಯ ವಿರಾಟ ರೂಪದ ವಿಲಾಸದ ಕೈಲಾಸ.‌ ಅರಮನೆಯ ಪಲ್ಲಕ್ಕಿಯ ಮೇಲೆ ಕುಳಿತುಕೊಂಡು ರಾಜಾಶ್ರಯ ಪಡೆದು ಆಸ್ಥಾನಕವಿಯಾಗಬೇಕೆಂಬ ಅವನ ಹಂಬಲ ಎಲ್ಲ ಕವಿಗಳಲ್ಲಿದ್ದಂತೆ ಈತನಲ್ಲಿಯೂ ಸಹಜವಾಗಿದ್ದುದರಲ್ಲಿ ಆಶ್ವರ್ಯವೇನಿಲ್ಲ .‌ಕಂಡ ಕನಸನ್ನು ನನಸಾಗಿಸಿಕೊಳ್ಳಲು ಇನ್ನಿಲ್ಲದಂತೆ ಹೆಣಗಾಡಿದ. 

         

                 ದೆಹಲಿಯ ಸಾಮ್ರಾಜ್ಯಶಾಹಿ ಸಂಘರ್ಷದ ಚರಿತ್ರೆ ಹಾಗೂ ತನ್ನದೇ ಡೋಲಾಯಮಾನ ಬದುಕಿನ ರೂಪಕದಂತಿರುವ   ಕವಿತೆಯೊಂದನ್ನು ಗಾಲಿಬ್ ಹಾಡಿದ್ದು ಹೀಗೆ- 'ಓಡುತಿದೆ ಆಯುಷ್ಯದ ಅಶ್ವ ಎಲ್ಲಿ ಹೋಗಿ ನಿಲ್ವುದೋಕಡಿವಾಣ ಕೈಯೊಳಿಲ್ಲ, ಅಂಕವಣೆಯೊಳಿಲ್ಲ ಕಾಲು!’.ಪೊಟ್ಟಣ ಕಟ್ಟುವ ಕಾಲಡಿಯ ಹಾಳೆಯಲ್ಲಿ ಸಿಕ್ಕ ಕಾವ್ಯದ ಸಾಲುಗಳನ್ನು ಆಕಸ್ಮಾತಾಗಿ ಗುಣುಗುಣಿಸಿ ಹಾಡಿದವಳ ದನಿಯನ್ನು ಕೇಳಿದ ಗಾಲಿಬನಿಗೆ ಹಾರಿ ಹೋಗುತ್ತಿದ್ದ ಹೃದಯದ ಹಕ್ಕಿ ಮರಳಿ ಎದೆಗೂಡಿಗೆ ಇಳಿದಂತಾಯಿತು; ದೆಹಲಿಗೆ ಬೇಡವಾದ ತನ್ನ ಕಾವ್ಯದಿಂದ ವಿಚಲಿತನಾಗಿದ್ದವನಿಗೆ ಮರಭೂಮಿಯಲ್ಲಿ ಓಯಸಿಸ್ ದೊರಕಿದ ಸಂಭ್ರಮ; ಬತ್ತಿ ಹೋಗುತ್ತಿದ್ದ ಅವನೆದೆಯ ಚೈತನ್ಯದ ಚಿಲುಮೆ ಮತ್ತೆ ಪುಟಿದಂತಾಯಿತು; ಮೋಡಗಳ‌ ಹಿಂದೆ ಮರೆಯಾಗಿ ಕತ್ತಲೆಯಲ್ಲಿ ಬೆಳದಿಂಗಳನ್ನು  ಕಳೆದುಕೊಂಡ ಚಂದಿರ ಮತ್ತೆ ತೆರೆ ಸರಿಸಿಕೊಂಡು ಬೆಳಗಿದಂತಾಯಿತು; ಬಾಡಿ ಹೋಗುತ್ತಿದ್ದ ಬಳ್ಳಿಗೆ  ಜೀವಜಲದ ಹನಿಗಳೆರೆದಂತಾಯಿತು; ಬರಗಾಲದಿಂದ ಬಿರುಕೊಡೆದು ದೆಸೆ ದೆಸೆಗೆ ಬಾಯಿಬಿಡುತ್ತಿದ್ದ ಇಳೆಗೆ ಇಬ್ಬನಿಯ ಸವಿಜೇನು ದಕ್ಕಿದಂತಾಗಿತ್ತು. ಕಾವ್ಯಾಲಾಪದಂತೆ ಗಾಲಿಬ್ ನ ಹೃದಯದೊಂದಿಗೆ ಹೀಗೆ ಹಾಡುತ್ತಲೇ ಜೊತೆಯಾದವಳು ದೆಹಲಿಯ ನರ್ತಕಿ ನವಾಬ್ ಜಾನ್. ಗಾಲಿಬ್ ನ ಕಾವ್ಯದೆಡೆಗಿನ ಅವಳ ವ್ಯಾಮೋಹ ಎಂತಹುದೆಂದರೆ, ಆಕೆ ತನ್ನ ಮನ- ಮನೆಗಳನ್ನೆಲ್ಲವನ್ನೂ ಅಲಂಕರಿಸಿಕೊಂಡಿದ್ದು ಗಾಲಿಬ್ ನ ಕಾಡುವ ಶೇರ್( ದ್ವಿಪದಿ) ಮಣಿಗಳಿಂದಲೇ. ಆಕೆ ತನ್ನ ಹೆಸರಿಗೆ ತಕ್ಕಂತೆ ಗಾಲೀಬನ ಕಾವ್ಯಾತ್ಮವೇ ಆಗಿಬಿಟ್ಟಳು ಎನ್ನುವುದಕ್ಕೆ ಕೆಳಗಿನ ಸಾಲುಗಳನ್ನು ಗಮನಿಸಿ -

ಜಾನ್ ತುಮ್ ಪರ್ ನಿಸಾರ್ ಕರ್ ತಾ ಹೂಮೈ 

ನಹಿ ಜಾನ್ ತಾ ದುವಾ ಕ್ಯಾ ಹೈ ? 

( ನೀನೆಂದರೆ ಜೀವ ಬಿಡುತ್ತೇನೆ, ಅದರ ಹೊರತಾಗಿ ಇನ್ಯಾವ ಪ್ರಾರ್ಥನೆಯೂ ನನಗೆ ಗೊತ್ತಿಲ್ಲ).

ಗಾಲೀಬನ ಸ್ನೇಹದಿಂದಾಗಿಯೇ ಸಮಾಧಿಯಾದ ನವಾಬ್ ಜಾನ್ ಳ ಗೋರಿಯ ಮೇಲೆ ಬರೆದ ಗಾಲೀಬನ ಸಾಲುಗಳಿವು- 

ಯೆ ನ ಥಿ ಹಮಾರಿ ಕಿಸ್ಮತ್ ಕೆ ಮಿಸಾಲ್ ಎ ಯಾರ್ ಹೋತಾ

ಅಗರ್ ಔರ್ ಜೀತೆ ರೆಹ್ತೆ ಯಹಿ ಇಂತಜಾರ್ ಹೋತಾ 

( ಪ್ರೇಮಿಯನ್ನು ಸಂಧಿಸುವುದು ನನ್ನ ಹಣೆಯಲ್ಲಿ ಬರೆದಿಲ್ಲಇನ್ನು ಬದುಕಿದ್ದರೂ ಇದೇ ನಿರೀಕ್ಷೆಯಲ್ಲೇ ಬದುಕಬೇಕಿತ್ತು) 

ಇದಲ್ಲವೇ ಎರಡು ದೇಹ ಒಂದೇ ಆತ್ಮದಂತಿದ್ದವರ ನಿರ್ಮಲ ಕಾವ್ಯಾನುರಾಗದ ಹೊಳೆಯ ಹರಿವು. ೧೭೯೭ ರಿಂದ ೧೮೬೯ ರವರೆಗೆ ೭೨ ವರ್ಷಗಳ ತುಂಬುಜೀವನವನ್ನೇ ಸವೆಸಿದ ಗಾಲಿಬ್ ಸಮಾಧಿಯಾಗಿ ೧೫೦ ವರ್ಷಗಳಾದ ಈ ಹೊತ್ತಿನಲ್ಲಿ ವರ್ತಮಾನದ ಲೇಖಕರನ್ನು ಆತ ಕಾಡಿದ ಬಗೆಯನ್ನೊಮ್ಮೆ ಕೇಳಿಬಿಡಿ- "ಗಾಲಿಬ್ ನನ್ನು ಮತ್ತೆ ಓದುವುದು, ಅವನೊಡನೆ ಗಲೀ ಖಾಸಿಮ್ ಉದ್ದಕ್ಕೂ ಹೆಜ್ಜೆ ಹಾಕುವುದು, ದೆಹಲಿಯ ಕಡುಚಳಿ, ರಣಬಿಸಿಲುಗಳ ತೀವ್ರತೆಯಲ್ಲಿ ಅರಳಿದ ಅವನ ಕಾವ್ಯಕ್ಕೆ ಎದೆಯೊಡ್ಡುವುದು ನನ್ನ ಸಂಭ್ರಮಕ್ಕೆ ಕಾರಣವಾಗುತ್ತದೆ. ಗಾಲಿಬ್ ಒಂದು ಹರಿಯುವ ನದಿಯಂಥವನು. ಅವನನ್ನು ನಾನು ಪದಗಳಲ್ಲಿ ಹೇಗೆ ಬಂಧಿಸಿಡಲಿ? ಅವನ ಬದುಕು ಮತ್ತು ಕಾವ್ಯ ಎರಡರ ಹರವೂ ವಿಸ್ತಾರವಾದದ್ದು.

ಇಷ್ಟೆಲ್ಲಾ ಬರೆದ ಮೇಲೂ ಕಾಡುತ್ತಿರುವ ಗಾಲಿಬನ ಸಾಲುಗಳಿವು-
ಹೂಂಗರೆ ಎ ನಿಶಾತ್ ಎ ತಸವ್ವರ್ ಸೆ ನಗಮಾ ಜ್ವಾನ್ಮೈಂ ಅಂದಲೀಬ್ ಎ ಗುಲ್ಶನ್ ನ ಆಫ್ರಿದಾ ಹೂಂ"  ಎಂದು ಗಾಲಿಬನ ಕಾವ್ಯಾರಾಧನೆ ಮಾಡುತ್ತಾರೆ ಖ್ಯಾತ ರಂಗಕರ್ಮಿ ಹಾಗೂ ಲೇಖಕಿಯರಾದ ಸಂಧ್ಯಾರಾಣಿಯವರು. ಗಾಲೀಬನ ಕುರಿತು ತಮ್ಮ ಪ್ರಪ್ರಥಮ ಅನುವಾದ ಕೃತಿಯನ್ನು ಹೊರತಂದ ಇಮಾಮ್ ಸಾಹೇಬ ಹಡಗಲಿಯವರು

"ಗಾಲಿಬ ಜೀವನದುದ್ದಕ್ಕೂ ಕನ್ನಡಿ ಒರೆಸುತ್ತಿದ್ದ 

ಈಗ ನಾನು ಅವನ ಮುಖ ಒರೆಸುತ್ತಿದ್ದೇನೆ 

ಅವನ ಸಮಾಧಿಯ ಮೇಲಿನ ಧೂಳನ್ನೂ ಕೂಡ

ಇನ್ನು ನೀವುಂಟು, ಗಾಲೀಬನುಂಟು" 

ಎಂದು ಗಾಲೀಬನನ್ನು  ಕಾವ್ಯಪ್ರೇಮಿಗಳ ಹೃದಯದೊಳಗಿಳಿಸುತ್ತಾರೆ.

"ಕವಿತಾವಿಲಾಸದ ಕಾವಿನಿಂದ ಹಾಡುತ್ತಲಿದ್ದೇನೆ

ನಾನಿಹೆನು ಬರಲಿರುವ ಬನದ ಬುಲ್‌ಬುಲ್!’

 ಯುಗಾದಿಯ ಕೆಂದಳಿರನ್ನುಂಡ ಕೋಗಿಲೆಯೊಂದು  ಹರ್ಷೋಲ್ಲಾಸದಲ್ಲಿ ಹಾಡಿದ ಗೀತೆಯಂತಿದೆ ಗಾಲೀಬನ ಮೇಲಿನ ಕವಿತೆ.  ಧರ್ಮ, ಭಕ್ತಿ, ಆಚರಣೆಗಳೆಂದರೆ ನಿರ್ದಾಕ್ಷಿಣ್ಯವಾಗಿ ನಿರಾಕರಿಸುತ್ತಿದ್ದ ಗಾಲಿಬ್ ಭಕ್ತಿಯ ವ್ಯಾಖ್ಯಾನ‌ ವಿಭಿನ್ನ ನೆಲೆಯದ್ದು.ಆಸೆ ಅಮಿಷ ಬಯಕೆಗಳಿಂದ ತುಂಬಿದ ಸ್ವಾರ್ಥ ಭಕ್ತಿಯನ್ನು ಗಾಲೀಬ್ ವಿಡಂಬಿಸುವುದು ಹೀಗೆ 

‘ಭಕ್ತಿಯೊಳಗಿರದಿರಲಿ ಮಧು ಸುಧೆಯ ಆಸೆಯು-ನರಕದೊಳಗೊಗೆಯಿರಿ ಸ್ವರ್ಗವನ್ನಾರಾದರೂ!’

ಈ ದ್ವಿಪದಿಯನ್ನು ಕೇಳುತ್ತಿದ್ದರೆ ವಚನಕಾರರು ಶರಣ, ಭಕ್ತ, ಭಕ್ತಿಯನ್ನು ಕುರಿತು ಹಾಡಿದ ವಚನಗಳು ನೆನಪಾಗುತ್ತವೆ. ಜಹಗೀರದಾರರ ಕುಟುಂಬದಲ್ಲಿ ಜನಿಸಿದ್ದ ಗಾಲಿಬ್ ಅದೆಷ್ಟು ಸ್ವಾಭಿಮಾನಿಯಾಗಿದ್ದ ಎಂಬುದಕ್ಕೆ ಕೆಳಗಿನ ಪ್ರಸಂಗವನ್ನು ಕೇಳಿ - ಬ್ರಿಟೀಷರು ದೆಹಲಿಯಲ್ಲೊಂದು ಕಾಲೇಜನ್ನು ತೆರೆದಿದ್ದರು. ಅಲ್ಲಿ ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕಾದಾಗ ಸಚಿವ ಥಾಮ್ಸನ್ ಅದಾಗಲೇ ಪರಿಚಯವಿದ್ದ ಗಾಲಿಬ್ ನಿಗೆ ಹೇಳಿಕಳುಹಿಸುತ್ತಾನೆ. ಪಲ್ಲಕ್ಕಿಯ‌ಲ್ಲಿ ಬಂದ ಗಾಲಿಬ್ ಕಚೇರಿಯ ಹೊರಗೆ ನಿಂತು ಸ್ವಾಗತಿಸಲು ಬರುವರೆಂದು ಕಾಯುತ್ತಾನೆ. ಈ ಸಂಗತಿ ಥಾಮ್ಸನ್ನನಿಗೆ ತಿಳಿದು ಆತ ಜಹಗೀರದಾರನಾಗಿ ಬಂದಿದ್ದರೆ ಸಂಪ್ರದಾಯದಂತೆ ಸ್ವಾಗತಿಸಬಹುದಿತ್ತು ಆದರೀಗ ಆತ ಅಧ್ಯಾಪಕ ಹುದ್ದೆಗೆ ಅಭ್ಯರ್ಥಿಯಾಗಿ ಬಂದಿರುವುದರಿಂದ ಖುದ್ದಾಗಿ ಬಂದು ಸ್ವಾಗತಿಸಲು ಸಾಧ್ಯವಿಲ್ಲ ಎಂದು ಹೇಳಿಕಳುಹಿಸುತ್ತಾನೆ. ಸಹಾಯಕನಿಂದ ಈ ವಿಷಯ ಅರಿತುಕೊಂಡ ಗಾಲಿಬ್ ಇಲ್ಲಿ ಅಧ್ಯಾಪಕ ವೃತ್ತಿ ಮಾಡುವುದರಿಂದ ನನ್ನ ಹಾಗೂ ಪರಿವಾರದ ಗೌರವ ಹೆಚ್ಚಾಗುತ್ತದೆಂದು ಬಂದೆ. ಆದರೆ ಬದಲಾಗಿ ಇಲ್ಲಿ ಇದ್ದ ಮರ್ಯಾದೆಯೂ ಹರಾಜಾಗುತ್ತಿದೆ ಎಂದ ಮೇಲೆ ಈ ಕೆಲಸ ತನಗೆ  ಬೇಡವೆಂದು ನಿರ್ಧರಿಸಿ ಅದೇ ಪಲ್ಲಕ್ಕಿಯಲ್ಲಿ ಮರಳಿ ಹೋದ. ಇವನ ಸ್ಬಾಭಿಮಾನದ ಮುಂದೆ‌ ಬ್ರಿಟಿಷ್ ಸರಕಾರಿ ನೌಕರಿಯೂ ಯಕಃಶ್ಚಿತವಾಗಿಬಿಟ್ಟಿತು.

‘ಕೇಳದಿರು ಕೆಡುಕು ನುಡಿದರೆ ಯಾರಾದರೂ

ಹೇಳದಿರು ಕೆಡಕು ಗೈದರೆ ಯಾರಾದರೂ

ತಡೆ, ತಪ್ಪು ದಾರಿ ತುಳಿದರೆ ಯಾರಾದರೂ

ಕ್ಷಮಿಸಿ ಬಿಡು ತಪ್ಪು ಮಾಡಿದರೆ ಯಾರಾದರೂ

ಅಪೇಕ್ಷೆಯೇ ಇಲ್ಲವಾದಾಗ ಗಾಲೀಬ್,

ಯಾರನೇತಕೆ ದೂರುವುದು ಯಾರಾದರೂ

ಎಂಬ ಆತ್ಮಾವಲೋಕನದ ಆಧ್ಯಾತ್ಮ ಗಾಲೀಬನದು. ಈತ ವಚನಕಾರರಂತೆಯೇ ವ್ಯಕ್ತಿ ಸಾಧನೆಯ ಸೂತ್ರಗಳನ್ನು  ಕಟ್ಟಿಕೊಡುತ್ತಾನೆ. ಗಾಲಿಬ್ ನನ್ನು ಕೆಲವೇ ಪದಗಳಲ್ಲಿ ವ್ಯಾಖ್ಯಾನಿಸುವುದಾದರೆ, ಆತ್ಮದ ನಶೆಯೇರಿಸುವ ಕವಿತೆ, ರಸಾನುಭವಕ್ಕೊಂದಿಷ್ಟು ಗುಲಾಬು, ರಾತ್ರಿಯ ಅಮಲಿಗೊಂದಿಷ್ಟು ಶರಾಬು, ಹಸಿವಿಗೆರಡು ರೊಟ್ಟಿ. ಸ್ವಾದಕ್ಕೊಂದಿಷ್ಟು ಮಾವು. ಇವೆಲ್ಲವುಗಳ ಅದ್ಭುತ ರಸ ಸಂಯೋಜನೆಯೇ ನಾವೆಂದುಕೊಂಡ ಗಾಲಿಬ್. ಮೊಗಲ್ ಸಾಮ್ರಾಜ್ಯ ಪತನವಾಗಿ ಬ್ರಿಟಿಷ್ ಅಧಿಪತ್ಯ ಸ್ಥಾಪನೆಯಾಗುವ ವಿಷಮ ಸಂಕ್ರಮಣ ಕಾಲದಲ್ಲಿ ಚರಿತ್ರೆಯ ಸಾಕ್ಷಿಪ್ರಜ್ಞೆಯಾಗಿದ್ದವನು ಗಾಲಿಬ್. ಹಿಂಸೆ, ಕೊಲೆ, ರಕ್ತಪಾತ, ಕಾಳಗ, ಯುದ್ಧಗಳೇ ತುಂಬಿದ ಜಗತ್ತಿನಲ್ಲಿ ಆತನೇ ಹೇಳುವ ಹಾಗೆ ಹೃದಯದ  ದುಃಖಗಳಿಗೆ ಮದ್ದಾಗಬಲ್ಲ ಸೋಮರಸ ಹಾಗೂ ಕವಿತೆಗಳಿಂದ ನಶೆಯೇರಿಸಿಕೊಂಡು ಬದುಕುತ್ತಲೇ ಮಹಾಸಂತನಾಗಿ ಗುರ್ತಿಸಿಕೊಂಡ.‌ ತನ್ನದೇ ವಿಶಿಷ್ಟ ತಾತ್ವಿಕತೆ, ಚಿಂತನೆ, ಎಲ್ಲರನ್ನೊಳಗೊಂಡ ಕಾವ್ಯಗಳಿಂದ  ಸಾಂಸ್ಕೃತಿಕ ಲೋಕದ ಪ್ರಖರ ಸೂರ್ಯನಾಗಿ ಇಂದಿಗೂ ಕಂಗೊಳಿಸುತ್ತಿದ್ದಾನೆ. 

             

                  ಮಿರ್ ಮೆಹದಿಯು ಒಮ್ಮೆ "ಧರ್ಮಶಾಸ್ತ್ರವನ್ನೋದಿದರೆ ಏನಾದರೂ ಲಾಭವಾಗುತ್ತದೆಯೇ ? ಎಂದು ಕೇಳಿದ್ದಕ್ಕೆ ಗಾಲೀಬನೆಂದ- "ಧರ್ಮಶಾಸ್ತ್ರ ಓದಿ ಏನು ಮಾಡುವೆ ? ಚಿಕಿತ್ಸಾಶಾಸ್ತ್ರ, ಜ್ಯೋತಿಷ್ಯ,ತರ್ಕಶಾಸ್ತ್ರ, ದರ್ಶನಗಳನ್ನಾದರೂ ಓದು, ಕೊನೆಯ ಪಕ್ಷ ಮನುಷ್ಯನಾದರೂ ಆಗಬಹುದು." ಗಾಲೀಬನ ಈ ಮಾತೊಂದೇ ಸಾಕು ವರ್ತಮಾನದ ಸಾಮಾಜಿಕ, ಧಾರ್ಮಿಕ, ರಾಜಕಾರಣದ ತಲ್ಲಣಗಳಿಗೆ ಅವನು ಹೇಗೆ ಉತ್ತರವಾಗಬಲ್ಲನೆಂಬುದಕ್ಕೆ.‌ ಬದುಕಿನಲ್ಲಿ ಆತ ಪಡೆದ ಸುಖಕ್ಕಿಂತ ಉಂಡ ನೋವುಗಳ ಲೆಕ್ಕವೇ ಅಪರಿಮಿತ. ಗಾಯಗಳ‌‌ ಮೇಲೆ ಗಾಯ, ಸಂಕಟಗಳ‌ ಮೇಲೆ ಸಂಕಟ, ಬಾಡಿಗೆ ಮನೆಯೊಳಗೆ ಸಂಸಾರ, ಪಿಂಚಣಿಗಾಗಿ ಹೋರಾಟ, ಕೆಲವು ಬ್ರಿಟಿಷ್ ಅಧಿಕಾರಿಗಳು ಹಾಗೂ‌ ನಂಬಿದ ನವಾಬರಿಂದ ದ್ರೋಹ  ಹೀಗೆ ಬದುಕೆಲ್ಲವೂ ನಿತ್ಯಚಿಂತೆಗಳ ಸಂತೆಯಾಯಿತೇ ವಿನಃ ಆತ ಆಚರಿಸಬಹುದಾದ ಸಂಭ್ರಮದ ಹಬ್ಬವಾಗಲೇ ಇಲ್ಲ. ಹಾಸಿಗೆಯಿಂದ ಏಳಲಾಗದ ಕೊನೆಗಾಲದಲ್ಲಿಯೂ ಮಲಗಿಕೊಂಡೇ, ಬರಹವನ್ನು ನಿಲ್ಲಿಸಲಾಗದ ತಪವನ್ನಾಚರಿಸಿದ ಫಕೀರನೆಂದರೆ ಗಾಲಿಬ್. ಧರ್ಮಕ್ಕಿಂತಲೂ ಬದುಕಿನ ತತ್ವಜ್ಞಾನವೇ ಮಿಗಿಲಾದದ್ದು ಎಂದು ನಂಬಿ ಬದುಕಿದ ಧರ್ಮಾತೀತ ಸಂತ ಕೊನೆಯುಸಿರೆಳೆದಾಗ, ಧರ್ಮಪರೀಕ್ಷೆಯನ್ನೆದುರಿಸಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸವೇ ಸರಿ. ಹೀಗೆ ಬರೆಯುತ್ತಿರುವಾಗಲೇ ನನ್ನಲ್ಲಿ ಹುಟ್ಟಿದ ಸಾಲುಗಳಿವು - "ನಾನೂ ಗಾಲೀಬನ ಕವಿತೆಗಳನ್ನು ಪ್ರೀತಿಸುತ್ತೇನೆ ಏಕೆಂದರೆ ಅಲ್ಲಿ ಶರಾಬಿನ ಅಮಲಿದೆ. ಮಾವಿನ ಮದವಿದೆ. ಪ್ರೇಮದ ನಶೆಯಿದೆ. ಅನುಭಾವದ ನದಿಯಿದೆ."


Saturday, 21 March 2020

ಕಾಲಚಕ್ರ
  ಸರಿದುಹೋಗುತ್ತದೆ ಕಾಲ
ಬಯಸಿದುದನೆಲ್ಲಾ ಬಾಚಿಕೊಂಡು
ಋಣ ಮುಗಿದವರ ಕೈಹಿಡಿದು 
ಸಮಯವಾಯಿತೆಂದು ಕರೆದುಕೊಂಡು

ಮರಣವೇ ಮಹಾನವಮಿ 
ಎಂದವರದೋ ಮಹದಾನಂದದಿ 
ಕಳೆಗಟ್ಟಿದ ಮೆರವಣಿಗೆ
ಹಿಂಜರಿದು ಹೆದರಿ 
ಬಚ್ಚಿಟ್ಟುಕೊಂಡವರ ಜಾಣ
ಮರೆವಿನಲ್ಲಿ ಅದೆಂತಹ ಉರುವಣಿಗೆ

ಅಳಿವಿದೆ ಹೆಸರಿಲ್ಲದೆ ನಡೆದು 
ಸದ್ದಿಲ್ಲದೇ ಮರೆಯಾಗುವ ಜಂಗಮಕೆ
ಉಳಿವೆಲ್ಲಾ ಹೆಸರಿನಲ್ಲಿ ಮೈಮರೆತು
ಕುಣಿವ ಜಡ ಸ್ಥಾವರಕೆ
ಉರುಳಿ ಹೋದ ಶತ-ಶತಮಾನಗಳ 
ಮರೆಯಲಾಗದ ಕೊಡುಗೆ 
ಬೆಡಗಿನಲ್ಲಿ ಬೆತ್ತಲಾಗಿ ಹೆಜ್ಜೆ 
ಹಾಕುತಿರುವ ಬದಲಾವಣೆಯ ಉಡುಗೆ

ನಿಸ್ವಾರ್ಥದ ಹೆಗಲ ಮೇಲೆ
ಕೈಹಾಕಿ ನಡೆಯುತ್ತಾ ಶ್ರದ್ಧೆ 
ಕಾಯಕದಿ ಸಾಗುವವರ ಸಂತೆ
ಬೇಕಿಲ್ಲ ನವಯುಗಕೆ ಅವರದೇ 
ಮೂಲೆಗೊಟ್ಟಿ ಮತ್ತೆಂದೂ ಚಿಗುರದಂತೆ 
ಸಮಾಧಿ ಮಾಡುವ  ಚಿಂತೆ

ಬಯಸಿ ಹುಡುಕಿ ಹೋಗುವ
ವಿಷಾದ ಸಂಭ್ರಮಗಳೆರಡೂ ಒಂದೇ 
ಧಿಮಾಕಿನ ಒಡೆಯನಂತೆ ಕೈಕೋಲು 
ಕುಟ್ಟಿ ಹೆಜ್ಜೆ ಹಾಕುವ ಕಾಲನ ಮುಂದೆ
ಆದರೂ ಪಕ್ಷಪಾತ ಆಳುವವರ 
ತನ್ನಂಥವರು ಬೀಗುವುದ ಕಂಡು

ಮುನ್ನಡೆಸಿ ಜಗವಾಳುವ  
ವಾರಸುದಾರರಿರಲೆಂಬ ಹೆಬ್ಬಯಕೆಯೋ
ಜಾಲ ಅರಿಯದೆ ಬಲೆಗೆ ಬೀಳುವ 
ಅಮಾಯಕರ ಒರೆಸಿಹಾಕುವ ಹವಣಿಕೆಯೋ
ಅಲಿಪ್ತ ಶಾಂತ ನೀರವದ ನಾದ
ಏಕತಾರಿಯ ಸ್ವರವೊಂದೇ
ಆಲಿಸುವ ಬಡಪಾಯಿಗಳ ಮೋದ!


ಕಾಲಚಕ್ರ
ಸರಿದುಹೋಗುತ್ತದೆ ಕಾಲ
ಬಯಸಿದುದನೆಲ್ಲಾ ಬಾಚಿಕೊಂಡು
ಋಣ ಮುಗಿದವರ ಕೈಹಿಡಿದು 
ಸಮಯವಾಯಿತೆಂದು ಕರೆದುಕೊಂಡು 
ಮರಣವೇ ಮಹಾನವಮಿ ಎಂದವರದೋ 
ಮಹದಾನಂದದಿ ಕಳೆಗಟ್ಟಿದ ಮೆರವಣಿಗೆ
ಹಿಂಜರಿದು ಹೆದರಿ ಬಚ್ಚಿಟ್ಟುಕೊಂಡವರ ಜಾಣ
ಮರೆವಿನಲ್ಲಿ ಅದೆಂತಹ ಉರುವಣಿಗೆ

ಅಳಿವಿದೆ ಹೆಸರಿಲ್ಲದೆ ನಡೆದು ಸದ್ದಿಲ್ಲದೇ 
ಮರೆಯಾಗುವ ಜಂಗಮಕೆ
ಉಳಿವೆಲ್ಲಾ ಹೆಸರಿನಲ್ಲಿ ಮೈಮರೆತು
ಕುಣಿವ ಜಡ ಸ್ಥಾವರಕೆ
ಉರುಳಿ ಹೋದ ಶತ-ಶತಮಾನಗಳ 
ಮರೆಯಲಾಗದ ಕೊಡುಗೆ 
ಬೆಡಗಿನಲ್ಲಿ ಬೆತ್ತಲಾಗಿ ಹೆಜ್ಜೆ ಹಾಕುತಿರುವ 
ಬದಲಾವಣೆಯ ಉಡುಗೆ

ನಿಸ್ವಾರ್ಥದ ಹೆಗಲ ಮೇಲೆ
ಕೈಹಾಕಿ ನಡೆಯುತ್ತಾ ಶ್ರದ್ಧೆ 
ಕಾಯಕದಿ ಸಾಗುವವರ ಸಂತೆ
ಬೇಕಿಲ್ಲ ನವಯುಗಕೆ ಅವರದೇ 
ಮೂಲೆಗೊಟ್ಟಿ ಮತ್ತೆಂದೂ ಚಿಗುರದಂತೆ 
ಸಮಾಧಿ ಮಾಡುವ  ಚಿಂತೆ

ಬಯಸಿ ಹುಡುಕಿ ಹೋಗುವ
ವಿಷಾದ ಸಂಭ್ರಮಗಳೆರಡೂ ಒಂದೇ 
ಧಿಮಾಕಿನ ಒಡೆಯನಂತೆ ಕೈಕೋಲು 
ಕುಟ್ಟಿ ಹೆಜ್ಜೆ ಹಾಕುವ ಕಾಲನ ಮುಂದೆ
ಆದರೂ ಪಕ್ಷಪಾತ ಆಳುವವರ 
ತನ್ನಂಥವರು ಬೀಗುವುದ ಕಂಡು

ಮುನ್ನಡೆಸಿ ಜಗವಾಳುವ  
ವಾರಸುದಾರರಿರಲೆಂಬ ಹೆಬ್ಬಯಕೆಯೋ
ಜಾಲ ಅರಿಯದೆ ಬಲೆಗೆ ಬೀಳುವ 
ಅಮಾಯಕರ ಒರೆಸಿಹಾಕುವ ಹವಣಿಕೆಯೋ
ಅಲಿಪ್ತ ಶಾಂತ ನೀರವದ ನಾದ
ಏಕತಾರಿಯ ಸ್ವರವೊಂದೇ ಆಲಿಸುವ 
ಬಡಪಾಯಿಗಳ ಮೋದ!

Monday, 16 March 2020

ಕಾಲಚಕ್ರ

ಕಾಲಚಕ್ರ

ಸರಿದುಹೋಗುತ್ತದೆ ಕಾಲ
ಬಯಸಿದುದನೆಲ್ಲಾ ಬಾಚಿಕೊಂಡು
ಋಣ ಮುಗಿದವರ ಕೈಹಿಡಿದು 
ಸಮಯವಾಯಿತೆಂದು ಕರೆದುಕೊಂಡು 
ಮರಣವೇ ಮಹಾನವಮಿ ಎಂದವರದೋ 
ಮಹದಾನಂದದಿ ಕಳೆಗಟ್ಟಿದ ಮೆರವಣಿಗೆ
ಹಿಂಜರಿದು ಹೆದರಿ ಬಚ್ಚಿಟ್ಟುಕೊಂಡವರ ಜಾಣ
ಮರೆವಿನಲ್ಲಿ ಅದೆಂತಹ ಉರುವಣಿಗೆ

ಅಳಿವಿದೆ ಹೆಸರಿಲ್ಲದೆ ನಡೆದು ಸದ್ದಿಲ್ಲದೇ 
ಮರೆಯಾಗುವ ಜಂಗಮಕೆ
ಉಳಿವೆಲ್ಲಾ ಹೆಸರಿನಲ್ಲಿ ಮೈಮರೆತು
ಕುಣಿವ ಜಡ ಸ್ಥಾವರಕೆ
ಉರುಳಿ ಹೋದ ಶತ-ಶತಮಾನಗಳ 
ಮರೆಯಲಾಗದ ಕೊಡುಗೆ 
ಬೆಡಗಿನಲ್ಲಿ ಬೆತ್ತಲಾಗಿ ಹೆಜ್ಜೆ ಹಾಕುತಿರುವ 
ಬದಲಾವಣೆಯ ಉಡುಗೆ

ನಿಸ್ವಾರ್ಥದ ಹೆಗಲ ಮೇಲೆ
ಕೈಹಾಕಿ ನಡೆಯುತ್ತಾ ಶ್ರದ್ಧೆ 
ಕಾಯಕದಿ ಸಾಗುವವರ ಸಂತೆ
ಬೇಕಿಲ್ಲ ನವಯುಗಕೆ ಅವರದೇ 
ಮೂಲೆಗೊಟ್ಟಿ ಮತ್ತೆಂದೂ ಚಿಗುರದಂತೆ 
ಸಮಾಧಿ ಮಾಡುವ  ಚಿಂತೆ

ಬಯಸಿ ಹುಡುಕಿ ಹೋಗುವ
ವಿಷಾದ ಸಂಭ್ರಮಗಳೆರಡೂ ಒಂದೇ 
ಧಿಮಾಕಿನ ಒಡೆಯನಂತೆ ಕೈಕೋಲು 
ಕುಟ್ಟಿ ಹೆಜ್ಜೆ ಹಾಕುವ ಕಾಲನ ಮುಂದೆ
ಆದರೂ ಪಕ್ಷಪಾತ ಆಳುವವರ 
ತನ್ನಂಥವರು ಬೀಗುವುದ ಕಂಡು
ಮುನ್ನಡೆಸಿ ಜಗವಾಳುವ  
ವಾರಸುದಾರರಿರಲೆಂಬ ಹೆಬ್ಬಯಕೆಯೋ
ಜಾಲ ಅರಿಯದೆ ಬಲೆಗೆ ಬೀಳುವ 
ಅಮಾಯಕರ ಒರೆಸಿಹಾಕುವ ಹವಣಿಕೆಯೋ
ಅಲಿಪ್ತ ಶಾಂತ ನೀರವದ ನಾದ
ಏಕತಾರಿಯ ಸ್ವರವೊಂದೇ ಆಲಿಸುವ 
ಬಡಪಾಯಿಗಳ ಮೋದ!

ಗುರು ಕಾಡಸಿದ್ಧೇಶ್ವರರಿಗೆ ಕಾವ್ಯನಮನ
ಓ ಮೌನಯೋಗಿವರನೆ
ನಿನಗಿದೊ ನಮ್ಮ ನಮನ

ಮೌನಕ್ಕೆ ನೀ ಮಾತು ಕಲಿಸಿದೆ
ಜನಕೆ ಮೌನ ಶಾಂತಿ ಬೋಧಿಸಿದೆ
ಮಾರ್ಗದೋರಿ ಶರಣ ಗುರು ಸಂತನಾದೆ
ಕತ್ತಲೆಯ ಕಳೆದು ಬೆಳಕನ್ನು ಹರಿಸಿದೆ

ಜಾತಿ ವಿಜಾತಿ ಎಂದರೇನು ಕೇಳಿದೆ
ಮನೆ‌ ಮನದಲಿ ಜ್ಞಾನದೀಪ ಬೆಳಗಿದೆ 
ಕಾಡಸಿದ್ಧೇಶರಾಗಿ ಭೋಗ ಧಿಕ್ಕರಿಸಿದೆ
ಯೋಗದಿಂದ ಮೌನಯೋಗಿವರನಾದೆ

ಜನರ ಸಂಕಟಗಳೆಲ್ಲವೂ ನಿನ್ನದೆಂದೆ
ಜನಾನುರಾಗಿ ಎನಲು  ಅನ್ವರ್ಥ ನೀನಾದೆ
ವಾತ್ಸಲ್ಯದ ಹೃದಯದಿ ನೀ ತಾಯಿಯಾದೆ
ಸಮಾಜದ ತಲ್ಲಣಕೆ ನೀ ಗುರುಕಾಂತಿಯಾದೆ

ಇಳೆಯು ಜನರ ದಾನವೆಂದು ದೇವರಾದೆ
ಅನ್ನ ನೀರು ಆ ದೇವನ ಭಾಗ್ಯವೆಂದೆ
ಮಡಿಲ ಮಕ್ಕಳಂತೆ‌ ಭಕ್ತರ ಸಲುಹಿದೆ
ಒಡಲು ತೊರೆದು ಭಕ್ತರೊಳಗೆ ಅಮರವಾದೆ

ಜಗದ ಅಂಧಕಾರ ಕಳೆದು ನೀ ಬೆಳಕಾದೆ
ಜನಕಲ್ಯಾಣವೇ ತಪವೆಂದು ಧ್ಯಾನಿಯಾದೆ
ಸ್ಥಾವರದಲಿದ್ದೂ ನಿಜದ ಜಂಗಮನಾದೆ
ಮೌನ ಬಂಗಾರ ಧರಿಸಿ ನಿಜಸಿದ್ದನಾದೆ
   
                                        ಚಂದ್ರಶೇಖರ ಹೆಗಡೆ


ಚಹಾ ಮತ್ತು ನಾನು

 ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...