Total Pageviews

Thursday, 6 September 2018

ಅಜಾತಶತ್ರು

ಅಜಾತಶತ್ರು
ವಾಗ್ಬಾಣಗಳ ಚತುರ ಕವಿ
ಕಾವ್ಯಶಿಲ್ಪಿ ಶ್ರೀ ವಾಜಪೇಯಿ
ರಾಜಕಾರಣಕೆ ಪಾಠ ಹೇಳಿದ
ಸದನದ ಕಲಿ ಭಾರತ  ಭೀಷ್ಮ

ಅಸ್ತಂಗತ ಮುತ್ಸದ್ದಿಯ ನೇಸರ
ಯುಗನಾಯಕನೀ ಭಾರತ ಭೂಶಿರ
ಮೊಳಗಿಸಿದೆ  ಪಾಂಚಜನ್ಯವ
ಸದ್ದಡಗಿಸಿದೆ ಶತ್ರುಪುಂಜವ
ಬೆಳಗಿದೆ ದೇಶ ನಿನ್ನಯ ಕಾಂತಿಗೆ
ಹೆಮ್ಮೆಯ ಪುತ್ರ ಭಾರತ ಮಾತೆಗೆ
ಬೆರಗಾಗಿದೆ ಜಗವು ನಿನ್ನಾರ್ಭಟಕೆ
ವಿಸ್ಮಯಗೊಂಡಿದೆ ನಿನ್ನಯ ಶಾಂತಿಗೆ

ಶಕ್ತಿ ಯುಕ್ತಿಗಳ ಸಮನ್ವಯದಾತ
ಚತುರಮತಿಯ ಆಡಳಿತದೂತ
ರಾಜತಂತ್ರದ ವಿಕಾಸಪುರುಷ
ರಾಜಕಾರಣಿಗಳ ಮಣಿಪರುಷ
ಪ್ರಧಾನಿಯ ಪದಕೆ ನೀ ಅನ್ವರ್ಥ
ಸಂಸತ್ ಪಟುವಿಗೆ ನೀನೇ ಪಾರ್ಥ
ಅನ್ಯರು ಹೊಗಳುವ ಅಜಾತಶತ್ರು
ಕಂಡ ಕನಸಿನ ವಿಕಾಸದ ಕರ್ತೃ

ಜನಸೇವೆಯೇ ಜನಾರ್ಧನ ಸೇವೆ
ತೋರಿದೆ ನೀನು ಓ ಕವಿಹೃದಯಿ
ಭಾರತಮಾತೆಯ ಕೀರ್ತಿ ಪತಾಕೆ
ವಿಶ್ವಕೆ ತೋರಿದ ಮಹಾಮಾತೃಕೆ




ಅಜಾತಶತ್ರು
ವಾಗ್ಬಾಣಗಳ ಚತುರ ಕವಿ
ಕಾವ್ಯಶಿಲ್ಪಿ ಶ್ರೀ ವಾಜಪೇಯಿ
ರಾಜಕಾರಣಕೆ ಪಾಠ ಹೇಳಿದ
ಸದನದ ಕಲಿ ಭಾರತ  ಭೀಷ್ಮ

ಅಸ್ತಂಗತ ಮುತ್ಸದ್ದಿಯ ನೇಸರ
ಯುಗನಾಯಕನೀ ಭಾರತ ಭೂಶಿರ
ಮೊಳಗಿಸಿದೆ  ಪಾಂಚಜನ್ಯವ
ಸದ್ದಡಗಿಸಿದೆ ಶತ್ರುಪುಂಜವ
ಬೆಳಗಿದೆ ದೇಶ ನಿನ್ನಯ ಕಾಂತಿಗೆ
ಹೆಮ್ಮೆಯ ಪುತ್ರ ಭಾರತ ಮಾತೆಗೆ
ಬೆರಗಾಗಿದೆ ಜಗವು ನಿನ್ನಾರ್ಭಟಕೆ
ವಿಸ್ಮಯಗೊಂಡಿದೆ ನಿನ್ನಯ ಶಾಂತಿಗೆ

ಶಕ್ತಿ ಯುಕ್ತಿಗಳ ಸಮನ್ವಯದಾತ
ಚತುರಮತಿಯ ಆಡಳಿತದೂತ
ರಾಜತಂತ್ರದ ವಿಕಾಸಪುರುಷ
ರಾಜಕಾರಣಿಗಳ ಮಣಿಪರುಷ
ಪ್ರಧಾನಿಯ ಪದಕೆ ನೀ ಅನ್ವರ್ಥ
ಸಂಸತ್ ಪಟುವಿಗೆ ನೀನೇ ಪಾರ್ಥ
ಅನ್ಯರು ಹೊಗಳುವ ಅಜಾತಶತ್ರು
ಕಂಡ ಕನಸಿನ ವಿಕಾಸದ ಕರ್ತೃ

ಜನಸೇವೆಯೇ ಜನಾರ್ಧನ ಸೇವೆ
ತೋರಿದೆ ನೀನು ಓ ಕವಿಹೃದಯಿ
ಭಾರತಮಾತೆಯ ಕೀರ್ತಿ ಪತಾಕೆ
ವಿಶ್ವಕೆ ತೋರಿದ ಮಹಾಮಾತೃಕೆ





Sunday, 12 August 2018

ದರ್ಶನದ ಬೆಳಕಿನಲ್ಲಿ.....(ಭಾಗ 2)

ಡಾ.ಗುರುಲಿಂಗ ಕಾಪಸೆಯವರು ಕುವೆಂಪುರವರು ಹೇಗೆ ತಮ್ಮ  ಮಹಾಕಾವ್ಯದಲ್ಲಿ ಮನಶಾಸ್ತ್ರೀಯ ಹಿನ್ನೆಲೆಯಲ್ಲಿ ಪಾತ್ರಗಳನ್ನು ರೂಪಿಸಿದ್ದರು ಎಂಬುದಕ್ಕೆ ಮಂಥರೆಯ ಪಾತ್ರವನ್ನು ನಿದರ್ಶನವಾಗಿ ನೀಡುತ್ತಾರೆ. ಕನಿಷ್ಠ ತಂದೆ ತಾಯಿಗೂ  ಬೇಡವಾದ,  ಬೀದಿಯಲ್ಲಿ ಅನಾಥ ಮಗುವಾಗಿ ಮಲಗಿದ್ದ ದುರಾದೃಷ್ಟ  ಮಂಥರೆಯು ಕ್ರಮೇಣ ಗೂನು ಬೆನ್ನು,ನಡುಗುವ ವಿಕಾರ ದೇಹಾಕೃತಿಯನ್ನು ಹೊಂದಿ ತನಗೆ ಬಾಲ್ಯದಲ್ಲಿ ಸಿಗಬೇಕಾಗಿದ್ದ ಸಹಜ ಮಾತೃವಾತ್ಸಲ್ಯದಿಂದ ವಂಚಿತಳಾಗಿ ಸರ್ವರಿಂದಲೂ ತಿರಸ್ಕೃತಳಾಗುತ್ತಾಳೆ. ಅವಳ ಸುಪ್ತ ಮನಸ್ಸಿನ ಈ ಅತೃಪ್ತ ನೋವು ಮುಂದೆ ರಾಮಾಯಣಕ್ಕೆ ಕಾರಣವಾಗುತ್ತದೆ ಎಂದು ಕಾಪಸೆಯವರು ಪ್ರತಿಪಾದಿಸುತ್ತಾರೆ.
ಒಂದು ದಿನ ಹಸುಳೆ ರಾಮ ಮುಗಿಲ ಚಂದ್ರನನ್ನು ಕಂಡು ಆಕರ್ತಷಿತನಾಗಿ ಆ ಚಂದ್ರ ತನಗೆ ಬೇಕೆಂದು ಮಗುಸಹಜ ಹಟವಿಡಿದಾಗ ಅರಮನೆಯ ಎಲ್ಲರೂ ರಾಜನನ್ನು ಸಂತೈಸುವಲ್ಲಿ ವಿಫಲರಾಗುತ್ತಾರೆ.ಆಗ ಮಂಥರೆ ಕನ್ನಡಿಯನ್ನು ತಂದು ಚಂದ್ರನನ್ನು ತೋರಿದಾಗ ರಾಮ ನಲಿಯುತ್ತಾನೆ. ಮುದ್ದಾಡುವ ಹಂಬಲದಿಂದ ಮಂಥರೆ ಮಗುವನ್ನು ಬರಸೆಳೆಯುವಾಗ ತಾಯಿ ಕೌಸಲ್ಯೆ ತಡೆದು 'ಗೂನೆ, ಕುಬ್ಜೆ,ಕೂಸನ್ನು ಸ್ಪರ್ಶಿಸಿದರೆ ಅಮಂಗಳವಾದೀತು ' ಎಂದು ತಡೆದು ಮೂದಲಿಸುತ್ತಾಳೆ.
             ಇದರಿಂದ ಕುಪಿತಗೊಂಡ ಅವಳ ಮಮತೆಯ  ಮನಸಿನಲ್ಲಿ  ಈ ಅಪಮಾನದ ಬೀಜ ಹೆಮ್ಮರವಾಗಿ ಬೆಳೆದು ಮುಂದೆ  ರಾಮನನ್ನು ಕಾಡಿಗೆ ಕಳುಹಿಸುವುದರಲ್ಲಿ ತಪ್ತವಾಗುತ್ತದೆ ಎಂಬುದನ್ನು ಗುರುತಿಸುತ್ತಾರೆ. ಈ ಮನಶಾಸ್ತ್ರೀಯ  ದೃಷ್ಡಿಕೋನವನ್ನೇ ಇನ್ನಷ್ಟು ವಿಸ್ತರಿಸುವುದಾದರೆ, ರಾವಣನು   ಸ್ವಯಂವರದಲ್ಲಿ ಸೀತೆಯನ್ನು ಗೆಲ್ಲಲಾಗದೆ ಅಪಹಾಸ್ಯಕ್ಕಿಡಾಗಿ   ಈಡೇರದ ಬಯಕೆಯಾಗಿಯೇ ಉಳಿದ ರಾವಣನ ಅತೃಪ್ತ ಮನಸಿನ 'ತೀರದ ಆಸೆ' ಸೀತೆಯನ್ನು ಅಪಹರಿಸುವಲ್ಲಿ ಮುಕ್ತಿ ಕಾಣುತ್ತದೆ ಎಂದು ವಿಶ್ಲೇಷಿಸಬಹುದು.ಊರ್ಮಿಳೆಯ ಪತಿಭಕ್ತಿಯ ಮನಸ್ಸನ್ನು ಕುವೆಂಪುರವರು ತಪಸ್ಸಿನ ಸಾತ್ವಿಕ ಶಕ್ತಿಯ ಕಡೆಗೆ ತಿರುಗಿಸುತ್ತಾರೆ.
ರಾಮ ಲಕ್ಷ್ಮಣರು ಕಾಡಿನೊಳಗೆ ಬರುತ್ತಿರುವಾಗ ಧುತ್ತನೆ ಪ್ರತ್ಯಕ್ಷವಾದ  ಕೈಗಳಿಲ್ಲದ ದೈತ್ಯಾಕಾರದ ರಕ್ಕಸನ ರೂಪವನ್ನು, ಮನಶಾಸ್ತ್ರೀಯ ಹಿನ್ನಲೆಯಲ್ಲಿ ಅವಲೋಕಿಸಿದಾಗ ಅದು  ಸೀತೆಯನ್ನು ಕಳೆದುಕೊಂಡ ದುಃಖದಿಂದ ರಾಮನ ಮನದಲ್ಲಿ ಸೃಷ್ಟಿಯಾದ ಮಾನಸಿಕ ಪ್ರಕ್ಷುಬ್ಧತೆ ತೊಳಲಾಟಗಳೆ ಕಣ್ಣೆದುರಿನ ರಕ್ಕಸ ರೂಪವಾಗಿ ಮೈವೆತ್ತಂತೆ ಭಾಸವಾಗುತ್ತದೆ.
ಇದಕ್ಕೆ ಪುಷ್ಟಿ ನೀಡುವಂತೆ, ತನ್ನ ತಮ್ಮ ಲಕ್ಷ್ಮಣನಿಗೆ ಪ್ರಾಣ ಉಳಿಸಿಕೊಳ್ಳಲು 'ಓಡು ಇಲ್ಲಿಂದ ತಪ್ಪಿಸಿಕೊ' ಎಂಬ ಹೆದರಿಕೆಯ ಮಾತುಗಳನ್ನು  ಸರ್ವಶಕ್ತ ರಾಮ ಆಡುತ್ತಾನೆಂದರೆ ಅವನಲ್ಲಿ ಮನೆ ಮಾಡಿದ್ದ ಸೀತಾಕಾರಣ ದ ಮಾನಸಿಕ ಹೊಯ್ದಾಟ ಹಾಗೂ ದುಃಖಗಳು ಹೇಗೆ ಅವನ ತನುಮನಗಳನ್ನಾವರಿಸಿ ಅಶಕ್ತತೆಯನ್ನು ತಂದಿತ್ತು ಎಂಬುದರ  ಅರಿವು ನಮಗಾಗದಿರದು. ಹೀಗೆ ಮನಶಾಸ್ತ್ರವನ್ನು ತಮ್ಮ ಕಾವ್ಯದಲ್ಲಿ ಒಂದು ಅನ್ವಯಿಕ ವಿಜ್ಞಾನವಾಗಿ ಅತ್ತ್ಯಂತ ಸಮರ್ಥವಾಗಿ ಬಳಸಿದವರು ಕುವೆಂಪುರವರು. ಈ ರಾಮಾಯಣದರ್ಶನಂ ಎಂಬ ಕವಿಯ ಕಾವ್ಯದ ಮೂಸೆಯಲ್ಲಿ ಇಲ್ಲಿಯ  ಪ್ರತಿಯೊಂದು  ಪಾತ್ರವೂ ತಮ್ಮ ವ್ಯಕ್ತಿತ್ವದ ಕಲ್ಮಶಗಳನ್ನೆಲ್ಲಾ ಕಳೆದುಕೊಂಡು ಆತ್ಮೋದ್ಧಾರದ ಉನ್ನತ ಶೃಂಗವೇರಿ ಅಪ್ಪಟ ಸುವರ್ಣವಾಗಿ ಕಂಗೊಳಿಸುತ್ತವೆ.ಇಲ್ಲಿ ಬರುವ ಸೂತ್ರಧಾರಿ  ಕೈಕೆಗೂ ಕೂಡ ರಾಮನು 'ತಾಯಿ, ನನ್ನನ್ನು ಸೇರಿ ಈ ರಾಮಾಯಣದ ಹಲವಾರು  ಜೀವಗಳ ಉದ್ಧಾರಕ್ಕೆ ಕಾರಣವಾಗಿರುವ ನೀನೇ ಅತಿ ಮುಖ್ಯಳು.'ಎಂಬ   ವಾಕ್ಯಗಳಿಂದ ಅವಳಿಗೂ ಆತ್ಮವಿಕಾಸದ ಹಾದಿಯನ್ನು  ಕಲ್ಪಿಸುತ್ತಾರೆ ಕುವೆಂಪುರವರು.
ಕುವೆಂಪುರವರ ದರ್ಶನದ ಕಣ್ಣಿಗೆ ಬಿದ್ದ ಮತ್ತೊಂದು ಮಮತಾಮಯಿ ಪಾತ್ರವೆಂದರೆ ಶಬರಿಯದು.ಅವಳಿಗಾಗಿ 'ಶಬರಿಗಾದನು ಅತಿಥಿ ದಾಶರಥಿ' ಎಂಬ ಇಡೀ ಅಧ್ಯಾಯವೇ ಮೀಸಲಾಗಿದೆ. ಇಲ್ಲಿಯ  ಶಬರಿಯ ಪಾತ್ರವಂತೂ ಮಮತೆಯ ಕಡಲಾಗಿ ಉಕ್ಕಿಹರಿಯುವ  ಮಾತೃಹೃದಯದ ಪ್ರತೀಕವಾಗಿದೆ.'ರಾಮನ ದರ್ಶನಕ್ಕಾಗಿ ಹಗಲು ರಾತ್ರಿಗಳೆನ್ನದೆ ಕನಸು ಮನಸುಗಳಲ್ಲಿಯೂ ರಾಮ ಮಂತ್ರವನ್ನೇ ಜಪಿಸುತ್ತಾ    ಪ್ರತಿಕ್ಷಣವೂ  ತುಡಿಯುವ ಅವಳ ಕಾಯುವಿಕೆ ತಪಸ್ಸಾಗಿ ಪರಿಣಮಿಸಿದೆ.
ಸುತ್ತಲೂ ಹಸಿರು ಚೆಲ್ಲಿದ ಆವರಣ ಹೊಂದಿದ ಗುಡಿಸಿಲಿನಲ್ಲಿ ತನ್ನ ಬದುಕಿನ ಸಂಧ್ಯಾಕಾಲದಲ್ಲಿ ಯಾವುದೇ ಕ್ಷಣದಲ್ಲೂ ಬಿದ್ದುಹೋಗಬಹುದಾದ  ನಡುಗುವ ಮುಪ್ಪಾದ  ದೇಹವನ್ನು ಹೊತ್ತು , ಜೇನು, ಹಣ್ಣು ಹಂಪಲಗಳನ್ನು ಹಿಡಿದು'ಎಲ್ಲಿರುವನೊ, ಎಂದು ಬರುವನೊ ನನ್ನಯ್ಯ,ದೃಷ್ಟಿ  ಮಂಜಾಗಿ ಕಳೆದುಹೋಗುವುದಕ್ಕಿಂತ  ಮುನ್ನ  ದರ್ಶನ ನೀಡು'  ಎಂದು ರಾಮನಿಗಾಗಿಯೇ ಜೀವವನ್ನು ಹಿಡಿದುಕೊಂಡಿರುವ ಶಬರಿಯ  ರಾಮನೆಡೆಗಿನ ಶ್ರದ್ಧೆ, ಭಕ್ತಿ ವಾತ್ಸಲ್ಯಗಳು ಅವಳನ್ನು ಅಮರಳನ್ನಾಗಿಸಿದೆ; ಕುವೆಂಪುರವರ ಕವಿದರ್ಶನದಲ್ಲಿ ಶಬರಿ
"ಕಣ್ಮುಚ್ಚಿದಳು ಆ ಅಮರ ಸನ್ಮಾನ್ಯೆ
ದೇವ ಸೀತಾನಾಥ ದಿವ್ಯಶ್ರು
ತೀರ್ಥ ಜಲ ಸಂಸ್ನಾತೆ ಸಂಪೂತೆ
ಮರಣದ ಶಿವಕಳೇಬರೆ ಧನ್ಯೆ" 
ಎಂದು ಕವಿಯ ಶಬ್ದಮಜ್ಜನದ ಮೂಲಕ  ಸನ್ಮಾನಿತಳಾಗುತ್ತಾಳೆ.
ಕಾಡಿನ ಮಡಿಲಲ್ಲಿ ಅವಳು ಮಮತೆಯ ಹೂವಾಗಿದ್ದಾಳೆ.
ರಾಮ ಮತ್ತು ಲಕ್ಷ್ಮಣರು ಶಬರಿಯ ಆಶ್ರಮಕ್ಕೆ  ಬಂದಾಗ ತಡವಾಗಿ ಗುರುತಿಸಿದ ತಕ್ಷಣ ಆಕೆಯಲ್ಲಿ ಸ್ಫುರಿಸಿದ ಆತ್ಮಾನಂದಕ್ಕೆ ಪಾರವೇ ಇಲ್ಲ ಅವಳ ಪ್ರಾಣ ಪಾತ್ರೆ  ರಾಮದರ್ಶನದಿಂದುಂಟಾದ ಪರಮಾನಂದದಿಂದ  ತುಂಬಿ ಹೋಯಿತು.ಸೀತೆಯ ದುಃಖದಲ್ಲಿ ಕಳೆಗುಂದಿದ ರಾಮನ ಶಕ್ತಿಯನ್ನು  ತನ್ನ ನಿರ್ಮಲ ತಪೋತೇಜದಿಂದ ಪುನಶ್ಚೇತನಗೊಳಿಸುತ್ತಾಳೆ.

ಕುವೆಂಪು ರವರ ದಾರ್ಶನಿಕ ದೃಷ್ಟಿ ಭವ್ಯ ಮಹೇಂದ್ರಾಚಲದ ಮೇಲೆ ನಿಂತು ಪರ್ವತವನೊತ್ತಿ ನಭಕ್ಕೆ ಚಿಮ್ಮಿದ ಆಂಜನೇಯನ ಯೌಗಿಕ ಅನಂತಶಕ್ತಿಯನ್ನೂ ಬಿಟ್ಟಿಲ್ಲ. ಶ್ರದ್ಧೆ ನಿರ್ಮಲ ಪ್ರೇಮ ಭಕ್ತಿ ವಾತ್ಸಲ್ಯಗಳ ಆಗರವಾದ ಶಬರಿಯಲ್ಲಡಗಿರುವ ಸಾತ್ವಿಕ ಶಕ್ತಿಯನ್ನೂ ಬಿಟ್ಟಿಲ್ಲ; ಊರ್ಮಿಳೆಯು ಪತಿಗಾಗಿ ಕಾಯುವ  ಪತಿಭಕ್ತಿಯ ತಪಸ್ಸನ್ನೂ ಬಿಟ್ಟಿಲ್ಲ.ದುಷ್ಟೆ ಎಂದು ಹಣೆಪಟ್ಟಿ ಹೊತ್ತು ಮೂಲರಾಮಾಯಣದಲ್ಲಿ ತಿರಸ್ಕಾರಕ್ಕೊಳಗಾದ ಈಗಲೂ ನಾವು ನಮ್ಮೊಳಗೆ ಕರುಣೆಯ ಹೃದಯದಲ್ಲಿ ಸ್ಥಾನ ಕಲ್ಪಿಸಲು  ಹಿಂಜರಿಯುತ್ತಿರುವ ಮಂಥರೆಯ ಕೈಕೆಯೆಡೆಗಿನ ಮಮತೆಯನ್ನೂ ಬಿಟ್ಟಿಲ್ಲ;ರಾಮಚಂದ್ರನಂತೂ ಕಥೆಯ ನಾಯಕನಾಗಿದ್ದು, ಅವನ ಸರ್ವಸ್ವವೂ ಕವಿಯ ದರ್ಶನದ ಕಣ್ಣಿಗೆ  ಹಿಮಾಲಯವಾಗಿ ದೃಗ್ಗೋಚರವಾಗಿದೆ.ರಾಮ ಇಲ್ಲಿ ಕೇವಲ  ವ್ಯಕ್ತಿಯಾಗಿ ಬಣ್ಣಿಸಲ್ಪಟ್ಟಿಲ್ಲ,ರಾಮಾಯಣದಲ್ಲಿ ತನ್ನ ಪ್ರಭಾವಲಯಕ್ಕೆ ಬರುವ ಸಕಲ ಜೀವಾತ್ಮಗಳಿಗೆ ಲೇಸನೇ ಬಯಸುವ, ಆತ್ಮೋಧ್ಧಾರದ ಮಾರ್ಗವನ್ನು ಕರುಣಿಸುವ ತಪಶ್ಶಾಲಿಯಾಗಿ ತೋರುತ್ತಾನೆ.ಸರ್ವರಿಗೂ  ಮುಕ್ತಿಯ ಪಥವನ್ನು ದಯಪಾಲಿಸುವ ಮಹಾಮಹಿಮನಾಗಿ  ಹೊಳೆಯುತ್ತಾನೆ.ಕುವೆಂಪುರವರು"ಪುಟ್ಟಪ್ಪ ಎಂದು  ಕರೆಯಲ್ಪಡುವ , ಕಾವ್ಯ ಗಾನಗೈಯ್ಯುತ್ತಿರುವ ಈ ಪರಪುಟ್ಟನನ್ನು ಹರಸು" ಎಂದು  ಸರಸ್ವತಿಯನ್ನು ವಿನಮ್ರವಾಗಿ ತಮ್ಮ ಕಾವ್ಯದಲ್ಲಿ  ಸ್ತುತಿಸುತ್ತಾರೆ.ತಮ್ಮ ಸಾಹಿತ್ಯದ ಮೂಲಕ ಯಾರೂ ತಲುಪಲಾಗದ  ವಿರಾಟ್ ದರ್ಶನವನ್ನು, ಭವ್ಯತೆಯ ಮಹೋನ್ನತಿಯನ್ನು  ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ದಾರ್ಶನಿಕ ಮಹಾಕವಿಯಾಗಿ, ಸಾರಸ್ವತ ಲೋಕದಲ್ಲಿ ದರ್ಶನ ಸೂರ್ಯರಾಗಿ ಅಜರಾಮರರಾದವರು ಕುವೆಂಪುರವರು.
ನಮ್ಮ  ಆಧುನಿಕ ಕಾಲಘಟ್ಟದ ಸಮಾಜದಲ್ಲಿ ಎಷ್ಟೋ ಜನ ಅತೃಪ್ತ ರಾವಣರು ಹೆಣ್ಣುಮಕ್ಕಳನ್ನು ಇನ್ನಿಲ್ಲದಂತೆ ಹಿಂಸಿಸುತ್ತಿದ್ದಾರೆ.  ಮಾತಾಪಿತೃಗಳ  ಪ್ರೀತಿ ವಾತ್ಸಲ್ಯವಂಚಿತ ಅಸಂಖ್ಯಾತ ಅನಾಥ2ಮಂಥರೆಯರು ಸಮಾಜದಿಂದ ತಿರಸ್ಕೃತರಾಗಿ ನರಳುತ್ತಿದ್ದಾರೆ. ತಮ್ಮ ಕೈಕೆಯಂತಹ ರಾಣಿಯರ  ಮೋಹದ ಬಲೆಯಲ್ಲಿ ಸಿಲುಕಿದ ಎಷ್ಟೋ ಆಧುನಿಕ ದಶರಥರು ತಮ್ಮ ಮಕ್ಕಳನ್ನು ಹೊರಹಾಕಿ ಪ್ರೀತಿ ವಾತ್ಸಲದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ.ಅಸಂಖ್ಯಾತ ಆಧುನಿಕ ವಾಲಿ ಸುಗ್ರೀವ ರಂತಹ ಸಹೋದರರು ಅಪನಂಬಿಕೆಯಿಂದ  ಪರಸ್ಪರ  ಕದನಗೈದು ನಾಶವಾಗುತ್ತಿದ್ದಾರೆ.ಇವರೆಲ್ಲರನ್ನೂ ಆತ್ಮೋನ್ಮತಿಯ ಅನಂತತೆಯ ಕಡೆಗೆ ಉದ್ಧಾರದ ಮಹೋನ್ನತಿಯ ಕಡೆಗೆ ಕರೆದೊಯ್ಯಬೇಕಾದ ರಾಮ ನಂಥವರ ಅವಶ್ಯಕತೆ ಇಂದಿನ ನಮ್ಮ ಸಮಾಜಕ್ಕೆ ಹೆಚ್ಚಿದೆ. ಇಂತಹ ಆಧುನಿಕ ಸಮಾಜದಸಾಂಸ್ಕೃತಿಕ, ರಾಜಕೀಯ,ನೈತಿಕ,ತಾತ್ವಿಕ,ಆಧ್ಯಾತ್ಮಿಕ,
ಪಾರಂಪರಿಕ ಸಮಸ್ಯೆಗಳಿಗೂ ಪರಿಹಾರವನ್ನು ನೀಡಬಲ್ಲ  ಕುವೆಂಪುರವರ ಶ್ರೇಷ್ಠ ಕೊಡುಗೆಯೆಂದರೆ   ಶ್ರೀರಾಮಾಯಣದರ್ಶನಂ' ಮಹಾಕಾವ್ಯ.ಇದರಲ್ಲಿ ಬರುವ ನ್ಯಾಯ,ಸಮಾನತೆ,ಸ್ವಾತಂತ್ರ್ಯ,ರಾಜಧರ್ಮ ತತ್ವಗಳು ಸಾರ್ವಕಾಲಿಕವಾದದ್ದು. ನಮ್ಮಲ್ಲಿಯೇ ದುಷ್ಟತನಗಳನ್ನು ಆಗಾಗ ಹೊರಹಾಕುವ ರಾವಣನಿದ್ದಾನೆ ; ಒಳ್ಳೆಯತನಗಳನ್ನು ಒಳಗೊಂಡ ರಾಮನಿದ್ದಾನೆ ; ಸಹೋದರನಿಗಾಗಿ ಮಿಡಿಯುವ ಲಕ್ಷ್ಮಣನಿದ್ದಾನೆ. ಆರಾಧನೆಗಾಗಿ ಕಾಯುವ ಶಬರಿಯಿದ್ದಾಳೆ;ನಮ್ಮೊಳಗೆ ಸಂಗಾತಿಯನ್ನು ಆರಾಧಿಸುವ ಸೀತೆಯಿದ್ದಾಳೆ; ಕೆಲವೊಮ್ಮೆ ಸಾಹಸಕ್ಕೆ ಕೈಹಾಕುವ ಹನುಮನಿದ್ದಾನೆ ; ತ್ಯಾಗ ಮಾಡುವ ಭರತನಿದ್ದಾನೆ; ಮಗನ ಸ್ವಾರ್ಥಕ್ಕಾಗಿ ಬದುಕುವ ಕೈಕೆಯಿದ್ದಾಳೆ;ಮಮತೆಯಿಂದ ಕುರುಡಾಗುವ ಮಂಥರೆಯಿದ್ದಾಳೆ. ಹೀಗೆ ಇಡೀ ರಾಮಾಯಣವೇ ನಾವಾಗಿದ್ದೇವೆ ಎಂಬುದೇ  ದರ್ಶನದ ಅಂತಿಮ ಸತ್ಯವಾಗಿದೆ.


Tuesday, 24 July 2018

'ದರ್ಶನ'ದ ಬೆಳಕಿನಲ್ಲಿ.....(ಭಾಗ ೧)

ದರ್ಶನದ ಬೆಳಕಿನಲ್ಲಿ.....(ಭಾಗ ೧)
        ಶ್ರೀ ರಾಮಾಯಣ ದರ್ಶನಂ' ಎಂಬ ಹೆಸರೇ ನಮ್ಮಲ್ಲಿ ದಾರ್ಶನಿಕತೆಯ ದೃಷ್ಟಿಯನ್ನು ಪಡೆಮೂಡಿಸುವ ಶಕ್ತಿಯಾಗಿದೆ. ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳು  ನಮ್ಮ ದೇಶದ ಸಾಹಿತ್ಯ ಸಂಸ್ಕೃತಿಗಳನ್ನು ಆಲದಮರಗಳ ಬಿಳಲುಗಳಂತೆ ವ್ಯಾಪಕವಾಗಿ ಆವರಿಸಿಕೊಂಡು ನಿತ್ಯದ ಜನಜೀವನದ ಕ್ಷೀರದೊಂದಿಗೆ ಸಕ್ಕರೆಯಂತೆ ಬೆರೆತು ಬದುಕಿನ ಸ್ವಾರಸ್ಯವನ್ನು ಹೆಚ್ಚಿಸಿವೆ ಎಂದರೂ ಅತಿಶಯೋಕ್ತಿಯಾಗಲಾರದು. ರಾಮಾಯಣ ಹಾಗೂ ಮಹಾಭಾರತ ಗಳು ಅಂದು ಕಂಡು ಇಂದು ಮರೆಯಾಗುವ ಸರಸ್ವತಿಯಂತಹ  ನದಿಗಳಲ್ಲ.ಬದಲಾಗಿ ಅವು  ನಿರಂತರ ಪ್ರವಹಿಸುವ ಗಂಗೆ, ಕಾವೇರಿಯಂತೆ ಸರ್ವಕಾಲಕ್ಕೂ ಜೀವಾಮೃತವನ್ನೊದಗಿಸುವ ಚಲನಶೀಲತೆಯನ್ನು  ಹೊಂದಿರುವ ಜೀವಂತ ನದಿಗಳಾಗಿವೆ. ಜನರ ಆಚಾರ, ವಿಚಾರ,ಸಾಹಿತ್ಯ, ಸಂಸ್ಕೃತಿಯಲ್ಲಿ ಅಂತರ್ ಗಂಗೆಯಾಗಿ ಹರಿಯುವ ನಿಶಾಂತ  ಗುಪ್ತಗಾಮಿನಿಗಳಾಗಿವೆ. ಈ ಆಧುನಿಕ ಕಾಲಘಟ್ಟದಲ್ಲಿಯೂ ರಾಮಾಯಣವನ್ನು  ಮಹಾಕಾವ್ಯ ಪರಂಪರೆಯ ಮೂಲಕ ಮುಂದುವರಿಸುವ ವಾರಸುದಾರರಾಗಿ ಕುವೆಂಪುರವರು ನಮಗೆ ವಿಶಿಷ್ಟವಾಗಿ  ಕಾಣುತ್ತಾರೆ.ಇವರ ಮಹಾಕಾವ್ಯ ಕೃತಿ'ಶ್ರೀ ರಾಮಾಯಣ ದರ್ಶನಂ' ಎಂಬ ಹೆಸರೇ ನಮ್ಮಲ್ಲಿ ದಾರ್ಶನಿಕತೆಯ ದೃಷ್ಟಿಯನ್ನು ಪಡೆಮೂಡಿಸುವ ಶಕ್ತಿಯಾಗಿದೆ.
          ದಿನಾಂಕ ೧೯-೭-೨೦೧೮ ರಂದು ವಿದ್ಯಾವರ್ಧಕ ಸಂಘ ಧಾರವಾಡದ ರಾ.ಹ.ದೇಶಪಾಂಡೆ ಭವನದಲ್ಲಿ ನಡೆದ  'ಕುವೆಂಪು ರವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ  ಕುರಿತು ವಿಶೇಷ ಉಪನ್ಯಾಸ'ದಲ್ಲಿ ಭಾಗಿಯಾಗುವ ಸದವಕಾಶ ನನ್ನದಾಗಿತ್ತು.ಈ ಸಮಾರಂಭದ  ಅಧ್ಯಕ್ಷತೆ ವಹಿಸಿ ಮಾತನಾಡಿದ ನಮ್ಮ ನಾಡಿನ ಹಿರಿಯ ವಿದ್ವಾಂಸರಾದ ಡಾ.ಗುರುಲಿಂಗ  ಕಾಪಸೆಯವರು " ನಮ್ಮ ನಾಡಿನ ಜೈನಕವಿ ನಾಗಚಂದ್ರನಿಂದ ಪ್ರಾರಂಭವಾದ ರಾಮಾಯಣ  ಕುರಿತ ಕಾವ್ಯಪರಂಪರೆ ಆಧುನಿಕ ಕಾಲಘಟ್ಟದಲ್ಲಿಯೂ ಕುವೆಂಪುರವರಿಂದ ದಾರ್ಶನಿಕತೆಯ ಗೌರಿಶಂಕರದ ಶಿಖರ  ತಲುಪಿ,ಮುಂದುವರೆದು,  ಕ.ತ. ರಾಜಶೇಖರ, ಎಂ ವೀರಪ್ಪ ಮೊಯಿಲಿ ಯವರಿಂದ ಚಲನಶೀಲವಾಗಿ ಮುನ್ನಡೆಯುತ್ತಿದೆ" ಎಂದು ರಾಮಾಯಣ ಕಾವ್ಯ ಪರಂಪರೆಯನ್ನು ಕುರಿತು ವಿಶ್ಲೇಷಿಸಿದರು.  ಹಿರಿಯ ಸಾಹಿತಿಗಳಾದ ಡಾ.ಗುರುಪಾದ ಮರೆಗುದ್ದಿಯವರು ವಿಶೇಷ ಆಹ್ವಾನಿತರಾಗಿ 'ಶ್ರೀರಾಮಾಯಣದರ್ಶನಂ' ಕುರಿತು ಮಾತನಾಡಿದ ಉಪನ್ಯಾಸದ ಸಂಗ್ರಹಿತ ಆಂಶಗಳ ವಿಶ್ಲೇಷಣೆ ಈ ಕೆಳಗಿನಂತಿದೆ.

ವಾಲ್ಮೀಕಿ ರಾಮಾಯಣ ನಮಗೆ ಏಕಮುಖವಾಗಿ ರಾಮನ ಉದಾತ್ತೀಕರಣವನ್ನು ಸಾರಿ ಅವನ ವ್ಯಕ್ತಿತ್ವವನ್ನು  ದೈವತ್ವಕ್ಕೇರಿಸಿ ಉಳಿದ ಪಾತ್ರಗಳನ್ನು ಅವನಿಗೆ ಪೋಷಕವಾಗಿ ನಿಲ್ಲುವ  ಆಶಯದ ಗ್ರಂಥವಾಗಿ ಕಂಡರೆ, ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿ ರಾಮ ,ಲಕ್ಷ್ಮಣ,ಸೀತೆ,ರಾವಣರಿಂದ ಹಿಡಿದು ಮಂಥರೆ,ಶಬರಿ,ಊರ್ಮಿಳಾ ವರೆಗಿನ ಪ್ರತಿಯೊಂದು ಪಾತ್ರವೂ  ಕೂಡ ಸೀತಾವಲ್ಲಭನಿಗೆ ಪೋಷಕವಾಗಿ ಮಾತ್ರ ನಿಲ್ಲುವುದಕ್ಕಿಂತ ತಮಗೆ ನ್ಯಾಯವಾಗಿ ಸಲ್ಲಬೇಕಾದ  ಪ್ರಾಮುಖ್ಯತೆಯನ್ನು ಪಡೆದುಕೊಂಡು ಆತ್ಮೋನ್ನತಿಯ  ಶಕ್ತಿಗಳಾಗಿ ರೂಪು ಪಡೆಯುತ್ತವೆ.ಇಲ್ಲಿ ಯಾರೂ  ಮುಖ್ಯರಲ್ಲ ಹಾಗೂ ಅಮುಖ್ಯರಲ್ಲ ಸರ್ವರೂ ಇಲ್ಲಿ ಸಮಾನರು.ಕುವೆಂಪುರವರು ಹೇಳಿದ ಹಾಗೆ ' ಅನ್ನಮಯ ಪ್ರಪಂಚದಿಂದ ,ಆನಂದಮಯ ಪ್ರಪಂಚಕ್ಕೆ 'ಕರೆದೊಯ್ಯುವ  ಕೃತಿಯಾಗಿ 'ಶ್ರೀ ರಾಮಾಯಣ ದರ್ಶನಂ' ಕನ್ನಡ ಸಾರಸ್ವತ ಲೋಕದಲ್ಲಿ ಅನುಪಮ ಸ್ಥಾನವನ್ನು ಪಡೆದು ರಾರಾಜಿಸುತ್ತಿದೆ. ಅರವಿಂದರು,ರಾಮಕೃಷ್ಣ ಪರಮಹಂಸರು,ರವೀಂದ್ರನಾಥ ಟ್ಯಾಗೋರರು ಮುಂತಾದ ದಾರ್ಶನಿಕರ ಪ್ರಭಾವಳಿ ಕುವೆಂಪುರವರ ಮನಭಿತ್ತಿಯಲ್ಲಿ ದಿವ್ಯಜ್ಞಾನದ   ತೇಜೋಪುಂಜಗಳನ್ನು ಸೃಷ್ಟಿಸಿ ಶ್ರೀರಾಮಾಯಣ ದರ್ಶನಂ ಕಾವ್ಯದ ಮೂಲಕ ಜಗತ್ತಿಗೆ ಬೆಳಕನ್ನು ನೀಡುವ ದಿವ್ಯಜ್ಯೋತಿಯಾಗಿ ಸಹೃದಯರ ಎದೆಗಳಲ್ಲಿ ಎಂದೆಂದಿಗೂ ಪ್ರಕಾಶಮಾನವಾಗಿ   ಹೊಳೆಯುತ್ತಿದೆ.ಈ ಕೃತಿಯನ್ನು ಕುವೆಂಪುರವರು ತಮ್ಮ ವಿದ್ಯಾಗುರುಗಳಾದ ಟಿ ಎಸ್ ವೆಂಕಣ್ಣಯ್ಯನವರಿಗೆ ಅರ್ಪಿಸಿದ್ದಾರೆ.ಕೃತಿಯ ಪ್ರಾರಂಭದ ಈ ಅರ್ಪಣೆಯು ವಿಶೇಷವಾಗಿದೆ.ಇದರ "ಕುವೆಂಪುವ ಸೃಜಿಸಿದ ಈ ಕೃತಿ "ಎಂಬ ಸಾಲಿನಲ್ಲಿ ಕುವೆಂಪು ಈ ಕೃತಿಯನ್ನು ಸೃಜಿಸಿದರು ಎಂಬುದಕ್ಕಿಂತ ಈ ಮಹಾಕಾವ್ಯ  ಕುವೆಂಪುರವರನ್ನು ಸೃಷ್ಟಿಮಾಡಿತು ಎಂಬುದೇ ಹೆಚ್ಚು ಔಚಿತ್ಯಪೂರ್ಣವಾಗಿದೆ. ಕುವೆಂಪುರವರ ಮೇಲೆ ಪ್ರಭಾವ ಬೀರಿದ ಇಬ್ಬರು ಮಹಾಗುರುಗಳೆಂದರೆ ಎ ಆರ್ ಕೃಷ್ಣಶಾಸ್ತ್ರಿ ಹಾಗೂ ಟಿ ಎಸ್ ವೆಂಕಣ್ಣಯ್ಯ.ಪ್ರೀತಿಯ ಗುರುಗಳಾದ  ಟಿ ಎಸ್ ವೆಂಕಣ್ಣಯನವರ ಪ್ರೇರಣೆಯಂತೆ ಈ ಮಹಾಕಾವ್ಯ ಜನ್ಮತಾಳಿತಾದರೂ ಮೊದಲ ಸಂಪುಟ ಪ್ರಕಟವಾದಾಗ ವೆಂಕಣ್ಣಯ್ಯನವರು ಅಲ್ಲಿರುವ ನಿಜದ ಮನೆಗೆ ಪಯಣ ಬೆಳೆಸಿದ್ದರು. ಅತ್ಯಂತ ಗೌರವಪೂರ್ವಕವಾಗಿ ಈ ಕೃತಿಯನ್ನು ಗುರುಗಳಾದ ಟಿ ಎಸ್ ವೆಂಕಣ್ಣಯ್ಯನವರಿಗೆ ಅರ್ಪಿಸಿದ ಕುವೆಂಪುರವರು "ನಿಮ್ಮ ಪ್ರೇರಣೆಯಂತೆ ಈ ಕಾವ್ಯ ರಚಿಸಿದ್ದು ನಿಮ್ಮ ವೈಕುಂಠದಲ್ಲಿರುವ ವಿದ್ವಾಂಸರಿಗೆಲ್ಲ ಈ ಕಾವ್ಯ ವಾಚನದ ಮೂಲಕ ಶ್ರೀರಾಮಾಯಣ ದರ್ಶನಂ ಪರಿಚಯಿಸಿ ಆಶೀರ್ವದಿಸಿ " ಎಂದು ವಿನಮ್ರತೆಯ ಗುರುಕಾಣಿಕೆ ನೀಡುತ್ತಾರೆ.

   ಈ ಕಾವ್ಯದಲ್ಲಿ ಕುವೆಂಪುರವರ ಮಂಥರೆಯ ವ್ಯಕ್ತಿ ಚಿತ್ರಣ ನಮಗೆ ಅವಳ ಬಗ್ಗೆ ಇರುವ  ಪೂರ್ವಾಗ್ರಹಗಳನ್ನು ಬದಲಾಯಿಸುವಂತೆ ಮಾಡುತ್ತದೆ.ಈ ಪಾತ್ರ ಚಿತ್ರಣ ಕರುಣರಸದ ಕೊಳವನ್ನು ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು. ಕೈಕೆಯ ಮನದಲ್ಲಿ ವಿಷಬೀಜ ಬಿತ್ತಿ ಕತೆಗೆ ಸೂತ್ರಧಾರಿಯಾಗುವ ಮೂಲ ರಾಮಾಯಾಣದ  ದುಷ್ಟ ಮಂಥರೆ, ಇಲ್ಲಿ  ಕವಿಯ ಕ್ರಾಂತದರ್ಶನದಲ್ಲಿ ಎಲ್ಲರ ಕರುಣೆಗೆ, ಪಾತ್ರವಾಗುತ್ತಾಳೆ; ಶೋಕಭಾವಕ್ಕೆ ಪ್ರತಿನಿಧಿಯಾಗಿ ಪೋಷಕವಾಗುತ್ತಾಳೆ; ಇಲ್ಲಿ ಮಂಥರೆ ಕೈಕೆಗೆ ಮಮತೆಯ ಮಡಿಲಾಗುತ್ತಾಳೆ; ವಾತ್ಸಲ್ಯದ ತಾಯಿಯಾಗುತ್ತಾಳೆ; ಮಾತೃಪ್ರೇಮದ ಆಶ್ರಯವಾಗುತ್ತಾಳೆ. ರಾಮಾಯಣಕ್ಕೆ ಮೂಲ ಕಾರಣವಾಗಿರುವ ನಮ್ಮ ಪ್ರಕಾರ ದುಷ್ಟೆಯಾಗಿರುವ ಮಂಥರೆಗೂ ಪಾಪಿಗುದ್ಧಾರವಿಹುದಿಲ್ಲಿ ಎಂದು ಆತ್ಮೋದ್ಧಾರದ ದ್ವಾರವನ್ನು ತೋರುತ್ತಾರೆ ಕುವೆಂಪುರವರು.
ರಾಮನು ಕೈಕೆ ಯ ಕಠಿಣ ವಚನಕ್ಕೆ ಅಲ್ಪವೂ ವಿಚಲಿತನಾಗದೆ ಸ್ಥಿತಪ್ರಜ್ಞನಾಗಿ ಮಹಾಪ್ರಸಾದವೆಂಬಂತೆ ತನ್ನ ಪಾಲಿಗೆ ಬಂದ ಪಂಚಾಮೃತವನ್ನು ಸ್ವೀಕರಿಸಿ ಧರ್ಮವೃತನಾಗಿ ಕಾಡಿಗೆ ತೆರಳುತ್ತಾನೆ.ಅಯೋಧ್ಯೆಯೆಲ್ಲಾ ಕಣ್ಣೀರಿನ ಸಾಗರದಲ್ಲಿ ಮುಳುಗಿದ್ದರೂ ತಾನು ಮಾತ್ರ ಎದೆಗುಂದದೆ ಜನರಲ್ಲಿ ಧೈರ್ಯ ತುಂಬಿ ಸಂಭಾಳಿಸಿ ಮುನ್ನಡೆಯುವ ಅವನ ಸತ್ವಶೀಲತೆ ಮಹೋನ್ನತವಾದುದು.ಇತ್ತ  ರಾಮನ ಜೊತೆ ಸಾಗುವ ನಾರುಮುಡಿಯುಟ್ಟ  ಲಕ್ಷ್ಮಣ, ಸೀತೆಯರು ಮುಂದೆ ಸಂಭವಿಸಬಹುದಾದ ಕತೆಗೆ  ಮುನ್ನುಡಿ ಬರೆಯುತ್ತಾರೆ. ಹಾಗಾದರೆ ಲಕ್ಷ್ಮಣನ ಹೆಂಡತಿಯಾದ  ಊರ್ಮಿಳೆಯ ಗತಿಯೇನು ಎನ್ನುವ ಪ್ರಶ್ನೆಗೆ ಕುವೆಂಪುರವರು ಆಕೆಗೆ ತಪೋಮೂರ್ತಿಯ ಪವಿತ್ರ ಕಾಯಕವನ್ನು ದಯಪಾಲಿಸಿ,ಏಕಾಂತದ  ವೃತಾಧಾರಿಯನ್ನಾಗಿಸಿ, ಧ್ಯಾನದ ಆನಂದವನ್ನು ನೀಡಿ ಅವಳ ಆತ್ಮೋನ್ನತಿಗೆ ಅವಕಾಶ ಕಲ್ಪಿಸುತ್ತಾರೆ.
                           ಈ ಮಹಾಕಾವ್ಯದ ಪ್ರತಿನಾಯಕನ ಸ್ಥಾನದಲ್ಲಿರುವ ರಾವಣ ಇಲ್ಲಿ ಶ್ರೀರಾವಣ ನಾಗುತ್ತಾನೆ.(ಡಾ.ಗುರುಲಿಂಗ ಕಾಪಸೆಯವರ ಮಾತು).ರಾವಣ ತನ್ನ ರಾವಣತ್ವವನ್ನು ಕಳೆದುಕೊಂಡು ರಾಮತ್ವವನ್ನು ಆರೋಹಿಸಿ ಆತ್ಮವಿಕಾಸವನ್ನು ಪಡೆಯುವ ಶಕ್ತಿಯಾಗುತ್ತಾನೆ.'ಜಗತ್ತಿನಲ್ಲಿ ನನಗೊಲಿಯದ ಪತಿವ್ರತೆಯರಿಲ್ಲ' ಎಂಬುದೇ  ತನ್ನ ಪರಾಕ್ರಮವೆಂದು ಹೆಮ್ಮೆಪಟ್ಟುಕೊಳ್ಳುವ ಇಲ್ಲಿಯ  ರಾವಣ ನ ಹೆಣ್ಣುಬಾಕತನ ತನ್ನ ಸಹೋದರಿ ಶೂರ್ಪನಖಿಗಾದ ಅವಮಾನದ ನೆಪದಲ್ಲಿ ಸೀತೆಯನ್ನು ಅಪಹರಿಸುವಂತೆ ಮಾಡುತ್ತದೆ.ಸೀತೆಯ ಸ್ವಯಂವರದಲ್ಲಿ ಶಿವಧನಸ್ಸನ್ನು ಎತ್ತಲಾಗದೆ ಕುಸಿದು ಬಿದ್ದು ತುಂಬಿದ ಸಭೆಯಲ್ಲಿ ಅಪಹಾಸ್ಯಕ್ಕೀಡಾದ ಸೇಡೂ ಕೂಡ ರಾವಣನಿಗೆ ಸೀತೆಯನ್ನು ಅಪಹರಿಸುವಲ್ಲಿ ಪ್ರೇರಣಾ ಶಕ್ತಿಯಾಗಿ ಕಾರಣೀಭೂತವಾಗುತ್ತದೆ. ಎಲ್ಲ ಪತಿವ್ರತೆಯರಿ  ತನಗೊಲಿದಂತೆ  ಸೀತೆಯೂ ಇದರಿಂದ ಹೊರತಾಗಲಾರಳು ಎಂಬ ನಂಬಿಕೆಯೇ ಸೀತಾಪಹರಣಕ್ಕೆಡೆ ಮಾಡುತ್ತದೆ.  ಕೊನೆಯಲ್ಲಿ ರಾವಣನ ಎದೆಗೆ ಹೊಡೆದ ರಾಮನ ಬಾಣವೇ ರಾಮನಾಗಿ ಕಂಡು ನೋವಿನಲ್ಲಿದ್ದರೂ ಪರಿವೆಯಿಲ್ಲದೆ ರಾಮನನ್ನು ಬಾಣದ ರೂಪದಲ್ಲಿ ಹಿಡಿದು ತಂದ  ಆನಂದಮಯ ಕೋಶವನ್ನು ಪ್ರವೇಶಿಸುವ ಮುತ್ಸದ್ದಿಯಾಗಿ ಪರಿವರ್ತನೆಯಾಗುತ್ತಾನೆ..ಇದು ಕುವೆಂಪುರವರ ದರ್ಶನದ ಪರಿಣಾಮ.                               ( ಮುಂದುವರೆಯುವುದು......)


Saturday, 30 June 2018

ಅಕಾಡೆಮಿ' ಯೆಂಬ ಜ್ಞಾನದೇಗುಲದಲ್ಲಿ....ಭಾಗ ೨

ಅಕಾಡೆಮಿ' ಯೆಂಬ ಜ್ಞಾನದೇಗುಲದಲ್ಲಿ....ಭಾಗ

                 ಹೊಸದಾಗಿ ನೇಮಕವಾಗಿರುವ ಕನ್ನಡ ಸಹಾಯಕ ಪ್ರಾಧ್ಯಾಪಕರುಗಳಿಗೆ   ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡ ದ ವತಿಯಿಂದ ದಿನಾಂಕ ೨೧-೫-೨೦೧೮ ರಿಂದ ದಿನಾಂಕ ೧೦-೫-೨೦೧೮ ರವರೆಗೆ ನಡೆದ ವೃತ್ತಿ ಬುನಾದಿ ತರಬೇತಿಯ ಮುಂಗಾರು ಮಳೆಗಾಲದ ಹೊಸ್ತಿಲಲ್ಲಿದ್ದ ಧಾರವಾಡದ ಪ್ರಕೃತಿಯ ಮಡಿಲಿನ  ಶತಮಾನೋತ್ಸವ  ಭವನದಲ್ಲಿ ಕಳೆದ ಆ ದಿನಗಳು ಮರಳಿ ನಮ್ಮನ್ನು ಕಾಲೇಜು ನೆನಪುಗಳಿಗೆ ತೆರದುಕೊಳ್ಳುವಂತೆ  ಅವಿಸ್ಮರಣೀಯವಾಗಿದ್ದವು.

          ಅರಿಸ್ಟಾಟಲ್ ಸ್ಥಾಪಿಸಿದ್ದ ಗ್ರೀಕ್  ಅಕಾಡೆಮಿಯ ನೆನಪೊಂದು ಸುಳಿದುಹೋಗುವಂತೆ ನಡೆದ ಜ್ಞಾನದ ಚಿಂತನ ಮಂಥನಗಳು  ನಮ್ಮ ದೃಷ್ಟಿಕೋನಕ್ಕೆ ಹೊಸ ಆಯಾಮಗಳನ್ನು ನೀಡುವಲ್ಲಿ ಸಹಕಾರಿಯಾದವು.

                      ಇಂತಹ  ಉನ್ನತ ಶಿಕ್ಷಣ ಅಕಾಡೆಮಿಯ  ನಿರ್ದೇಶಕರಾಗಿರುವ ಡಾ ಶಿವಪ್ರಸಾದರವರು ಸಿ ಎನ್ ಆರ್ ರಾವ್, ಅಬ್ದುಲ್ ಕಲಾಂ, ರಂತಹ ಶ್ರೇಷ್ಠ  ವಿಜ್ಞಾನಿಗಳೊಂದಿಗೆ  ಕಾರ್ಯನಿರ್ವಹಿಸಿದ  ಅನುಭವವನ್ನು ಹೊಂದಿದ್ದಾರೆ. ಸೆಕೆಂಡುಗಳಲ್ಲಿ ಲೆಕ್ಕಹಾಕುವ ಅವರ ಸಮಯಪ್ರಜ್ಞೆಯಂತೂ ನಮಗೆಲ್ಲಾ ಮಾದರಿಯಾಗಿದೆ.ಅವರು ನಮ್ಮ ಪಾಠಬೋಧನೆಯ ವಿಧಾನಕ್ಕೆ ನೀಡಿದ ಸಲಹೆಗಳು ನಮ್ಮ ತರಗತಿಗಳನ್ನು ಸದಾ ಜೀವಂತವಾಗಿಡುವಲ್ಲಿ ಹಾಗೂ ವಿದ್ಯಾರ್ಥಿ ಕೇಂದ್ರಿತ ತರಗತಿ ನಿರ್ಮಾಣದಲ್ಲಿ ಎಂದೆಂದಿಗೂ ನಮಗೆ ನೆರವಾಗುತ್ತವೆ.
"ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತಿದ್ದಿತಯ್ಯಶಿವನ ಪ್ರಕಾಶ  "ಎಂಬ ವಚನದಲ್ಲಿನ ಆ 'ಶಿವನ ಪ್ರಕಾಶ' ಡಾ ಶಿವಪ್ರಸಾದರಾಗಿದ್ದಾರೆ  ಎಂಬ ನಂಬಿಕೆ ನಮ್ಮದು.
             ಸಾಮಾನ್ಯವಾಗಿ ವಿಜ್ಞಾನಿಗಳೆಲ್ಲ 
ದೇವರಲ್ಲಿ ನಂಬಿಕೆಯಿಲ್ಲದ ನಾಸ್ತಿಕವಾದಿಗಳು. ಡಾ.ಶಿವಪ್ರಸಾದರು ಅಂತಹ  ನಾಸ್ತಿಕರಾಗಿದ್ದರೂ, ಉದಾತ್ತ ಚಿಂತನೆಗಳಿಂದ ಸದಾ  ದೈವತ್ವದ ಕಡೆಗೆ ತುಡಿಯುತ್ತಿರುವ ಮುಗ್ಧ ಜೀವಿ.ಡಾ.ಶಿವಪ್ರಸಾದರವರು ವಿಜ್ಞಾನಿಯಾಗಿ,ದೇಶದ ಉಜ್ವಲ  ಭವಿಷ್ಯದ ಕನಸುಗಾರರಾಗಿ,ಶಿಕ್ಷಣ ತಜ್ಞರಾಗಿ,ಮಹೋನ್ನತ ಚಿಂತನೆಗಳ ಹರಿಕಾರರಾಗಿ ನಮ್ಮನ್ನು ಆಳವಾಗಿ  ಪ್ರಭಾವಿಸಿದ  ಘಳಿಗೆಗಳನ್ನು ಹಂಚಿಕೊಳ್ಳಲೇಬೇಕು.

         ಅವರು ತೆಗೆದುಕೊಂಡ ಮೂಲ ವಿಜ್ಞಾನದ ಕೆಲವು ಭೌತಿಕ ಸಂಗತಿಗಳನ್ನು ಕುರಿತ  ಒಂದು ತರಗತಿ  ವಿಜ್ಞಾನ ವಿಷಯದ ಬಗೆಗಿನ ನಮ್ಮ ವಿಜ್ಞಾನವೆಂದರೆ ಬಲ ಶಕ್ತಿ ದ್ರವ್ಯ ಚಲನೆ ವೇಗ ಜೀವಿ ಗಳ ರಸಾಯನವಾಗಿದ್ದು ಅರ್ಥವಾಗದ ಶಾಸ್ತ್ರ ವೆಂಬ  ಪೂರ್ವಾಗ್ರಹಪೀಡಿತ  ಮೂಲ ಕಲ್ಪನೆಗಳನ್ನು, ಬದಲಾಯಿಸಿಕೊಳ್ಳುವಂತೆ ಮಾಡಿತು.ನಮ್ಮಂತಹ ಭಾಷಾ ಪ್ರಾಧ್ಯಾಪಕ ಶಿಬಿರಾರ್ಥಿಗಳಿಗೆ ವಿಜ್ಞಾನದ ಪಾಠವನ್ನು  ಸರಳವಾಗಿ,ಸುಲಲಿತವಾಗಿ,ಉದಾತ್ತವಾಗಿ, ಹಾಸ್ಯಭರಿತ  ಜೀವನದ ನಿತ್ಯ ಸಂಗತಿಗಳೊಂದಿಗೆ ಅನ್ವಯಿಸಿ ಹೇಳುವ ಅವರ ಉಪನ್ಯಾಸ ಕೌಶಲ ಬೆರಗುಗೊಳಿಸುವಂತಹುದಾಗಿದೆ.

                      ಉದಾಹರಣೆಗೆ ಬೆಳಕಿನ' ಘಟಕಗಳಾಗಿರುವ  VIBGYOR ಎಂಬ ಸೂತ್ರದಲ್ಲಿರುವ ಪ್ರಪಂಚದ ಕಣ್ಣಿಗೆ ಕಾಣುವ ಏಳು ಬಣ್ಣಗಳು (ವಿಜ್ಞಾನದ ಪ್ರಕಾರ ಬೆಳಕಿನಲ್ಲಿ ಹಲವಾರು ಬಣ್ಣಗಳಿವೆ) ಈ ವಿಶ್ವದ ಪ್ರತಿಯೊಂದು ಭೌತಿಕ ವಸ್ತುವಿನ ಮೇಲೆ ಬಿದ್ದು ಉಂಟು ಮಾಡುವ ಪರಿಣಾಮವನ್ನು ತರಗತಿಯಲ್ಲಿನ ಕೆಲವು ವಸ್ತುಗಳ ಮೂಲಕ ವಿಶ್ಲೇಷಿಸಿದ ಡಾ.ಶಿವಪ್ರಸಾದರವರ ಪ್ರಾತ್ಯಕ್ಷಿಕೆ ಅನನ್ಯವಾಗಿತ್ತು.                                      ಯಾಜ್ಞವಲ್ಕ್ಯ ಮಹರ್ಷಿ ಹೇಳಿದ ಬಯಲು ಮತ್ತು ಬೆಳಕು ಎಂಬ ವಿಶ್ವದ ಎರಡು ಮಹತ್ವದ ಸಂಗತಿಗಳು ಭೌತಶಾಸ್ತ್ರದ ತಳಹದಿಯಾಗಿವೆ.ಈ ಭೌತಶಾಸ್ತ್ರದ ಬೆಳಕಾಗಿರುವ 'ಬೆಳಕಿ'ನ ವೇಗ, ಚಲನೆ,ಮುಂತಾದ ಕೌತುಕದ ಸಂಗತಿಗಳನ್ನು ಅವರು ವಿಶ್ಲೇಷಿಸಿದ ರೀತಿ ಮನಮುಟ್ಟುವಂತಿತ್ತು. ವಿಜ್ಞಾನಕ್ಕೆ ಸವಾಲಾಗಿರುವ  'QUANTUM MECHANICS 'ನ ಇತಿಹಾಸ, ಉದಾಹರಣೆಗಳೊಂದಿಗೆ  ಅರ್ಥೈಸಿ ಹೇಳುವ  ಶೈಲಿ ನಮ್ಮನ್ನು ಗಾಢವಾಗಿ ಪ್ರಭಾವಿಸಿತು.
              ಡಾ. ಶಿವಪ್ರಸಾದ ಗುರುಗಳು ಉಲ್ಲೇಖಿಸಿದ   ಖ್ಯಾತ ಭೌತವಿಜ್ಞಾನಿ  Richard  Feynman ಹೀಗೆ ಹೇಳುತ್ತಾನೆ ".   Fall in love with some activity, and do it! Nobody ever figures out what life is all about, and it doesn't matter. Explore the world. Nearly everything is really interesting if you go into it deeply enough. Work as hard and as much as you want to on the things you like to do the best. Don't think about what you want to be, but what you want to do. Keep up some kind of a minimum with other things so that society doesn't stop you from doing anything at all." 
ಇವನ ಹೇಳಿಕೆಯಂತೆ ನಾವೆಲ್ಲರೂ ಮತ್ತೆ ಬಸವಣ್ಣನವರ 'ಕಾಯಕ ತತ್ವದ  ಕೈಲಾಸ'ಕ್ಕೆ ಪ್ರೀತಿಯಿಂದ ಹೊರಳಬೇಕಾಗಿದೆ. 

         ಇಡೀ ಬ್ರಹ್ಮಾಂಡದಲ್ಲಿ 'ನಾನು' ಎಂಬ ಸ್ಥಾನ ಬಹು ಕುಬ್ಜ ಹಾಗೂ ಲೆಕ್ಕಕ್ಕೂ ಸಿಗದಷ್ಟು ನಗಣ್ಯ, ಅಲಕ್ಷಿತ.ಆದರೂ 'ನಾನು' ಎಂಬ ಅಸ್ತಿತ್ವದ ಏಕಮಾತ್ರ ಕಾರಣದಿಂದಾಗಿ ಈ ವಿಶಾಲ ಬ್ರಹ್ಮಾಂಡವನ್ನು ದರ್ಶಿಸಲು, ಅನ್ವೇಷಿಸಲು ಸಾಧ್ಯವಾಗಿದೆ ಎಂಬುದೇ ವಿಸ್ಮಯ ಎಂಬ  ಡಾ.ಶಿವಪ್ರಸಾದ ಗುರುಗಳು ಉದಾಹರಿಸಿದ ಸಿದ್ಧಾಂತ ಸಂತ ಶಿಶುನಾಳ ಶರೀಫರ "ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತ....." "ತತ್ವಪದದಲ್ಲಿನತತ್ವಶಾಸ್ತ್ರವನ್ನು ಅರಿವಿಗೆ ತಂದುಕೊಳ್ಳುವಂತೆ ಮಾಡಿತು.
ಉದಾಹರಣೆ ೨  CONDUCTORS,SEMI CONDUCTORS,NON CONDUCTORS ಗಳಲ್ಲಿ ಇಲೆಕ್ಟ್ರಾನುಗಳು ತಮ್ಮ home orbit ನಿಂದ  Free orbit ಗಳಿಗೆ ಬಾಹ್ಯ ಶಕ್ತಿಯನ್ನು ನೀಡಿದಾಗಿನ ಅವುಗಳ ಚಲನೆ, ಈ ಚಲನೆಯ ಕಾರಣದಿಂದಾಗಿ ಉಂಟಾಗಿರುವ CONDUCTOR ನ ಈ ಮೂರು  ಪ್ರಕಾರಗಳನ್ನು ಕುರಿತು ಪಿಪಿಟಿಯ ಚಿತ್ರಗಳ ಪ್ರದರ್ಶನದ ಮೂಲಕ  ಅವರು ಮಾಡಿದ ಪಾಠ ನಮ್ಮಂತಹ ಕಲಾ ಪ್ರಾಧ್ಯಾಪಕರಿಗೆ ಅತ್ಯಂತ ರಸವತ್ತಾಗಿತ್ತು. 
ಉದಾಹರಣೆ ೩-ನ್ಯಾನೊ ಕಣಗಳಿಂದ ನಮ್ಮ  ಬದುಕಿನ ಸರ್ವಕ್ಷೇತ್ರಗಳಲ್ಲಿ ಆಗುತ್ತಿರುವ,ಭವಿಷ್ಯದಲ್ಲಿ ಮುಂದಾಗಬಹುದಾದ ಕ್ರಾಂತಿಕಾರಕ ಬದಲಾವಣೆಗಳು ಈ ವಸುಧೆಯಲ್ಲಿಯೇ  ಯಕ್ಷಣಿ ಲೋಕವನ್ನು ಸೃಷ್ಟಿಸಿದರೆ ಅಚ್ಚರಿಪಡಬೇಕಾಗಿಲ್ಲ  ಎಂಬುದನ್ನು ಮನಗಾಣಿಸಿದರು. ವಿಜ್ಞಾನದ ವಾಸ್ತವ ಹಾಗೂ ಸಾಹಿತ್ಯದ ಸೌಂದರ್ಯಗಳು ಮೇಳೈಸಿದಾಗ ಶಿಕ್ಷಣ ಅರ್ಥಪೂರ್ಣತೆಯನ್ನು, ಪೂರ್ಣದೃಷ್ಟಿಯನ್ನು ಪಡೆಯುತ್ತದೆ. ಇವೆರಡನ್ನೂ ಸಮನ್ವಯಗೊಳಿಸಿ ಮಾಡುವ ಪಾಠಗಳು ವಿದ್ಯಾರ್ಥಿಗಳಲ್ಲಿ ಹೊಸ ದೃಷ್ಟಿಕೋನವನ್ನು ಬೆಳೆಸುತ್ತವೆ.
          ಆಗ "ಸಾಹಿತ್ಯವು "ವಾಸ್ತವಿಕ ಸೌಂದರ್ಯ ದ ಹೂಬನವಾಗುವುದರಲ್ಲಿ ಸಂಶಯವಿಲ್ಲ ಎಂಬ ಗುರುಗಳ ನಿಲುವು ನಮ್ಮನ್ನು ಜ್ಣಾನ ಶಿಸ್ತುಗಳ ಸಂಗಮದ ವಿಶಿಷ್ಟತೆಯನ್ನು ಅರಿಯುವಂತೆ ಮಾಡಿತು.
ಹೀಗೆ ವಿಜ್ಞಾನದ ವಿಸ್ಮಯಗಳನ್ನು ಕುರಿತು ಡಾ ಶಿವಪ್ರಸಾದರ ಉಪನ್ಯಾಸ ನಮ್ಮನ್ನು ವಿಜ್ಞಾನದ ವಿಧೇಯ ವಿದ್ಯಾರ್ಥಿಗಳನ್ನಾಗಿಸುವುದರ ಜೊತೆಗೆ ಕನ್ನಡ ಸಾಹಿತ್ಯ ದೇವಿಯ ಕಲಾ ಸೌಂದರ್ಯವನ್ನು ಪಾಠ ಮಾಡುವುದರ ಮೂಲಕ ಸವಿಯಲು ಉತ್ಸುಕರನ್ನಾಗಿಸಿದೆ.                                                      ಡಾ ಶಿವಪ್ರಸಾದ ರವರದು ತಲೆತಲಾಂತರದ ಸಾಂಪ್ರದಾಯಿಕ ಔಪಚಾರಿಕತೆಯ ಕಚೇರಿ ಪರಿಸರವನ್ನು ಬದಲಾಯಿಸಬೇಕೆನ್ನುವ, ಎಲ್ಲರೊಂದಿಗೆ ಸಹವರ್ತಿಯಾಗಿ ಬೆರೆಯಬೇಕೆನ್ನುವ 'ಸರಳ ಜೀವನ ಉದಾತ್ತ ಚಿಂತನೆ'ಯ ಹಾಗೂ'ಮಾತಿಗಿಂತ ಕೃತಿ ಲೇಸು ' ಎಂಬ ಬದ್ಧತೆಯ ವ್ಯಕ್ತಿತ್ವ.ನಮ್ಮನ್ನು ಪ್ರಭಾವಿಸಿದ  ಮತ್ತೊಂದು ವಿಶಿಷ್ಟ  ವ್ಯಕ್ತಿತ್ವವೆಂದರೆ ಕಿರಿಯ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದ  ಸಂಶೋಧಕರು ಹಾಗೂ ಶಿಕ್ಷಣ ತಜ್ಞರೂ ಆಗಿರುವ ಶ್ರೀ ಸಾಗರ್ ರವರದು.
ಸಾಂಪ್ರದಾಯಿಕ ತರಗತಿಯ ಚೌಕಟ್ಟನ್ನು ಬದಿಗಿರಿಸಿ ಆಧುನಿಕ ಡಿಜಿಟಲ್ ಕಾಲಘಟ್ಟದಲ್ಲಿ ಹೊಸ ತರಗತಿ ಸಂರಚನೆ ಇಂದಿನ ತುರ್ತು ಅಗತ್ಯವಾಗಿದೆ ಎಂಬ ಹೆಸರಿಗೆ ತಕ್ಕಂತೆ ಜ್ಞಾನ ಸಾಗರದಂತಿರುವ ಶ್ರೀ ಸಾಗರ್ ರವರ ಸ್ಥಾಪಿತ ಸಂರಚನೆಯನ್ನು ಮುರಿದು ಹೊಸದಾಗಿ ಕಟ್ಟುವ ಪ್ರತಿಪಾದನೆ ,ಅಕಾಡೆಮಿಯಲ್ಲಿ ನಿರ್ದೇಶಕರ ನೇತೃತ್ವದಲ್ಲಿ ಒಂದು ಹೊಸ ತಂಡ ರಚನೆಯಾಗಲು ನಮ್ಮನ್ನು ಮಾರ್ಗದರ್ಶಿಸಲು ಕಾರಣವಾಗಿದೆ.ಸ್ಪರ್ಧಾತ್ಮಕ ಯುಗವನ್ನೆದುರಿಸಲು ವಿದ್ಯಾರ್ಥಿಗಳನ್ನು  ಸಜ್ಜುಗೊಳಿಸಬೇಕು ಎನ್ನುವ ಹಂಬಲ ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಯಾದ ಡಾ.ಸಾತಿಹಾಳ ರವರದು.

ಲಾಸ್ಟ್ ಪಂಚ್-'ಧಾರವಾಡದ ಆ ತುಂತುರು ಮಳೆಹನಿ,ತಂಪಾದ AC  ಗಾಳಿ, ಆ ಇಸ್ಕಾನ್ ನ ಸಾತ್ವಿಕ ಊಟ, ಗಂಟೆಗೊಮ್ಮೆ ಕೇಳುವ ಆ ಹಾಳಾದ್  Bell ಸದ್ದು, ಪಾರ್ಕ್ನನಲ್ಲಿ ಕಾರಂಜಿ ಸ್ನಾನ ,ಎಮ್ಮೆ ಸವಾರಿ ಮಜಾ,ಬಿಡುವಿಲ್ಲದ ಕ್ಲಾಸ್ ಗಳು, ಕಲಾಸುಂದರಿ, ಹೋಟೆಲ್ ಕರೀಷ್ಮಾಳ  ಸೆಳೆತ  ಎಲ್ಲಾ ಸೇರಿ ನಮ್ heart ನಲ್ಲಿ ಮಾಸಲಾಗದ ನೆನಪು ಕಟ್ಟಿಬಿಟ್ಟಿವೆ ಕಣ್ರೀ ........


Friday, 15 June 2018

'ಅಕಾಡೆಮಿ' ಯೆಂಬ ಜ್ಞಾನದೇಗುಲದಲ್ಲಿ....(ಭಾಗ 1)

ನಮ್ಮ ತಂಡ

             ಹೊಸದಾಗಿ ನೇಮಕವಾಗಿರುವ ಕನ್ನಡ ಸಹಾಯಕ ಪ್ರಾಧ್ಯಾಪಕರುಗಳಿಗೆ   ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡ ದ ವತಿಯಿಂದ ದಿನಾಂಕ ೨೧-೫-೨೦೧೮ ರಿಂದ ದಿನಾಂಕ ೧೦-೬-೨೦೧೮ ರವರೆಗೆ  ಹಮ್ಮಿಕೊಂಡ ೨೧ ದಿನಗಳ ವೃತ್ತಿ ಬುನಾದಿ ತರಬೇತಿ ನಮ್ಮ ವೃತ್ತಿಸಾಮರ್ಥ್ಯ ಹಾಗೂ ಬೋಧನಾ ಕೌಶಲಗಳನ್ನು ವೃದ್ಧಿಸಿಕೊಳ್ಳಲು  ಪ್ರೇರಣಾತ್ಮಕವಾಗಿತ್ತು.ನಮ್ಮ ನಾಡಿನ ಸಹೃದಯಿ ಖ್ಯಾತ ಸಾಹಿತಿಗಳಾದ ದಿವಂಗತ ಡಾ.ವೃಷಭೆಂದ್ರ ಸ್ವಾಮಿಯವರ ಸುಪುತ್ರರಾಗಿರುವ ಡಾ.ಎಸ್ ಎಂ ಶಿವಪ್ರಸಾದ ರವರು ಈ ಉನ್ನತ ಶಿಕ್ಷಣ ಅಕಾಡೆಮಿ ಧಾರವಾಡ ದ ನಿರ್ದೇಶಕರಾಗಿದ್ದಾರೆ.

                      ಅಂತಾರಾಷ್ಟ್ರೀಯ ಮಟ್ಟದ' ಎ' ದರ್ಜೆ ವಿಜ್ಞಾನಿಗಳೂ ಆಗಿರುವ ಶ್ರೀಯುತ ಡಾ.ಶಿವಪ್ರಸಾದ ರವರು  ಅಕಾಡೆಮಿಯ ನೇತೃತ್ವ ವಹಿಸಿರುವುದು ನಮ್ಮ ಭಾಗ್ಯವೇ ಸರಿ. ಇವರು ತಮ್ಮ  ಕಂಗಳಲ್ಲಿ ನವಭಾರತ, ನವಕರ್ನಾಟಕ ನಿರ್ಮಾಣದ ದೂರದೃಷ್ಟಿಯನ್ನು ಹೊಂದಿದ್ದಾರೆ.ಹೆಸರಿಗೆ ತಕ್ಕಂತೆ ಗುಣದಲ್ಲಿ, ಜ್ಞಾನದಲ್ಲಿ, ಆಚಾರದಲ್ಲಿ,ವಿಚಾರಗಳಲ್ಲಿ ,ಬದ್ಧತೆಯಲ್ಲಿ, ಶಿವನ ವರ ಪ್ರಸಾದವೇ ಆಗಿರುವ ಶ್ರೀ ಶಿವಪ್ರಸಾದರವರು ನಮ್ಮಲ್ಲಿರುವ ಸಾಂಪ್ರದಾಯಿಕ ಶಿಕ್ಷಣದ ಬೋಧನಾ ಪದ್ಧತಿಗಳಿಗಿಂತ ವಿಭಿನ್ನವಾಗಿ ವಿಶಿಷ್ಟವಾಗಿ ಪರಿಣಾಮಕಾರಿಯಾಗಿ,ಕ್ರಾಂತಿಸ್ವರೂಪದ ತರಗತಿ ಬೋಧನಾ ಕೌಶಲ್ಯಗಳ ಮಾದರಿ ವಿನ್ಯಾಸವನ್ನು ರೂಪಿಸಬೇಕೆಂಬ ಹಂಬಲವುಳ್ಳವರಾಗಿದ್ದಾರೆ.

ನಿರ್ದೇಶಕರಾದ ಡಾ.ಶಿವಪ್ರಸಾದರವರೊಂದಿಗೆ...

               ತಾವು ಕಂಡ ಉನ್ನತ ಶಿಕ್ಷಣದ ತರಗತಿ ಬೋಧನಾ ಸುಧಾರಣೆಯ ಕನಸುಗಳನ್ನು  ಪ್ರಾಧ್ಯಾಪಕರಿಗಾಗಿ ನಡೆಯುತ್ತಿರುವ ವಿಭಿನ್ನ ರೀತಿಯ "ವೃತ್ತಿಬುನಾದಿ ತರಬೇತಿಯ" ಮೂಲಕ ಸಾಕಾರಗೊಳಿಸಲು ಕಂಕಣಬದ್ಧರಾಗಿದ್ದಾರೆ.

"ನಮ್ಮ ದೇಶದ ಭವಿಷ್ಯ ನಮ್ಮ ತರಗತಿ ಕೋಣೆಗಳಲ್ಲಿ ನಿರ್ಮಾಣವಾಗುತ್ತದೆ "ಎಂಬ ಮಹಾತ್ಮಾ ಗಾಂಧೀಜಿಯವರ ನುಡಿಯಂತೆ ಕಾರ್ಯತತ್ಪರರಾಗಿ ನಮ್ಮ ಕರ್ನಾಟಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಠ ಸಂಪನ್ಮೂಲ ಪ್ರಾಧ್ಯಾಪಕರನ್ನು ನಿರ್ಮಾಣ ಮಾಡುವ ಅವರ ಮಹತ್ವಾಕಾಂಕ್ಷೆ ಅದಮ್ಯವಾದದ್ದು.ಸಮಾಜದಲ್ಲಿ  ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ಸ್ಥಾನವನ್ನು ಪಡೆದಿರುವ ಶಿಕ್ಷಕ ರಿಂದ ಮಾತ್ರ ದೇಶ ಮಹೋನ್ನತವಾದ ಜ್ಞಾನಸಂಪನ್ನೂಲವನ್ನು ಸೃಷ್ಟಿಸಬಹುದಾಗಿದೆ,ಅಲ್ಲದೇ ದೇಶವನ್ನು ಸುಸ್ಥಿರ ಅಭಿವೃದ್ಧಿಯತ್ತ ಕೊಂಡೊಯ್ಯಬಹುದು  ಎಂಬ ಶ್ರೀ ಶಿವಪ್ರಸಾದ ಗುರುಗಳ ಅಚಲ ವಿಶ್ವಾಸ ,ಶಿಕ್ಷಣ ಹಾಗೂ ಶಿಕ್ಷಕರ ಬಗ್ಗೆ ಅವರಲ್ಲಿರುವ ಪವಿತ್ರ ದೃಷ್ಟಿಕೋನವನ್ನು ಬಿಂಬಿಸುತ್ತದೆ.
      "ಗುರು ಬ್ರಹ್ಮ ಗುರು ವಿಷ್ಣು 

     ಗುರುದೇವೋ ಮಹೇಶ್ವರ

    ಗುರು ಸಾಕ್ಷಾತ್ ಪರಬ್ರಹ್ಮ
        ತಸ್ಮೈ ಶ್ರೀ ಗುರುವೇನಮಃ"
ಶ್ಲೋಕದಂತೆ 'ಗುರು' ದೇವರಿಗಿಂತ ಮಹತ್ವದ ಸ್ಥಾನವನ್ನು ಹೊಂದಿದ್ದು, ಆತ ಇಂದಿನ  ಆಧುನಿಕ ಲೋಕವನ್ನು ಮಾರ್ಗದರ್ಶಿಸುವ, ಉದ್ಧರಿಸುವ ಶಕ್ತಿ ಯಿಂದ ಮುನ್ನುಗ್ಗಬೇಕಾದ ಅಗತ್ಯವಿದೆ.ಕ್ಷಣ ಕ್ಷಣ ಕ್ಕೂ ಬದಲಾಗುತ್ತಿರುವ ಜಗತ್ತಿನ ಸವಾಲುಗಳಿಗೆ ಶಿಕ್ಷಣದ ಮೂಲಕ ಉತ್ತರಗಳನ್ನು ಕಂಡುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.ಅದಕ್ಕೆ ತಕ್ಕಂತೆ ನಮ್ಮ ಶಿಕ್ಷಣ ಪದ್ಧತಿಗಳಲ್ಲಿಯೂ ಪರಿವರ್ತನೆಗಳನ್ನು ಅಳವಡಿಸಿಕೊಂಡು ನವಪೀಳಿಗೆಯನ್ನು ಮುನ್ನಡೆಸಬೇಕಾದ ಜವಾಬ್ದಾರಿ ಗುರುಗಳ ಮೇಲಿದೆ. ಇಂತಹ ನ್ಯಾನೊ ಜಗತ್ತಿನ  ಸಂದಿಗ್ಧ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ನಮ್ಮನ್ನು ಸಕಲ ರೀತಿಯಿಂದ ಸಜ್ಜುಗೊಳಿಸುವ ಕಾರ್ಯದಲ್ಲಿ ಡಾ ಶಿವಪ್ರಸಾದರವರು ಶ್ರದ್ಧೆಯಿಂದ ನಿರತರಾಗಿದ್ದಾರೆ ಹಾಗೂ ಅವರ ಕನಸಿನ ಯೋಜನೆಯಲ್ಲಿ ನಾವು ಭಾಗಿಗಳಾಗುತ್ತಿದ್ದೇವೆ   ಎಂಬುದೇ ನಮಗೆ ಹೆಮ್ಮೆಯ ಸಂಗತಿಯಾಗಿದೆ.

ಜ್ಞಾನಸಾಗರ ಕೆ.ಸಾಗರ್ ರವರೊಂದಿಗೆ.....

ಅವರು ನಮಗೆ ನೀಡಿದ ತರಬೇತಿಯ ನವ ವಿಧಾನ, ತರಗತಿಯ  ಬೋಧನಾ ನವ ವಿನ್ಯಾಸ,೨೧ ಅಂಶಗಳ ಬೋಧನೆಯ ವೈವಿಧ್ಯತೆ,ಡಾ.ರಹಮತ್ ತರೀಕೆರೆ,ಡಾ.ರಾಜೇಂದ್ರ ಚೆನ್ನಿ,ಡಾ.ನಟರಾಜ ಬೂದಾಳು,ಡಾ.ನಟರಾಜ ಹುಳಿಯಾರು,ಡಾ.ವಿನಯಾ ಒಕ್ಕುಂದ, ಡಾ ಎಂ ಡಿ ಒಕ್ಕುಂದ,ಡಾ ಅಣ್ಬನ್, ಡಾ.ವಿ. ಎಸ್. ಮಾಳಿ ಮುಂತಾದ ಸಾಹಿತಿಗಳು ಹಾಗೂ ಶ್ರೇಷ್ಠ ವಿದ್ವಾಂಸರ ಮಾರ್ಗದರ್ಶನ,ಚರ್ಚೆ, ಸಂವಾದಗಳು ನಮ್ಮ ಜ್ಞಾನದ,ಅರಿವಿನ ಪರಿಧಿಯನ್ನು ವಿಸ್ತರಿಸಿದವು.ನಮ್ಮ ನಾಡಿನ  ಪ್ರಸಿದ್ಧ ಸಾಹಿತಿ ಚಿಂತಕರಾಗಿರುವ  ಡಾ. ರಹಮತ್ ತರೀಕೆರೆ ಯವರ ಪಠ್ಯದ ಮರು ವ್ಯಾಖ್ಯಾನ, ಅಂತರ್ ಪಠ್ಯೀಯತೆ ಹಾಗೂ ಸಂಶೋಧನೆಯ ಸ್ವರೂಪ,ವಿಧಾನ ಕುರಿತು ಪರಿಣಾಮಕಾರಿ ಉಪನ್ಯಾಸ,ಚರ್ಚೆಗಳು ನಮ್ಮನ್ನು ಪಠ್ಯದ ವಿಶಾಲವಾದ ಮರು ಓದಿಗೆ ತೊಡಗಿಕೊಳ್ಳುವಂತೆ ಪ್ರೇರೇಪಿಸಿತು.ಡಾ.ಶ್ರೀಮತಿ ವಿನಯಾ ಒಕ್ಕುಂದ ರವರ "ಜನ್ನನ ಯಶೋಧರ ಚರಿತೆ ; ಒಂದು  ಸ್ತ್ರೀವಾದಿ ಅಧ್ಯಯನ "ವಿಷಯದ ಉಪನ್ಯಾಸ  ಸ್ತ್ರೀವಾದದ ಸೂಕ್ಷ್ಮ ಒಳನೋಟಗಳನ್ನು, ಸಾಹಿತ್ಯದ ಬಹುಶಿಸ್ತೀಯ ಆಧ್ಯಯನದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿತು.'ರವಿ ಕಾಣದ್ದನ್ನು ಕವಿ ಕಂಡ ಕವಿಯೂ ಕಾಣದ್ದನ್ನು ಒಬ್ಬ ಸ್ತ್ರೀ ಕಾಣುವ ಜಗತ್ತು ನಮ್ಮ ಕಣ್ಣ ಮುಂದಿದೆ ಎಂಬ ಸತ್ಯವನ್ನು ಅರಿಯುವಂತೆ ಮಾಡಿತು.
                               ಮತ್ತೊಬ್ಬ ವಿದ್ವಾಂಸರಾದ ಶ್ರೀ ಡಾ. ವಿ ಎಸ್ ಮಾಳಿ ಯವರ "ಪ್ರಾಚೀನ ಹಾಗೂ ಮಧ್ಯಕಾಲೀನ ಕನ್ನಡ ಸಾಹಿತ್ಯ ಗಳ ತೌಲನಿಕ ಅಧ್ಯಯನ"ದ ಉಪನ್ಯಾಸ ನಮ್ಮದೇ ಸಾಹಿತ್ಯದಲ್ಲಿರುವ ಅನನ್ಯತೆಗಳನ್ನು ಕುರಿತು ಅಧ್ಯಯನ ಮಾಡಲು ನಮ್ಮನ್ನು ಪ್ರೇರೇಪಿಸಿತು.ಹೀಗೆ ಪ್ರತಿ ದಿನದ ತರಬೇತಿಯಲ್ಲಿಯೂ ಕನ್ನಡದ ಮಹತ್ವದ ಚಿಂತಕರೊಂದಿಗೆ ಅನುಸಂಧಾನಿಸುವ ಯೋಗ ನಮ್ಮನ್ನುನವನವೋನ್ಮೇಶಶಾಲಿಗಳನ್ನಾಗಿ ಮಾಡಿದೆ.
ರಾಜ್ಯಮಟ್ಟದ ಅಕಾಡೆಮಿಯೊಂದರ  'ನಿರ್ದೇಶಕರು' ಎಂಬ ಉನ್ನತ ಹುದ್ದೆಯಲ್ಲಿದ್ದರೂ,ಸ್ವತಃ ವಿಜ್ಞಾನಿ ಗಳಾಗಿದ್ದರೂ, ಡಾ.ಶಿವಪ್ರಸಾದ ರವರಲ್ಲಿನ  ಬಸವಣ್ಣನವರ ಸುಜ್ಞಾನ,ಸುಗುಣಶೀಲತೆ,ಅಲ್ಲಮನ  ನಿಗರ್ವ,ನಿರಹಂಕಾರ,ಗಾಂಧೀಜಿಯವರ ಸಹನೆ,ಶಾಂತಿ, ಸಜ್ಜನಿಕೆ,ಭುಜದ ಮೇಲೆ ಕೈಹಾಕಿ ಮಾತನಾಡಿಸುವ ಸರಳತೆ,ಅಬ್ದುಲ್ ಕಲಾಂ ರವರ ದೂರದೃಷ್ಟಿಯ ಕಾಯಕ ನಿಷ್ಠತೆ,ವಿಜ್ಞಾನಿ  ಸಿ ಎನ್ ಆರ್ ರಾವ್ ರವರ ಸಂಶೋಧನಾ ಮನೋಭಾವ, ಯಾವುದೇ ಸಮಸ್ಯೆಯನ್ನು ಸಮಚಿತ್ತದಿಂದ ಪರಿಹರಿಸುವ ಅವರ ಸಮಸ್ಯೆಗಳನ್ನು ಪರಿಹಾರ ಕೌಶಲ,ತರಬೇತಿಯ ಕಾರ್ಯಕ್ರಮದಲ್ಲಾಗುವ ಸಣ್ಣ ವ್ಯತ್ಯಾಸಗಳಿಗೂ ನಿರ್ದಾಕ್ಷಿಣ್ಯವಾಗಿ ಕ್ಷಮೆ ಕೇಳುವ ಅವರ ಸಹೃದಯ ವೈಶಾಲ್ಯತೆ , ಔದಾರ್ಯಗಳು,ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ಆಯೋಜಿಸುವ ವೈಜ್ಞಾನಿಕ ಮನೋಭಾವ, ಇಂದಿನ ಮಡಿವಂತಿಕೆಯ ಬೌದ್ಧಿಕ ಜಗತ್ತಿಗೆ ಮಾದರಿಯಾಗಿವೆ.
              ಅವರಲ್ಲಿನ ವಿಜ್ಞಾನಿ ಶೈಕ್ಷಣಿಕ ತತ್ವಜ್ಞಾನದ ಆಧಾರದ ಮೇಲೆ  ಉನ್ನತ ಶಿಕ್ಷಣದ ಹೊಸ  ಜಗತ್ತಿನ ನಿರ್ಮಾಣಕ್ಕೆ ಹಾತೊರೆಯುತ್ತಿದ್ದಾನೆ.ಡಾ. ಶಿವಪ್ರಸಾದರವರು  ಸತ್ಯ , ಶಿವ  ತತ್ವಗಳ ಸುಂದರರೂ ಆಗಿದ್ದಾರೆ.  ಶಿಕ್ಷಣದ ಮುಖ್ಯವಾಹಿನಿಯ ಸ್ವರೂಪ ಇಂದು ಬದಲಾಗಿದೆ.ಅಂಗೈಯಲ್ಲಿನ ಸ್ಮಾರ್ಟ್ ಫೋನ್ ಗಳಿಂದಾಗಿ  'ವಿಶ್ವರೂಪ'ದ ದರ್ಶನ ಸಾಧ್ಯವಾಗಿದೆ. ಮನೆಯಲ್ಲಿ ಸ್ಮಾರ್ಟ ಕಂಪ್ಯೂಟರ್ ಗಳು ಬಂದು ಕುಳಿತಿವೆ. ಡಿಜಿಟಲ್  ಮಾಧ್ಯಮಗಳ ಆಧುನಿಕ ತಂತ್ರಜ್ಞಾನ ಅಬಾಲವೃದ್ದರಾದಿಯಾಗಿ ಎಲ್ಲರನ್ನೂ ಸಮ್ಮೋಹನಗೊಳಿಸಿದೆ.

              ನಮ್ಮ ಪೌರಾಣಿಕ ಕಾಲದ ದೇವಾನುದೇವತೆಗಳು ಕುಳಿತಲ್ಲಿಯೇ ತ್ರಿಲೋಕಗಳನ್ನು ಜಾಲಾಡುತ್ತಿದ್ದ ,ನಮಗೆ ಸಿನಿಮಾಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ  'ಮಾಯಾದರ್ಪಣ' ಇಂದು ಬದಲಾದ ಕಾಲಘಟ್ಟದಲ್ಲಿ  'ಅಂತರ್ಜಾಲ' ವೆಂಬ ತಾಂತ್ರಿಕ ಶಕ್ತಿಯಾಗಿ ಹೆಸರು ಪಡೆದು ವಿಶ್ವದ ರಹಸ್ಯಗಳನ್ನೆಲ್ಲಾ ಬಚ್ಚಿಟ್ಟುಕೊಂಡಿರುವ  'ಮಾಯಾಲೋಕ'ವಾಗಿ ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.ವಿದ್ಯಾಲಯಗಳಲ್ಲಿ ಸ್ಮಾರ್ಟ್ ಕ್ಲಾಸ್ ಗಳು ನಿರ್ಮಾಣವಾಗುತ್ತಿವೆ.ಇಂತಹ ಸಂದರ್ಭದ ಈ ತರಬೇತಿ ನಮ್ಮಗೆ ನವಪೀಳಿಗೆಯನ್ನು ಮುನ್ನಡೆಸುವ ಕೈದೀವಿಗೆಯಾಯಿತು ಎಂಬುದರಲ್ಲಿ ಸಂದೇಹವಿಲ್ಲ .


Saturday, 9 June 2018

ಸಮಾಗಮ
ವಿಜ್ಞಾನ ದ ವಾಸ್ತವ
ಸಾಹಿತ್ಯದ ಸೌಂದರ್ಯ
ಬೆರೆಯಲದೊ ಮಾಧುರ್ಯ
ಸವಿಯಲದೊ ಸಹಚರ್ಯ
ಕವಿ ಕಾಣದ್ದು ರವಿ ಕಂಡ
ರವಿ ಕಾಣದ್ದು ವಿಜ್ಞಾನಿ ಕಂಡ
ಸಿಹಿ ಜೇನು ಕಾವ್ಯದೂಟ
ರಸವಾದ ಕವಿಯನೋಟ
ವಿಸ್ಮಯಗಳ ರಸದೌತಣ
ಜ್ಞಾನದ ನವ ಸಂಶೋಧನ
ಸಾಹಿತ್ಯದ ನವರಸಕೆ
ವಿಜ್ಞಾನದ ಸಮರಸ
ನೂರಾರು ನದಿ ಪಯಣ
ಜ್ಞಾನದ ಸಾಗರಕೆ
ಬಗೆ ಬಗೆಯ ಸಂವೇದನೆ
ಅಂತರಂಗ ನಿವೇದನೆ
ಹುಲುಮಾನವ ಜಗದಚ್ಚರಿ
ಕಡಲಾಳದ ಕೌತುಕ
ಸಾಹಿತ್ಯದ ರಸದೌತಣ
ವಿಜ್ಞಾನಕೆ ನವ ಮಂಥನ
ಬೆಳಗಬೇಕು ವಿಶ್ವಚೇತನ
ವಿಜ್ಞಾನದ ಕಲಾದರ್ಶನ
ಜಗವು ಸಂಭ್ರಮಿಸಬೇಕು
ಕಂಡು ಸಮನ್ವಯದ ಬೆರಗು
ಬೆಳಕು ಒಂದು ಭೌತಗುಣ
ಕಲೆಗೆ ಮಹಾದರ್ಶನ
ಇಕ್ಕೆಲಗಳ  ಸಮಾಗಮ
ನವೋದಯದ ಸಂಭ್ರಮ




ಚಹಾ ಮತ್ತು ನಾನು

 ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...