Total Pageviews

Thursday, 1 November 2018

ಕನ್ನಡದ "ಆಮುಕ್ತಮಾಲ್ಯದ"- ಡಾ.ನಿರುಪಮಾ(ಮುಂದುವರೆದ ಭಾಗ)
ಶ್ರೀಕೃಷ್ಣದೇವರಾಯನು ಚೆದುರಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಬಿಡಿ ಪುಷ್ಪಗಳನ್ನೆಲ್ಲ ಆಯ್ದು ತಂದು ಪರಿಮಳಭರಿತ ಹೊಸ ಹೂ ಮಾಲೆಯನ್ನು ಕಟ್ಟಿದಂತಿದೆ ಈ ಮಹಾಕಾವ್ಯ.ಈ ಕಾವ್ಯವನ್ನು ಓದುತ್ತಿದ್ದರೆ ಹಂಪೆಯ ಮೈ ತುಂಬ ತುಂಡರಿಸಿಕೊಂಡು ಸೋತುಬಿದ್ದ  ಶಿಲ್ಪ ಗಳೆಲ್ಲಾ ಜೀವಚೈತನ್ಯ ಪಡೆದು ಸುಂದರ ಕಲಾಕನ್ನಿಕೆಯರಾಗಿ ಕಣ್ಣಮುಂದಿನ ರಂಗದಲ್ಲಿ ನೆನಪುಗಳ ಗೆಜ್ಜೆ ಕಟ್ಟಿಕೊಂಡು ಕಾವ್ಯದ ತಾಳಗತಿಗೆ ತಕ್ಕಂತೆ  ಕುಣಿಯುತ್ತಿರುವಂತೆ ಭಾಸವಾಗುತ್ತದೆ. ಕುಮಾರವ್ಯಾಸ ಭಾರತ ಕಣ್ಣಲಿ ಕುಣಿದಂತೆ ಮಧುರಾಪುರದ ನೈಜ ಚಿತ್ರಣ, ಪುಷ್ಪಲಾವಿಕೆಯರ ವ್ಯಾಪಾರದ ಸೌಂದರ್ಯ ಲಾಲಿತ್ಯ, ವೇಶ್ಯೆಯರ ಅಲಂಕಾರ ಮಜ್ಜನ, ಪ್ರಖರ ಸೂರ್ಯನ ಬಿಸಿಲು ಹೊದ್ದು ಪ್ರಕೃತಿಯ ಅಗ್ನಿಕುಂಡವೇ ಆದ ಗ್ರೀಷ್ಮ ಋತುವಿನ ವರ್ಣನೆ, ಯಮುನಾಚಾರ್ಯನ ಉಪದೇಶ ಗಳು ನಮ್ಮ ಮನೋರಂಗದ ಮೇಲೆ ಒಂದಾದ ಮೇಲೊಂದರಂತೆ ಹೆಣೆದುಕೊಂಡು ಸರಣಿಯ ಸುಂದರ ದೃಶ್ಯಗಳಾಗಿ  ಮೈದಳೆಯುತ್ತವೆ.
ಭಾವತೀವ್ರತೆಯಿಂದ ಪರಕಾಯ ಪ್ರವೇಶವನ್ನುಂಟು ಮಾಡುವ ರೀತಿಯಲ್ಲಿ , ಸ್ವತಃ ರಾಯನೇ ಖುದ್ದಾಗಿ ಸಾಮಾನ್ಯ ಜನಪದ ಸಂಸಾರೊಂದಿಗರ ಮನೆ ಮನೆಯಲ್ಲಿ ವಾಸವಿದ್ದು ಕಂಡಂತೆ ಅವರ ಬದುಕಿನ ಪ್ರತಿ ಕ್ಷಣಗಳನ್ನು ತನ್ನ ಅಂತರ್ ಚಕ್ಷು ಎಂಬ ಸೂಕ್ಷ್ಮ ದರ್ಶಕ ಯಂತ್ರದಿಂದ ಬಹು ಸೂಕ್ಷ್ಮವಾಗಿ ಹಿಗ್ಗಲಿಸಿ ಪರಿಶೀಲಿಸಿದ್ದಾನೆ; ಮನೋಜ್ಞವಾಗಿ ದಾಖಲಿಸಿದ್ದಾನೆ.ಇಂದು ಕೆಂಬಣ್ಣದ  ಧೂಳು  ತುಂಬಿಕೊಂಡು ತನ್ನ ಕಾಲಗರ್ಭದಲ್ಲಿ ಬಾಯಿಬಿಟ್ಟು ಹೇಳಲಾಗದ ಅದೆಷ್ಟೋ ನಿಗೂಢ ಸತ್ಯಗಳನ್ನು ಬಚ್ಚಿಟ್ಟುಕೊಂಡು ನರಳುತ್ತಿದ್ದರೂ  ನಳನಳಿಸುತ್ತಲೇ ತೋರಿಕೆಯ    ಹಸನ್ಮುಖದಿಂದ ತನ್ನೆಡೆಗೆ ಬರುವವರನ್ನೆಲ್ಲಾ ಸ್ವಾಗತಿಸುತ್ತಿರುವ  ಪಾಳು ಬಿದ್ದ  ಹಂಪೆಯು ಈ ಕೃತಿಯ ಒಳಹೊಕ್ಕಾಗ  ತನ್ನ ಕಪ್ಪು ಬಿಳುಪನ್ನು ಕಳಚಿಕೊಂಡು ಸಮೃದ್ಧತೆಯ ಹಸಿರುಸಿರು ತುಂಬಿಕೊಂಡು,ಕಣ್ಣು ಕೋರೈಸುವ ಹೊಂಬಣ್ಣದಿಂದ ಅಲಂಕರಿಸಿಕೊಂಡು, ಪ್ರಜ್ವಲಿಸುವ ಮುತ್ತು ರತ್ನ ಹವಳಗಳ ಹೊಂಬೆಳಕಿನ ಬೀದಿಗಳನ್ನು ಹೊಂದಿ ದೇದೀಪ್ಯಮಾನವಾಗಿ ವಿಜೃಂಭಿಸುವ  ಸಾಮ್ರಾಜ್ಯವಾಗಿ ಪುನರುಜ್ಜೀವ ಪಡೆಯುತ್ತದೆ. 

                ಮಧುರಾಪುರ ನಗರ ವರ್ಣನೆಯ ಸಂದರ್ಭವೊಂದು ಹೀಗಿದೆ"ಮಧುರಾಪುರ ಭೋಗ ಭಾಗ್ಯಗಳಿಂದ ಕೂಡಿದೆ.ಆ ನಗರದ ರಾಜರಲ್ಲದೇ ಸಾಮಾನ್ಯರು ಸಹ ಮರಕತ ಮಾಣಿಕ್ಯದ ಆಭರಣಗಳನ್ನು ಧರಿಸುತ್ತಾರೆ......ಅವರ ಮನೆಗಳ ದ್ವಾರಗಳು, ಹೊಸ್ತಿಲುಗಳು, ಮಕರಸ್ತಂಭಗಳು ಬೆಳ್ಳಿ ಬಂಗಾರದಿಂದ ಅಮೂಲ್ಯ ರತ್ನಗಳ ಅಲಂಕಾರದಿಂದ ಕುಬೇರನ ಭವನವನ್ನು ನೆನಪಿಗೆ ತರುವಂತಿದೆ. ಅತಿ ಎತ್ತರದ ಕೋಟೆ ಬುರುಜುಗಳು ಆಗಸದಲ್ಲಿನ ಸಂಪಿಗೆಯ ಹೂವಿನ ಮಾಲೆಯಂತೆ ಕಂಗೊಳಿಸುತ್ತಿವೆ! ಆ ಕೋಟೆಯ ಸುತ್ತಲೂ ತುಂಬ ಆಳವಾದ ಕಂದಕಗಳು ನೀರಿನಿಂದ ತುಂಬಿ ಮಂದಾಕಿನಿಯನ್ನು ನೆನಪಿಗೆ ತರುತ್ತದೆ. ಪೌರಕಾಂತೆಯರ ಸುಕುಮಾರ ದೇಹದ ಮೇಲೆ ಗಂಧ, ಕಸ್ತೂರಿ,ಕುಂಕುಮ,ಅಗರುಚಂದನಗಳನ್ನು ಲೇಪಿಸುವಾಗ ಇವುಗಳಲ್ಲಿ ಬೆರೆತಿದ್ದರಿಂದ ಆ ಕಂದಕಕ್ಕೆ 'ಭೋಗವತಿ' ಎಂದು ಹೆಸರು ಬಂತು....." ಇಲ್ಲಿ ಮಧುರಾಪುರ ದ ಹೆಸರಿನಲ್ಲಿ ಕೃಷ್ಣದೇವರಾಯ ಬಣ್ಣಿಸಿರುವುದೆಲ್ಲ ತನ್ನ  ಸಾಮ್ರಾಜ್ಯದ ಭೋಗವಿಲಾಸವನ್ನೇ ಎಂದೆನಿಸುತ್ತದೆ. ಈ ಕಾವ್ಯದ ಆರಂಭದ ಭಾಗವಂತೂ ಇದೊಂದು ಶೃಂಗಾರ ಕಾವ್ಯವೆನ್ನುವಷ್ಟರ ಮಟ್ಟಿಗೆ ರಸಮಯವಾಗಿದೆ.
                   ಇಲ್ಲಿ ರಾಯನೆಂಬ ರಸಿಕನಾಡಿದ ಮಾತುಗಳು ಶಶಿಯುದಿಸಿ ಬಂದಂತೆ ಸಹೃದಯರ ಮನದ ತುಂಬೆಲ್ಲಾ ಹಾಲುಬೆಳದಿಂಗಳನ್ನು ಚೆಲ್ಲಿ ಮುದ ನೀಡುತ್ತವೆ.ಇಲ್ಲಿ ಬರುವ ವೇಶ್ಯೆಯರು,ವಿಲ್ಲಿಪುತ್ತೂರಿನ ಸ್ತ್ರೀಯರು, ಲತಾಂಗಿಯರು,ಪುರದಂಗನೆಯರ ಒನಪು- ಒಯ್ಯಾರ,ಹಾಸ್ಯ- ಲಾಸ್ಯಗಳ ಚಿತ್ರಣ  ಶೃಂಗಾರ ರಸದ ನವನವೀನ ಕಲಾಲೋಕಕ್ಕೆ ಓದುಗರನ್ನು ಕರೆದೊಯ್ಯುತ್ತವೆ.ಇಲ್ಲಿ ಶೃಂಗಾರ ರಸ ಮೈಯ್ಯುಕ್ಕಿ ಪ್ರವಾಹೋಪಾದಿಯಲ್ಲಿ ಹರಿಯುತ್ತದೆ. 
"ಆ ಲತಾಂಗಿಯರು ತಮ್ಮ ಮಹಡಿಯ ಮೇಲೆ ನಿಂತು ನೀಳ ಕೇಶ ರಾಶಿಯನ್ನು ಬಿಚ್ಚಿ ಸಿಕ್ಕು ಬಿಡಿಸುತ್ತಿದ್ದಾಗ, ಹೂಗಳನ್ನು ಕುಯ್ಯುತ್ತಿದ್ದಾಗ, ವೀಣೆಯನ್ನು ನುಡಿಸುವಾಗ ಅವರ ಬೆರಳುಗಳು ಒಂದೇ ರೀತಿಯಲ್ಲಿ, ಲಲಿತಸುಕುಮಾರವಾಗಿ, ಲಯಬದ್ಧವಾಗಿ ನೃತ್ಯ ಮಾಡುತ್ತಿರುವಂತೆ ಕಾಣುತ್ತವೆ.ಒಮ್ಮೊಮ್ಮೆ ಆ ಬೆರಳುಗಳನ್ನೇ ಹೂಗಳೆಂದು ಭ್ರಮಿಸಿ ದುಂಬಿಗಳು ಮೋಹಿಸಿ ಎರಗುತ್ತವೆ" ಈ ಕಾವ್ಯದಲ್ಲಿಉಪಮೆಯು ರಾಯನನ್ನು  ಲತಾಂಗಿನಿಯಂತೆ ಬಳಿ ಕರೆದು ಮೋಹಿಸಿದೆ .ಉತ್ಪ್ರೇಕ್ಷೆಯು ರಾಣಿಯಂತೆ ಪಕ್ಕದಲ್ಲಿದ್ದು ಕಾಂತಾಸಂಮ್ಮಿತವನ್ನು ಬೋಧಿಸಲು ನೆರವಾಗಿದೆ. 
         ಮಧುರಾಪುರದ ವನಿತೆಯರು ಮುಡಿದುಕೊಂಡು ಮಹಡಿಯಿಂದ ಕೆಳಗೆಸೆದ ಪುಷ್ಪಗಳು ದಾರಿಹೋಕರಿಗೆ ಆಗಸದಿಂದುದುರುವ ಮುತ್ತುಗಳಾಗಿ ರೂಪು ಪಡೆಯುತ್ತವೆ.ಮುತ್ತುಗಳಾಗಿ ಎಂಬಲ್ಲಿ ಅಲಂಕಾರಗಳು ರಾಯನ ಕೈಯ್ಯಲ್ಲಿ ಪಳಗಿದ ರೀತಿಯನ್ನು ಗಮನಿಸಬೇಕು. ಬಹುಶಃ ಶ್ರೀಕೃಷ್ಣದೇವರಾಯ ತನ್ನ ರಾಜ್ಯದ ಬೀದಿಗಳಲ್ಲಿ ಕಂಡ ಜನಜೀವನದ ಚೆಹರೆಗಳನ್ನೇ ತನ್ನ ಕಾವ್ಯದ ಘಟನೆಗಳನ್ನಾಗಿ ಬಹು ಸುಂದರವಾಗಿ ಬಣ್ಣಿಸಿದ್ದಾನೆ.ತೆಲುಗು ಸಾಹಿತ್ಯದ ಮಹತ್ವದ "ಪ್ರಬಂಧ ಕಾವ್ಯ"ವಾಗಿ ಹೆಸರಾಗಿರುವ ಈ ಕೃತಿಯಲ್ಲಿ  ಪ್ರತಿಯೊಂದು ಪಾತ್ರವೂ ಸಹಜತೆಯಿಂದ ಸರಳತೆಯಿಂದ ಕೂಡಿದೆ. ಇವನಂತೆ ಜನಪದರ ಜೀವನವನ್ನು ಇಷ್ಟೊಂದು ಹತ್ತಿರದಿಂದ ಪರಿಶೀಲಿಸಿ ಉಲ್ಲೇಖಿಸಿದ  ಸಾಮ್ರಾಟ ಮತ್ತೊಬ್ಬನಿಲ್ಲವೆಂದೇ ಹೇಳಬಹುದು. ಬೀದಿಯಲ್ಲಿ ಸಿಕ್ಕ ಶ್ರೀಸಾಮಾನ್ಯ ಹೆಣ್ಣೂ ಕೂಡ ಶ್ರೀಕೃಷ್ಣದೇವರಾಯನ ಲೇಖನಿಯ ಕುಂಚದಲ್ಲಿ ವಿಷ್ಣುವನ್ನೇ ಮಧುವಣಿಗನನ್ನಾಗಿ ಪಡೆದು ಪರಮಶ್ರೇಷ್ಠ ಸ್ಥಾನವನ್ನು ಅಲಂಕರಿಸುತ್ತಾಳೆ. ಗ್ರೀಷ್ಮ,ವಸಂತ,ವರ್ಷಾ ಋತುಗಳ ವರ್ಣನೆಯಲ್ಲಿ  ಪ್ರಕೃತಿಯೂ ಒಂದು ಮಹತ್ವದ ಪಾತ್ರವಾಗಿ ದಾಖಲಾಗಿದೆ.ಮಳೆಗಾಲದ ನಂತರ ಬರುವ 'ಶರದೃತು ಎಂಬ ಯುವತಿಗೆ  ಸೂರ್ಯ ಚಂದ್ರರಿಬ್ಬರೂ ಕಾಂತಿ ಮತ್ತು ಬಣ್ಣಗಳನ್ನು ತೊಡಿಸಿದಂತಿದೆ.
" ಕಬ್ಬಿನ ಜಲ್ಲೆಗಳು ಅತಿ ಎತ್ತರಕ್ಕೆ ಬೆಳೆದು ತೆನೆಗಳಿಂದ ಭಾರವಾಗಿ ಬಿಲ್ಲಿನಂತೆ ಬಗ್ಗುತ್ತಾ ಸಿಹಿಯಾದ ರಸದೊಂದಿಗೆ ತುಂಬಿದೆ.ಈ ಸಿಹಿ ಗಾಳಿ ಪ್ರತಿಯೊಂದು ಹೂವಿಗೂ ಸೋಕಿಸುತ್ತಾ ಪದ್ಮಗಳೊಡನೆ ಚೆಲ್ಲಾಟವಾಡುತ್ತಿದೆ.ಈ ಗಾಳಿಗೆ ಮಾರುಹೋಗಿ ದುಂಬಿಗಳ ಗುಂಪು ಝೇಂಕಾರ ಗೀತೆಯನ್ನಾಲಾಪಿಸುತ್ತಿದೆ." ಹೀಗೆ ಪ್ರಕೃತಿ ವರ್ಣನೆಯು ಅವಕಾಶ ದೊರೆತಾಗೆಲ್ಲ ಮನೋಹರವಾಗಿ  ಮೈದುಂಬಿ ಬಂದಿದೆ. ಮಧುರಾಪುರದ ವನಿತೆಯರೊಂದಿಗೆ ಋತುಗಳೂ ಕೂಡ ಹೆಣ್ಣಾಗಿ ಈ ಕೃತಿಯನ್ನು ಶೃಂಗರಿಸಿವೆ. ವಿಷ್ಣುಚಿತ್ತನ ಮೂಲಕ ವೈಷ್ಣವ ಮತ ಪ್ರತಿಷ್ಠಾಪನೆಯ ಈ ಕಾವ್ಯದ ಬೀಜವಾಗಿದ್ದರೂ ,ಅತ್ಯುತ್ತಮ ಜನಾನುರಾಗಿಯಾಗಿದ್ದ ರಾಯನು ಈ ಕಾವ್ಯದ ಮುಖೇನ ತನ್ನ ಸಾಮ್ರಾಜ್ಯದ  ಸಮಕಾಲೀನ ರಾಜನೀತಿ,ಧರ್ಮ, ಜನಜೀವನ,ಕಲೆ,ಸಾಹಿತ್ಯ ಸಂಸ್ಕೃತಿ,ಜ್ಞಾನ, ವೈರಾಗ್ಯ, ಸಂಪ್ರದಾಯಗಳನ್ನು  ಆ  ಬೀಜದ ಸುತ್ತಲೂ ಆವರಿಸಿರುವ ಹಣ್ಣಿನ ತಿರುಳಿನಂತೆ ಲೇಪಿಸಿ ರಸವತ್ತಾದ ಪಾಕವನ್ನಾಗಿಸಿದ್ದಾನೆ.ಇದೊಂದು ಲೌಕಿಕದಿಂದೊಡಗೂಡಿದ ಅಲೌಕಿಕ ಕಾವ್ಯ.
ಅಲ್ಲಸಾನಿ ಪೆದ್ದನ, ನಂದಿ ತಿಮ್ಮಣ್ಣ, ಧೂರ್ಜಟ ,ಅಯ್ಯೆಲರಾಜ ರಾಭದ್ರ ಕವಿ, ಮಲ್ಲನ, ತೆನಾಲಿ ರಾಮಕೃಷ್ಣ, ಪಿಂಗಳಸೂರನ,ರಾಮರಾಜಭೂಷಣ ರಂತಹ ಅಷ್ಟದಿಗ್ಗಜರಿಗೆ ಆಶ್ರಯವನ್ನಿತ್ತು ಪೋಷಿಸಿ ನಮ್ಮ ನಾಡಿನ ಸಾಹಿತ್ಯ,ಕಲೆ, ಸಂಸ್ಕೃತಿಯ ಹಿರಿಮೆಯನ್ನು ಉತ್ತುಂಗ ಶಿಖರಕ್ಕೇರಿಸಿದ ಸುಪ್ರಭು ಶ್ರೀಕೃಷ್ಣದೇವರಾಯ.ಡಾ.ನಿರುಪಮಾ ರವರು ತೆಲುಗಿನ ಈ "ಆಮುಕ್ತಮಾಲ್ಯದ" ಕಾವ್ಯವನ್ನು  ಒಪ್ಪವಿಟ್ಟು ಕನ್ನಡದ ಅಚ್ಚಿನಲ್ಲಿ ಸುಂದರ ಪುತ್ಥಳಿಯನ್ನಾಗಿ ಎರಕ ಹೊಯ್ದಿದ್ದಾರೆ; ಕನ್ನಡ ದೇವಿಯ ಮುಡಿ
ಯನ್ನು ಎಂದೂ ಬಾಡದ ಈ ಕಾವ್ಯ ಪುಷ್ಪ 'ಮಾಲ್ಯ'ದಿಂದ ಅಲಂಕರಿಸಿ ಮತ್ತಷ್ಟು  ಶೋಭಿಸುವಂತೆ ಮಾಡಿದ್ದಾರೆ.





Wednesday, 31 October 2018

ಕನ್ನಡದ "ಆಮುಕ್ತಮಾಲ್ಯದ"- ಡಾ.ನಿರುಪಮಾ
ನಮ್ಮ ನಾಡು ೬೩ ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂಭ್ರಮದ ಹೊತ್ತಿನಲ್ಲಿ ನನ್ನ ಕೈಗೊಂದು ಮಹತ್ವದ ಕೃತಿ ದಕ್ಕಿದ್ದು, ಅನುಪಮ ಕ್ಷಣಗಳನ್ನು ಮನದುಂಬಿಕೊಳ್ಳಲು ಕಾರಣವಾಯಿತು.ನಮ್ಮ ನಾಡು ಕಂಡ ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಅನ್ವರ್ಥವಾಗಿದ್ದಂತಹ, ನಮ್ಮ ಶ್ರೀಮಂತ ನಾಡು ನುಡಿ ಸಂಸೃತಿಯ ಪರಂಪರೆಗೆ ಹೆಸರಾಗಿದ್ದ, 'ಪೇಯಸ್' ರಂತಹ ವಿದೇಶಿ ಯಾತ್ರಿಕರಿಂದ 'ಸುವರ್ಣಯುಗದ' ಸಾಮ್ರಾಜ್ಯವೆಂದು ಬಣ್ಣಿಸಲ್ಪಟ್ಟು ಧೀಮಂತವಾಗಿ ಬೆಳಗಿದ 'ವಿಜಯನಗರ ಸಾಮ್ರಾಜ್ಯ' ದ ಗತವೈಭವವನ್ನು ಸಾರುವ ಕೃತಿ ಶ್ರೀ ಕೃಷ್ಣದೇವರಾಯ ವಿರಚಿತ "ಆಮುಕ್ತಮಾಲ್ಯದ ".ಯಾವ ರಾಜ್ಯದಲ್ಲಿ ಸುಭದ್ರ ಆಡಳಿತವಿರುತ್ತದೋ ಅಲ್ಲೊಂದು ಸಮೃದ್ಧ ಸಂಸ್ಕೃತಿ ಮೈದಳೆಯುತ್ತದೆ ಎಂಬುದಕ್ಕೆ ನಮ್ಮ ನಾಡನ್ನಾಳಿದ ಕದಂಬರು,ಚಾಲುಕ್ಯರು,ಹೊಯ್ಸಳರು,ರಾಷ್ಟ್ರಕೂಟರು ಹಾಗೂ ವಿಜಯನಗರ ಸಾಮ್ರಾಜ್ಯಗಳೇ ಅತ್ಯುತ್ತಮ  ನಿದರ್ಶನಗಳಾಗಿವೆ. ಅಂತಹ ಒಂದು ಅಭೂತಪೂರ್ವ ಸಂಸ್ಕೃತಿಯ ತವರಾಗಿದ್ದ ವಿಜಯನಗರ ಸಾಮ್ರಾಜ್ಯ ಹೆಸರಿಗೆ ತಕ್ಕಂತೆ ಅನೇಕ  ವಿಜಯಗಳ ಸರಮಾಲೆಗಳನ್ನೇ ಕೊರಳಿಗೆ ಧರಿಸಿಕೊಂಡು, ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬಹುದಾದ ಶಿಲ್ಪ ಕಲೆ,ಸಾಹಿತ್ಯ, ಸಂಗೀತ, ನೃತ್ಯ,ವಾಸ್ತುಶಿಲ್ಪ ದಂತಹ ಲಲಿತಕಲಾಕ್ಷೇತ್ರಗಳೆಂಬ ಗರಿಗಳಿಂದ ಅಲಂಕೃತಗೊಂಡು ಅದರ ಕೀರ್ತಿಕಿರೀಟವು ಕಂಗೊಳಿಸಿ ಮೆರೆದಿದೆ.ಇಂತಹ ಒಂದು ಮಹೋನ್ನತ ಸಾಮ್ರಾಜ್ಯ ಮೈದಾಳಿದ ಪುಣ್ಯಭೂಮಿಯಲ್ಲಿ ನಾವಿದ್ದೇವೆ ಎಂಬುದೇ ಎಲ್ಲ ಕನ್ನಡಿಗರಿಗೆ ಧನ್ಯತೆಯೊಂದಿಗೆ ಸಾರ್ಥಕತೆ ಮತ್ತು ಅಭಿಮಾನವನ್ನು ಮೂಡಿಸುವ ಸಂಗತಿಯಾಗಿದೆ.
ಬಾಲ್ಯದಲ್ಲಿಯೇ ತನ್ನ ಸಹೋದರ ವೀರನರಸಿಂಹನ ದುಷ್ಟತನದಿಂದಾಗಿ ತನ್ನ ಕಣ್ಣುಗಳನ್ನು ಕೀಳಿಸಿಕೊಂಡು ಅನಾಮಿಕನಂತೆ,ಅನಾಥನಂತೆ  ಪ್ರಾಣ ಕಳೆದುಕೊಳ್ಳಬೇಕಾಗಿದ್ದ ತುಳುವ ವಂಶದ ಶ್ರೀ ಕೃಷ್ಣದೇವರಾಯನು, ನಿಷ್ಠಾವಂತ ಮಂತ್ರಿ ಸಾಳ್ವ ತಿಮ್ಮರಸನ ಚಾಣಾಕ್ಷತೆಯಿಂದಾಗಿ ೧೫೦೯ ಆಗಸ್ಟ್ ೭ ರಂದು ಪಟ್ಟವೇರಿ ನಾಡಪ್ರಭುವಾಗಿ ಮೆರೆಯುತ್ತಾನೆ.ಕವಿರಾಜಮಾರ್ಗಕಾರನು
         "ಸುಭಟರ್ಕಳ್ ಕವಿಗಳ್ ಸು
          ಪ್ರಭುಗಳ್ ಚೆಲ್ವರ್ಕಳಭಿಜನರ್ಕಳ್ ಗುಣಿಗಳ್
          ಅಭಿಮಾನಿಗಳತ್ಯುಗ್ರರ್
          ಗಂಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್"
  ಎಂದು ಹೇಳುವ ಈ ಪದ್ಯದಲ್ಲಿನ ಸರ್ವಗುಣಸಂಪನ್ನತೆಗೆ ಅತ್ಯುತ್ತಮ ಉದಾಹರಣೆ ಶ್ರೀಕೃಷ್ಣದೇವರಾಯ ಎಂದರೆ ಅತಿಶಯೋಕ್ತಿಯಾಗಲಾರದು. ಬಾಲ್ಯದಲ್ಲಿಯೇ ಸಂಗೀತ ಸಾಹಿತ್ಯ ಕಲೆ ಸಾಹಸ ಗಳನ್ನು ಶ್ರದ್ಧೆಯಿಂದ ಆರಾಧಿಸಿ, "ಆಂಧ್ರಕವಿತಾ ಪಿತಾಮಹ"ನೆಂದು ಬಿರುದಾಂಕಿತನಾದ ಅಲ್ಲಸಾನಿ ಪೆದ್ದಣ ಮತ್ತು ನಂದಿ ತಿಮ್ಮಣ್ಣರೊಂದಿಗೆ ಒಡನಾಟವನ್ನಿಟ್ಟುಕೊಂಡು ಬೆಳೆದು, ಕವಿಯೂ ಕಲಿಯೂ ಆಗಿ ಇತಿಹಾಸದಾಗಸದಲ್ಲಿ ತನ್ನ ಕೀರ್ತಿಚಂದ್ರನನ್ನು ಶಾಶ್ವತವಾಗಿ ನೆಲೆಗೊಳಿಸಿದವನು ಶ್ರೀಕೃಷ್ಣದೇವರಾಯ.
ತೆಲುಗು ಭಾಷೆಯ ಮಹಾಕಾವ್ಯಗಳಾದ ಅಲ್ಲಸಾನಿ ಪೆದ್ದನ ನ 'ಮನುಚರಿತ್ರೆ',ತೆನಾಲಿ ರಾಮಕೃಷ್ಣನ 'ಪಾಂಡುರಂಗ ಮಹಾತ್ಮೆ',ನಂದಿ ತಿಮ್ಮಣ್ಣನ 'ಪಾರಿಜಾತಾಪಹರಣ',ಧೂರ್ಜಟ ಕವಿಯ 'ಕಾಳಹಸ್ತಿ ಮಹಾತ್ಮೆ',ಪಿಂಗಳಿಸೂರನ 'ಕಳಾ ಪೂರ್ಣೋದಯ ' ಗಳಲ್ಲಿ  ಬಹುಪಾಲು ರಚನೆಯಾಗಿದ್ದು ಕೃಷ್ಣದೇವರಾಯನ ಸಾಹಿತ್ಯ ಮತ್ತು ಸಂಸ್ಕೃತಿಯ ಸುವರ್ಣಯುಗದಲ್ಲಿಯೇ.ಈ ಸಾಲಿಗೆ ಸೇರ್ಪಡೆಯಾದ ಮತ್ತೊಂದು ವಿದ್ವತ್ಪೂರ್ಣ ಮಹಾಕಾವ್ಯವೆಂದರೆ, ಸರಸ್ವತಿ ಕೊರಳ ಮಣಿಹಾರವಾಗಿದ್ದ ಶ್ರೀಕೃಷ್ಣದೇವರಾಯನ "ಆಮುಕ್ತಮಾಲ್ಯದ".
ತೆಲುಗು ಭಾಷೆಯ ಕೃತಿಯಾಗಿದ್ದರೂ ಮೂಲಕ್ಕೆ ಭಂಗ ಬರದಂತೆ ಸ್ವತಂತ್ರ ಕೃತಿಯೆಂಬಂತೆ ಕನ್ನಡೀಕರಿಸಿದವರು  'ಭುವನ ವಿಜಯ' ದಂತಹ ಪ್ರಮುಖ ಕಾದಂಬರಿಗಳನ್ನು ಕೊಡುಗೆಯಾಗಿ ಕೊಟ್ಟ ಕಾದಂಬರಿಗಾರ್ತಿ,ಕಥೆಗಾರ್ತಿ,ಬಹುಭಾಷಾ ವಿಶಾರದೆ,ಸಂಶೋಧಕಿಯರೂ, ಡಾ.ನಿರುಪಮಾ ಎಂದೇ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಖ್ಯಾತರಾದ ಪದ್ಮಾ ಆರ್ ರಾವ್ ರವರು. ಲೇಖಕಿಯೆರೇ ಈ ಕೃತಿಯ ಬಗ್ಗೆ ಪ್ರಸ್ತಾಪಿಸುತ್ತಾ "ಆಮುಕ್ತಮಾಲ್ಯದ "ಕೃತಿಯನ್ನು ನಿರ್ಮಲವಾದ ಮನಸ್ಸಿನಿಂದ ತಪಗೈಯ್ಯುವಂತೆ ಧ್ಯಾನಾಸಕ್ತರಾಗಿ ಓದಿದಾಗ ಮಾತ್ರ ಅದು ತನ್ನ ನಿಗೂಢ ರಹಸ್ಯಗಳನ್ನು ತೆರೆದಿಡಬಲ್ಲದು ಎಂದು ಹೇಳುತ್ತಾರೆ.ಕನ್ನಡದ ಈ ಕೃತಿಯನ್ನು ಓದುವಾಗಲೂ ನಮಗೆ ಅದೇ ಅನುಭವವಾಗುತ್ತದೆ.
ಶ್ರೀಕೃಷ್ಣದೇವರಾಯನು 'ಮದಾಲಸ ಚರಿತ್ರೆ', ಸತ್ಯಾವಧು ಪ್ರೀಣನಂ, ' ಸಕಲ ಕಥಾ ಸಾರಸಂಗ್ರಹ', 'ಜ್ಞಾನಚಿಂತಾಮಣಿ ', 'ರಸಮಂಜರಿ'  ಪ್ರೌಢಕಾವ್ಯಗಳನ್ನು ಸಂಸ್ಕೃತದಲ್ಲಿ ರಚಿಸಿದ್ದು ಇವು ಉಪಲಬ್ಧವಿಲ್ಲ. ಲಭ್ಯವಿರುವ ರಾಯನ ಏಕೈಕ ಕೃತಿ "ಆಮುಕ್ತಮಾಲ್ಯದ" ಆಗಿದೆ ."ಆಮುಕ್ತ " ಎಂದರೆ ಅಲಂಕರಿಸಿಕೊಂಡ," ಮಾಲ್ಯ" ಎಂದರೆ ಹೂ ಮಾಲೆ, "ದ "ಎಂದರೆ ಕೊಟ್ಟವಳು ಎಂದಾಗಿ ಪೂರ್ಣವಾದ ಅರ್ಥ "ಅಲಂಕರಿಸಿಕೊಂಡ ಹೂ ಮಾಲೆಯನ್ನು ಕೊಟ್ಟವಳು " ಎಂದರ್ಥವಾಗುತ್ತದೆ. ತಮಿಳಿನ ಆಳ್ವಾರರ ಕಥೆಯೊಂದು ತೆಲುಗು ಭಾಷೆಯಲ್ಲಿ ಕನ್ನಡದ ರಾಜದುರಂಧರನೂ,ಬಹುಭಾಷಾ ವಿದ್ವಾಂಸನೂ,ರಾಜನೀತಿಶಾಸ್ತ್ರಜ್ಞನೂ ಆದ ಶ್ರೀಕೃಷ್ಣದೇವರಾಯನಿಂದ ಜನ್ಮತಳೆದಿರುವುದು, ತ್ರಿಭಾಷಾ ಸೂತ್ರದಲ್ಲಿ ಪೋಣಿಸಿದ ಮಣಿಹಾರದಂತೆ ಪ್ರಕರ್ಷಿತವಾಗಿದೆ.  ಇಲ್ಲಿಯ  ಕಥೆ ಚಿಕ್ಜದಾಗಿದ್ದರೂ ಚಕ್ಕೆ,ಚೂರ್ಣ, ಮಸಾಲೆಗಳಂತಹ ಪೂರಕ ಘಟನೆಗಳೇ ಬಳಿಸಾರಿ ವಿಜೃಂಭಿಸಿವೆ. ಈ ಕಾವ್ಯದಲ್ಲಿ ಮೂರು ಕಥೆಗಳು ಪ್ರಮುಖವಾಗಿವೆ.
೧.)ಯಮುನಾಚಾರ್ಯರ ಚರಿತ್ರೆ,
೨) ಖಾಂಡಿಕ್ಯ ಕೇಶಿಧ್ವಜರ ಕಥೆ
೩) ಮಾಲದಾಸರಿ ಕಥೆ
ತಮಿಳು ದೇಶದ ವಿಲ್ಲಿಪುತ್ತೂರಿನ ವೈಷ್ಣವ ಭಕ್ತ ವಿಷ್ಣುಚಿತ್ತನ ಸಾಕುಮಗಳು "ಆಂಡಾಳಮ್ಮ "(ತಾಯಿ) ಇವಳು ತಂದೆ ಕಟ್ಟಿದ ಹೂಮಾಲೆಯನ್ನು ವ್ಯಾಮೋಹದಿಂದ ‌  ತಾನೊಂದು ಗಳಿಗೆ ಮುಡಿದ ನಂತರವೇ ದೇವರಿಗೆ ಸಮರ್ಪಿಸುತ್ತಿದ್ದಳು.ಮಗಳ ಈ ಹುಚ್ಚಾಟ  ಗೊತ್ತಾಗಿ ತಂದೆ ವಿಷ್ಣುದೇವರಿಗೆ ಮಗಳು ಮುಡಿಯದ ಹೊಸ ಮಾಲೆಯನ್ನು ತಂದು ಅರ್ಪಿಸುತ್ತಾನೆ.
ಇದರಿಂದ ತೃಪ್ತನಾಗದ ದೇವರು ಕನ್ಯೆ ಮುಡಿದ ಹೂಮಾಲೆಯೇ ಸುಮಧುರವಾದ ಪರಿಮಳಭರಿತವಾಗಿರುತ್ತದೆಂದು ಕನ್ಯೆಯು(ವಿಷ್ಣುಚಿತ್ತನ ಸಾಕುಮಗಳು) ಮುಡಿದ ಪುಷ್ಪಮಾಲೆಯನ್ನೇ ಬಯಸುತ್ತಾನೆ.ಇದರಿಂದ ಆನಂದಿತುಂದಿಲನಾಗಿ ದೇವರ ಕೃಪೆಗೆ ಪಾತ್ರಳಾದ "ಎನ್ನೈ ಆಂಡಾಳ್"(ನನ್ನ ತಾಯಿ) ಎಂದು ಮಗಳನ್ನು ಕೊಂಡಾಡುತ್ತಾನೆ.ದೇವರೇ ತನ್ನನ್ನು ಬಯಸಿರುವಾಗ ತಾನೂ ಕೂಡ ನಮ್ಮ ಚೆನ್ನಮಲ್ಲಿಕಾರ್ಜುನನೊಲಿದ ವಚನಗಾರ್ತಿ ಅಕ್ಕನಂತೆ  ಆ ದೇವರನ್ನೇ ಮದುವೆಯಾಗುತ್ತೇನೆಂದು  ವೃತವಿಡಿದು ಭಕ್ತಿಯನ್ನಾಚರಿಸಿ ಶ್ರೀರಂಗನಾಥನನ್ನೊಲಿಸಿಕೊಂಡು ಮದುವೆಯೂ! ಆಗುತ್ತಾಳೆ. ಇವಳು ದೈವಾರಾಧನೆಗೆ ಹಾಡಿದ ಗೀತೆಗಳೇ ತಮಿಳಿನಲ್ಲಿ "ತಿರುಪ್ಪಾವೈ" ಎಂದು ಪ್ರಖ್ಯಾತವಾಗಿವೆ.ತಮಿಳಿನ ಹನ್ನೆರಡು ಆಳ್ವಾರರಲ್ಲಿ ಈ ವಿಷ್ಣುಚಿತ್ತನೂ,ಆಂಡಾಳಮ್ಮನೂ ಮಹಾವ್ಯಕ್ತಿತ್ವಗಳಾಗಿ ಸ್ಥಾನ ಪಡೆದಿದ್ದಾರೆ.ರಾಯನು ಈ ಚಿಕ್ಜ ಕಥೆಯ ಎಳೆಯನ್ನಿಟ್ಟುಕೊಂಡು, ಸಮುಚಿತ ಘಟನೆಗಳ ರಕ್ತಮಾಂಸವನ್ಬು ತುಂಬಿ,ಜೀವಂತ ದೃಶ್ಯ ಕಾವ್ಯವೊಂದನ್ನು ರಚಿಸಿದ್ದಾನೆ.
ಉತ್ಪ್ರೇಕ್ಷೆ, ಉಪಮಾ ಅಲಂಕಾರಗಳು ಕಾವ್ಯಕ್ಕೆ ಕಳೆಯನ್ನು ತಂದಿವೆ.ಹೀಗೆ ವಿಷ್ಣುಚಿತ್ತ ಹಾಗೂ ಆಂಡಾಳಮ್ಮ ಇವರಿಬ್ಬರ ಚರಿತ್ರೆಯನ್ನು ೭ ಆಶ್ವಾಸಗಳಲ್ಲಿ ಪ್ರೌಢ ಮಹಾಕಾವ್ಯವಾಗಿ ಬರೆಯಲು ಪ್ರೇರೇಪಿಸಿದ್ದೇ ಕನಸಿನಲ್ಲಿ ದರ್ಶನಗೈದು ಆಶೀರ್ವದಿಸಿದ ತನ್ನ ಆರಾಧ್ಯ ದೈವ ಭಗವಾನ್ ವಿಷ್ಣು ಎಂದು ಭಕ್ತಿಯಿಂದ ಸ್ಮರಿಸಿಕೊಳ್ಳುತ್ತಾನೆ. "ವೀರನಾರಾಯಣನೇ ಕವಿ, ಲಿಪಿಕಾರ ಶ್ರೀಕೃಷ್ಣದೇವರಾಯ "ಎಂದು ಕುಮಾರವ್ಯಾಸನಂತೆ ವಿನಮ್ರತೆಯನ್ನೂ ಮೆರೆಯುತ್ತಾನೆ.

                                                      (ಮುಂದುವರೆಯುವುದು...)

Saturday, 13 October 2018

"ಶೀಲಾಗ್ನಿ"

"ಶೀಲಾಗ್ನಿ"

ಬೆತ್ತಲಾದವು ದೊಡ್ಡವರ
ಹೆಬ್ಬಯಕೆಗಳು!
ಕಳಚಿದವು ಧೀಮಂತರ
ಮುಖವಾಡಗಳು!
ಕ್ರಾಂತಿಯನೆಬ್ಬಿಸಿದೆ 
ಜಗದಲಿ ಮೀ ಟೂ
ಹೊರಬೀಳುತಿವೆ
ಎಲ್ಲೆಲ್ಲೋ ನಡೆದ ಮೀಟು
ಬೀಳುತಿವೆ ಖ್ಯಾತರಿಗೆ 
ಏಟಿನ ಮೇಲೇಟು
ಕೇಳಲೆಷ್ಟು ಘೋರವದು
'ಕಲೆಗಾಗಿ ಪಲ್ಲಂಗ'
ಮಾಡದಿರು ಓ ಮನುಜ
ಸೀಮೋಲ್ಲಂಘನ
ಜಾರುತಿವೆ ನಾರುತಿವೆ
ಲಯ ತಪ್ಪಿದ ಹೆಜ್ಜೆಗಳು
ಹಿಂಸಿಸುತಿವೆ ಗತಕಾಲದ 
ದೌರ್ಜನ್ಯದ ಬಾಹುಗಳು
ಇರಿಯುತಿವೆ ಅವಿತು ಹೂತು
ಹೋದ  ಮಾನಭಂಗಗಳು
ಸಾಕೆನಿಸಿದೆ ಕಾಲಗರ್ಭಕೆ
ಹೊತ್ತು ಹೆತ್ತು ಮುಚ್ಚಿ ಸಾಕಿ
ಎದ್ದಿದೆ ಧೂಳು ಕೊಡವಿ
ಅಕ್ಷೋಹಿಣಿ ಮಹಾಸೈನ್ಯ
ಕಾಯುತಿದೆ ಆಕ್ರೋಶದಿ
ಯಾರದಿದೆಯೊ ಬಲಿ ಸರದಿ
ರಣರಂಗದಿ ಬೆಂಕಿಯುಗುಳಿ
ಉರಿಯುತಿದೆ ಧಗಧಗಿಸಿ
ಮನದೊಳಗಣ ಆರದ ಬೆಂಕಿ!
ಕುಣಿಯುತಿದೆ ಶಸ್ತ್ರ ಹಿಡಿದು
ಚಂಡಿಯಂತೆ ಬಲೆ ಬೀಸಿ
ಚಾಮುಂಡಿಯಂತೆ ನೆತ್ತರು
ಶೀಲ ತ್ರಿಶೂಲ ಹಿಡಿದು
ಇನ್ನಾದರೂ ಸಿಗಲಿ ಮುಕ್ತಿ 
ನೊಂದು ಬೆಂದ ನೋವುಗಳಿಗೆ
ಮುದುಡಿಹೋದ ಆಕ್ರಂದನಗಳಿಗೆ
ಎಷ್ಟೋ ಅಹಲ್ಯೆಯರ
ಬೇಯುತಿರುವ ಹೃದಯಗಳಿಗೆ...


Wednesday, 3 October 2018

"೧೫೦ ರ ಗಾಂಧಿ ಜೀವನ ಸಂದೇಶವಾಗಿ...."

"೧೫೦ ರ ಗಾಂಧಿ ಜೀವನ ಸಂದೇಶವಾಗಿ...."
        ಗಾಂಧಿ ಎಂಬ 'ಸತ್ಯ'ವನ್ನು ,ಬಾಪು ಎಂಬ 'ಅಹಿಂಸೆ'ಯನ್ನು, 'ಮಹಾತ್ಮಾ 'ಎಂಬ 'ಶಾಂತಿ'ಯನ್ನು ನಾವು ಅನುಸರಿಸಲಾಗುತ್ತಿಲ್ಲವೆಂಬುದಕ್ಕೆ ಭಾರತ ಮಾತೆಯ ಕಿರೀಟ 'ಜಮ್ಮು ಕಾಶ್ಮೀರ'ದಲ್ಲಿ ಸದಾ ಕೇಳಿಬರುತ್ತಿರುವ ಗುಂಡಿನ ಮೊರೆತ, ಬಾಂಗ್ಲಾದ ಗಡಿಯಲ್ಲಾಗುತ್ತಿರುವ ತಗಾದೆಗಳು, ದಲೈಲಾಮಾರಂಥವರ ಹತ್ಯೆಗೆ ನಡೆಯುತ್ತಿರುವ ಸಂಚುಗಳು, ರೈತರ ಆತ್ಮಹತ್ಯೆಗಳು, ನೇಗಿಲಯೋಗಿಯ ಪ್ರತಿಭಟನೆಗಳು, ನಮ್ಮ ನೆರೆಹೊರೆಯಲ್ಲಾಗುತ್ತಿರುವ ಮರ್ಯಾದಾ ಹತ್ಯೆಗಳು,ಅತ್ಯಾಚಾರಗಳು,ನಕ್ಸಲ್ ದಾಳಿಗಳು  ಜ್ವಲಂತ ನಿದರ್ಶನಗಳಾಗಿವೆ. ಅದಕ್ಕಾಗಿಯೇ ಜಗತ್ತಿನ ಪ್ರಸಿದ್ಧ ವಿಜ್ಞಾನಿ 'ಐನ್ ಸ್ಟೀನ್' ರಕ್ತ ಮಾಂಸಗಳಿಂದ ತುಂಬಿದ ಇಂತಹ ಮಾನವತಾವಾದಿಯೊಬ್ಬ ಈ ಭೂಮಿಯ ಮೇಲೆ ನಡೆದಾಡಿದ್ದ ಎಂಬುದನ್ನು ಮುಂದಿನ ಪೀಳಿಗೆ ನಂಬಲಿಕ್ಕಿಲ್ಲ " ಎಂದು ಭವಿಷ್ಯವನ್ನು ಕಣ್ಣೆದುರಿಗೆ ಕಂಡಂತೆ ಬಣ್ಣಿಸಿದ್ದರು; ಗಾಂಧಿಯವರನ್ನು ಈ ಜಗದ ವಿಸ್ಮಯವೆಂದು ಗುರುತಿಸಿದ್ದರು. ಹೌದು, ನಾವು ಅದ್ಬುತವೆಂದು ಕೊಂಡಾಡುವ ಗಾಂಧೀಜಿಯನ್ನು ನಮ್ಮದೇ ಮನೆಯ ಹಿರಿಯಜ್ಜನೆಂದು  ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
 ಗಾಂಧೀಜಿಯನ್ನು ನಾವು ದೇವಾಲಯದ ಗರ್ಭಗುಡಿಯಲ್ಲಿಟ್ಟು ಆರಾಧಿಸುತ್ತಿದ್ದೇವೆ.ನಗರದ   ವೃತ್ತಗಳಲ್ಲಿ,  ಗಲ್ಲಿಗಳಲ್ಲಿ ಕಂಚಿನ ಅಥವಾ ಶಿಲೆಯ ಮೂರ್ತಿಯನ್ನಾಗಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದೇವೆ.ವರುಷಕ್ಕೊಮ್ಮೆ  ಜಯಂತಿಯಂದು ಅವನ ಮುಂದೆ ತಲೆಬಾಗಿ ಪುಷ್ಪಮಾಲೆ ಸಮರ್ಪಿಸಿ,  "ರಘುಪತಿ ರಾಘವ ರಾಜಾರಾಮ್......ಎಂದು ಭಜಿಸಿ ನಮಿಸುತ್ತಿದ್ದೇವೆ. ಇದನ್ನು ಹೊರತುಪಡಿಸಿ ಗಾಂಧೀಜಿಯನ್ನು ಪ್ರತಿನಿತ್ಯ ನಾವು ಬದುಕಲಾಗುತ್ತಿಲ್ಲ. ಬಾಪು, ತಾತ ಎಂದು ಪುಟ್ಟ ಮಕ್ಕಳ  ಎದೆಯೊಳಗೆ ಗಾಂಧಿಯನ್ನು ಇಳಿಸಲು ಪ್ರಯತ್ನಿಸುವ ನಾವು ನಮ್ಮದೇ ಹೃದಯದೊಳಗೆ ಈ ತಾತನನ್ನು ಅರಿವನ್ನಾಗಿ ಬಿಟ್ಟುಕೊಳ್ಳಲು ಮರೆಯುತ್ತೇವೆ.ಈ ವೈರುಧ್ಯವೇ ಗಾಂಧಿಯನ್ನು ನಮ್ಮಿಂದ ದೂರವಾಗಿಸುತ್ತಿದೆ. ನಮ್ಮ ದೇಶದ ಜನಸಂಖ್ಯೆಯಷ್ಟೇ ಅವರವರ ಭಾವಕ್ಕೆ ತಕ್ಕಂತೆ ಕೋಟಿಗಟ್ಟಲೇ ಗಾಂಧಿಯರನ್ನು ನಾವು ನಮ್ಮಮನಮನೆ ಗಳಲ್ಲಿ ಸೃಷ್ಟಿಸಿಕೊಂಡಿದ್ದೇವೆ. ಆದರೂ ಗಾಂಧೀಜಿ ನಮ್ಮ ಬದುಕನ್ನು ಆವರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ದೇಶದಲ್ಲಿ ಗಾಂಧಿಯವರಷ್ಟು ಚರ್ಚೆಗೊಳಗಾದ, ಚರ್ಚೆಗೊಳಗಾಗುತ್ತಿರುವ ವ್ಯಕ್ತಿತ್ವ ಬೇರೊಂದಿಲ್ಲವೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.
ಗಾಂಧೀಜಿಯವರು ಯಾವುದನ್ನು ತಮಗೆ ನೋವು ಕೊಡುವ ಸಂಗತಿ ಎಂದು  ವಿರೋಧಿಸಿದ್ದರೊ, ನಾವು ಅದನ್ನೇ ಇಂದು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಮಹಾತ್ಮಾ,ಪರಮಾತ್ಮ, ದೇವರು ಎಂದು  ಗಾಂಧಿಯವರನ್ನು ಬಗೆ ಬಗೆಯ    ತೃಪ್ತಿಕರ ಹೆಸರುಗಳಿಂದ  ಆರಾಧಿಸಿ, ಮಾಡಬೇಕಾದ ಕರ್ತವ್ಯಗಳಿಂದ,ಕೈಗೊಳ್ಳಬೇಕಾದ ಕಾರ್ಯಗಳಿಂದ ವಿಮುಖರಾಗುತ್ತಿದ್ದೇವೆ.
ಗಾಂಧಿಯೇ ಬೇರೆ ಈ ನಮ್ಮ ಕಾಲದ ಜೀವನವೇ ಬೇರೆ ಎಂದುಕೊಂಡು ಕಾಲನ ಕುದುರೆಯೇರಿ ಹೊರಟಿದ್ದೇವೆ.ಇವೆರಡರ ಮಧ್ಯದ ಅಂತರ ಕಡಿಮೆಯಾಗದ ಹೊರತು  ನಮ್ಮ ಜೀವನದ ಎಷ್ಟೋ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲಾರದು.ಅಂದರೆ ಈಗಲೂ ಗಾಂಧಿ ನಮಗೆಷ್ಟು ಪ್ರಸ್ತುತವಾಗಿದ್ದಾರೆ ಎಂಬುದನ್ನು ಅಂತರಾವಲೋಕನದ ಮೂಲಕ ಕಂಡುಕೊಳ್ಳಬೇಕಾಗಿದೆ. ನಾವು ನಿಜದಲ್ಲಿ ಗಾಂಧಿಯವರನ್ನಾಚರಿಸಬೇಕಾಗಿದೆ;
ಗಾಂಧಿಯವರ ಸರಳತೆಯನ್ನು ಬದುಕಬೇಕಾಗಿದೆ;ಅವರ ಉದಾತ್ತ ಚಿಂತನೆಯನ್ನು ಜೀವಿಸಬೇಕಾಗಿದೆ;
ನಾವು ಇತ್ತೀಚೆಗೆ  ಎಲ್ಲ ಮಹಾಪುರುಷರ ಹಬ್ಬಗಳನ್ನು ಅವರ ಹುಟ್ಟಿಗನುಗುಣವಾಗಿ ಆಯಾ ಜಾತಿ ಮತ ಪಂಗಡಗಳಿಗೆ ಮಾತ್ರ ಜನನಾಯಕರನ್ನಾಗಿ ಸೀಮಿತಗೊಳಿಸಿ  ವೈಭವೋಪೇತವಾಗಿ ಅವರ ಭಾವಚಿತ್ರಗಳನ್ನು  ಮೆರೆಸುವುದರ ಮೂಲಕ ನಮ್ಮ ಬಾಹ್ಯ ರಾಜಕಾರಣಕ್ಕೆ ತೃಪ್ತಿಯಾಗುವ  ಹಾಗೆ ಆಚರಿಸಿ,ಕುಣಿದು ಕುಪ್ಪಳಿಸುವ ಹೊಸ ಪರಂಪರೆಗೆ ನಾಂದಿ ಹಾಡಿದ್ದೇವೆ! ಕೆಲವು ಹಿರಿಯರಿಗಂತೂ ಈಗೀಗ ತಮ್ಮ ಜಾತಿಯಲ್ಲಿ ಆಗಿಹೋದ ಸಾಧಕರ ಬಗ್ಗೆ ತಿಳಿದುಕೊಳ್ಳುವಂತಾಗಿದೆ  ಅಥವಾ ಈ ಮಹಾಪುರುಷರು ತಮ್ಮ ಜಾತಿಯವರೆ ?  ಎಂದು ಆಶ್ಚರ್ಯ ಪಡುವಂತಾಗಿದೆ!ಆದರೆ ಇಲ್ಲಿಯವರೆಗೆ ಜಾತ್ಯಾತೀತ ಗಾಂಧಿಯವರಿಗೆ ಮಾತ್ರ ಈ ಸ್ವಜಾತಿ ಪೆಡಂಭೂತ ಮೆತ್ತಿಕೊಂಡಿಲ್ಲವೆಂಬುದೇ ಸಮಾಧಾನದ ಸಂಗತಿ.
ಹಾಗಾದರೆ ಗಾಂಧಿ ನಮಗೆಷ್ಟು ಪ್ರಸ್ತುತ ಎಂಬುದನ್ನು ನಿಕಷಕ್ಕೊಳಪಡಿಸುವುದಾದರೆ,ಗಾಂಧಿ ನಮ್ಮ ಜೀವನ ಪಥವಾಗಬೇಕು; ನಮ್ಮ ಕ್ಷಣ ಕ್ಷಣದ ಕರ್ಮಕಾರಣಗಳಲ್ಲಿ ಒಂದಾಗಬೇಕು. ನಾವು ನಡೆಯುವ ಪ್ರತಿ ಹೆಜ್ಜೆಯಲ್ಲಿಯೂ ಗಾಂಧಿ ನಡೆದ ದಾರಿಯ ನೆನಪುಗಳಿರಬೇಕು.  ಪ್ಲೇಟೋ, ಸಾಕ್ರಟೀಸ್,ಅರಿಸ್ಟಾಟಲ್ ರಂಥವರು  ವೈಚಾರಿಕತೆಯನ್ನು ವೈಜ್ಞಾನಿಕತೆಯನ್ನು ಬರೆದು ತತ್ವಜ್ಞಾನಿಗಳಾದರೆ, ಗಾಂಧಿ ವೈಚಾರಿಕತೆಯ ಮೂಲ ಸತ್ವಗಳಾದ  ಸತ್ಯ ,ಶಾಂತಿ, ಅಹಿಂಸೆಗಳನ್ನೇ  ಬದುಕಿ ತೋರಿಸಿದ ದಾರ್ಶನಿಕರಾಗಿದ್ದಾರೆ.ನನ್ನ ಬಾಲ್ಯದ ದಿನಗಳಲ್ಲಿ ನನ್ನದೇ ಮನೆಯ ಅಜ್ಜನಂತೆ ಕೇಳಿದ್ದ ಗಾಂಧಿಯಲ್ಲಿ ಇಂದು ಬದುಕಿನ ತತ್ವಜ್ಞಾನಿಯನ್ನು ಕಾಣುತ್ತಿದ್ದೇನೆ.
ಪಿ .ಲಂಕೇಶ್ ರವರು ತಮ್ಮ  "ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ "ಎಂಬ ಲೇಖನದಲ್ಲಿ "ಬುದ್ಧನ ನುಡಿಮುತ್ತುಗಳನ್ನು ಹೀಗೆ ಉಲ್ಲೇಖಿಸುತ್ತಾರೆ -" ಜಗತ್ತಿಗೆ ನಾನೇ ಕೊನೆಯ ಬುದ್ಧನಲ್ಲ.ನನ್ನ ಸರಳ ತತ್ವ ಪರಿಪಾಲನೆಯಿಂದ ಯಾರು ಬೇಕಾದರೂ ಬುದ್ಧನಾಗಬಹುದು" ಎಂದು ಸರಳ ಸತ್ಯವನ್ನು ಜಗತ್ತಿಗೆ ಅರುಹಿದನು.ಹೀಗೆಂದು  ಬುದ್ಧ ಮಾರ್ಗದೋರಿದರೂ,ನಾವು ಮಾತ್ರ ಬುದ್ಧನನ್ನು ಪರಮದೈವ ವೆಂದು ಆರಾಧಿಸಿ ನಮ್ಮಿಂದ ದೂರವಾದ  ದೈವಪೀಠದಲ್ಲಿ ಶಿಲಾಮೂರ್ತಿಯಾಗಿಯೋ ಅಥವಾ ಲೋಹಮೂರ್ತಿಯಾಗಿಯೋ ಪ್ರತಿಷ್ಠಾಪಿಸುವಲ್ಲಿ ಮಾತ್ರ ನಮ್ಮ ಕರ್ತವ್ಯ ಮುಗಿಯಿತೆಂದು ನಿರಾಳರಾಗಿದ್ದೇವೆ. ಯಾರು ಮೂರ್ತಿ ಆರಾಧನೆಯನ್ನು ಅರ್ಥಹೀನವೆಂದು ವಿರೋಧಿಸಿದ್ದರೋ ಅವರನ್ನೇ  ಕಲಾಮೂರ್ತಿಗಳನ್ನಾಗಿ  ಗಲ್ಲಿ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿ ವರುಷಕ್ಕೊಮ್ಮೆ ಆರಾಧಿಸಿ ಆ ಮಹನೀಯರು ಬದುಕಿದ ತತ್ವಾಚರಣೆಯನ್ನು ಮರೆಯುತ್ತಿದ್ದೇವೆ. ಡಾ.ರಾಜಶೇಖರ ಮಠಪತಿಯವರು ತಮ್ಮ 'ಗಾಂಧಿ' ಕೃತಿಯಲ್ಲಿ "ಗಾಂಧೀಜಿಯವರನ್ನು ಮಹಾತ್ಮ ನೆಂದು ನಮ್ಮಿಂದ ದೂರ ಮಾಡಿಕೊಳ್ಳುವುದಕ್ಕಿಂತ ನಮ್ಮಂತೆಯೇ ರಕ್ತ ಮಾಂಸ, ನೋವು, ನಲಿವು,ಹಠ, ದ್ವಂದ್ವ, ಮೌನ, ಕೋಪ, ಆನಂದಗಳನ್ನೊಂಡ  ಸರಳ ಮನುಷ್ಯನೆಂದು ಸ್ವೀಕರಿಸಿ , ನಮ್ಮ ಬದುಕುಗಳಲ್ಲಿ ನಿತ್ಯಸತ್ಯನನ್ನಾಗಿ ಆಚರಿಸಿ, ಹತ್ತಿರವಾಗಿಸಿಕೊಳ್ಳಬೇಕಾಗಿದೆ" ಎನ್ನುತ್ತಾರೆ.
         ಅಕ್ಕನ ಸಾಲುಗಳಲ್ಲಿನ  ನೆಲದ ಮರೆಯ ನಿಧಾನದಂತೆ, ನಮ್ಮ ಭಾರತೀಯರ ಭಾವದ ಮರೆಯ ಬ್ರಹ್ಮನಾದವರು ಗಾಂಧೀಜಿ. ಗಾಂಧಿಯವರ ಪ್ರಕಾರ ಯಾವುದು ದೇಸಿ ಸಂಸ್ಕೃತಿಯ ಪರಮೋಚ್ಚ ಸಂಕೇತವಾಗಿತ್ತೊ,ಯಾವುದು ಸ್ವಾವಲಂಬಿ ಬದುಕಿನ ಆಧಾರ ಸ್ತಂಭವಾಗಿತ್ತೊ ,ಯಾವುದು ಭಾರತೀಯರ ಎದೆಗಳಲ್ಲಿ ಬೆಚ್ಚಗಿನ ಭಾವವನ್ನು ಮೂಡಿಸಿ ,ಬ್ರಿಟಿಷ್ ಸಂಸ್ಕೃತಿಯ ವಿರುದ್ಧದ ಹೋರಾಟಕ್ಕೊಂದು ಕಿಡಿಯನ್ನು ಹೊತ್ತಿಸಿತ್ತೊ, ಖಾದಿಯನ್ನು ಉತ್ಪಾದಿಸಿ  ಅಂದಿನ  ಕೈಗಾರಿಕೆಗಳಿಗೆಲ್ಲ ಸೂರ್ಯನಂತಿರಬೇಕಾಗಿತ್ತೊ, ಅದೇ "ಚರಕ"ವಿಂದು ನಮ್ಮದೇ ಮನೆಯ ಮೂಲೆಯೊಂದರಲ್ಲಿ   ತನ್ನ ದೇಹದ ಮೂಳೆಗಳನ್ನೆಲ್ಲ ಮುರಿದುಕೊಂಡು ,ಉಸಿರಿಲ್ಲದೆ ಕ್ಷಯರೋಗದಿಂದ ಕ್ಷೀಣಿಸಿ, ಜೇಡಗಳಿಗೆ ಆಶ್ರಯಾದಾತನಾಗಿ, ಪಾಳುಬಿದ್ದಿರುವ ಎದೆಗೂಡಿನಂತೆ ಅವಸಾನದ ಅಂಚಿನಲ್ಲಿರುವ ಪಳೆಯುಳಿಕೆಯಾಗಿದೆ.  ಹೀಗೆ ಕೆಲವು ಮನೆಗಳ ನಿರುಪಯುಕ್ತ ಸರಕು ಕೋಣೆಯಲ್ಲಿ ಮೈಮುರಿದುಕೊಂಡು ಅನಾಥವಾಗಿ ಬಿದ್ದಿರುವ ಚರಕ ಮತ್ತು ಅದರ ತಾಯಿಯಾದ ಕೈಮಗ್ಗದ ಅವಶೇಷಗಳು ವೈಭೋಗದ ಇಂದಿನ  ಆಧುನಿಕ ಜೀವನದಲ್ಲಿ ಗಾಂಧಿಯವರ ದೇಸಿ ಸಂಸ್ಕೃತಿ, ಮೂಲಶಿಕ್ಷಣ ಹಾಗೂ ಗುಡಿಕೈಗಾರಿಕೆಗಳು  ಅನುಭವಿಸುತ್ತಿರುವ ದುಸ್ಥಿತಿಯ ಪ್ರತೀಕವಾಗಿವೆ.
ಒಂದು ಕಾಲದಲ್ಲಿ ನನ್ನವ್ವನ ಕೈಯ್ಯಲ್ಲಿ ತಿರುಗುತ್ತಾ ನೂಲನ್ನು ಸುತ್ತುತ್ತಿದ್ದ  ಗಾಂಧಿ ಚರಕ ತನ್ನ ಪೂರ್ವದ ಜೀವಕಳೆಯನ್ನು ಕಳೆದುಕೊಂಡು ಬೇಡವಾದ ಕೊರಡಾಗಿದೆ.  ಇಂದು ಕೈಮಗ್ಗದ ಸ್ಥಾನವನ್ನು ವಿದ್ಯುತ್ ಮಗ್ಗಗಳು ಆವರಿಸಿಕೊಂಡಿದ್ದರೂ  ಅವುಗಳ ಸ್ಥಿತಿಯೇನೂ ಭಿನ್ನವಾಗಿಲ್ಲ. ನೇಯ್ಗೆಯ ಕುಪ್ಪಸದ  ಖಣಗಳಿಗೆ ಕರ್ನಾಟಕದಲ್ಲಿ ಅಷ್ಟೇ ಏಕೆ ಮಹಾರಾಷ್ಟ್ರದಂತಹ ಹೊರರಾಜ್ಯಗಳಲ್ಲಿಯೂ ಹೆಸರುವಾಸಿಯಾಗಿರುವ ನನ್ನೂರು  ಗುಳೇದಗುಡ್ಡ ಸೇರಿದಂತೆ ಕೆರೂರು, ಅಮೀನಗಡ, ಇಲಕಲ್, ಬನಹಟ್ಟಿ, ಮಹಾಲಿಂಗಪುರ,ಗಜೇಂದ್ರಗಡ ಮುಂತಾದ ಪಟ್ಟಣಗಳು ನೇಕಾರಿಕೆಯ ಗುಡಿ ಸಂಸ್ಕೃತಿಯನ್ನುಳಿಸಿಕೊಳ್ಳಲು ಹೆಣಗಾಡುತ್ತಿವೆ. ನಾಡಿನ ಖ್ಯಾತ ರಂಗಕರ್ಮಿ ಪ್ರಸನ್ನ ರವರು ಚರಕ ಸಂಸ್ಕೃತಿಯ ರಕ್ಷಣೆಗಾಗಿ ಪಣತೊಟ್ಟು, ಸತ್ಯಾಗ್ರಹ ಗಳ ಮೂಲಕ ಸರಕಾರವನ್ನೆಚ್ಚರಿಸುತ್ತಾ ಗಾಂಧಿ ಮಾರ್ಗ
ದಲ್ಲಿ ಅಚಲವಾಗಿ ನಂಬಿಕೆಯಿಟ್ಟು ಮುನ್ನಡೆಯುತ್ತಿದ್ದಾರೆ.  ಖಾದಿಯನ್ನು ಉತ್ಪಾದಿಸುತ್ತಾ ದೇಸಿ ಸಂಸ್ಕೃತಿಯ ಉಳಿವಿಗಾಗಿ ನಾಡಿನಾದ್ಯಂತ  ಸಾಮಾಜಿಕ  ಮೌನಕ್ರಾಂತಿಯನ್ನು ಹುಟ್ಟುಹಾಕುವುದರ ಮೂಲಕ ಸಂಚಲನವನ್ನುಂಟುಮಾಡಿದ್ದಾರೆ. ಜನರಿಂದ ತುಂಬಿ ತುಳುಕಬೇಕಾಗಿದ್ದ, ಗಾಂಧೀಜಿಯವರ ಸ್ವಾವಲಂಬಿ ಬದುಕಿನ ಮಾರ್ಗವಾಗಿದ್ದ ಖಾದಿ ಗ್ರಾಮೋದ್ಯೋಗ ಕೇಂದ್ರಗಳು ಸೊರಗುತ್ತಿವೆ. ಈ ಕೇಂದ್ರಗಳನ್ನು ಬದಲಾದ ಕಾಲಘಟ್ಟಕ್ಕನುಗುಣವಾಗಿ ಪುನಶ್ಚೇತನಗೊಳಿಸಬೇಕಾದ ಅಗತ್ಯವಿದೆ.


Thursday, 6 September 2018

ಅಜಾತಶತ್ರು

ಅಜಾತಶತ್ರು
ವಾಗ್ಬಾಣಗಳ ಚತುರ ಕವಿ
ಕಾವ್ಯಶಿಲ್ಪಿ ಶ್ರೀ ವಾಜಪೇಯಿ
ರಾಜಕಾರಣಕೆ ಪಾಠ ಹೇಳಿದ
ಸದನದ ಕಲಿ ಭಾರತ  ಭೀಷ್ಮ

ಅಸ್ತಂಗತ ಮುತ್ಸದ್ದಿಯ ನೇಸರ
ಯುಗನಾಯಕನೀ ಭಾರತ ಭೂಶಿರ
ಮೊಳಗಿಸಿದೆ  ಪಾಂಚಜನ್ಯವ
ಸದ್ದಡಗಿಸಿದೆ ಶತ್ರುಪುಂಜವ
ಬೆಳಗಿದೆ ದೇಶ ನಿನ್ನಯ ಕಾಂತಿಗೆ
ಹೆಮ್ಮೆಯ ಪುತ್ರ ಭಾರತ ಮಾತೆಗೆ
ಬೆರಗಾಗಿದೆ ಜಗವು ನಿನ್ನಾರ್ಭಟಕೆ
ವಿಸ್ಮಯಗೊಂಡಿದೆ ನಿನ್ನಯ ಶಾಂತಿಗೆ

ಶಕ್ತಿ ಯುಕ್ತಿಗಳ ಸಮನ್ವಯದಾತ
ಚತುರಮತಿಯ ಆಡಳಿತದೂತ
ರಾಜತಂತ್ರದ ವಿಕಾಸಪುರುಷ
ರಾಜಕಾರಣಿಗಳ ಮಣಿಪರುಷ
ಪ್ರಧಾನಿಯ ಪದಕೆ ನೀ ಅನ್ವರ್ಥ
ಸಂಸತ್ ಪಟುವಿಗೆ ನೀನೇ ಪಾರ್ಥ
ಅನ್ಯರು ಹೊಗಳುವ ಅಜಾತಶತ್ರು
ಕಂಡ ಕನಸಿನ ವಿಕಾಸದ ಕರ್ತೃ

ಜನಸೇವೆಯೇ ಜನಾರ್ಧನ ಸೇವೆ
ತೋರಿದೆ ನೀನು ಓ ಕವಿಹೃದಯಿ
ಭಾರತಮಾತೆಯ ಕೀರ್ತಿ ಪತಾಕೆ
ವಿಶ್ವಕೆ ತೋರಿದ ಮಹಾಮಾತೃಕೆ




ಅಜಾತಶತ್ರು
ವಾಗ್ಬಾಣಗಳ ಚತುರ ಕವಿ
ಕಾವ್ಯಶಿಲ್ಪಿ ಶ್ರೀ ವಾಜಪೇಯಿ
ರಾಜಕಾರಣಕೆ ಪಾಠ ಹೇಳಿದ
ಸದನದ ಕಲಿ ಭಾರತ  ಭೀಷ್ಮ

ಅಸ್ತಂಗತ ಮುತ್ಸದ್ದಿಯ ನೇಸರ
ಯುಗನಾಯಕನೀ ಭಾರತ ಭೂಶಿರ
ಮೊಳಗಿಸಿದೆ  ಪಾಂಚಜನ್ಯವ
ಸದ್ದಡಗಿಸಿದೆ ಶತ್ರುಪುಂಜವ
ಬೆಳಗಿದೆ ದೇಶ ನಿನ್ನಯ ಕಾಂತಿಗೆ
ಹೆಮ್ಮೆಯ ಪುತ್ರ ಭಾರತ ಮಾತೆಗೆ
ಬೆರಗಾಗಿದೆ ಜಗವು ನಿನ್ನಾರ್ಭಟಕೆ
ವಿಸ್ಮಯಗೊಂಡಿದೆ ನಿನ್ನಯ ಶಾಂತಿಗೆ

ಶಕ್ತಿ ಯುಕ್ತಿಗಳ ಸಮನ್ವಯದಾತ
ಚತುರಮತಿಯ ಆಡಳಿತದೂತ
ರಾಜತಂತ್ರದ ವಿಕಾಸಪುರುಷ
ರಾಜಕಾರಣಿಗಳ ಮಣಿಪರುಷ
ಪ್ರಧಾನಿಯ ಪದಕೆ ನೀ ಅನ್ವರ್ಥ
ಸಂಸತ್ ಪಟುವಿಗೆ ನೀನೇ ಪಾರ್ಥ
ಅನ್ಯರು ಹೊಗಳುವ ಅಜಾತಶತ್ರು
ಕಂಡ ಕನಸಿನ ವಿಕಾಸದ ಕರ್ತೃ

ಜನಸೇವೆಯೇ ಜನಾರ್ಧನ ಸೇವೆ
ತೋರಿದೆ ನೀನು ಓ ಕವಿಹೃದಯಿ
ಭಾರತಮಾತೆಯ ಕೀರ್ತಿ ಪತಾಕೆ
ವಿಶ್ವಕೆ ತೋರಿದ ಮಹಾಮಾತೃಕೆ





Sunday, 12 August 2018

ದರ್ಶನದ ಬೆಳಕಿನಲ್ಲಿ.....(ಭಾಗ 2)

ಡಾ.ಗುರುಲಿಂಗ ಕಾಪಸೆಯವರು ಕುವೆಂಪುರವರು ಹೇಗೆ ತಮ್ಮ  ಮಹಾಕಾವ್ಯದಲ್ಲಿ ಮನಶಾಸ್ತ್ರೀಯ ಹಿನ್ನೆಲೆಯಲ್ಲಿ ಪಾತ್ರಗಳನ್ನು ರೂಪಿಸಿದ್ದರು ಎಂಬುದಕ್ಕೆ ಮಂಥರೆಯ ಪಾತ್ರವನ್ನು ನಿದರ್ಶನವಾಗಿ ನೀಡುತ್ತಾರೆ. ಕನಿಷ್ಠ ತಂದೆ ತಾಯಿಗೂ  ಬೇಡವಾದ,  ಬೀದಿಯಲ್ಲಿ ಅನಾಥ ಮಗುವಾಗಿ ಮಲಗಿದ್ದ ದುರಾದೃಷ್ಟ  ಮಂಥರೆಯು ಕ್ರಮೇಣ ಗೂನು ಬೆನ್ನು,ನಡುಗುವ ವಿಕಾರ ದೇಹಾಕೃತಿಯನ್ನು ಹೊಂದಿ ತನಗೆ ಬಾಲ್ಯದಲ್ಲಿ ಸಿಗಬೇಕಾಗಿದ್ದ ಸಹಜ ಮಾತೃವಾತ್ಸಲ್ಯದಿಂದ ವಂಚಿತಳಾಗಿ ಸರ್ವರಿಂದಲೂ ತಿರಸ್ಕೃತಳಾಗುತ್ತಾಳೆ. ಅವಳ ಸುಪ್ತ ಮನಸ್ಸಿನ ಈ ಅತೃಪ್ತ ನೋವು ಮುಂದೆ ರಾಮಾಯಣಕ್ಕೆ ಕಾರಣವಾಗುತ್ತದೆ ಎಂದು ಕಾಪಸೆಯವರು ಪ್ರತಿಪಾದಿಸುತ್ತಾರೆ.
ಒಂದು ದಿನ ಹಸುಳೆ ರಾಮ ಮುಗಿಲ ಚಂದ್ರನನ್ನು ಕಂಡು ಆಕರ್ತಷಿತನಾಗಿ ಆ ಚಂದ್ರ ತನಗೆ ಬೇಕೆಂದು ಮಗುಸಹಜ ಹಟವಿಡಿದಾಗ ಅರಮನೆಯ ಎಲ್ಲರೂ ರಾಜನನ್ನು ಸಂತೈಸುವಲ್ಲಿ ವಿಫಲರಾಗುತ್ತಾರೆ.ಆಗ ಮಂಥರೆ ಕನ್ನಡಿಯನ್ನು ತಂದು ಚಂದ್ರನನ್ನು ತೋರಿದಾಗ ರಾಮ ನಲಿಯುತ್ತಾನೆ. ಮುದ್ದಾಡುವ ಹಂಬಲದಿಂದ ಮಂಥರೆ ಮಗುವನ್ನು ಬರಸೆಳೆಯುವಾಗ ತಾಯಿ ಕೌಸಲ್ಯೆ ತಡೆದು 'ಗೂನೆ, ಕುಬ್ಜೆ,ಕೂಸನ್ನು ಸ್ಪರ್ಶಿಸಿದರೆ ಅಮಂಗಳವಾದೀತು ' ಎಂದು ತಡೆದು ಮೂದಲಿಸುತ್ತಾಳೆ.
             ಇದರಿಂದ ಕುಪಿತಗೊಂಡ ಅವಳ ಮಮತೆಯ  ಮನಸಿನಲ್ಲಿ  ಈ ಅಪಮಾನದ ಬೀಜ ಹೆಮ್ಮರವಾಗಿ ಬೆಳೆದು ಮುಂದೆ  ರಾಮನನ್ನು ಕಾಡಿಗೆ ಕಳುಹಿಸುವುದರಲ್ಲಿ ತಪ್ತವಾಗುತ್ತದೆ ಎಂಬುದನ್ನು ಗುರುತಿಸುತ್ತಾರೆ. ಈ ಮನಶಾಸ್ತ್ರೀಯ  ದೃಷ್ಡಿಕೋನವನ್ನೇ ಇನ್ನಷ್ಟು ವಿಸ್ತರಿಸುವುದಾದರೆ, ರಾವಣನು   ಸ್ವಯಂವರದಲ್ಲಿ ಸೀತೆಯನ್ನು ಗೆಲ್ಲಲಾಗದೆ ಅಪಹಾಸ್ಯಕ್ಕಿಡಾಗಿ   ಈಡೇರದ ಬಯಕೆಯಾಗಿಯೇ ಉಳಿದ ರಾವಣನ ಅತೃಪ್ತ ಮನಸಿನ 'ತೀರದ ಆಸೆ' ಸೀತೆಯನ್ನು ಅಪಹರಿಸುವಲ್ಲಿ ಮುಕ್ತಿ ಕಾಣುತ್ತದೆ ಎಂದು ವಿಶ್ಲೇಷಿಸಬಹುದು.ಊರ್ಮಿಳೆಯ ಪತಿಭಕ್ತಿಯ ಮನಸ್ಸನ್ನು ಕುವೆಂಪುರವರು ತಪಸ್ಸಿನ ಸಾತ್ವಿಕ ಶಕ್ತಿಯ ಕಡೆಗೆ ತಿರುಗಿಸುತ್ತಾರೆ.
ರಾಮ ಲಕ್ಷ್ಮಣರು ಕಾಡಿನೊಳಗೆ ಬರುತ್ತಿರುವಾಗ ಧುತ್ತನೆ ಪ್ರತ್ಯಕ್ಷವಾದ  ಕೈಗಳಿಲ್ಲದ ದೈತ್ಯಾಕಾರದ ರಕ್ಕಸನ ರೂಪವನ್ನು, ಮನಶಾಸ್ತ್ರೀಯ ಹಿನ್ನಲೆಯಲ್ಲಿ ಅವಲೋಕಿಸಿದಾಗ ಅದು  ಸೀತೆಯನ್ನು ಕಳೆದುಕೊಂಡ ದುಃಖದಿಂದ ರಾಮನ ಮನದಲ್ಲಿ ಸೃಷ್ಟಿಯಾದ ಮಾನಸಿಕ ಪ್ರಕ್ಷುಬ್ಧತೆ ತೊಳಲಾಟಗಳೆ ಕಣ್ಣೆದುರಿನ ರಕ್ಕಸ ರೂಪವಾಗಿ ಮೈವೆತ್ತಂತೆ ಭಾಸವಾಗುತ್ತದೆ.
ಇದಕ್ಕೆ ಪುಷ್ಟಿ ನೀಡುವಂತೆ, ತನ್ನ ತಮ್ಮ ಲಕ್ಷ್ಮಣನಿಗೆ ಪ್ರಾಣ ಉಳಿಸಿಕೊಳ್ಳಲು 'ಓಡು ಇಲ್ಲಿಂದ ತಪ್ಪಿಸಿಕೊ' ಎಂಬ ಹೆದರಿಕೆಯ ಮಾತುಗಳನ್ನು  ಸರ್ವಶಕ್ತ ರಾಮ ಆಡುತ್ತಾನೆಂದರೆ ಅವನಲ್ಲಿ ಮನೆ ಮಾಡಿದ್ದ ಸೀತಾಕಾರಣ ದ ಮಾನಸಿಕ ಹೊಯ್ದಾಟ ಹಾಗೂ ದುಃಖಗಳು ಹೇಗೆ ಅವನ ತನುಮನಗಳನ್ನಾವರಿಸಿ ಅಶಕ್ತತೆಯನ್ನು ತಂದಿತ್ತು ಎಂಬುದರ  ಅರಿವು ನಮಗಾಗದಿರದು. ಹೀಗೆ ಮನಶಾಸ್ತ್ರವನ್ನು ತಮ್ಮ ಕಾವ್ಯದಲ್ಲಿ ಒಂದು ಅನ್ವಯಿಕ ವಿಜ್ಞಾನವಾಗಿ ಅತ್ತ್ಯಂತ ಸಮರ್ಥವಾಗಿ ಬಳಸಿದವರು ಕುವೆಂಪುರವರು. ಈ ರಾಮಾಯಣದರ್ಶನಂ ಎಂಬ ಕವಿಯ ಕಾವ್ಯದ ಮೂಸೆಯಲ್ಲಿ ಇಲ್ಲಿಯ  ಪ್ರತಿಯೊಂದು  ಪಾತ್ರವೂ ತಮ್ಮ ವ್ಯಕ್ತಿತ್ವದ ಕಲ್ಮಶಗಳನ್ನೆಲ್ಲಾ ಕಳೆದುಕೊಂಡು ಆತ್ಮೋದ್ಧಾರದ ಉನ್ನತ ಶೃಂಗವೇರಿ ಅಪ್ಪಟ ಸುವರ್ಣವಾಗಿ ಕಂಗೊಳಿಸುತ್ತವೆ.ಇಲ್ಲಿ ಬರುವ ಸೂತ್ರಧಾರಿ  ಕೈಕೆಗೂ ಕೂಡ ರಾಮನು 'ತಾಯಿ, ನನ್ನನ್ನು ಸೇರಿ ಈ ರಾಮಾಯಣದ ಹಲವಾರು  ಜೀವಗಳ ಉದ್ಧಾರಕ್ಕೆ ಕಾರಣವಾಗಿರುವ ನೀನೇ ಅತಿ ಮುಖ್ಯಳು.'ಎಂಬ   ವಾಕ್ಯಗಳಿಂದ ಅವಳಿಗೂ ಆತ್ಮವಿಕಾಸದ ಹಾದಿಯನ್ನು  ಕಲ್ಪಿಸುತ್ತಾರೆ ಕುವೆಂಪುರವರು.
ಕುವೆಂಪುರವರ ದರ್ಶನದ ಕಣ್ಣಿಗೆ ಬಿದ್ದ ಮತ್ತೊಂದು ಮಮತಾಮಯಿ ಪಾತ್ರವೆಂದರೆ ಶಬರಿಯದು.ಅವಳಿಗಾಗಿ 'ಶಬರಿಗಾದನು ಅತಿಥಿ ದಾಶರಥಿ' ಎಂಬ ಇಡೀ ಅಧ್ಯಾಯವೇ ಮೀಸಲಾಗಿದೆ. ಇಲ್ಲಿಯ  ಶಬರಿಯ ಪಾತ್ರವಂತೂ ಮಮತೆಯ ಕಡಲಾಗಿ ಉಕ್ಕಿಹರಿಯುವ  ಮಾತೃಹೃದಯದ ಪ್ರತೀಕವಾಗಿದೆ.'ರಾಮನ ದರ್ಶನಕ್ಕಾಗಿ ಹಗಲು ರಾತ್ರಿಗಳೆನ್ನದೆ ಕನಸು ಮನಸುಗಳಲ್ಲಿಯೂ ರಾಮ ಮಂತ್ರವನ್ನೇ ಜಪಿಸುತ್ತಾ    ಪ್ರತಿಕ್ಷಣವೂ  ತುಡಿಯುವ ಅವಳ ಕಾಯುವಿಕೆ ತಪಸ್ಸಾಗಿ ಪರಿಣಮಿಸಿದೆ.
ಸುತ್ತಲೂ ಹಸಿರು ಚೆಲ್ಲಿದ ಆವರಣ ಹೊಂದಿದ ಗುಡಿಸಿಲಿನಲ್ಲಿ ತನ್ನ ಬದುಕಿನ ಸಂಧ್ಯಾಕಾಲದಲ್ಲಿ ಯಾವುದೇ ಕ್ಷಣದಲ್ಲೂ ಬಿದ್ದುಹೋಗಬಹುದಾದ  ನಡುಗುವ ಮುಪ್ಪಾದ  ದೇಹವನ್ನು ಹೊತ್ತು , ಜೇನು, ಹಣ್ಣು ಹಂಪಲಗಳನ್ನು ಹಿಡಿದು'ಎಲ್ಲಿರುವನೊ, ಎಂದು ಬರುವನೊ ನನ್ನಯ್ಯ,ದೃಷ್ಟಿ  ಮಂಜಾಗಿ ಕಳೆದುಹೋಗುವುದಕ್ಕಿಂತ  ಮುನ್ನ  ದರ್ಶನ ನೀಡು'  ಎಂದು ರಾಮನಿಗಾಗಿಯೇ ಜೀವವನ್ನು ಹಿಡಿದುಕೊಂಡಿರುವ ಶಬರಿಯ  ರಾಮನೆಡೆಗಿನ ಶ್ರದ್ಧೆ, ಭಕ್ತಿ ವಾತ್ಸಲ್ಯಗಳು ಅವಳನ್ನು ಅಮರಳನ್ನಾಗಿಸಿದೆ; ಕುವೆಂಪುರವರ ಕವಿದರ್ಶನದಲ್ಲಿ ಶಬರಿ
"ಕಣ್ಮುಚ್ಚಿದಳು ಆ ಅಮರ ಸನ್ಮಾನ್ಯೆ
ದೇವ ಸೀತಾನಾಥ ದಿವ್ಯಶ್ರು
ತೀರ್ಥ ಜಲ ಸಂಸ್ನಾತೆ ಸಂಪೂತೆ
ಮರಣದ ಶಿವಕಳೇಬರೆ ಧನ್ಯೆ" 
ಎಂದು ಕವಿಯ ಶಬ್ದಮಜ್ಜನದ ಮೂಲಕ  ಸನ್ಮಾನಿತಳಾಗುತ್ತಾಳೆ.
ಕಾಡಿನ ಮಡಿಲಲ್ಲಿ ಅವಳು ಮಮತೆಯ ಹೂವಾಗಿದ್ದಾಳೆ.
ರಾಮ ಮತ್ತು ಲಕ್ಷ್ಮಣರು ಶಬರಿಯ ಆಶ್ರಮಕ್ಕೆ  ಬಂದಾಗ ತಡವಾಗಿ ಗುರುತಿಸಿದ ತಕ್ಷಣ ಆಕೆಯಲ್ಲಿ ಸ್ಫುರಿಸಿದ ಆತ್ಮಾನಂದಕ್ಕೆ ಪಾರವೇ ಇಲ್ಲ ಅವಳ ಪ್ರಾಣ ಪಾತ್ರೆ  ರಾಮದರ್ಶನದಿಂದುಂಟಾದ ಪರಮಾನಂದದಿಂದ  ತುಂಬಿ ಹೋಯಿತು.ಸೀತೆಯ ದುಃಖದಲ್ಲಿ ಕಳೆಗುಂದಿದ ರಾಮನ ಶಕ್ತಿಯನ್ನು  ತನ್ನ ನಿರ್ಮಲ ತಪೋತೇಜದಿಂದ ಪುನಶ್ಚೇತನಗೊಳಿಸುತ್ತಾಳೆ.

ಕುವೆಂಪು ರವರ ದಾರ್ಶನಿಕ ದೃಷ್ಟಿ ಭವ್ಯ ಮಹೇಂದ್ರಾಚಲದ ಮೇಲೆ ನಿಂತು ಪರ್ವತವನೊತ್ತಿ ನಭಕ್ಕೆ ಚಿಮ್ಮಿದ ಆಂಜನೇಯನ ಯೌಗಿಕ ಅನಂತಶಕ್ತಿಯನ್ನೂ ಬಿಟ್ಟಿಲ್ಲ. ಶ್ರದ್ಧೆ ನಿರ್ಮಲ ಪ್ರೇಮ ಭಕ್ತಿ ವಾತ್ಸಲ್ಯಗಳ ಆಗರವಾದ ಶಬರಿಯಲ್ಲಡಗಿರುವ ಸಾತ್ವಿಕ ಶಕ್ತಿಯನ್ನೂ ಬಿಟ್ಟಿಲ್ಲ; ಊರ್ಮಿಳೆಯು ಪತಿಗಾಗಿ ಕಾಯುವ  ಪತಿಭಕ್ತಿಯ ತಪಸ್ಸನ್ನೂ ಬಿಟ್ಟಿಲ್ಲ.ದುಷ್ಟೆ ಎಂದು ಹಣೆಪಟ್ಟಿ ಹೊತ್ತು ಮೂಲರಾಮಾಯಣದಲ್ಲಿ ತಿರಸ್ಕಾರಕ್ಕೊಳಗಾದ ಈಗಲೂ ನಾವು ನಮ್ಮೊಳಗೆ ಕರುಣೆಯ ಹೃದಯದಲ್ಲಿ ಸ್ಥಾನ ಕಲ್ಪಿಸಲು  ಹಿಂಜರಿಯುತ್ತಿರುವ ಮಂಥರೆಯ ಕೈಕೆಯೆಡೆಗಿನ ಮಮತೆಯನ್ನೂ ಬಿಟ್ಟಿಲ್ಲ;ರಾಮಚಂದ್ರನಂತೂ ಕಥೆಯ ನಾಯಕನಾಗಿದ್ದು, ಅವನ ಸರ್ವಸ್ವವೂ ಕವಿಯ ದರ್ಶನದ ಕಣ್ಣಿಗೆ  ಹಿಮಾಲಯವಾಗಿ ದೃಗ್ಗೋಚರವಾಗಿದೆ.ರಾಮ ಇಲ್ಲಿ ಕೇವಲ  ವ್ಯಕ್ತಿಯಾಗಿ ಬಣ್ಣಿಸಲ್ಪಟ್ಟಿಲ್ಲ,ರಾಮಾಯಣದಲ್ಲಿ ತನ್ನ ಪ್ರಭಾವಲಯಕ್ಕೆ ಬರುವ ಸಕಲ ಜೀವಾತ್ಮಗಳಿಗೆ ಲೇಸನೇ ಬಯಸುವ, ಆತ್ಮೋಧ್ಧಾರದ ಮಾರ್ಗವನ್ನು ಕರುಣಿಸುವ ತಪಶ್ಶಾಲಿಯಾಗಿ ತೋರುತ್ತಾನೆ.ಸರ್ವರಿಗೂ  ಮುಕ್ತಿಯ ಪಥವನ್ನು ದಯಪಾಲಿಸುವ ಮಹಾಮಹಿಮನಾಗಿ  ಹೊಳೆಯುತ್ತಾನೆ.ಕುವೆಂಪುರವರು"ಪುಟ್ಟಪ್ಪ ಎಂದು  ಕರೆಯಲ್ಪಡುವ , ಕಾವ್ಯ ಗಾನಗೈಯ್ಯುತ್ತಿರುವ ಈ ಪರಪುಟ್ಟನನ್ನು ಹರಸು" ಎಂದು  ಸರಸ್ವತಿಯನ್ನು ವಿನಮ್ರವಾಗಿ ತಮ್ಮ ಕಾವ್ಯದಲ್ಲಿ  ಸ್ತುತಿಸುತ್ತಾರೆ.ತಮ್ಮ ಸಾಹಿತ್ಯದ ಮೂಲಕ ಯಾರೂ ತಲುಪಲಾಗದ  ವಿರಾಟ್ ದರ್ಶನವನ್ನು, ಭವ್ಯತೆಯ ಮಹೋನ್ನತಿಯನ್ನು  ವಿಶ್ವಕ್ಕೆ ಕೊಡುಗೆಯಾಗಿ ನೀಡಿದ ದಾರ್ಶನಿಕ ಮಹಾಕವಿಯಾಗಿ, ಸಾರಸ್ವತ ಲೋಕದಲ್ಲಿ ದರ್ಶನ ಸೂರ್ಯರಾಗಿ ಅಜರಾಮರರಾದವರು ಕುವೆಂಪುರವರು.
ನಮ್ಮ  ಆಧುನಿಕ ಕಾಲಘಟ್ಟದ ಸಮಾಜದಲ್ಲಿ ಎಷ್ಟೋ ಜನ ಅತೃಪ್ತ ರಾವಣರು ಹೆಣ್ಣುಮಕ್ಕಳನ್ನು ಇನ್ನಿಲ್ಲದಂತೆ ಹಿಂಸಿಸುತ್ತಿದ್ದಾರೆ.  ಮಾತಾಪಿತೃಗಳ  ಪ್ರೀತಿ ವಾತ್ಸಲ್ಯವಂಚಿತ ಅಸಂಖ್ಯಾತ ಅನಾಥ2ಮಂಥರೆಯರು ಸಮಾಜದಿಂದ ತಿರಸ್ಕೃತರಾಗಿ ನರಳುತ್ತಿದ್ದಾರೆ. ತಮ್ಮ ಕೈಕೆಯಂತಹ ರಾಣಿಯರ  ಮೋಹದ ಬಲೆಯಲ್ಲಿ ಸಿಲುಕಿದ ಎಷ್ಟೋ ಆಧುನಿಕ ದಶರಥರು ತಮ್ಮ ಮಕ್ಕಳನ್ನು ಹೊರಹಾಕಿ ಪ್ರೀತಿ ವಾತ್ಸಲದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ.ಅಸಂಖ್ಯಾತ ಆಧುನಿಕ ವಾಲಿ ಸುಗ್ರೀವ ರಂತಹ ಸಹೋದರರು ಅಪನಂಬಿಕೆಯಿಂದ  ಪರಸ್ಪರ  ಕದನಗೈದು ನಾಶವಾಗುತ್ತಿದ್ದಾರೆ.ಇವರೆಲ್ಲರನ್ನೂ ಆತ್ಮೋನ್ಮತಿಯ ಅನಂತತೆಯ ಕಡೆಗೆ ಉದ್ಧಾರದ ಮಹೋನ್ನತಿಯ ಕಡೆಗೆ ಕರೆದೊಯ್ಯಬೇಕಾದ ರಾಮ ನಂಥವರ ಅವಶ್ಯಕತೆ ಇಂದಿನ ನಮ್ಮ ಸಮಾಜಕ್ಕೆ ಹೆಚ್ಚಿದೆ. ಇಂತಹ ಆಧುನಿಕ ಸಮಾಜದಸಾಂಸ್ಕೃತಿಕ, ರಾಜಕೀಯ,ನೈತಿಕ,ತಾತ್ವಿಕ,ಆಧ್ಯಾತ್ಮಿಕ,
ಪಾರಂಪರಿಕ ಸಮಸ್ಯೆಗಳಿಗೂ ಪರಿಹಾರವನ್ನು ನೀಡಬಲ್ಲ  ಕುವೆಂಪುರವರ ಶ್ರೇಷ್ಠ ಕೊಡುಗೆಯೆಂದರೆ   ಶ್ರೀರಾಮಾಯಣದರ್ಶನಂ' ಮಹಾಕಾವ್ಯ.ಇದರಲ್ಲಿ ಬರುವ ನ್ಯಾಯ,ಸಮಾನತೆ,ಸ್ವಾತಂತ್ರ್ಯ,ರಾಜಧರ್ಮ ತತ್ವಗಳು ಸಾರ್ವಕಾಲಿಕವಾದದ್ದು. ನಮ್ಮಲ್ಲಿಯೇ ದುಷ್ಟತನಗಳನ್ನು ಆಗಾಗ ಹೊರಹಾಕುವ ರಾವಣನಿದ್ದಾನೆ ; ಒಳ್ಳೆಯತನಗಳನ್ನು ಒಳಗೊಂಡ ರಾಮನಿದ್ದಾನೆ ; ಸಹೋದರನಿಗಾಗಿ ಮಿಡಿಯುವ ಲಕ್ಷ್ಮಣನಿದ್ದಾನೆ. ಆರಾಧನೆಗಾಗಿ ಕಾಯುವ ಶಬರಿಯಿದ್ದಾಳೆ;ನಮ್ಮೊಳಗೆ ಸಂಗಾತಿಯನ್ನು ಆರಾಧಿಸುವ ಸೀತೆಯಿದ್ದಾಳೆ; ಕೆಲವೊಮ್ಮೆ ಸಾಹಸಕ್ಕೆ ಕೈಹಾಕುವ ಹನುಮನಿದ್ದಾನೆ ; ತ್ಯಾಗ ಮಾಡುವ ಭರತನಿದ್ದಾನೆ; ಮಗನ ಸ್ವಾರ್ಥಕ್ಕಾಗಿ ಬದುಕುವ ಕೈಕೆಯಿದ್ದಾಳೆ;ಮಮತೆಯಿಂದ ಕುರುಡಾಗುವ ಮಂಥರೆಯಿದ್ದಾಳೆ. ಹೀಗೆ ಇಡೀ ರಾಮಾಯಣವೇ ನಾವಾಗಿದ್ದೇವೆ ಎಂಬುದೇ  ದರ್ಶನದ ಅಂತಿಮ ಸತ್ಯವಾಗಿದೆ.


ಚಹಾ ಮತ್ತು ನಾನು

 ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...